Saturday, December 25, 2010

ನನ್ನ ಜಡೆ



ಭಾನುವಾರ ಬಂತೆಂದರೆ ಸಾಕು, ಕೊಬ್ಬರಿ ಎಣ್ಣೆಯ ದೊಡ್ಡ ಬಾಟಲನ್ನೇ ಹಿಡಿದು ಅಮ್ಮ ಜಗುಲಿ ಮೇಲೆ ಕೂರುವಳು. ನನಗಿನ್ನೂ ಏಳೆಂಟು ವರ್ಷ. ತಲೆಗೆ ಹಾಗೇ ಎಣ್ಣೆಯನ್ನು ಸುರಿದು, ತಲೆತುಂಬಾ ಎಣ್ಣೆಯ ಓಕುಳಿ. ದಪ್ಪವಾದ, ಗುಂಗುರು ಕೂದಲು. ಜಡೆ ಹಾಕಿದರೆ ಸೊಂಟದಿಂದ ಕೆಳಗೆ. ಅಮ್ಮನಿಗೆ ಜಡೆ ಹಾಕುವ ಖುಷಿ, ನನಗೆ ಅಮ್ಮನ ಕೈಯಿಂದ ಬಿಡಿಸಿಕೊಳ್ಳುವ ಆತುರ.

ಆ ಲೀಟರ್‌ಗಟ್ಟಗಲೆ ಎಣ್ಣೆ ಹಾಕಿ ಕೂದಲು ಬಾಚತೊಡಗಿದರೆ, ಸಿಕ್ಕು ಬಿಡಿಸಲು ಒಂದು ಗಂಟೆ. ಅದನ್ನು ಬಾಚಿ ಜಡೆ ಹೆಣೆಯಲು ಇನ್ನರ್ಧ ಗಂಟೆ. ಅಲ್ಲಿಗೇ ಅಮ್ಮನಿಗೆ ಸಮಾಧಾನವಿಲ್ಲ. ಮನೆಯಂಗಳದಲ್ಲಿ ಬೆಳೆದ ಆ ಕನಕಾಂಬರವನ್ನು ಕೊಯ್ದು ಮಾಲೆ ಕಟ್ಟುವಳು. ಜಡೆಯ ತುಂಬಾ ಕನಕಾಂಬರದ ಚೆಲುವು. ಮಗಳ ಜಡೆಗೆ ಹೂವು ಮುಡಿಸಿ ಅದನ್ನು ನೋಡುವುದೇ ಅಮ್ಮನಿಗೆ ಖುಷಿ. ಜಡೆ ಹಾಕಿಬಿಟ್ಟರೆ ಅವಳ ದೊಡ್ಡ ಕೆಲಸ ಮುಗಿದಂತೆ.

ಶಾಲೆಗೆ ಹೋಗುವಾಗಲೂ ಅಷ್ಟೇ, ಎರಡು ಜಡೆ ಹೆಣೆದು ಅದನ್ನು ಮಡಿಚಿ ಕಟ್ಟಬೇಕು. ಆ ತುರುಬಿಗೆ ಪುಟ್ಟದೊಂದು ಕೆಂಪು ಗುಲಾಬಿ ಇಡೋಳು. ಆದರೆ, ಭಾನುವಾರ ಬಂತೆಂದರೆ ವೈವಿಧ್ಯಮಯ ಜಡೆ ಹೆಣೆಯೋಳು. ಅದನ್ನು ನೋಡುವುದೇ ಚೆಂದ. ನನ್ನ ಜಡೆಯ ಮೇಲೆ ತಮ್ಮನಿಗೆ ಕಣ್ಣು. ಅದನ್ನು ಕದ್ದು ಹಿಡಿದೆಳೆದರೆನೇ ಅವನಿಗೆ ಸಮಾಧಾನ.

ಆ ಉದ್ದ ಜಡೆಯನ್ನು ಎದುರುಗಡೆ ಹಾಕೊಳ್ಳುವುದೇ ಸಂಭ್ರಮ. ಅಮ್ಮ ನನ್ನ ಜಡೆಯನ್ನು ಎಷ್ಟು ಜೋಪಾನವಾಗಿಡುತ್ತಿದ್ದಳೆಂದರೆ, ನನ್ನ ಸ್ನಾನ ಮಾಡುವಾಗಲೂ ಹೆಚ್ಚು ಬಿಸಿಯಾದ ನೀರು ಉಪಯೋಗಿಸಲ್ಲ. ಏನಿದ್ರೂ ಅರೆಬಿಸಿ ನೀರು. ಪ್ರತಿದಿನ ಎಣ್ಣೆ ಹಾಕಿ ಸಿಕ್ಕು ಬಿಡಿಸಿ ಬಾಚೋಳು. ಒಂದು ದಿನ ಅದಕ್ಕೆ ಕತ್ತರಿ ತಾಗಿಸಿದ್ದಿಲ್ಲ. ಯಾರಾದ್ರೂ ತಲೆಕೂದಲು ಕತ್ತರಿಸುವ ಬಗ್ಗೆ ಮಾತೆತ್ತಿದ್ದರೆ ನನ್ನ ಮಗಳ ತಲೆಕೂದಲು ಉದ್ದ ಬರಬೇಕು. ಹೆಣ್ಮಕ್ಕಳಿಗೆ ಜಡೆಯೇ ಸೌಂದರ್ಯ ಎಂದು ಉದ್ದುದ್ದ ಜಡೆ ಪುರಾಣ ತೆಗೆಯೋಳು.

ಪ್ರತಿ ಭಾನುವಾರ ನಮ್ಮೂರಲ್ಲಿ ಸಂತೆ ನಡೆಯೋದು. ಆ ಸಂತೆಗೆ ಅಮ್ಮ ತಪ್ಪದೆ ಹಾಜರ್. ಅಲ್ಲಿಗೆ ಹೊರಟಾಗ ಮಂಗಳೂರ ಮಲ್ಲಿಗೆ ತನ್ನಿಯೆಂದು ಅಮ್ಮನಿಗೆ ನನ್ನ ವಾರ್ನಿಂಗ್. ಜೊತೆಗೊಂದು ಕೆಂಪು ಗುಲಾಬಿ. ಉದ್ದವಾಗ ಜಡೆ ಹೆಣೆದು, ಜಡೆಯ ಬುಡಕ್ಕೊಂದು ಗುಲಾಬಿ ಇಟ್ಟರೆ ಸಾಕು. ಸಾವಿರ ಕಣ್ಣುಗಳು ಜಡೆಯ ಮೇಲೆ!
ಇಂದು ಜಡೆಯಿಲ್ಲ, ತುರುಬಲ್ಲಿ ಹೂವಿಲ್ಲ. ಜಡೆ ಹೆಣೆಯುವ ಅಮ್ಮನಿಲ್ಲ!

ಕೆ.ಎಸ್.ನ. ಹಾಡೊಂದು ನೆನಪಾಗುತ್ತಿದೆ.
ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುಂಬಾ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ

ಇವಳು ಯಾರು ಬಲ್ಲೆಯೇನು

ಇವಳ ಹೆಸರ ಹೇಳಲೇನು

ಇವಳ ದನಿಗೆ ತಿರುಗಲೇನು

ಇವಳು ಏತಕೋ ಬಂದು ನನ್ನ ಸೆಳೆದಳು...!!



ಪ್ರಕಟ: http://www.hosadigantha.in/epaper.php?date=12-23-2010&name=12-23-2010-13

Wednesday, October 20, 2010

ಅಪರಿಚಿತ ಭಾವ


ಅಮ್ಮಾ ನಿನ್ನ ಮಡಿಲಿಗೆ ಸೆಳೆದುಕೋ
ಈ ಪ್ರಶ್ನೆಗೆ ಉತ್ತರಿಸು

ಉದ್ದುದ್ಧ ಕಥೆ ಹೇಳಬೇಡ

ಇಂದು ರಾತ್ರಿ ನಾವು ಅಗಲುವುದಾದರೆ

ನೀನೇಕೆ ನನ್ನನ್ನು ಹೆತ್ತೆ?

ಆ ಕ್ಷಣ ಅಮೃತಾ ಪ್ರೀತಂ ಅವರು ಬರೆದಿರುವ ಕವನ ನೆನಪಾಗದಿರಲಿಲ್ಲ. ನೂರಾರು ಹೆಣ್ಣುಮಕ್ಕಳ ಅಂತರಂಗದಲ್ಲಿ ಅಣಕವಾಡುವ ಪ್ರಶ್ನೆಯಂತೆ ಭಾಸವಾಯಿತು. ಈ ಪ್ರಶ್ನೆಗೆ ಉತ್ತರವಿಲ್ಲ ಗೊತ್ತು. ಆದರೆ, ತವರು ತೊರೆವ ಹೆಣ್ಣಿನ ಮನದಲ್ಲಿ ಇಂಥ ಪ್ರಶ್ನೆ ಕಾಡುವುದು ತಪ್ಪಲ್ಲ. ಒಂಬತ್ತು ತಿಂಗಳು ಹೊತ್ತು, ಹೆತ್ತು ಬೆಳೆಸಿದ ಹೆಣ್ಣು ಜೀವವನ್ನು ನಾಳೆ ಇನ್ಯಾರದೋ ಮಡಿಲಿಗೆ ಹಾಕೋದಾದರೆ ಹೆಣ್ಣು ಮಗುವನ್ನು ದೇವ್ರು ಕರುಣಿಸುವುದಾದರೂ ಏಕೆ? ಇಂಥ ಗೊಂದಲಗಳ ನಡುವೆಯೇ ‘ಅಪರಿಚಿತ ಭಾವ’ವೊಂದು ನನ್ನೊಳಗೇ ಮಾತಿಗಿಳಿಯುತ್ತಿತ್ತು.

ಅಂದು ತಮ್ಮ ಹೇಳಿದ್ದ ‘ಅಕ್ಕಾ ನೀನು ಚೆನ್ನಾಗಿ ಡ್ರೆಸ್ ಮಾಡಿಕೋ. ನಿನ್ನ ನೋಡಕೆ ಯಾರೋ ಬರುತ್ತಿದ್ದಾರೆ’ ಎಂದಾಗ ಮೌನದ ಕಣ್ಣೀರು ಬರದಿರಲಿಲ್ಲ. ನಾ ಬೆಳೆದ ಆ ಪುಟ್ಟ ಮನೆ, ಸಣ್ಣವಳಿರುವಾಗ ನನ್ನ ಓದಿಗೆಂದೇ ಚಿಲ್ಲರೆ ಕೂಡಿಸಿ ಮಾಡಿಕೊಟ್ಟ ಪುಟ್ಟ ಟೇಬಲ್ಲು, ನಡುರಾತ್ರಿಯಲ್ಲೂ ನನ್ನ ಎಬ್ಬಿಸಿ ಓದು ಅನ್ನುತ್ತಿದ್ದ ಆ ಪುಟ್ಟ ಚಿಮಿಣಿ ದೀಪ, ಮನೆಮುಂದೆ ಬೆಳೆಸಿದ ಬಣ್ಣದ ಹೂಗಿಡಗಳು, ನಾ ಕೈಯಾರೆ ನೆಟ್ಟ ತೆಂಗಿನ ಮರ, ನನ್ನ ಪುಟ್ಟ ತಂಗಿಯಂತೆ ಬೆಳೆಸಿದ ಹಸು ಅಪ್ಪಿ...ಜೀವನಪ್ರೀತಿಯ ಸಂಕೇತ ಅಮ್ಮ...ಎಲ್ಲವನ್ನೂ ಬಿಟ್ಟು ಯಾರದೋ ಅಪರಿಚಿತರ ಮಡಿಲಿಗೆ ‘ಗಂಟು’ ಬೀಳಬೇಕಲ್ಲಾ ಅನಿಸಿತ್ತು.

ಅಂದು ನಾವಿಬ್ಬರೂ ಅಪರಿಚಿತರು. ನಿನಗೆ ನಾನು, ನನಗೆ ನೀನು ಪರಸ್ಪರ ಅಪರಿಚಿತರು. ಅಲ್ಲಿ ಪರಿಚಯದ ಯಾವ ‘ವಿಳಾಸ’ವೂ ಇರಲಿಲ್ಲ. ನಿನ್ನೆದುರಲ್ಲಿ ತುಟಿ ಮುಚ್ಚಿ ತಲೆಬಾಗಿ ತಾಳಿ ಕಟ್ಟಿಸಿಕೊಂಡಾಗಲೂ ನೀ ನನಗೆ
ಅಪರಿಚಿತ. ಸಪ್ತಪದಿ ತುಳಿದು ನಿನ್ನ ಮನೆಯಲ್ಲಿ ಸಿಹಿ ಊಟ ಮಾಡುವಾಗಲೂ ನೀನು ಪರಿಚಿತ ಅನಿಸಲಿಲ್ಲ. ಅಂದು ಶುಭರಾತ್ರಿಯಲ್ಲಿ ನನ್ನ ನಿನ್ನ ಮಡಿಲಿಗೆ ಸೆಳೆದುಕೊಳ್ಳುವವರೆಗೂ ನೀನು ಅಪರಿಚಿತನೇ ಅನಿಸಿದ್ದೆ! ಆದರೆ, ‘ಅಪರಿಚಿತ’ ಎನ್ನುವ ಕಪ್ಪು ಗೆರೆ ಮರೆಯಾಗಿದ್ದು ಯಾವಾಗ ಗೊತ್ತಾ? ನೀನು ನನ್ನೊಳಗೊಂದು ಸಂಬಂಧಗಳನ್ನು ಬೆಸೆದಾಗ. ಅಲ್ಲಿಯವರೆಗೆ ನನ್ನ ಸಂಬಂಧಗಳೊಳಗೆ ಮಾತ್ರ ನಾ ‘ಬಂಽ’ಯಾಗಿದ್ದೆ. ಅವುಗಳನ್ನಷ್ಟೇ ನಾ ಸಂಭ್ರಮಿಸಿದ್ದೆ. ಇಂದು ನನ್ನ ಸುತ್ತ ನೂರಾರು ಬದುಕಿನ ಸಂಬಂಧಗಳಿವೆ. ಅತ್ತೆ, ಮಾವ, ಚಿಕ್ಕಮ್ಮ-ಚಿಕ್ಕಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ....ಎಷ್ಟೊಂದು ಸಂಬಂಧಗಳನ್ನು ನನ್ನೆದುರಿಗೆ ತಂದಿಟ್ಟೆ ನೀನು?

ಆ ‘ಅಪರಿಚಿತ’ ಅನ್ನೋ ಭಾವ ಕಿತ್ತು ಬಿಸಾಕಿದ್ದು ಕೂಡ ಆ ಪ್ರೀತಿಯ ಸಂಬಂಧಗಳೇ. ಬಹುಶಃ ಜಗತ್ತಿನ ಸಮಸ್ತ ಹೆಣ್ಣು ಮಕ್ಕಳ ದನಿಯೂ ಇದೇ ಆಗಿರಬಹುದು. ಹೆಣ್ಣೊಬ್ಬಳ ಬದುಕು ಪರಿಪೂರ್ಣ ಎನಿಸೋದು ಇಲ್ಲೇ...ಹೆಣ್ಣು ಸಂಬಂಧಗಳ ಕೊಂಡಿ, ಬದುಕು ಬೆಸೆಯುವ ಸುಂದರ ಕೊಂಡಿ. ಹೆಣ್ಣೆಂದರೆ ಹಾಗೆನೇ..ಬದುಕಿನ ಸಂಬಂಧಗಳಿಂದ ಸಾರ್ಥಕ ಪಡೆಯುವವಳು!


ಪ್ರಕಟ: http://hosadigantha.in/epaper.php?date=10-21-2010&name=10-21-2010-15

Thursday, July 29, 2010

ಆಷಾಢದ ಒಂದು ದಿನ..


ಅಂದು ಅಕ್ಕ ಊರಿಗೆ ಬರುವೆನೆಂದು ಖುಷಿಯಿಂದಲೇ ಪತ್ರ ಬರೆದಿದ್ದಳು. ಮದುವೆಯಾಗಿ ಆಗ ತಾನೇ ಮೂರು ತಿಂಗಳು. ಆಗಲೇ, ಅಕ್ಕಾ ಒಂದು ತಿಂಗಳು ಊರಿಗೆ ಬರುವವಳಿದ್ದಳು.

ಅಕ್ಕ ಊರಿಗೆ ಬರುತ್ತೇನೆಂದು ಹೇಳಿದ್ದೇ ತಡ ಅಪ್ಪ ಆ ಧಾರಾಕಾರ ಮಳೆಯ ನಡುವೆಯೂ ಕೃಷಿಯ ಲೆಕ್ಕಾಚಾರದಲ್ಲಿ ತೊಡಗಿದ್ದ. ಅಕ್ಕ ಅಂತೂ ಊರಿಗೆ ಬರುತ್ತಾಳಲ್ಲಾ, ಕೃಷಿ ಕೆಲಸಕ್ಕೂ ಒಂದು ಜನ ಹೆಚ್ಚು ಸಿಗುತ್ತೆ ಅನ್ನೋದು ಅಪ್ಪನ ಲೆಕ್ಕಾಚಾರವಾದರೆ, ಅಮ್ಮ ಮನೆಗೆ ಬರುವ ಮಗಳಿಗೆ ಏನು ಸ್ಪೆಷಲ್ ಮಾಡಲಿ ಅನ್ನುವ ಚಿಂತೆ. ಹೊಸದಾಗಿ ಮದುವೆಯಾದ ಮೊಮ್ಮಗಳು ತವರಿಗೆ ಬರುತ್ತಾಳೆಂದು ಅಜ್ಜಿಗಂತೂ ಸ್ವರ್ಗಕ್ಕೆ ಮೂರೇ ಗೇಣು. ನಮಗೆಲ್ಲಾ ಅಕ್ಕನ ಜೊತೆ ಮತ್ತೊಮ್ಮೆ ಒಡನಾಡುವ ಆಸೆ, ಅವಳ ಜೊತೆ ಬೈಸಿಕೊಳ್ಳುವ, ಸಂಭ್ರಮಿಸುವ, ಮಳೆಗಾಲದಲ್ಲಿ ಹಪ್ಪಳ-ಸಂಡಿಗೆ ಜೊತೆಗೆ ಮೆಲ್ಲುವ ಖುಷಿ, ಒಟ್ಟಿನಲ್ಲಿ ಅಕ್ಕನನ್ನು ಮತ್ತೆ ನೋಡುವ ತವಕ, ಅಕ್ಕನಿಗೆ ಅಮ್ಮನ ಮನೆಗೆ ಬರುವ ಅಗಾಧ ಸಂಭ್ರಮ...ಇದಕ್ಕೆ ಎಲ್ಲೆಯುಂಟೇ?
ದಶಕಗಳ ಹಿಂದಿನ ಕಥೆ, ಬದುಕಿನ ದಾರಿಯಲ್ಲಿ ಎಷ್ಟೋ ವರ್ಷಗಳು ಸರಿದುಹೋಗಿವೆ.
ಹೌದು, ಅದೇ ಆಷಾಢ ಮಾಸ.

ಆಷಾಢದಲ್ಲಿ...
ಇದೀಗ ಮತ್ತೆ ಬಂದಿದೆ ಆಷಾಢ ಮಾಸ.
ಅಜ್ಜಿ ಹೇಳುತ್ತಿದ್ದಳು; ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು, ಅತ್ತೆ-ಸೊಸೆ ಒಂದೇ ಬಾಗಿಲಲ್ಲಿ ಓಡಾಡಬಾರದು, ಆಷಾಢ ಮಾಸ ಬಂದ್ರೆ ಮನೆ ಖರೀದಿಸಬಾರದು, ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು....ಹೀಗೇ ಆಷಾಢ ಮಾಸ ಬಂದ್ರೆ ಬರೇ ಕೆಟ್ಟದು, ಅದು ಅಶುಭ ಎಂದು. ಇಂದಿಗೂ ‘ಅಜ್ಜಿ’ಯರು ಅದೇ ಕಥೆ ಬಿಚ್ಚುತಾರೆ.

ಹೌದು, ಆಷಾಢ ಮಾಸ ಎಂದರೆ ಸಂಗಾತಿಗಳಿಗೆ ವಿರಹಕಾಲ. ಆಷಾಢ ಮಾಸಕ್ಕೆ ಇನ್ನೇನು ಒಂದು ವಾರದ ಇದೆಯೆಂದಾದರೆ ಸಾಕು ಮಗಳನ್ನು ಮನೆಗೆ ಕರೆತರುವ ಸಂಭ್ರಮ, ಸಡಗರ ತವರು ಮನೆಯವರದ್ದು. ಅತ್ತೆ ಮನೆಯಲ್ಲಿ ಸೊಸೆಯನ್ನು ತವರಿಗೆ ಕಳುಹಿಸಿಕೊಟ್ಟು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ಧ ಸಾಂಪ್ರದಾಯಿಕ ಪದ್ಧತಿಗೆ ಜೀವ ತುಂಬುವ ಆತುರ. ಆಗ ತಾನೇ ಮದುವೆಯಾಗಿದ್ವಿ ಅಂತ ಮಗ ಸೊಸೆ ತವರಿಗೆ ತೆರಳುವುದು ಬೇಡ ಎಂದರೂ, ನಾವೆಲ್ಲ ಗಂಡನ ಬಿಟ್ಟು ಒಂದು ತಿಂಗಳು ಇದ್ದಿಲ್ವಾ? ಎನ್ನುವ ಅತ್ತೆ ಸೊಸೆನ ತವರಿಗೆ ಕಳುಹಿಸಲು ಅಣಿಯಾಗುತ್ತಾಳೆ. ಅದಕ್ಕೆ ನೂತನ ವಧು-ವರರಿಗೆ ಆಷಾಢ ಎಂದರೆ ವಿರಹಕಾಲ. ಅದನ್ನು ಸಹಿಸಿಕೊಳ್ಳಲೇಬೇಕು, ಒಂದು ತಿಂಗಳು ಮುದ್ದಿನ ಮಡದಿಯನ್ನು ತವರಿಗೆ ಕಳುಹಿಸಲೇಬೇಕು. ಅದು ನಮ್ಮ ಸಂಪ್ರದಾಯ, ಪದ್ಧತಿ. ಸುತ್ತ ಸುತ್ತಿಕೊಂಡ ಈ ಆಚರಣೆಗಳಿಂದ ಬಿಡಿಸಿಕೊಳ್ಳುವಂತಿಲ್ಲ. ಹೆಂಡತಿಯ ನೆನಪಾದರೆ ತಕ್ಷಣ ಫೋನ್ ಮಾಡ್ತೀನಿ ಅಂದ್ರೆ ಆಗೆಲ್ಲಾ ನಿಮಿಷ ನಿಮಿಷಕ್ಕೆ ಮಾತನಾಡಲು ಫೋನ್‌ಗಳಿಲ್ಲ. ಏನಿದ್ರೂ ಪತ್ರ ಬರೆಯುವುದು. ಪತಿಯ ಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವ ಸರದಿ ಪತ್ನಿಯದ್ದು.
ಅದಕ್ಕೆ ಹಾಗಿರಬೇಕು..
ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ... ಪ್ರಣಯಗೀತೆ ಬಾಳೆಲ್ಲ...
ಎಂಬ ಹಾಡು ಹುಟ್ಟಿಕೊಂಡಿದ್ದು. ಆಷಾಢದ ನಂತರ ಬರುವ ಶ್ರಾವಣ ಮಾಸ ಹಬ್ಬ-ಹಬ್ಬ ಹರಿದಿನಗಳನ್ನು ಹೊತ್ತು ತರುವ ಜೊತೆಗೆ ತವರಿಗೆ ಹೋದ ಮಡದಿ ಮರಳಿ ಮನೆ ಸೇರುತ್ತಾಳೆ.

ಕಾಲಾಯ ತಸ್ಮೈ ನಮಃ
ಆದರೆ, ಇಂದು ‘ಕಾಲಾಯ ತಸ್ಮೈ ನಮಃ’ ಎಂಬ ಮಾತು ನೆನಪಾಗುತ್ತಿದೆ. ವಿದೇಶದಲ್ಲಿ ಗಂಡನ ಜೊತೆ ಇರುವ ಮಗಳು ಆಷಾಢ ಎಂದರೇನು? ಎಂದು ಅಮ್ಮ ಜೊತೆ ಕೇಳಿದರೆ, ಇತ್ತ ಇಲ್ಲೇ ಹುಟ್ಟಿ ಬೆಳೆದ ಮಗ ಅಥವಾ ಮಗಳು ಆಷಾಢ ಎಂದರೆ ಮೂಢನಂಬಿಕೆ, ಅದೆಲ್ಲಾ ಸುಮ್ ಸುಮ್ಮನೆ ಎಂದು ಮೌನವಾಗುತ್ತಾರೆ. ಹೊರಗೆ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಪತಿ-ಪತ್ನಿಯರು ಇದನ್ನು ಒಪ್ಪಲು ಸಿದ್ಧರಿಲ್ಲ. ಗ್ರಾಮ್ಯ ಪ್ರದೇಶದಲ್ಲಿ ಬಿಟ್ಟರೆ ನಗರಗಳಲ್ಲಿ ಯಾರೂ ಕೂಡ ಈ ಪದ್ಧತಿಯನ್ನು ಆಚರಿಸುವುದು ಕಂಡುಬರುತ್ತಿಲ್ಲ.

ಆಷಾಢ ಅಶುಭವೇ?
ಅಂದ ಹಾಗೇ ಇಂಥ ಪದ್ಧತಿ ಏಕಿತ್ತು?ಅದೇಗೆ ಆಷಾಢ ಅಶುಭ? ಎಂಬಿತ್ಯಾದಿ ನೂರಾರು ಪ್ರಶ್ನೆಗಳಿಗೂ ಬಲ್ಲವರ ಬುದ್ಧಿವಂತಿಕೆಯ ಮಾತುಗಳು ಸಾಥ್ ನೀಡುತ್ತಿವೆ.
ಹಿಂದೆಲ್ಲಾ ಆಷಾಢ ಮಾಸ ಬಂತೆಂದರೆ ಬಿತ್ತನೆಯಿಂದ ಹಿಡಿದು ಕಳೆ ಕೀಳೋದ್ರವರೆಗೆ ರೈತನಿಗೆ ಕೈತುಂಬಾ ಕೆಲಸ. ಹದವಾಗಿರುವ ಭೂಮಿಯಲ್ಲಿ ಕೃಷಿ ಕೆಲಸ ಮಾಡಲು ಆಷಾಢ ಒಳ್ಳೆಯ ಸಮಯ. ಹಾಗಾಗಿ ಹೊಸದಾಗಿ ಮದುವೆಯಾದ ವಧು-ವರರು ತಮ್ಮ ಜವಾಬ್ದಾರಿ ಮರೆಯಬಾರದು ಎಂಬ ಸೂಚನೆಯ ಮೇರೆಗೆ ಗಂಡ-ಹೆಂಡತಿ ಜೊತೆಗಿರಬಾರದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಆಷಾಢದಲ್ಲಿ ದಂಪತಿಗಳ ಮಿಲನವಾದರೆ ಚೈತ್ರದಲ್ಲಿ ಮಗು ಹುಟ್ಟುತ್ತದೆ. ಚೈತ್ರದ ಬಿರುಬಿಸಿಲು ಮಗುವಿನ ಅಥವಾ ಬಾಣಂತಿಯ ಆರೈಕೆಗೆ ಸೂಕ್ತ ಸಮಯವಲ್ಲ ಎನ್ನುವ ಕಾರಣವೂ ಇದೆ.

ಒಟ್ಟಿನಲ್ಲಿ ಆಷಾಢ ಎಂದರೆ ಭಯ ಮೂಡಿಸಿ, ವಿರಹ-ವೇದನೆಯ ಮೂಲಕ ಗಂಡ-ಹೆಂಡಿರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಜಾಣತನ ನಮ್ಮ ಹಿರಿಯರದ್ದೋ ಗೊತ್ತಿಲ್ಲ. ಆದರೆ, ಇಂದು ಆಷಾಢ, ಆಚರಣೆ ಎಲ್ಲವೂ ಕಾಲದ ತೆಕ್ಕೆಯಲ್ಲಿ ಮಗುಮ್ಮನೆ ಮಲಗಿವೆ.

ಈ ಲೇಖನ ಹೊಸದಿಗಂತ "ಧರಿತ್ರಿ' ಮಹಿಳಾ ಪುಟದಲ್ಲಿ ಪ್ರಕಟವಾಗಿದೆ:
ನೀವೂ ನೋಡಬಹುದು...

http://hosadigantha.in/epaper.php?date=07-22-2010&name=07-22-2010-೧೩

Saturday, June 12, 2010

ಅಜ್ಜಿಗೊಂದು ಪತ್ರ


ಅಜ್ಜಿ,

ಇಲ್ಲಿ ತುಂಬಾ ಮಳೆ. ಕಿಟಕಿಯಾಚೆ ಇಣುಕಿದರೆ ದೂರದಲ್ಲಿ ಕಾಣುವ ಖಾಲಿ ಮೈದಾನ ತುಂಬಾ ಆಲಿಕಲ್ಲುಗಳ ಓಕುಳಿಯಾಟ. ಮಕ್ಕಳ ಕಲರವಗಳಿಲ್ಲ. ಇಲ್ಲಿ ನಮ್ಮೂರಿನ ತರ ಹಸಿರು ಮರಗಿಡಗಳು ಕಾಣಸಿಗೊಲ್ಲ, ಬರೇ ಬಿಲ್ಡಿಂಗ್‌ಗಳು. ಆ ಬಿಲ್ಡಿಂಗ್ ಮೇಲೆ ಬಿದ್ದ ಮಳೆ ಹಾಗೇ ರಸ್ತೆಗಿಳಿಯುತ್ತೆ. ಆಗ ಆ ರಸ್ತೆಯೇ ನಮ್ಮೂರಿನ ದೊಡ್ಡ ಹೊಳೆಯಾಗುತ್ತೆ. ಎಂಥ ವಿಚಿತ್ರ ಅಂತೀಯಾ? ಈ ಬೆಂಗ್ಳೂರೇ ಹಾಗೇ ಅಜ್ಜಿ.

ಅಂದ ಹಾಗೇ, ಮಳೆ ಬಂದ ತಕ್ಷಣ ನಂಗೆ ನೀನೇ ನೆನಪಾಗ್ತಿಯಾ. ಮಳೆ ಬಂದಾಗಲೆಲ್ಲಾ ನಿನ್ನ ಸೆರಗ ಹಿಡಿದು ಹಲಸಿನ ಬೀಜ, ಹಪ್ಪಳ ಉರಿದು ಕೊಡು ಎಂದು ಬೆನ್ನಿಗೆ ಬಿದ್ದಾಗ ಬೈಯುತ್ತಲೇ ಪ್ರೀತಿಯಿಂದ ಮಾಡಿಕೊಡುತ್ತಿದ್ದಿ ಅಲ್ವಾ? ನಿನ್ನ ಬೈಗುಳ ಕೇಳೋದೇ ಒಂಥರಾ ಚೆಂದ ಅಜ್ಜಿ. ಅಮ್ಮ ಕೆಲ್ಸದಿಂದ ಬರೋದು ತಡವಾದಾಗ ನಿನ್ನ ತೊಡೆ ಮೇಲೆ ಕುಳಿತು ಜೋರಾಗಿ ಅಳುತ್ತಿದ್ದಾಗ ನೀನು ರಾಮಾಯಣ, ಮಹಾಭಾರತ ಕಥೆ ಹೇಳಿಯೇ ನನ್ನ ಸಮಧಾನಿಸುತ್ತಿದ್ದೆ.

ನೊಡು. ಅಜ್ಜಿ, ಈಗ ಯಾರು ಹೇಳ್ತಾರೆ ಕಥೆ? ಅಜ್ಜಿ ಕಥೆ ಅಂತ ಹೇಳಿದ್ರೆ ಈಗಿನ ಮಕ್ಕಳು ಅದೇನು ಅಜ್ಜಿ ಕಥೆ? ಅದು ಹೇಗಿರುತ್ತೆ? ಅಂಥ ಹೇಳೋ ಸ್ಥಿತಿ ಇದೆ ಗೊತ್ತಾ?

ರಜೆ ಬಂದ್ರೆ ಸಾಕು ಅಜ್ಜ-ಅಜ್ಜಿ ಮನೆಗೆ ಓಡಿಹೋಗುವ, ಒಂದು ತಿಂಗಳ ರಜಾದಲ್ಲಿ ಅಜ್ಜಿ ಜೊತೆ ಕಾಲ ಕಳೆಯುವ ಮಕ್ಕಳು ಎಲ್ಲಿ ಸಿಗ್ತಾರಲ್ವಾ? ಈ ಮಳೆಗೆ ತೊಡೆ ಮೇಲೆ ಕುಳ್ಳಿರಿಸಿಕೊಂಡು ಹಪ್ಪಳ ಸಂಡಿಗೆ ತಿನ್ನಿಸುತ್ತಾ, ಅತ್ತಾಗ ಮೆಲ್ಲಗೆ ಪ್ರೀತಿಯಿಂದ ಗದರುತ್ತಾ, ಲಾಲಿ ಹಾಡೋ ‘ಅಜ್ಜಿ ’ ನೀನು ನಮ್ಮ ದೇಶದಲ್ಲೇ ಇತಿಹಾಸದ ಪುಟ ಆಗ್ತಿದ್ದಿಯಲ್ಲಾ ಅದಕ್ಕಿಂತ ದುರಂತ ಇನ್ನೇನಿದೆ ಹೇಳು?

ಆದರೆ, ನಮ್ಮೂರ ಹಸಿರು ಹಳ್ಳಿಯಲ್ಲಿ ಹುಟ್ಟಿದ ನನಗೆ ನಿನ್ನಂಥ ಒಳ್ಳೆ ಅಜ್ಜಿ ಸಿಕ್ಕಿದ್ದಾಳೆ. ಅವಳ ಬಾಯಿಂದ ಉದುರುವ ಮುತ್ತಿನ ಕಥೆಗಳನ್ನು ಕೇಳೋ ಭಾಗ್ಯ ನನಗೂ ಸಿಕ್ತು. ರಜೆ ಸಿಕ್ಕಾಗಲೆಲ್ಲಾ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ಯಕ್ಷಗಾನ ನೋಡೋ ಅವಕಾಶ ನಂಗೆ ಸಿಕ್ತು ಅನ್ನೋದನ್ನು ನೆನೆಸಿಕೊಂಡಾಗಲೆಲ್ಲಾ ನಾನು ಪುಳಕಿತಳಾಗುತ್ತೇನೆ.

ನೋಡಜ್ಜಿ, ಈ ಮಳೆ ಎಷ್ಟೆಲ್ಲಾ ನೆನಪಿಸ್ತು ಅಂತ. ಆ ಮಳೆನೇ ಹಾಗೇ ನೆನಪುಗಳ ಮೆರವಣಿಗೆ...

(ಪ್ರಕಟ: http://hosadigantha.in/epaper.php?date=06-10-2010&name=06-10-2010-೧೭)

Tuesday, May 11, 2010

ಅಕ್ಷರ ಕಲಿಯದ ಅಮ್ಮನಿಗೆ

ನಿನಗೆ ಪತ್ರ ಬರೆಯದೆ ತುಂಬಾ ದಿನಗಳಾಯ್ತು. ಇವತ್ತು ಬರೀಲೇಬೇಕು ಅಂದುಕೊಂಡು ಬರೀತಾ ಇದ್ದೀನಿ. ಹಾಗಂತ ಅಮ್ಮನ ದಿನ ಬಂದಾಗ ಪತ್ರ ಬರೀತಾಳೆ ಅಂದ್ಕೋಬೇಡ, ನನಗೆ ಅನುದಿನವೂ ಅಮ್ಮನ ದಿನವೇ. ಮದುವೆಯಾದ ಮೇಲೆ ಮನೆಗೆ ಬಂದಿಲ್ಲ ಅಂತ ನೀ ಮುನಿಸಿಕೊಂಡಿದ್ದೀಯಾ, ನೀನೆಷ್ಟು ಬೈದ್ರೂ, ಮುನಿಸಿಕೊಂಡ್ರೂ ನಾ ನಿತ್ಯ ನಿನ್ನದೆಯಲ್ಲಿ ಪಿಸುಗುಟ್ಟುವ ಪುಟ್ಟ ಮಗುನೇ ಅಮ್ಮಾ. ನಿನ್ನ ಸಿಟ್ಟು, ಕೋಪ, ಕಣ್ಣಿನಿಂದ ದುರುಗಟ್ಟಿ ನೋಡುವುದು, ಎತ್ತರದ ದನಿಯಲ್ಲಿ ಬೈದುಬಿಡೋದು ಇದೆಲ್ಲಾ ನನ್ನ ನಗು ನೋಡೋ ತನಕ ಅಂತ ನನಗೆ ಚೆನ್ನಾಗಿ ಗೊತ್ತಮ್ಮಾ.

ಮತ್ತೆ, ಹೇಗಿದ್ಯಾ? ಈ ಬೆಂಗಳೂರಲ್ಲಿ ದಿನಾ ಸಂಜೆ ಮಳೆರಾಯನ ಅಬ್ಬರ. ರಸ್ತೆಗಳೆಲ್ಲಾ ಸಮುದ್ರಗಳಾಗಿಬಿಡ್ತವೆ. ಅಂದ ಹಾಗೆ, ನಮ್ಮೂರಲ್ಲೂ ಮಳೆ ಬರುವುದೇ? ನಮ್ಮ ತೋಟದ ಕೆರೆ, ತೋಟದಾಚೆಗಿನ ಹೊಳೆ ತುಂಬಿ ಹರಿಯೋದೇ? ನೀ ಅಂಗಳದಲ್ಲಿ ನೆಟ್ಟು ಮಕ್ಕಳಂತೆ ಬೆಳೆಸಿದ ಬಣ್ಣದ ಹೂಗಿಡಗಳು ಹಸಿರಾಗಿವೆಯೇ? ನಾನು-ನಿನ್ನ ಅಳಿಯ ಇದೇ ಮಳೆಗಾಲದಲ್ಲಿ ನಿನ್ನನ್ನು, ನಮ್ಮೂರ ಹಸಿರ ತೋಟವನ್ನು, ತುಂಬಿ ಹರಿಯೋ ನದಿಯನ್ನು, ಮನೆಯಂಗಳದ ಕನಕಾಂಬರ ಸೊಬಗು, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯೋ ಅಜ್ಜ...ಎಲ್ಲರನ್ನೂ ನೋಡೋಕೆ ಬರ್‍ತಾ ಇದ್ದಿವಿ. ಒಂದಿಷ್ಟು ಹಲಸಿನ ಹಪ್ಪಳ, ಸಂಡಿಗೆ, ಮಾವಿನ ಮಿಡಿ ಉಪ್ಪಿನ ಕಾಯಿ ಎಲ್ಲವನ್ನೂ ರೆಡಿಮಾಡಿಬಿಡು.

ನಾನಿಲ್ಲಿ ತುಂಬಾ ಚೆನ್ನಾಗಿದ್ದೀನಿ, ಗುಂಡು-ಗುಂಡಾಗಿ ಬೆಳೆದಿದ್ದೀನಿ. ನೀನು ನೋಡಿದ್ರೆ ಇನ್ನೂ ಖುಷಿಪಡ್ತಿಯಾ. ಅತ್ತೆ-ಮಾವ ನನ್ನ ಪುಟ್ಟಿ ಅಂತಾರೆ. ಅವರು ಪ್ರೀತಿಯಿಂದ ಕರೆದಾಗಲೆಲ್ಲಾ ನೀನೇ ನೆನಪಾಗ್ತಿಯಾ. ಥೇಟ್ ನಿನ್ನ ತರನೇ ನೋಡ್ಕೋತಾರೆ. ನಿನ್ನ ತರನೇ ತಲೆಗೆ ಎಣ್ಣೆ-ಸೀಗೆ ಕಾಯಿ ಸ್ನಾನ ಮಾಡಿಸ್ತಾರೆ. ಹೂವು ತಂದು ಮುಡಿಸ್ತಾರೆ, ಚೆಂದದ ಡ್ರೆಸ್ ಕೊಡಿಸ್ತಾರೆ. ತಪ್ಪು ಮಾಡಿದಾಗ, ಪ್ರೀತಿಯಿಂದ ಬೈತಾರೆ. ಅವರಲ್ಲಿ ನಿನ್ನನೇ ನಾ ಕಾಣ್ತೀನಿ, ಅದಕ್ಕೆ ಖುಷಿಯಾಗಿದ್ದೀನಿ ಕಣಮ್ಮಾ. ನಂಗೊತ್ತು ಅಕ್ಷರ ಕಲಿಯದ ನೀನು ನನಗೆ ಅಕ್ಷರ ಕಲಿಸಿದ್ದಿ, ಬದುಕು ಕಲಿಸಿದ್ದಿ, ಭವಿಷ್ಯ ಕಟ್ಟಿಕೊಟ್ಟಿದ್ದಿ. ನೀನು ಖಂಡಿತಾ ಈ ಪತ್ರನಾ ಪಕ್ಕದ್ಮನೆ ಪುಟ್ಟಿ ಬಳಿ ಓದಿಸ್ತೀ ಅಂತ. ಸಧ್ಯದಲ್ಲೇ ಬಂದುಬಿಡ್ತೀನಿ. ನಾ ಸಣ್ಣ ಮಗುವಾಗಿದ್ದಾಗ ನಿನ್ನ ಕೈಯಿಂದ ಆ ಬೆಳದಿಂಗಳ ತಂಪಿನಲ್ಲಿ ಕುಳಿತು ತುತ್ತು ತಿಂದ ಅದೇ ಕಲ್ಲುಬೆಂಚಿನ ಮೇಲೆ ಕುಳಿತು ಮತ್ತೊಮ್ಮೆ ನಿನ್ನ ಸವಿತುತ್ತು ಮೆಲ್ಲುವಾಸೆ.
ಇಂತೀ
ಪ್ರೀತಿಯ ಮಗಳು

(ಹೊಸದಿಗಂತ ಪತ್ರಿಕೇಲಿ ಪ್ರತಿ ಗುರುವಾರದ ಧರಿತ್ರಿ ಮಹಿಳಾ ಪುಟದಲ್ಲಿ ಪ್ರಕಟವಾಗುವ ಭಾವಬಿಂದು ಅಂಕಣಕ್ಕೆ ಬರೆದ ಪುಟ್ಟ ಬರಹ
http://hosadigantha.in/epaper.php?date=05-06-2010&name=05-06-2010-೧೭

Sunday, April 18, 2010

ಅಕ್ಕರೆಯ ತಮ್ಮಂಗೆ ಶುಭಾಶಯ


ಈಗಲೂ ನೆನಪಾಗುವವನು ಅವನೇ.
ನನ್ನನ್ನು ಅಕ್ಕರೆಯಿಂದ ಅಕ್ಕಾ ಎನ್ನೋನು. ಒಡಹುಟ್ಟಿಲ್ಲಾಂದ್ರೂ ಒಡನಾಡಿ ಆದೋನು. ಬೆಂಗಳೂರೆಂಬ ಬೆಂಗಾಡಿನಲ್ಲಿ ಒಬ್ಬಂಟಿಯಾಗಿ ಅಲೆದಾಗ ನನಗೆ ಆಸರೆಯಾದೋನು, ಕಳೆದ ಆರು ವರುಷಗಳಿಂದ ಜೊತೆ ಜೊತೆಗೆ ಹೆಜ್ಜೆ ಹಾಕಿ, ನನ್ನೆಲ್ಲಾ ಭಾವಗಳಿಗೆ ಜೀವ ತುಂಬಿದೋನು, ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾದೋನು, ನನ್ನೆಲ್ಲಾ ಕೋಪ-ತಾಪಗಳ ಜೊತೆ ತಂಗಾಳಿಯಾಗಿ ಬೀಸಿದೋನು, ಸಣ್ಣ-ಸಣ್ಣ ವಿಷ್ಯಕ್ಕೆಲ್ಲಾ ತಲೆಕೆಡಿಸಿಕೊಂಡು ನಿತ್ಯ ನನ್ನ ಬಳಿ ಬೈಗುಳ ತಿಂದೋನು.

ನಾನು ಮದುವೆ ಆಗ್ತೀನಿ ಎಂದಾಗ ಖುಷಿಪಟ್ಟು ಪಾಯಸ ಮಾಡಿ ಸಿಹಿ ತಿನ್ನಿಸಿದೋನು, ಮದುವೆ ದಿನ ಬಾವನ ಕಾಲು ತೊಳೆಯೋದು ನಾನೇ ಎಂದು ಹಠ ಹಿಡಿದು ಕುಳಿತೋನು, ಮದುವೆಗೆ ಮುಂಚೆ ನನ್ನ ಜೊತೆಗಿದ್ದು ಅಕ್ಕಾ ನಿನ್ನ ಬಿಟ್ಟಿರೋಕೆ ಆಗೋಲ್ಲ ಎಂದು ಮಗುವಿನಂತೆ ಗಳ ಗಳನೆ ಅತ್ತೋನು, ಅತ್ತೆ ಮನೇಲಿ ಬೆಳಿಗೆದ್ದು ರಂಗೋಲಿ ಹಾಕಬೇಕೆಂದು ನನಗೆ ರಂಗೋಲಿ ಹಾಕೋಕೆ ಕಲಿಸಿಕೊಟ್ಟವನು, ನಾನು ಗಂಡನ ಮನೆಗೆ ಹೊರಟು ನಿಂತಾಗ ನನ್ನ ಕಣ್ಣೀರು ಒರೆಸಿ ನಕ್ಕು ನನ್ನ ಮರೀಬ್ಯಾಡ ಎಂದೋನು, ಈಗ್ಲೂ ಫೋನ್ ಮಾಡಿ ಅಕ್ಕಾ ನೀನಿಲ್ಲದ ಬೋರ್ ಎಂದು ಗೋಳಿಡುವವನು..
ಅವನು ನನ್ನ ಪ್ರೀತಿಯ ತಮ್ಮ, ಸಂದೇಶ. ನನ್ನ ಕೈಲಿ ಬೈಸಿಕೊಂಡ್ರೂ, ಉಗಿಸಿಕೊಂಡ್ರೂ, ಹೊಡೆಸಿಕೊಂಡ್ರೂ ಎಲ್ಲವನ್ನೂ ಸಹಿಸಿಕೊಳ್ತಾ ನನ್ನಳಗೊಂದು ನಗುವಿನ ಅಲೆ ಮೂಡಿಸಿದವನು ನನ್ನ ತಮ್ಮಾ...

ಏಪ್ರಿಲ್ 22 ಅವನ ಹುಟ್ಟುಹಬ್ಬ. ಶುಭವಾಗಲಿ ತಮ್ಮ ನಿನಗೆ...
-ಚಿತ್ರಾ ಸಂತೋಷ್

ಸುಂದರ ಕಾರ್ಯಕ್ರಮದಲ್ಲಿ ನೀವಿದ್ದರೆ ಚೆನ್ನ





ಹೌದಲ್ವಾ? ತುಂಬಾ ಒಳ್ಳೆ ಕಾರ್ಯಕ್ರಮ. ಭಾನುವಾರ, ರಜಾ ದಿನ ಬೇರೆ. ಭಾನುವಾರ ಸ್ವಲ್ಪ ಲೇಟಾಗಿ ಏಳಬೇಕು ಎಂದು ಪ್ರೋಗ್ರಾಂ ಹಾಕ್ಕೊಂಡವರು ಕೂಡ ಸ್ವಲ್ಪ ಬೇಗನೆ ಎದ್ದು ಈ ಕಾರ್ಯಕ್ರಮಕ್ಕೆ ರೆಡಿಯಾಗಿ. ವಿವೇಕ್ ಶಾನುಭಾಗ ಸರ್ ಪ್ರೀತಿಯಿಂದ ಆಮಂತ್ರಣ ಪತ್ರ ಕಳಿಸಿದ್ರು. ಛೇ! ನಾನು ಮಾತ್ರವಲ್ಲ ನೀವೆ;ಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದನಿಸಿತ್ತು.
ಬಂದೇ ಬರ್ತೀರಲ್ಲಾ...?
-ಚಿತ್ರಾ ಸಂತೋಷ್

Tuesday, March 30, 2010

ಪ್ರೀತಿಯ ಸಣ್ಣ ಬಿಂದಿಗೆ

ಬಿಂದಿಗೆಗೂ ಹುಡುಗಿಯರಿಗೂ ಅದೇನೋ ನಂಟು. ಮನೆಯಲ್ಲಿ ಬಿಂದಿಗೆಯಲ್ಲಿ ನೀರು ತರಬೇಕಂದ್ರೆ ಅದಕ್ಕೆ ಹುಡುಗಿರೇ ಬೇಕು. ಹುಡುಗ್ರಿಂದ ಅದು ಸಾಧ್ಯವಿಲ್ಲ. ಸಾಧ್ಯ ಇದ್ರೂ ಅವ್ರು ಮಾಡೋಲ್ಲ. ನನ್ನದೂ ಒಂದು ಪುಟ್ಟ ನೆನೆಪು. ನಾನಿನ್ನೂ ಸಣ್ಣ ಹುಡುಗಿ. ದೊಡ್ಡ ಬಿಂದಿಗೆಯನ್ನು ಎತ್ತಿ ಹಿಡಿಯಕ್ಕಾಗದ ವಯಸ್ಸು. ಅಮ್ಮ ದೊಡ್ಡ ಬಿಂದಿಗೆಯಲ್ಲಿ ನೀರು ತರುವಾಗ ನನಗೂ ಬಿಂದಿಗೆ ಬೇಕೆಂದು ಹಠ ಹಿಡಿದಿದ್ದೆ.

ಅಮ್ಮ ಬಾವಿಯಿಂದ ನೀರು ಎತ್ತುವಾಗ ನಾನೂ ನೀರು ಎತ್ತಬೇಕು, ನನಗೂ ಬಿಂದಿಗೆ ಬೇಕೆಂದು ಅಮ್ಮನ ಸೆರಗು ಹಿಡದೆಳೆಯುತ್ತಿದ್ದೆ. ಆವಾಗ ಅಮ್ಮ ನನ್ನ ಎತ್ತಿಕೊಳ್ಳದಿದ್ದರೆ ಮರಳ ಮೇಲೆ ಬಿದ್ದು ಹೊರಳಾಡುತ್ತಿದ್ದೆ. "ನೀನು ಸ್ವಲ್ಪ ದೊಡ್ಡ ಆಗು, ಬಿಂದಿಗೆ ತಂದುಕೊಡ್ತೀನಿ' ಎಂದು ಅಮ್ಮ ಸಮಾಧಾನಿಸುವಾಗ, ಹಾಗಾದ್ರೆ ಯಾವಾಗ ನಾನು ದೊಡ್ಡವಳಾಗ್ತೇನೆ, ನಿನ್ನಂತೆ ಉದ್ದ, ದಪ್ಪ ಆಗಿ, ಯಾವಾಗ ಸೀರೆ ಉಡುವವಳಾಗ್ತೀನಿ, ದೊಡ್ಡ ಬಿಂದಿಗೆಯನ್ನು ಯಾವಾಗ ನಾನು ಎತ್ತುವವಳಾಗ್ತೀನಿ' ಎಂದು ಪದೇ ಪದೇ ಪ್ರಶ್ನೆಗಳ ಮಳೆ ಸುರಿಸಿ ಅಮ್ಮನಿಗೆ ಬೋರ್ ಹೊಡಿಸ್ತಾ ಇದ್ದೆ.

ಒಂದು ದಿನ ಅಮ್ಮ ಬಿಂದಿಗೆ ತಂದೇ ಬಿಟ್ಟರು. ಹೊಸ ಬಿಂದಿಗೆ. ಸಣ್ಣ ಮತ್ತು ಮುದ್ದಾದ ಬಿಂದಿಗೆ. ಅಮ್ಮ ತಂದ ಹೊಸ ಬಿಂದಿಗೆಗೆ "ಚಿಕ್ಕ ಬಿಂದಿಗೆ' ಎಂದು ನಾಮಕರಣ ಮಾಡಲಾಗಿತ್ತು. ಅದು ಅಲ್ಯೂಮಿನಿಯಂ ಬಿಂದಿಗೆ, ಎತ್ತಲೂ ಅಷ್ಟೇನೂ ಭಾರವಿಲ್ಲ. ತುಂಬಾ ಮುದ್ದಾಗಿತ್ತು. ಅಮ್ಮ ಬಿಂದಿಗೆ ತಂದಿದ್ದೇ ತಡ, ಬಾವಿಯಿಂದ ನೀರು ಎತ್ತಕ್ಕಾಗದಿದ್ರೂ ಮನೆಯಲ್ಲಿದ್ದ ಪಾತ್ರೆಗಳಲ್ಲಿ ತುಂಬಿಸಿಟ್ಟ ನೀರನ್ನೆಲ್ಲಾ ನನ್ನ ಚಿಕ್ಕ ಬಿಂದಿಗೆಗೆ ಸುರಿಯುತ್ತಿದ್ದೆ. ಒಂದಷ್ಟು ಏಟುಗಳನ್ನೂ ತಿನ್ನುತ್ತಿದ್ದೆ. ಆಮೇಲೆ ನಾನು ಶಾಲೆಗೆ ಹೋಗೋವಷ್ಟರಲ್ಲಿ ಬಿಂದಿಗೆಯಲ್ಲಿ ನೀರು ತರುವವಳಾಗಿದ್ದೆ. ಕಷ್ಟಪಟ್ಟಾದ್ರೂ ನನ್ನ ಬಿಂದಿಗೆಯಲ್ಲಿ ನೀರು ತರುವುದೇ ನನಗೆ ಹೆಮ್ಮೆಯ ವಿಚಾರ. ಅದೂ ನಾನು ಬಿಂದಿಗೆಯನ್ನು ಸೊಂಟದಲ್ಲಿ ಹಿಡಿದುಕೊಂಡು ಬರುವಾಗ ಯಾರಾದ್ರೂ ನೋಡಿದ್ರೆ ಇನ್ನೂ ಖುಷಿ. ಒಳಗೊಳಗೇ ಬೀಗುತ್ತಿದ್ದೆ.

ಶಾಲೆಗೆ ಹೊರಡುವಾಗ ಅಮ್ಮನ ಬಳಿ, ನನ್ನ ಬಿಂದಿಗೆ ಮುಟ್ಟಬೇಡ ಎಂದು ಕಟ್ಟಪ್ಪಣೆ ಮಾಡಿಯೇ ಹೊರಡುತ್ತಿದ್ದೆ. ಶಾಲೆಯಿಂದ ಬಂದು ಬ್ಯಾಗ್ ನ್ನೊಂದು ಮೂಲೆಗೆ ಬಿಸಾಕಿ, ಬಳಿಕ ಅಮ್ಮ ಮಾಡಿಟ್ಟ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಂಡು ಅದೇ ನನ್ನ ಪ್ರೀತಿಯ ಸಣ್ಣ ಬಿಂದಿಗೆಯನ್ನು ಎತ್ತಿಕೊಂಡು ಮನೆ ಸಮೀಪದ ತೊರೆಗೆ ಹೋಗುತ್ತಿದ್ದೆ. ಅದೊಂದು ಥರ ಖುಷಿ. ; ನನ್ನ ಬಿಟ್ಟು ಯಾರೇ ನನ್ನ ಬಿಂದಿಗೆ ಮುಟ್ಟಿದರೂ ನನಗೆ ತುಂಬಾ ಕೋಪ ಬರುತ್ತಿತ್ತು.
ಅದು ನನ್ನ ಚಿಕ್ಕಬಿಂದಿಗೆ

ನಾನು ಎಸ್ ಎಸ್ ಎಲ್ ಸಿ ಮುಗಿಸೋ ತನಕವೂ ಆ ಬಿಂದಿಗೆಯನ್ನು ಚೆಂದಕ್ಕೆ ಕಾಪಾಡಿಕೊಂಡು ಬಂದಿದ್ದೆ. ಆದರೆ, ಬಳಿಕ ದೂರದೂರಿನಲ್ಲಿ ನನ್ನ ವಿದ್ಯಾಭ್ಯಾಸ ನಡೆದಿದ್ದರಿಂದ ಮನೆಯಲ್ಲಿನ ಬಿಂದಿಗೆ ನನಗರಿವಿಲ್ಲದೆಯೇ ಮಾಯವಾಗಿತ್ತು. ಕೇಳಿದಾಗ, ಅಮ್ಮ ಆ ಬಿಂದಿಗೆ ತೂತು ಬಿದ್ದಿದೆ ಎಂದರು. ನನ್ನ ಪ್ರೀತಿಯ ಬಿಂದಿಗೆಯನ್ನು ಕಳೆದುಕೊಂಡ ನೆನಪು ಮತ್ತೆ ಮರುಕಳಿಸಿದ್ದು ಅತ್ತೆ ಮನೇಲಿ ಸಣ್ಣ ಬಿಂದಿಗೆಯಿಂದ ನಿತ್ಯ ಬೆಳಿಗೆದ್ದು ತುಳಸಿಗೆ ನೀರು ಎರೆಯುವಾಗ!!

Tuesday, March 23, 2010

ಮರಳಿ ಭಾವದೊಡಲಿಗೆ...

ಮದುವೆ ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.

ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.

ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...

ಪ್ರೀತಿಯಿಂದ

ಚಿತ್ರಾ ಸಂತೋಷ್

Monday, February 22, 2010

ಮದುವೆಯ ಈ ಬಂಧ...



ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಮುಖ ಹಾಕದೆ. ಕೆಲವೊಂದು ಕಾರಣಗಳಿಂದ ನನಗೆ ಬ್ಲಾಗ್ ಬರೆಯಲಾಗಲಿಲ್ಲ. ಇದೀಗ ಮದುವೆ ಕರೆಯೋಲೆಯೊಂದಿಗೆ ಮತ್ತೆ ಮರಳಿ ಬಂದಿದ್ದೇನೆ. ನಮ್ಮ ಮದುವೆಗೆ ನೀವು ಬಂದರೇನೇ ಚೆಂದ. ಖಂಡಿತಾ ಬರಬೇಕು.

ಬದುಕಿನ ಹೊತ್ತಗೆಯಲ್ಲಿ
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.

ಈ ಶುಭಗಳಿಗೆಗೆ

ಹೊಸೆದ ಭಾವ ಕನಸುಗಳಿಗೆ

ನಿಮ್ಮ ಪ್ರೀತಿಯ ಹಾರೈಕೆ ಬೇಕು.


ನಮ್ಮ ಮದುವೆ: ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ

ಆರತಕ್ಷತೆ: ಮಾರ್ಚ್ 10, 2010; ನಂ.125/126, 9ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಆರ್ಎಂವಿ ಬಡಾವಣೆ, ಸದಾಶಿವನಗರ, ಬೆಂಗಳೂರು-80.
ಪ್ರೀತಿಯಿಂದ
ಸಂತೋಷ್-ಚಿತ್ರಾ

Wednesday, December 16, 2009

ದೇವರೇ ನೀನೇಕೆ ಕಲ್ಲಾಗಿಬಿಟ್ಟೆ?


ಈ ಹೆಣ್ಣು ಮಕ್ಕಳ ಬದುಕೇ ಹೀಗೇನಾ?
ಇಂಥದ್ದೊಂದು ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿದ್ದು ವೊನ್ನೆ ವೊನ್ನೆ ಆ ಹುಡುಗನ ಮನೆಯಲ್ಲಿ ಮುತ್ತೈದೆಯರು ನನ್ನ ಗುಳಿಬಿದ್ದ ಕೆನ್ನೆಗಳಿಗೆ ಅರಶಿನ ಕುಂಕುಮ ಹಚ್ಚಿದಾಗ, ನಮ್ಮನೆಯವರು ಮತ್ತು ಆ ಹುಡುಗನ ಮನೆಯವರು ತಾಂಬೂಲ ಬದಲಾಯಿಸಿಕೊಂಡಾಗ, ಆ ಹುಡುಗ ನನ್ನ ಬೆರಳಿಗೆ ಉಂಗುರ ತೊಡಿಸಿದಾಗ, ನನ್ನ ತಮ್ಮ ನನ್ನ ಕೆನ್ನೆ ಚಿವುಟಿ ‘ಅಕ್ಕಾ ಇನ್ನು ನೀನು ಈ ಮನೆಯ ಹುಡುಗಿ’ ಎಂದು ಖುಷಿಯಿಂದ ಹೇಳಿದಾಗ, ನನ್ನಮ್ಮ ನನ್ನ ನೋಡುತ್ತಲೇ ಗಳಗಳನೇ ಅತ್ತಾಗ!
ಥತ್, ನಾ ಹುಟ್ಟಿದ ಊರು, ನನ್ನ ಪ್ರೀತಿಯ ಅಮ್ಮ, ನನ್ನ ತಮ್ಮ, ಬದುಕಲು ಕಲಿಸಿದ ಅಮ್ಮನಂಥ ಅಣ್ಣ, ನನ್ನ ಕೈಯಾರೆ ಅಮ್ಮ ನೆಡಿಸಿದ ಆ ಗೆಂದಾಲೆ ತೆಂಗಿನ ಮರ, ನಾನು ಸ್ಕೂಲಿಗೆ ಹೋಗುವಾಗ ವೊಸರು ಕೊಂಡೋಗಲು ಕಾರಣಳಾದ ಪ್ರೀತಿಯ ಹಸು ಅಕ್ಕತ್ತಿ, ಅಮ್ಮನ ಜೊತೆ ಬಟ್ಟೆ ಒಗೆಯಲು ಹೋಗುತ್ತಿದ್ದ ನಮ್ಮೂರ ಕೆರೆ, ಅಜ್ಜ ಉಳುತ್ತಿದ್ದ ಗದ್ದೆ, ನಮ್ಮನೆ ತೋಟ, ನನ್ನ ನಿತ್ಯ ಆಟ ಆಡಿಸುತ್ತಿದ್ದ ಕುಸುಮಜ್ಜಿ, ನನ್ನಮ್ಮನ ಜೊತೆ ಬೀಡಿ ಕಟ್ಟಲು ಸಾಥ್ ನೀಡುತ್ತಿದ್ದ ಪಕ್ಕದ್ಮನೆ ಸೀತಕ್ಕ, ನಾನು ಓದಿದ ಸ್ಕೂಲ್, ಪ್ರೀತಿಯ ಟೀಚರ್ರು....! ಒಮ್ಮೆಲೆ ಎಲ್ಲರೂ ನೆನಪಾದರು.
ಕಣ್ಣಿಂದ ಸುರಿದ ಅಶ್ರುಬಿಂದುಗಳು ನನ್ನ ಪಾದವನ್ನು ತೋಯುತ್ತಿದ್ದಂತೆ, ಮುತ್ತೈದೆಯರೆಲ್ಲಾ ’ತವರಿನ ನೆನಪು ಇರಲಿ ಬಿಡಿ’ ಎಂದು ಅವರವರೊಳಗೆ ಮಾತನಾಡಿಕೊಳ್ಳುತ್ತಿದ್ದರು. ನಂಗೂ ಅನಿಸಿತ್ತು: ಇವರೂ ನನ್ನ ತರಾನೇ ಅತ್ತಿರಬಹುದೇನೋ!
ನಾನ್ಯಾಕೆ ಹುಡುಗಿಯಾಗಿ ಹುಟ್ಟಿದೆ? ಹುಡುಗನಾಗಿ ಹುಟ್ಟುತ್ತಾ ಇದ್ದರೆ, ಮದುವೆಯಾಗಿ ಬೇರೆ ಮನೆಗೆ ಹೋಗುವ ಅಗತ್ಯವೇನಿತ್ತು? ಅಮ್ಮನ ಜೊತೆ ಇರಬಹುದಿತ್ತಲ್ಲಾ?ಅಮ್ಮನ ಕೈಯಡಿಗೆ, ಅಮ್ಮನ ಹಿತನುಡಿಗಳು, ಅಮ್ಮ ಮಾಡಿಕೊಡುವ ಹಪ್ಪಳ-ಸಂಡಿಗೆ ಮೆಲ್ಲುತ್ತಾ, ಅಣ್ಣ-ತಮಂದಿರ ಜೊತೆ ನಿತ್ಯ ಮುನಿಸಿಕೊಳ್ಳುತ್ತಾ, ಮತ್ತೆ ರಾಜಿಯಾಗುತ್ತಾ, ಮನೆ ಹತ್ತಿರವಿರುವ ಮೈದಾನದಲ್ಲಿ ಲಗೋರಿಯಾಟ ಆಡುತ್ತಾ ಖುಷಿ ಖುಷಿಯಾಗಿ ಹಾಗೇ ಇರಬಹುದಿತ್ತಲ್ಲಾ...ಹೀಗೆ ನೂರಾರು ಯೋಚನೆಗಳ ಸಂತೆ ಮನದಲ್ಲಿ ಪಿಸುಗುಟ್ಟಿ, ‘ಅಮ್ಮ ನಾ ಬಿಡಲಾರೆ ನಿನ್ನ ಸೆರಗಾ’ ಎಂದುಕೊಳ್ಳುತ್ತಿದ್ದೆ.

ಹೌದು, ಆ ಹುಡುಗ ‘ನೀ ನನ್ನ ಮದುವೆ ಆಗ್ತೀಯಾ’ ಎಂದು ಕೇಳಿದಾಗ ಅಮ್ಮನ ಜೊತೆ ಕೇಳು ಅಂದಿದ್ದೆ. ‘ಅಯ್ಯೋ ಹುಚ್ಚು ಹುಡುಗಿ ನಾ ನಿನ್ನ ಮದುವೆ ಆಗ್ತಿರೋದು, ಅಮ್ಮನನ್ನು ಅಲ್ಲ ಕಣೇ’ ಎಂದು ರೇಗಿಸಿದಾಗಲೂ ಅವನು ನೀ ನಮ್ಮನೆಯಲ್ಲೇ ಶಾಶ್ವತವಾಗಿ ಇದ್ದುಬಿಡ್ತಿಯಾ ಅಂತ ಹೇಳಲೇ ಇಲ್ಲ! ಬದಲಾಗಿ ‘ನೀ ನನ್ನ ಮನದರಮನೆಗೆ ಬರ್ತಾ ಇದೀಯಾ’ ಅಂತ ಅಷ್ಟೇ ಹೇಳಿದ್ದ. ಛೆ! ದೇವರು ಯಾಕೆ ಇಷ್ಟೊಂದು ಮೋಸ ಮಾಡಿದ? ಹೆಣ್ಣು ಅವನಿಗೇನು ತಪ್ಪು ಮಾಡಿದ್ದಾಳೆ? ಯಾಕೆ ಅವಳನ್ನು ಹೆತ್ತಮ್ಮನ ಮಡಿಲಿಂದ ಮತ್ತೊಂದು ಮಡಿಲಿಗೆ ಹಾಕುವ ವಿಚಿತ್ರ ನಿಯಮ ಸೃಷ್ಟಿಸಿದ? ಅಂತ ದೇವರನ್ನು ಬೈಯುತ್ತಾ ಇದ್ದೀನಿ, ಅದೇನು ಅವನಿಗೆ ನನ್ನ ಮೇಲೆ ಸಿಟ್ಟೇ? ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಕಲ್ಲಾಗಿಬಿಟ್ಟಿದ್ದಾನೆ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಅನಿಸಿರಬಹುದಲ್ವಾ? ಹೇಳಿ, ನಿಮಗೂ ಹೀಗೇ ಅನಿಸಿದೆಯೇ?
ಇಲ್ಲಿ ಪ್ರಕಟವಾಗಿದೆ:

Thursday, December 3, 2009

'ಹುಡುಗಿ’ಯಾದ ನನ್ ತಮ್ಮಾ..!.

ಆವಾಗ ನಾನಿನ್ನೂ ಅಂಗನವಾಡಿಗೆ ಹೋಗುತ್ತಿದ್ದ ಪುಟ್ಟ ಹುಡುಗಿ. ನನ್ನ ತಮ್ಮನಿಗೆ ಇನ್ನೂ ನಾಲ್ಕು ವರ್ಷ ಮೀರಿರಲಿಲ್ಲ. ಇನ್ನೂ ಎದೆಹಾಲನ್ನು ಬಿಡದ ಪೋರ. ದಿನದದಲ್ಲಿ ಅರ್ಧದಿನವನ್ನು ಅಳುತ್ತಲೇ ಕಳೆಯುತ್ತಿದ್ದ. ಅವನ ಹಠಕ್ಕೆ ಮಣಿದ ಅಮ್ಮ ನನಗೆ ಏನೇ ಕೊಡಿಸಬೇಕಾದರೂ ಅವನಿಗೆ ವೊದಲು ಕೊಡಿಸಿ ಆಮೇಲೆ ನನಗೆ ಕೊಡಿಸುತ್ತಿದ್ದರು. ಅವನು ಗಂಡು ಮಗುವೆಂಬ ಮಮಕಾರ ಬೇರೆ.

ನನಗೆ ತಂದ ಬಟ್ಟೆಗಳನ್ನೆಲ್ಲಾ ಅವನು ಹಾಕುತ್ತಿದ್ದ. ಅದು ಹುಡುಗಿಯರ ಉಡುಪುಗಳೆಂಬ ಪರಿಜ್ಞಾನವೇ ಆತನಿಗಿಲ್ಲ. ಒಟ್ಟಾರೆ ಅಕ್ಕನಿಗೆ ಕೊಡಿಸಿದ್ದೆಲ್ಲಾ ಅವನಿಗೆ ಬೇಕು, ಅವನು ವೊದಲು ಅದನ್ನು ತೊಡಬೇಕು, ಅವನು ಖುಷಿಪಡಬೇಕು, ಆಮೇಲೆ ಏನಿದ್ದರೂ ನನಗೆ.

ಹಾಗೇ ಒಂದು ದಿನ ನನಗೆ ಅಮ್ಮ ಚೆಂದದ ಫ್ರಾಕ್ ತಂದರು. ಅವನು ನೋಡಿದ್ದೇ ತಡ, ನನಗೆ ಅದೇ ಬೇಕೆಂದು ಹಠ ಹಿಡಿದ. ಅದು ಹುಡುಗಿಯರು ಹಾಕುವ ಉಡುಪು ಎಂದು ಎಷ್ಟೇ ಕೇಳಿದರೂ ಹಠ ಬಿಡಲಿಲ್ಲ. ಅದನ್ನೇ ಹಾಕಿಕೊಂಡ. ಅವನಿಗೆ ತಂದ ಟೀಶರ್ಟ್ ಬೇಡವೇ ಬೇಡವೆಂದು ಹಠ ಹಿಡಿದ. ಮರುದಿನ ಅಮ್ಮ ಪೇಟೆಗೆ ಹೋಗಿ ನನಗೆ ಇನ್ನೊಂದು ಫ್ರಾಕ್ ತಂದರು.
ಇಬ್ಬರೂ ಫ್ರಾಕ್ ಧರಿಸಿ ಅಮ್ಮನ ಜೊತೆ ತೋಟಕ್ಕೆ ಹೋಗಿದ್ದೆವು. ಇಬ್ಬರೂ ಒಂದೇ ಬಣ್ಣದ ಫ್ರಾಕ್ ಹಾಕಿದ್ದು ಹೆಮ್ಮೆಯಾದರೆ, ತಮ್ಮನಿಗೆ ನಾನು ಹುಡುಗಿಯರ ಉಡುಪು ತೊಟ್ಟಎಂಬ ಖುಷಿ ಬೇರೆ.

ತೋಟದಲ್ಲಿ ಕೆಲಸ ಮಾಡಬೇಕಾದರೆ ನಮ್ಮೂರಿನ ಬಾಲಣ್ಣ ಬಂದು ನಮ್ಮ ಅಮ್ಮನ ಜೊತೆ, ’ಅಕ್ಕಾ, ನಿಮಗೆ ಇಬ್ಬರೂ ಹೆಣ್ಣುಮಕ್ಕಳು ಅಂತ ಗೊತ್ತೇ ಇರಲಿಲ್ಲ’ ಎನ್ನಬೇಕೆ? ಅಮ್ಮನಿಗೆ ಆಶ್ಚರ್ಯ. ನಾನು ಮತ್ತು ತಮ್ಮ ಬಿಟ್ಟ ಕಣ್ಣುಗಳಿಂದ ಆಶ್ಚರ್ಯಭರಿತ ಅಮ್ಮನ ಮುಖ ನೋಡುತ್ತಾ ನಿಂತೆವು. ನೋಡಲೂ ಥೇಟ್ ಹುಡುಗಿ ತರ ಕಾಣುತ್ತಿದ್ದ ನನ್ನ ತಮ್ಮನನ್ನು ಎತ್ತಿ ಮುದ್ದಿಸಿದ ಬಾಲಣ್ಣನಿಗೆ ನನ ತಮ್ಮ ಹುಡುಗನೆಂದು ತಿಳಿದಿದ್ದು ಮಾತ್ರ ನಮ್ಮೂರಿನ ವಾರ್ಷಿಕ ಜಾತ್ರೆಯಲ್ಲೇ!

ಇಪ್ಪತ್ತು ವರ್ಷದ ಹಿಂದಿನ ಘಟನೆಯನ್ನು ನೆನೆದು ಈಗಲೂ ತಮ್ಮನ ಚುಡಾಯಿಸುವಾಗ ಅದೇಕೋ ಬಾಲ್ಯ ಮತ್ತೆ ಮರುಕಳಿಸಲಿ ಎಂದನಿಸುತ್ತದೆ!

Monday, November 16, 2009

ಭರವಸೆಯ ಭಾವಗಳು...!

ಎಷ್ಟು ಬಗೆದರೂ ತೀರದ
ತಾತ್ಸಾರ, ಸಿಟ್ಟು-ಸೆಡವುಗಳನ್ನು
ನಿರುಮ್ಮಳವಾಗಿ ಸ್ವಚ್ಛಗೊಳಿಸಿದ
ಪ್ರೀತಿಯ ಒದ್ದೆ ಕಣ್ಣುಗಳು,
ಎಷ್ಟೇ ಅಡಗಿಸಿಟ್ಟರೂ ಮತ್ತೆಲ್ಲೋ
ಗಕ್ಕನೆ ಎಲ್ಲವನ್ನೂ ಆವಾಹಿಸಿಕೊಂಡು
ಭಾವುಕತೆಗೊಡ್ಡಿ ಯಾವುದೋ
ಸಂಜೆಗಳಲ್ಲಿ ಆವರಿಸಿಬಿಡುವ ನಿನ್ನ ಮೌನ,
ಎಲ್ಲವನ್ನು ಮೌನದಲ್ಲಿ ಪಿಸುಗುಟ್ಟಿ...
ಮಗುವಿನಂತ ನಿಷ್ಕಲ್ಮಶ ನಗೆ ನಕ್ಕು,
ನನ್ನ ಕೆನೆಹಳದಿ ಹಾಳೆಯಲ್ಲಿ ಬರೆದ ಕವಿತೆ
ನೀ ಕೂಡಿಟ್ಟು ಹಸನುಗೊಳಿಸಿದ
ಭರವಸೆಯ ಭಾವಗಳೇ ...!!

Thursday, October 29, 2009

ಶರಧಿಗೆ ಎರಡು ವರ್ಷ. ನಿಮ್ಮ ಹಾರೈಕೆ ಹೀಗೇ ಇರಲಿ...


ಪ್ರೀತಿಯ ಸ್ನೇಹಿತರೇ,

ನಿಮಗಿದೋ ಪ್ರೀತಿಯ ನಮನಗಳು.

ನಿಮಗೊಂದು ಶುಭಸುದ್ದಿ ತಿಳಿಸಬೇಕಿದೆ. ನನಗೆ ಖುಷಿ, ಮನದಳೊಗೆ ಸಂಭ್ರಮ. ಏಕೆ ಗೊತ್ತೆ ನನ್ನ ಶರಧಿಗೆ ನವೆಂಬರ್ 3ನೇ ತಾರೀಕಿಗೆ ಭರ್ತಿ ಎರಡು ವರ್ಷ. ಶರಧಿ ಎರಡು ವರ್ಷ ನಿರಂತರವಾಗಿ ಹರಿದಿದ್ದಾಳೆ. ಇದೀಗ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ಅವಳು ದೊಡ್ಡವಳಾಗಿದ್ದಾಳೆ. ಜೊತೆಗೆ ನನ್ನನ್ನು ಸಾಕಷ್ಟು ಬೆಳೆಸಿದ್ದಾಳೆ. ಅಪಾರ ಸ್ನೇಹಿತರನ್ನು ನೀಡಿದ್ದಾಳೆ. ಬೆನ್ನು ತಟ್ಟೋರು, ತಪ್ಪಾಗ ತಿದ್ದಿ ತಿಡೋರು ಎಲ್ಲಾರೂ ಸಿಕ್ಕಿದ್ದಾರೆ. ನಂಗದು ಖುಷಿ. ಎರಡು ವರ್ಷದಲ್ಲಿ ಶರಧಿ ಕಂಡಿದ್ದು 146 ಬರಹಗಳನ್ನು. ಆಫೀಸ್ ಕೆಲಸ, ನಿತ್ಯ ಕಾಡುವ ಅನಗತ್ಯ ಕಿರಿಕಿರಿ ನಡುವೆ 200 ಬರಹಗಳನ್ನು ದಾಟುವ ಕನಸು ನನಸಾಗಲಿಲ್ಲ. ಆದರೂ ಬರಹಪ್ರೀತಿ ಕುಂದಿಲ್ಲ. ನನ್ನೊಳಗಿನ ಕನಸುಗಳು ಆಗಾಗ ಮೂರ್ತ ರೂಪ ಪಡೆಯುತ್ತಲೇ ಇವೆ.
ನನ್ನ ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತರಿಗೂ ಕೃತಜ್ಞತೆಗಳು. ಇನ್ನು ಮುಂದೆಯೂ ನನ್ನ ಶರಧಿ ನಿರಂತರವಾಗಿ ಹರಿಯುತ್ತಾಳೆ ಅನ್ನೋ ಪುಟ್ಟ ನಂಬಿಕೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಇದ್ದೇ ಇರುತ್ತೆ ಅನ್ನೋ ಅಚಲ ನಂಬಿಕೆ ನನ್ನದು. ನಿಮ್ಮ ಪ್ರೋತ್ಸಾಹಕ್ಕೆ ನನ್ನ ಪ್ರೀತಿಯ ಸಲಾಂ.

ಈ ನಡುವೆ ಇನ್ನೊಂದು ಸತ್ಯ ಹೇಳಲೇಬೇಕಿದೆ. ಬಹುಶಃ ಬಹುತೇಕರಿಗೆ ಗೊತ್ತೇ ಇದೆ. ಕಳೆದ ಮಾರ್ಚ್ ನಲ್ಲಿ 'ಧರಿತ್ರಿ' ಅನ್ನೋ ಹೆಸರಲ್ಲಿ ಬ್ಲಾಗ್ ಆರಂಭಿಸಿದ್ದೆ. ಅದೇಕೆ ಅನಾಮಧೇಯ ಹೆಸರು? ಅಂದುಕೊಳ್ಳಬಹುದು. ವೃತ್ತಿಯಲ್ಲಿರುವಾಗ ಕೆಲವೊಂದು ನಿಯಮಗಳಿಗೆ ನಾವು ನಿಷ್ಠರಾಗಿರಬೇಕಾಗುತ್ತೆ. ಹಾಗಾಗಿ, ಅನಿವಾರ್ಯವಾಗಿ ಶರಧಿ ಜೊತೆಗೆ ಧರಿತ್ರಿಯನ್ನೂ ಆರಂಭಿಸಿದ್ದೆ. ಧರಿತ್ರಿನೂ 33 ಬರಹಗಳನ್ನು ಕಂಡಿದ್ದಾಳೆ. ಶರಧಿಯಂತೆ ಅವಳನ್ನೂ ಪ್ರೀತಿಯಿಂದ ಸಲಹುತ್ತಿದ್ದೇನೆ. ನೀವೆಲ್ಲರೂ ಪ್ರೋತ್ಸಾಹಿಸುತ್ತಲೇ ಇದ್ದೀರಿ. ಇದು ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಇವತ್ತು ಈ ವಿಚಾರವನ್ನು ಅಧಿಕೃತವಾಗಿ ಹೇಳಿಬಿಟ್ಟಿದ್ದೀನಿ. ಇನ್ನು ಮುಂದೆನೂ ಧರಿತ್ರಿ ಧರಿತ್ರಿಯಾಗೇ, ಶರಧಿ ಶರಧಿಯಾಗೇ ಮುಂದುವರಿಯುತ್ತಿದ್ದಾರೆ. ಶರಧಿಗೆ ಅಣ್ಣ ರೋಹಿ ಚೆಂದದ ವಿನ್ಯಾಸ ಮಾಡಿಕೊಟ್ಟರೆ, ಧರಿತ್ರಿಗೆ ನನ್ನ ಸೀನಿಯರ್ ಹಾಗೂ ಗೆಳೆಯ ಲಕ್ಷ್ಮಿಕಾಂತ್ ವಿನ್ಯಾಸ ಮಾಡಿದ್ದಾರೆ. ಅವರಿಗೆ ತುಂಬಾ ಥ್ಯಾಂಕ್ಸ್. ಯಾರಿಗೂ ನೋವು ಕೊಡದ ರೀತಿಯಲ್ಲಿ ಭಾವನೆಗಳನ್ನು ಬಿಚ್ಚುತ್ತಾ ಹೋಗುವುದು ನನ್ನ ಇಷ್ಟ. ಎಲ್ಲೋ ನೋಡಿದ್ದು, ಹೃದಯವನ್ನು ತಟ್ಟಿದ್ದು ಎಲ್ಲವೂ ಬರಹಗಳಾಗಿವೆ. ಮುಂದೆಯೂ ಹೊಸ ಕೆಲಸದೊತ್ತಡ, ನಿತ್ಯ ಕಾಡುವ ಸಮಸ್ಯೆಗಳು, ಚಿಂತೆಗಳು ಅಥವಾ ಒಂಟಿಯಾಗಿದ್ದ ನಾನು ಜಂಟಿಯಾದರೂ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳನ್ನು ಅಷ್ಟೇ ಪ್ರೀತಿಯಿಂದ ಸಲಹುತ್ತೇನೆ. ನಿಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದುಕೊಂಡಿದ್ದೀನಿ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಋಣಿ.

ಪ್ರೀತಿಯಿಂದ,
ಚಿತ್ರಾ ಕರ್ಕೇರಾ

Tuesday, October 27, 2009

ಮೌನದಲ್ಲೇ ಮಾತಾಡ್ತೀನಿ, ಕವನ ಬರಿ...!

ಯಾಕೋ ಪತ್ರ ಬರೀಬೇಕು ಅನಿಸುತ್ತೆ ಕಣೋ..ಅದು ನಿನ್ನ ಪತ್ರ ನೋಡಿದ ಮೇಲೆ. ಇದೇ ಮೊದಲ ಪತ್ರ, ಬಹುಶಃ ಇದೇ ಕೊನೆಯ ಪತ್ರ ಆಗಿರಬಹುದು. ತುಂಬಾ ಜನ ಹೇಳ್ತಾರೆ ಪ್ರೀತಿಯ ಪತ್ರ ತುಂಬಾ ಮಾತಾಡುತ್ತೆ ಅಂತ. ಹೌದು ಕೂಡ, ನಿನ್ನ ಮಾತುಗಳಿಂದ ನೀ ಬರೆದ ಪತ್ರಾನೇ ಇಷ್ಟ ಆಯಿತು. ಆದರೆ, ನಿನ್ ಥರ ಚೆನ್ನಾಗಿ ಪತ್ರ ಬರೆಯೋಕೆ, ನಿನ್ ಥರ ಭಾವನೆಗಳನ್ನು ಪದಗಳಲ್ಲಿ ಪೋಣಿಸೋಕೆ, ನಿನ್ ಥರ ಸುಂದರ ಭಾವಗೀತೆಗಳನ್ನು ಬರೆಯೋಕೆ, ನಿನ್ ಥರ ಪ್ರಕೃತಿ ಮಧ್ಯೆ ಕುಳಿತು ಕತೆ-ಕವನ, ಲೇಖನ ಗೀಚೋಕೆ ಬರೊಲ್ಲ ಕಣೋ. ಅದಕ್ಕೆ ನೋಡು ನೀನು ಇಷ್ಟು ದಿನ ಬಚ್ಚಿಟ್ಟ ಪ್ರೀತಿ, ನೀ ಗೀಚಿದ ಕವನ, ನೀ ಮೂಡಿಸಿದ ಸುಂದರ ಕಲೆ..ಎಲ್ಲವನ್ನೂ ಮೌನವಾಗೇ ನೋಡುತ್ತಾ ಕಣ್ಣಲ್ಲೇ ಸವಿದೆ, ವಿನಃ ಅಕ್ಷರಗಳಲ್ಲಿ ಪೋಣಿಸಲು ಸಾಧ್ಯವಾಗಲಿಲ್ಲ. ಮಾತಿನಲ್ಲಿ ಹೇಳಲೂ ಆಗಲಿಲ್ಲ. ಬಹುಶಃ ನನ್ನ ಮೌನವನ್ನೂ ಅರ್ಥಮಾಡಿಕೊಳ್ಳೋ ಅಗಾಧ ಕಲೆಯನ್ನು ದೇವರು ನಿಂಗೆ ನೀಡಿದ್ದನಲ್ಲಾ ಅದಕ್ಕೆ ದೇವರಿಗೇ ಥ್ಯಾಂಕ್ಸ್ ಹೇಳಿದ್ದೀನಿ ಕಣೋ.

ಹೌದು, ನೀನಂದ್ರೆ ನಂಗಿಷ್ಟ, ಆದ್ರೆ ನಾ ಹೇಳಲ್ಲಿಲ್ಲ..ನೀನಿಷ್ಟ, ನಿನ್ನ ನಗು ಇಷ್ಟ, ನಿನ್ನ ಪ್ರೀತಿ ಇಷ್ಟ ಅಂತ! ನೀನೇ ಹೇಳಿಬಿಟ್ಟಿಯಲ್ಲಾ...ಅದು ನಂಗೆ ಖುಷಿ, ನಿನ್ನ ಧೈರ್ಯಕ್ಕೆ ನನ್ನ ಪುಟ್ಟ ಸಲಾಂ.

ಎಷ್ಟು ಕೆಟ್ಟದ್ದಾಗಿ ಪತ್ರ ಬರೆದಿದ್ದಾಳೆ ಅಂತ ಬೈಕೋಬೇಡ. ಮುಖ ಊದಿಸಿಕೋಬೇಡ. ನಿನ್ನ ಸುಂದರ ಮೂಗಿನ ಮೇಲೆ ಸಿಟ್ಟನ್ನು ನೋಡೋದು ನಂಗೆ ಇಷ್ಟವಿಲ್ಲ. ನಿನ್ನ ಸುಂದರ ಕಣ್ಣುಗಳ ದುರುಗುಟ್ಟುವಿಕೆಯನ್ನು, ಸಿಟ್ಟಿನಿಂದ ನೀನು ಬಡಬಡಿಸೋದನ್ನು ನನ್ನ ಕಣ್ಣಿಂದ ನೋಡಕ್ಕಾಗಲ್ಲ ಕಣೋ. ಅದಕ್ಕೆ ಯಾವತ್ತೂ ಸಿಟ್ ಮಾತ್ರ ಮಾಡಿಕೊಳ್ಳಬೇಡ.

ತುಂಬಾ ಹೇಳಬೇಕನಿಸುತ್ತೆ..ಆದರೆ ಬರೆಯೋಕ್ಕಾಗಲ್ಲ. ನಿನ್ನ ಥರ ನೀ ಬಿತ್ತಿದ ಬೀಜಗಳಿಗೆ ನಾ ರೈತ ಆಗ್ತೀನಿ ಅನ್ನೋಕೆ ಬರಲ್ಲ. ಜೀವನವಿಡೀ ನಿನಗೆ ಮೊಗೆದಷ್ಟು ಬತ್ತದ ಪ್ರೀತಿ ನೀಡ್ತೀನಿ. ನಿನ್ನ ಕನಸು, ನಿರೀಕ್ಷೆಗಳಿಗೆ ನೀರೆರೆದು ಪೋಷಿಸ್ತೀನಿ. ನನ್ನ ಹೃದಯ ತುಂಬಾನು ಕನಸುಗಳಿದೆ ಕಣೋ...ಪುಟ್ಟ ಪುಟ್ಟ ಕನಸುಗಳು. ಅದಕ್ಕೆ ಜೀವ ತುಂಬ್ತೀಯಾ ಅಂತ ಗೊತ್ತು ನಂಗೆ. ಜೀವನವನ್ನು ಪ್ರೀತಿ, ಖುಷಿ, ನೆಮ್ಮದಿಗಳಿಂದ ಸಿಂಗರಿಸಿಬಿಡು..ಅದಕ್ಕೆ ನನ್ನದೂ ಸಾಥ್ ಇದೆ.ಅಷ್ಟೇ ಸಾಕಲ್ವಾ? ನಮ್ಮ ಬದುಕಿಗೆ.....? ಇನ್ನೇನು ಹೇಳಕ್ಕೆ ಬರಲ್ಲ...ಮೌನದಲ್ಲೇ ಮಾತಾಡ್ತೀನಿ. ನೀನು ಕವನ ಬರೆ...!
ಅದಿರಲಿ, ಯಾವಾಗ ನನ್ನನ್ನು ನಿನ್ನೂರಿಗೆ ಕರೆದುಕೊಂಡು ಹೋಗ್ತಿಯಾ? ನಿಮ್ಮಮ್ಮನಿಗೆ ನಿಮ್ಮಪ್ಪನಿಗೆ ಪರಿಚಯ ಮಾಡಿಸ್ತೀಯಾ ಹೇಳು.

Monday, October 5, 2009

ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?

ಮುನ್ನಿ....

ಬಹಾರೋ ಫೂಲ್ ಬರ್ಸಾ ಹೋ

ಮೇರಾ ಮೆಹಬೂಬ್ ಆಯಾ ಹೇ...

ರಫೀ ಹಾಡಿದ ಹಾಡನ್ನು ಕೇಳುತ್ತಾ ಪತ್ರ ಬರೀತಾ ಇದ್ದೀನಿ ಮುನ್ನಿ.


ಹೇಗಿದ್ಯಾ? ಇಂದು ನಮ್ಮೂರಲ್ಲಿ ಮಳೆ ಬಂದಿದೆ ಕಣೇ. ನಿಮ್ ಕಡೆ ಹೊಲ, ಗದ್ದೆ, ಕೆರೆ-ತೊರೆಗಳು ತುಂಬಿ ಹರಿಯುತ್ತಿದ್ದರೂ ನಮ್ಮೂರಲ್ಲಿ ಅದೇಕೋ ವರುಣನಿಗೆ ನಮ್ ಮೇಲೆ ಮುನಿಸು. ಆದರೆ ಇಂದು ಮಳೆ ಬಂದಿದೆ. ಮನೆಯಂಗಳ ದೊಡ್ಡ ತೊರೆಯಾಗಿದೆ. ತುಂಬಿ ಹರಿಯೋ ಕೆರೆ-ತೊರೆಗಳನ್ನು ನೋಡುವಾಗ ತುಂಬಾ ಖುಷಿಯಾಗುತ್ತಿದೆ. ನಮ್ಮೂರ ತೋಟಗಳಲ್ಲಿ ಹಸಿರು ಮೈ ತುಂಬಿ ನಿಂತಿದೆ. ಬಾಲ್ಯದ ತುಂಟಾಟಗಳು ನೆನಪಾಗುತ್ತಿವೆ. ಸಣ್ಣವನಿರುವಾಗ ಜೋರು ಮಳೆಗೆ ಆಲಿಕಲ್ಲು ಹೆಕ್ಕಕೆ ಹೋಗಿ ಜಾರಿ ಬಿದ್ದಿದ್ದು ನೆನಪಾಗಿ ನಗು ಬಂತು ಕಣೇ. ಆವಾಗ ನೀನಿನ್ನೂ ಚಡ್ಡಿ ಹಾಕದೆ ಮನೆತುಂಬಾ ಓಡಾಡಿ ಬೊಕ್ಕು ಬಾಯಿ ಅಗಲಿಸಿ ಎಲ್ಲರನ್ನೂ ನಗಿಸುತ್ತಿದ್ದೆ!!

ಮಳೆ ಬಂದಾಗ ಅದೇಕೆ ನಿನಗೆ ಪತ್ರ ಬರೆದೆ ಅಂತ ಅಚ್ಚರಿಯಾಯಿತೇ? ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲುತ್ತಾ ನಿನ್ನದೇ ನೆನಪಿನ ಮಳೆಯಲ್ಲಿ ತೋಯ್ತಾ ಇದ್ದೀನಿ ಕಣೇ ಮುನ್ನಿ. ನಿಂಗೆ ನೆನಪಿದೆಯಾ ನಾನು-ನೀನು ಭೇಟಿಯಾದ ಮೊದಲ ದಿನ ಧಾರಾಕಾರ ಮಳೆ ಸುರಿದು, ನಾನೂ ನಿನ್ನ ಛತ್ರಿಯೊಳಗೆ ಹುದುಗಿಹೋಗಿದ್ದು! ಅಷ್ಟೇ ಅಲ್ಲ, ಮಳೆಯಲ್ಲಿಯೇ ನಿನ್ನದೆಯಲ್ಲಿ ನಾನು ಕರಗಿಹೋಗಿದ್ದು, ನಿನ್ನ ಹೆಗಲ ಮೇಲೆ ಕೈಹಾಕಿದಾಗ ನಾಚಿಕೆಯಿಂದ ನನ್ನ ಕೈಯನ್ನು ಸರಿಸಿದ್ದು..! ಕೊನೆಗೂ ಮಳೆ ಎಡಬಿಡದೆ ಸುರಿದಾಗ ನೆನೆಯುತ್ತಲೇ ಮನೆ ಸೇರಿಕೊಂಡಿದ್ದು. ಮತ್ತೆ ಸುಂದರ ನೆನಪುಗಳೊಂದಿಗೆ ನಿದ್ದೆಯ ಮಂಪರಿಗೆ ಜಾರಿದ್ದು..ಎಲ್ಲವೂ ನೆನಪಾಗುತ್ತಿದೆ ಕಣೇ. ಅಮ್ಮನ ಕೈತುತ್ತ ಮೆಲ್ಲುವಾಗ ನಿನ್ನದೇ ನೆನಪಾಗುತ್ತೆ ಮುನ್ನಿ. ಅಮ್ಮನ ಬಿಟ್ಟರೆ ನಾನು ಕೈತುತ್ತು ಉಂಡಿದ್ದು ನಿನ್ನ ಕೈಯಿಂದ ಕಣೇ.

ಮುನ್ನಿ...

ಜೋರು ಮಳೆಗೆ ನಮ್ಮೂರ ಜೋಗವನ್ನು ನಿಂಗೆ ತೋರಿಸಬೇಕು...ಮುಂಗಾರು ಮಳೆಯಂತೆ ಪ್ರೀತಿಯ ಮಳೆಯಲ್ಲಿ ನೆನೆಯಬೇಕು. ಮನತುಂಬಾ ಪ್ರೀತಿಯ ಕಚಗುಳಿಯಲ್ಲಿ ಖುಷಿಪಡಬೇಕು. ಹಸಿರು ಜರತಾರಿ ಉಟ್ಟ ಸಹ್ಯಾದ್ರಿಯನ್ನು ನಿಂಗೆ ತೋರಿಸಿ, ನಿನ್ನ ಕಣ್ಮನ ಖುಷಿಗೊಳಿಸಬೇಕು. ಪ್ರಕೃತಿಯನ್ನು ಪ್ರೀತಿಸುವ ನನ್ ಮುನ್ನಿಗೆ ನಮ್ಮೂರ ಮಳೆ, ಇಳೆ, ಹಸಿರು...ಎಲ್ಲವನ್ನೂ ತೋರಿಸಬೇಕು. ನನ್ನಮ್ಮನಿಗೆ ನೋಡು ಮುನ್ನೀನ ತಂದಿದ್ದೀನಿ ಅಂತ ಪರಿಚಯ ಮಾಡಿಸಬೇಕು. ಅಮ್ಮನಿಂದ ಭಲೇ ಅಂತ ಬೆನ್ನು ತಟ್ಟಿಸಿಕೊಳ್ಳಬೇಕು. ಹೀಗೇ ಏನೇನೋ ಅಂದುಕೊಳ್ತಾ ಮನೆಯೊಳಗೆ ನಿನ್ನ ಬೆಚ್ಚನೆಯ ನೆನಪುಗಳ ಜೊತೆ ಕುಳಿತಿದ್ದೀನಿ ಕಣೇ ಮುನ್ನಿ.

ಹೌದು ಮುನ್ನಿ, ಊರಿಗೆ ಹಬ್ಬಕ್ಕೆ ಹೋದವನು ಫೋನ್ ಮಾಡಿಲ್ಲ, ಮೆಸೇಜ್ ಮಾಡಿಲ್ಲ ಅಂತ ಮುನಿಸಿಕೋಬೇಡ್ವೇ? ಮಳೆ ನೋಡುತ್ತಾ ಬೆಚ್ಚಗೆ ಹಪ್ಪಳ ತಿಂದು ಕಾಲ ಕಳೆಯುತ್ತಿದ್ದಾನೆ ಅಂತ ಬೈಕೋಬೇಡ್ವೆ. ಇಲ್ಲ ಕಣೇ, ನಿನ್ ನೆನಪು, ನಿನ್ನ ಪ್ರೀತಿ, ಒಂದು ಬಿಂದು ಪ್ರೀತಿಯ ಹನಿ...ಎಲ್ಲವನ್ನೂ ಹೃದಯತುಂಬಾ ಹರಡಿಕೊಂಡು ಖುಷಿಪಡ್ತಾ ಇದ್ದೀನಿ ಕಣೇ. ಕನಸುಗಳಿಗೆ ಜೀವ ಕೊಟ್ಟು ಪೋಷಿಸ್ತಾ ಇದ್ದೀನಿ ಕಣೇ. ರಾತ್ರಿ ಒಬ್ಬನೇ ನಿದ್ದೆಗೆ ಜಾರಿದಾಗ ಕತ್ತಲೂ ಕವಿದ ನನ್ನ ಕೋಣೆಯಲ್ಲಿ ಪುಟ್ಟ ಹಣತೆ ಹಚ್ಚಿ ನಿನ್ನ ನೆನಪುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ನಿನ್ನ ಮಡಿಲ ನೆನಪಲ್ಲಿ ನಿದ್ದೆಹೋಗುತ್ತಿದ್ದೇನೆ ಮುನ್ನಿ.

ಮುನ್ನಿ,

ಇನ್ನೆರಡು ದಿನ. ಮಳೆ ನಿಲ್ಲಲ್ಲಿ. ಊರೆಲ್ಲ ಪ್ರವಾಹ ಬಂದುಬಿಟ್ಟಿದೆ. ತಕ್ಷಣ ನಿನ್ನ ಹತ್ತಿರ ಬಂದುಬಿಡ್ತೀನಿ ಕಣೇ. ಪ್ಲೀಸ್ ಮುನಿಸಿಕೋಬೇಡ್ವೇ ಮಳೇ ಥರ...! ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?


ನಿನ್ನವನೇ

ಮುನ್ನಾ...

Sunday, September 27, 2009

ಬದುಕಿಗೆ ಪರಿಧಿ ಹಾಕೋಳ್ತಾ ಇದ್ದೀವಿ ಅನಿಸ್ತಾ ಇದೆ...

ಹಂಚಿ ಉಂಡರೆ ಹಸಿವಿಲ್ಲ...!! ಹತ್ತನೇ ತರಗತಿಯಲ್ಲಿ ನಾನು ಓದುತ್ತಿದ್ದಾಗ ಬಾಗೇವಾಡಿ ಅನ್ನೋ ಹೆಸರಿನ ಮೇಷ್ಟ್ರು ಇದ್ದರು. ತುಂಬಾ ಒಳ್ಳೆಯ ಮೇಷ್ಟ್ರು.ಮೂರು ವರ್ಷ ನಮ್ಮ ಜೊತೆಗಿದ್ದ ಆ ಮೇಷ್ಟ್ರು ಆಗಾಗ ಹೇಳುತ್ತಿದ್ದ ಮಾತು ಹಂಚಿ ಉಂಡರೆ ಹಸಿವಿಲ್ಲ. ಈಗಲೂ ಆ ಮಾತು ಆಗಾಗ ನೆನಪಾಗುತ್ತಿದೆ. ಮಾಮೂಲಿ ನಮ್ಮನೆಯಲ್ಲಿ ನಾನು-ತಮ್ಮ ಇಬ್ಬರೇ ಇರ್ತೀವಿ. ಆಗ ಒಂದು ಥರ ಬೋರ್. ನನಗೆ ರಜೆ ಇದ್ದ ದಿನ ಅವನಿಗರಲ್ಲ, ಅವನಿಗೆ ರಜೆ ಇದ್ದ ದಿನ ನಂಗೆ ರಜೆ ಇರೊಲ್ಲ. ಅದಕ್ಕೆ ಅವನಿಗೆ ರಜೆ ಇದ್ದ ನಾನು ಆಫೀಸ್ ನಿಂದ ಬೇಗ ಹೊರಡೋದು, ನಂಗೆ ರಜೆ ಇದ್ದ ದಿನ ಅವನು ಆಫೀಸ್ ನಿಂದ ಬೇಗ ಹೊರಟುಬರೋದು. ನಮಗೆ ರಜೆ ಇದ್ದ ದಿನ ಮಾವ, ಅಣ್ಣ ಬೇಗನೆ ಮನೆಮುಂದೆ ಹಾಜರಾಗೋದು. ಏನಾದ್ರೂ ಸ್ಪೆಷಲ್ ಅಡುಗೆ ಮಾಡೋದು, ದೇವಸ್ಥಾನಕ್ಕೆ ಹೋಗೋದು...ಅದೊಂದು ಥರಾ ನಮಗೆ ತುಂಬಾ ಖುಷಿಕೊಡೋದು. ನಂಗೆ ಎಲ್ಲಕ್ಕಿಂತ ಖುಷಿಕೊಡೋದು ಎಲ್ಲರೂ ಜೊತೆಗೆ ಊಟ ಮಾಡೋದು. ನಾವೇನದ್ರೂ ಮಾಡಿದ್ರೆ ಪಕ್ಕದ್ಮನೆ ಅಡುಗೆ ತಜ್ಞೆ ಆಂಟಿ ಅಲ್ಲಿ ಹಾಜರಾಗಿ..ನಾವು ಮಾಡೋ ಡಬ್ಬ ಅಡುಗೇನ ಇನ್ನಷ್ಟು ರುಚಿಯಾಗಿಸ್ತಾರೆ. ಆಮೇಲೆ ಅವರ ಮನೆ ಸಾರು ನಮ್ಮನೆಗೆ, ನಮ್ಮನೆ ಸಾರು ಅವರ ಮನೆಗೆ ಹೋಗುತ್ತೆ. ಒಟ್ಟಿನಲ್ಲಿ ಮನೆತುಂಬಾ ಜನರು ಓಡಾಡ್ತಾ ಇದ್ರೆ ಸಕತ್ ಖುಷಿ ಆಗೋದು.

ಪಕ್ಕದ್ಮನೆ ತಾತನೂ ಚಿತ್ರಾನಿಗೆ ಸಾರು ಕೊಟ್ಟೆಯೇನು? ಅಂತ ರಾತ್ರಿ ಮಲಗೋಕೆ ಮುಂಚೆ ಮೊಮ್ಮಕ್ಕಳನ್ನು ಗದರಿಸಿ ಅವರ ಕೈಯಲ್ಲಿ ಕೊಟ್ಟು ಕಳಿಸ್ತಾರೆ. ಸ್ವಲ್ಪನೇ ಆಗಲೀ ಮತ್ತೊಬ್ಬರಿಗೆ ಕೊಟ್ಟು ತಿನ್ನೋದ್ರಲ್ಲಿ ತುಂಬಾ ಖುಷಿ ಇರುತ್ತೆ ಅಲ್ವಾ? ಊರಲ್ಲಿ ಆದ್ರೆ ಮನೆಗೆ ಯಾರಾದ್ರೂ ನೆಂಟರು ಬರ್ತಾರೆ, ಖುಷಿ-ಖುಷಿಯಾಗಿ ಸಂಭ್ರಮಿಸೋ ಅವಕಾಶಗಳಿರ್ತವೆ. ಆದರೆ, ಬೆಂಗಳೂರಿನಲ್ಲಿದ್ರೆ ನೆಂಟರಿಲ್ಲ, ತುಂಬಾ ಆಪ್ತರಿಲ್ಲ, ಆಪ್ತರಿದ್ರೂ ಅವರಿಗೆ ಅವರದೇ ಆಗ ಕೆಲಸಗಳಿರ್ತವೆ. ನಮ್ಮನೆಯಲ್ಲಿ ಬಂದು ಅವರಿಗೆ ಹರಟೆ ಹೊಡೆಯೋಕೆ ಸಮಯವೆಲ್ಲಿ ಇರುತ್ತೆ?

ಒಂದು ಕಾಲದಲ್ಲಿ ಎಲ್ಲರೂ ಜೊತೆಯಾಗೇ ಬಾಳೋ ಅವಿಭಕ್ತ ಕುಟುಂಬ ಪರಂಪರೆ ಇತ್ತು. ಕುಟುಂಬದ ಹತ್ತು-ಹದಿನೈದು ಮಂದಿ ಜೊತೆಗೆ ಬಾಳೋ ಸುಂದರ ಕುಟುಂಬ. ನನ್ನ ಗೆಳತಿ ಯೊಬ್ಬಳು ಗೌರಿ ಅಂತ ಬಳ್ಳಾರಿಯವಳು, ಅವರ ಮನೆಯಲ್ಲಿ ಈಗಲೂ 32 ಮಂದಿ ಇದ್ದಾರೆ. ಇನ್ನೂ ಆ ಕುಟುಂಬದಲ್ಲಿ ಜಮೀನಿಗೆ ಕಿರಿಕಿರಿ ಇಲ್ಲ. ತಾತ-ಮುತ್ತಾತರ ಕಾಲದಿಂದಲೂ ಆಸ್ತಿ ಪಾಲಾಗಿಲ್ಲ. ದೊಡ್ಡ ಮನೆಯಲ್ಲಿ ಮನೆ ತುಂಬಾ ಓಡಾಡುವ ಮಕ್ಕಳು, ಅಜ್ಜಿ, ತಾತಂದಿರು, ಹೆಂಗಳೆಯರು. ದಿನಾ ಮನೆಯೇ ಹಬ್ಬದಂತಿರುತ್ತೆ. ಇಂಥ ಕುಟುಂಬಗಳು ಹಳ್ಳಿ ಕಡೆ ಇದ್ರೂ ಕ್ರಮೇಣ ಮರೆಯಾಗುತ್ತವೆ. ಆರತಿಗೊಂದು ಕೀರುತಿಗೊಂದು ಮಗು. ಅವರಿಗೆ ಮದುವೆಯಾಗೋ ಸಮಯದಲ್ಲಿ ಆಸ್ತಿಯನ್ನು ಪಾಲು ಮಾಡಿ ಕೊಟ್ಟುಬಿಡುತ್ತಾರೆ. ಅದರ ಜೊತೆ ಅವರ ಮನಸ್ಸು ಕೂಡ ಇಬ್ಭಾಗ ಆಗಿ ಬಿಡುತ್ತೆ.

ನಂಗನಿಸೋದು ಅಂಥ ಸುಂದರ ಕುಟುಂಬ ಇರಬೇಕಿತ್ತು ಅಂತ. ಈ ಆಧುನಿಕತೆ, ವೇಗದ ಬದುಕು, ಒಂಜಾಟದ ನಡುವೆ ನಮ್ಮ ಆ ಸುಂದರ ಬದುಕಿನ ಕಲ್ಪನೆ ಮರೆಯಾಗುತ್ತಿದೆಯಲ್ಲಾ ಎಂದನಿಸುತ್ತೆ. ಅತ್ತೆ, ಮಾವ ಜೊತೆಗಿರುವ ಬದಲು ತಾನು ತನ್ನ ಗಂಡ ಮಾತ್ರ ಆರಾಮವಾಗಿ ಇದ್ದುಬಿಡಬೇಕು ಅನ್ನೋ ಸೊಸೆ, ಅಮ್ಮ-ಅಪ್ಪನಿಗೆ ವಯಸ್ಸಾದ ಹಾಗೇ ವೃದ್ಧಾಶ್ರಮದ ಬೇಲಿಯೊಳಗೆ ಅವರ ಕನಸನ್ನೇ ಕೊಲ್ಲುವ ಮಗ ಅಥವಾ ಮಗಳು,...ಥತ್! ಹೀಗೇ ಆಗಬಾರದಿತ್ತು ಅನಿಸುತ್ತೆ. ಜೊತೆಯಾಗಿ ಕಲೆದು, ಜೊತೆಯಾಗಿ ಖುಷಿಪಟ್ಟು, ಜೊತೆಯಾಗಿ ಬದುಕು ನಡೆಸುವ ಆ ಸುಂದರ ಜೀವನ ಯಾಕೆ ಮರೆಯಾಗುತ್ತಿದೆ? ಅಲ್ವಾ?

ಹಂಚಿ ಉಂಡರೆ ಹಸಿವಿಲ್ಲ ಅಂದ ಹುಡುಗಿ ಏನೋನೋ ಬರೀತಾ ಹೋದ್ಳು ಅನಿಸಿಬಿಡ್ತಾ? ಹೌದು, ಒಮ್ಮೊಮ್ಮೆ ಹೀಗೇ ಈ ಯೋಚನೆಗಳು...ಆಫಿಸ್ನಲ್ಲಿ ಕೂತಿರ್ತೀನಿ..ಹಂಗೆ ನೆಟ್ಟಗೆ ಮನೆಯ ಅಡುಗೆ ಮನೆಗೆ ಹೋಗಿ ಬರ್ತೀನಿ. .ಲಂಗು ಲಗಾಮಿಲ್ಲದ ಕುದುರೆಯಂತೆ ಯೋಚನೆಗಳು ಅಲ್ವಾ?

ಯಾಕೋ ಬದುಕಿಗೆ ಒಂದು ಪರಿಧಿ ಹಾಕ್ಕೊಂಡು ಮನುಷ್ಯ ಜೀವಿಸ್ತಾ ಇದ್ದಾನೆ ಅನಿಸ್ತಾ ಇದೆ..ಬದುಕು ಹರಿದು ಹಂಚಿ ಹೋಗುತ್ತಿದೆಯೇ ಎಂದನಿಸ್ತಾ ಇದೆ...

Tuesday, September 22, 2009

ನೀನು ನನ್ನವಳು ಅನ್ನೋದಕ್ಕಿಂತ ಸಂತೋಷ ಇನ್ನೇನಿದೆ?

೧೭೮೮ರಲ್ಲಿ ಜನಿಸಿದ ಲಾರ್ಡ್ ಬೈರನ್ ತನ್ನ ತಲೆಮಾರಿನ ಅತಿ ಜನಪ್ರಿಯ ಹಾಗೂ ಅಷ್ಟೇ ವಿವಾದಾಸ್ಪದ ಲೇಖಕ. ಆತನ ಬದುಕು ಗ್ರಹಿಕೆಗೆ ದಕ್ಕುವುದು ಒಂದು ಬಗೆಯ ವಿರೋಧಾಭಾಸದ ನೆಲೆಯಲ್ಲಿ. ಅಗಾಧ ಹಾಸ್ಯಪ್ರಜ್ಞೆಯಿದ್ದೂ ದುಃಖತಪ್ತ. ಕುಲೀನ ವರ್ಗಕ್ಕೆ ಸೇರಿದವರಾಗಿದ್ದೂ ಸಾಮಾನ್ಯ ಜನರ ಪ್ರಾಮಾಣಿಕ ಬೆಂಬಲಿಗನಾಗಿದ್ದವ. ಸ್ಫುರದ್ರೂಪಿ, ಜನಪ್ರಿಯ ಆದರೆ ವೈಯಕ್ತಿಕ ಬದುಕನ್ನೇ ಅಷ್ಟೇ ಹದಗೆಡಿಸಿಕೊಂಡವ. ಅಕಾಲಿಕವಾಗಿ ಕೊನೆಗೊಂಡ ವೈವಾಹಿಕ ಬದುಕು ತಂದಿಟ್ಟ ವೇದನೆ ಹಾಗೂ ಅವಮಾನದಿಂದ ತಪ್ಪಿಸಿಕೊಳ್ಳಲು ದೇಶಭ್ರಷ್ಟರಾಗಿ ಅಲೆದ ಬೈರನ್ ಜ್ವರಪೀಡಿತನಾಗಿ ೧೮೨೪ರಲ್ಲಿ ಮೃತಪಟ್ಟ. ಆತನ ವಿಪ್ಲವ ಬದುಕಿಗೆ ತಕ್ಕಮಟ್ಟಿಗೆ ತಂಪು ನೀಡಿದ್ದು ಜನ್ಮದತ್ತವಾಗಿ ಬಂದಿದ್ದ ಕಾವ್ಯಪ್ರತಿಭೆ. ಜೀವಿತಾವಧಿಯಲ್ಲಿಯೇ ವೈಯಕ್ತಿಕ ಬದುಕಿನ ದುರಂತ ಆತನ ಕಾವ್ಯ ಪ್ರತಿಭೆಯನ್ನು ಮಸುಕಾಗಿಸಿತ್ತು. ಇದು ಬೈರನ್ ತನ್ನ ಪ್ರೇಯಸಿಗೆ ಬರೆದ ಪತ್ರ.

ನನ್ನ ಪ್ರೀತಿಯ ಕೆರೊಲಿನ್ ,
ನೀನು ನನ್ನನ್ನು ಅಗಲುವ ಸಮಯದವರೆಗೂ ನಾನು ಕಣ್ಣೀರು ಸುರಿಸಿರಲಿಲ್ಲ. ಕಣ್ಣೀರು ಹಾಕುವುದು ನನಗೂ ಇಷ್ಟವಿಲ್ಲ ಎಂಬುದು ನಿನಗೂ ಗೊತ್ತು. ನಿನ್ನನ್ನು ನನ್ನಿಂದ ಅಗಲಿಸಿದ ಕಲಹವನ್ನು, ಮನಸ್ತಾಪವನ್ನು ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ನಾನು ಇಲ್ಲಿಯವರೆಗೆ ಆಡಿದ ಮಾತುಗಳು, ಮಾಡಿದ ಕಾರ್ಯಗಳು ನನಗೆ ನಿನ್ನ ಕುರಿತು ಇರುವ ಭಾವನೆಯನ್ನು ಸಮಗ್ರವಾಗಿ ಹಿಡಿದಿಡಲು ಅಶಕ್ಯ. ನಿನ್ನೆಡೆಗಿನ ನನ್ನ ಪ್ರೀತಿಯನ್ನು ಸಾಬೀತುಪಡಿಸಲು ನನಲ್ಲಿ ಇನ್ನಾವುದೇ ಪುರಾವೆಗಳೂ ಇಲ್ಲ.

ನಾನು ಸದಾ ಬಯಸಿದ್ದು ನಿನ್ನ ಸಂತೋಷವನ್ನೇ ಎಂಬುದಕ್ಕೆ ಆ ಪರಮಾತ್ಮನೇ ಸಾಕ್ಷಿ. ನಾನು ನಿನ್ನನ್ನು ತೊರೆಯುವಾಗ ಅಥವಾ ನಿನ್ನ ತಾಯಿ ಹಾಗೂ ಪತಿಯೆಡೆಗಿನ ಕರ್ತವ್ಯನಿಷ್ಠೆಯಿಂದ ನೀನೇ ನನ್ನಿಂದ ದೂರವಾಗುವಾಗ ನಾನು ನೀಡಿದ ಭಾಷೆ, ವಾಗ್ದಾನಗಳಲ್ಲಿನ ಸತ್ಯವನ್ನು ನೀನು ಗುರುತಿಸಬೇಕು. ನಿನಗೆ ಪವಿತ್ರ ಎನಿಸುವ ಯಾವುದೇ ವಿಚಾರಕ್ಕಿಂತ ಹೆಚ್ಚಿನ ಸಂಗತಿ ಯಾವ ರೀತಿಯಿಂದಲೂ ನನ್ನ ಹೃದಯದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ.

ಆತ್ಮೀಯ ಹಾಗೂ ಅತ್ಯಂತ ಪ್ರೀತಿಯ ಗೆಳತಿ, ನನ್ನೊಳಗಿನ ಎಲ್ಲಾ ಭಾವನೆಗೂ ಮಾತಿನ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮಾತಿಗೆ ಇದು ಸಮಯವೂ ಅಲ್ಲ. ನನ್ನ ವೇದನೆ ನಿನ್ನ ಕಲ್ಪನೆಯನ್ನೂ ಮೀರಿದ್ದು. ಆದರೆ ಅದನ್ನು ಅನುಭವಿಸುತ್ತಲೇ ಒಂದು ರೀತಿಯ ಧನ್ಯತೆ ಹಾಗೂ ವಿಷಾದನೀಯ ಸಂತಸವನ್ನು ನಾನು ಕಾಣುತ್ತಿದ್ದೇನೆ. ನಾನೀಗ ಭಾರವಾದ ಹೃದಯದೊಂದಿಗೆ ನಿನ್ನನ್ನು ಅಗಲುತ್ತಿದ್ದೇನೆ. ಈ ಮುಸ್ಸಂಜೆಯಲ್ಲಿನ ನನ್ನ ಸಾರ್ವಜನಿಕ ಉಪಸ್ಥಿತಿ ಇಂದಿನ ಘಟನೆಗಳಿಂದ ಉದ್ಭವವಾಗಬಹುದಾದ ಗಾಳಿಮಾತುಗಳಿಗೆ ಮಂಗಳ ಹಾಡಬಹುದು.

ನಿನ್ನ ಪಾಲಿಗೆ ನಾನು ಇಂದು ನಿರ್ಲಿಪ್ತನಂತೆ, ತಣ್ಣನೆಯ ವ್ಯಕ್ತಿಯಂತೆ ಕಂಡುಬಂದರೆ ಉಳಿದವರಿಗೂ ನಾನು ಹಾಗೆಯೇ ಕಾಣಬಹುದು. ನಿನ್ನ ತಾಯಿಗೆ ಕೂಡ. ಆ ಮಹಾತಾಯಿಗೆ ಅಲ್ಲವೇ ನಾವು ಇಷ್ಟೊಂದು ತ್ಯಾಗಕ್ಕೆ, ಬಲಿದಾನಕ್ಕೆ ಸಿದ್ಧವಾಗಿರುವುದು? ನನ್ನ ಪಾಲಿಗಂತೂ ಈ ತ್ಯಾಗಕ್ಕೆ ಸಾಟಿಯೇ ಇಲ್ಲ. ನಮ್ಮ ತ್ಯಾಗದ ಆಳ-ಅಗಲ ಅವರ ಗ್ರಹಿಕೆಗೆ ಅಷ್ಟು ಸುಲಭಕ್ಕೆ ನಿಲುಕುವುದಿಲ್ಲ ಬಿಡು.

ನಿನ್ನನ್ನು ಪ್ರೀತಿಸುವುದಿಲ್ಲ ಎಂದು ಭಾಷೆ ಕೊಡುತ್ತೇನೆ ಎಂಬುದು ತುಂಬಾ ಹಳೆಯ ವಾಗ್ದಾನ ಕೆರೊಲಿನ್. ಆದರೆ, ಒಂದು ಉತ್ತಮ ಉದ್ದೇಶಕ್ಕೆ ಕೆಲವೊಂದು ರಿಯಾಯಿತಿಗಳು ಬೇಕು. ಹಾಗೆಯೇ, ನಿನ್ನ ಸಮ್ಮುಖದಲ್ಲಿ ನಡೆಯುವ ಪ್ರತಿಯೊಂದಕ್ಕೂ- ಅದು ನನ್ನ ಹೃದಯದ ತಳಮಳವಿರಬಹುದು, ನಿನ್ನೊಳಗಿನ ನೋವಿರಬಹುದು- ಸ್ಪಂದಿಸುವ ಗುಣವನ್ನು ಕಾಯ್ದಿಟ್ಟುಕೊಳ್ಳುವುದು ಅವಶ್ಯಕ. ನಿನ್ನ ಮೇಲಿನ ಆ ಪರಮಾತ್ಮನ ಕೃಪೆ ಎಂದಿಗೂ ಬತ್ತದಿರಲಿ.

ಈ ವ್ಯಂಗ್ಯದ ಮಾತುಗಳು ಕೇವಲ ನನ್ನ ಅತ್ಯಂತ ಆತ್ಮೀಯ ಕೆರೊಲಿನ್‌ಗೆ ಮಾತ್ರ. ಅವುಗಳ ಗುರಿ ನಿನ್ನ ತಾಯಿಯಲ್ಲ ಮತ್ತು ಈ ಜಗತ್ತಿನಲ್ಲಿ ನಿನಗಿರುವ ಇನ್ನಿತರ ಸಂಬಂಧಗಳಿಗಲ್ಲ. ಒಂದು ಕಾಲದಲ್ಲಿ ನೀನು ನನ್ನವಳಾಗಿದ್ದೆ ಎಂಬ ಸವಿನೆನಪಿಗಿಂತ ಹೆಚ್ಚಿನ ಸಂತೋಷ, ಸಮಾಧಾನವನ್ನು ನನ್ನ ಈ ಜೀವಕ್ಕೆ ಜಗತ್ತಿನ ಬೇರೆ ಯಾವ ಸಂಗತಿ ತಾನೆ ತಂದೀತು? ನಿನಗೋಸ್ಕರ ನನ್ನೆಲ್ಲಾ ಸಂತಸಗಳನ್ನೂ ತ್ಯಾಗ ಮಾಡಲು ಮೊದಲೆಂದಿಗಿಂತ ಈಗಲೇ ಹೆಚ್ಚು ನಾನು ಸಿದ್ಧನಿದ್ದೇನೆ. ನಿನಗಿಂತ ಹೆಚ್ಚು ಮುಖ್ಯವಾದ ಸಂಗತಿ ನನಗೆ ಬೇರೊಂದಿಲ್ಲ. ಇದೆಲ್ಲದರಿಂದ ದೂರವಿರಬೇಕೆಂಬ ನನ್ನ ಉದ್ದೇಶವೇ ಈಗ ಅಪಾರ್ಥಕ್ಕೀಡಾಗುತ್ತಿದೆಯೇ? ಇವುಗಳನ್ನೆಲ್ಲಾ ಮುಂಚಿತವಾಗಿಯೇ ತಿಳಿದ ವ್ಯಕ್ತಿಯೊಬ್ಬರಿದ್ದರೆ ನನಗೆ ಅದೊಂದು ಸಂಗತಿಯೇ ಅಲ್ಲ. ನಿನಗೆ, ಕೇವಲ ನಿನಗೆ ಮಾತ್ರ ಅವು ಋಣಿಯಾಗಿವೆ. ನಾನು ಈ ಹಿಂದೆ ಮಾತ್ರವಲ್ಲ ಈಗಲೂ ನಿನ್ನವನು, ಸಂಪೂರ್ಣವಾಗಿ ನಿನ್ನವನು. ನಿನ್ನಿಷ್ಟದಂತೆ ಎಲ್ಲಿಯಾದರೂ, ಯಾವಾಗಲಾದರೂ, ಹಾಗೂ ಹೇಗಾದರೂ ನಿನ್ನ ಮಾತುಗಳನ್ನು ಪರಿಪಾಲಿಸಲು, ಗೌರವಿಸಲು, ಪ್ರೇಮಿಸಲು ಹಾಗೂ ನಿನ್ನೊಂದಿಗೆ ರೆಕ್ಕೆ ಬಿಚ್ಚಿಕೊಂಡು ಹಾರಲು ನಾನು ಸಿದ್ಧನಿದ್ದೇನೆ.
ನಿನ್ನದೇ ಕನವರಿಕೆಯಲ್ಲಿ
ಬೈರನ್

(ಇತ್ತೀಚೆಗೆ ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಬಂದ ಈ ಸುಂದರ ಪತ್ರ ತುಂಬಾ ಇಷ್ಟವಾಗಿತ್ತು. ನೀವೂ ಓದುತ್ತೀರೆಂಬ ಭಾವನೆಯಿಂದ ಇಲ್ಲಿ ಹಾಕೊಂಡೆ. ಲಿಂಕ್ ಇಲ್ಲಿದೆ: http://www.thesundayindian.com/kannada/20090830/history_mail.asp

Thursday, September 17, 2009

ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?'

ಕಳೆದ ರಾತ್ರಿ ಇಡೀ ನಿದ್ದೆಗೆಟ್ಟು ಕೆಲಸ ಮಾಡಿದ್ದರಿಂದ ಕಣ್ಣಲ್ಲಿ ನಿದ್ದೆಯ ಮಂಪರಿನ್ನೂ ಇಳಿದಿಲ್ಲ. ತಮ್ಮ ತಂದುಕೊಟ್ಟ ಟೀ ಪಕ್ಕದಲ್ಲೇ ಆರುತ್ತಿತ್ತು. ಆದರೂ, ತಲೆಯೊಳಗೆ ಅದೇನೋ ಯೋಚನೆ. ನಡೆದ ದಾರೀಲಿ, ಕಣ್ಣಾರೆ ಕಂಡ, ಕಿವಿಯಾರೆ ಕೇಳಿದ, ನಾ ಪಡೆದ ಅನುಭವಗಳು ಮತ್ತೆ ಮತ್ತೆ ನನ್ನ ಕಾಡಿದವು. ನನ್ನೊಳಗೇ ಅಸಹಾಯಕತೆಯನ್ನು ಸಾರಿ ಸಾರಿ ಹೇಳಿದವು. ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಎದ್ದುಬಿಟ್ಟು ಟೀ ಕುಡಿದು, ಸ್ನಾನಕ್ಕೆ ಹೋದೆ. ಅಲ್ಲಿಯೂ ಕಾಡತೊಡಗಿತ್ತು. ದೇವರಿಗೆ ದೀಪ ಹಚ್ಚಿದೆ, ಅಲ್ಲಿಯೂ ಕಾಡಿತ್ತು..ನನ್ನ ಅಸಹಾಯಕತೆ, ಮಾತ್ರವಲ್ಲ ನನ್ನಂತ ಬಹಳಷ್ಟು ಮಂದಿಯ ಅಸಹಾಯಕತೆ. 'ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?' ಎಂದು ಕೇಳಿದರೂ ನನ್ನೆದುರು ಹಚ್ಚಿಟ್ಟ ಹಣತೆಯ ಎದುರು ಕುಳಿತ ದೇವರು ಉತ್ತರವನ್ನು ಹೇಳಲಿಲ್ಲ. ಮೌನವಾಗಿಬಿಟ್ಟ...ಬಹುಶಃ ಮನುಷ್ಯ , ಚರಾಚರಾ ವಸ್ತುಗಳನ್ನೂ ಸೃಷ್ಟಿಸಿದ ಆ ಸೃಷ್ಟಿಕರ್ತನಿಗೂ ಈ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ ಅನಿಸುತ್ತೆ.

ಪುಟ್ಟ ಮನೆಯೊಳಗೆ ಪೆನ್ನು ಹಿಡಿದು ಒಬ್ಬಳೇ ಕುಳಿತು, ಇದೀಗ ನನ್ನೊಳಗೆ ಕಾಡಿದ ಅಸಹಾಯಕತೆಯನ್ನು ನಿಮ್ಮೆದು ಬಿಚ್ಚಿಡುತ್ತಿದ್ದೇನೆ. ಹೌದು, ನಾನು ಹೇಳಹೊರಟಿರುವುದು ದುಃಖದ ಬಗ್ಗೆ. ನಾವೂ ಕಣ್ಣೀರಾಗ್ಥೀವಿ, ಮನತುಂಬಾ ನೋವು ಪಡ್ತೀವಿ, ಛೇ! ಹೀಗಾಗಬಾರದಿತ್ತು ಅಂದುಕೊಳ್ತೀವಿ, ಅದರ ಬಗ್ಗೆನೇ ದಿನಗಟ್ಟಲೆ ಯೋಚನೆ ಮಾಡ್ತೀವಿ, ನಮ್ಮೋಳಗೆಯೇ ನೋವಾಗಿ ಕರಗಿಬಿಡ್ತೀವಿ. ಆದರೆ ಅವರ ದುಃಖವನ್ನು ನಮಗೆ ಕಡಿಮೆಗೊಳಿಸಲಾಗಲಿಲ್ಲ. ಮುಗಿಲುಮುಟ್ಟಿದ ಆ ಅಳುವನ್ನು ನಮ್ಮಿಂದ ನಿಯಂತ್ರಿಸಲೂ ನಮ್ಮಿಂದ ಆಗುವುದಿಲ್ಲ. ಅವರು ಅಳುತ್ತಲೇ ಇರುತ್ತಾರೆ...ನಾವೂ ಅವರ ಜೊತೆ ಕಣ್ಣೀರಾಗ್ತಲೇ ಇರ್ತೀವಿ ...!!!
ನಮ್ಮಜ್ಜ ಕರಿಮೆಣಸು ಕೊಯ್ಯಲು ಮರಕ್ಕೆ ಹತ್ತಿ ಕಾಲು ಜಾರಿ ಧೊಪ್ಪನೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಅದನ್ನು ನೋಡಿದ ನಮ್ಮಜ್ಜಿ, ಅಮ್ಮ, ಚಿಕ್ಕಮ್ಮ, ದೊಡ್ಡಮ್ಮನವರೆಲ್ಲಾ ದುಃಖ ಸಹಿಸಲಾಗದೆ ಅಳುತ್ತಾ ಎದೆಬಡಿದುಕೊಂಡು ಅಂಗಳವಿಡೀ ಹೊರಳಾಡುತ್ತಿದ್ದರು. ನನ್ನ ತಮ್ಮ ಪುಟ್ಟ ಮಗು, ನಾನಿನ್ನೂ ಒಂದನೇ ಕ್ಲಾಸು. ನನ್ನ ತೊಡೆಯ ಮೇಲೆ ಕುಳಿತ ನನ್ನ ತಮ್ಮ 'ಅಕ್ಕಾ ಅಮ್ಮ ಅಳುತ್ತಾಳೆ..ಅಳಬೇಡ ಅನ್ನುಎನ್ನುತ್ತಿದ್ದ. ನಾನೂ ಕಣ್ಣೀರಾದೆ. ಅವನೂ ಕಣ್ನೀರಾದ. ಕಣ್ಣೀರ ಹರಿಸೋ ಅಷ್ಟೂ ಮಂದಿ ಕಣ್ಣೀರಾದರು. ಅಮ್ಮ ಅಳಬೇಡ ಅಂದ್ರೂ ಅಳೋದನ್ನು ನಿಲ್ಲಿಸಲಿಲ್ಲ.
ಅಂದು ನನ್ನ ಆತ್ಮೀಯರೊಬ್ಬರಿಗೆ ಪೋನಾಯಿಸಿದೆ. ಅವರೂ ನಂಗೆ ಫೋನ್ ಮಾಡಲಿಲ್ಲ, ನಾನೂ ಮಾಡಿರಲಿಲ್ಲ. ಹಾಗಾಗಿ ತುಂಬಾ ದಿನಗಳ ಬಳಿಕ ನಾನವರನ್ನು ಮಾತಾಡಿಸಿದ್ದೆ. ನನ್ನದೊಂದು ಕೆಟ್ಟ ಅಭ್ಯಾಸ ಎಂದರೆ ತೀರಾ ತಮಾಷೆಯಾಗಿ ಮಾತಿಗಿಳಿಯೋದು. ಹಾಗೇ ಮಾತನಾಡಿಸಿದರೂ ಆತ ಮೌನವಾಗೇ ಇದ್ದು, 'ನನ್ನಪ್ಪ ನಮ್ಮನ್ನೆಲ್ಲಾ ಬಿಟ್ಟುಹೋದರು' ಎಂದಾಗ ನನ್ನದೆ ಒಡೆದುಹೋಗಿತ್ತು. ನಿತ್ಯ ನಗು ನಗುತ್ತಾ ನನ್ನ ಪೋಲಿ ಜೋಕುಗಳ ಜೊತೆಗೆ ನಗುವಾಗಿದ್ದ ಅವರು ಅಂದು ಅಳುವಾಗಿದ್ದರು. ಮನದೊಳಗೆ ಅಳುತ್ತಿದ್ದರು. ನಂಗೆನು ಹೇಳಬೇಕೋ ತೋಚಲಿಲ್ಲ. 'ಎಲ್ಲವೂ ದೇವರಿಚ್ಚೆ' ಎಂದು ಹೇಳಿ ಪೋನಿಟ್ಟೆ. ನಂಗೆ ಅವರ ದುಃಖವನ್ನು ಶಮನ ಮಾಡೋಕೆ ಆಗಲಿಲ್ಲ. ನನ್ನ ಕಂಗಳಿಂದ ಉದುರಿದ ಪುಟ್ಟ ಬಿಂದು ಅವರನ್ನು ಸಮಾಧಾನಿಸಲಿಲ್ಲ.
ನಾನು ಹೈಸ್ಕೂಲು ಓದುತ್ತಿದ್ದಾಗ ನನಗೊಬ್ಬ ಪ್ರೀತಿಯ ತಮ್ಮ ಇದ್ದ. ಇತ್ತೀಚೆಗೆ ಅವನ ಅಮ್ಮ ತೀರಿಕೊಂಡುಬಿಟ್ರು. ಅಮ್ಮನ ಕಳೆದುಕೊಂಡ ಆ ದುಃಖದಲ್ಲಿ 'ಅಕ್ಕಾ ಅಮ್ಮನಿಗೆ ಮೋಕ್ಷ ಸಿಗಲೆಂದು ನಿತ್ಯ ನೀನು ಬೇಡಿಕೋ' ಎಂದು ಕಣ್ನೀರು ಹಾಕಿದಾಗ ನನಗೆ ದುಃಖ ಸಹಿಸಲಾಗದೆ ಅತ್ತುಬಿಟ್ಟಿದ್ದೆ. ಅವನ ದುಃಖವನ್ನು ನಿಯಂತ್ರಿಸೋಕೆ ನನ್ನಿಂದಾಗಲಿಲ್ಲ. ಛೇ! ಯಾಕೆ ನಾನೂ ಓರ್ವ ಮನುಷ್ಯಳಾಗಿ ಇನ್ನೊಬ್ರ ದುಃಖವನ್ನು ಕಡಿಮೆಗೊಳಿಸಕೆ ಆಗಲಿಲ್ಲವಲ್ಲಾ ಎಂಬ ಅಸಹಾಯಕತೆಯ ಮಡುವಿನಲ್ಲಿ ನಾನೂ ಕಣ್ಣೀರಾದೆ.
ಹೌದು, ತುಂಬಾ ಸಲ ಹೀಗೇ ಆಗುತ್ತೆ. ನಮ್ಮೆದುರಿಗೆ ಒಬ್ಬರು ಅಳುತ್ತಿದ್ದರೆ ಅವರ ದುಃಖಕ್ಕೆ ನಮ್ಮಲ್ಲಿ ಪರಿಹಾರ ಇರೊಲ್ಲ. ಬೇಕಾದ್ರೆ ನಾವೂ ಅವರ ಜೊತೆ ಅಳ್ತೀವಿ ಹೊರತು ಅವರ ಕಣ್ಣೀರನ್ನು ನಿಯಂತ್ರಿಸೋಕೆ ಆಗೋಲ್ಲ. ಅದಕ್ಕೆ ಹೇಳೋದು ಅನಿಸುತ್ತೆ: 'ಅಳೋರನ್ನು ಹಾಗೇ ಬಿಟ್ಟುಬಿಡಿ, ಅತ್ತು ದುಃಖ ಶಮನ ಮಾಡಿಕೊಳ್ಳಲಿ' ಅಂತ.
ಹೌದು, ಹುಟ್ಟಿದ ಮನುಷ್ಯ ಬದುಕೋಕೆ, ಹೇಗೆ ಹಾಗೇ ಬದುಕೋಕೆ, ಪ್ರೀತಿಸೋಕೆ, ದ್ವೇಷಿಸೋಕೆ, ನಗಿಸೋಕೆ, ಮೋಸ ಮಾಡಕೆ, ವಂಚಿಸೋಕೆ. ಕೊಲೆ ಮಾಡೋದಕೆ ಎಲ್ಲವನ್ನೂ ಕಲಿತಿದ್ದಾನೆ. ಆದರೆ ಇನ್ನೊಬ್ರು ಅಳುತ್ತಿರೋಬೇಕಾದ್ರೆ ಅವನ ದುಃಖವನ್ನು ನಿಯಂತ್ರಿಸೋ ಬದಲು ಅದೇಕೇ ತಾನೂ ಕಣ್ಣೀರಾಗ್ತಾನೆ...???


Monday, September 7, 2009

ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...

ಹೌದು...ಮೊನ್ನೆ ನಾನೂ ನನ್ನೂರಿಗೆ ಹೊರಟಿದ್ದೆ. ಶಿರಾಡಿ ಘಾಟ್ ನಲ್ಲಿ ವರ್ಷವಿಡೀ 'ಕಾಮಗಾರಿ ಪ್ರಗತಿಯಲ್ಲಿರಿವುದರಿಂದ' ಚಾರ್ಮಾಡಿ ಘಾಟ್ ನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಾ ನನ್ನನ್ನು ಹೊತ್ತ ಬಸ್ಸು ಸಾಗಿತ್ತು. ಧಾರಕಾರವಾಗಿ ಸುರಿವ ಮಳೆ, ಗಾಳಿ, ಚಳಿ, ಸುತ್ತೆಲ್ಲಾ ಮುಸುಕಿಕೊಂಡಿದ್ದ ಮಂಜು.. ನಡುವೆ ಬಸ್ಸು ನುಗ್ಗುತ್ತಾ ಸಾಗುತ್ತಿದ್ದಂತೆ ಹಸಿರ ಚೆಲುವು ಕಣ್ಣು ತುಂಬುತ್ತಿತ್ತು. ಆದರೆ, ನನ್ನ ಪ್ರೀತಿಯ ಉಜಿರೆಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಂತೆ ಚಳಿಗೆ ಮೈಯೆಲ್ಲಾ ಮರಗಟ್ಟಿ ಮೂಗು, ಕಿವಿ ಎಲ್ಲಾ ಬಂದ್ ಆಗಿತ್ತು.

ಹೌದು, ನನಗೆ ಬದುಕಿನ ಪಾಠ ಕಲಿಸಿದ ಪ್ರೀತಿಯ ಉಜಿರೆಯಲ್ಲಿ ಇಳಿದು ಎದುರುಗಡೆ ಕಾಣುತ್ತಿದ್ದ ಆ ನನ್ನ ವಿದ್ಯಾದೇಗುಲಕ್ಕೆ ಪ್ರೀತಿಯಿಂದ ವಂದಿಸಿದ್ದೆ. ಐದು ವರ್ಷಗಳ ಕಾಲ ಓಡಾಡಿದ್ದ ಉಜಿರೆ ಬದಲಾವಣೆಯತ್ತ ಮುಖಮಾಡಿದೆ. ನೂರಾರು ಜನರಿಗೆ ನೆರಳು ನೀಡುತ್ತಿದ್ದ ಸಕರ್ಲ್ ನಲ್ಲಿದ್ದ ದೊಡ್ಡ ಮರ ಕಾಣೆಯಾಗಿ ಸರ್ಕಲ್ ಸುತ್ತ ಜನರು ಬಿರುಬಿಸಿಲಿಗೂ, ಜಡಿಮಳೆಗೂ ಕೊಡೆ ಹಿಡಿದು ಬಸ್ಸಿಗೆ ಕಾಯೋ ಸ್ಥಿತಿ. ಕಾಲೇಜು ನೋಡಿದರೆ ಸುತ್ತಲೆಲ್ಲಾ ಕಟ್ಟಡಗಳೇ ತುಂಬಿಕೊಂಡು ಕಾಲೇಜು ಇನ್ನಷ್ಟು ವಿಸ್ತಾರಗೊಂಡಿದೆ. ನನ್ನ ಪ್ರೀತಿಯ ಲೈಬ್ರೇರಿ ಅದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ. ಮೊಬೈಲ್ ಇಲ್ಲದ ಪಿಯು-ಡಿಗ್ರಿ ಸಮಯದಲ್ಲಿ ನಿತ್ಯ ಅಮ್ಮನ ಜೊತೆ ಮಾತನಾಡೋಕೆ ನೇತಾಡುತ್ತಿದ್ದ ಆ ಇಂದ್ರಣ್ಣನ ಅಂಗಡಿ ಯ ಎರಡು ಕೆಂಪು ಕಾಯಿನ್ ಬೂತ್ ಗಳು ಹಾಗೇ ಇವೆ. ಇಂದ್ರಣ್ಣ ಅದೇ ಮುಖತುಂಬಾ ಗಡ್ಡ, ಖುಷಿ ಖುಷಿಯ ನಗುವಿನಿಂದ ಸ್ವಾಗತಿಸಿದರು.

ಅಲ್ಲಿಂದ ಮುಂದೆ ನನಗೆ ಐದು ವರ್ಷ ಅಮ್ಮನಂತೆ ಸಾಕಿ ಸಲಹಿದ ಬಿಸಿಎಂ ಹಾಸ್ಟೇಲ್ ನತ್ತ ಸಾಗಿದರೆ, ನನಗೆ ದಿನಕ್ಕೆರಡು ಬಾರಿ ಟೀ ಇಟ್ಟು ಕೊಟ್ಟು, ರಾತ್ರಿ ಮಲಗುವಾಗಲೂ ತಟ್ಟಿ ಮಲಗಿಸುತ್ತಿದ್ದ, ಮಗಳಂತೆ ನನ್ನ ಪ್ರೀತಿಯಿಂದ ಕಂಡ ಹೇಮಾ ಆಂಟಿಗೆ ಒಂದು ಕ್ಷಣ ನನ್ನ ಪರಿಚಯ ಸಿಗದೆ ಒಂದು ಕ್ಷಣ ಅವಕ್ಕಾಗಿ ಬಂದು ಗಟ್ಟಿಯಾಗಿ ಅಪ್ಪಿಕೊಂಡಾಗ ನಾನೇ ಕರಗಿಹೋಗಿದ್ದೆ. ಅದೇ ನಗು, ಅದೇ ಖುಷಿ, ಅದೇ ಪ್ರೀತಿಯ ಮಾತು....ಗಳಿಂದ ಮನಸ್ಸೆಲ್ಲಾ ತುಂಬಿಕೊಂಡುಬಿಟ್ಟರು. ಡಿಗ್ರಿಯಲ್ಲಿರುವಾಗ ನನ್ನ ರೂಮ್ ಬಿಟ್ಟು ಆಂಟಿ ಜೊತೆ ಮಲಗೋದು ನನ್ನ ಅಭ್ಯಾಸ. ಏಕಂದ್ರೆ ನನ್ನ ರೂಮ್ ನಲ್ಲಿರುವಾಗ ಹುಡುಗಿರೆಲ್ಲಾ ಮಧ್ಯರಾತ್ರಿ ತನಕ ಹರಟೆ ಹೊಡೆಯೊರು..ಪಕ್ಕಾ 10.30ಗೆ ನಿದ್ದೆಯ ಮಂಪರಿಗೆ ಜಾರಿ, ಬೆಳಿಗ್ಗೆ 5.30ಗೆ ಏಳೋ ನನಗೆ ಅದು ಹಿಂಸೆ ಅನಿಸುತ್ತಿತ್ತು. ಅದಕ್ಕೆ ಆಂಟಿ ಜೊತೆ ಮಲಗಿಬಿಡುತ್ತಿದ್ದೆ. ಅವರು ಏಳುವಾಗ ನನ್ನನ್ನೂ ಎಬ್ಬಿಸುತ್ತಿದ್ದರು. ಹಾಗೇ ಮತ್ತೊಬ್ರು ರತ್ನ ಆಂಟಿಯ ಪುಟ್ಟ ಮಗು ವರುಣ ಕೂಡ ನನ್ನ ಜೊತೆಗೇ ಮಲಗುತ್ತಿದ್ದ. ಹಾಗೇ ಓದುತ್ತಾ, ಆಡುತ್ತಾ ಅಲ್ಲೆ ಮಲಗುತ್ತಿದ್ದೆ. ನನ್ನ ನೋಡಿದವರೇ ಆಂಟಿ, ಚಿತ್ರಾ ಮಲಗೋಕೆ ಹೊರಟಾಗ ಯಾವಾಗಲೂ ನೀನು ನೆನಪಾಗ್ತೀ ಅಂದ್ರು. ನಾನು ನೀಡಿದ ಒಂದು ಪುಟ್ಟ ಸ್ವೀಟ್ ಬಾಕ್ಸ್ ಅನ್ನು ಆಂಟಿ ಕಣ್ಣರಳಸಿ ನೋಡಿ ತೆಗೆದುಕೊಂಡರು. ಅವರು ಮಾಡಿ ಕೊಟ್ಟ ಟೀ ಮಾತ್ರ ಮತ್ತೊಮ್ಮೆ ಆಂಟಿ ಮಾಡಿಕೊಡುತ್ತಿದ್ದ ಟೀಯನ್ನು ನೆನೆಪಿಸಿ ಕಣ್ತುಂಬಿಸಿತ್ತು. ರತ್ನ ಆಂಟಿನೂ ಹಾಗೇ ಇದ್ದಾರೆ..ಬಾಯಿ ತುಂಬಾ ನಗುತ್ತಾ.

ಆದರೆ ಹಾಸ್ಟೇಲ್ ನಾವು ಇರುವಾಗ ಇದ್ದಕ್ಕಿಂತಲೂ ಈಗ ತುಂಬಾ ಚೆನ್ನಾಗಿದೆ. ಎದುರುಗಡೆ ಮೂರು ರೂಮ್ ಗಳು ಮತ್ತೆ ನಿರ್ಮಾಣವಾಗಿವೆ. ಹೊತ್ತು ಹೊತ್ತಿಗೆ ಬೋರ್ ವೆಲ್ ನೀರು ಸೌಲಭ್ಯ, ಫೋನ್, ಬೇಕಾದಷ್ಟು ಡೆಸ್ಕುಗಳು, ಸೋಲಾರ್...ಏನು ಬೇಕೋ ಅದೆಲ್ಲಾ ಇದೆ. ನೋಡಿ ನಾನುನೂ ಈಗಲೂ ಇರಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಇನ್ನೊಂದು ತುಂಬಾ ಖುಷಿಯಾಗಿದ್ದು ಅಂದ್ರೆ ನಾನೇ ಹೆಸರಿಟ್ಟು ಮಾಡಿದ ವಾಲ್ ಮ್ಯಾಗಜಿನ್ 'ಸ್ಫೂರ್ತಿ'ಯನ್ನು ನನ್ನ ತಂಗಿಯರು ಹಾಗೇ ಕಾಪಾಡಿಕೊಂಡು ಬಂದಿದ್ಧಾರೆ. ನೋಡಿ ಭಾಳ ಖುಷಿ ಪಟ್ಟೆ.

ಸಂಜೆಯ ಹೊತ್ತಿಗೆ ಡೈರಿ ಬರೆಯಲು ಕೂರುತ್ತಿದ್ದ ಆ ವಿಶಾಲವಾದ ಗಾಳಿ ಮರ ಹಾಗೇ ಇದೆ. ನಮಗೆ ವಾರ್ಷಿಕ ಆದಾಯ ತರುತ್ತಿದ್ದ ಆ ಗೇರುಬೀಜದ ಮರ ಇನ್ನೂ ಹಾಗೇ ಉಳಿದಿದೆ. ಅದಕ್ಕೆ ಅದೆಷ್ಟು ಸಲ ನಾವು ಹತ್ತಿ ಗೇರು ಬೀಜ ಕೊಯ್ಯುತ್ತಿದ್ದೇವೋ..ಗೆಳತಿ ಶ್ರದ್ಧಾ ಅದೆಷ್ಟು ಬಾರಿ ಮರದಿಂದ ಕೆಳಗೆ ಜಾರಿದಳೋ...ಆ ಮರ ನೋಡುತ್ತಿದ್ದಂತೆ ಹಿಂದಿನ ನೆನಪುಗಳು ಮನದ ಪರದೆ ಮೇಲೆ ಸುತ್ತಾಡಿದವು. ಅಕ್ಕಾ..ಅಕ್ಕಾ...ಎನ್ನುತ್ತಾ ಅಕ್ಕರೆ, ಅಚ್ಚರಿಯಿಂದ ಕಾಣುತ್ತಿದ್ದ ನನ್ನ ತಂಗಿಯರ ಮಾತುಗಳು ಮನತುಂಬಿಸಿದವು.

ಅಲ್ಲಿಂದ ಧರ್ಮಸ್ಥಳದತ್ತ ಹೊರಟರೆ, ಮೂರು ವರ್ಷ ಜೊತೆಗೇ ಕಲಿತ ರಾಜೇಂದ್ರ, ರೋಹನ್ ಅಚಾನಕ್ ಆಗಿ ಕಣ್ಣಿಗೆ ಬಿದ್ದರು. ಕ್ಲಾಸಿನಲ್ಲಿ ನಂ.1 ತರಲೆ ಪಟ್ಟ ಗಿಟ್ಟಿಸಿಕೊಂಡಿದ್ದ ರಾಜೇಂದ್ರ ಈಗ ಮೌನಮೂರ್ತಿ ಆಗಿದ್ದಾನೆ. ಒಂದೇ ಒಂದು ನೋಟ್ಸ್ ಬರೆಯದೆ ನನ್ನ ನೋಟ್ಸ್ ಜೆರಾಕ್ಸ್ ನಲ್ಲಿ ಪಾಸ್ ಮಾಡಿಕೊಳ್ಳುತ್ತಿದ್ದ ಆತ ಕಾಲೇಜಿಗೆ ಅಧ್ಯಕ್ಷನೂ ಆಗಿಬಿಟ್ಟಿದ್ದ. ಅವನ ತರಲೆ, ಕೀಟಲೆಗಳನ್ನು ಕಂಡ ಮೇಷ್ಟ್ರುಗಳೇ ರೋಸಿಹೋಗಿದ್ದರು. ಅವನಿದ್ದರೆ ನಮ್ಮ ಕ್ಲಾಸ್ ರೂಮ್ ಮನೋರಂಜನಾ ಹಾಲ್ ಆಗುತ್ತಿತ್ತು, ಸಿಕ್ಕಿದವನೇ ಹಿಂದಿನದನೆಲ್ಲಾ ಬಿಚ್ಚುಡುತ್ತಾ ಹೋದ..ಈಗ ಒಳ್ಳೆಯ ಕೆಲಸದಲ್ಲಿದ್ದಾನೆ. ಹಿಂದಿನ ತರಲೆ ಬುದ್ಧಿ ಬಿಟ್ಟು ಸಾದಾ ಸೀದಾ ಮನುಷ್ಯ ಆಗಿಬಿಟ್ಟಿದ್ದಕ್ಕೆ ಹೀಗೇ ಇರು ಮಾರಾಯ ಅಂದೆ.

ಎರಡು ದಿನ ಉಜಿರೆಯಲ್ಲಿ ಕಳೆದೆ. ಮತ್ತೊಮ್ಮೆ ಕಳೆದ ದಿನಗಳನ್ನು ಮೆಲುಕು ಹಾಕಿದೆ. ನನ್ನ ಬದುಕು ರೂಪಿಸಿದ ಪ್ರೀತಿಯ ಕಾಲೇಜಿಗೆ, ಹಾಸ್ಟೇಲಿಗೆ ಮನತುಂಬಾ ಮತ್ತೊಮ್ಮೆ ನಮಿಸುತ್ತಾ ಮತ್ತೆ ಬೆಂಗಳೂ ರು ಬಸ್ಸು ಹಿಡಿದೆ. ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...!