Wednesday, December 16, 2009

ದೇವರೇ ನೀನೇಕೆ ಕಲ್ಲಾಗಿಬಿಟ್ಟೆ?


ಈ ಹೆಣ್ಣು ಮಕ್ಕಳ ಬದುಕೇ ಹೀಗೇನಾ?
ಇಂಥದ್ದೊಂದು ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿದ್ದು ವೊನ್ನೆ ವೊನ್ನೆ ಆ ಹುಡುಗನ ಮನೆಯಲ್ಲಿ ಮುತ್ತೈದೆಯರು ನನ್ನ ಗುಳಿಬಿದ್ದ ಕೆನ್ನೆಗಳಿಗೆ ಅರಶಿನ ಕುಂಕುಮ ಹಚ್ಚಿದಾಗ, ನಮ್ಮನೆಯವರು ಮತ್ತು ಆ ಹುಡುಗನ ಮನೆಯವರು ತಾಂಬೂಲ ಬದಲಾಯಿಸಿಕೊಂಡಾಗ, ಆ ಹುಡುಗ ನನ್ನ ಬೆರಳಿಗೆ ಉಂಗುರ ತೊಡಿಸಿದಾಗ, ನನ್ನ ತಮ್ಮ ನನ್ನ ಕೆನ್ನೆ ಚಿವುಟಿ ‘ಅಕ್ಕಾ ಇನ್ನು ನೀನು ಈ ಮನೆಯ ಹುಡುಗಿ’ ಎಂದು ಖುಷಿಯಿಂದ ಹೇಳಿದಾಗ, ನನ್ನಮ್ಮ ನನ್ನ ನೋಡುತ್ತಲೇ ಗಳಗಳನೇ ಅತ್ತಾಗ!
ಥತ್, ನಾ ಹುಟ್ಟಿದ ಊರು, ನನ್ನ ಪ್ರೀತಿಯ ಅಮ್ಮ, ನನ್ನ ತಮ್ಮ, ಬದುಕಲು ಕಲಿಸಿದ ಅಮ್ಮನಂಥ ಅಣ್ಣ, ನನ್ನ ಕೈಯಾರೆ ಅಮ್ಮ ನೆಡಿಸಿದ ಆ ಗೆಂದಾಲೆ ತೆಂಗಿನ ಮರ, ನಾನು ಸ್ಕೂಲಿಗೆ ಹೋಗುವಾಗ ವೊಸರು ಕೊಂಡೋಗಲು ಕಾರಣಳಾದ ಪ್ರೀತಿಯ ಹಸು ಅಕ್ಕತ್ತಿ, ಅಮ್ಮನ ಜೊತೆ ಬಟ್ಟೆ ಒಗೆಯಲು ಹೋಗುತ್ತಿದ್ದ ನಮ್ಮೂರ ಕೆರೆ, ಅಜ್ಜ ಉಳುತ್ತಿದ್ದ ಗದ್ದೆ, ನಮ್ಮನೆ ತೋಟ, ನನ್ನ ನಿತ್ಯ ಆಟ ಆಡಿಸುತ್ತಿದ್ದ ಕುಸುಮಜ್ಜಿ, ನನ್ನಮ್ಮನ ಜೊತೆ ಬೀಡಿ ಕಟ್ಟಲು ಸಾಥ್ ನೀಡುತ್ತಿದ್ದ ಪಕ್ಕದ್ಮನೆ ಸೀತಕ್ಕ, ನಾನು ಓದಿದ ಸ್ಕೂಲ್, ಪ್ರೀತಿಯ ಟೀಚರ್ರು....! ಒಮ್ಮೆಲೆ ಎಲ್ಲರೂ ನೆನಪಾದರು.
ಕಣ್ಣಿಂದ ಸುರಿದ ಅಶ್ರುಬಿಂದುಗಳು ನನ್ನ ಪಾದವನ್ನು ತೋಯುತ್ತಿದ್ದಂತೆ, ಮುತ್ತೈದೆಯರೆಲ್ಲಾ ’ತವರಿನ ನೆನಪು ಇರಲಿ ಬಿಡಿ’ ಎಂದು ಅವರವರೊಳಗೆ ಮಾತನಾಡಿಕೊಳ್ಳುತ್ತಿದ್ದರು. ನಂಗೂ ಅನಿಸಿತ್ತು: ಇವರೂ ನನ್ನ ತರಾನೇ ಅತ್ತಿರಬಹುದೇನೋ!
ನಾನ್ಯಾಕೆ ಹುಡುಗಿಯಾಗಿ ಹುಟ್ಟಿದೆ? ಹುಡುಗನಾಗಿ ಹುಟ್ಟುತ್ತಾ ಇದ್ದರೆ, ಮದುವೆಯಾಗಿ ಬೇರೆ ಮನೆಗೆ ಹೋಗುವ ಅಗತ್ಯವೇನಿತ್ತು? ಅಮ್ಮನ ಜೊತೆ ಇರಬಹುದಿತ್ತಲ್ಲಾ?ಅಮ್ಮನ ಕೈಯಡಿಗೆ, ಅಮ್ಮನ ಹಿತನುಡಿಗಳು, ಅಮ್ಮ ಮಾಡಿಕೊಡುವ ಹಪ್ಪಳ-ಸಂಡಿಗೆ ಮೆಲ್ಲುತ್ತಾ, ಅಣ್ಣ-ತಮಂದಿರ ಜೊತೆ ನಿತ್ಯ ಮುನಿಸಿಕೊಳ್ಳುತ್ತಾ, ಮತ್ತೆ ರಾಜಿಯಾಗುತ್ತಾ, ಮನೆ ಹತ್ತಿರವಿರುವ ಮೈದಾನದಲ್ಲಿ ಲಗೋರಿಯಾಟ ಆಡುತ್ತಾ ಖುಷಿ ಖುಷಿಯಾಗಿ ಹಾಗೇ ಇರಬಹುದಿತ್ತಲ್ಲಾ...ಹೀಗೆ ನೂರಾರು ಯೋಚನೆಗಳ ಸಂತೆ ಮನದಲ್ಲಿ ಪಿಸುಗುಟ್ಟಿ, ‘ಅಮ್ಮ ನಾ ಬಿಡಲಾರೆ ನಿನ್ನ ಸೆರಗಾ’ ಎಂದುಕೊಳ್ಳುತ್ತಿದ್ದೆ.

ಹೌದು, ಆ ಹುಡುಗ ‘ನೀ ನನ್ನ ಮದುವೆ ಆಗ್ತೀಯಾ’ ಎಂದು ಕೇಳಿದಾಗ ಅಮ್ಮನ ಜೊತೆ ಕೇಳು ಅಂದಿದ್ದೆ. ‘ಅಯ್ಯೋ ಹುಚ್ಚು ಹುಡುಗಿ ನಾ ನಿನ್ನ ಮದುವೆ ಆಗ್ತಿರೋದು, ಅಮ್ಮನನ್ನು ಅಲ್ಲ ಕಣೇ’ ಎಂದು ರೇಗಿಸಿದಾಗಲೂ ಅವನು ನೀ ನಮ್ಮನೆಯಲ್ಲೇ ಶಾಶ್ವತವಾಗಿ ಇದ್ದುಬಿಡ್ತಿಯಾ ಅಂತ ಹೇಳಲೇ ಇಲ್ಲ! ಬದಲಾಗಿ ‘ನೀ ನನ್ನ ಮನದರಮನೆಗೆ ಬರ್ತಾ ಇದೀಯಾ’ ಅಂತ ಅಷ್ಟೇ ಹೇಳಿದ್ದ. ಛೆ! ದೇವರು ಯಾಕೆ ಇಷ್ಟೊಂದು ಮೋಸ ಮಾಡಿದ? ಹೆಣ್ಣು ಅವನಿಗೇನು ತಪ್ಪು ಮಾಡಿದ್ದಾಳೆ? ಯಾಕೆ ಅವಳನ್ನು ಹೆತ್ತಮ್ಮನ ಮಡಿಲಿಂದ ಮತ್ತೊಂದು ಮಡಿಲಿಗೆ ಹಾಕುವ ವಿಚಿತ್ರ ನಿಯಮ ಸೃಷ್ಟಿಸಿದ? ಅಂತ ದೇವರನ್ನು ಬೈಯುತ್ತಾ ಇದ್ದೀನಿ, ಅದೇನು ಅವನಿಗೆ ನನ್ನ ಮೇಲೆ ಸಿಟ್ಟೇ? ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಕಲ್ಲಾಗಿಬಿಟ್ಟಿದ್ದಾನೆ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಅನಿಸಿರಬಹುದಲ್ವಾ? ಹೇಳಿ, ನಿಮಗೂ ಹೀಗೇ ಅನಿಸಿದೆಯೇ?
ಇಲ್ಲಿ ಪ್ರಕಟವಾಗಿದೆ:

Thursday, December 3, 2009

'ಹುಡುಗಿ’ಯಾದ ನನ್ ತಮ್ಮಾ..!.

ಆವಾಗ ನಾನಿನ್ನೂ ಅಂಗನವಾಡಿಗೆ ಹೋಗುತ್ತಿದ್ದ ಪುಟ್ಟ ಹುಡುಗಿ. ನನ್ನ ತಮ್ಮನಿಗೆ ಇನ್ನೂ ನಾಲ್ಕು ವರ್ಷ ಮೀರಿರಲಿಲ್ಲ. ಇನ್ನೂ ಎದೆಹಾಲನ್ನು ಬಿಡದ ಪೋರ. ದಿನದದಲ್ಲಿ ಅರ್ಧದಿನವನ್ನು ಅಳುತ್ತಲೇ ಕಳೆಯುತ್ತಿದ್ದ. ಅವನ ಹಠಕ್ಕೆ ಮಣಿದ ಅಮ್ಮ ನನಗೆ ಏನೇ ಕೊಡಿಸಬೇಕಾದರೂ ಅವನಿಗೆ ವೊದಲು ಕೊಡಿಸಿ ಆಮೇಲೆ ನನಗೆ ಕೊಡಿಸುತ್ತಿದ್ದರು. ಅವನು ಗಂಡು ಮಗುವೆಂಬ ಮಮಕಾರ ಬೇರೆ.

ನನಗೆ ತಂದ ಬಟ್ಟೆಗಳನ್ನೆಲ್ಲಾ ಅವನು ಹಾಕುತ್ತಿದ್ದ. ಅದು ಹುಡುಗಿಯರ ಉಡುಪುಗಳೆಂಬ ಪರಿಜ್ಞಾನವೇ ಆತನಿಗಿಲ್ಲ. ಒಟ್ಟಾರೆ ಅಕ್ಕನಿಗೆ ಕೊಡಿಸಿದ್ದೆಲ್ಲಾ ಅವನಿಗೆ ಬೇಕು, ಅವನು ವೊದಲು ಅದನ್ನು ತೊಡಬೇಕು, ಅವನು ಖುಷಿಪಡಬೇಕು, ಆಮೇಲೆ ಏನಿದ್ದರೂ ನನಗೆ.

ಹಾಗೇ ಒಂದು ದಿನ ನನಗೆ ಅಮ್ಮ ಚೆಂದದ ಫ್ರಾಕ್ ತಂದರು. ಅವನು ನೋಡಿದ್ದೇ ತಡ, ನನಗೆ ಅದೇ ಬೇಕೆಂದು ಹಠ ಹಿಡಿದ. ಅದು ಹುಡುಗಿಯರು ಹಾಕುವ ಉಡುಪು ಎಂದು ಎಷ್ಟೇ ಕೇಳಿದರೂ ಹಠ ಬಿಡಲಿಲ್ಲ. ಅದನ್ನೇ ಹಾಕಿಕೊಂಡ. ಅವನಿಗೆ ತಂದ ಟೀಶರ್ಟ್ ಬೇಡವೇ ಬೇಡವೆಂದು ಹಠ ಹಿಡಿದ. ಮರುದಿನ ಅಮ್ಮ ಪೇಟೆಗೆ ಹೋಗಿ ನನಗೆ ಇನ್ನೊಂದು ಫ್ರಾಕ್ ತಂದರು.
ಇಬ್ಬರೂ ಫ್ರಾಕ್ ಧರಿಸಿ ಅಮ್ಮನ ಜೊತೆ ತೋಟಕ್ಕೆ ಹೋಗಿದ್ದೆವು. ಇಬ್ಬರೂ ಒಂದೇ ಬಣ್ಣದ ಫ್ರಾಕ್ ಹಾಕಿದ್ದು ಹೆಮ್ಮೆಯಾದರೆ, ತಮ್ಮನಿಗೆ ನಾನು ಹುಡುಗಿಯರ ಉಡುಪು ತೊಟ್ಟಎಂಬ ಖುಷಿ ಬೇರೆ.

ತೋಟದಲ್ಲಿ ಕೆಲಸ ಮಾಡಬೇಕಾದರೆ ನಮ್ಮೂರಿನ ಬಾಲಣ್ಣ ಬಂದು ನಮ್ಮ ಅಮ್ಮನ ಜೊತೆ, ’ಅಕ್ಕಾ, ನಿಮಗೆ ಇಬ್ಬರೂ ಹೆಣ್ಣುಮಕ್ಕಳು ಅಂತ ಗೊತ್ತೇ ಇರಲಿಲ್ಲ’ ಎನ್ನಬೇಕೆ? ಅಮ್ಮನಿಗೆ ಆಶ್ಚರ್ಯ. ನಾನು ಮತ್ತು ತಮ್ಮ ಬಿಟ್ಟ ಕಣ್ಣುಗಳಿಂದ ಆಶ್ಚರ್ಯಭರಿತ ಅಮ್ಮನ ಮುಖ ನೋಡುತ್ತಾ ನಿಂತೆವು. ನೋಡಲೂ ಥೇಟ್ ಹುಡುಗಿ ತರ ಕಾಣುತ್ತಿದ್ದ ನನ್ನ ತಮ್ಮನನ್ನು ಎತ್ತಿ ಮುದ್ದಿಸಿದ ಬಾಲಣ್ಣನಿಗೆ ನನ ತಮ್ಮ ಹುಡುಗನೆಂದು ತಿಳಿದಿದ್ದು ಮಾತ್ರ ನಮ್ಮೂರಿನ ವಾರ್ಷಿಕ ಜಾತ್ರೆಯಲ್ಲೇ!

ಇಪ್ಪತ್ತು ವರ್ಷದ ಹಿಂದಿನ ಘಟನೆಯನ್ನು ನೆನೆದು ಈಗಲೂ ತಮ್ಮನ ಚುಡಾಯಿಸುವಾಗ ಅದೇಕೋ ಬಾಲ್ಯ ಮತ್ತೆ ಮರುಕಳಿಸಲಿ ಎಂದನಿಸುತ್ತದೆ!

Monday, November 16, 2009

ಭರವಸೆಯ ಭಾವಗಳು...!

ಎಷ್ಟು ಬಗೆದರೂ ತೀರದ
ತಾತ್ಸಾರ, ಸಿಟ್ಟು-ಸೆಡವುಗಳನ್ನು
ನಿರುಮ್ಮಳವಾಗಿ ಸ್ವಚ್ಛಗೊಳಿಸಿದ
ಪ್ರೀತಿಯ ಒದ್ದೆ ಕಣ್ಣುಗಳು,
ಎಷ್ಟೇ ಅಡಗಿಸಿಟ್ಟರೂ ಮತ್ತೆಲ್ಲೋ
ಗಕ್ಕನೆ ಎಲ್ಲವನ್ನೂ ಆವಾಹಿಸಿಕೊಂಡು
ಭಾವುಕತೆಗೊಡ್ಡಿ ಯಾವುದೋ
ಸಂಜೆಗಳಲ್ಲಿ ಆವರಿಸಿಬಿಡುವ ನಿನ್ನ ಮೌನ,
ಎಲ್ಲವನ್ನು ಮೌನದಲ್ಲಿ ಪಿಸುಗುಟ್ಟಿ...
ಮಗುವಿನಂತ ನಿಷ್ಕಲ್ಮಶ ನಗೆ ನಕ್ಕು,
ನನ್ನ ಕೆನೆಹಳದಿ ಹಾಳೆಯಲ್ಲಿ ಬರೆದ ಕವಿತೆ
ನೀ ಕೂಡಿಟ್ಟು ಹಸನುಗೊಳಿಸಿದ
ಭರವಸೆಯ ಭಾವಗಳೇ ...!!

Thursday, October 29, 2009

ಶರಧಿಗೆ ಎರಡು ವರ್ಷ. ನಿಮ್ಮ ಹಾರೈಕೆ ಹೀಗೇ ಇರಲಿ...


ಪ್ರೀತಿಯ ಸ್ನೇಹಿತರೇ,

ನಿಮಗಿದೋ ಪ್ರೀತಿಯ ನಮನಗಳು.

ನಿಮಗೊಂದು ಶುಭಸುದ್ದಿ ತಿಳಿಸಬೇಕಿದೆ. ನನಗೆ ಖುಷಿ, ಮನದಳೊಗೆ ಸಂಭ್ರಮ. ಏಕೆ ಗೊತ್ತೆ ನನ್ನ ಶರಧಿಗೆ ನವೆಂಬರ್ 3ನೇ ತಾರೀಕಿಗೆ ಭರ್ತಿ ಎರಡು ವರ್ಷ. ಶರಧಿ ಎರಡು ವರ್ಷ ನಿರಂತರವಾಗಿ ಹರಿದಿದ್ದಾಳೆ. ಇದೀಗ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ಅವಳು ದೊಡ್ಡವಳಾಗಿದ್ದಾಳೆ. ಜೊತೆಗೆ ನನ್ನನ್ನು ಸಾಕಷ್ಟು ಬೆಳೆಸಿದ್ದಾಳೆ. ಅಪಾರ ಸ್ನೇಹಿತರನ್ನು ನೀಡಿದ್ದಾಳೆ. ಬೆನ್ನು ತಟ್ಟೋರು, ತಪ್ಪಾಗ ತಿದ್ದಿ ತಿಡೋರು ಎಲ್ಲಾರೂ ಸಿಕ್ಕಿದ್ದಾರೆ. ನಂಗದು ಖುಷಿ. ಎರಡು ವರ್ಷದಲ್ಲಿ ಶರಧಿ ಕಂಡಿದ್ದು 146 ಬರಹಗಳನ್ನು. ಆಫೀಸ್ ಕೆಲಸ, ನಿತ್ಯ ಕಾಡುವ ಅನಗತ್ಯ ಕಿರಿಕಿರಿ ನಡುವೆ 200 ಬರಹಗಳನ್ನು ದಾಟುವ ಕನಸು ನನಸಾಗಲಿಲ್ಲ. ಆದರೂ ಬರಹಪ್ರೀತಿ ಕುಂದಿಲ್ಲ. ನನ್ನೊಳಗಿನ ಕನಸುಗಳು ಆಗಾಗ ಮೂರ್ತ ರೂಪ ಪಡೆಯುತ್ತಲೇ ಇವೆ.
ನನ್ನ ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತರಿಗೂ ಕೃತಜ್ಞತೆಗಳು. ಇನ್ನು ಮುಂದೆಯೂ ನನ್ನ ಶರಧಿ ನಿರಂತರವಾಗಿ ಹರಿಯುತ್ತಾಳೆ ಅನ್ನೋ ಪುಟ್ಟ ನಂಬಿಕೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಇದ್ದೇ ಇರುತ್ತೆ ಅನ್ನೋ ಅಚಲ ನಂಬಿಕೆ ನನ್ನದು. ನಿಮ್ಮ ಪ್ರೋತ್ಸಾಹಕ್ಕೆ ನನ್ನ ಪ್ರೀತಿಯ ಸಲಾಂ.

ಈ ನಡುವೆ ಇನ್ನೊಂದು ಸತ್ಯ ಹೇಳಲೇಬೇಕಿದೆ. ಬಹುಶಃ ಬಹುತೇಕರಿಗೆ ಗೊತ್ತೇ ಇದೆ. ಕಳೆದ ಮಾರ್ಚ್ ನಲ್ಲಿ 'ಧರಿತ್ರಿ' ಅನ್ನೋ ಹೆಸರಲ್ಲಿ ಬ್ಲಾಗ್ ಆರಂಭಿಸಿದ್ದೆ. ಅದೇಕೆ ಅನಾಮಧೇಯ ಹೆಸರು? ಅಂದುಕೊಳ್ಳಬಹುದು. ವೃತ್ತಿಯಲ್ಲಿರುವಾಗ ಕೆಲವೊಂದು ನಿಯಮಗಳಿಗೆ ನಾವು ನಿಷ್ಠರಾಗಿರಬೇಕಾಗುತ್ತೆ. ಹಾಗಾಗಿ, ಅನಿವಾರ್ಯವಾಗಿ ಶರಧಿ ಜೊತೆಗೆ ಧರಿತ್ರಿಯನ್ನೂ ಆರಂಭಿಸಿದ್ದೆ. ಧರಿತ್ರಿನೂ 33 ಬರಹಗಳನ್ನು ಕಂಡಿದ್ದಾಳೆ. ಶರಧಿಯಂತೆ ಅವಳನ್ನೂ ಪ್ರೀತಿಯಿಂದ ಸಲಹುತ್ತಿದ್ದೇನೆ. ನೀವೆಲ್ಲರೂ ಪ್ರೋತ್ಸಾಹಿಸುತ್ತಲೇ ಇದ್ದೀರಿ. ಇದು ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಇವತ್ತು ಈ ವಿಚಾರವನ್ನು ಅಧಿಕೃತವಾಗಿ ಹೇಳಿಬಿಟ್ಟಿದ್ದೀನಿ. ಇನ್ನು ಮುಂದೆನೂ ಧರಿತ್ರಿ ಧರಿತ್ರಿಯಾಗೇ, ಶರಧಿ ಶರಧಿಯಾಗೇ ಮುಂದುವರಿಯುತ್ತಿದ್ದಾರೆ. ಶರಧಿಗೆ ಅಣ್ಣ ರೋಹಿ ಚೆಂದದ ವಿನ್ಯಾಸ ಮಾಡಿಕೊಟ್ಟರೆ, ಧರಿತ್ರಿಗೆ ನನ್ನ ಸೀನಿಯರ್ ಹಾಗೂ ಗೆಳೆಯ ಲಕ್ಷ್ಮಿಕಾಂತ್ ವಿನ್ಯಾಸ ಮಾಡಿದ್ದಾರೆ. ಅವರಿಗೆ ತುಂಬಾ ಥ್ಯಾಂಕ್ಸ್. ಯಾರಿಗೂ ನೋವು ಕೊಡದ ರೀತಿಯಲ್ಲಿ ಭಾವನೆಗಳನ್ನು ಬಿಚ್ಚುತ್ತಾ ಹೋಗುವುದು ನನ್ನ ಇಷ್ಟ. ಎಲ್ಲೋ ನೋಡಿದ್ದು, ಹೃದಯವನ್ನು ತಟ್ಟಿದ್ದು ಎಲ್ಲವೂ ಬರಹಗಳಾಗಿವೆ. ಮುಂದೆಯೂ ಹೊಸ ಕೆಲಸದೊತ್ತಡ, ನಿತ್ಯ ಕಾಡುವ ಸಮಸ್ಯೆಗಳು, ಚಿಂತೆಗಳು ಅಥವಾ ಒಂಟಿಯಾಗಿದ್ದ ನಾನು ಜಂಟಿಯಾದರೂ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳನ್ನು ಅಷ್ಟೇ ಪ್ರೀತಿಯಿಂದ ಸಲಹುತ್ತೇನೆ. ನಿಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದುಕೊಂಡಿದ್ದೀನಿ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಋಣಿ.

ಪ್ರೀತಿಯಿಂದ,
ಚಿತ್ರಾ ಕರ್ಕೇರಾ

Tuesday, October 27, 2009

ಮೌನದಲ್ಲೇ ಮಾತಾಡ್ತೀನಿ, ಕವನ ಬರಿ...!

ಯಾಕೋ ಪತ್ರ ಬರೀಬೇಕು ಅನಿಸುತ್ತೆ ಕಣೋ..ಅದು ನಿನ್ನ ಪತ್ರ ನೋಡಿದ ಮೇಲೆ. ಇದೇ ಮೊದಲ ಪತ್ರ, ಬಹುಶಃ ಇದೇ ಕೊನೆಯ ಪತ್ರ ಆಗಿರಬಹುದು. ತುಂಬಾ ಜನ ಹೇಳ್ತಾರೆ ಪ್ರೀತಿಯ ಪತ್ರ ತುಂಬಾ ಮಾತಾಡುತ್ತೆ ಅಂತ. ಹೌದು ಕೂಡ, ನಿನ್ನ ಮಾತುಗಳಿಂದ ನೀ ಬರೆದ ಪತ್ರಾನೇ ಇಷ್ಟ ಆಯಿತು. ಆದರೆ, ನಿನ್ ಥರ ಚೆನ್ನಾಗಿ ಪತ್ರ ಬರೆಯೋಕೆ, ನಿನ್ ಥರ ಭಾವನೆಗಳನ್ನು ಪದಗಳಲ್ಲಿ ಪೋಣಿಸೋಕೆ, ನಿನ್ ಥರ ಸುಂದರ ಭಾವಗೀತೆಗಳನ್ನು ಬರೆಯೋಕೆ, ನಿನ್ ಥರ ಪ್ರಕೃತಿ ಮಧ್ಯೆ ಕುಳಿತು ಕತೆ-ಕವನ, ಲೇಖನ ಗೀಚೋಕೆ ಬರೊಲ್ಲ ಕಣೋ. ಅದಕ್ಕೆ ನೋಡು ನೀನು ಇಷ್ಟು ದಿನ ಬಚ್ಚಿಟ್ಟ ಪ್ರೀತಿ, ನೀ ಗೀಚಿದ ಕವನ, ನೀ ಮೂಡಿಸಿದ ಸುಂದರ ಕಲೆ..ಎಲ್ಲವನ್ನೂ ಮೌನವಾಗೇ ನೋಡುತ್ತಾ ಕಣ್ಣಲ್ಲೇ ಸವಿದೆ, ವಿನಃ ಅಕ್ಷರಗಳಲ್ಲಿ ಪೋಣಿಸಲು ಸಾಧ್ಯವಾಗಲಿಲ್ಲ. ಮಾತಿನಲ್ಲಿ ಹೇಳಲೂ ಆಗಲಿಲ್ಲ. ಬಹುಶಃ ನನ್ನ ಮೌನವನ್ನೂ ಅರ್ಥಮಾಡಿಕೊಳ್ಳೋ ಅಗಾಧ ಕಲೆಯನ್ನು ದೇವರು ನಿಂಗೆ ನೀಡಿದ್ದನಲ್ಲಾ ಅದಕ್ಕೆ ದೇವರಿಗೇ ಥ್ಯಾಂಕ್ಸ್ ಹೇಳಿದ್ದೀನಿ ಕಣೋ.

ಹೌದು, ನೀನಂದ್ರೆ ನಂಗಿಷ್ಟ, ಆದ್ರೆ ನಾ ಹೇಳಲ್ಲಿಲ್ಲ..ನೀನಿಷ್ಟ, ನಿನ್ನ ನಗು ಇಷ್ಟ, ನಿನ್ನ ಪ್ರೀತಿ ಇಷ್ಟ ಅಂತ! ನೀನೇ ಹೇಳಿಬಿಟ್ಟಿಯಲ್ಲಾ...ಅದು ನಂಗೆ ಖುಷಿ, ನಿನ್ನ ಧೈರ್ಯಕ್ಕೆ ನನ್ನ ಪುಟ್ಟ ಸಲಾಂ.

ಎಷ್ಟು ಕೆಟ್ಟದ್ದಾಗಿ ಪತ್ರ ಬರೆದಿದ್ದಾಳೆ ಅಂತ ಬೈಕೋಬೇಡ. ಮುಖ ಊದಿಸಿಕೋಬೇಡ. ನಿನ್ನ ಸುಂದರ ಮೂಗಿನ ಮೇಲೆ ಸಿಟ್ಟನ್ನು ನೋಡೋದು ನಂಗೆ ಇಷ್ಟವಿಲ್ಲ. ನಿನ್ನ ಸುಂದರ ಕಣ್ಣುಗಳ ದುರುಗುಟ್ಟುವಿಕೆಯನ್ನು, ಸಿಟ್ಟಿನಿಂದ ನೀನು ಬಡಬಡಿಸೋದನ್ನು ನನ್ನ ಕಣ್ಣಿಂದ ನೋಡಕ್ಕಾಗಲ್ಲ ಕಣೋ. ಅದಕ್ಕೆ ಯಾವತ್ತೂ ಸಿಟ್ ಮಾತ್ರ ಮಾಡಿಕೊಳ್ಳಬೇಡ.

ತುಂಬಾ ಹೇಳಬೇಕನಿಸುತ್ತೆ..ಆದರೆ ಬರೆಯೋಕ್ಕಾಗಲ್ಲ. ನಿನ್ನ ಥರ ನೀ ಬಿತ್ತಿದ ಬೀಜಗಳಿಗೆ ನಾ ರೈತ ಆಗ್ತೀನಿ ಅನ್ನೋಕೆ ಬರಲ್ಲ. ಜೀವನವಿಡೀ ನಿನಗೆ ಮೊಗೆದಷ್ಟು ಬತ್ತದ ಪ್ರೀತಿ ನೀಡ್ತೀನಿ. ನಿನ್ನ ಕನಸು, ನಿರೀಕ್ಷೆಗಳಿಗೆ ನೀರೆರೆದು ಪೋಷಿಸ್ತೀನಿ. ನನ್ನ ಹೃದಯ ತುಂಬಾನು ಕನಸುಗಳಿದೆ ಕಣೋ...ಪುಟ್ಟ ಪುಟ್ಟ ಕನಸುಗಳು. ಅದಕ್ಕೆ ಜೀವ ತುಂಬ್ತೀಯಾ ಅಂತ ಗೊತ್ತು ನಂಗೆ. ಜೀವನವನ್ನು ಪ್ರೀತಿ, ಖುಷಿ, ನೆಮ್ಮದಿಗಳಿಂದ ಸಿಂಗರಿಸಿಬಿಡು..ಅದಕ್ಕೆ ನನ್ನದೂ ಸಾಥ್ ಇದೆ.ಅಷ್ಟೇ ಸಾಕಲ್ವಾ? ನಮ್ಮ ಬದುಕಿಗೆ.....? ಇನ್ನೇನು ಹೇಳಕ್ಕೆ ಬರಲ್ಲ...ಮೌನದಲ್ಲೇ ಮಾತಾಡ್ತೀನಿ. ನೀನು ಕವನ ಬರೆ...!
ಅದಿರಲಿ, ಯಾವಾಗ ನನ್ನನ್ನು ನಿನ್ನೂರಿಗೆ ಕರೆದುಕೊಂಡು ಹೋಗ್ತಿಯಾ? ನಿಮ್ಮಮ್ಮನಿಗೆ ನಿಮ್ಮಪ್ಪನಿಗೆ ಪರಿಚಯ ಮಾಡಿಸ್ತೀಯಾ ಹೇಳು.

Monday, October 5, 2009

ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?

ಮುನ್ನಿ....

ಬಹಾರೋ ಫೂಲ್ ಬರ್ಸಾ ಹೋ

ಮೇರಾ ಮೆಹಬೂಬ್ ಆಯಾ ಹೇ...

ರಫೀ ಹಾಡಿದ ಹಾಡನ್ನು ಕೇಳುತ್ತಾ ಪತ್ರ ಬರೀತಾ ಇದ್ದೀನಿ ಮುನ್ನಿ.


ಹೇಗಿದ್ಯಾ? ಇಂದು ನಮ್ಮೂರಲ್ಲಿ ಮಳೆ ಬಂದಿದೆ ಕಣೇ. ನಿಮ್ ಕಡೆ ಹೊಲ, ಗದ್ದೆ, ಕೆರೆ-ತೊರೆಗಳು ತುಂಬಿ ಹರಿಯುತ್ತಿದ್ದರೂ ನಮ್ಮೂರಲ್ಲಿ ಅದೇಕೋ ವರುಣನಿಗೆ ನಮ್ ಮೇಲೆ ಮುನಿಸು. ಆದರೆ ಇಂದು ಮಳೆ ಬಂದಿದೆ. ಮನೆಯಂಗಳ ದೊಡ್ಡ ತೊರೆಯಾಗಿದೆ. ತುಂಬಿ ಹರಿಯೋ ಕೆರೆ-ತೊರೆಗಳನ್ನು ನೋಡುವಾಗ ತುಂಬಾ ಖುಷಿಯಾಗುತ್ತಿದೆ. ನಮ್ಮೂರ ತೋಟಗಳಲ್ಲಿ ಹಸಿರು ಮೈ ತುಂಬಿ ನಿಂತಿದೆ. ಬಾಲ್ಯದ ತುಂಟಾಟಗಳು ನೆನಪಾಗುತ್ತಿವೆ. ಸಣ್ಣವನಿರುವಾಗ ಜೋರು ಮಳೆಗೆ ಆಲಿಕಲ್ಲು ಹೆಕ್ಕಕೆ ಹೋಗಿ ಜಾರಿ ಬಿದ್ದಿದ್ದು ನೆನಪಾಗಿ ನಗು ಬಂತು ಕಣೇ. ಆವಾಗ ನೀನಿನ್ನೂ ಚಡ್ಡಿ ಹಾಕದೆ ಮನೆತುಂಬಾ ಓಡಾಡಿ ಬೊಕ್ಕು ಬಾಯಿ ಅಗಲಿಸಿ ಎಲ್ಲರನ್ನೂ ನಗಿಸುತ್ತಿದ್ದೆ!!

ಮಳೆ ಬಂದಾಗ ಅದೇಕೆ ನಿನಗೆ ಪತ್ರ ಬರೆದೆ ಅಂತ ಅಚ್ಚರಿಯಾಯಿತೇ? ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲುತ್ತಾ ನಿನ್ನದೇ ನೆನಪಿನ ಮಳೆಯಲ್ಲಿ ತೋಯ್ತಾ ಇದ್ದೀನಿ ಕಣೇ ಮುನ್ನಿ. ನಿಂಗೆ ನೆನಪಿದೆಯಾ ನಾನು-ನೀನು ಭೇಟಿಯಾದ ಮೊದಲ ದಿನ ಧಾರಾಕಾರ ಮಳೆ ಸುರಿದು, ನಾನೂ ನಿನ್ನ ಛತ್ರಿಯೊಳಗೆ ಹುದುಗಿಹೋಗಿದ್ದು! ಅಷ್ಟೇ ಅಲ್ಲ, ಮಳೆಯಲ್ಲಿಯೇ ನಿನ್ನದೆಯಲ್ಲಿ ನಾನು ಕರಗಿಹೋಗಿದ್ದು, ನಿನ್ನ ಹೆಗಲ ಮೇಲೆ ಕೈಹಾಕಿದಾಗ ನಾಚಿಕೆಯಿಂದ ನನ್ನ ಕೈಯನ್ನು ಸರಿಸಿದ್ದು..! ಕೊನೆಗೂ ಮಳೆ ಎಡಬಿಡದೆ ಸುರಿದಾಗ ನೆನೆಯುತ್ತಲೇ ಮನೆ ಸೇರಿಕೊಂಡಿದ್ದು. ಮತ್ತೆ ಸುಂದರ ನೆನಪುಗಳೊಂದಿಗೆ ನಿದ್ದೆಯ ಮಂಪರಿಗೆ ಜಾರಿದ್ದು..ಎಲ್ಲವೂ ನೆನಪಾಗುತ್ತಿದೆ ಕಣೇ. ಅಮ್ಮನ ಕೈತುತ್ತ ಮೆಲ್ಲುವಾಗ ನಿನ್ನದೇ ನೆನಪಾಗುತ್ತೆ ಮುನ್ನಿ. ಅಮ್ಮನ ಬಿಟ್ಟರೆ ನಾನು ಕೈತುತ್ತು ಉಂಡಿದ್ದು ನಿನ್ನ ಕೈಯಿಂದ ಕಣೇ.

ಮುನ್ನಿ...

ಜೋರು ಮಳೆಗೆ ನಮ್ಮೂರ ಜೋಗವನ್ನು ನಿಂಗೆ ತೋರಿಸಬೇಕು...ಮುಂಗಾರು ಮಳೆಯಂತೆ ಪ್ರೀತಿಯ ಮಳೆಯಲ್ಲಿ ನೆನೆಯಬೇಕು. ಮನತುಂಬಾ ಪ್ರೀತಿಯ ಕಚಗುಳಿಯಲ್ಲಿ ಖುಷಿಪಡಬೇಕು. ಹಸಿರು ಜರತಾರಿ ಉಟ್ಟ ಸಹ್ಯಾದ್ರಿಯನ್ನು ನಿಂಗೆ ತೋರಿಸಿ, ನಿನ್ನ ಕಣ್ಮನ ಖುಷಿಗೊಳಿಸಬೇಕು. ಪ್ರಕೃತಿಯನ್ನು ಪ್ರೀತಿಸುವ ನನ್ ಮುನ್ನಿಗೆ ನಮ್ಮೂರ ಮಳೆ, ಇಳೆ, ಹಸಿರು...ಎಲ್ಲವನ್ನೂ ತೋರಿಸಬೇಕು. ನನ್ನಮ್ಮನಿಗೆ ನೋಡು ಮುನ್ನೀನ ತಂದಿದ್ದೀನಿ ಅಂತ ಪರಿಚಯ ಮಾಡಿಸಬೇಕು. ಅಮ್ಮನಿಂದ ಭಲೇ ಅಂತ ಬೆನ್ನು ತಟ್ಟಿಸಿಕೊಳ್ಳಬೇಕು. ಹೀಗೇ ಏನೇನೋ ಅಂದುಕೊಳ್ತಾ ಮನೆಯೊಳಗೆ ನಿನ್ನ ಬೆಚ್ಚನೆಯ ನೆನಪುಗಳ ಜೊತೆ ಕುಳಿತಿದ್ದೀನಿ ಕಣೇ ಮುನ್ನಿ.

ಹೌದು ಮುನ್ನಿ, ಊರಿಗೆ ಹಬ್ಬಕ್ಕೆ ಹೋದವನು ಫೋನ್ ಮಾಡಿಲ್ಲ, ಮೆಸೇಜ್ ಮಾಡಿಲ್ಲ ಅಂತ ಮುನಿಸಿಕೋಬೇಡ್ವೇ? ಮಳೆ ನೋಡುತ್ತಾ ಬೆಚ್ಚಗೆ ಹಪ್ಪಳ ತಿಂದು ಕಾಲ ಕಳೆಯುತ್ತಿದ್ದಾನೆ ಅಂತ ಬೈಕೋಬೇಡ್ವೆ. ಇಲ್ಲ ಕಣೇ, ನಿನ್ ನೆನಪು, ನಿನ್ನ ಪ್ರೀತಿ, ಒಂದು ಬಿಂದು ಪ್ರೀತಿಯ ಹನಿ...ಎಲ್ಲವನ್ನೂ ಹೃದಯತುಂಬಾ ಹರಡಿಕೊಂಡು ಖುಷಿಪಡ್ತಾ ಇದ್ದೀನಿ ಕಣೇ. ಕನಸುಗಳಿಗೆ ಜೀವ ಕೊಟ್ಟು ಪೋಷಿಸ್ತಾ ಇದ್ದೀನಿ ಕಣೇ. ರಾತ್ರಿ ಒಬ್ಬನೇ ನಿದ್ದೆಗೆ ಜಾರಿದಾಗ ಕತ್ತಲೂ ಕವಿದ ನನ್ನ ಕೋಣೆಯಲ್ಲಿ ಪುಟ್ಟ ಹಣತೆ ಹಚ್ಚಿ ನಿನ್ನ ನೆನಪುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ನಿನ್ನ ಮಡಿಲ ನೆನಪಲ್ಲಿ ನಿದ್ದೆಹೋಗುತ್ತಿದ್ದೇನೆ ಮುನ್ನಿ.

ಮುನ್ನಿ,

ಇನ್ನೆರಡು ದಿನ. ಮಳೆ ನಿಲ್ಲಲ್ಲಿ. ಊರೆಲ್ಲ ಪ್ರವಾಹ ಬಂದುಬಿಟ್ಟಿದೆ. ತಕ್ಷಣ ನಿನ್ನ ಹತ್ತಿರ ಬಂದುಬಿಡ್ತೀನಿ ಕಣೇ. ಪ್ಲೀಸ್ ಮುನಿಸಿಕೋಬೇಡ್ವೇ ಮಳೇ ಥರ...! ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?


ನಿನ್ನವನೇ

ಮುನ್ನಾ...

Sunday, September 27, 2009

ಬದುಕಿಗೆ ಪರಿಧಿ ಹಾಕೋಳ್ತಾ ಇದ್ದೀವಿ ಅನಿಸ್ತಾ ಇದೆ...

ಹಂಚಿ ಉಂಡರೆ ಹಸಿವಿಲ್ಲ...!! ಹತ್ತನೇ ತರಗತಿಯಲ್ಲಿ ನಾನು ಓದುತ್ತಿದ್ದಾಗ ಬಾಗೇವಾಡಿ ಅನ್ನೋ ಹೆಸರಿನ ಮೇಷ್ಟ್ರು ಇದ್ದರು. ತುಂಬಾ ಒಳ್ಳೆಯ ಮೇಷ್ಟ್ರು.ಮೂರು ವರ್ಷ ನಮ್ಮ ಜೊತೆಗಿದ್ದ ಆ ಮೇಷ್ಟ್ರು ಆಗಾಗ ಹೇಳುತ್ತಿದ್ದ ಮಾತು ಹಂಚಿ ಉಂಡರೆ ಹಸಿವಿಲ್ಲ. ಈಗಲೂ ಆ ಮಾತು ಆಗಾಗ ನೆನಪಾಗುತ್ತಿದೆ. ಮಾಮೂಲಿ ನಮ್ಮನೆಯಲ್ಲಿ ನಾನು-ತಮ್ಮ ಇಬ್ಬರೇ ಇರ್ತೀವಿ. ಆಗ ಒಂದು ಥರ ಬೋರ್. ನನಗೆ ರಜೆ ಇದ್ದ ದಿನ ಅವನಿಗರಲ್ಲ, ಅವನಿಗೆ ರಜೆ ಇದ್ದ ದಿನ ನಂಗೆ ರಜೆ ಇರೊಲ್ಲ. ಅದಕ್ಕೆ ಅವನಿಗೆ ರಜೆ ಇದ್ದ ನಾನು ಆಫೀಸ್ ನಿಂದ ಬೇಗ ಹೊರಡೋದು, ನಂಗೆ ರಜೆ ಇದ್ದ ದಿನ ಅವನು ಆಫೀಸ್ ನಿಂದ ಬೇಗ ಹೊರಟುಬರೋದು. ನಮಗೆ ರಜೆ ಇದ್ದ ದಿನ ಮಾವ, ಅಣ್ಣ ಬೇಗನೆ ಮನೆಮುಂದೆ ಹಾಜರಾಗೋದು. ಏನಾದ್ರೂ ಸ್ಪೆಷಲ್ ಅಡುಗೆ ಮಾಡೋದು, ದೇವಸ್ಥಾನಕ್ಕೆ ಹೋಗೋದು...ಅದೊಂದು ಥರಾ ನಮಗೆ ತುಂಬಾ ಖುಷಿಕೊಡೋದು. ನಂಗೆ ಎಲ್ಲಕ್ಕಿಂತ ಖುಷಿಕೊಡೋದು ಎಲ್ಲರೂ ಜೊತೆಗೆ ಊಟ ಮಾಡೋದು. ನಾವೇನದ್ರೂ ಮಾಡಿದ್ರೆ ಪಕ್ಕದ್ಮನೆ ಅಡುಗೆ ತಜ್ಞೆ ಆಂಟಿ ಅಲ್ಲಿ ಹಾಜರಾಗಿ..ನಾವು ಮಾಡೋ ಡಬ್ಬ ಅಡುಗೇನ ಇನ್ನಷ್ಟು ರುಚಿಯಾಗಿಸ್ತಾರೆ. ಆಮೇಲೆ ಅವರ ಮನೆ ಸಾರು ನಮ್ಮನೆಗೆ, ನಮ್ಮನೆ ಸಾರು ಅವರ ಮನೆಗೆ ಹೋಗುತ್ತೆ. ಒಟ್ಟಿನಲ್ಲಿ ಮನೆತುಂಬಾ ಜನರು ಓಡಾಡ್ತಾ ಇದ್ರೆ ಸಕತ್ ಖುಷಿ ಆಗೋದು.

ಪಕ್ಕದ್ಮನೆ ತಾತನೂ ಚಿತ್ರಾನಿಗೆ ಸಾರು ಕೊಟ್ಟೆಯೇನು? ಅಂತ ರಾತ್ರಿ ಮಲಗೋಕೆ ಮುಂಚೆ ಮೊಮ್ಮಕ್ಕಳನ್ನು ಗದರಿಸಿ ಅವರ ಕೈಯಲ್ಲಿ ಕೊಟ್ಟು ಕಳಿಸ್ತಾರೆ. ಸ್ವಲ್ಪನೇ ಆಗಲೀ ಮತ್ತೊಬ್ಬರಿಗೆ ಕೊಟ್ಟು ತಿನ್ನೋದ್ರಲ್ಲಿ ತುಂಬಾ ಖುಷಿ ಇರುತ್ತೆ ಅಲ್ವಾ? ಊರಲ್ಲಿ ಆದ್ರೆ ಮನೆಗೆ ಯಾರಾದ್ರೂ ನೆಂಟರು ಬರ್ತಾರೆ, ಖುಷಿ-ಖುಷಿಯಾಗಿ ಸಂಭ್ರಮಿಸೋ ಅವಕಾಶಗಳಿರ್ತವೆ. ಆದರೆ, ಬೆಂಗಳೂರಿನಲ್ಲಿದ್ರೆ ನೆಂಟರಿಲ್ಲ, ತುಂಬಾ ಆಪ್ತರಿಲ್ಲ, ಆಪ್ತರಿದ್ರೂ ಅವರಿಗೆ ಅವರದೇ ಆಗ ಕೆಲಸಗಳಿರ್ತವೆ. ನಮ್ಮನೆಯಲ್ಲಿ ಬಂದು ಅವರಿಗೆ ಹರಟೆ ಹೊಡೆಯೋಕೆ ಸಮಯವೆಲ್ಲಿ ಇರುತ್ತೆ?

ಒಂದು ಕಾಲದಲ್ಲಿ ಎಲ್ಲರೂ ಜೊತೆಯಾಗೇ ಬಾಳೋ ಅವಿಭಕ್ತ ಕುಟುಂಬ ಪರಂಪರೆ ಇತ್ತು. ಕುಟುಂಬದ ಹತ್ತು-ಹದಿನೈದು ಮಂದಿ ಜೊತೆಗೆ ಬಾಳೋ ಸುಂದರ ಕುಟುಂಬ. ನನ್ನ ಗೆಳತಿ ಯೊಬ್ಬಳು ಗೌರಿ ಅಂತ ಬಳ್ಳಾರಿಯವಳು, ಅವರ ಮನೆಯಲ್ಲಿ ಈಗಲೂ 32 ಮಂದಿ ಇದ್ದಾರೆ. ಇನ್ನೂ ಆ ಕುಟುಂಬದಲ್ಲಿ ಜಮೀನಿಗೆ ಕಿರಿಕಿರಿ ಇಲ್ಲ. ತಾತ-ಮುತ್ತಾತರ ಕಾಲದಿಂದಲೂ ಆಸ್ತಿ ಪಾಲಾಗಿಲ್ಲ. ದೊಡ್ಡ ಮನೆಯಲ್ಲಿ ಮನೆ ತುಂಬಾ ಓಡಾಡುವ ಮಕ್ಕಳು, ಅಜ್ಜಿ, ತಾತಂದಿರು, ಹೆಂಗಳೆಯರು. ದಿನಾ ಮನೆಯೇ ಹಬ್ಬದಂತಿರುತ್ತೆ. ಇಂಥ ಕುಟುಂಬಗಳು ಹಳ್ಳಿ ಕಡೆ ಇದ್ರೂ ಕ್ರಮೇಣ ಮರೆಯಾಗುತ್ತವೆ. ಆರತಿಗೊಂದು ಕೀರುತಿಗೊಂದು ಮಗು. ಅವರಿಗೆ ಮದುವೆಯಾಗೋ ಸಮಯದಲ್ಲಿ ಆಸ್ತಿಯನ್ನು ಪಾಲು ಮಾಡಿ ಕೊಟ್ಟುಬಿಡುತ್ತಾರೆ. ಅದರ ಜೊತೆ ಅವರ ಮನಸ್ಸು ಕೂಡ ಇಬ್ಭಾಗ ಆಗಿ ಬಿಡುತ್ತೆ.

ನಂಗನಿಸೋದು ಅಂಥ ಸುಂದರ ಕುಟುಂಬ ಇರಬೇಕಿತ್ತು ಅಂತ. ಈ ಆಧುನಿಕತೆ, ವೇಗದ ಬದುಕು, ಒಂಜಾಟದ ನಡುವೆ ನಮ್ಮ ಆ ಸುಂದರ ಬದುಕಿನ ಕಲ್ಪನೆ ಮರೆಯಾಗುತ್ತಿದೆಯಲ್ಲಾ ಎಂದನಿಸುತ್ತೆ. ಅತ್ತೆ, ಮಾವ ಜೊತೆಗಿರುವ ಬದಲು ತಾನು ತನ್ನ ಗಂಡ ಮಾತ್ರ ಆರಾಮವಾಗಿ ಇದ್ದುಬಿಡಬೇಕು ಅನ್ನೋ ಸೊಸೆ, ಅಮ್ಮ-ಅಪ್ಪನಿಗೆ ವಯಸ್ಸಾದ ಹಾಗೇ ವೃದ್ಧಾಶ್ರಮದ ಬೇಲಿಯೊಳಗೆ ಅವರ ಕನಸನ್ನೇ ಕೊಲ್ಲುವ ಮಗ ಅಥವಾ ಮಗಳು,...ಥತ್! ಹೀಗೇ ಆಗಬಾರದಿತ್ತು ಅನಿಸುತ್ತೆ. ಜೊತೆಯಾಗಿ ಕಲೆದು, ಜೊತೆಯಾಗಿ ಖುಷಿಪಟ್ಟು, ಜೊತೆಯಾಗಿ ಬದುಕು ನಡೆಸುವ ಆ ಸುಂದರ ಜೀವನ ಯಾಕೆ ಮರೆಯಾಗುತ್ತಿದೆ? ಅಲ್ವಾ?

ಹಂಚಿ ಉಂಡರೆ ಹಸಿವಿಲ್ಲ ಅಂದ ಹುಡುಗಿ ಏನೋನೋ ಬರೀತಾ ಹೋದ್ಳು ಅನಿಸಿಬಿಡ್ತಾ? ಹೌದು, ಒಮ್ಮೊಮ್ಮೆ ಹೀಗೇ ಈ ಯೋಚನೆಗಳು...ಆಫಿಸ್ನಲ್ಲಿ ಕೂತಿರ್ತೀನಿ..ಹಂಗೆ ನೆಟ್ಟಗೆ ಮನೆಯ ಅಡುಗೆ ಮನೆಗೆ ಹೋಗಿ ಬರ್ತೀನಿ. .ಲಂಗು ಲಗಾಮಿಲ್ಲದ ಕುದುರೆಯಂತೆ ಯೋಚನೆಗಳು ಅಲ್ವಾ?

ಯಾಕೋ ಬದುಕಿಗೆ ಒಂದು ಪರಿಧಿ ಹಾಕ್ಕೊಂಡು ಮನುಷ್ಯ ಜೀವಿಸ್ತಾ ಇದ್ದಾನೆ ಅನಿಸ್ತಾ ಇದೆ..ಬದುಕು ಹರಿದು ಹಂಚಿ ಹೋಗುತ್ತಿದೆಯೇ ಎಂದನಿಸ್ತಾ ಇದೆ...

Tuesday, September 22, 2009

ನೀನು ನನ್ನವಳು ಅನ್ನೋದಕ್ಕಿಂತ ಸಂತೋಷ ಇನ್ನೇನಿದೆ?

೧೭೮೮ರಲ್ಲಿ ಜನಿಸಿದ ಲಾರ್ಡ್ ಬೈರನ್ ತನ್ನ ತಲೆಮಾರಿನ ಅತಿ ಜನಪ್ರಿಯ ಹಾಗೂ ಅಷ್ಟೇ ವಿವಾದಾಸ್ಪದ ಲೇಖಕ. ಆತನ ಬದುಕು ಗ್ರಹಿಕೆಗೆ ದಕ್ಕುವುದು ಒಂದು ಬಗೆಯ ವಿರೋಧಾಭಾಸದ ನೆಲೆಯಲ್ಲಿ. ಅಗಾಧ ಹಾಸ್ಯಪ್ರಜ್ಞೆಯಿದ್ದೂ ದುಃಖತಪ್ತ. ಕುಲೀನ ವರ್ಗಕ್ಕೆ ಸೇರಿದವರಾಗಿದ್ದೂ ಸಾಮಾನ್ಯ ಜನರ ಪ್ರಾಮಾಣಿಕ ಬೆಂಬಲಿಗನಾಗಿದ್ದವ. ಸ್ಫುರದ್ರೂಪಿ, ಜನಪ್ರಿಯ ಆದರೆ ವೈಯಕ್ತಿಕ ಬದುಕನ್ನೇ ಅಷ್ಟೇ ಹದಗೆಡಿಸಿಕೊಂಡವ. ಅಕಾಲಿಕವಾಗಿ ಕೊನೆಗೊಂಡ ವೈವಾಹಿಕ ಬದುಕು ತಂದಿಟ್ಟ ವೇದನೆ ಹಾಗೂ ಅವಮಾನದಿಂದ ತಪ್ಪಿಸಿಕೊಳ್ಳಲು ದೇಶಭ್ರಷ್ಟರಾಗಿ ಅಲೆದ ಬೈರನ್ ಜ್ವರಪೀಡಿತನಾಗಿ ೧೮೨೪ರಲ್ಲಿ ಮೃತಪಟ್ಟ. ಆತನ ವಿಪ್ಲವ ಬದುಕಿಗೆ ತಕ್ಕಮಟ್ಟಿಗೆ ತಂಪು ನೀಡಿದ್ದು ಜನ್ಮದತ್ತವಾಗಿ ಬಂದಿದ್ದ ಕಾವ್ಯಪ್ರತಿಭೆ. ಜೀವಿತಾವಧಿಯಲ್ಲಿಯೇ ವೈಯಕ್ತಿಕ ಬದುಕಿನ ದುರಂತ ಆತನ ಕಾವ್ಯ ಪ್ರತಿಭೆಯನ್ನು ಮಸುಕಾಗಿಸಿತ್ತು. ಇದು ಬೈರನ್ ತನ್ನ ಪ್ರೇಯಸಿಗೆ ಬರೆದ ಪತ್ರ.

ನನ್ನ ಪ್ರೀತಿಯ ಕೆರೊಲಿನ್ ,
ನೀನು ನನ್ನನ್ನು ಅಗಲುವ ಸಮಯದವರೆಗೂ ನಾನು ಕಣ್ಣೀರು ಸುರಿಸಿರಲಿಲ್ಲ. ಕಣ್ಣೀರು ಹಾಕುವುದು ನನಗೂ ಇಷ್ಟವಿಲ್ಲ ಎಂಬುದು ನಿನಗೂ ಗೊತ್ತು. ನಿನ್ನನ್ನು ನನ್ನಿಂದ ಅಗಲಿಸಿದ ಕಲಹವನ್ನು, ಮನಸ್ತಾಪವನ್ನು ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ನಾನು ಇಲ್ಲಿಯವರೆಗೆ ಆಡಿದ ಮಾತುಗಳು, ಮಾಡಿದ ಕಾರ್ಯಗಳು ನನಗೆ ನಿನ್ನ ಕುರಿತು ಇರುವ ಭಾವನೆಯನ್ನು ಸಮಗ್ರವಾಗಿ ಹಿಡಿದಿಡಲು ಅಶಕ್ಯ. ನಿನ್ನೆಡೆಗಿನ ನನ್ನ ಪ್ರೀತಿಯನ್ನು ಸಾಬೀತುಪಡಿಸಲು ನನಲ್ಲಿ ಇನ್ನಾವುದೇ ಪುರಾವೆಗಳೂ ಇಲ್ಲ.

ನಾನು ಸದಾ ಬಯಸಿದ್ದು ನಿನ್ನ ಸಂತೋಷವನ್ನೇ ಎಂಬುದಕ್ಕೆ ಆ ಪರಮಾತ್ಮನೇ ಸಾಕ್ಷಿ. ನಾನು ನಿನ್ನನ್ನು ತೊರೆಯುವಾಗ ಅಥವಾ ನಿನ್ನ ತಾಯಿ ಹಾಗೂ ಪತಿಯೆಡೆಗಿನ ಕರ್ತವ್ಯನಿಷ್ಠೆಯಿಂದ ನೀನೇ ನನ್ನಿಂದ ದೂರವಾಗುವಾಗ ನಾನು ನೀಡಿದ ಭಾಷೆ, ವಾಗ್ದಾನಗಳಲ್ಲಿನ ಸತ್ಯವನ್ನು ನೀನು ಗುರುತಿಸಬೇಕು. ನಿನಗೆ ಪವಿತ್ರ ಎನಿಸುವ ಯಾವುದೇ ವಿಚಾರಕ್ಕಿಂತ ಹೆಚ್ಚಿನ ಸಂಗತಿ ಯಾವ ರೀತಿಯಿಂದಲೂ ನನ್ನ ಹೃದಯದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ.

ಆತ್ಮೀಯ ಹಾಗೂ ಅತ್ಯಂತ ಪ್ರೀತಿಯ ಗೆಳತಿ, ನನ್ನೊಳಗಿನ ಎಲ್ಲಾ ಭಾವನೆಗೂ ಮಾತಿನ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮಾತಿಗೆ ಇದು ಸಮಯವೂ ಅಲ್ಲ. ನನ್ನ ವೇದನೆ ನಿನ್ನ ಕಲ್ಪನೆಯನ್ನೂ ಮೀರಿದ್ದು. ಆದರೆ ಅದನ್ನು ಅನುಭವಿಸುತ್ತಲೇ ಒಂದು ರೀತಿಯ ಧನ್ಯತೆ ಹಾಗೂ ವಿಷಾದನೀಯ ಸಂತಸವನ್ನು ನಾನು ಕಾಣುತ್ತಿದ್ದೇನೆ. ನಾನೀಗ ಭಾರವಾದ ಹೃದಯದೊಂದಿಗೆ ನಿನ್ನನ್ನು ಅಗಲುತ್ತಿದ್ದೇನೆ. ಈ ಮುಸ್ಸಂಜೆಯಲ್ಲಿನ ನನ್ನ ಸಾರ್ವಜನಿಕ ಉಪಸ್ಥಿತಿ ಇಂದಿನ ಘಟನೆಗಳಿಂದ ಉದ್ಭವವಾಗಬಹುದಾದ ಗಾಳಿಮಾತುಗಳಿಗೆ ಮಂಗಳ ಹಾಡಬಹುದು.

ನಿನ್ನ ಪಾಲಿಗೆ ನಾನು ಇಂದು ನಿರ್ಲಿಪ್ತನಂತೆ, ತಣ್ಣನೆಯ ವ್ಯಕ್ತಿಯಂತೆ ಕಂಡುಬಂದರೆ ಉಳಿದವರಿಗೂ ನಾನು ಹಾಗೆಯೇ ಕಾಣಬಹುದು. ನಿನ್ನ ತಾಯಿಗೆ ಕೂಡ. ಆ ಮಹಾತಾಯಿಗೆ ಅಲ್ಲವೇ ನಾವು ಇಷ್ಟೊಂದು ತ್ಯಾಗಕ್ಕೆ, ಬಲಿದಾನಕ್ಕೆ ಸಿದ್ಧವಾಗಿರುವುದು? ನನ್ನ ಪಾಲಿಗಂತೂ ಈ ತ್ಯಾಗಕ್ಕೆ ಸಾಟಿಯೇ ಇಲ್ಲ. ನಮ್ಮ ತ್ಯಾಗದ ಆಳ-ಅಗಲ ಅವರ ಗ್ರಹಿಕೆಗೆ ಅಷ್ಟು ಸುಲಭಕ್ಕೆ ನಿಲುಕುವುದಿಲ್ಲ ಬಿಡು.

ನಿನ್ನನ್ನು ಪ್ರೀತಿಸುವುದಿಲ್ಲ ಎಂದು ಭಾಷೆ ಕೊಡುತ್ತೇನೆ ಎಂಬುದು ತುಂಬಾ ಹಳೆಯ ವಾಗ್ದಾನ ಕೆರೊಲಿನ್. ಆದರೆ, ಒಂದು ಉತ್ತಮ ಉದ್ದೇಶಕ್ಕೆ ಕೆಲವೊಂದು ರಿಯಾಯಿತಿಗಳು ಬೇಕು. ಹಾಗೆಯೇ, ನಿನ್ನ ಸಮ್ಮುಖದಲ್ಲಿ ನಡೆಯುವ ಪ್ರತಿಯೊಂದಕ್ಕೂ- ಅದು ನನ್ನ ಹೃದಯದ ತಳಮಳವಿರಬಹುದು, ನಿನ್ನೊಳಗಿನ ನೋವಿರಬಹುದು- ಸ್ಪಂದಿಸುವ ಗುಣವನ್ನು ಕಾಯ್ದಿಟ್ಟುಕೊಳ್ಳುವುದು ಅವಶ್ಯಕ. ನಿನ್ನ ಮೇಲಿನ ಆ ಪರಮಾತ್ಮನ ಕೃಪೆ ಎಂದಿಗೂ ಬತ್ತದಿರಲಿ.

ಈ ವ್ಯಂಗ್ಯದ ಮಾತುಗಳು ಕೇವಲ ನನ್ನ ಅತ್ಯಂತ ಆತ್ಮೀಯ ಕೆರೊಲಿನ್‌ಗೆ ಮಾತ್ರ. ಅವುಗಳ ಗುರಿ ನಿನ್ನ ತಾಯಿಯಲ್ಲ ಮತ್ತು ಈ ಜಗತ್ತಿನಲ್ಲಿ ನಿನಗಿರುವ ಇನ್ನಿತರ ಸಂಬಂಧಗಳಿಗಲ್ಲ. ಒಂದು ಕಾಲದಲ್ಲಿ ನೀನು ನನ್ನವಳಾಗಿದ್ದೆ ಎಂಬ ಸವಿನೆನಪಿಗಿಂತ ಹೆಚ್ಚಿನ ಸಂತೋಷ, ಸಮಾಧಾನವನ್ನು ನನ್ನ ಈ ಜೀವಕ್ಕೆ ಜಗತ್ತಿನ ಬೇರೆ ಯಾವ ಸಂಗತಿ ತಾನೆ ತಂದೀತು? ನಿನಗೋಸ್ಕರ ನನ್ನೆಲ್ಲಾ ಸಂತಸಗಳನ್ನೂ ತ್ಯಾಗ ಮಾಡಲು ಮೊದಲೆಂದಿಗಿಂತ ಈಗಲೇ ಹೆಚ್ಚು ನಾನು ಸಿದ್ಧನಿದ್ದೇನೆ. ನಿನಗಿಂತ ಹೆಚ್ಚು ಮುಖ್ಯವಾದ ಸಂಗತಿ ನನಗೆ ಬೇರೊಂದಿಲ್ಲ. ಇದೆಲ್ಲದರಿಂದ ದೂರವಿರಬೇಕೆಂಬ ನನ್ನ ಉದ್ದೇಶವೇ ಈಗ ಅಪಾರ್ಥಕ್ಕೀಡಾಗುತ್ತಿದೆಯೇ? ಇವುಗಳನ್ನೆಲ್ಲಾ ಮುಂಚಿತವಾಗಿಯೇ ತಿಳಿದ ವ್ಯಕ್ತಿಯೊಬ್ಬರಿದ್ದರೆ ನನಗೆ ಅದೊಂದು ಸಂಗತಿಯೇ ಅಲ್ಲ. ನಿನಗೆ, ಕೇವಲ ನಿನಗೆ ಮಾತ್ರ ಅವು ಋಣಿಯಾಗಿವೆ. ನಾನು ಈ ಹಿಂದೆ ಮಾತ್ರವಲ್ಲ ಈಗಲೂ ನಿನ್ನವನು, ಸಂಪೂರ್ಣವಾಗಿ ನಿನ್ನವನು. ನಿನ್ನಿಷ್ಟದಂತೆ ಎಲ್ಲಿಯಾದರೂ, ಯಾವಾಗಲಾದರೂ, ಹಾಗೂ ಹೇಗಾದರೂ ನಿನ್ನ ಮಾತುಗಳನ್ನು ಪರಿಪಾಲಿಸಲು, ಗೌರವಿಸಲು, ಪ್ರೇಮಿಸಲು ಹಾಗೂ ನಿನ್ನೊಂದಿಗೆ ರೆಕ್ಕೆ ಬಿಚ್ಚಿಕೊಂಡು ಹಾರಲು ನಾನು ಸಿದ್ಧನಿದ್ದೇನೆ.
ನಿನ್ನದೇ ಕನವರಿಕೆಯಲ್ಲಿ
ಬೈರನ್

(ಇತ್ತೀಚೆಗೆ ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಬಂದ ಈ ಸುಂದರ ಪತ್ರ ತುಂಬಾ ಇಷ್ಟವಾಗಿತ್ತು. ನೀವೂ ಓದುತ್ತೀರೆಂಬ ಭಾವನೆಯಿಂದ ಇಲ್ಲಿ ಹಾಕೊಂಡೆ. ಲಿಂಕ್ ಇಲ್ಲಿದೆ: http://www.thesundayindian.com/kannada/20090830/history_mail.asp

Thursday, September 17, 2009

ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?'

ಕಳೆದ ರಾತ್ರಿ ಇಡೀ ನಿದ್ದೆಗೆಟ್ಟು ಕೆಲಸ ಮಾಡಿದ್ದರಿಂದ ಕಣ್ಣಲ್ಲಿ ನಿದ್ದೆಯ ಮಂಪರಿನ್ನೂ ಇಳಿದಿಲ್ಲ. ತಮ್ಮ ತಂದುಕೊಟ್ಟ ಟೀ ಪಕ್ಕದಲ್ಲೇ ಆರುತ್ತಿತ್ತು. ಆದರೂ, ತಲೆಯೊಳಗೆ ಅದೇನೋ ಯೋಚನೆ. ನಡೆದ ದಾರೀಲಿ, ಕಣ್ಣಾರೆ ಕಂಡ, ಕಿವಿಯಾರೆ ಕೇಳಿದ, ನಾ ಪಡೆದ ಅನುಭವಗಳು ಮತ್ತೆ ಮತ್ತೆ ನನ್ನ ಕಾಡಿದವು. ನನ್ನೊಳಗೇ ಅಸಹಾಯಕತೆಯನ್ನು ಸಾರಿ ಸಾರಿ ಹೇಳಿದವು. ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಎದ್ದುಬಿಟ್ಟು ಟೀ ಕುಡಿದು, ಸ್ನಾನಕ್ಕೆ ಹೋದೆ. ಅಲ್ಲಿಯೂ ಕಾಡತೊಡಗಿತ್ತು. ದೇವರಿಗೆ ದೀಪ ಹಚ್ಚಿದೆ, ಅಲ್ಲಿಯೂ ಕಾಡಿತ್ತು..ನನ್ನ ಅಸಹಾಯಕತೆ, ಮಾತ್ರವಲ್ಲ ನನ್ನಂತ ಬಹಳಷ್ಟು ಮಂದಿಯ ಅಸಹಾಯಕತೆ. 'ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?' ಎಂದು ಕೇಳಿದರೂ ನನ್ನೆದುರು ಹಚ್ಚಿಟ್ಟ ಹಣತೆಯ ಎದುರು ಕುಳಿತ ದೇವರು ಉತ್ತರವನ್ನು ಹೇಳಲಿಲ್ಲ. ಮೌನವಾಗಿಬಿಟ್ಟ...ಬಹುಶಃ ಮನುಷ್ಯ , ಚರಾಚರಾ ವಸ್ತುಗಳನ್ನೂ ಸೃಷ್ಟಿಸಿದ ಆ ಸೃಷ್ಟಿಕರ್ತನಿಗೂ ಈ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ ಅನಿಸುತ್ತೆ.

ಪುಟ್ಟ ಮನೆಯೊಳಗೆ ಪೆನ್ನು ಹಿಡಿದು ಒಬ್ಬಳೇ ಕುಳಿತು, ಇದೀಗ ನನ್ನೊಳಗೆ ಕಾಡಿದ ಅಸಹಾಯಕತೆಯನ್ನು ನಿಮ್ಮೆದು ಬಿಚ್ಚಿಡುತ್ತಿದ್ದೇನೆ. ಹೌದು, ನಾನು ಹೇಳಹೊರಟಿರುವುದು ದುಃಖದ ಬಗ್ಗೆ. ನಾವೂ ಕಣ್ಣೀರಾಗ್ಥೀವಿ, ಮನತುಂಬಾ ನೋವು ಪಡ್ತೀವಿ, ಛೇ! ಹೀಗಾಗಬಾರದಿತ್ತು ಅಂದುಕೊಳ್ತೀವಿ, ಅದರ ಬಗ್ಗೆನೇ ದಿನಗಟ್ಟಲೆ ಯೋಚನೆ ಮಾಡ್ತೀವಿ, ನಮ್ಮೋಳಗೆಯೇ ನೋವಾಗಿ ಕರಗಿಬಿಡ್ತೀವಿ. ಆದರೆ ಅವರ ದುಃಖವನ್ನು ನಮಗೆ ಕಡಿಮೆಗೊಳಿಸಲಾಗಲಿಲ್ಲ. ಮುಗಿಲುಮುಟ್ಟಿದ ಆ ಅಳುವನ್ನು ನಮ್ಮಿಂದ ನಿಯಂತ್ರಿಸಲೂ ನಮ್ಮಿಂದ ಆಗುವುದಿಲ್ಲ. ಅವರು ಅಳುತ್ತಲೇ ಇರುತ್ತಾರೆ...ನಾವೂ ಅವರ ಜೊತೆ ಕಣ್ಣೀರಾಗ್ತಲೇ ಇರ್ತೀವಿ ...!!!
ನಮ್ಮಜ್ಜ ಕರಿಮೆಣಸು ಕೊಯ್ಯಲು ಮರಕ್ಕೆ ಹತ್ತಿ ಕಾಲು ಜಾರಿ ಧೊಪ್ಪನೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಅದನ್ನು ನೋಡಿದ ನಮ್ಮಜ್ಜಿ, ಅಮ್ಮ, ಚಿಕ್ಕಮ್ಮ, ದೊಡ್ಡಮ್ಮನವರೆಲ್ಲಾ ದುಃಖ ಸಹಿಸಲಾಗದೆ ಅಳುತ್ತಾ ಎದೆಬಡಿದುಕೊಂಡು ಅಂಗಳವಿಡೀ ಹೊರಳಾಡುತ್ತಿದ್ದರು. ನನ್ನ ತಮ್ಮ ಪುಟ್ಟ ಮಗು, ನಾನಿನ್ನೂ ಒಂದನೇ ಕ್ಲಾಸು. ನನ್ನ ತೊಡೆಯ ಮೇಲೆ ಕುಳಿತ ನನ್ನ ತಮ್ಮ 'ಅಕ್ಕಾ ಅಮ್ಮ ಅಳುತ್ತಾಳೆ..ಅಳಬೇಡ ಅನ್ನುಎನ್ನುತ್ತಿದ್ದ. ನಾನೂ ಕಣ್ಣೀರಾದೆ. ಅವನೂ ಕಣ್ನೀರಾದ. ಕಣ್ಣೀರ ಹರಿಸೋ ಅಷ್ಟೂ ಮಂದಿ ಕಣ್ಣೀರಾದರು. ಅಮ್ಮ ಅಳಬೇಡ ಅಂದ್ರೂ ಅಳೋದನ್ನು ನಿಲ್ಲಿಸಲಿಲ್ಲ.
ಅಂದು ನನ್ನ ಆತ್ಮೀಯರೊಬ್ಬರಿಗೆ ಪೋನಾಯಿಸಿದೆ. ಅವರೂ ನಂಗೆ ಫೋನ್ ಮಾಡಲಿಲ್ಲ, ನಾನೂ ಮಾಡಿರಲಿಲ್ಲ. ಹಾಗಾಗಿ ತುಂಬಾ ದಿನಗಳ ಬಳಿಕ ನಾನವರನ್ನು ಮಾತಾಡಿಸಿದ್ದೆ. ನನ್ನದೊಂದು ಕೆಟ್ಟ ಅಭ್ಯಾಸ ಎಂದರೆ ತೀರಾ ತಮಾಷೆಯಾಗಿ ಮಾತಿಗಿಳಿಯೋದು. ಹಾಗೇ ಮಾತನಾಡಿಸಿದರೂ ಆತ ಮೌನವಾಗೇ ಇದ್ದು, 'ನನ್ನಪ್ಪ ನಮ್ಮನ್ನೆಲ್ಲಾ ಬಿಟ್ಟುಹೋದರು' ಎಂದಾಗ ನನ್ನದೆ ಒಡೆದುಹೋಗಿತ್ತು. ನಿತ್ಯ ನಗು ನಗುತ್ತಾ ನನ್ನ ಪೋಲಿ ಜೋಕುಗಳ ಜೊತೆಗೆ ನಗುವಾಗಿದ್ದ ಅವರು ಅಂದು ಅಳುವಾಗಿದ್ದರು. ಮನದೊಳಗೆ ಅಳುತ್ತಿದ್ದರು. ನಂಗೆನು ಹೇಳಬೇಕೋ ತೋಚಲಿಲ್ಲ. 'ಎಲ್ಲವೂ ದೇವರಿಚ್ಚೆ' ಎಂದು ಹೇಳಿ ಪೋನಿಟ್ಟೆ. ನಂಗೆ ಅವರ ದುಃಖವನ್ನು ಶಮನ ಮಾಡೋಕೆ ಆಗಲಿಲ್ಲ. ನನ್ನ ಕಂಗಳಿಂದ ಉದುರಿದ ಪುಟ್ಟ ಬಿಂದು ಅವರನ್ನು ಸಮಾಧಾನಿಸಲಿಲ್ಲ.
ನಾನು ಹೈಸ್ಕೂಲು ಓದುತ್ತಿದ್ದಾಗ ನನಗೊಬ್ಬ ಪ್ರೀತಿಯ ತಮ್ಮ ಇದ್ದ. ಇತ್ತೀಚೆಗೆ ಅವನ ಅಮ್ಮ ತೀರಿಕೊಂಡುಬಿಟ್ರು. ಅಮ್ಮನ ಕಳೆದುಕೊಂಡ ಆ ದುಃಖದಲ್ಲಿ 'ಅಕ್ಕಾ ಅಮ್ಮನಿಗೆ ಮೋಕ್ಷ ಸಿಗಲೆಂದು ನಿತ್ಯ ನೀನು ಬೇಡಿಕೋ' ಎಂದು ಕಣ್ನೀರು ಹಾಕಿದಾಗ ನನಗೆ ದುಃಖ ಸಹಿಸಲಾಗದೆ ಅತ್ತುಬಿಟ್ಟಿದ್ದೆ. ಅವನ ದುಃಖವನ್ನು ನಿಯಂತ್ರಿಸೋಕೆ ನನ್ನಿಂದಾಗಲಿಲ್ಲ. ಛೇ! ಯಾಕೆ ನಾನೂ ಓರ್ವ ಮನುಷ್ಯಳಾಗಿ ಇನ್ನೊಬ್ರ ದುಃಖವನ್ನು ಕಡಿಮೆಗೊಳಿಸಕೆ ಆಗಲಿಲ್ಲವಲ್ಲಾ ಎಂಬ ಅಸಹಾಯಕತೆಯ ಮಡುವಿನಲ್ಲಿ ನಾನೂ ಕಣ್ಣೀರಾದೆ.
ಹೌದು, ತುಂಬಾ ಸಲ ಹೀಗೇ ಆಗುತ್ತೆ. ನಮ್ಮೆದುರಿಗೆ ಒಬ್ಬರು ಅಳುತ್ತಿದ್ದರೆ ಅವರ ದುಃಖಕ್ಕೆ ನಮ್ಮಲ್ಲಿ ಪರಿಹಾರ ಇರೊಲ್ಲ. ಬೇಕಾದ್ರೆ ನಾವೂ ಅವರ ಜೊತೆ ಅಳ್ತೀವಿ ಹೊರತು ಅವರ ಕಣ್ಣೀರನ್ನು ನಿಯಂತ್ರಿಸೋಕೆ ಆಗೋಲ್ಲ. ಅದಕ್ಕೆ ಹೇಳೋದು ಅನಿಸುತ್ತೆ: 'ಅಳೋರನ್ನು ಹಾಗೇ ಬಿಟ್ಟುಬಿಡಿ, ಅತ್ತು ದುಃಖ ಶಮನ ಮಾಡಿಕೊಳ್ಳಲಿ' ಅಂತ.
ಹೌದು, ಹುಟ್ಟಿದ ಮನುಷ್ಯ ಬದುಕೋಕೆ, ಹೇಗೆ ಹಾಗೇ ಬದುಕೋಕೆ, ಪ್ರೀತಿಸೋಕೆ, ದ್ವೇಷಿಸೋಕೆ, ನಗಿಸೋಕೆ, ಮೋಸ ಮಾಡಕೆ, ವಂಚಿಸೋಕೆ. ಕೊಲೆ ಮಾಡೋದಕೆ ಎಲ್ಲವನ್ನೂ ಕಲಿತಿದ್ದಾನೆ. ಆದರೆ ಇನ್ನೊಬ್ರು ಅಳುತ್ತಿರೋಬೇಕಾದ್ರೆ ಅವನ ದುಃಖವನ್ನು ನಿಯಂತ್ರಿಸೋ ಬದಲು ಅದೇಕೇ ತಾನೂ ಕಣ್ಣೀರಾಗ್ತಾನೆ...???


Monday, September 7, 2009

ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...

ಹೌದು...ಮೊನ್ನೆ ನಾನೂ ನನ್ನೂರಿಗೆ ಹೊರಟಿದ್ದೆ. ಶಿರಾಡಿ ಘಾಟ್ ನಲ್ಲಿ ವರ್ಷವಿಡೀ 'ಕಾಮಗಾರಿ ಪ್ರಗತಿಯಲ್ಲಿರಿವುದರಿಂದ' ಚಾರ್ಮಾಡಿ ಘಾಟ್ ನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಾ ನನ್ನನ್ನು ಹೊತ್ತ ಬಸ್ಸು ಸಾಗಿತ್ತು. ಧಾರಕಾರವಾಗಿ ಸುರಿವ ಮಳೆ, ಗಾಳಿ, ಚಳಿ, ಸುತ್ತೆಲ್ಲಾ ಮುಸುಕಿಕೊಂಡಿದ್ದ ಮಂಜು.. ನಡುವೆ ಬಸ್ಸು ನುಗ್ಗುತ್ತಾ ಸಾಗುತ್ತಿದ್ದಂತೆ ಹಸಿರ ಚೆಲುವು ಕಣ್ಣು ತುಂಬುತ್ತಿತ್ತು. ಆದರೆ, ನನ್ನ ಪ್ರೀತಿಯ ಉಜಿರೆಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಂತೆ ಚಳಿಗೆ ಮೈಯೆಲ್ಲಾ ಮರಗಟ್ಟಿ ಮೂಗು, ಕಿವಿ ಎಲ್ಲಾ ಬಂದ್ ಆಗಿತ್ತು.

ಹೌದು, ನನಗೆ ಬದುಕಿನ ಪಾಠ ಕಲಿಸಿದ ಪ್ರೀತಿಯ ಉಜಿರೆಯಲ್ಲಿ ಇಳಿದು ಎದುರುಗಡೆ ಕಾಣುತ್ತಿದ್ದ ಆ ನನ್ನ ವಿದ್ಯಾದೇಗುಲಕ್ಕೆ ಪ್ರೀತಿಯಿಂದ ವಂದಿಸಿದ್ದೆ. ಐದು ವರ್ಷಗಳ ಕಾಲ ಓಡಾಡಿದ್ದ ಉಜಿರೆ ಬದಲಾವಣೆಯತ್ತ ಮುಖಮಾಡಿದೆ. ನೂರಾರು ಜನರಿಗೆ ನೆರಳು ನೀಡುತ್ತಿದ್ದ ಸಕರ್ಲ್ ನಲ್ಲಿದ್ದ ದೊಡ್ಡ ಮರ ಕಾಣೆಯಾಗಿ ಸರ್ಕಲ್ ಸುತ್ತ ಜನರು ಬಿರುಬಿಸಿಲಿಗೂ, ಜಡಿಮಳೆಗೂ ಕೊಡೆ ಹಿಡಿದು ಬಸ್ಸಿಗೆ ಕಾಯೋ ಸ್ಥಿತಿ. ಕಾಲೇಜು ನೋಡಿದರೆ ಸುತ್ತಲೆಲ್ಲಾ ಕಟ್ಟಡಗಳೇ ತುಂಬಿಕೊಂಡು ಕಾಲೇಜು ಇನ್ನಷ್ಟು ವಿಸ್ತಾರಗೊಂಡಿದೆ. ನನ್ನ ಪ್ರೀತಿಯ ಲೈಬ್ರೇರಿ ಅದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ. ಮೊಬೈಲ್ ಇಲ್ಲದ ಪಿಯು-ಡಿಗ್ರಿ ಸಮಯದಲ್ಲಿ ನಿತ್ಯ ಅಮ್ಮನ ಜೊತೆ ಮಾತನಾಡೋಕೆ ನೇತಾಡುತ್ತಿದ್ದ ಆ ಇಂದ್ರಣ್ಣನ ಅಂಗಡಿ ಯ ಎರಡು ಕೆಂಪು ಕಾಯಿನ್ ಬೂತ್ ಗಳು ಹಾಗೇ ಇವೆ. ಇಂದ್ರಣ್ಣ ಅದೇ ಮುಖತುಂಬಾ ಗಡ್ಡ, ಖುಷಿ ಖುಷಿಯ ನಗುವಿನಿಂದ ಸ್ವಾಗತಿಸಿದರು.

ಅಲ್ಲಿಂದ ಮುಂದೆ ನನಗೆ ಐದು ವರ್ಷ ಅಮ್ಮನಂತೆ ಸಾಕಿ ಸಲಹಿದ ಬಿಸಿಎಂ ಹಾಸ್ಟೇಲ್ ನತ್ತ ಸಾಗಿದರೆ, ನನಗೆ ದಿನಕ್ಕೆರಡು ಬಾರಿ ಟೀ ಇಟ್ಟು ಕೊಟ್ಟು, ರಾತ್ರಿ ಮಲಗುವಾಗಲೂ ತಟ್ಟಿ ಮಲಗಿಸುತ್ತಿದ್ದ, ಮಗಳಂತೆ ನನ್ನ ಪ್ರೀತಿಯಿಂದ ಕಂಡ ಹೇಮಾ ಆಂಟಿಗೆ ಒಂದು ಕ್ಷಣ ನನ್ನ ಪರಿಚಯ ಸಿಗದೆ ಒಂದು ಕ್ಷಣ ಅವಕ್ಕಾಗಿ ಬಂದು ಗಟ್ಟಿಯಾಗಿ ಅಪ್ಪಿಕೊಂಡಾಗ ನಾನೇ ಕರಗಿಹೋಗಿದ್ದೆ. ಅದೇ ನಗು, ಅದೇ ಖುಷಿ, ಅದೇ ಪ್ರೀತಿಯ ಮಾತು....ಗಳಿಂದ ಮನಸ್ಸೆಲ್ಲಾ ತುಂಬಿಕೊಂಡುಬಿಟ್ಟರು. ಡಿಗ್ರಿಯಲ್ಲಿರುವಾಗ ನನ್ನ ರೂಮ್ ಬಿಟ್ಟು ಆಂಟಿ ಜೊತೆ ಮಲಗೋದು ನನ್ನ ಅಭ್ಯಾಸ. ಏಕಂದ್ರೆ ನನ್ನ ರೂಮ್ ನಲ್ಲಿರುವಾಗ ಹುಡುಗಿರೆಲ್ಲಾ ಮಧ್ಯರಾತ್ರಿ ತನಕ ಹರಟೆ ಹೊಡೆಯೊರು..ಪಕ್ಕಾ 10.30ಗೆ ನಿದ್ದೆಯ ಮಂಪರಿಗೆ ಜಾರಿ, ಬೆಳಿಗ್ಗೆ 5.30ಗೆ ಏಳೋ ನನಗೆ ಅದು ಹಿಂಸೆ ಅನಿಸುತ್ತಿತ್ತು. ಅದಕ್ಕೆ ಆಂಟಿ ಜೊತೆ ಮಲಗಿಬಿಡುತ್ತಿದ್ದೆ. ಅವರು ಏಳುವಾಗ ನನ್ನನ್ನೂ ಎಬ್ಬಿಸುತ್ತಿದ್ದರು. ಹಾಗೇ ಮತ್ತೊಬ್ರು ರತ್ನ ಆಂಟಿಯ ಪುಟ್ಟ ಮಗು ವರುಣ ಕೂಡ ನನ್ನ ಜೊತೆಗೇ ಮಲಗುತ್ತಿದ್ದ. ಹಾಗೇ ಓದುತ್ತಾ, ಆಡುತ್ತಾ ಅಲ್ಲೆ ಮಲಗುತ್ತಿದ್ದೆ. ನನ್ನ ನೋಡಿದವರೇ ಆಂಟಿ, ಚಿತ್ರಾ ಮಲಗೋಕೆ ಹೊರಟಾಗ ಯಾವಾಗಲೂ ನೀನು ನೆನಪಾಗ್ತೀ ಅಂದ್ರು. ನಾನು ನೀಡಿದ ಒಂದು ಪುಟ್ಟ ಸ್ವೀಟ್ ಬಾಕ್ಸ್ ಅನ್ನು ಆಂಟಿ ಕಣ್ಣರಳಸಿ ನೋಡಿ ತೆಗೆದುಕೊಂಡರು. ಅವರು ಮಾಡಿ ಕೊಟ್ಟ ಟೀ ಮಾತ್ರ ಮತ್ತೊಮ್ಮೆ ಆಂಟಿ ಮಾಡಿಕೊಡುತ್ತಿದ್ದ ಟೀಯನ್ನು ನೆನೆಪಿಸಿ ಕಣ್ತುಂಬಿಸಿತ್ತು. ರತ್ನ ಆಂಟಿನೂ ಹಾಗೇ ಇದ್ದಾರೆ..ಬಾಯಿ ತುಂಬಾ ನಗುತ್ತಾ.

ಆದರೆ ಹಾಸ್ಟೇಲ್ ನಾವು ಇರುವಾಗ ಇದ್ದಕ್ಕಿಂತಲೂ ಈಗ ತುಂಬಾ ಚೆನ್ನಾಗಿದೆ. ಎದುರುಗಡೆ ಮೂರು ರೂಮ್ ಗಳು ಮತ್ತೆ ನಿರ್ಮಾಣವಾಗಿವೆ. ಹೊತ್ತು ಹೊತ್ತಿಗೆ ಬೋರ್ ವೆಲ್ ನೀರು ಸೌಲಭ್ಯ, ಫೋನ್, ಬೇಕಾದಷ್ಟು ಡೆಸ್ಕುಗಳು, ಸೋಲಾರ್...ಏನು ಬೇಕೋ ಅದೆಲ್ಲಾ ಇದೆ. ನೋಡಿ ನಾನುನೂ ಈಗಲೂ ಇರಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಇನ್ನೊಂದು ತುಂಬಾ ಖುಷಿಯಾಗಿದ್ದು ಅಂದ್ರೆ ನಾನೇ ಹೆಸರಿಟ್ಟು ಮಾಡಿದ ವಾಲ್ ಮ್ಯಾಗಜಿನ್ 'ಸ್ಫೂರ್ತಿ'ಯನ್ನು ನನ್ನ ತಂಗಿಯರು ಹಾಗೇ ಕಾಪಾಡಿಕೊಂಡು ಬಂದಿದ್ಧಾರೆ. ನೋಡಿ ಭಾಳ ಖುಷಿ ಪಟ್ಟೆ.

ಸಂಜೆಯ ಹೊತ್ತಿಗೆ ಡೈರಿ ಬರೆಯಲು ಕೂರುತ್ತಿದ್ದ ಆ ವಿಶಾಲವಾದ ಗಾಳಿ ಮರ ಹಾಗೇ ಇದೆ. ನಮಗೆ ವಾರ್ಷಿಕ ಆದಾಯ ತರುತ್ತಿದ್ದ ಆ ಗೇರುಬೀಜದ ಮರ ಇನ್ನೂ ಹಾಗೇ ಉಳಿದಿದೆ. ಅದಕ್ಕೆ ಅದೆಷ್ಟು ಸಲ ನಾವು ಹತ್ತಿ ಗೇರು ಬೀಜ ಕೊಯ್ಯುತ್ತಿದ್ದೇವೋ..ಗೆಳತಿ ಶ್ರದ್ಧಾ ಅದೆಷ್ಟು ಬಾರಿ ಮರದಿಂದ ಕೆಳಗೆ ಜಾರಿದಳೋ...ಆ ಮರ ನೋಡುತ್ತಿದ್ದಂತೆ ಹಿಂದಿನ ನೆನಪುಗಳು ಮನದ ಪರದೆ ಮೇಲೆ ಸುತ್ತಾಡಿದವು. ಅಕ್ಕಾ..ಅಕ್ಕಾ...ಎನ್ನುತ್ತಾ ಅಕ್ಕರೆ, ಅಚ್ಚರಿಯಿಂದ ಕಾಣುತ್ತಿದ್ದ ನನ್ನ ತಂಗಿಯರ ಮಾತುಗಳು ಮನತುಂಬಿಸಿದವು.

ಅಲ್ಲಿಂದ ಧರ್ಮಸ್ಥಳದತ್ತ ಹೊರಟರೆ, ಮೂರು ವರ್ಷ ಜೊತೆಗೇ ಕಲಿತ ರಾಜೇಂದ್ರ, ರೋಹನ್ ಅಚಾನಕ್ ಆಗಿ ಕಣ್ಣಿಗೆ ಬಿದ್ದರು. ಕ್ಲಾಸಿನಲ್ಲಿ ನಂ.1 ತರಲೆ ಪಟ್ಟ ಗಿಟ್ಟಿಸಿಕೊಂಡಿದ್ದ ರಾಜೇಂದ್ರ ಈಗ ಮೌನಮೂರ್ತಿ ಆಗಿದ್ದಾನೆ. ಒಂದೇ ಒಂದು ನೋಟ್ಸ್ ಬರೆಯದೆ ನನ್ನ ನೋಟ್ಸ್ ಜೆರಾಕ್ಸ್ ನಲ್ಲಿ ಪಾಸ್ ಮಾಡಿಕೊಳ್ಳುತ್ತಿದ್ದ ಆತ ಕಾಲೇಜಿಗೆ ಅಧ್ಯಕ್ಷನೂ ಆಗಿಬಿಟ್ಟಿದ್ದ. ಅವನ ತರಲೆ, ಕೀಟಲೆಗಳನ್ನು ಕಂಡ ಮೇಷ್ಟ್ರುಗಳೇ ರೋಸಿಹೋಗಿದ್ದರು. ಅವನಿದ್ದರೆ ನಮ್ಮ ಕ್ಲಾಸ್ ರೂಮ್ ಮನೋರಂಜನಾ ಹಾಲ್ ಆಗುತ್ತಿತ್ತು, ಸಿಕ್ಕಿದವನೇ ಹಿಂದಿನದನೆಲ್ಲಾ ಬಿಚ್ಚುಡುತ್ತಾ ಹೋದ..ಈಗ ಒಳ್ಳೆಯ ಕೆಲಸದಲ್ಲಿದ್ದಾನೆ. ಹಿಂದಿನ ತರಲೆ ಬುದ್ಧಿ ಬಿಟ್ಟು ಸಾದಾ ಸೀದಾ ಮನುಷ್ಯ ಆಗಿಬಿಟ್ಟಿದ್ದಕ್ಕೆ ಹೀಗೇ ಇರು ಮಾರಾಯ ಅಂದೆ.

ಎರಡು ದಿನ ಉಜಿರೆಯಲ್ಲಿ ಕಳೆದೆ. ಮತ್ತೊಮ್ಮೆ ಕಳೆದ ದಿನಗಳನ್ನು ಮೆಲುಕು ಹಾಕಿದೆ. ನನ್ನ ಬದುಕು ರೂಪಿಸಿದ ಪ್ರೀತಿಯ ಕಾಲೇಜಿಗೆ, ಹಾಸ್ಟೇಲಿಗೆ ಮನತುಂಬಾ ಮತ್ತೊಮ್ಮೆ ನಮಿಸುತ್ತಾ ಮತ್ತೆ ಬೆಂಗಳೂ ರು ಬಸ್ಸು ಹಿಡಿದೆ. ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...!

Sunday, August 23, 2009

ಅವಳಿನ್ನೂ ಬದುಕಿದ್ದಾಳೆ, ಭರವಸೆಯ ಹೊಂಗಿರಣದಂತೆ...

ಅಂದು ರಜಾದಿನ. ಮನೆಯಂಗಳವನ್ನು ತುಂತುರು ಮಳೆಹನಿಗಳು ಮುತ್ತಿಕ್ಕುತ್ತಿದ್ದವು. ಮೋಡ ಕವಿದ ಬಾನಂಗಳದಿ ಸೂರ್ಯನೂ ಮಸುಕಾಗಿದ್ದ. ಸಂಜೆಯ ಹೊತ್ತು ಒಬ್ಬಳೇ ಟಿವಿ ಎದುರು ಕುಳಿತು ಅದಾವುದೋ ಸಿನಿಮಾ ನೋಡುತ್ತಿದ್ದಂತೆ ಆ ಪುಟ್ಟ ಹುಡುಗಿ ನೆನಪಾದಳು. ಹಸಿರು ಲಂಗಧಾವಣಿ ಉಟ್ಟ ಆ ಮುಗ್ಧ ಹುಡುಗಿಯ ಮುಖ ಕಣ್ಣೆದುರು ಬಂತು. ಬೆಟ್ಟದಷ್ಟು ಕನಸುಗಳನ್ನು ಕಂಗಳಲ್ಲಿ ತುಂಬಿಕೊಂಡ, ಆಗತಾನೇ ಭವಿಷ್ಯ ಬದುಕಿನ ಕುರಿತು ಯೋಚಿಸುತ್ತಿದ್ದ ಆ ಚೆಂದದ ಹುಡುಗಿ ನೆನಪಾಗುತ್ತಿದ್ದಂತೆ ಅದೇಕೋ ನನ್ನ ಕಣ್ಣುಗಳೂ ಮಂಜಾದವು. ಹೃದಯ ಚಿರ್ರನೆ ಚೀರಿತ್ತು.

ಹೌದು,ಆಗ ನಾನು ಒಂಬತ್ತನೇ ತರಗತಿ. ಮಂಗಳ ವಾರಪತ್ರಿಕೆಯನ್ನು ಎಡೆಬಿಡದೆ ಓದಿ ಪರೀಕ್ಷೆಗಿಂತಲೂ ಧಾರವಾಹಿಗಳಿಗೆ ತಲೆಕೆಡಿಸಿಕೊಳ್ಳುತ್ತಿದ್ದ ದಿನಗಳು. ಮೇಷ್ಟ್ರು ಪಾಠ ಮಾಡುತ್ತಿರುವಾಗಲೇ ಡೆಸ್ಕಿನ ಸಂದಿಯಲ್ಲಿ ಮಂಗಳವಾರಪತ್ರಿಕೆ ಓದಿ ಎಷ್ಟೋ ಸಲ ಮೇಷ್ಟ್ರ ಕೆಂಗಣ್ಣಿಗೆ ಗುರಿಯಾಗಿ, ಹೆಡ್ ಮಾಸ್ತರ ಚೇಂಬರ್ ಗೆ ಬೈಗುಳ ತಿಂದ ದಿನಗಳು.

ಅದೊಂದು ಶನಿವಾರ ಮಂಗಳ ತಂದಂತೆ ಆ ಹುಡುಗಿಯ ಬಗ್ಗೆ ಯಾರೋ ಒಂದು ಪುಟ ಗೀಚಿದ್ದರು. ಅವಳು ಕಾಲೇಜು ಹುಡುಗಿ. ತನ್ನ ಓರಗೆಯ ಹುಡುಗನ್ನೊಬ್ಬ ಆ ಹುಡುಗಿಗೆ ಆಸೀಡ್ ಎಸೆದು ಮುಖವೆಲ್ಲಾ ಸುಟ್ಟು ಕರಲಾಗಿತ್ತು. ಪ್ರೀತಿಯನ್ನು ನಿರಾಕರಿಸಿದ್ದೇ ಇದಕ್ಕೆ ಕಾರಣ. ಆಸೀಡ್ ಎಸೆದ ನಂತರ ಅವಳ ಮುಖ ಹಾಗೂ ಇದಕ್ಕೂ ಮೊದಲು ಅವಳು ಆಡಿನಲಿಯುತ್ತಿದ್ದ ಪೋಟೋಗಳನ್ನು ನೀಡಲಾಗಿತ್ತು.ಆ ಪುಟ್ಟ ಹುಡುಗಿಯ ಮೇಲೆ ಕನಿಕರ ತೋರಿ ಅದೆಷ್ಟೋ ದಾನಿಗಳು ನೋಟುಗಳನ್ನು ಅವಳ ಮುಂದೆ ಚೆಲ್ಲಿದ್ದರು. ಭೂಗತದೊರೆಯೊಬ್ಬ 50 ಸಾವಿರ ಘೋಷಿಸಿ ಜನರಿಂದ ಸೈ ಎನಿಸಿಕೊಂಡಿದ್ದು ಈಗಲೂ ನೆನಪಿದೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ದೇಹವಷ್ಟೇ ಉಳಿದಿತ್ತು. ಸುತ್ತಲಿನ ಜಗತ್ತನ್ನು ಕಾಣೋಕೆ, ನಮ್ಮಂತೆ ಸುತ್ತಲಿನ ಜಗತ್ತಿನ ಜೊತೆ ಆಟವಾಡೋಕೆ, ಖುಷಿಪಡೋಕೆ ಅವಳ ಕನಸು ತುಂಬಿದ ಕಣ್ಣುಗಳು ಉಳಿಯಲಿಲ್ಲ. ಭಾವನೆಗಳಿದ್ದರೂ, ಕನಸುಗಳಿದ್ದರೂ, ಜೀವನ ಪ್ರೀತಿ ಉಕ್ಕಿ ಹರಿಯುತ್ತಿದ್ದರೂ ಅವಳ ಸುತ್ತಲಿನ ಜಗತ್ತು ಮಾತ್ರ ಅವಳನ್ನು ಕುರುಡಿಯಂತೆ ಒಪ್ಪಿಕೊಂಡುಬಿಟ್ಟಿದೆ.ತನ್ನದಲ್ಲದ ತಪ್ಪುಗಳಿಗೆ ಆಕೆ ಬಲಿಯಾದಳು.

ಆ ಮಹಾಪಾಪಿ ಏನಾದ..ಗೊತ್ತಿಲ್ಲ. ಅವನ ಬದುಕಿಗೆ ಪೆಟ್ಟಾಗಿಲ್ಲ. ಅವನನ್ನು ಬಂಧಿಸುವ ಕೈಗಳಿಲ್ಲ, ಆತನಿಗೆ ಶಿಕ್ಷೆಯಾಗಲಿಲ್ಲ. ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಒಕ್ಕೋರಲಿನಿಂದ ಕೂಗುವ, ಬೀದಿಯಲ್ಲಿ ನಿಂತು ಕೂಗಿ ಹೇಳುವ ದನಿಗಳು ನಮ್ಮಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವಳೆದುರು, ಅವಳ ಭಾವನೆಗಳೆದುರು, ಅವಳ ಕನಸುಗಳೆದುರು ಕನಿಕರದಿಂದ ನೋಟುಗಳನ್ನು ಚೆಲ್ಲೋರು ಜಾಸ್ತಿ ಇದ್ರು.

ಬದುಕಬೇಕು ಅನ್ನೋ ಹಂಬಲ, ಬದುಕಿನ ಕುರಿತಾದ ಆಕೆಯ ಪ್ರೀತಿ, ಭವಿಷ್ಯದ ಕುರಿತಾದ ಆಕೆಯ ಭರವಸೆ ಅವಳನ್ನು ಇನ್ನೂ ಜೀವಂತವಾಗಿರಿಸಿದೆ. ಇನ್ನೂ ಬದುಕಿದ್ದಾಳೆ..ಸಮಾಜದ ಪಾಲಿಗೆ ಕುರುಡಿಯಂತೆ..ಆಕೆಯ ಪಾಲಿಗೆ 'ಭರವಸೆಯ ಕಿರಣ'ದಂತೆ!

ಬರೆದು ಮುಗಿಸುತ್ತಿದ್ದಂತೆ...
ಕರುಣಾಳು ಬಾ ಬೆಳಕೇ
ಮಸುಕಿದೀ ಮಬ್ಬಿನಲಿ...
ಕೈ ಹಿಡಿದು ನಡೆಸೆನ್ನನು
...
ಎಂ.ಡಿ. ಪಲ್ಲವಿ ಧ್ವನಿಯಲ್ಲಿ ಇಂಪಾಗಿ ಕೇಳಿಬರುತ್ತಿತ್ತು.

Monday, August 17, 2009

ನಮ್ಮೂರ ಮಲ್ಲಿಗೆ ಚೆನ್ನಾ...

ನನಗೆ ಮಲ್ಲಿಗೆ ಅಂದ್ರೆ ಭಾಳ ಪ್ರೀತಿ. ಅದರಲ್ಲೂ ನಮ್ಮೂರ ಮಲ್ಲಿಗೆ ಅಂದ್ರೆ ಅಕ್ಕರೆ ಜಾಸ್ತಿ. ಅದೇ 'ಮಂಗ್ಳೂರ ಮಲ್ಲಿಗೆ' ಅಂತಾರಲ್ಲಾ ಅದೇ ಮಲ್ಲಿಗೆ. ಒಂದು ಮಲ್ಲಿಗೆ ಎಸಳು ಕೂಡ ನಮ್ಮನೆ-ಮನವನ್ನು ಘಮ್ಮೆನಿಸಬಲ್ಲುದು.ನಾನು ಊರಿಗೆ ಹೋಗುವಾಗ ತಪ್ಪದೆ ತಲೆತುಂಬಾ ಮಲ್ಲಿಗೆ ಮುಡಿತೀನಿ. ಯಾಕಂದ್ರೆ ಈ ಬೆಂಗ್ಲೂರಲ್ಲಿ ಅಂಥ ಸುಂದರ ಮಲ್ಲಿಗೆನೇ ಸಿಗೊಲ್ಲ. ಅದನ್ನು ಏನಿದ್ರೂ ನೀವು ಮಂಗಳೂರಲ್ಲೇ ನೋಡಬೇಕು. ಮೊನ್ನೆ ಮೊನ್ನೆ ಊರಿಗೆ ಹೋದೆ. ಹೋಗುವಾಗಲೇ ಪೇಟೆಯಲ್ಲಿ ಇಳಿದು ಮಲ್ಲಿಗೆ ತಕೊಂಡು ಹೊರಟೆ.

ನಾನು ಶಾಲೆಗೆ ಹೋಗುತ್ತಿದ್ದಾಗಲೂ ಅಷ್ಟೇ ತುಂಬಾ ಹೂವು ಮುಡಿಯೋ ಹುಚ್ಚು. ಅದರಲ್ಲೂ ಮಲ್ಲಿಗೆ ಅಂದ್ರೆ ಜಡೆಗಿಂತಲೂ ಜಾಸ್ತಿ ಮಲ್ಲಿಗೆ ಮುಡಿಯುತ್ತಿದ್ದೆ. ಆವಾಗ ನಮ್ಮ ಹೆಡ್ ಮಾಸ್ತರು ಯಾವಾಗಲೂ ಹೂವು ಮುಡಿದಿದ್ದಕ್ಕೆ ರೇಗಿಸುತ್ತಿದ್ದು ಈಗಲೂ ನೆನಪಿದೆ. ಹೈಸ್ಕೂಲು-ಕಾಲೇಜಿನಲ್ಲೂ ಅಷ್ಟೇ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅಮ್ಮ ಎರಡು ಜಡೆ ಕಟ್ಟಿ. ಎರಡೂ ಜಡೆಗೂ ಮಲ್ಲಿಗೆ ಮುಡಿಸಿ ಕಳುಹಿಸುತ್ತಿದ್ದರು. ಆ ಮಲ್ಲಿಗೆ ಮುಡಿದು ಕ್ಲಾಸಿನಲ್ಲಿದ್ದವರಿಗೆಲ್ಲ ಅಸೂಯೆ ಬರಿಸೋದು ನನ್ ಕೆಲಸ. ಅದೆಷ್ಟೋ ಹುಡುಗಿಯರು ನನ್ ಮಲ್ಲಿಗೆ ಮೇಲೆ ಕಣ್ಣು ಹಾಕಿದ್ದಾರೋ? ಕಡಲವರಂರೂ ಸ್ವಲ್ಪ ಕೊಡೇ ಅನ್ನುತ್ತಾ ತೆಗೆದುಕೊಂಡು ಬಿಡೋರು.
ನಮ್ಮೂರಿನ ಪ್ರತಿ ಹಬ್ಬ ಅಥವಾ ಯಾವುದೇ ಸಮಾರಂಭಗಳಲ್ಲಿ ಮಲ್ಲಿಗೆ ತಂದೇ ತರುತ್ತಾರೆ. ವಧುವಿಗೆ ಮಲ್ಲಿಗೆ ಮುಡಿಸಿದರೇನೇ ಚೆನ್ನ ಕಾಣೋದು. ಅಷ್ಟೇ ಅಲ್ಲ, ತಲೆಯಲ್ಲಿ ಆ ಮಲ್ಲಿಗೇನ ನೋಡೋದು ಕಣ್ಣಿಗೆ ಒಂಥರಾ ಹಬ್ಬ.

ಅದೇ ಮೊನ್ನೆ ನಾನು ಊರಿಗೆ ಹೋದನ್ನಲ್ಲಾ..ಬೆಂಗಳೂರಿಗೆ ವಾಪಾಸು ಬರುವಾಗಲೂ ಮಲ್ಲಿಗೆ ತಕೋ ಬಂದೆ. ಇತರ ಮಲ್ಲಿಗೆಗಳಿಗಿಂತ ಇದು ದುಬಾರಿ. ಮನೆಯಿಂದ ಹೊರಟು 10 ಗಂಟೆ ಪ್ರಯಾಣಿಸಿದವಳು ಮಲ್ಲಿಗೇನ ಜೋಪಾನವಾಗಿ ತಕೊಂಡು ಬಂದೆ. ಇಡೀ ಬಸ್ಸೇ ಘಮ್ಮೆನ್ನುತ್ತಿತ್ತು.
ಮಲ್ಲಿಗೆ ತಂದ್ರೆ ಬೆಂಗಳೂರಿನ ನಮ್ಮನೆ ಬಿಡೀ ಇಡೀ ಬಿಲ್ಡಿಂಗೇ ಘಮ್ ಅನ್ನಬೇಕೇ? ಪಕ್ಕದ ಮನೆ ಆಂಟಿ ಬಂದು ಕೇಳಿದ್ರು...ತುಂಡು ಮಾಡಿ ಕೊಟ್ಟೆ. ಅವರ ಮಕ್ಜಳು, ಮರಿಗಳೆಲ್ಲಾ ಮುಡಿದ್ರು. ನಾಲ್ಕು ಮನೆಗೆ ಹಂಚಿದೆ. ಎಲ್ರ ಬಾಯಲ್ಲೂ ಮಂಗ್ಳೂರ ಮಲ್ಲಿಗೆ. ನಮ್ಮನೆ ಓನರ್ ಆಂಟಿಯ ಖುಷಿಗಂತೂ ಸರಿಸಾಟಿ ಏನೂ ಇರಲಿಲ್ಲ. ಅಷ್ಟು ಖುಷಿಯಾಗಿಬಿಟ್ರು. ಎಲ್ಲರಿಗೆ ಹಂಚಿ ಪುಟ್ಟದೊಂದು ತುಂಡು ಉಳಿಯಿತು. ದೇವರ ಫೋಟೋಗೆ ಹಾಕಿ ಮಲಗುವಾಗ ಮುಡಿದುಕೊಂಡೇ ಮಲಗಿದೆ.

ಹಂಗೇ ನಮ್ಮೂರ ಮಲ್ಲಿಗೆ ಅಂದ್ರೆ ತುಂಬಾ ಚಂದ..ನೋಡಕ್ಕೂ ಮುಡಿಯಕ್ಕೂ. ನೀವು ನೋಡಿದ್ರೂನೂ ಇಷ್ಟಪಡ್ತೀರ..ತುಂಬಾ ಪ್ರೀತಿ ಮಾಡ್ತೀರಾ!

Thursday, August 6, 2009

ಮಮತೆಯಲ್ಲಿ ತೊಯ್ದುಬಿಡು..ಬದುಕು ಶರಧಿಯಾಗಲಿ.

ಪ್ರೀತಿಯ ಅಣ್ಣ....
ರಾಖಿ ಹಬ್ಬದ ಶುಭಾಶಯಗಳು.

ಹೌದು, ನೀನಂದ್ರೆ ಪ್ರೀತಿ, ನೀನಂದ್ರೆ ಭಯ, ನೀನಂದ್ರೆ ಗೌರವ, , ನೀನಂದ್ರೆ ಅಮ್ಮ, ನೀನಂದ್ರೆ ಗೆಳೆಯ,..ಹೀಗೆ ಬದುಕಿನ ಸಮಸ್ತ ಬಾಂಧವ್ಯಗಳನ್ನು ಒಟ್ಟೊಟ್ಟಾಗೇ ನೀಡಿದವ. ಒಡಹುಟ್ಟಿದವ ಅಲ್ಲದಿದ್ದರೂ ಒಡನಾಡಿ ಆದವ. ನನ್ನ ಜೊತೆಗೇ ಹೆಜ್ಜೆಹಾಕಿದವ. ನಾನು, ನನ್ನ ಬದುಕನ್ನು ,ಪ್ರೀತಿಸೋಕೆ ಕಲಿಸಿದವ. ಬೆಳದಿಂಗಳ ತಂಪಿನಲ್ಲಿ ಕುಳಿತು ಅಜ್ಜಿ ಕಥೆ ಹೇಳಿದವ. ಶಾಲೆಗೆ ಹೋಗದೆ ರಚ್ಚೆ ಹಿಡಿದಾಗ ಗದರಿಸಿ, ಶಾಲೆಗೆ ಕಲಿಸಿದವ. ಸಮಸ್ತರನ್ನೂ ಪ್ರೀತಿಸು, ಯಾರನ್ನೂ ಪ್ರೇಮಿಸಬೇಡ ಎಂದು ಬುದ್ಧಿಮಾತು ಹೇಳಿದವ ನೀನು ನನ್ನಣ್ಣ. ನಿದ್ದೆ ಬಾರದಿದ್ದಾಗ ಅಮ್ಮನಂತೆ ಲಾಲಿ ಹಾಡಿದವ. ಅತ್ತಾಗ ನಿನ್ನೆದೆಯ ಪ್ರೀತಿಯ ಮಡಿಲಲ್ಲಿ ಮಲಗಿಸಿ ಸಂತೈಸಿದವ ನೀನು ನನ್ನಣ್ಣ. ಚೆನ್ನಾದ ಡ್ರೆಸ್ ಕೊಡಿಸು, ಬಳೆ ಕೊಡಿಸು, ಕಿವಿಯೋಳೆ ಕೊಡಿಸು ಎಂದಾಗ ಏನೂ ಅನ್ನದೆ ತೆಗೆದುಕೊಟ್ಟವ. ಕೈತುಂಬಾ ಬಳೆ, ತಲೆತುಂಬಾ ಮಲ್ಲಿಗೆ ಮುಡಿಸಿ ನನ್ನ ತಂಗಿ ಎಷ್ಟು ಚೆಂದ ಕಾಣ್ತಾಳೆ ಅಂತ ಹೆಮ್ಮೆ ಪಟ್ಟವ ನೀನು ನಂಗೆ ದೇವ್ರು ಕೊಟ್ಟ ಅಮೂಲ್ಯ ಉಡುಗೊರೆ ಗೊತ್ತಾ? ನಿನ್ನ ಪ್ರೀತಿಯನ್ನು ಮೀರಿ ನಡೆದಾಗ ಕಂಗಳು ಹನಿಗೂಡಿಸಿದವ. ಸುತ್ತಲ ಜಗತ್ತಿನ ಸತ್ಯ-ಮಿಥ್ಯಗಳ, ನೋವು-ನಲಿವುಗಳ ಅರಿವಾಗಿಸಿದವ. ಒಂದು ರೂ.ಗೂ ಅಮೂಲ್ಯ ಬೆಲೆಯಿದೆ ಎಂದು ತಿದ್ದಿತೀಡಿದವ.

ನನಗೆ ಇಷ್ಟದ ತಿಂಡಿ ತಂದುಕೊಟ್ಟು ನನ್ನ ಇನ್ನೂ ಡುಮ್ಮಿಯಾಗಿಸಿದವ. ಆಫೀಸ್ ನಲ್ಲಿ ಬಾಸ್ ಬೈದರೆಂದು ಮನೆಯ ಮೂಲೆಯಲ್ಲಿ ಕುಳಿತು ಅತ್ತಾಗ ಹೆದರಿಕೋಬೇಡ, ಸಹನೆಯಿಂದಿರು ಎಂದು ಸಮಾಧಾನ ಮಾಡಿದವ . ಕಾಲದ ತೆಕ್ಕೆಯಲ್ಲಿ ನೋವಿಗೆ ಬಲಿಯಾಗುವಾಗ ನೋವನ್ನೇ ನಲಿವಾಗಿಸಿದವ. ಪೇಟೆ, ಹಳ್ಳಿ, ಶಾಪಿಂಗ್ ಮಾಲ್ ಸುತ್ತಾಡಿಸಿದವ. ಅಮ್ಮ ಜೊತೆಗಿಲ್ಲದಾಗ ಅಮ್ಮನಾದವ. ನನ್ನ ಭವಿಷ್ಯದ ಕನಸುಗಳ ದೊಡ್ಡ ಗೋಪುರವನ್ನೇ ಕಟ್ಟಿಸಿದವ. ನನ್ನ ಹುಸಿಮುನಿಸು ಮುಂಗೋಪ, ಅಸಹನೆಯಂಥ ದೌರ್ಬಲ್ಯಗಳೊಂದಿಗೆ ರಾಜಿ ಮಾಡಿಕೊಂಡು ತಪ್ಪನ್ನು ತಿದ್ದಿ ತೀಡಿದವ. ನನ್ನ ಮೇಲೆ ಸಿಟ್ಟು ಬಂದರೂ ಒಂದೇ ಒಂದು ಸಲ ನನಗೆ ಕೈ ಎತ್ತದವ. ನಿತ್ಯ ಪುಟ್ಟಾ ಪುಟ್ಟಾ ಎನ್ನುತ್ತಾ ನನ್ನ ಪುಟ್ಟ ಬದುಕಿನಲ್ಲಿ ಪ್ರೀತಿಯ ಮಳೆ ಕರೆದವ ನೀನು ನನ್ನಣ್ಣ. ನನ್ನೊಳಗಿನ ಪುಟ್ಟ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದವ ನೀನು ನನ್ನಣ್ಣ.

ಅಣ್ಣಾ...
ನೀ ಜೊತೆಗಿದ್ರೆ ನಂಗೆ ಖುಷಿ, ನೆಮ್ಮದಿ, ಸಂಭ್ರಮ ಎಲ್ಲಾನೂ. ನೆಮ್ಮದಿ, ಖುಷಿ ಇದ್ರೆ ಅಷ್ಟೇ ಸಾಕಲ್ವಾ ಹೇಳು. ಕೆಲಸದೊತ್ತಡದಿಂದ ತಡವಾಗಿ ಪತ್ರ ಬರೀತಾ ಇದ್ದೀನಿ. ನಂಗೆ ಬೆಟ್ಟದಷ್ಟು ಪ್ರೀತಿ ನೀಡಿ, ನನ್ನ ತಿದ್ದಿ ತೀಡಿದ ನೀನೂ ನಂಗೆ ಅಮ್ಮ. ಮೊನ್ನೆ ರಕ್ಷಾಬಂಧನ. ಹೌದು, ನನಗೆ ನೀನೇ ನಿತ್ಯ 'ರಕ್ಷಾಬಂಧನ'. ನಿತ್ಯ ಅಮ್ಮನ ಮಮತೆಯಲ್ಲಿ ನೀನು ನನ್ನ ತೊಯ್ದುಬಿಡು. ಬದುಕು 'ಶರಧಿ'ಯಾಗುತ್ತದೆ ಅಲ್ವಾ? ನೀನು ಖುಷಿಯಾಗಿರು..ಆ ಖುಷಿಯಲ್ಲಿ ನಂಗೊಂದು ಪುಟ್ಟ ತುಣುಕು ನೀಡು. ನಿಂಗೆ ದುಃಖವಾದ್ರೆ ನೀನೊಬ್ನೇ ಸಹಿಸಬೇಡ. ನಂಗೂ ಸಮಪಾಲು ಕೊಡು. ನಾನೂ ನಿನಗೆ 'ಅಮ್ಮ'ನಾಗುತ್ತೇನೆ. ಮತ್ತೊಮ್ಮೆ ರಾಖಿ ಹಬ್ಬದ ಶುಭಾಶಯಗಳು ಕಣೋ.
ತಡವಾಗಿ ಪತ್ರ ಬರೆದಿದ್ದಕ್ಕೆ ಕ್ಷಮೆಯಿರಲಿ.
ಇಂತೀ,
ನಿನ್ನ ತಂಗಿ

Sunday, July 26, 2009

ನೆನಪುಗಳ ಜೊತೆಗೆ ಒಂದಿಷ್ಟು ಹೊತ್ತು...


ನೀ ನೀಡಿದ 'ಹಿಡಿಪ್ರೀತಿ'ಯ ನೆನಪು.
ಅಮ್ಮನಂತೆ ಸಂತೈಸಿದ ನಿನ್ನ ನುಣುಪು ಕೈಗಳ ನೆನಪು

ನನ್ನ ಕಾಲ್ಗೆಜ್ಜೆ ಸದ್ದಿಗೆ ದನಿಗೂಡಿಸಿದ ನಿನ್ನ ಹೃದಯದ ನೆನಪು.

ನಿನ್ನ ಪ್ರೀತಿಯ ಜೋಗುಳಕ್ಕೆ ನಿದ್ದೆಯ ಮಂಪರಿಗೆ ಜಾರಿದ ನೆನಪು

ನನ್ನ ಕಣ್ಣುಗಳಲ್ಲಿ ಬೆಳಕು ಮೂಡಿಸಿದ ಆ ನಿನ್ನ ಪ್ರೀತಿಯ ಕಂಗಳ ನೆನಪು

ನೀತೊಡಿಸಿದ ಕೈ ಬಳೆ, ಮುಡಿಸಿದ ಘಮ್ ಎನ್ನುವ ಮಲ್ಲಿಗೆಯ ನೆನಪು.

ನಿನ್ನ ಜೊತೆ ದೇವರೆದುರು ಮಂಡಿಯೂರಿ ನಮಿಸಿದ ನೆನಪು

ನಿನ್ನ ಹೆಸರಿನಲ್ಲಿ ದೇವರಿಗೆ ಹಣ್ಣುಕಾಯಿ ಮಾಡಿಸಿದ ನೆನಪು
ನಿನ್ನ ಮಡಿಲಲ್ಲಿ ಪ್ರೀತಿಯ ಅನನ್ಯತೆಯನ್ನು ಸವಿದ ನೆನಪು

ಮನತುಂಬಾ ಕನಸುಗಳನ್ನು ಹೊತ್ತು ನಿನ್ನ ಜೊತೆ ದಾರಿಗುಂಟ ಸಾಗಿದ ನೆನಪು
ನಿನ್ನ ಕಂಗಳಲ್ಲಿ ಕಣ್ಣಿಟ್ಟು 'ನೀ ನನ್ನ ಜೊತೆಗಿರ್ತೀಯಾ?' ಎಂದು ಭರವಸೆಯಿಂದ ಕೇಳಿದ ನೆನಪು.
ಜ್ವರದಿಂದ ನರಳುತ್ತಿರುವಾಗ ತುತ್ತು ಬಾಯಿಗಿಟ್ಟು ಅಮ್ಮನ ವಾತ್ಸಲ್ಯ ತೋರಿದ ನಿನ್ನ ವಿಶಾಲ ಮನದ ನೆನಪು

'ನಂಗ್ಯಾರಿಲ್ಲ' ಎಂದು ನಿನ್ನೆದೆಯಲ್ಲಿ ಅತ್ತಾಗ 'ನಾನಿದ್ದೇನೆ' ಎಂದು ಬದುಕಿನ ಧೈರ್ಯ ತುಂಬಿದ ನಿನ್ನ ದಿಟ್ಟ ಹೃದಯದ ನೆನೆಪು.!

Thursday, July 23, 2009

ಚೆಂದದ ಕಾರ್ಯಕ್ರಮಕ್ಕೆ ನೀವೂ ಬನ್ನಿ..


ಇದೇ ಬರುವ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಚೆಂದದ ಕಾರ್ಯಕ್ರಮವೊಂದು ಇದೆ. ಅಲ್ಲಿಗೆ ನೀವೂ ಬಂದ್ರೆ ಇನ್ನೂ ಮೆರುಗು. ಬರ್ತೀರಲ್ಲಾ...
-ಚಿತ್ರಾಕರ್ಕೇರಾ

Thursday, July 9, 2009

ಜಿನುಗು ಮಳೆಗೆ, ಚುಟುಕ ಹನಿಗಳು...

ನಿನ್ನೆಯ ಜಿನುಗು ಮಳೆಗೆ ನನ್ನ ಪುಟ್ಟ ಮನೆಯಲ್ಲಿ ಕುಳಿತಾಗ ಯಾವುದೋ ಪುಸ್ತಕ ಓದುತ್ತಿದ್ದಂತೆ ಚುಟುಕ ಕವಿ ದಿನಕರ ದೇಸಾಯಿ ಅವರ ಚುಟುಕುಗಳು ಕಣ್ಣಿಗೆ ಬಿದ್ದವು. ಓದುತ್ತಿದ್ದಂತೆ ಮಳೆಗಾಲಕ್ಕೆಂದು ಅಮ್ಮ ಮಾಡಿಕೊಟ್ಟ ಹಪ್ಪಳ-ಸಂಡಿಗೆ ಮೆಲ್ಲೋ ಅನುಭವವಾಯ್ತು. ನಾನು ಓದಿದ್ದನ್ನು ನಿಮಗೂ ಉಣಬಡಿಸಿದ್ದೇನೆ. ಪುರುಸೋತ್ತು ಇದ್ರೆ ಓದಿಕೊಳ್ಳಿ. ಬೆಂಗಳೂರಿನ ಜಿಟಿಜಿಟಿ ಮಳೆ, ಚುಮುಚುಮು ಚಳಿಗೆ ನಿಮಗೂ ಹಪ್ಪಳ-ಸಂಡಿಗೆ ತಿಂದಂತಾಗಬಹುದೇನೋ...?

"ಬಿಸಿನೆಲದಲ್ಲಿ ತುಸು ಹಸಿಯಾಯ್ತು
ಬಿತ್ತಿದ ನೆಲದ ಬೀಜವು ಸಸಿಯಾಯ್ತು
ಸಸಿ ದೊಡ್ಡಗಾಗಲು ತೆನೆಯಾಯ್ತು
ತೆನೆಯೇ ದೇವರ ಮನೆಯಾಯ್ತು"

"ಬೆಳೆಯೇ ಭೂಮಿಯು ಬಂಗಾರ
ಬೆಳೆಯೇ ದೇವರ ಅವತಾರ"

"ಬಾಯಿಗಿಲ್ಲವೆಂದು ತುತ್ತು
ನಿನ್ನ ಕಣ್ಣಮುಂದೆ ಅತ್ತು
ಹೋದರೆನಿತೋ ಮಂದಿ ಸತ್ತು
ನೀನು ಸತ್ತರೇನು ಕುತ್ತು"

"ಜೋ ಜೋ ಜೋ ಜೋ ನನ ತಂಗಿ
ಜೋಗುಳ ಹಾಡುವೆ ರಸರಂಗಿ"


"ಕಟ್ಟಿದರೆ ಅನುಭವದ ತಳಹದಿಯ ಮೇಲೆ
ಕೊನೆಯವರೆಗೂ ನಿಲುವುದು ಕವಿಯ ಲೀಲೆ
ಇಟ್ಟಂಗಿಯಾಗಲಿ ಮಾತು ಕೃತಿಯೊಂದು
ಸರಿಯಾದ ಜಾಗದೊಳಗಿರಲಿ ಒಂದೊಂದು"

"ಲಾಭದಾಯಕವಲ್ಲ ಕವಿಯ ಬೇಸಾಯ
ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ"

"ಎಲೆಕವಿಯೇ ನಿನಗೇಕೆ ನರನ ಬಹುಮಾನ
ಕಾಲರಾಯನು ಕೇಳುವನು ನಿನ್ನ ಗಾನ
ಮೊದಲು ಸಿಗಬೇಕೆಂದು ಕೈಮುಗಿಯಬೇಡ
ತಲೆಬಾಗಿಸಿದರೆ ಕವಿ, ಕವಿಯುವುದು ಮೋಡ"

"ಕಾವ್ಯವೆಂಬುವುದು ಜಾಣತನವಲ್ಲ ಹುಚ್ಚು
ತೀವ್ರವಾದರೆ ಹುಚ್ಚು ಕವಿಯ ಬೆಲೆ ಹೆಚ್ಚು"

"ತರಕಾರಿ ಎಂಬುವುದು ಅಲ್ಲ ಬರಿ ಬದನೆ
ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ
ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ
ಈ ಪಾಕ ಎನ್ನುವುದು ಅನುಭವದ ಲೋಕ"

Friday, July 3, 2009

ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!

ಜುಲೈ 2, 2006!
ಭಾನುವಾರ.


ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.

ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!

ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.

ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.

ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..

Friday, June 12, 2009

ಪ್ರೇಮಿಯಾಗಿರುತ್ತಿದ್ದರೆ, ನಾನೊಬ್ಬಳು ಸಂತಸ ಸವಿಯುವ ಮಾನವಜೀವಿಯಾಗುತ್ತಿದ್ದೆ!

ಇಲ್ಲ, ಮನೆಯ ಸಂತಸ, ಶುಭರಾತ್ರಿಯ ಮುತ್ತು...
'ಅತ್ಯಂತ ಪ್ರೀತಿಯ' ಎಂಬ ಪದದಿಂದ ಶುರುವಾಗುವ
ವಾರದ ಪತ್ರಗಳ ವಂಚಕ ಭರವಸೆಗಳು ನನಗಲ್ಲ.
ನನಗಲ್ಲ, ಟೊಳ್ಳು ಸಪ್ತಪದಿಯ ವಿಧಿ, ಹಾಸಿಗೆಯ ಮೇಲಿನ ಒಂಟಿತನ..
ಅದರ ಮೇಲೆ ಮಲಗಿ, ಒಬ್ಬ ಸಂಗಾತಿಯ ಕನಸು ಕಾಣುತ್ತಾನೆ.
ಬಹುಶಃ ಹೆಣ್ನೇ, ತನ್ನವಳಿಗಿಂತ ಹೆಚ್ಚು ಕಾಮಿಸುವವಳನ್ನು....
*******
ಕೊಡು ಅವನಿಗೂ ಉಡುಗೊರೆ
ಕೊಡು ಅವನಿಗೂ ನೀಳ ಕೇಶದ ಘಮ
ಸ್ತನದ್ವಯಗಳ ನಡುವಿನ ಕಸ್ತೂರಿ ಗಂಧ.
ಋತುಚಕ್ರದ ರಕ್ತದಾಘಾತ, ಇಂಗಿ ಹೋಗದ ಹೆಣ್ಣಿನ ಹಸಿವುಗಳನ್ನು...
*******
ಮುಂಜಾನೆ ಟೀ ಜತೆಗೆ, ಬಾಗಿಲಿನಿಂದ ತೂರಿಬಂದ
ಪ್ರೀತಿಯ ಮಾತುಗಳಿಂದ, ಹ್ಲಾಂ...ದಣಿದ ಕಾಮದಿಂದ
ಸುತ್ತ ನೀ ಹೆಣೆದ ರೇಷಿಮೆ ಗೂಡನ್ನು
ಬಿಟ್ಟು ನಾನು ಹೋಗುತ್ತೇನೆ, ಒಂದಲ್ಲ ಒಂದು ದಿನ
ರೆಕ್ಕೆ ಪಡೆದು ನಾನು ಹಾರಿ ಹೋಗುತ್ತೇನೆ..
*******
ಪುರುಷ ಋತುವಿನಂತೆ
ನೀನು ಅನಂತ
ಇದನ್ನು ಕಲಿಸಲು, ನೀನು
ನನ್ನ ಯೌವನವನ್ನು ನಾಣ್ಯದಂತೆ
ಹಲವು ಕೈಗಳಿಗೆ ಚಿಮ್ಮಲು ಬಿಡು,
ನೆರಳುಗಳ ಜೊತೆ ಸಮಾಗಮಕ್ಕೆ ಬಿಡು,
ಖಾಲಿ ದೇಗುಲಗಳಲ್ಲಿ ಹಾಡಲು ಬಿಡು
*******
ನಾನು ಸತ್ತ ಮೇಲೆ
ಮಾಂಸ, ಮೂಳೆಗಳನ್ನು ಹಾಗೇ ಎಸೆದುಬಿಡಿ.
ಒಂದೆಡೆ ರಾಶಿ ಹಾಕಿ,
ಅದರ ವಾಸನೆಗೆ
ಕಥೆ ಹೇಳಲು ಬಿಡಿ,
ಎಂಥ ಬದುಕಿಗೆ ಈ
ಭುವಿಯ ಮೇಲೆ ಬೆಲೆ
ಕೊನೆಗೆ ಎಂಥ ಪ್ರೀತಿಗೆ
ಸಿಕ್ಕುವುದು ಬೆಲೆ
*******
ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..
ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ
ಭೇದವಿಲ್ಲದ, ಹಂಬಲ ಮಳೆಗೆ.
*******
ನಾನೊಬ್ಬಳು ಪ್ರೇಮಿಯಾಗಿದ್ದದ್ದರೆ,
ಪ್ರೇಮಿಸಲ್ಪಟ್ಟವಳಾಗಿದಿದ್ದರೆ, ನಾನು ಖಂಡಿತವಾಗಿಯೂ ಬರಹಗಾರಳೇ ಆಗುತ್ತಿರಲಿಲ್ಲ. ಬದಲಿಗೆ ನಾನು ಒಬ್ಬಳು ಸಂತಸ ಸವಿಯುವ ಮಾನವ ಜೀವಿಯಾಗುತ್ತಿದ್ದೆ.
*******
ಪ್ರತಿಯೊಂದು ಕವಿತೆಯೂ ನೋವಿನ ಬಸಿರಿನಿಂದಲೇ ಹುಟ್ಟುತ್ತದೆ. ಇಂಥ ನೋವನ್ನು ನಾನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ನೋವನ್ನು ಹಂಚಿಕೊಳ್ಳುವಂಥ ವ್ಯಕ್ತಿಯಾದರೂ ಇರಬೇಕಲ್ಲವೇ?ಆದರೆ ಇಂಥ ವ್ಯಕ್ತಿ ನಿಮಗೆಲ್ಲೂ ಕಾಣಸಿಗುವುದೇ ಇಲ್ಲ. ಇಂಥ ವ್ಯಕ್ತಿಯ ಶೋಧನೆಯಿಂದ ಕವಯತ್ರಿ ಬರೆಯುತ್ತಾಳೇ ಹೋಗುತ್ತಾಳೆ. ಕೊನೆಗೊಮ್ಮೆ ಇಂಥ ವ್ಯಕ್ತಿ ಸಿಕ್ಕಿಬಿಟ್ಟರೆ, ಅಲ್ಲಿಗೆ ಶೋಧನೆ ಮುಗಿಯುತ್ತದೆ. ಕವಿತೆಯೂ ಮುಗಿದುಹೋಗುತ್ತದೆ.
*******
ನಾನು ಯಾರನ್ನಾದರೂ ಪ್ರೇಮಿಸುವಾಗ, ಪ್ರೇಮಿಸುವುದಿದ್ದರೆ, ಅದನ್ನು ಹೃತ್ಪೂರ್ವಕವಾಗಿ ಮಾಡುತ್ತೇನೆ. ಆ ಇಳಿಹೊತ್ತಿನಲ್ಲಿ, ನಸುಕಿನ ತೆಕ್ಕೆಯಲ್ಲಿ
ನನಗೆ ಅತ್ಯಂತ ಸಂವೇದನಾಪೂರ್ಣ ಭಾವನೆಗಳ ಅಪೂರ್ಣ ಅನುಭವವಾಗುತ್ತದೆ. ಕವಿತೆ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ. ಉಕ್ಕಿ ಹರಿಯುತ್ತದೆ. ಒಂದೊಮ್ಮೆಗೆ ನನ್ನೊಳಗಿರುವ ನನ್ನ ಕವಿತೆ ಹೊರಬಂದುಬಿಟ್ಟಿತೆಂದರೆ, ನನ್ನ ಹೃದಯವೇ ಖಾಲಿಯಾಗುತ್ತದೆ. ವ್ಯಕ್ತಿಯೊಬ್ಬನಿಗಾಗಿ ನಾನು ಅನುಭವಿಸಿದ ಆ ಭಾವನೆಗಳೆಲ್ಲ ಆವಿಯಾಗುತ್ತವೆ. ಆಗ ಆ ವ್ಯಕ್ತಿ ಕೇವಲ ಹೆಣದಂತಾಗುತ್ತಾನೆ.
*******
ಸಂದರ್ಶನಕಾರ: ನಿಮ್ಮ ಮೊದಲ ಪ್ರೇಮಿ ಯಾರು? ಉತ್ತರ: ಶ್ರೀಕೃಷ್ಣ
ಯಾ...ಅಲ್ಲಾ...ಈಗಲಾದರೂ ನನ್ನನ್ನು ಶಿಕ್ಷಿಸು. ನಿನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅವನನ್ನೇ ನಾನು ಪ್ರೀತಿಸಿದೆ. ಸಂತಸದ ಆ ಸಂಪತ್ತನ್ನು ಹುಡುಕಲು ಆತನ ದೇಹವನ್ನಪ್ಪಿ, ಆ ದೇಹದಲ್ಲೇ ಕರಗಿ ಹೋದ ನನ್ನ ಕೈಗಳನ್ನು ಕತ್ತರಿಸಿ ಹಾಕು. ಪುರುಷನೊಬ್ಬನನ್ನು ಪೂಜಿಸಿದ ಮಹಾ ಪಾತಕಿ ನಾನು. ಶಿಕ್ಷೆ ಪಡೆಯಲು ಹಪಹಪಿಸುತ್ತಿರುವ ಒಬ್ಬ ಸೇವಕಿ..ಅದೇ ಈ ಸುರಯ್ಯಾ...!!

ಚಿತ್ರಕೃಪೆ: ಅಂತರ್ಜಾಲ

(ವಿ.ಸೂ: ಕಮಲದಾಸ್ ಬಗ್ಗೆ ಇತ್ತೀಚೆಗೆ ಕನ್ನಡಪ್ರಭದ ಸಾಪ್ತಾಹಿಕ ದಲ್ಲಿ ಟಿ.ಜೆ. ಎಸ್. ಜಾರ್ಜ್ ಹಾಗೂ ಎಸ್. ಕುಮಾರ್ ಅವರು ಬರೆದ ಲೇಖನದಲ್ಲಿ ಕಮಲದಾಸ್ ಅವರ ಕವಿತೆಗಳ ಸಾಲುಗಳನ್ನು ಬರೆದಿದ್ದರು. ಕಮಲದಾಸ್ ನನ್ನ ಇಷ್ಟದ ಬರಹಗಾರ್ತಿಗಳಲ್ಲಿ ಒಬ್ಬರಾಗಿದ್ದರಿಂದ ಅದನ್ನು ಹೆಕ್ಕಿ ಬ್ಲಾಗ್ ನಲ್ಲಿ ಹಾಕೊಂಡಿದ್ದಿನಿ. ಸಂಪರ್ಕಿಸಿ:http://www.kannadaprabha.com/pdf/epaper.asp?pdfdate=6/7/2009

ಚಿತ್ರಕೃಪೆ: ಅಂತರ್ಜಾಲ

Wednesday, June 3, 2009

ಬದುಕಿನ ಸತ್ಯ-ಮಿಥ್ಯಗಳ ನಡುವೆ ಒಂದಷ್ಟು ಹೊತ್ತು..!!

**ನಿನ್ನೆ ಆಸ್ಪತ್ರೆ ಕಡೆಗೆ ಸಾಗಿದ್ದೆ. ಸೂರ್ಯ ನೆತ್ತಿಗೇರಿದ್ದ..ನನ್ನ ನೆತ್ತಿಯನ್ನೂ ಬಿಸಿಮಾಡಿದ್ದ! ಕಾಲುಗಳು ಭಾರವೆನಿಸಿದರೂ, ನಡೆಯುತ್ತಿದ್ದವು. ಕುಳ್ಳಗಿನ ದೇಹ, ತಲೆಯಲ್ಲಿ ಒಂಚೂರು ಕೂದಲು ಇಲ್ಲದ ಆ ಯುವಕ ಕಣ್ಣುಮುಚ್ಚಿ ಬೀದಿ ಬದಿಯಲ್ಲಿ ಕುಳಿತು ಕೈಯೊಡ್ಡುತ್ತಿದ್ದ. ಆತನ ತಲೆ ಬಿಸಿಲಿಗೆ ಸುಡುವಂತೆ ಕಂಡುಬರಲಿಲ್ಲ..ಕನಸುಗಳಿದ್ದರೂ ಬದುಕನ್ನೇ ಮರೆತುಕೂತಿದ್ದ. ನನಗಿಂತ ಅನಾರೋಗ್ಯನಾದರೂ ಆತ ಆರೋಗ್ಯವಂತ. ಹೊಟ್ಟೆಯ ಹಸಿವು ಸುಡುವ ಬಿಸಿಲನ್ನೂ ಲೆಕ್ಕಿಸಲಿಲ್ಲ. ಆತನಿಗೆ ವೈದ್ಯರ ಅಗತ್ಯವಿರಲಿಲ್ಲ!

**ಮುಂದೆ ಸಾಗಿದಾಗ ಹಣ್ಣು ಮಾರುವವ. ಬಿರುಬಿಸಲನ್ನೂ ಲೆಕ್ಕಿಸದೆ ತರಕಾರಿ, ಹಣ್ಣುಗಳನ್ನು ತನ್ನ ಗಾಡಿ ಮೇಲೆ ಹಾಕೊಂಡು ದೂಡುತ್ತಾ ಸಾಗುತ್ತಿದ್ದ. ಚೌಕಾಸಿಯವರ ಚೌಕಾಸಿಗೆ ಮಣಿದು, ತಕೋಳ್ಳಿ ಅನ್ನುತ್ತಿದ್ದ ಆತನದೂ ಹೊಟ್ಟೆಪಾಡು.
**ಈ ಬೆಂಗಳೂರಿನಲ್ಲಿ ಸಿಗ್ನಲ್ ನಲ್ಲಿ ಒಂದಷ್ಟು ಹೊತ್ತು ನಿಮ್ಮ ವಾಹನಗಳು ನಿಂತಿರಲಿ..ನಿಮ್ಮನ್ನು ಹಿಂದೆ-ಮುಂದಿನಿಂದ ಪೀಡಿಸುವ ಹಿಜಡಾಗಳು ಕಣ್ಣಿಗೆ ಬೀಳುತ್ತಾರೆ. ಚಿಲ್ಲರೆ ನೀಡದಿದ್ರೆ ನಿಮ್ಮನ್ನು ಅವರು ಸುಮ್ಮನೆ ಬಿಡಲಾರರು..ನೀವು ಅಂಜಿ ನೀಡೇ ನೀಡುತ್ತೀರ. ಬೆಳಿಗ್ಗೆಯಿಂದ ಸಂಜೆತನಕ ಬದುಕು ಹೊರುವ ಕೆಲಸ..ನಿತ್ಯಪಾಡಿದು. ನಾನು ಬಸ್ಸಲ್ಲಿ ಬರುವಾಗ ಯಾವಾಗಲೂ ಕಣ್ಣಿಗೆ ಬೀಳೋ ಬದುಕಿನ ಸತ್ಯಗಳು!
**ಅಲ್ಲಿ ಬೀದಿ ಬದಿಯಲ್ಲಿ ಸುಲಭ ಶೌಚಾಲಯ, ಪಕ್ಕದಲ್ಲೇ ದೇವಸ್ಥಾನ. ಪುಟ್ಟ ಕಂಚಿನ ಪ್ರತಿಮೆ. ನಿತ್ಯ ನಡೆಯುವ ಪೂಜೆ-ಪುರಸ್ಕಾರಗಳು, ಜಾಗಟೆಯ ಸದ್ದು, ಮಂತ್ರಘೋಷ. ಟೂ ವೀಲರ್, ಕಾರಿನಲ್ಲಿ ಬರೋ ಮಂದಿ ಅಲ್ಲೇ ತಮ್ಮ ವಾಹನಗಳು ನಿಲ್ಲಿಸುತ್ತಾರೆ. ಒಂದಿಷ್ಟು ನೋಟುಗಳನ್ನು ಹುಂಡಿಗೆ ಹಾಕಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಬಿಎಂಟಿಸಿ ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಹೊರಗೆ ಇಣುಕಿದ್ದ ನನ್ನ ಕಣ್ಣುಗಳಿಗೆ ಇದು ನಿತ್ಯದ ಸಂಗತಿ.

**ಆ ಪ್ರತಿಷ್ಠಿತ ಸ್ಕೂಲ್ ಎದುರಿನ ಬಸ್ ನಿಲ್ದಾಣದಲ್ಲಿ ನನ್ನ ಬಸ್ಸಿಗಾಗಿ ಕಾಯುತ್ತಿದ್ದೆ. ತಮ್ಮ ಮಕ್ಕಳನ್ನು ಕಾರಿನಲ್ಲಿ ತಂದು ಬಿಡುವ ಹೆತ್ತವರು ಮಗುವಿನ ಕೆನ್ನೆಗೆ ಮುತ್ತನಿಟ್ಟು, ಕ್ಲಾಸ್ ರೂಂಗೆ ಕಳಿಸುತ್ತಿದ್ದರು. ನೆನಪಾಯಿತು..ನನ್ನ ಯಜಮಾನ್ರಿಗೆ ಸಂಬಳ ಆಗಿಲ್ಲವೆಂದು..ಮಕ್ಕಳಿಗೆ ಪುಸ್ತಕ ತೆಗೆದುಕೊಟ್ಟಿಲ್ಲ. ಹಾಗಾಗಿ ಮಕ್ಕಳನ್ನು ಮುಂದಿನ ವಾರ ಶಾಲೆಗೆ ಕಳಿಸಬೇಕು ಎಂದಿರುವ ಆ ಅಮ್ಮ!
**ಹೊಟೇಲ್ ಎದುರುಗಡೆ ಇರುವ ಆ ಮೆಟ್ಟಿಲ ಮೇಲೆ ನಿಂತು ಆ ಕಪ್ಪು ಕನ್ನಡದ ಹುಡುಗಿ ಸಿಗರೇಟು ಸೇದುತ್ತಿದ್ದಳು, ಗ್ಲಾಸು ತೊಳೆಯುವ ಹುಡುಗ ಪಿಳಿಪಿಳಿಂತ ಆಕೆಯನ್ನೇ ದಿಟ್ಟಿಸುತ್ತಿದ್ದ..ಅವಳ ಕಾರು ಮರೆಯಾಗುವವರೆಗೂ!

**ರಾಶಿ ಹಾಕಿದ ಗೋಣಿಚೀಲಗಳ ಪಕ್ಕ ಕುಳಿತ ಆ ಪುಟ್ಟ ಕಂದಮ್ಮ ಸಿಕ್ಕಿದ್ದನ್ನು ಮೆಲ್ಲುತ್ತಾ, ಎದುರಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡೋ ಮಕ್ಕಳನ್ನು ಆಸೆ ಕಂಗಳಿಂದ ನೋಡುತ್ತಾ!

**ನೆನಪಾಯಿತು..ಪ್ರೀತಿಯ ಗೆಳೆಯ ಹೇಳಿದ ಕಥೆ ...'ಅವಳು ಮದುವೆಯಾಗಿದ್ದಳಂತೆ ಹುಡುಗನ ಸಂಬಳವನ್ನು ಪ್ರೀತಿಸಿ! 'ಸಂಬಳ ಪ್ರೀತಿಸಿದವಳಿಗೆ ' ಬದುಕಿನ ಒಲವು ಅರ್ಥವಾಗಲೇ ಇಲ್ಲವಂತೆ..ಆತನಿನ್ನೂ ಕೊರಗುತ್ತಿದ್ದನಂತೆ ಖಿನ್ನತೆಯಿಂದ....ಸಂಬಳ ಪ್ರೀತಿಗೆ ಬಲಿಯಾಗಿ'!

ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿಳಿದಿದ್ದೆ. ಮೆಜೆಸ್ಟಿಕ್ ಜನಜಂಗುಳಿ, ಕತ್ತಲಾಗುವಾಗ ಕಿತ್ತು ತಿನ್ನೋ ಕಣ್ಣುಗಳು, ಬದುಕೋ ದಾರಿಗಳು, ನಾನು ಬನಶಂಕರಿಯಲ್ಲಿ ರಸ್ತೆ ದಾಟಕ್ಕೆ ಪರದಾಡಿದ್ದು, ಪಾರ್ಕಲ್ಲಿ ಕುಳಿತು ಒಬ್ಬಳೇ ಅತ್ತಿದ್ದು, ಅಮ್ಮನ ನೆನಪಾಗಿ ದಿಂಬು ಒದ್ದೆಯಾಗಿಸಿದ್ದು, ಮನೆಗೆ ಹೋಗ್ತೀನಂತ ಅಣ್ಣ ಜೊತೆ ಜಗಳ ಆಡಿದ್ದು, ಅತ್ತಾಗ ಅವನು ಐಸ್ ಕ್ರೀಂ ಕೊಡಿಸಿದ್ದು, ಬೆಂಗಳೂರಿನ ಇಂಚಿಂಚನ್ನು ಪರಿಚಯ ಮಾಡಿಸಿದ್ದು, ಮೊದಲ ಬಾರಿಗೆ ಸಾನಿಯಾ ಮಿರ್ಜಾನ ಪ್ರೆಸ್ ಮೀಟ್ ಗೆ ಹೋಗಿ ಅರೆಬರೆ ಇಂಗ್ಲೀಷ್ ಬಾರದ ನಾನು ಅವಳ ಇಂಗ್ಲೀಷ್ ಅರ್ಥವಾಗದೆ..ಎಡಿಟರ್ ಜೊತೆ ಬೈಸಿಕೊಂಡಿದ್ದು....ಎಲ್ಲವೂ ನೆನಪಿನ ಪರದೆ ಮೇಲೆ ಸಾಗುತ್ತಲೇ ಇವೆ. ಬದುಕು ಸಾಗುತ್ತಲೇ ಇದೆ..ಮುಂದಕ್ಕೆ. ಬದುಕಿನ ಸತ್ಯ-ಮಿಥ್ಯಗಳನ್ನು ಕಣ್ಣಾರೆ ಕಾಣುತ್ತಾ, ಕೆಲವೊಮ್ಮೆ ಕಂಗಳು ಒದ್ದೆಯಾಗಿಸುತ್ತಾ, ಕೆಲವೊಮ್ಮೆ ಖುಷಿ ಖುಷಿಯಾಗುತ್ತಾ....!!
ಫೋಟೋ: ಎನ್.ಕೆ. ಸುಪ್ರಭಾ

Wednesday, May 27, 2009

'ಅಕ್ಕಾ, ನಮ್ಮಮ್ಮ-ಅಪ್ಪನ ಜಗಳ ನಿನಗೆ ತೊಂದ್ರೆ ಆಯ್ತಾ?'!!

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ..
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ....


ಅಮೃತವರ್ಷಿಣಿ ಚಿತ್ರದ ಸುಂದರ ಗೀತೆ ಮನಸ್ಸನ್ನೇ ಉಯ್ಯಾಲೆಯಾಗಿಸಿತ್ತು. ಹಾಡು ಕೇಳ್ತಾ ಓದೋದು ನನ್ನ ಅಭ್ಯಾಸ..ನನ್ನ ಪುಟ್ಟ ಕೋಣೆಯೊಳಗೆ ಕುಳಿತರೆ ಪಕ್ಕದ ಮನೆಯವರ ಮಾತುಗಳು ಕಿವಿಗೆ ಬೀಳೋ ಸಾಧ್ಯತೆಗಳಿರುವುದರಿಂದ ಜೋರಾಗಿ ಹಾಡು ಹಾಕಿ ಓದ್ತಾ ಇದ್ದೆ. ಕಿಟಕಿ ಬಾಗಿಲು ತೆರದರೆ ಬೀಸೋ ಗಾಳಿ, ಚಲಿಸುವ ಮೋಡಗಳು, ನಿರಭ್ರ ಆಕಾಶ...ಎಲ್ಲವೂ ಮನಸ್ಸಿಗೆ ಮುದ ನೀಡುತ್ತೆ.

ಹಾಗೇ ಓದಲು ಕುಳಿತಿದ್ದರೆ ಪಕ್ಕದ್ಮನೆಯ ಇಬ್ಬರು ಪುಟ್ಟ ಮಕ್ಕಳು ಬಂದು, "ಅಕ್ಕಾ, ನಿಂಗೆ ಓದೋಕೆ ತೊಂದ್ರೆ ಆಯ್ತಾ?' ಅಂತ ಕೇಳಿದಾಗ, 'ಯಾಕೆ ಅಂತ ಕೇಳಿದರೆ?' , ನಮ್ಮ ಅಪ್ಪ-ಅಮ್ಮ ಜಗಳ ಆಡ್ತಾ ಇದ್ದಾರೆ..ನಿಮಗೆ ಕೇಳಿ ಡಿಸ್ಟರ್ಬ್ ಆಯ್ತಾ ಎಂದು ಕೇಳಿದಾಗ ನನಗೆ ಅಚ್ಚರಿ. ನಿಜವಾಗಲೂ ಹಾಡು ಜೋರಾಗಿ ಇಟ್ಟಿದ್ರಿಂದ ನಂಗೆ ಅವರ ಕಿತ್ತಾಟ ಕಿವಿಗೆ ಬೀಳಲಿಲ್ಲ. ಹಾಡು ಆಫ್ ಮಾಡಿದಾಗ...ಹೆಂಡತಿಯೇ ಗಂಡನಿಗೆ ಹೊಡೆಯಿತೋ/ ಅಥವಾ ಗಂಡನೇ ಹೆಂಡತಿಗೆ ಹೊಡೆಯಿತೋ..ಗೊತ್ತಿಲ್ಲ. ಜೋರು ಜಗಳ..ಬೊಬ್ಬೆ ಕೇಳಿಸ್ತಾ ಇತ್ತು. ತುಂಬಾ ಸರಳವಾಗಿರೋ/ ಹಿತ-ಮಿತ ಮಾತಾಡೋ ಪುಟ್ಟ ಕುಟುಂಬ ಅದು. ಮೂವರು ಹೆಣ್ಣು ಮಕ್ಕಳೇ..ದೊಡ್ಡವಳು ಮೊದಲ ಪಿಯುಸಿ. ಇನ್ನೊಬ್ಳು ಆರನೇ ಕ್ಲಾಸು..ಸಣ್ಣವಳು ಯುಕೆಜಿ.

ಯಾಕೋ ಓದೋದು ಬೇಡ ಅನಿಸ್ತು, ಹಾಡು ನಿಲ್ಲಿಸಿದೆ. ಸುಮ್ಮನಾಗಿ ನನ್ನಷ್ಟಕ್ಕೆ ಯೋಚನಾ ಲಹರಿಗಳು ತಲೆಯನ್ನು ಕೊರೆದವು..ಈ ಬದುಕು ಹೀಗ್ಯಾಕೆ?

ಆ ಪುಟ್ಟ ಮಗು..ಇನ್ನೂ ಯುಕೆಜಿ..ಬಾಯಿ ಅಗಲಿಸಿ ನಗೋಕೆ ಬರುತ್ತೆ..ನಿತ್ಯ ಬಂದು ಬೆಳ್ಳಂಬೆಳಿಗ್ಗೆನೇ ಬಂದು ಊಟ ಆಯ್ತಾ? ಎಂದು ಕೇಳಿದಾಗ ಎತ್ತಿ ಮುದ್ದು ಮಾಡಿಬಿಡ್ತೀನಿ..ಅದು ಮತ್ತು ಆರನೆಯ ಕ್ಲಾಸಿನ ಹುಡುಗಿ ಬಂದು ಅಕ್ಕಾ ನಿಂಗೆ ತೊಂದ್ರೆ ಆಯ್ತಾ? ಎಂದಾಗ ಕರುಳು ಚುರ್ರೆಂದಿತ್ತು. ದಿಟ್ಟಿಸಿ ನೋಡುತ್ತಿದ್ದ ಕಣ್ಣುಗಳು, ಕಣ್ಣಲ್ಲಿನ ಹೆದರಿಕೆ, ನಮ್ಮಪ್ಪ-ಅಮ್ಮನ ಜಗಳ ಹೊರಗಿನವರಿಗೆ ಗೊತ್ತಾಯ್ತು ಎಂದಾಗ ಉಂಟಾಗುವ ಮುಜುಗರ ಎಲ್ಲಾವೂ ಆ ಪುಟ್ಟ ಮಕ್ಕಳ ಕಂಗಳಲ್ಲಿ ಸ್ಪಷ್ಟವಾಗುತ್ತಿತ್ತು. ನಿಜವಾಗಲೂ ಆ ಮಕ್ಕಳ ಮುಖ ನೋಡದಾಗ ನನಗರಿವಿಲ್ಲದಂತೆ ಕಂಗಳು ಒದ್ದೆಯಾಗಿದ್ದವು.

ಮುಗ್ಧ, ಪ್ರಾಮಾಣಿಕತೆಯ ಪ್ರತೀಕದಂತಿದ್ದ ಆ ಮುದ್ದು ಕಂದಮ್ಮಗಳ ಜೊತೆ ನಾವೆಷ್ಟು ಸಣ್ಣವರಾಗಿ ವರ್ತಿಸ್ತೀವಿ. ಭವಿಷ್ಯದ ನಗುವಾಗಬೇಕಿದ್ದ ಮಕ್ಕಳ ಬದುಕಿನಲ್ಲಿ ನಗೆಬೆಳದಿಂಗಳು ಕಂಡೀತೇ? ಯಾಕೋ ಮನಸ್ಸಿಗೆ ತೀರ ನೋವಾಯಿತು.

Friday, May 15, 2009

ಗೆಳತಿ ಮತ್ತೆ ಸಿಕ್ಕಾಗ ....

ಆಫೀಸ್ ನಲ್ಲಿ ಬಂದು ಕುಳಿತಾಗ ಚಡಪಡಿಕೆ, ಅಳು ಉಕ್ಕಿ ಬರುತ್ತಿತ್ತು. ನನ್ನ ಸಿಸ್ಟಮ್ ಎದುರು ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದೆ...ಅಮ್ಮನ ಮಡಿಲ ಬಿಟ್ಟು ಬಂದಂಗೆ! ಕಾರಣ ಬಸ್ಸಲ್ಲಿ ಬರುವಾಗ ನನ್ನ ಪ್ರೀತಿಯ ಗೆಳತಿಯನ್ನು ಕಳೆದುಕೊಂಡಿದ್ದೆ!! ಅವಳು ಬೇರಾರೂ ಅಲ್ಲ, ನನ್ನ ಡೈರಿ..ಹೆಸರು ಜನನಿ! ಎರಡು ವರ್ಷಗಳ ಹಿಂದೆ ಹೊಸದಿಗಂತ ಪತ್ರಿಕೆಯಲ್ಲಿರುವಾಗ ನನ್ನ ಸೀನಿಯರ್ ಸರ್ ಒಬ್ರು ನಂಗೆ ತುಂಬಾ ಚೆಂದದ ಡೈರಿ ಪುಸ್ತಕ ತಂದುಕೊಟ್ಟಿದ್ದರು. ಅದಕ್ಕೆ ಜನನಿ ಎಂದು ಹೆಸರಿಟ್ಟು, ನಾನು ಓದಿರುವ, ನನಗೆ ಇಷ್ಟವಾದ ಎಲ್ಲಾ ವಿಷಯಗಳನ್ನು ಅದರಲ್ಲಿ ಬರೆದಿಡುತ್ತಿದ್ದೆ. ಬಸವಣ್ಣನ ವಚನ, ಮಂಕುತಿಮ್ಮನ ಕಗ್ಗ, ರಸ್ಕಿನ್ ಬಾಂಡ್ ಕವನ ಸಾಲುಗಳು, ಬೇಂದ್ರೆ, ಕುವೆಂಪು, ನಿಸಾರ್, ಕೆ.ಎಸ್.ಎನ್, ಗೌರೀಶ ಕಾಯ್ಕಿಣಿ ಸಾಹಿತ್ಯ ವಿಮರ್ಶೆಯ ಸಾಲುಗಳು, ಲಂಕೇಶ್...ಹೀಗೆ ಕಳೆದ ಎರಡು ವರ್ಷದಲ್ಲಿ ಓದಿದ ಎಲ್ಲಾ ವಿಷಯಗಳನ್ನು ಬರೆದಿಡುತ್ತಿದ್ದೆ.

ನನ್ನದೊಂದು ಅಭ್ಯಾಸ ಎಂದ್ರೆ ಎಲ್ಲೇ ಹೋದ್ರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಳ್ಳುವುದು..ಕಣ್ಣಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಳ್ಳುವುದು. ಹಾಗೇ ನಿನ್ನೆ ಶುಕ್ರವಾರ ನನ್ನ ಬ್ಯಾಗ್ ನಲ್ಲಿ ಅದು ತುಂಬದಾಗ ಕೈಯಲ್ಲಿ ಹಿಡಿದುಕೊಂಡೇ ಬಸ್ಸು ಹತ್ತಿದ್ದೆ. ಅದೇನಾಯ್ತೋ ಇಳಿಯುವಾಗ ಮರೆತೇಬಿಟ್ಟೆ. ನನ್ನ ಒಂದು ಪುಟ್ಟ ವಸ್ತು ಕೂಡ ಕಳೆದುಹೋಗದ ಹಾಗೇ ಜೋಪಾನವಾಗಿಡೋಳು ನಾನು. ಛೇ! ಕಳೆದುಹೋಯ್ತಲ್ಲಾ..ಅಂದಾಗ ನಿಜವಾಗಲೂ ನನಗೆ ದುಃಖ ತಡೆಯಲಾಗಲಿಲ್ಲ. ನನ್ನ ಕಲೀಗ್ಸ್ 'ಚಿತ್ರಾ ಸಿಕ್ರೂ ಸಿಗಬಹುದು..ಚಿಂತೆ ಮಾಡಿ ಪ್ರಯೋಜನವಿಲ್ಲ' ಅಂತ ಸಮಾಧಾನ ಹೇಳುತ್ತಿದ್ರು. ಮನೆಯಲ್ಲಿ ನಿಂಗೆ ತಲೆಯಲ್ಲಿ ಏನು ತುಂಬಿಕೊಂಡಿತ್ತು ಅಂತ ಬೈದುಬಿಟ್ರು. ಗೆಳೆಯನೊಬ್ಬ ನೀನು ಚೆಂದದ ಹುಡುಗ್ರನ್ನು ನೋಡಿ ಮರೆತುಬಿಟ್ಟಿದ್ದಿ ಅಂತ ತಮಾಷೆ ಮಾಡಿದಾಗ ಕೆಟ್ಟ ಸಿಟ್ಟಿನಿಂದ ಅವನಿಗೆ ಎದುರುತ್ತರ ಕೊಟ್ಟಿದ್ದೆ. ಆಫೀಸ್ ನಲ್ಲಿ ಕುಳಿತವಳು ಎರಡೆರಡು ಸಲ ಬಸ್ ಸ್ಟಾಂಡಿಗೆ ಹೋಗಿ ಕಾದಾಗಲೂ ಆ ಬಸ್ಸನ್ನು ಪತ್ತೆ ಹಚ್ಚಲಾಗಲಿಲ್ಲ. ಕಥೆ ಮುಗಿದೇ ಹೋಯ್ತು ಅಂದುಕೊಂಡೆ. ರಾತ್ರಿ ಇಡೀ ಅದೇ ಗೆಳತಿಯ ಚಿಂತೆ,,,,,

ಇಂದು ಬೆಳಿಗ್ಗೆ ಏಳೂವರೆಗೆ ಬಂದು ಅದೇ ಬಸ್ ಸ್ಟಾಂಡಿನಲ್ಲಿ ಕುಳಿತೆ. ಎಂಟೂವರೆ ತನಕವೂ ಬಸ್ಸು ಬರಲಿಲಲ್ಲ. ಆದ್ರೂ ಸಿಗುತ್ತೇನೋ ಅನ್ನೋ ಭರವಸೆ. ಎಂಟು ಮುಕ್ಕಾಲಿಗೆ ಬಸ್ಸು ಬಂದುಬಿಡ್ತು..ಒಟ್ಟೊಟ್ಟಿಗೆ ಮೂರು ಬಸ್ಸುಗಳು ಬಂದಾಗ ಆ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆಟೋ ಹತ್ತಿ ಬಸ್ಸನ್ನು ಹಿಂಬಾಲಿಸಿದೆ. ಸಿಗ್ನಲ್ ನಲ್ಲಿ ಬಸ್ಸು ನಿಂತಿತ್ತು. ಅಟೋ ಬಿಟ್ಟು ಬಸ್ಸು ಹತ್ತಿದಾಗ ಚಾಲಕನ ಎದುರುಗಡೆ ನನ್ನ ಜನನಿ ನಗುತ್ತಿದ್ದಾಳೆ! ಸ್ವರ್ಗಕ್ಕೆ ಮೂರೇ ಗೇಣು...ಖುಷಿಯೋ ಖುಷಿ. ಆ ಖುಷಿಯಲ್ಲಿ ಚಾಲಕರತ್ರ ನನ್ನ ಪುಸ್ತಕ ಕೊಡ್ತೀರಾ ಅಂತ ಕೇಳೋಕು ಮರೆತುಹೋಗಿ ಸುಮ್ನೆ ನಿಂತುಕೊಂಡು ನೋಡ್ತಾನೆ ಇದ್ದೆ.

"ಏನಮ್ಮ ನೋಡ್ತಾ ಇದ್ದೀಯಾ?'

"ಅಂಕಲ್, ಆ ಪುಸ್ತಕ ಕೊಡ್ತೀರಾ?"

"ಯಾಕೆ ಅದು ನನ್ನ ಪುಸ್ತಕ ಕಣಮ್ಮಾ"

"ಇಲ್ಲ ಅಂಕಲ್, ನಿನ್ನೆ ನಾನು ಮರೆತುಬಿಟ್ಟುಹೋಗಿದ್ದೆ"

"ಇಲ್ಲಮ್ಮಾ..ಇದು ನನ್ನ ಮಗನ ನೋಟ್ ಬುಕ್. ಕೊಡಕ್ಕಾಗಲ್ಲ. ಅದ್ರಲ್ಲಿ ಒಳ್ಳೊಳ್ಳೆ ಕವನಗಳು, ಬಸವಣ್ಣನ ವಚನಗಳು, ಪ್ರೇಮಕವನಗಳು, ಮಂಕುತಿಮ್ಮನ ಕಗ್ಗದ ಸಾಲುಗಳಿವೆ. ನನ್ನ ಮಗ ಬರೆದಿಟ್ಟಿದ್ದು ಕೊಡಕ್ಕಾಗಲ್ಲ"

ನಂಗೆ ನಗು ಬಂದು, ಜೋರಾಗಿ ನಕ್ಕುಬಿಟ್ಟೆ.

"ನೋಡಮ್ಮಾ..ನಾನು ಈ ಪುಸ್ತಕ ಕೊಡಬೇಕಾದ್ರೆ ನಂಗೆ ನೀನು ಟಿಫನ್ ಕೊಡಿಸಬೇಕು. ಹಾಗಾದ್ರೆ ಮಾತ್ರ ಕೊಡ್ತೀನಿ" ಅಂದಾಗ

"ಆಯ್ತು ಅಂಕಲ್..ಹೊಟೇಲ್ ತಿಂಡಿ ಬೇಡ..ನಮ್ಮನೆಯಿಂದ ನೀರು ದೋಸೆ ಮಾಡಿ ತಂದುಕೊಡ್ತೀನಿ"

"ಮಂಗ್ಳೂರು ಹುಡುಗಿನಾ ನೀನು..ಆಯ್ತಮ್ಮ..ತಕೋ ನಿನ್ನ ಪುಸ್ತಕ. ನಾವೆಲ್ಲಾ ಓದಿ ಖುಷಿಪಟ್ವಿ. ತುಂಬಾ ಚೆನ್ನಾಗ್ ಬರೆದಿದ್ದೀಯಾ. ಗುಡ್" ಎಂದು ಬಸ್ಸಿನಲ್ಲಿದ್ದವರನ್ನೆಲ್ಲಾ ನಗೆಯ ಕಡಲಲ್ಲಿ ಮುಳುಗಿಸಿ ಆ ಪುಸ್ತಕ ನನ್ನ ಕೈಗಿತ್ತರು. ಅಷ್ಟೇ ಅಲ್ಲ, ಆ ನಿರ್ವಾಹಕ ಅಂಕಲ್ ಅದೇಂಗೆ ಬಾಯಿಪಾಠ ಮಾಡಿಕೊಂಡಿದ್ರೋ ..ಆ ಪುಸ್ತಕದಲ್ಲಿದ್ದ ಪ್ರೇಮ ಕವನದ ಕೆಲ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ಬಸ್ಸಿನಲ್ಲಿದ್ದವರನ್ನೆಲ್ಲಾ ನಗಿಸುತ್ತಿದ್ರು. ಬೆಳಿಗ್ಗೆ ಶಿವಾಜಿನಗರದಿಂದ ಹೊರಡುವ ಶಿವಾಜಿನಗರ-ಕೋರಮಂಗಲ ಕೆಎ-01, ಎಫ್ ಎ-544 ನಂಬರ್ ಬಸ್ಸಿನ ಚಾಲಕ ಬಿಳಿ ಗಡ್ಡದ ಅಂಕಲ್ ಮತ್ತು ನಿರ್ವಾಹಕ ಅಂಕಲ್ ಕುರಿತು ಹೆಮ್ಮೆ ಅನಿಸ್ತು. ಥ್ಯಾಂಕ್ಯೂ ಅಂಕಲ್.....!! ನಿಜಕ್ಕೂ ನಾನೆಷ್ಟು ಖುಷಿಪಟ್ಟೆ ಗೊತ್ತಾ?

Thursday, May 14, 2009

'ಪಿಂಕು, ಇವತ್ತು ನನ್ನ ಹುಟ್ಟುಹಬ್ಬನಾ?'

ಐದು ವರುಷಗಳ ಹಿಂದಿನ ಘಟನೆ. ನಾನಾಗ ಪ್ರಥಮ ಬಿಎ. ತೋಚಿದ್ದನ್ನು ಗೀಚೋ ಗೀಳು. ಹೆಚ್ಚು-ಕಡಿಮೆ ಎಲ್ಲಾ ಕನ್ನಡ ಪತ್ರಿಕೆಗಳು, ವಾರಪತ್ರಿಕೆಗಳಲ್ಲೂ ನಾನು ಬರೆದ ಪುಟ್ಟ ಬರಹಗಳು ಪ್ರಕಟವಾಗುತ್ತಿದ್ದವು. ಈ ಗೀಚಾಟಕ್ಕೆ ಬಲಿಯಾಗಿ ನನ್ನ ಮೊದಲ ಚುಟುಕು ಕವನ ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಮೆಚ್ಚಿ ಪತ್ರ ಬರೆದವರಲ್ಲಿ ಮೊದಲಿಗರು ಜಗ್ಗಣ್ಣ. ಪುಟ್ಟ ಪೋಸ್ಟ್ ಕಾರ್ಡೊಂದರಲ್ಲಿ ನನಗೆ ಬರೆದ ನಾಲ್ಕು ಸಾಲಿನ ಪತ್ರ ಭಾಳ ಇಷ್ಟವಾಗಿಬಿಡ್ತು. ಆಮೇಲೆ ನನ್ನ ಪ್ರತಿ ಬರಹಗಳು ಪ್ರಕಟವಾದಗಲೂ ಅವರು ಪತ್ರ ಬರೆಯುತ್ತಿದ್ದರು.

ಆಗ ನನಗೆ ಪತ್ರದ ಗೀಳು ಕೂಡ ಜಾಸ್ತಿ. ಯಾರೇ ಪತ್ರ ಬರೆದ್ರೂ ಅದಕ್ಕೆ ಪುಟ್ಟ ಕಾರ್ಡೊಂದರಲ್ಲಿ ಕೃತಜ್ಞತೆ ಹೇಳಿಬಿಡೋದು. ಜಗ್ಗಣ್ಣನಿಗೂ ಹಾಗೇ ಮಾಡುತ್ತಿದ್ದೆ. ನಾನು ಅವರಿಗೆ ಬರೆದ ಕಾರ್ಡು ಅವರ ಮನೆಯಲ್ಲಿ ಸಾರ್ವಜನಿಕ ಪ್ರದರ್ಶನ ಆದ ಮೇಲೆ ಜಗ್ಗಣ್ಣನ ಕೈಗೆ ಸೇರುತ್ತಿತ್ತು. ಆಗ ಜಗ್ಗಣ್ಣ ನಂಗಿಟ್ಟ ಹೆಸರು 'ಪಿಂಕು'. ಪರಸ್ಪರ ಮುಖ ಪರಿಚಯವಿಲ್ಲದ ಪತ್ರ ಮೈತ್ರಿ ಒಂದೂವರೆ ವರ್ಷ ಸಾಗಿತು. ನಮ್ಮ ಹಾಸ್ಟೇಲಿನ ಅಡುಗೆಕೋಣೆಯಿಂದ ಹಿಡಿದು ಕಾಲೇಜಿನ ಕಾರಿಡಾರ್ ತನಕವೂ ಜಗ್ಗಣ್ಣ ಯಾರೂಂತ ಕುತೂಹಲ! ಆದ್ರೂ ನಾ ಫೋನಲ್ಲಿ ಕೂಡ ಮಾತನಾಡಿರಲಿಲ್ಲ. ಫೋನ್ ನಂಬರು ಎಷ್ಟೇ ಕೇಳಿದ್ರೂ ಕೊಡಲಿಲ್ಲ. ನನಗೆ ಸಂಶಯ ಬರತೊಡಗಿತ್ತು..ಯಾವಾಗ ಪತ್ರ ಬರೆದ್ರೂ ಅದರಲ್ಲಿ ಉಜಿರೆ ಪೋಸ್ಟ್ ಆಫೀಸ್ ನ ಸೀಲ್ ಬೀಳ್ತಾ ಇತ್ತು. ಹಾಗಿರುವಾಗ ಈತ ನಮ್ಮ ಕಾರಿಡಾರಲ್ಲೇ ಇದ್ದಾನೆ ಅನಿಸಿತು. ಆದ್ರೂ ಪತ್ರದಲ್ಲಿ ಬಿಡದೆ ಕಾಡುತ್ತಿದ್ದ ನನಗೆ, ಪಿಂಕು ನನ್ನ ಗೆಳೆಯನ ಜೊತೆ ಪತ್ರ ಕೊಟ್ಟು ಕಳಿಸ್ತೀನಿ..ಅದಕ್ಕೆ ಅದ್ರಲ್ಲಿ ಉಜಿರೆಯ ಸೀಲ್ ಬೀಳೋದು ಅಂತ ತಪ್ಪಿಸಿಕೊಳ್ಳುತ್ತಿದ್ರು.

ಕೊನೆಗೆ ಪೀಡಿಸಿ, ಕಾಡಿ, ಬೇಡಿ ನಂಬರು ಕೊಟ್ರು. ಮೊದಲೇ ರಚ್ಚೆ ಹಿಡಿದ್ರೆ ಬಿಡೋಳು ನಾನಲ್ಲ. ಸೆಂಟಿಮೆಂಟಲ್ಲಾಗಿ ಬರೆದು ಮೊಬೈಲ್ ನಂಬರು ಗಿಟ್ಟಿಸಿಕೊಂಡೆ. ಸಿಕ್ಕ ತಕ್ಷಣ ಫೋನ್ ಮಾಡಿದ್ರೆ , 'ಧ್ವನಿ ಎಲ್ಲೊ ಕೇಳಿದಂಗೆ ಇದೆ'!! ಆದ್ರೂ ಗೊತ್ತಾಗಲಿಲ್ಲ. ಕೊನೆಗೆ ಒಂದು ದಿನ ಪತ್ರ ಬರೆದು 'ಜಗ್ಗಣ್ಣ ನಿಂಗೆ ನಿಜವಾಗ್ಲೂ ತಂಗಿ ಮೇಲೆ ಪ್ರೀತಿಯಿದ್ರೆ ನನ್ನ ಮುಖತಃ ಭೇಟಿಯಾಗು. ಇಲ್ಲಾಂದ್ರೆ ಇಂದಿಗೆ ಪತ್ರ ಕೊನೆ" ಅಂತ ಹೇಳಿದೆ. ಏನೂ ಮಾಡಿದ್ರೂ ನನ್ನ ಹಠ ಬಿಡಲಿಲ್ಲ..ಕೊನೆಗೆ ಸೋತು ಒಪ್ಪಿಕೊಂಡ ಮಹಾಶಯ. ಕಾಲೇಜು ಪಕ್ಕ ಇರುವ ಪೋಸ್ಟ್ ಆಫೀಸು ಪಕ್ಕ ಬಾ. ನಾನು ಆಕಾಶ ನೀಲಿ ಶರ್ಟ್ ಧರಿಸಿದ್ದೇನೆ. ನಿನ್ನನ್ನು ನಾನೇ ಪತ್ತೆ ಹಚ್ಚುತ್ತೇನೆ ಎಂದಿದ್ದರು! ಆವಾಗಲೇ ಒಂದು ರೌಂಡ್ ಬೆವರು ಇಳಿದಿತ್ತು. ಛೇ! ದಿನಾ ಮಾತನಾಡುವವರೇ ಜಗ್ಗಣ್ಣ ಆದ್ರೆ? ಅಂತ ಅಂಜಿಕೆ ಬೇರೆ.

ಅಂದು ಮಧ್ಯಾಹ್ನ ಹನ್ನೆರಡೂವರೆ ಗಂಟೆ. ಹಾಸ್ಟೇಲಿನಿಂದ ಹಿಡಿದು ಕ್ಲಾಸ್ ತನಕವೂ ಎಲ್ಲರ ಜೊತೆ ಹೇಳಿದ್ದೆ ಜಗ್ಗಣ್ಣ ಸಿಗ್ತಾರೆ ಅಂತ. ಹಾಗೇ ಎಲ್ರಿಗೂ ಕುತೂಹಲ. ಒಂದೇ ಒಂದು ಕನ್ನಡ ಕ್ಲಾಸಿಗೆ ಚಕ್ಕರ್ ಹಾಕಿದವಳಲ್ಲ. ಅಂದು ನಾಗಣ್ಣ ಸರ್ ಕ್ಲಾಸಿಗೆ ಬಂಕ್ ಹೊಡೆದೆ. ಸರ್ ಬಂದವ್ರೆ ಚಿತ್ರಾ ಕಾಣ್ತಿಲ್ಲ ಎಂದಾಗ ಹುಡುಗೀರು ಗೊಳ್ಳೆಂದು ನಕ್ಕಿದ್ರಂತೆ. ಜಗ್ಗಣ್ಣನ್ನು ನೋಡಬೇಕೆಂದು ಕುತೂಹಲದಿಂದ ಪೋಸ್ಟ ಆಫೀಸು ಬಳಿ ಹೋಗಿ ಕಾದು ನಿಂತಾಗ..ಆಕಾಶನೀಲಿ ಶರ್ಟ್ ಹಾಕಿದ ವ್ಯಕ್ತಿಯನ್ನು ನೋಡಿ ಭೂಮಿ ಬಾಯಿಬಿಟ್ಟು ನನ್ನ ನುಂಗಬಾರದೆ ಅನಿಸ್ತು. ಮುಖಕ್ಕೆ ಬಾರಿಸಿದ ಹಾಗೆ...ನನ್ನ ಸಿಟ್ಟನ್ನೆಲ್ಲಾ ಹೊರತೆಗೆದು ಬೈದುಬಿಟ್ಟು ವಾಪಾಸ್ ಬಂದೆ!

ಜಗ್ಗಣ್ಣ ಬೇರೆ ಯಾರೂ ಆಗಿರಲಿಲ್ಲ..ಅದೇ ಪೋಸ್ಟ ಆಫೀಸ್ ನಲ್ಲಿದ್ರು. ನಿತ್ಯ ನಾನು ಅವರಿಗೆ ಲೆಟರ್ ಬರೆದು ಅವರ ಕೈಯಲ್ಲೇ ಪೋಸ್ಟ ಮಾಡಕೆ ಕೊಡುತ್ತಿದ್ದೆ. ಕಾರ್ಡು ತೆಗೆದುಕೊಳ್ಳುವಾಗಲೆಲ್ಲಾ ಸುಮ್ಮನೆ ನಕ್ಕು ನನ್ನ ಕೈಯಿಂದ ಕಾರ್ಡ್ ತಕೋತಾ ಇದ್ರು. ಆದ್ರೂ ಅವ್ರ ಮೇಲೆ ನಂಗೆ ಡೌಟು ಬರಲಿಲ್ಲ. ನಾನು ಅವರಿಗೆ ಪೋಸ್ಟ ಮಾಡುತ್ತಿದ್ದ ಕಾರ್ಡನ್ನು ಅವರೇ ಕಿಸೆಗೆ ತುಂಬಿಕೊಂಡು ಮನೆಯಲ್ಲಿ ಎಲ್ಲರೆದುರು ಓದಿ ಮಜಾ ಮಾಡುತ್ತಿದ್ರಂತೆ!

ಮತ್ತೆ ಮರುದಿನ ಹೋಗಿ ಜಗ್ಗಣ್ಣ ಕ್ಷಮಿಸಿ ಅಂತ ಹೇಳಿದೆ. ಆಮೇಲೆ ಒಂದೂವರೆ ವರ್ಷ ಜಗ್ಗಣ್ನನ ಜತೆಗಿದ್ದೆ. ಕೇವಲ ನನಗೆ ಮಾತ್ರವಲ್ಲ ನಮ್ಮ ಹಾಸ್ಟೇಲ್ ಹುಡುಗಿಯರಿಗೆಲ್ಲ ಜಗ್ಗಣ್ಣನೇ ಆಗಿದ್ರು. ಅವರು ಮೊದಲ ಬಾರಿ ನನ್ನ ಹುಟ್ಟುಹಬ್ಬಕ್ಕೆ ಕೊಟ್ಟ ಸಿಲ್ವರ್ ಕಲರ್ ವಾಚ್ ಈಗಲೂ ನನ್ನ ಕೈಯಲ್ಲಿದೆ. ಕೊನೆಗೆ ಬೆಂಗಳೂರಿಗೆ ಬರುವಾಗಲೂ ನನ್ನ ಕರೆದುಕೊಂಡು ಬಂದಿದ್ದು ಜಗ್ಗಣ್ಣನೇ! ಈಗ ಜಗ್ಗಣ್ಣ ನಮ್ಮಮ್ಮಂಗೂ ಮಗ ಆಗಿಬಿಟ್ಟಿದ್ದಾರೆ. ಎನಿಸಿಕೊಂಡಾಗ ತುಂಬಾ ಖುಷಿ ಆಗುತ್ತೆ. ಹಳೆಯದನ್ನೆಲ್ಲಾ ನೆನೆಸಿಕೊಂಡು ದಿನಾ ನಗುತ್ತಿರುತ್ತಾರೆ. ಮೊನ್ನೆಮೊನ್ನೆ ಬೆಂಗಳೂರಿಗೆ ಬಂದು ಒಂದು ವಾರ ಇದ್ದು ಹೋಗಿದ್ರು.

ಈ ಘಟನೆ ಬರೆದಿದ್ದು ಯಾಕಂದ್ರೆ ಮೇ.13ಕ್ಕೆ ಜಗ್ಗಣ್ಣನ ಹುಟ್ಟುಹಬ್ಬ.ತಮಾಷೆ ಅಂದ್ರೆ ಅವರ ಹುಟ್ಟುಹಬ್ಬ ಅವರಿಗೆ ನೆನಪೇ ಇರಕ್ಕಿಲ್ಲ. ನಿನ್ನೇ ಹಾರೈಕೆ ಹೇಳೋಣ ಅಂತ ಫೋನು ಮಾಡಿದ್ರೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ಸ್ಟಾಂಡಿನಲ್ಲಿ ನಿಂತುಕೊಂಡು , 'ಪಿಂಕು ನನ್ನ ಹುಟ್ಟಿದ ದಿನ ಮರೆತೇಹೋಗಿತ್ತು ಮಾರಾಯ್ತಿ' ಅಂತ ಜೋರಾಗಿ ನಗುತ್ತಿದ್ದಾರೆ! ಆಶ್ಚರ್ಯ ಎಂದ್ರೆ ನನ್ನ ಪರಿಚಯ ಆದಾಗಿನಿಂದ ಅವರ ಹುಟ್ಟಿದ ದಿನವನ್ನು ನಾನೇ ನೆನಪಿಸುತ್ತಿದ್ದೇನೆ. ಯಾವಾಗ ನೋಡಿದ್ರೂ ಅಣ್ಣಂದಿರ ಬಗ್ಗೆನೇ ಹೇಳ್ತಾಳೆ ಅಂತ ಬೋರ್ ಅನಿಸ್ತಾ..??ಸಾರೀ..ನಂಗೆ ಹೇಳದೆ ಇರಕ್ಕಾಗದು..ಅಣ್ಣಂದಿರು ಅಂದ್ರೆ ನಂಗೆ ಅಮ್ಮ ಥರ!
ಪ್ರೀತಿಯ ಜಗ್ಗಣ್ಣ..ನಿನಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು.
ಹುಲ್ಲಾಗು ಬೆಟ್ಟದಡಿ..ಮನೆಗೆ ಮಲ್ಲಿಗೆಯಾಗು...
ಪಿಂಕಿಗೆ ಯಾವಾಗಲೂ ಪ್ರೀತಿಯ ಅಣ್ಣನಾಗು..
ಸವಿಹಾರೈಕೆಗಳು..

Wednesday, April 29, 2009

ಇಂದಲ್ಲ ನಾಳೆ ಹೊಸ ಭಾನು ತೆರೆದೀತು...!

ಅಂದು ಅಮ್ಮ ಬೆಳ್ಳಂಬೆಳಿಗ್ಗೆ ಬೈದುಬಿಟ್ರು. ಹೆತ್ತ ಮಗಳು ಬೆಂಗಳೂರಿನಲ್ಲಿ ದುಡಿಯಾಕೆ ಶುರುಮಾಡಿ ವರ್ಷಗಳು ಸರಿದ್ರೂ ಕಿವಿಯಲ್ಲಿ ಮಿನುಗೋ ಓಲೆಗಳಿಲ್ಲ ಅಂತ ಅಮ್ಮನ ಹುಸಿಮುನಿಸು. ಹ್ಞಾಂ..ಮೊನ್ನೆ ಮೊನ್ನೆ ನನ್ನ ಆತ್ಮೀಯ ಗೆಳೆಯನೊಬ್ಬ 'ಎಂಥ ಮಾರಾಯ್ತಿ..ನಾ ಹುಟ್ಟಿ 25 ವರ್ಷ ಆಯಿತು, ಕೆಲಸಕ್ಕೆ ಸೇರಿ ಎರಡು ವರ್ಷ ಆಯಿತು. ನನಗಾಗಿ ಮಣ್ಣಂಗಟ್ಟಿಯೂ ಮಾಡಿಟ್ಟಿಲ್ಲ. ಅಮ್ಮಂಗೇನೂ ಕೊಡಿಲ್ಲ ಚಿತ್ರಾ' ಅಂತ ಗಳಗಳನೆ ಅತ್ತು ವಾರವಿಡೀ ಅದನ್ನೇ ಯೋಚಿಸಿ ತಲೆಕೆಡಿಸಿಕೊಂಡಿದ್ದ. ಭಾವಗೀತೆಗಳ ಜೊತೆ ಮಾತನಾಡುವ ಆತನಿಗೆ ಭಾವಗೀತೆಗಳೂ ಮುದ ನೀಡಲಿಲ್ಲ. ತಲೆತುಂಬಾ ಆಕಾಶ ತಲೆಮೇಲೆ ಬಿದ್ದಂಗೆ ಚಡಪಸುತ್ತಿದ್ದ. ಬರೋ ಕ್ಷಣಗಳನ್ನು ಪ್ರೀತಿಯಿಂದ ಸ್ವಾಗತಿಸದೆ, ಇರೋ ಪುಟ್ಟ ಖುಷಿಯ ಕ್ಷಣವನ್ನು ಕಳೆದುಕೊಳ್ಳೋದಕ್ಕೆ ಇದೊಂದು ಪುಟ್ಟ ಉದಾಹರಣೆ ಅಲ್ವೇ? ಇಂಥ ಸಾವಿರಾರು ತುಣುಕುಗಳು ಒಂದರ ಮೇಲೊಂದರಂತೆ ನನ್ನ ಮನದ ಪರದೆ ಮೇಲೆ ಹಾದುಹೋಗುತ್ತಲೇ ಇರುತ್ತವೆ.

ಪ್ರೀತಿಸಿದ ಹುಡುಗ/ಹುಡುಗಿ ಕೈ ಕೊಟ್ಟು ಹೋದಾಗ ಕೊರಗಿ ಕೊರಗಿ ಕಣ್ಣೀರಾಗ್ತೀವಿ. ಜೀವನದ ಜಂಜಾಟಗಳಲ್ಲಿ ಬಳಲಿ ಬೆಂಡಾಗಿ ಕತ್ತಲ ಕೂಪದಲ್ಲೇ ಮಲಗಿಬಡ್ತೀವಿ. ಹೆತ್ತು-ಹೊತ್ತು ಬೆಳೆಸಿದ ಅಪ್ಪ-ಅಮ್ಮ ನಮಗಾಗಿ ಕಷ್ಟದ ಕೋಡಿಯಲ್ಲೇ ಕೈ ತೊಳೆಯುವಾಗ ನಾ ಬದುಕಿದ್ದು ಪ್ರಯೋಜನ ವಿಲ್ಲಾಂತ ನಿರಾಶಾರಾಗ್ತೀವಿ. ಜೀವನ ಪರ್ಯಂತ ಜೊತೆಗಿರ್ತೀನಿ..ನಿನ್ನ ನೋವು-ನಲಿವಿನಲ್ಲೂ ನನ್ನ ಕಣ್ಣು ಪಾಲು ಪಡೆಯುತ್ತೆ ಎಂದ ಚಡ್ಡಿ ದೋಸ್ತ ದೂರಾದಾಗ ನಾ ನಿನ್ನ ಬಿಟ್ಟು ಹೇಗಿರಲಿ? ಎನ್ನುತ್ತಾ ಕೊರಗಿ ಕೊರಗಿ ಸುಣ್ಣವಾಗ್ತೀವಿ. ಒಂಟಿತನವನ್ನು ನೆನೆನೆನೆದು ದಿಂಬು ಒದ್ದೆಯಾಗಿಸ್ತೀವಿ.

ಪರೀಕ್ಷೆಯಲ್ಲಿ ಫೇಲ್ ಆದಾಗ..ಇದೇ ನನ್ನ ಜೀವನದ ಕೊನೆಯ ಮೆಟ್ಟಿಲು ಎಂದುಕೊಳ್ತೀವಿ. ಪುಟ್ಟ ತಪ್ಪಿಗಾಗಿ ಬಾಸ್ ಬೈದಾಗ ಆ ಕುರಿತು ರಾತ್ರಿಯಿಡೀ ತಲೆಕೆಡಿಸಿಕೊಂಡು ತಲೆ ಹಾಳು ಮಾಡಿಕೊಳ್ತೀವಿ. ತಂಗಿ-ಅಕ್ಕಂದಿರ ಮದುವೆ ಆಗಿರದಿದ್ರೆ ಛೇ! ನನ್ನ ಜವಾಬ್ದಾರೀನ ನಿರ್ವಹಿಸಿಲ್ಲ ಅಂದುಕೊಂಡು ನಮ್ಮೊಳಗೇ ದುಃಖಿಸ್ತೀವಿ. ಬೆಂಗಳೂರಿಗೆ ಕಾಲಿಟ್ಟು ವರ್ಷ ಸರಿದರೂ ನಯಾಪೈಸೆ ಸಂಪಾದಿಸಿಲಲ್ಲ, ನಮ್ಮ ಗೆಳೆಯ ಓಡಾಡೋ ಹಾಗೇ ಕಾರಲ್ಲಿ ಓಡಾಡೋ ಕನಸು ಕೈಗೂಡಿಲ್ಲ ಎನ್ನುತ್ತಾ ನಮ್ಮ ಬಗ್ಗೆನೇ ಜಿಗುಪ್ಸೆ ನಮಗೆ.

ಪುಟ್ ಪಾತ್ ನಲ್ಲಿ ಕಂಕುಳಲ್ಲಿ ಮಗುವನ್ನಿಟ್ಟುಕೊಂಡು ಚಿಲ್ಲರೆ ಹಣಕ್ಕಾಗಿ ಕೈಯೊಡ್ಡಿ ನಿಲ್ಲುವ ಕನಸುಗಳೇ ಬತ್ತಿ ಹೋದ ಕಂಗಳ ಹೆಣ್ಣನ್ನು ಕಂಡಾಗ, ಸಿಗ್ನಲ್ ಆನ್ ಆದ್ರೂ ವೇಗದಿಂದ ಚಲಿಸುವ ವಾಹನಗಳ ಮಧ್ಯೆ ಅಡ್ಡಾದಿಡ್ಡಿಯಾಗಿ ಓಡುವ ಹುಚ್ಚನನ್ನು ಕಂಡಾಗ, ಬೀದಿ ಬದಿಯಲ್ಲಿ ಅಪಘಾತ ಆದ್ರೂ ತಿರುಗಿ ನೋಡದೆ ಹೋಗೋರನ್ನು ಕಂಡಾಗ, ಅಯ್ಯೋ ಇದೇನಪ್ಪಾ ಬದುಕು..ಬೆಂಗಲೂರೇ ಬೇಡ ಅನ್ನುವಷ್ಟು ಮನಸ್ಸು ಮುದುಡಿಬಿಡುತ್ತೆ. ಹೀಗೇ ಪುಟ್ಟ ಕ್ಷಣಗಳನ್ನು ಕಳೆದುಕೊಂಡು ನಿರಾಶೆಯ ನಿಶೆಯನ್ನು ಅಪ್ಪಿಕೊಂಡು ಜೀವನವಿಡೀ ನಾ ಉದ್ದಾರವಾಗೊಲ್ಲ ಅಂದುಕೊಂಡುಬಿಡ್ತೀವಿ.

ಹೌದು, ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ತಲೆ ಹಾಕದೆ ಅಂತೇಳಿ ಯೋಚಿಸುತ್ತಿರುವಾಗಲೇ ನನಗೆ ಈ ವಿಷ್ಯ ಸಿಕ್ಕಿಬಿಡ್ತು. ಇದ್ದ ಕ್ಷಣವನ್ನು ಅನುಭವಿಸದೆ, ಇಲ್ಲದಕ್ಕೆ ಕೊರಗೋದನ್ನು ಬಹುಶಃ ನಾನೂ ಹಾಗೇ ಮಾಡ್ತಾ ಇರ್ತೀನಿ. ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ಕ್ಷಣದಲ್ಲಿ ನಿರಾಶೆಯ ಭಾವ ಹತ್ತಿಬಿಡುತ್ತೆ. ಆಂಗ್ಲ ಕವಿ ಡಗ್ನಸ್ ಮಲೋಕ್ ಮಾತು ಎಲ್ಲೋ ಓದಿದ್ದು ನೆನಪಾಗುತ್ತಿದೆ: ಬೆಟ್ಟದ ಮೇಲಿನ ದೇವದಾರು ಮರವಾಗಬೇಕಿಲ್ಲ, ಬೆಟ್ಟದ ತಪ್ಪಲಿನ ಸುಂದರವಾದ ಪೊದೆಯಾದರೂ ಬೆಳೆದಿದ್ದು ಸಾರ್ಥಕ. ಪೊದೆಯಾಗದಿದ್ದರೂ ಹುಲ್ಲಿನ ಗಿಡವಾಗು, ಬೆಳೆದ ದಾರಿಯಲ್ಲಿ ಅಲಂಕರವಾಗಬಹುದು" ಎಷ್ಟೊಂದು ಅರ್ಥಪೂರ್ಣವಾದ ಮಾತಲ್ವೇ?
ನಾಳಿನ ಕುರಿತಾಗಿ ಇಂದೇ ಕೊರಗಿ ಕೊರಗಿ ಸಾವಾಗುವ ಬಹಳಷ್ಟು 'ಬದುಕನ್ನು' ಕಂಡಾಗ ಯಾಕೋ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನ ನೆನಪಾಗುತ್ತಿದೆ.

ಅದೇ ..........
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ..
ಇಂದಲ್ಲ ನಾಳೆ ಹೊಸ ಭಾನು ತೆರೆದೀತು...
ಕರಗೀತು ಮುಗಿಲಾ ಬಳಗಾ..
ತುಂಬೀತು ಸೊಗೆಯ ಮಳೆ
ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗಾ...!!

Thursday, April 2, 2009

ಬೆಳಗು ಹಣತೆಯ ಮುಂದೆ ನಾ ಹಾಡಿದಾಗ...

ಆವಾಗ ನನ್ನ ಪ್ರೀತಿಯ ಉಜಿರೆ ಬಿಸಿಎಂ ಹಾಸ್ಟೇಲ್ ನಲ್ಲಿದ್ದೆ. ಪಿಯುಸಿನಿಂದ ಡಿಗ್ರಿ ಮುಗಿಯುವ ತನಕ ಐದು ವರ್ಷಗಳ ಕಾಲ ಈ ಹಾಸ್ಟೇಲ್ ನನ್ನ ಮನೆಯಾಗಿತ್ತು. ಅಮ್ಮನಂತೆ ಪ್ರೀತಿಯಿಂದ ಪೋಷಿಸಿತ್ತು. ಈವಾಗಲೂ ಊರಿಗೆ ಹೋದರೆ ಆ ಹಾಸ್ಟೇಲ್, ಎದುರಿರುವ ಹೂವಿನ ಗಿಡಗಳು, ಅಡುಗೆ ಆಂಟಿಯವರು, ನಾನು ಓದೋಕೆ ಕೂರುತ್ತಿದ್ದ ಗಾಳಿ ಮರದ ಗಿಡಗಳು, ನಾವು ಗೇರು ಕದಿಯುತ್ತಿದ್ದ ಭಟ್ರ ಗೇರು ಬೀಜ ಮರ, ಈಗ ಅಪರಿಚತರೇ ತುಂಬಿರುವ ರೂ.ನಂ. 4, ನಾನು ದಿನದ ಎರಡು ಹೊತ್ತು ದೇವರ ನಾಮಗಳನ್ನು ಹಾಡುತ್ತಿದ್ದ ಆ ಸುಂದರ ಪ್ರಾರ್ಥನಾ ಮಂದಿರ....ಎಲ್ಲವನ್ನೂ ಒಂದು ಬಾರಿ ಕಣ್ತುಂಬಿಸಿಕೊಳ್ಳೋಕೆ ಉಜಿರೆ ತನಕ ಹೋಗಿಬರುತ್ತೇನೆ. ಹಾಸ್ಟೇಲ್ ಪಕ್ಕದಲ್ಲೇ ಇರುವ ಹಸಿರು ತೋಟಗಳ ನಡುವೆ ನಿಂತ ರತ್ನಮಾನಸ, ಇನ್ನೊಂದೆಡೆ ಸಂಜೆ ಹೊತ್ತು ಮನಸ್ಸು, ಹೃದಯಕ್ಕೆ ತಂಪು ನೀಡುವ ಗಡಾಯಿ ಕಲ್ಲು...ಎಷ್ಟು ಚೆನ್ನಾಗಿತ್ತು.
ಹೌದು..ನಾನು ಈಗ ಹೇಳಹೊರಟಿರುವುದು ನಮ್ಮ ಪ್ರಾರ್ಥನಾ ಮಂದಿರದ ಕುರಿತು, ನಾವು ಹಾಡೋ ಭಜನೆಗಳ ಕುರಿತು. ಸುಮಾರು 100 ಜನರನ್ನು ತುಂಬಿಕೊಳ್ಳುವ ಪುಟ್ಟ ಕೋಟೆಯದು. ಬೆಳಿಗ್ಗೆ ಮತ್ತು ಸಂಜೆ ಆರೂವರೆಗೆ ಪ್ರಾರ್ಥನೆ ಮಾಡುವ ಸಮಯ. ಬೆಳಿಗ್ಗೆ ಶಿವಸ್ತುತಿ ಹಾಡಿದರೆ, ಸಂಜೆಯ ಹೊತ್ತು ಕೋಣೆ ತುಂಬಾ ದೇವರ ಹಾಡುಗಳ ಘಮಘಮ. ಅದರಲ್ಲೂ ಸಂಜೆ ಹೊತ್ತಿನ ಭಜನೆ ಒಂದು ಥರ ಮನಸ್ಸಿಗೆ ತುಂಬಾ ಖುಷಿಕೊಡುತ್ತಿತ್ತು. ಪ್ರತಿಯೊಬ್ಬರೂ ಆರೂವರೆಗೆ ಪ್ರಾರ್ಥನಾ ಕೋಣೆಯಲ್ಲಿ ಸೇರುತ್ತಿದ್ದೇವು. ಒಬ್ಬರೂ ತಪ್ಪಿಸುವಂತಿರಲ್ಲಿಲ್ಲ. ಆರೂ ಗಂಟೆ ಆದಾಗಲೇ ಬಾತ್ ರೂಮ್ ನಲ್ಲಿದ್ದವರು, ಸುತ್ತಮುತ್ತ ಮರ, ಪೊದೆಗಳ ನಡುವೆ ಓದೋಕೆ ಕುಳಿತವರು, ಪಟ್ಟಾಂಗಗಕ್ಕೆ ಕುಳಿತವರು ಎಲ್ಲಾರೂ ಪ್ರಾರ್ಥನೆಗೆ ಹಾಜರಾಗಲೇಬೇಕು.

ಗಜಮುಖನೆ..ಗಣಪತಿಯೇ..ನಿನಗೆ ವಂದನೆ...

ಇದು ಮೊದಲ ಹಾಡು....ಆಮೇಲೆ ಮೂರೂ ಹಾಡುಗಳನ್ನು ಹಾಡೋ ಸರದಿ ನನ್ನದು. ನಂಗೆ ಭಜನೆಗಳಂದ್ರೆ ತುಂಬಾನೇ ಇಷ್ಟ. ರಾಗ, ಲಯ ಎಂಥದ್ದೂ ಗೊತ್ತಿಲ್ಲಾಂದ್ರೂ ಕೈಯಲ್ಲೊಂದು ತಾಳ ಹಿಡಿದುಕೊಂಡು ಹಾಡಕೆ ಕುಳಿತರೆ ಎಷ್ಟು ಹಾಡಿದ್ರೂ ಸಾಕೆನಿಸುತ್ತಿರಲಿಲ್ಲ. ಅದರಲ್ಲೂ ಹಾಸ್ಟೇಲ್ ಹುಡುಗಿಯರಿಗೆ ನಾನು ಹಾಡೋದಂದ್ರೆ ಭಾರೀ ಇಷ್ಟ. ಈ ಹಾಡು ಹಾಡಿ..ಅಂಥ ಅವರೇ ಸೂಚಿಸಿದ ಮೇಲೆ ನಾನು ಹಾಡುತ್ತಿದ್ದೆ. ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ, ಬಾಲಕೃಷ್ಣನೇ ಬಾರೋ, ಬಂದಾನೋ ಗೋವಿಂದ..ಚಂದದಿ ಆನಂದ, ಎಲ್ಲಿ ಹೋದ ನಮ್ಮ ಕೃಷ್ಣ ಎಲ್ಲಿ ಅಡಗಿದ...ಮುಂತಾದ ಕೃಷ್ಣನ ಕುರಿತಾದ ಗೀತೆಗಳನ್ನೇ ಹೆಚ್ಚಾಗಿ ಹಾಡುತ್ತಿದ್ದೆ. ಅದಕ್ಕೆ ಹಾಸ್ಟೇಲಿನಲ್ಲಿ ನನ್ನನ್ನು 'ರಾಧೆ' ಎಂದೇ ಕರೆಯುತ್ತಿದ್ದುದು ವಿಶೇಷ. ಒಂದೊಂದು ಬಾರಿ ಕರೆಂಟ್ ಹೋದ್ರೆ..ಸಮಯದ ಅರಿವೇ ಇಲ್ಲ..ಬೆಳಗುವ ಹಣತೆಯ ಸುಂದರ ಬೆಳಕಿನಲ್ಲಿ ಒಂದೆರಡು ಗಂಟೆ ಹಾಡಿದ್ರೂ ಸುಸ್ತಾಗುತ್ತಿರಲಿಲ್ಲ. ನನಗೆ ಸಂಗೀತದ ಬಗ್ಗೆ ಏನೂ ಗೊತ್ತಿಲ್ಲ..ಆದರೂ ಹಾಡೋದಂದ್ರೆ ತುಂಬಾ ಇಷ್ಟ. ಒಂದು ಸಲ ನಾವು ಖುಷಿಯಿಂದ ಹಾಡಿದರೆ ಮನಸ್ಸಿನ ಹಗುರಾಗುತ್ತಿತ್ತು. ಮನಸ್ಸು ಏನೋ ಒಂಥರ ಖುಷಿಯಿಂದ ನಲಿಯುತ್ತಿತ್ತು. ಈವಾಗ ಹಾಸ್ಟೇಲಿಗೆ ಹೋಗಿ ತಂಗಿದ್ರೂ ನಾನು ಭಜನೆಗಳನ್ನು ಹಾಡುತ್ತೇನೆ..ಅದೇ ಹಳೆಯ ಹಾಡು..ಅದೇ ಕೋಣೆ..ಅದೇ ಗಣಪತಿ ಫೊಟೋ..ಕೇಳೋ ಕಿವಿಗಳು ಬೇರೆ ಮಾತ್ರ. ನಾನು ಮತ್ತೆ ಮರಳಿ..ಅದೇ ಹಳೆಯ ಚಿತ್ರ ಆಗುತ್ತೇನೆ. ಮನಸ್ಸು ತುಂಬಾ ಖುಷಿಯಾಗುತ್ತೆ.

ಆದರೆ ಬೆಂಗಳೂರಿನಲ್ಲಿ....

ಮನಸ್ಸಿದ್ದರೆ ಮಾರ್ಗ ಅಂತಾರೆ...ಆದರೂ ಇದನ್ನು ಮುಂದುವರಿಸಲು ಸಾಧ್ಯವಾಗಲೇ ಇಲ್ಲ. ನಿತ್ಯ ಕೆಲಸ. ಬೆಳಿಗ್ಗೆ ಆರು ಗಂಟೆಗೆ ಎದ್ದು ಮನೆಗೆಲಸ ಮುಗಿಸಿ, ದೇವರಿಗೆ ದೀಪ ಹಚ್ಚಿ ಆಫಿಸಿಗೆ ಹೊರಡೋವಷ್ಟರಲ್ಲಿ ಸಮಯ ಮೀರಿರುತ್ತೆ. ಮತ್ತೆ ಸಂಜೆ, ಸಮಯದ ಮಿತಿಯಿಲ್ಲ..ನಮ್ ಕೆಲಸ ಮುಗಿದಾಗ ಮನೆಗೆ ಹೋಗಬೇಕು. ನಡುವೆ ಟ್ರಾಫಿಕ್, ಒಂದಷ್ಟು ಧೂಳು, ಆಫೀಸ್ ಕೆಲಸದ ತಲೆಹರಟೆಗಳು..ಇದನ್ನೆಲ್ಲಾ ಹೊತ್ತುಕೊಂಡು ಮನೆಗೆ ಹೋಗಬೇಕಾದರೆ ಎಂಟು ಗಂಟೆ ಮೀರಿರುತ್ತೆ. ಹೊಟ್ಟೆ ಮಾತನಾಡುತ್ತಿರುತ್ತೆ. ಮತ್ತೆ ಅಡುಗೆ ಆಗಬೇಕು. ಬಟ್ಟೆ ಬದಲಾಯಿಸೋದು ಆಮೇಲೆ..ಮೊದಲು ಅಡುಗೆ. ಆಮೇಲೆ ಊಟ..ಕಣ್ಣಲ್ಲಿ ನಿದ್ದೆ. ನಾಳಿನ ಚಿಂತೆ...ಮತ್ತೆಲ್ಲಿಂದ ಭಜನೆ, ದೇವರ ಚಿಂತೆ?

ನಿನ್ನೆ ಕೋರಮಂಗಲದ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ದೇವಸ್ಥಾನವೊಂದರಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಹಳೇ ದೇವರ ನಾಮಗಳನ್ನು ತಂಡವೊಂದು ಹಾಡುತ್ತಿತ್ತು. ಒಂದಷ್ಟು ಹೊತ್ತು ಕೇಳಿ ಮನೆ ಕಡೆ ಸಾಗಿದವಳಿಗೆ ನೆನಪಾಗಿದ್ದು ನನ್ನ ಪ್ರೀತಿಯ ಹಾಸ್ಟೇಲಿನಲ್ಲಿ ನಾನಾಡುತ್ತಿದ್ದ ಭಜನೆಗಳು. ಇಲ್ಲಿ ಭಜನೆ ಹಾಡಕೆ ನನಗೆ ಸಮಯವಿಲ್ಲದಿದ್ದರೂ ಸುಂದರ ಭಾವಗೀತೆಗಳನ್ನು ನಿತ್ಯಕೇಳುತ್ತಾ ಮನಸ್ಸು ಖುಷಿಪಡುತ್ತೆ. ಈ ಖುಷಿಯನ್ನು ಮುಂದಿನ ಸಲ ಹಂಚಿಕೊಳ್ಳುತ್ತೇನೆ.

Friday, March 20, 2009

ಇದೊಂದು ಸಿಹಿ ಸುದ್ದಿ.....

ನಮ್ ಛಾಯಾಕನ್ನಡಿ ಬ್ಲಾಗ್ ನ ಶಿವಣ್ಣ ಮತ್ತು ಕ್ಯಾಮಾರ ಕಣ್ಣಿನಲ್ಲಿ ಬ್ಲಾಗ್ ನ ಮಲ್ಲಿಕಾರ್ಜುನ ಅವರ ಫೋಟೋಗ್ರಾಫಿ ಬಗ್ಗೆ ನಾ ಹೇಳೋದು ಅಗತ್ಯವಿಲ್ಲ. ಎಲ್ಲಿ ನೋಡಿದ್ರೂ ಬೆನ್ನಲ್ಲಿ ಕ್ಯಾಮರಾ ನೇತುಹಾಕೊಂಡು, ಮಾತಿಗಿಳಿದರೆ ಬರೇ ಫೋಟೋಗ್ರಾಫಿಯ ಬಗ್ಗೆ ಹರಟೆ ಹೊಡೆಯುವ ಈ ಗೆಳೆಯರಿಗೆ ಇದೀಗ ಮತ್ತೊಂದು ಅಂತರ್ ರಾಷ್ಟ್ರೀಯ ಮನ್ನಣೆ! ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ.
ಈವರೆಗೆ ರಾಯಲ್ ಫೋಟೋಗ್ರಫಿ ಸೊಸೈಟಿಯ ಈ ಗೌರವಕ್ಕೆ ೧೩೨ ಭಾರತೀಯರು ಪಾತ್ರರಾಗಿದ್ದಾರೆ. ಈ ವರ್ಷ ವಿಶ್ವದಾದ್ಯಂತ ಈ ಮನ್ನಣೆ ೨೯ ಜನ ಛಾಯಾಗ್ರಾಹಕರಿಗೆ ಸಿಕ್ಕಿದೆ. ಅದರಲ್ಲಿ ಭಾರತೀಯರು ಇವರಿಬ್ಬರು ಮಾತ್ರ ಎನ್ನುವುದು ಖುಷಿಯ, ಹೆಮ್ಮೆಯ ವಿಚಾರ. ಮೇರಾ ಭಾರತ್ ಮಹಾನ್! ಅಭಿನಂದನೆಗಳು..ಎಲ್ಲಾ ಬ್ಲಾಗಿಗರ ಪರವಾಗಿ ಪ್ರೀತಿಯ ಅಭಿನಂದನೆಗಳು.
ಹೆಚ್ಚಿನ ಮಾಹಿತಿಗೆ: http://avadhi.wordpress.com

Saturday, March 7, 2009

'ಮೈ ಆಟೋಗ್ರಾಫ್' ಪುಟಗಳಿಂದ...

ನನ್ನೆದೆಯ ಮಾತು ಇದೆ..
ಅಮ್ಮ ಕಲಿಸಿದ ಹಾಡು ಇದೆ
ಆ ಹಾಡಿನ ತೋಟದಲಿ
ನೀವು ಬೆಳೆಸಿದ ಹೂವು ಇದೆ...
ಈ ಹೃದಯ ಬಯಸುವುದು ಪ್ರೀತಿಸುವ ಹೃದಯವನ್ನು..! ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದುಬಿಟ್ಟು ನನ್ನ ಪ್ರೀತಿಗೆ 'ಕಾಲೇಜಿಗೆ' ಸುಂದರವಾದ ಪುಸ್ತಕವನ್ನು ನೀಡಿದ್ದೆ...ಅದು 'ಮೈ ಆಟೋಗ್ರಾಫ್'! ಅಮ್ಮನೊಂದಿಗೆ ಮುನಿಸಿಕೊಂಡು ಮನಸ್ಸು ಭಾರವಾದಗ, ಕಾಲೇಜಿನ ಹಳೇ ನೆನಪುಗಳು ನನ್ನ ಕಾಡಿದಾಗ, ಮನೆಯಲ್ಲಿ ಅಣ್ಣ-ತಮ್ಮ ನ ಜೊತೆ ರಚ್ಚೆ ಹಿಡಿದು ಬೈಸಿಕೊಂಡು ಮೌನಕ್ಕೆ ಶರಣಾದಾಗ, ಪವರ್ ಕಟ್ ಆಗಿ ಮನೆಯೊಳಗೆ ಕ್ಯಾಂಡಲ್ ಉರಿಸಿ ಕುಳಿತಿದ್ದಂತೆ ನನ್ನ ಸುತ್ತುಹಾಕುವ ನೆನಪುಗಳ ಜೊತೆ ಮಾತಿಗಿಳಿದಾಗ, ಏಕಾಂತದಲ್ಲಿ ಭಾವನೆಗಳು ನನ್ನ ಮುತ್ತಿಕ್ಕಿದ್ದಾಗ..ನಾನು ಕೈಗೆತ್ತಿಕೊಳ್ಳುವುದು 'ಮೈ ಆಟೋಗ್ರಾಫ್'..!! ಹರಿದು ಚಿಂದಿ ಚಿತ್ರಣ್ಣವಾಗಿರುವ ಆ ನೆನಪಿನ ಹೊತ್ತಗೆಯ ಪುಟಗಳನ್ನು ಮತ್ತೆ ಜೋಡಿಸುತ್ತಾ...ನೋಡ್ತೀನಿ. ಅದೇ 'ಮೈ ಆಟೋಗ್ರಾಫ್'!

ಕನಸ ಕಸುವೂ ಬೇಕು
ಯಶದ ಹಾದಿಯ ಹೆಜ್ಜೆಗೆ
ಬಯಕೆ ಬಯಲು ಎರಡೂ ಬೇಕು
ಸಾಧನೆಯ ಕಾಲ್ಗೆಜ್ಜೆಗೆ...

ನನ್ನ ತುಂಬಾ ಪ್ರೀತಿಸಿದ, ಇಂದಿಗೂ ನನ್ನೆಲ್ಲಾ ಕನಸುಗಳಿಗೆ ಜೀವ ತುಂಬುತ್ತಾ ಬರುವ ಪ್ರೀತಿಯ ಮೇಡಂ ಶುಭದಾಸ್ ಮರವಂತೆ ಬರೆದ ನಾಲ್ಕು ಸಾಲುಗಳು ನನ್ನ ಹೊತ್ತಗೆಯ ಮೊದಲ ಪುಟದಲ್ಲೇ ಸ್ವಾಗತಿಸುತ್ತವೆ. ನನ್ನ ಮುದ್ದಾದ ಅಕ್ಷರಗಳನ್ನು ಕಂಡು ಹೆಮ್ಮೆಪಡುತ್ತಿದ್ದ ನಾಗಣ್ಣ ಸರ್, ನಿತ್ಯ ವಿಧೇಯತೆಯ ಪಾಠ ಹೇಳುತ್ತಾ ಬೆನ್ನುತಟ್ಟುತ್ತಿದ್ದ ಸಂಪತ್ ಸರ್...ಹಿತನುಡಿಗಳು.
'ಸವಿನೆನಪುಗಳು ಸಾವಿರವಿದ್ದರೂ, ಮನದೊಳಗೆ ನಿನಗೊಂದು ಮನೆಯಿದೆ ಗೆಳತೀ..'ಎಂದು ಸವಿಸವಿ ಮಾತುಗಳನ್ನು ಗೀಚಿದ ಸ್ನೇಹಿತರು, ನಿತ್ಯ ಅಕ್ಕಾ ..ಅಕ್ಕಾ..ಎಂದು ಹಿಂಬಾಲಿಸುತ್ತಿದ್ದ ನನ್ನ ತಮ್ಮ-ತಂಗಿಯರ ಎಂಥೆಂಥ ಸವಿನುಡಿಗಳು..ಪ್ರೀತಿಯ ಜೊತೆಜೊತೆಗೆ.
20 ಪುಟಗಳನ್ನು ಮೊದಲೇ ಮೀಸಲು ಎಂದು ಬರೆದಿಟ್ಟ ಆ ನನ್ನ ಗೆಳತಿ ಕವಿತಾ, ಹಾಸ್ಟೇಲಿನಿಂದ ಗಂಟುಮೂಟೆ ಕಟ್ಟಿಕೊಂಡು ಹೊರಡೋ ಮುಂಚಿನ ದಿನ..ಕರೆಂಟಿಲ್ಲದೆ ಕ್ಯಾಂಡಲ್ ಬೆಳಕಿನಡಿಯಲ್ಲಿಯೇ ಪುಟತುಂಬಿಸಿದ್ದಳು. ಆದರೆ ಮದುವೆಯ ಬಳಿಕ ಫೋನು ಮಾಡದಿದ್ದರೂ..ಮೊನ್ನೆ ಮೊನ್ನೆ ಅವಳಿಗೆ ಹೆಣ್ಣು ಮಗುವಾದಾಗ ಅವಳ ಗಂಡನೇ ಫೋನು ಮಾಡಿ ಖುಷಿಸುದ್ದಿ ತಿಳಿಸಿಬಿಟ್ಟರು. 'ಇಷ್ಟವಾಗದನ್ನು ಕಷ್ಟದಿಂದಲೇ ಸಹಿಸಿ, ಕಷ್ಟವೇ ಇಷ್ಟವೆಂಬಂತೆ ಬದುಕುವ ಕಲೆ ಹೇಗೆ ಕಲಿತೆ, ನನಗೂ ಕಲಿಸಿಕೊಡು ಅಕ್ಕಾ' ಎಂದು ನಾಲ್ಕು ಪುಟ ಭಾವದನಿಗಳನ್ನು ಬಿಚ್ಚಿಟ್ಟ ನನ್ನ ಪ್ರೀತಿಯ ತಮ್ಮ ಪಚ್ಚು...ಈಗಲೂ ಮೈಸೂರಿನಿಂದ ಫೋನು ಮಾಡಿ ಸಂತೋಷಗೊಳಿಸುತ್ತಾನೆ. ಕಾಲೇಜು ಕ್ಯಾಂಪಸ್ ನಲ್ಲಿ ನಿತ್ಯ ಹೊಡೆದಾಡುತ್ತಿದ್ದ ಪ್ರೀತಿಯಿಂದ ದಿನಾ ಕಿವಿಹಿಂಡುತ್ತಿದ್ದ ನನ್ನ ತುಂಬಾ ಪ್ರೀತಿಸುವ ಮುದ್ದು ತಮ್ಮ ಸಂದೇಶ ಈಗಲೂ ನನ್ನ ಮಡಿಲಲ್ಲೇ ಇದ್ದಾನೆ ಅನ್ನೋ ಬೆಟ್ಟದಷ್ಟು ಖುಷಿ ನನಗೆ.
ದಿನಾ ಮಧ್ಯಾಹ್ನದ ಕ್ಲಾಸಿನಲ್ಲಿ ಅಕ್ಕರೆಯಿಂದ ಚಾಕಲೇಟು ನೀಡುತ್ತಿದ್ದ, ಜಗಳವಾಡುತ್ತಿದ್ದ ಗೆಳೆಯ ಸುದರ್ಶನ್ ಬೆಂಗಳೂರಿನಲ್ಲೇ ಇದ್ದರೂ ಫೋನು ಕರೆಗೂ ಬರ..ಫೋನ್ ಮಾಡಿದರೂ ರಿಸೀವ್ ಮಾಡಲಾಗದಷ್ಟು ಬ್ಯುಸಿಯಾಗಿದ್ದಾನೆ. "ಬದುಕು ಇರುವುದು ಬಾಳುವುದಕ್ಕಾಗಿ...ಬಾಳು ಇರುವುದು ಬೆಳೆಯುವುದಕ್ಕಾಗಿ" ಎಂದು ಸುಂದರ ಬದುಕಿಗೆ ಶುಭಹಾರೈಸುತ್ತಾ ನೆನಪಿನ ಹೊತ್ತಗೆಯಲ್ಲಿ ಚಂದದ ಅಕ್ಷರಗಳಿಂದ ಬರೆದಿಟ್ಟ ನಿತ್ಯ ಅಪರೂಪಕ್ಕೊಮ್ಮೆ ನಗುತ್ತಿದ್ದ ಪ್ರೀತಿಯ ಗೆಳೆಯ ವೃಷಭ್ ಈಗಲೂ ಪುರುಸೋತ್ತಿನಿಂದ ಸವಿದನಿಗಳಿಗೆ ಕಿವಿಯಾಗುತ್ತಾನೆ. "ಹುಡುಗಿಯರು ಕೊರಳಿಗೆ ಹಾಕುತ್ತಾರೆ ಮಣಿಸರ...
ಆದ್ರೆ ಹುಡುಗರು ಡೈಲಿ ಹಾಕುತ್ತಾರೆ 'ಗಂಗಸರ'..
ಚಿತ್ರಾ ನಿನ್ನ ಬಿಟ್ಟಿರುವ ಕಿಂಚಿತ್ತೂ ತಾಕತ್ತು ನಂಗಿಲ್ಲ" ಎಂದು ಪೋಲಿ ಜೋಕುಗಳನ್ನು ತೇಲಿಬಿಟ್ಟ ಗೆಳೆಯ ರೋಹನ್, ಈಗ ಎಲ್ಲಿದ್ದಾನೋ ದೇವರೇ ಬಲ್ಲ. ದಿನಾ ನನಗೆ ಕೀಟಲೆ ಮಾಡು ಗುದ್ದು ತಿನ್ನುತ್ತಿದ್ದ ತರಗತಿಯ ಲಂಭು ಸಂತೋಷ ಇತ್ತೀಚೆಗೆ 'ನಿನ್ನ ಯಾವ ಹುಡುಗನೂ ಎತ್ತಹಾಕ್ಕೊಂಡು ಹೋಗಿಲ್ವಾ?' ಅಂತ ನಕ್ಕುನಗಿಸಿದ್ದ.
ಹಾಸ್ಟೇಲಿನಲ್ಲಿ ನಿತ್ಯ ನನ್ನ ಕೀಟಲೆ, ಪೋಲಿ ಜೋಕುಗಳಿಗೆ ಸಾಥ್ ನೀಡುತ್ತಿದ್ದ ಗೆಳತಿ ಚಿತ್ರಕಲಾ ಮರೆಯದೆ ಇತ್ತೀಚೆಗೆ ಮದುವೆಗೆ ಕರೆದಿದ್ದಳು. 'ತಾಳಿ ಕಟ್ಟುವ ಶುಭವೇಳೆ...ಬರಲಿ ಎನಗೊಂದು ಪ್ರೀತಿಯ ಕರೆಯೋಲೆ' ಎಂದು ಗೀಚಿಟ್ಟ ಗೆಳತಿ ಗೀತಾನಿಗೆ ಮದುವೆಯಾಗಿದೆಯೋ ಗೊತ್ತೇ ಇಲ್ಲ. ನನ್ನ ಬರವಣಿಗೆಗಳಿಗೆ ದಿನಾ ಬೆನ್ನುತಟ್ಟುತ್ತಿದ್ದ, 'ಭವಿಷ್ಯದಲ್ಲಿ ನಿನ್ನ ನಾ ಬರಹಗಾರ್ತಿಯಾಗಿ ನೋಡಬೇಕು 'ಎಂದು ಶುಭಹಾರೈಸಿದ ಮೂರನೇ ಬೆಂಚಿನ ಗೆಳತಿ ರಜನಿ,..ವಿಳಾಸ ಬರೆಯುವುದನ್ನು ಮರೆತುಬಿಟ್ಟಿದ್ದು ಮನಸ್ಸಿಗೆ ತುಂಬಾ ನೋವಾಗುತ್ತೆ. 'ಚಿತ್ರಾ ನಿನ್ನ ಹೇಗೆ ನಾ ಬಿಟ್ಟಿರಲೀ?' ಎಂದು ಅತ್ತು ವಿದಾಯ ಹೇಳಿದ ಗೆಳತಿ ಶ್ರುತಿ ಈಗ ಇಲ್ಲೇ ದಾರಿ ನಡುವೆ ಸಿಕ್ಕರೂ ಮತನಾಡಿಸಲೂ ಅವಳಿಗೆ ಪುರುಸೋತ್ತಿಲ್ಲ. ಹಾಸ್ಟೇಲಿನಲ್ಲಿ ನನ್ನ ಬೆಡ್ ಶೀಟ್ ಒಳಗಡೆ ಹುದುಗಿ ಮಲಗುತ್ತಿದ್ದ ನನ್ನ ಮುದ್ದು ತಂಗಿ ಪ್ರತಿಮಾನಿಗೆ ಈಗಲೂ ಫೋನ್ ಮಾಡಿ ಮಾತನಾಡದಿದ್ದರೆ ನಿದ್ದೆನೇ ಬರಲ್ಲ...ಇದು 'ಮೈ ಆಟೋಗ್ರಾಫ್'!
ಅಬ್ಬಾ..! ಇಷ್ಟು ನೆನಪುಗಳು ಗರಿಗರಿಯಾಗಿ ಬಿಚ್ಚಿ..ಬರೆದು ಮುಗಿಸಿದಾಗ ನಿನ್ನೆ ರಾತ್ರಿ ೧೨ ಗಂಟೆ. 'ಭಾವಸಂಗಮ' ದ ಹಾಡುಗಳು ಒಂದು ರೌಂಡು ಮುಗಿದು ..ಎರಡನೇ ರೌಂಡು ಶುರುವಾಗಿತ್ತು. ತಮ್ಮ ಸಂದೇಶ 'ಅಕ್ಕಾ, ಮಲಗು..ನಾಳೆ ಚಪಾತಿ-ಪಲ್ಯ ಮಾಡಬೇಕು..ಬೇಗ ಏಳಬೇಕು' ಅಂತ ಪದೇ ಪದೇ ಅಲಾರಂ ಥರ ತಡಬಡಿಸುತ್ತಿದ್ದ. ಅವನ ಮೇಲೆ ಪ್ರೀತಿಯಿಂದ ರೇಗುತ್ತಲೇ ನಿದ್ದೆಗೆ ಜಾರಿದೆ.
ಫೋಟೋ; ವ್ವ್ವ. flickr.com

Wednesday, March 4, 2009

ಸಾಗರದಾಚೆಯ ಅಣ್ಣನಿಗೆ....

ಲೇ ಅಣ್ಣಾ..
ನಾನು-ನೀನು ಕಣ್ಣ ಮುಚ್ಚೆ ಆಡಲಿಲ್ಲ, ಗಾಡೇ ಗೂಡೇ ಅನ್ನಲಿಲ್ಲ. ಬಣ್ಣದ ಗಾಳಿಪಟ ಹಾರಿಸೇ ಇಲ್ಲ. ಜೊತೆ-ಜೊತೆಯಾಗಿ ವಾಕಿಂಗ್ ಹೋಗೇ ಇಲ್ಲ. ಇಬ್ಬನಿ ಹನಿಬಿಂದು ನೋಡಿ ಖುಷಿಪಟ್ಟಿ;ಲ್ಲ. ಎಸ್ಎಂಎಸ್ ಗಳ ಹರಟೆ ಮಾಡೇ ಇಲ್ಲ. ಸಂಜೆ ಹೊತ್ತಿನಲ್ಲಿ ತಿಳಿಬಾನಲ್ಲಿ ಹಾರಾಡೋ ಪಾರಿವಾಳ ನೋಡಿ ನಕ್ಕುನಲಿಯಲೇ ಇಲ್ಲ. ಆದ್ರೂ ನಿನ್ನ ಕಂಡರೆ ನಂಗೆ ಅಕ್ಕರೆ, ಪ್ರೀತಿ, ಅಭಿಮಾನ, ಗೌರವ. ನಿನ್ನನ್ನು ಅಣ್ಣಾ ಅಂತ ಕೂಗೋದು ಏನೋ ಮನಸ್ಸಿಗೆ ಹಿತ, ಖುಷಿ. ನಿಂಗೂ ಅಷ್ಟೇ ನಾನಂದ್ರೆ ಇಷ್ಟ ಆಲ್ವಾ?

ನೀನು ನನ್ನ ತಂಗೀ ಅಂತ ಕೂಗುವಾಗ ನಾನೂ ಖುಷಿಗೊಳ್ಳುತ್ತೇನೆ. ನಂಗೂ ಒಬ್ಬ ಅಣ್ಣ ಸಿಕ್ಕಿದ್ದಾನೆ ಅಂತ ಹಿರಿಹಿರಿ ಹಿಗ್ಗುತ್ತೇನೆ. ನಿನ್ನ ಪ್ರೀತಿಯಲ್ಲೇ ತೊಯ್ದು ಬಿಡುತ್ತೇನೆ. ಆ ಖುಷಿಯಲ್ಲಿ ನಿನ್ನ ನಾ ತುಂಬಾ ಪ್ರೀತಿಸುವ ತಂಗೀ ಅಂತ ಜೋರು ಬೊಬ್ಬಿಡಬೇಕು ಅನಿಸುತ್ತೆ. ಆದರೆ, ಬೇಡ..ಪ್ರೀತಿನ ಹೇಳಿಕೊಳ್ಳಬಾರದು ಎಂದನಿಸಿ ಸುಮ್ಮನಾಗುತ್ತೇನೆ. ಮೌನವಾಗಿ ನಿನ್ನ ಪ್ರೀತಿನ ಸವಿಯುತ್ತಿದ್ದೇನೆ ಕಣಣ್ಣಾ. ನೀನು ಫೋನು ಮಾಡಿದಾಗ ..ಅದೂ ಮೊದಲ ಬಾರಿಗೆ ನೀ ಫೋನ್ ಮಾಡಿದಾಗ ಸ್ವರ್ಗಕ್ಕೆ ಮೂರೇ ಗೇಣು..ಅಷ್ಟು ಖುಷಿಗೊಂಡೆ ಗೊತ್ತಾ?! ಆ ಕ್ಷಣ ಅಮ್ಮನ ಮಡಿಲಲ್ಲಿ ಮುಖ ಹುದುಗಿಸಿ ಖುಷಿ ಪಟ್ಟಂತೆ ಆಯ್ತು. ನೀ ನನ್ನ ನೋಡಲೇ ಇಲ್ಲ ಅಲ್ವಾ..ನಾನೆಷ್ಟು ದೊಡ್ಡದಿದ್ದೀನಿ ಗೊತ್ತಾ?
ಅಣ್ಣಾ..ದಿನಾ ನೀ ಸಣ್ಣಗಾಗು ಅಂತೀನಿ. ಡುಮ್ಮಣ್ಣ ಅಂತ ರೇಗಿಸ್ತೀನಿ. ನೋಡು..ನೀ ಸಣ್ಣಗಾಗು ಸಣ್ಣಗಾಗು ಅನ್ನುತ್ತಲೇ ನಾ ದಪ್ಪ ಆಗಿಬಿಟ್ಟಿದ್ದೀನಿ. ಬಹುಶಃ ನೀ ಕಲಿಸಿದ ಅಡುಗೆ ಪರಿಣಾಮವೇ ಆಗಿರಬೇಕು. ಎಲ್ರೂ ನನ್ನ ಡುಮ್ಮಿ ಅಂದಾಗ ಅಣ್ಣನತ್ರ ದೂರು ಹೇಳ್ತೀನಿ ಅಂತ ಬೈತೀನಿ. ಅದಕ್ಕೆ ಭಾರತಕ್ಕೆ ಬೇಗ ಬಂದುಬಿಡಣ್ಣ. ಈಗಲೇ ನೀನು ನನ್ನೆದುರು ಬಂದು ಬಿಡು ಅಂತ ರಚ್ಚೆಹಿಡಿಯಬೇಕು ಅನಿಸುತ್ತೆ. ಆದರೆ, ನೀನಿದ್ದಲ್ಲಿಂದ ಇಲ್ಲಿ ಬರೋದು ಎಷ್ಟು ದೂರ ಅಲ್ವಾ? ಆದ್ರೂ ಬೇಗ ನನ್ನ ನೋಡಕ್ಕೆ ಬರ್ತಿಯಾ ಅಂದುಕೊಂಡಿದ್ದೀನಿ. ಬರದಿದ್ರೆ ನಿನ್ನ ಜೊತೆ ನಾ ಟೂ ಟೂ ಬಿಡ್ತೀನಿ ನೋಡು. ನೀ ಬಂದಾಗ ನಿನ್ನ ಕೈಯಿಂದ ನನ್ನ ಪ್ರೀತಿಯ ಕಪ್ಪು ಹ್ಯಾಟ್ ತೆಗೆಸಿಕೊಳ್ಳಬೇಕು. ಚಾಕಲೇಟು ಗಿಟ್ಟಿಸಿಕೊಳ್ಳಬೇಕು. ಫೋಟೋ ತೆಗೆಸಿಕೊಳ್ಳಬೇಕು. ನಿನ್ನ ಜೊತೆ ವಾಕಿಂಗ್ ಹೋಗಬೇಕು. ನೀ ಕಲಿಸಿದ ಅಡುಗೆ ಗಳನ್ನು ನಿನ್ನೆದುರಲ್ಲೇ ಮಾಡಿತೋರಿಸಬೇಕು. ನಿನ್ನ ಬಾಯಿಂದ ಆಗಾಗ 'ಟ್ಯೂಬ್ ಲೈಟ್' ಅಂತ ಕರೆಸಿಕೊಳ್ಳಬೇಕು. ನಿನ್ನ ಜೊತೆ ಲಗೋರಿಯಾಟ ಆಡಬೇಕು. ನನ್ನ ಡುಮ್ಮಿ ಅಂತ ಕರೆದವರಿಗೆ ಎಲ್ಲಾ ನಿನ್ನ ಬಾಯಲ್ಲಿ ಬೈಸಬೇಕು. ಒಟ್ಟಿನಲ್ಲಿ ನಿನ್ನ ಜೊತೆಗೆ ನಾ ಖುಷಿಖುಷಿ ಕ್ಷಣಗಳನ್ನು ಕಳೆಬೇಕು..ನೀನು ನನ್ನ ಅಣ್ಣಂತ ಎಲ್ಲರೆದುರು ಹೇಳಿಕೋಬೇಕು. ಲೇ ಅಣ್ಣಾ..ಇನ್ನೂ ಹೇಳಕ್ಕಿದೆ..ಇವತ್ತಿಗೆ ಇಷ್ಟು ಸಾಕು. ನೀ ನಕ್ಕಾಗ, ನೀ ಅತ್ತಾಗ..ನಿನ್ನ ಜೊತೆ ನಾನಿರ್ತೀನಿ. ನನ್ನೆದುರೇ ನಕ್ಕುಬಿಡು..ಅಳಬೇಕಾಂದ್ರೂ ನನ್ನೆದುರೇ ಅತ್ತುಬಿಡು. ನಾ ನಿನಗೆ ಕಿವಿಯಾಗುತ್ತೇನೆ. ಮರೀಬೇಡ..ನಿನ್ನ ಹಿಂದೆ ನೆರಳಂತೆ ನಾನಿರ್ತೀನಿ...ನಿನ್ನ ತುಂಬಾ ಪ್ರೀತಿಸುವ ತಂಗಿಯಾಗಿ..! ನಿದ್ದೆ ಬರುತ್ತಿದೆ..ನಾ ಮಲಗ್ತೀನಿ..ಬೊಗಸೆ ತುಂಬಾ ಪ್ರೀತಿ ನಿನಗಾಗಿ ಇಟ್ಟಿದ್ದೀನಿ...ತಕೋತಿಯಲ್ಲಾ..!!
ಇಂತೀ,
ನಿನ್ನ
ಪೋಟೋ: ವ್ವ್ವ. flickr.com

Friday, February 27, 2009

ಥರಗುಟ್ಟುವ ಚಳಿಯಲ್ಲಿ ಆ ಬಾಲಕ ಬೂದಿಯಲ್ಲಿ ಮಲಗಿದ್ದ..!!

ಜ್ವರದಿಂದ ತಲೆಭಾರ, ನೆನಪುಗಳಿಂದ ಅದೇಕೋ ಮನಸ್ಸು ಭಾರ. ಆದರೆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಮನೆಯ ಟೆರೇಸ್ ಮೇಲೆ ಹೋಗಿ ನಿಂತರೆ, ಅದೇ ಖುಷಿ ನೀಡುವ ತಂಗಾಳಿ. ಗೂಡು ಸೇರುವ ಹಕ್ಕಿಗಳ ಕಲರವ. ಪುಟ್ಟ ಬಾಲಕನೊಬ್ಬ ತಾನು ಸಾಕಿದ ಪಾರಿವಾಳ ಜೊತೆ ಆಟವಾಡುತ್ತಿದ್ದ. ಕೆಳಗಡೆ ನೋಡಿದರೆ ರಾಶಿ ಮರಳ ಮೇಲೆ 'ಮರಳಾಗಿ' ಆಡುವ ಮಕ್ಕಳು, ಬ್ಯಾಟ್ ಹಿಡಿದು ಸಚಿನ್, ಗಂಗೂಲಿ ಕನಸು ಕಾಣುವ ಕಂದಮ್ಮಗಳು. ಇನ್ನೊಂದೆಡೆ ಇವೆಲ್ಲವನ್ನೂ ಅಕ್ಕರೆಯಿಂದ ನೋಡುತ್ತಾ ಅಚ್ಚರಿಪಡುವ 'ಚಿಂದಿ' ಪುಟಾಣಿಗಳು.

ಹೌದು, ಅಂದು ನನ್ನ ಹೃದಯ ಕಣ್ಣೀರಾದ ದಿನ. ಬದುಕಿನ ಇನ್ನೊಂದು ಮುಖವನ್ನು ನೋಡಿ ಬದುಕೆಂದರೆ ಹೀಗೂ ಇರುತ್ತಾ? ಎಂದು ಬೆರಗುಗಣ್ಣಿಂದ ಮಗುವಿನಂತೆ ಪಿಳಿಪಿಳಿ ನೋಡುತ್ತಾ ನಿಂತ ದಿನ, ಘಟನೆ ನೆನೆಸಿಕೊಂಡಾಗ ಈಗಲೂ ಮನ ಅಳುತ್ತೆ. ಅಸಹಾಯಕಳಾಗಿ ಮೌನವಾಗಿ ಮನ ರೋಧಿಸುತ್ತದೆ. ನವೆಂಬರ್ 3, 2006! ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಇರುವ ರೈಲುಮಾರ್ಗ..ಕಸ ಕಡ್ಡಿ, 'ಬೇಡ'ದೆಲ್ಲವನ್ನೂ ತನ್ನೊಳಗೆ ತುಂಬಿಸಿಕೊಳ್ಳುವ ಜಾಗ ಅದು. ಏಳೆಂಟು ವರ್ಷದ ಪುಟ್ಟ ಬಾಲಕ. ಕಣ್ಣಲ್ಲಿ ಮುಗಿಲು ಮುಟ್ಟುವ ಕನಸು ತುಂಬಿಕೊಂಡಿದ್ದ. ಹರಿದ ಬಟ್ಟೆ ಮೈಮೇಲೆ. ಮಲದ ಬದಿಯಲ್ಲಿದ್ದ ಇಡ್ಲಿ ತುಂಡನ್ನು ಹೆಕ್ಕಿ ತಿನ್ನುತ್ತಿದ್ದ!! ನನ್ನೆರಡೂ ಕಣ್ಣುಗಳು ಒಂದು ಕ್ಷಣ ಮುಚ್ಚಿಕೊಂಡಿದ್ದವು. ತೆರೆದು ನೋಡಿದಾಗ 'ಅಕ್ಕಾ..'ಎನ್ನುತ್ತಾ ನನ್ನೆದುರು ಕೈಚಾಚಿದ್ದ. ವಾಸ್ತವದ ಇನ್ನೊಂದು ಮುಖ. ಅಲ್ಲೇ ಇರುವ ಇರುವ ಶಾಂತಿಸಾಗರ ಹೊಟೇಲಿನಲ್ಲಿ ದೋಸೆ ಕೊಡಿಸಿದೆ. ಒಂದಲ್ಲ..ಎರಡಲ್ಲ..ಮೂರು ದೋಸೆಗಳನ್ನು ತಿಂದ!! ಪ್ರೀತಿಯಿಂದ ತನ್ನೆರಡೂ ಕಣ್ಣುಗಳನ್ನು ತೆರೆದು ನನ್ನತ್ತಾ ನೋಡುತ್ತಾ ನಿಂತ...ಯಾವುದೋ 'ಹೆಸರಿಡದ ಸಂಬಂಧಿಕನಂತೆ'!!

ಆಗಸ್ಟ್ 14. ಅಂದು ಜೀವನದ ಮೊದಲ ಬಾರಿಗೆ ನಾವು ಹಂಪಿಗೆ ಹೊರಟ ದಿನ. ಥರಗುಟ್ಟುವ ಚಳಿ. ಆಕಾಶದಲ್ಲಿ ಚಂದ್ರ, ನಕ್ಷತ್ರಗಳು ಕಾಣುತ್ತಿಲ್ಲ. ಮೋಡಗಳ ಮೇಲಾಟಗಳೂ ಗೋಚರಿಸುತ್ತಿಲ್ಲ. ಚಿತ್ರದುರ್ಗದಿಂದ ಮುಂದೆ ಸಾಗುತ್ತಿದ್ದಂತೆ ಗಣಿಲಾರಿಗಳ ಧೂಳು, ಆವೇಗ.!ವೇಗದಿಂದ ಎದುರಿಗೆ ಬರುತ್ತಿದ್ದ ಲಾರಿಗಳನ್ನು ನೋಡಿ ನಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದೆವು. ಚಳಿಗೆ ಮೈ ಬೆಚ್ಚಗಾಗಿಸುವಾಸೆ. ಅಲ್ಲೇ ಒಂದು ಟೀ ಅಂಗಡಿ. ಟೀ ಅಂಗಡಿ ಮಾಲೀಕ ಗೊರಕೆ ಹೊಡೆಯುತ್ತಿದ್ದರೆ, ಇತ್ತ ಒಬ್ಬ ಬಾಲಕ ನಿದ್ದೆಯ ಮಂಪರಿನಲ್ಲಿ ತೂಕಾಡಿಸುತ್ತಿಸಿದ್ದ. ಮತ್ತೊಮ್ಮೆ ಬಾಲಕ ..???! ಬೂದಿಯಲ್ಲಿ ಮಲಗಿದ್ದ. ನಾವು ಹೋದ ಕೂಡಲೇ ಮಾಲೀಕ ಆ 'ಬೂದಿ ಬಾಲಕ'ಕನನ್ನು ಎಬ್ಬಿಸಿದ..ಇಲ್ಲ, ಆತ ಏಳಲೇ ಇಲ್ಲ. ಅಲ್ಲೇ ಇದ್ದ ಕೋಲಿನಲ್ಲಿ ಹೊಡೆದೇಬಿಟ್ಟ..! ಎದ್ದ..'ಬೂದಿ ಬಾಲಕ'..ಕಂಣ್ಣೊರೆಸಿಕೊಂಡು!!..ಕಾಲೆಳೆಯುತ್ತಲೇ ಬಂದು..ಟೀ ತಂದುಕೊಟ್ಟ. ಟೀ ಕುಡಿಯುವ ಬದಲು..ಆ ಬಾಲಕನ ಕಣ್ಣುಗಳನ್ನೇ ನೋಡುತ್ತಿದ್ದೆ...ಅಲ್ಲಿ ಆಪ್ತತೆಯಿತ್ತು, ಪ್ರೀತಿಯಿತ್ತು..ಅಸಹಾಯಕತೆಯಿತ್ತು., ಸಾವಿರ ಕನಸುಗಳ ಆಶಾಗೋಪುರ ಇತ್ತು..ಆದರೆ 'ಬದುಕಿರಲ್ಲಿಲ್ಲ'!!!

ಮೊನ್ನೆ ಮೊನ್ನೆ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರಕ್ಕೆ ಆಸ್ಕರ್ ಬಂತು...ಅದಕ್ಕೆ ಸಿಕ್ಕ ಪ್ರಚಾರ, ಆಸ್ಕರ್, 'ಕೊಳಗೇರಿ' ಮಕ್ಕಳೂ ಆಚರಿಸಿದ ಆ ಸಂಭ್ರಮದ ಕ್ಷಣಗಳನ್ನು ಕಂಡಾಗ ಯಾಕೋ ಮೇಲಿನ ಘಟನೆಗಳು ನೆನಪಾದುವು. ಆಸ್ಕರ್ ಬಂದ ಖುಷಿಯ ಭರದಲ್ಲಿ ಸೋನಿಯಾ ಗಾಂಧಿ, 'ಈ ಚಿತ್ರ ನಮಗೆ ಸ್ಪೂರ್ತಿ' ಎಂದರೆ ,. ಮಹಾರಾಷ್ಟ್ರ ಸರ್ಕಾರ, ಸ್ಲಂ ಡಾಗ್ ನಲ್ಲಿ ಅಭಿನಯಿಸಿದ ಬಾಲಕಲಾವಿದರಿಗೆ ಫ್ಲಾಟ್ ಒದಗಿಸುವ ಭರವಸೆ ನೀಡಿದ್ದಾರೆ..ಥೇಟ್ 'ಶರದ್ ಪವಾರ್' ನಂತೆ!! ಆಸ್ಕರ್ ಬಂದಿರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ..ಆದರೆ, ಈ ಸ್ಲಂ, ಈ ಬದುಕು, ಚಿಂದಿ ಪುಟಾಟಿಗಳು, ಅವರ ಕನಸುಗಳು, ಕಕ್ಕುಲತೆ...ಜೀವ ಹಿಂಡುವ ಬದುಕು, ಸರ್ಕಾರ ನೀಡಿರುವ ಭರವಸೆಗಳು, ವಿಜಯೋತ್ಸವ....ಯಾಕೋ ನನ್ನೊಳಗೊಂದು 'ನೋವಿಗೆ' ಕಾರಣವಾಯಿತು. ಅದನ್ನೇ 'ಶರಧಿ' ಜೊತೆ ಹಂಚಿಕೊಂಡೆ.