Tuesday, November 6, 2007

'ರಾಮ'ನಿದ್ದಾನೆ..ಸೀತೆ?!

"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ" ಅಬ್ಬಬ್ಬಾ! ಏನು ಮಾತೋ? ಕೇಳಿದ್ರೆ ಹುಡುಗೀರಿಗೆ ಹೀಗೂ ಅನ್ತಾರಾ? ಅಂತ ಇಂದಿನ ಪೀಳಿಗೆ ಜನ ಮೂಗಿನ ಮೇಲೆ ಬೆರಳಿಡುವುದರಲ್ಲಿ ಅಚ್ಚರಿಯೇನಿಲ್ಲ. ಕಾರಣ ಪ್ರಸ್ತುತ ಹುಡುಗೀರನ್ನು ಕಾಣೋ ದೃಷ್ಟಿಕೊನ ಹಂಗಿದೆ. ಹುಡುಗೀರೇ ಚೇಂಜ್ ಆಗಿದ್ದಾರೆ ಅನ್ತಾರೆ ಕೆಲವರು, ಈ ಮಾತನ್ನು ಅಲ್ಲಗಳೆಯಲ್ಲ. ಆದ್ರೆ ಇದರಲ್ಲಿ ಸಮಾಜದ ಪಾತ್ರವೂ ಇದೆ ಎಂಬುವುದನ್ನು ಮರೆಯಬಾರದು. ಮಾತ್ರವಲ್ಲ ಹುಡುಗೀರು ಎಷ್ಟೇ ಮುಂದುವರೆಯಲಿ ಸಮಾಜ ಹುಡುಗೀರನ್ನು ಕಾಣುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ.

'ಒಳಗೊಳಗೆ ಕುದಿದ ಭೂಕಂಪವಿದ್ದರೂ ಮೇಲೆ ಹುಲ್ಲಿನ ಹಸಿರು ತಂಪನ್ನೂ ಹೂವಿನ ನರುಗಂಪನ್ನೂ ಹಬ್ಬಿಸುವ ಭೂತಾಯಂತೆ ಹೆಣ್ಣಿನ ಹೃದಯ' ಇದು ಖ್ಯಾತ ಸಾಹಿತಿ ಗೌರೀಶ ಕಾಯ್ಕಿಣಿ ಮಾತು. ಹೆಣ್ಣನ್ನು ಶಕ್ತಿ, ದೇವತೆ, ಹೆಣ್ಣು ಸತ್ಯ ಎಂದೆಲ್ಲಾ ಸಮಾಜ ಹೊಗಳಿದೆ. ಕವಿಗಳಂತೂ ಹೆಣ್ಣನ್ನು ಹೇಗೆ ಬೇಕೋ ಹಾಗೆ ಹೊಗಳಿ, ಹೋಲಿಸಿ ಖುಷಿಪಟ್ಟಿದ್ದಾರೆ. ಆದರೆ ಹೆಣ್ಣನ್ನು ದೇವತೆಗಳಿಗೆ ಹೋಲಿಸಿದ ಸಮಾಜವೇ ಹೆಣ್ಣಿಗೆ ಕಳಂಕಪಟ್ಟ ಕಟ್ಟುತ್ತಿದೆ. ಪುರುಷ ಪ್ರಧಾನ ಸಮಾಜ ಮರೆಯಾಗಿದೆ ಅನ್ನುತ್ತಿದ್ದಾರೆ. ಹೆಣ್ಣು ಮುಂದುವರೆದಿದ್ದಾಳೆ, ಹೆಣ್ಣು ಅಬಲೆಯಲ್ಲ, ಸಬಲೆ, ಆಕೆ ಸ್ವತಂತ್ರಳು ಎಂದು ಅದೆಷ್ಟೋ ವರ್ಷಗಳಿಂದ ಈ ಮಂತ್ರ ಜಪಿಸುತ್ತಾಳೆ ಇದೆ ಸಮಾಜ. ಕೆಲವರಂತೂ ವೇದಿಕೆ ಮೇಲೊಂದು ಮೈಕ್ ಸಿಕ್ರೆ ಸಾಕು..ಹೆಣ್ಣನ್ನು ಹೊಗಳಿ ಅಟ್ಟಕೇರಿಸುತ್ತಾರೆ. ಇದು ನಡೆದುಕೊಂಡು ಬಂದಿದ್ದ ಹಾಗೂ ಬರುತ್ತಿದ್ದ ರೀತಿ. ಆದರೆ ಹೆಣ್ಣಿನ ಮೇಲೆ ನೀಚ ಪುರುಷನೊಬ್ಬ ಅತ್ಯಾಚಾರ ಎಸಗಿದರೆ...? ತನ್ನದಲ್ಲದ ತಪ್ಪಿಗೆ ಆಕೆ ಜೀವನವಿಡೀ ನರಕಯಾತನೆ ಅನುಭವಿಸಬೇಕು. ಅಲ್ಲಿ ಆಕೆಯದು ಕಿಂಚಿತ್ತೂ ತಪ್ಪಿಲ್ಲ..ಆದರೆ ಯಾರೋ ಮಾಡಿದ ತಪ್ಪಿಗೆ ಆಕೆಗೆ ಶಿಕ್ಷೆ. ಇಡೀ ಊರಿಗೆ ಊರೇ ಆಕೆಯತ್ತ ಸಂಶಯದಲ್ಲಿ ನೋಡುತ್ತೆ. ಆಕೆ ಒಳ್ಳೆಯವಲ್ಲ, ಶೀಲ ಕೆಟ್ಟವಳು. ಯಾರೋ ಅವಳ್ನ ಅತ್ಯಾಚಾರ ಮಾಡಿದನಂತೆ.. ಆಕೆಗೊಂದು ಬದುಕು ಕೊಡಲು ಯಾವುದೇ ಪುರುಷ ಮುಂದೆ ಬರಲ್ಲ. ಆದರೆ ಅತ್ಯಾಚಾರ ಮಾಡಿದ ಆ ನೀಚ ಸದ್ಘುಣಶೀಲ ಶ್ರೀರಾಮ!!. ತಪ್ಪಿತಸ್ಥನಾಗಿದ್ದರೂ ರಾಜಾರೋಷವಾಗಿ ಬದುಕುತ್ತಾನೆ. ಅವನಿಗೆ ಹೆಣ್ಣು ಕೊಟ್ಟು ಮದುವೆ ಮಾಡಿಸುವವರಿದ್ದಾರೆ...ಆದರೆ ಅಪರಾಧಿಗೆ ಮಣೆಹಾಕಿ 'ಶ್ರೀರಾಮ'ನೆಂದು ಬಿರುದು ನೀಡುವ ನಮ್ಮ ಸಮಾಜ, ಯಾರೋ ಮಾಡಿದ ತಪ್ಪಿಗೆ ಜೀವನವನ್ನೇ ಕಣ್ಣೀರಾಗಿಸಿದ ನಿರ್ದೋಷಿ ಹೆಣ್ಣಿಗೆ 'ಶೀಲವಂತೆ ಸೀತೆ' ಎನ್ನುವುದೇ?

ಇಂದು ಅತ್ಯಾಚಾರದಂಥ ನೀಚ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗುವುದು ಬಲು ಅಪರೂಪ. ಮುಗ್ಧ ಮಕ್ಕಳ ಮೇಲೆಯೂ ಇಂಥಹ ಕೃತ್ಯ ನಡೆಯುತ್ತಲೇ ಇರುತ್ತದೆ. ಆದರೆ ಅಪರಾಧಿಗೆ ಸರಿಯಾದ ಶಿಕ್ಷೆ ನೀಡುವ ಕ್ರಮ ಇನ್ನೂ ಜಾರಿಯಾಗಿಲ್ಲ. ಯಾಕೆ ನಮ್ಮ ಸಮಾಜಕ್ಕೆ ಇದೆಲ್ಲಾ ಅರ್ಥವಾಗಲ್ಲ? ತನ್ನದಲ್ಲದ ತಪ್ಪಿಗೆ ಹೆಣ್ಣೊಬ್ಬಳು ಯಾಕೆ ಕೊರಗಬೇಕು? ಅವಳಿಗೂ ಕನಸಿದೆ, ಬದುಕಿನೊಂದಿಗೆ ಬದುಕಬೇಕು..ಸಮಾಜದಲ್ಲಿ ಆಕೆಗೂ ಒಂದು ಸ್ಥಾನಮಾನ ಬೇಕೆಂಬುವುದು ಯಾಕೆ ಅರ್ಥವಾಗಲ್ಲ? ಮತ್ತೊಂದು ಹೆಣ್ಣ ಮೇಲೆ ಪಾಪಕೃತ್ಯ ಎಸಗುವುವ ನೀಚರಿಗೆ ತನ್ನ ತಾಯಿಯೂ ಒಬ್ಳು ಹೆಣ್ಣೆಂಬ ಪ್ರಜ್ಞೆ ಯಾಕಿಲ್ಲ? ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರದಂಥ ಕೃತ್ಯಗಳು ನಡೆಯುವುದು ತೀರ ವಿರಳ. ಬಡಕುಟುಂಬದ ಹೆಣ್ಣುಮಕ್ಕಳ ಪಾಡು ಮಾತ್ರ ಕೇಳೋದೇ ಬೇಡ. ಇದು ನಮ್ಮ ಸಮಾಜದ ರೀತಿ-ನೀತಿ. ಹೆಣ್ಣನ್ನು ಕಾಣುವ ಸಮಾಜದ ದೃಷಿಕೋನ ಬದಲಾಗುವುದೆಂದು?

ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯ ಸಂಪುಟದಿಂದ ಕೆಲವೊಂದು ತುಣುಕುಗಳು(ಹೆಣ್ಣಿನ ಬಗ್ಗೆ) ಇಲ್ಲಿವೆ ...
-ಗಂಡು ಕ್ರಾಂತಿಯ ಅಗ್ರದೂತ-ಪ್ರಗತಿ-ಪರಿವರ್ತನದ ಪ್ರವರ್ತಕ, ಹೆಣ್ಣು ಮಾನವ ವಂಶದ ಪರಂಪರೆಯ ಪ್ರಾಣಾಧಾರ, ಸ್ಥಿತಿಸ್ಥಾಪಕ ಶಕ್ತಿ.
-ಬಾಳೆಂಬ ಬಂಟನಿಗೆ ಗಂಡು ತ್ರಾಣ, ಹೆಣ್ಣು ಪ್ರಾಣ
-ಗಂಡಿಗಿಂತ ಹೆಣ್ಣು ಹೆಚ್ಚು ಧಾರ್ಮಿಕಳು, ಸಾಮಾಜಿಕಳು, ಸಮಾಜಪ್ರಿಯಳು.
-ಪ್ರೇಮವನ್ನು ಅನಿವರ್ಚನೀಯ ಭಕ್ತಿಯಾಗಿ ಮಾರ್ಪಡಿಸುವ ಮಾಟ ಹೆಣ್ಣಿಗೇ ಶಕ್ಯ.

No comments: