Sunday, July 26, 2009

ನೆನಪುಗಳ ಜೊತೆಗೆ ಒಂದಿಷ್ಟು ಹೊತ್ತು...


ನೀ ನೀಡಿದ 'ಹಿಡಿಪ್ರೀತಿ'ಯ ನೆನಪು.
ಅಮ್ಮನಂತೆ ಸಂತೈಸಿದ ನಿನ್ನ ನುಣುಪು ಕೈಗಳ ನೆನಪು

ನನ್ನ ಕಾಲ್ಗೆಜ್ಜೆ ಸದ್ದಿಗೆ ದನಿಗೂಡಿಸಿದ ನಿನ್ನ ಹೃದಯದ ನೆನಪು.

ನಿನ್ನ ಪ್ರೀತಿಯ ಜೋಗುಳಕ್ಕೆ ನಿದ್ದೆಯ ಮಂಪರಿಗೆ ಜಾರಿದ ನೆನಪು

ನನ್ನ ಕಣ್ಣುಗಳಲ್ಲಿ ಬೆಳಕು ಮೂಡಿಸಿದ ಆ ನಿನ್ನ ಪ್ರೀತಿಯ ಕಂಗಳ ನೆನಪು

ನೀತೊಡಿಸಿದ ಕೈ ಬಳೆ, ಮುಡಿಸಿದ ಘಮ್ ಎನ್ನುವ ಮಲ್ಲಿಗೆಯ ನೆನಪು.

ನಿನ್ನ ಜೊತೆ ದೇವರೆದುರು ಮಂಡಿಯೂರಿ ನಮಿಸಿದ ನೆನಪು

ನಿನ್ನ ಹೆಸರಿನಲ್ಲಿ ದೇವರಿಗೆ ಹಣ್ಣುಕಾಯಿ ಮಾಡಿಸಿದ ನೆನಪು
ನಿನ್ನ ಮಡಿಲಲ್ಲಿ ಪ್ರೀತಿಯ ಅನನ್ಯತೆಯನ್ನು ಸವಿದ ನೆನಪು

ಮನತುಂಬಾ ಕನಸುಗಳನ್ನು ಹೊತ್ತು ನಿನ್ನ ಜೊತೆ ದಾರಿಗುಂಟ ಸಾಗಿದ ನೆನಪು
ನಿನ್ನ ಕಂಗಳಲ್ಲಿ ಕಣ್ಣಿಟ್ಟು 'ನೀ ನನ್ನ ಜೊತೆಗಿರ್ತೀಯಾ?' ಎಂದು ಭರವಸೆಯಿಂದ ಕೇಳಿದ ನೆನಪು.
ಜ್ವರದಿಂದ ನರಳುತ್ತಿರುವಾಗ ತುತ್ತು ಬಾಯಿಗಿಟ್ಟು ಅಮ್ಮನ ವಾತ್ಸಲ್ಯ ತೋರಿದ ನಿನ್ನ ವಿಶಾಲ ಮನದ ನೆನಪು

'ನಂಗ್ಯಾರಿಲ್ಲ' ಎಂದು ನಿನ್ನೆದೆಯಲ್ಲಿ ಅತ್ತಾಗ 'ನಾನಿದ್ದೇನೆ' ಎಂದು ಬದುಕಿನ ಧೈರ್ಯ ತುಂಬಿದ ನಿನ್ನ ದಿಟ್ಟ ಹೃದಯದ ನೆನೆಪು.!

Thursday, July 23, 2009

ಚೆಂದದ ಕಾರ್ಯಕ್ರಮಕ್ಕೆ ನೀವೂ ಬನ್ನಿ..


ಇದೇ ಬರುವ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಚೆಂದದ ಕಾರ್ಯಕ್ರಮವೊಂದು ಇದೆ. ಅಲ್ಲಿಗೆ ನೀವೂ ಬಂದ್ರೆ ಇನ್ನೂ ಮೆರುಗು. ಬರ್ತೀರಲ್ಲಾ...
-ಚಿತ್ರಾಕರ್ಕೇರಾ

Thursday, July 9, 2009

ಜಿನುಗು ಮಳೆಗೆ, ಚುಟುಕ ಹನಿಗಳು...

ನಿನ್ನೆಯ ಜಿನುಗು ಮಳೆಗೆ ನನ್ನ ಪುಟ್ಟ ಮನೆಯಲ್ಲಿ ಕುಳಿತಾಗ ಯಾವುದೋ ಪುಸ್ತಕ ಓದುತ್ತಿದ್ದಂತೆ ಚುಟುಕ ಕವಿ ದಿನಕರ ದೇಸಾಯಿ ಅವರ ಚುಟುಕುಗಳು ಕಣ್ಣಿಗೆ ಬಿದ್ದವು. ಓದುತ್ತಿದ್ದಂತೆ ಮಳೆಗಾಲಕ್ಕೆಂದು ಅಮ್ಮ ಮಾಡಿಕೊಟ್ಟ ಹಪ್ಪಳ-ಸಂಡಿಗೆ ಮೆಲ್ಲೋ ಅನುಭವವಾಯ್ತು. ನಾನು ಓದಿದ್ದನ್ನು ನಿಮಗೂ ಉಣಬಡಿಸಿದ್ದೇನೆ. ಪುರುಸೋತ್ತು ಇದ್ರೆ ಓದಿಕೊಳ್ಳಿ. ಬೆಂಗಳೂರಿನ ಜಿಟಿಜಿಟಿ ಮಳೆ, ಚುಮುಚುಮು ಚಳಿಗೆ ನಿಮಗೂ ಹಪ್ಪಳ-ಸಂಡಿಗೆ ತಿಂದಂತಾಗಬಹುದೇನೋ...?

"ಬಿಸಿನೆಲದಲ್ಲಿ ತುಸು ಹಸಿಯಾಯ್ತು
ಬಿತ್ತಿದ ನೆಲದ ಬೀಜವು ಸಸಿಯಾಯ್ತು
ಸಸಿ ದೊಡ್ಡಗಾಗಲು ತೆನೆಯಾಯ್ತು
ತೆನೆಯೇ ದೇವರ ಮನೆಯಾಯ್ತು"

"ಬೆಳೆಯೇ ಭೂಮಿಯು ಬಂಗಾರ
ಬೆಳೆಯೇ ದೇವರ ಅವತಾರ"

"ಬಾಯಿಗಿಲ್ಲವೆಂದು ತುತ್ತು
ನಿನ್ನ ಕಣ್ಣಮುಂದೆ ಅತ್ತು
ಹೋದರೆನಿತೋ ಮಂದಿ ಸತ್ತು
ನೀನು ಸತ್ತರೇನು ಕುತ್ತು"

"ಜೋ ಜೋ ಜೋ ಜೋ ನನ ತಂಗಿ
ಜೋಗುಳ ಹಾಡುವೆ ರಸರಂಗಿ"


"ಕಟ್ಟಿದರೆ ಅನುಭವದ ತಳಹದಿಯ ಮೇಲೆ
ಕೊನೆಯವರೆಗೂ ನಿಲುವುದು ಕವಿಯ ಲೀಲೆ
ಇಟ್ಟಂಗಿಯಾಗಲಿ ಮಾತು ಕೃತಿಯೊಂದು
ಸರಿಯಾದ ಜಾಗದೊಳಗಿರಲಿ ಒಂದೊಂದು"

"ಲಾಭದಾಯಕವಲ್ಲ ಕವಿಯ ಬೇಸಾಯ
ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ"

"ಎಲೆಕವಿಯೇ ನಿನಗೇಕೆ ನರನ ಬಹುಮಾನ
ಕಾಲರಾಯನು ಕೇಳುವನು ನಿನ್ನ ಗಾನ
ಮೊದಲು ಸಿಗಬೇಕೆಂದು ಕೈಮುಗಿಯಬೇಡ
ತಲೆಬಾಗಿಸಿದರೆ ಕವಿ, ಕವಿಯುವುದು ಮೋಡ"

"ಕಾವ್ಯವೆಂಬುವುದು ಜಾಣತನವಲ್ಲ ಹುಚ್ಚು
ತೀವ್ರವಾದರೆ ಹುಚ್ಚು ಕವಿಯ ಬೆಲೆ ಹೆಚ್ಚು"

"ತರಕಾರಿ ಎಂಬುವುದು ಅಲ್ಲ ಬರಿ ಬದನೆ
ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ
ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ
ಈ ಪಾಕ ಎನ್ನುವುದು ಅನುಭವದ ಲೋಕ"

Friday, July 3, 2009

ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!

ಜುಲೈ 2, 2006!
ಭಾನುವಾರ.


ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.

ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!

ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.

ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.

ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..