Tuesday, November 13, 2007

ಶಿವಲಿಂಗಕ್ಕೆ ಪ್ರದಕ್ಷಿಣೆ ಹಾಕಿದ್ರೆ..ಮಂತ್ರಿಯಾಗ್ತಾರಂತೆ!!

ಆಕೆ ವಿಜಾಪುರದ ಮಹಿಳೆ. ಜೆಡಿಎಸ್ -ಬಿಜೆಪಿ ಮೈತ್ರಿ ಹಾಗೂ ಯಡಿಯೂರಪ್ಪ ಸಿಎಂ ಆಗ್ಬೇಕೆಂದು ಹರಕೆ ಹೊತ್ತಿದ್ರಂತೆ. ಆ ಹರಕೆಯೇನು ಗೊತ್ತೇ? ಇಲ್ಲಿನ ತಿಡಗುಂದಿ ಗ್ರಾಮದ ಓಂ ಶ್ರೀ ಬಾಲತಪಸ್ವಿ ಮಲ್ಲಿನಾಥ ಮಹಾರಾಜರ ಆಶ್ರಮದಲ್ಲಿರುವ 'ಶಿವಲಿಂಗಕ್ಕೆ ಒಂದು ಲಕ್ಷ ಪ್ರದಕ್ಷಿಣೆ ಹಾಕೋದು'!! ಅಬ್ಬಾ ಇದೇನಪ್ಪಾ?! ಸುಳ್ಳೋ/ನಿಜನೋ ಅಂತ ಡೌಟು ಬಂದ್ರೆ ಇವತ್ತಿನ ಸಂಯುಕ್ತ ಕರ್ನಾಟಕ ಪೇಪರ್ ಓದಿ.(ನವೆಂಬರ್ 14). ಆಕೆಯ ಹೆಸ್ರು ರೇಖಾ ಬಾಪುಗೌಡ ಪಾಟೀಲ. ದಿನಕ್ಕೆ ಹತ್ತು ಸಾವಿರ ಪ್ರದಕ್ಷಿಣೆ ಹಾಕಿ, ಹತ್ತು ದಿನದಲ್ಲಿ ಹರಕೆ ತೀರಿಸೋದು. ನಿನ್ನೆ ಹತ್ತು ಸಾವಿರ ಪ್ರದಕ್ಷಿಣೆ ಮುಗಿಸಿದ್ದಾರಂತೆ. ಇಷ್ಟು ಮಾತ್ರವಲ್ಲ ಈಗಿನ ಹೊಸ ಸರ್ಕಾರ ಸಚಿವ ಸಂಪುಟದಲ್ಲಿ ಶಾಸಕ ಅಪ್ಪೂಸಾಹೇಬ ಪಟ್ಟಣಶೆಟ್ಟಿಗೆ ಸ್ಥಾನ ದೊರೆಯಲೆಂದು ಇನ್ನೂ 50 ಸಾವಿರ ಪ್ರದಕ್ಷಿಣೆಯ ಹರಕೆ ಹೇಳಿದ್ರಂತೆ..ಅಂತೂ -ಇಂತೂ ಪ್ರದಕ್ಷಿಣೆ ಹಾಕಿ, ಹಾಕಿ ಮಂತ್ರಿಪಟ್ಟ ಪಡೆಯೋ ಹುನ್ನಾರ ಅನಿಸುತ್ತೆ..

ಅಲ್ರೀ ಪ್ರದಕ್ಷಿಣೆ ಹರಕೆಯಿಂದಲೇ ಎಲ್ಲವೂ ಆಗ್ತಿದ್ರೆ ನಮ್ ರಾಜಕಾರಣಿಗಳು ಜನರಿಂದ ಛೀ! ಥೂ! ಎಂದು ಉಗಿಸಿಕೊಳ್ತಿದ್ದರಾ? ಅಥವ ದೇವೇಗೌಡ್ರು ಇಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯವಿತ್ತೇ? ಯಡಿಯೂರಪ್ಪ ಸಿಕ್ಕ ಸಿಕ್ಕ ಮಠಾಧೀಶರ ಕಾಲಿಗೆ ಬೀಳಬೇಕಿತ್ತೇ? ಕೇಂದ್ರದ ಮಂತ್ರಿ ಮಹಾಶಯರು ದೆಹಲಿಯಿಂದ ಬೆಂಗಲೂರಿಗೆ ಬಂದು ಸುಸ್ತಾಗಬೇಕಿತ್ತಾ? ಅಥವ ನಮ್ ರಾಜ್ಯದ ಮಂತ್ರಿ, ಸಚಿವರು ರಾತೋರಾತ್ರಿ ದೆಹಲಿಗೆ ಹೋಗೋ ಅವಶ್ಯಕತೆ ಇತ್ತಾ? ನಾಯಕ ಮಹಾಶಯರು ರಾಜಭವನದ ಎದುರು ತಮ್ಮ ಬಲಾಬಲ ಪ್ರದರ್ಶಿಸಿದ್ದರಿಂದ ಪಾಪ ಜನರೆಲ್ಲಾ ಟ್ರಾಪಿಕ್ ಜಾಮ್ನಲ್ಲಿ ಸಿಕ್ಹಾಕೋಳ್ತಾ ತೊಂದ್ರೆ ಅನುಭವಿಸ್ತಾ ಇದ್ರಾ? ಇನ್ನೂ ಹೇಳಬೇಕಂದ್ರೆ ಅಧಿಕಾರ ಹಸ್ತಾಂತರ ದಿನ ಸಮೀಪಿಸುತ್ತಿದ್ದಂತೆ ನಗರದ ರಾಜಕೀಯ ಸುದ್ದಿ ಸಂಗ್ರಹಿಸುವ ನಮ್ಮ ಸ್ನೇಹಿತರೆಲ್ಲಾ ಊಟ,ನಿದ್ದೆ ಬಿಟ್ಟು ಅಲ್ಲೇ ಬೀಡುಬಿಟ್ಟಿದ್ರು..ನನ್ ಮಿತ್ರರೊಬ್ರು ನಾನು ಪೋನು ಮಾಡಿದಾಗ 'ಏನ್ ಚಿತ್ರಾ ನಾನು ಸಕತ್ ಬ್ಯುಸಿ, ವಿಧಾನಸೌಧ-ರಾಜಭವನ ಸುತ್ತಿ ಸುತ್ತಿ ಸುಸ್ತಾಯಿತು. ಈ ಕೊಳಕು ರಾಜಕೀಯ' ಅಂಥ ಬಡಬಡಿಸುತ್ತಿದ್ರು. ಪಾಪ ಪೋಟೋಗ್ರಾಫರ್ಗಳ ಕತೆ ಕೇಳೋದೇ ಬೇಡ. ಯದ್ವಾತದ್ವಾ ನುಗ್ಗಿ, ಬೊಬ್ಬೆ ಹೊಡೆದು..'ಸೈಡ್, ಸ್ಮೈಲ್,ಓರೆ-ಕೋರೆ' ಹೇಳಿ ಹೇಳಿ ಸುಸ್ತೋ ಸುಸ್ತು. ತಲೆತಿರುಗಿ ಆಯತಪ್ಪಿ ಬಿಳೋ ಪರಿಸ್ಥಿತಿ ಅವರದು. ಶಿವಲಿಂಗಕ್ಕೆ ಸುತ್ತು ಬಂದ್ರೆ 'ಮಂತ್ರಿಗಿರಿ' ಸುಗಮವಾಗುವುದಾದ್ರೆ ಈ ಕಷ್ಟವನ್ನೆಲ್ಲಾ ಅನುಭವಿಸಬೇಕಿತ್ತಾ?

-ಆಫೀಸ್ನಲ್ಲಿ ಬಂದು ಪೇಪರ್ ಓದಿದಾಗ ಈ ಪ್ರದರ್ಶನದ ಫಲದ ಬಗ್ಗೆ ಕೇಳಿದ್ದೇ ತಡ, ನನ್ ತಲೇಲಿ ಇಂಥ ನೂರಾರು ಪ್ರಶ್ನೆಗಳು ತಲೆತಿನ್ತಾ ಇದ್ದುವು. ಈ ಪ್ರದರ್ಶನ, ಪೂಜೆ ಯಾರ ಹಿತಕ್ಕೆ? ಪಕ್ಷದ ಹಿತಕ್ಕೋ, ಜನರ ಹಿತಕ್ಕೋ ದೇವ್ರೆ ಬಲ್ಲ. ಕರ್ನಾಟಕದ ಈಗಿನ ಸಮ್ಮೀಶ್ರ ಸರ್ಕಾರದ ಸ್ಥಿತಿಯಂತೂ ರಾಜ್ಯದ ಯಾವ ಪ್ರಜೆಗೂ ಬೇಡ.

ಅಲ್ರೀ..ಒಂದು ದೇವಸ್ಥಾನಕ್ಕೆ 9 ಸುತ್ತು ಬಂದಾಗ, ಸುಸ್ತಾಗುವ ನಮಗೆ ಈ ಹೆಂಗಸು 1 ಲಕ್ಷ ಸುತ್ತು ಬಂದ್ರೆ ಹೇಗಾದೀತು ಅಂಥ ನನ್ ಯೋಚನೆ..! ಹೀಗೆ ಸುತ್ತು ಬಂದ್ರೆ, ನಮ್ ಬೇಡಿಕೆಗಳನ್ನು ಕೆಳಿಸಿಕೊಂಡು ದೇವ್ರು ಎಲ್ಲದಕ್ಕೂ 'ವರ' ನೀಡಿದ್ರೆ ನಮಗೂ ಮಂತ್ರಿಗಿರಿಯು ಅಶೆಯೇನಾದ್ರೂ ಇದ್ರೆ ಈಡೇರುತ್ತಿತ್ತೋ ಏನೋ ಅಲ್ವಾ?

No comments: