Friday, November 23, 2007

ಪ್ರೀತಿಯಿಲ್ಲದ ಮೇಲೆ..

ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗುರುಳಿ
ನೆಲಕೆ ಹಸಿರು ಮೂಡೀತು ಹೇಗೆ?
-ಜಿಎಸ್ಎಸ್ ಅವರ ಕವನ ಪ್ರೀತಿಗೆಂದೇ ಹುಟ್ಟಿದೆ ಅನಿಸುತ್ತೆ.

ಯಾಕೋ ಪ್ರೀತಿಯ ಬಗ್ಗೆ ಒಂದಿಷ್ಟು ಬರೆಯೋಣ ಅನಿಸ್ತು. ಎಷ್ಟೋ ಕವಿಗಳು ಪ್ರೀತಿಯ ಬಗ್ಗೆ ಬರೆದಿದ್ದಾರೆ. ಹಾಡಿ ಹೊಗಳಿದ್ದಾರೆ. ಆದ್ರೂ ಪ್ರೀತಿಯನ್ನು ಸೀಮಿತವಾಗಿರಿಸಲು ಸಾಧ್ಯನಾ? ಈ ಶಬ್ಧವೇ ಅದೆಷ್ಟು ಚೆನ್ನ. ಪ್ರೀತಿಯ ಕಲ್ಪನೆಯೇ ಅದೆಷ್ಟು ಖುಷಿ ನೀಡುತ್ತೆ. ಆದರೆ ಪ್ರೀತಿಯೆಂದರೆ ಅದೊಂದು ಕಲ್ಪನೆ ಅಲ್ಲ, ಅದೊಂದು ನಿತ್ಯ ಸತ್ಯ. ಪ್ರೀತಿಯೆಂದರೆ ಮನುಷ್ಯ ಬದುಕಿನ ಸ್ಪೂರ್ತಿ. ಪ್ರೀತಿಯೆಂದರೆ..ಅನುಭೂತಿ , ಬದುಕು ಇನ್ನು ಏನೇನೋ...

"ಪ್ರೀತಿಗೆ ಹೆಸರು ಕೊಡಬೇಡಿ. ನೀವು ಪ್ರೀತಿಗೆ ಹೆಸರಿಟ್ಟಾಗ ಅದೊಂದು ಸಂಬಂಧವಾಗುತ್ತದೆ. ಸಂಬಂಧಗಳು ಪ್ರೀತಿಯನ್ನು ಸೀಮಿತಗೊಳಿಸುತ್ತವೆ. ಸಂಬಂಧವನ್ನು ಹೇರುವುದರಿಂದ ಪ್ರೀತಿ ನಿರ್ಬಂಧಿತವಾಗುತ್ತದೆ" ರವಿಶಂಕರ್ ಗುರೂಜಿ ಅವರ ಮಾತಿದು. ಹೌದು! ಪ್ರೀತಿ ಸಂಬಂಧಗಳನ್ನೂ ಮೀರಿದ್ದು. ಮನುಷ್ಯನೊಬ್ಬ ಪ್ರೀತಿಯನ್ನು ಪ್ರೀತಿಸಿದಾಗ ಮಾತ್ರ ಪರರನ್ನೂ ಪ್ರೀತಿಸಲು ಸಾಧ್ಯ. ಜಗತ್ತಿನ ಪ್ರೀತಿಯೊಂದಿಗೆ ಅಂತರ್ಗತನಾಗಲು ಸಾಧ್ಯ. ಅದಕ್ಕಾಗಿ ಕವಿ ಜಿಎಸ್ಎಸ್ ಕೇಳಿರುವುದು 'ಪ್ರೀತಿಯಿಲ್ಲದ ಮೇಲೆ...".

ಪ್ರೀತಿಯಲ್ಲಿ ಅದ್ದಿ ತೆಗೆದ ಬದುಕು ಅದೆಷ್ಟು ಚೆನ್ನ ಅನಿಸುತ್ತೆ ಅಲ್ವೇ? ಪ್ರೀತಿ ಸೀಮಿತವಲ್ಲ, ಅದು ವಿಶಾಲ. ಅಮ್ಮ ನಮ್ಮನ್ನು ಪ್ರೀತಿಸ್ತಾರೆ, ಅಪ್ಪ ನಮ್ಮನ್ನ ಪ್ರೀತಿಸ್ತಾರೆ..ಅಕ್ಕ, ತಮ್ಮ,ಅಣ್ಣ-ತಂಗಿ ನಮ್ಮನ್ನು ಪ್ರೀತಿಸ್ತಾರೆ..ಪುಟ್ಟ ಮಕ್ಕಳೂ ಪ್ರೀತಿಸ್ತಾರೆ..ಜಗತ್ತೇ ನಮ್ಮನ್ನು ಪ್ರೀತಿಸುತ್ತೆ ಅಂದಾಗ ಪ್ರೀತಿಯನ್ನು ಯಾವುದೋ ಸಂಕುಚಿತ ಅರ್ಥಕ್ಕೆ ಸೀಮಿತವಾಗಿಸೋದು ಎಷ್ಟೊಂದು ತಪ್ಪು ಅನಿಸುತ್ತೆ ಅಲ್ಲ? ಯಾರಾದರೇನು ಪ್ರೀತಿಸಬೇಕು..ಮನುಷ್ಯರನ್ನ, ಪ್ರಾಣಿಗಳನ್ನ, ಪಕ್ಷಿಗಳನ್ನ, ಪೃಕೃತಿಯ ಮಡಿಲನ್ನ, ಸಮಸ್ತ ಜೀವ ಪ್ರಪಂಚವನ್ನೇ ಪ್ರೀತಿಸಿಬೇಕೆಂದು ಅನಿಸುತ್ತೆ ಅಲ್ವೇ? ನಾವು ನಮ್ಮನ್ನು ಪ್ರೀತಿಸಬೇಕು, ನಮ್ಮೊಳಗಿನ ತೇಜಸ್ಸನು ನಾವು ಪ್ರೀತಿಸಬೇಕು, ನಮ್ಮ ಬದುಕು, ಪ್ರೀತಿಯನ್ನು ಪ್ರೀತಿಸಲು ಕಲಿಯಬೇಕು, ಹೀಗಿದ್ದಲ್ಲಿ ನಮ್ಮ ಬದುಕು ಹೇಗಿರಬಹುದು ಅಲ್ವೇ?

ದ.ರಾ. ಬೇಂದ್ರೆ ಅವರು ಪ್ರೀತಿಯ ಬಗ್ಗೆ ಹೀಗೆನ್ನುತ್ತಾರೆ;
ಒಲವೆಂಬ ಹೊತ್ತಗೆಯ ಓದಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುವಿಯಾ ಹುಚ್ಚ?
ಹಗಲಿರುಳೂ ದುಡಿದರೂ, ಹಲಜನುಮ ಕಳೆದರೂ
ನೀ ತೆತ್ತಲಾರೆ ಬರೇ ಅಂಚೆ ವೆಚ್ಚ!!

ಪ್ರೀತಿಯ ಆಳವನ್ನು ತಿಳಿಸಿರುವ ತಾವೋ, "ನನ್ನ ಹೃದಯದೊಳಗಿಂದ ಹೊರನೆಗೆಯುವ ವಲಸೆ ಹಾಡುಗಳು ನಿನ್ನ ಪ್ರೀತಿಯ ಸ್ತರದಲ್ಲಿ ಗೂಡು ಕಟ್ಟಲೆತ್ನಿಸುತ್ತವೆ" ಪ್ರೀತಿ ಇರಲಿ, ನಮ್ಮೊಳಗೆ, ಜಗದೊಳಗೆ. ನಮ್ಮನ್ನು ಸಮಸ್ತ ಜಗತ್ತನ್ನು ಪ್ರೀತಿಸೋಣ. ಪ್ರೀತೀನ ಪ್ರೀತಿಯಿಂದ ಗೆಲ್ಲೋಣ. ಗೊತ್ತುಗುರಿಯಿಲ್ಲದೆ ಮೂಡುವ ಬದುಕಿನ ಸಂಬಂಧಗಳನ್ನು ಪ್ರೀತಿಯ ಮೂಲಕ ಬೆಸೆಯೋಣ. ಮರೆತುಹೋಗದಷ್ಟು ಹೃದಯದಲ್ಲಿ ನೆಲೆಸಿಬಿಡೋಣ..ಪ್ರೀತಿಯ ಸ್ತರದಲ್ಲಿ ಬದುಕನ್ನು ಕಟ್ಟೋಣ. ಏನೋ ಅಂದೆ ಪ್ರೀತಿ..ಪ್ರೀತಿ. ಬದುಕಿನ ಪ್ರೀತಿ..ಬದುಕುವ ಪ್ರೀತಿ..ನಮ್ಮೆಲ್ಲರ ಬದುಕನ್ನು ಬೆಳಗುವ ಪ್ರೀತಿಯೆಂಬ ಪುಟ್ಟ ಹಣತೆ..ಸದಾ ನಾವಿದನ್ನು ಬೆಳಗಬೇಕು. ಜಗತ್ತು ಏನೇ ಆಗಲಿ, ನಾವು ಪ್ರೀತಿಸಬೇಕು..ಪ್ರತಿಯೊಬ್ಬರಿಗೂ ಪ್ರೀತಿಯ ತುತ್ತನ್ನು ಉಣಬಡಿಸಬೇಕು..ಜೋಪಾನವಾಗಿ ಪ್ರೀತಿನ ಹೃದಯದಲ್ಲಿಬಚ್ಚಿಡೋಣ..ಬಿಚ್ಚಿಡೋಣ..ಅದೊಂದು ಶುಭ್ರ ಕನ್ನಡಿ..ಒಡೆಯದಂತೆ ಜೋಪಾನವಾಗಿರಿಸೋಣ.. ಬದುಕೋಣ.. ನಿಷ್ಕಲ್ಮಶ ಪ್ರೀತಿಯ ಸವಿ ಸವಿಯೋಣ..ಪ್ರೀತಿಯ ಮಳೆ ಸುರಿಸೋಣ.. ಕೊನೆಗೊಂದಿಷ್ಟು..
ಕವಿದ
ಕಾರ್ಮೋಡಗಳ ಸರಿಸಿ..
ಪ್ರೀತಿಯ ದೀಪ ಹಚ್ಚೋಣ..
ನಿನ್ನೆ-ನಾಳೆಗಳ ನಡುವೆ..
ಪ್ರೀತಿಯ ಅಲೆಯಲಿ
ತೇಲೋಣ
ಏನಂತೀರಿ?

3 comments:

ಸುನಿಲ್ ಹೆಗ್ಡೆ said...
This comment has been removed by the author.
ಸುನಿಲ್ ಹೆಗ್ಡೆ said...

Chitra.. nimma anisekege nannadondistu dwani..
Preethi choukattu haakirada vishala aakashdanthe. Adare adakke thanna manasigethoochida artha needidaga maathra samasye prarambavagutte...

ವಿ.ರಾ.ಹೆ. said...

good one.
ಓದ್ತಾ ಓದ್ತಾ ನಂಗೂ ಹಾಗೇ ಅನಿಸ್ತು.