Friday, November 2, 2007

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ?

ಅಮ್ಮ ಎಂದರೆ ಏನೋ ಹರುಷವೋ... ನಮ್ಮ ಪಾಲಿಗೆ ಅವಳೇ ದೈವವೋ... ಹೌದು! ಅಮ್ಮನೇ ನಮ್ಮ ಪಾಲಿನ ದೇವರು. ಒಂಬತ್ತು ತಿಂಗಳು ತನ್ನ ಉದರದಲ್ಲಿ ಹೊತ್ತು ಹೆತ್ತ ನಮ್ಮಮ್ಮ ನಮ್ಮ ಸರ್ವಸ್ವ. ನಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ಅಮ್ಮನ ಮಮತೆಯ ಸೆಲೆಯಿದೆ...ನಮಗಾಗಿ ಅಮ್ಮ ಸುರಿಸಿದ ಬೆವರಿನ ಸ್ಪರ್ಶವಿದೆ..ನಮಗಾಗಿ ತುತ್ತು ಅನ್ನವಿಟ್ಟು ಕಾದಿದ್ದಾಳೆ..ನಾವು ನಕ್ಕಾಗ ನಕ್ಕು, ಅತ್ತಾಗ ಮುದ್ದಿಸಿ ಸಲಹಿದ್ದಾಳೆ..ನಾವು ಕಷ್ಟಪಟ್ಟಾಗ ನಮ್ಮ ಕಷ್ಟದೊಂದಿಗೆ ಆಕೆಯೂ ಕೈಜೋಡಿಸಿದ್ದಾಳೆ..ಜಗವೆಲ್ಲಾ ನಮ್ಮನ್ನು ದೂರಿದರೂ, ನಮ್ಮಮ್ಮ ಪ್ರೀತಿಯಿಂದ ಅಪ್ಪಿ ಮುದ್ದಿಸಿ ಸಂತೈಸಿದ್ದಾಳೆ..ಸೋತಾಗ ಬೆನ್ನು ತಟ್ಟಿ ಗೆಲುವಿನತ್ತ ದಾರಿ ತೋರಿಸಿದ್ದಾಳೆ. ಹೌದು! ಮಾತೃದೇವೋಭವ...ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ.
*********
ಇತ್ತೀಚಿಗೆ ಮಹಾನಗರಿಯ ಬೀದಿಯೊಂದರಲ್ಲಿ ನಡೆದುಹೋಗುತ್ತಿದೆ. ಜಡಿಮಳೆ ಬೇರೆ. ರಸ್ತೆಯೇ ನದಿಯಾಗಿತ್ತು. ಮಳೆ-ಗಾಳಿಗೆ ನನ್ನ ಛತ್ರಿಯೂ ಸರ್ಕಸ್ ಮಾಡುತ್ತಿತ್ತು. ಹೇಗೋ ನಡೆದುಕೊಂಡು ಹೋಗುತ್ತಿದ್ದೆ... ಅಲ್ಲೊಂದು ಪುಟ್ಟ ಮನೆ. ಅಮ್ಮ-ಮಗ ಇಬ್ಬರೇ ಆ ಮನೆಯಲ್ಲಿ. ಅಮ್ಮ ಬದುಕೋದಕ್ಕೆ ತರಕಾರಿ ಮಾರಾಟ ಮಾಡುತ್ತಿದ್ದರೆ, ಮಗ ತಿನ್ನೋದಕ್ಕೆಂದೇ ಬದುಕುತ್ತಿದ್ದ. ಸಣ್ಣ ಪುಟ್ಟ ಕೆಲ್ಸ ಮಾಡಿ ಏನೋ ಅವನಿಗೆ, ತಿನ್ನೋಕೆ ಕುಡಿಯೋಕೆ ಮಾತ್ರ. ಆದ್ರೂ ಆ ಅಮ್ಮ..ನನ್ನ ಮಗ ಖಂಡಿತ ಒಳ್ಳೆಯವನಾಗುತ್ತಾನೆ.. ಆ ರೀತಿ ಹೇಳುವಾಗೆಲ್ಲಾ ಆ ಅಮ್ನನ ಕಣ್ಣಲ್ಲಿ ಆಶಾಕಿರಣ ಹೊಳೆಯುತ್ತಿತ್ತು...ಮಗ ಮುಂದೆ ತನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ..ಎಂದೇ ಆಕೆಯ ಬಲವಾದ ನಂಬಿಕೆ...ತನ್ನ ಮಗ, ಮನೆ ಎಲ್ಲದರ ಬಗ್ಗೆ ಆ ಅಮ್ಮ (ನಾನು ಆಂಟಿ ಅನ್ನುತ್ತಿದ್ದೆ) ನನ್ನತ್ರ ಹೇಳುತ್ತಿದ್ರು. ಎಷ್ಟೋ ಬಾರಿ ನನ್ನ ಮನೆಯಿಂದ ತಂದ ಮಂಗಳೂರು ರೊಟ್ಟಿಯನ್ನು ಅಮ್ಮನಿಗೆ ಕೊಟ್ಟಿದ್ದೆ. ನಾನು-ನಮ್ಮಣ್ಣ ಅಂದ್ರೆ ಅವರಿಗೆ ತುಂಬಾ ಇಷ್ಟ. ಅಂದು ಮಳೆಗಾಳಿಗೆ ನಡೆದುಹೋಗುತ್ತಿದ್ದ ನನಗೆ ಆ ಅಮ್ಮ ಮಳೆಗೆ ನೆನೆಯುತ್ತ ಮನೆಯ ಜಗುಲಿಯಲ್ಲಿ ಕುಳಿತಿದ್ದು ಕಂಡುಬಂತು. ಕೆದರಿದ ಕೂದಲು, ಅತ್ತು ಅತ್ತು ಸೊರಗಿದ ಮುಖ ನೋಡಿದಾಗಲೇ ನಂಗೆ ಮಗ ಏನೋ ಕಿತಾಪತಿ ಮಾಡಿದ್ದಾನೆ ಅಂದುಕೊಂಡೆ. ನನ್ನ ನೋಡಿದ ತಕ್ಷಣ ಅಮ್ಮ ಜೋರಾಗಿ ಅಳಲಾರಂಭಿಸಿದರು. ಕಾರಣ..??? 'ಮಗ ಇನ್ನೊಂದು ಹುಡುಗೀನ ಕರೆದುಕೊಂಡು ಬಂದು ಅಮ್ಮನ ಹೊರಗೆ ಹಾಕಿದ್ದ' ನನ್ನತ್ರ ಹೇಳದೆ ಯಾಕೆ ಕರೆದುಕೊಂಡು ಬಂದೆ ಎಂದು ಅಮ್ಮ ಕೇಳಿದ್ದಕ್ಕೆ ಮಗನಿಗೆ ಸಿಟ್ಟು ಬಂದು ಹೊರಗೆ ತಳ್ಳಿದ್ದಾನೆ..ಅಮ್ಮನ ಕತೆ ಕೇಳಿದರೂ ನಾನಾದರೂ ಏನು ಮಾಡಲಿ? ಕೈಯಲ್ಲಿದ್ದ ಒಂದು ಪ್ಯಾಕ್ ಬಿಸ್ಕೇಟ್ ಮತ್ತು 100 ರೂಪಾಯಿ ಕೊಟ್ಟೆ..ಆಗ ಆ ಅಮ್ಮ ಹೇಳಿದ ಮಾತೇನು ಗೊತ್ತೇ? "ನನಗೂ ಒಬ್ಬ ಮಗಳಿದ್ಳು..ಥೇಟ್ ನಿನ್ ಥರಹಾನೇ..ಆದರೆ ಅವಳೂ ಬಸ್ಸಿನಡಿಗೆ ಬಿದ್ದು ಸತ್ತು ಹೋದ್ಳು..ಇದ್ದಿದ್ದರೆ ಅವಳಾದರೂ ನೋಡಿಕೊಳ್ಳುತ್ತಿದ್ದಳು... ಆದ್ರೆ ಮುಂದೊಂದು ದಿನ ನನ್ ಮಗ ನನ್ನ ಬಳಿ ಖಂಡಿತ ಬರ್ತಾನೆ" ಎಂದು. ನಂತರ ಅಮ್ಮ ತನ್ನ ಹುಟ್ಟೂರು ದಾವಣಗೆರೆಗೆ ಹೋಗುವುದಾಗಿ ನನ್ನದೊಂದಿಗೆ ಹೇಳಿದ್ರು... ಅವರು ಬಸ್ಸು ಹತ್ತಿದ ಮೇಲೆ ನಾನು ನನ್ನ ದಾರಿ ಹಿಡಿದೆ.. ಈ ಘಟನೆ ನಡೆದು 2 ತಿಂಗಳೇ ಕಳೆದುಹೋಯ್ತು...ಆದರೆ ಅಮ್ಮನ ನೋವು ಇಂದಿಗೂ ನನ್ನ ಕಣ್ಣಲ್ಲಿ ನೀರೂರಿಸುತ್ತೆ...ಅಮ್ಮ ಎಂದಾಗಲೆಲ್ಲಾ ಆ 45 ವರ್ಷದ ಆ ಅಮ್ಮ ಕಣ್ಣೆದುರು ಬರುತ್ತಾರೆ..ಅವರು ನನ್ನೆದುರು ಕಣ್ಣಿರಿಟ್ಟಾಗ ನನ್ನ ಕಣ್ನೂ ಕಣ್ನೀರಾಗಿದೆ..ಮನಸ್ಸು ಗೋಳಾಡಿದೆ..ನಾನಾದರೂ ಏನು ಮಾಡಲಿ..? ಇಂದು ಇಂಥ ಸನ್ನಿವೇಶಗಳು ತೀರ ಸಾಮಾನ್ಯವಾಗಿಬಿಟ್ಟಿವೆ. ಆಧುನಿಕತೆ, ಜಾಗತೀಕರಣ ಮಾನವೀಯ ಸಂಬಂಧಗಳನ್ನು ಕಳಚುವಂತೆ ಮಾಡುತ್ತವೆ. ಭಾವನೆ, ಪ್ರೀತಿ ಇದ್ಯಾವುದೂ ಇಂದಿನ ಆಧುನಿಕ ಯುಗದಲ್ಲಿ ಕಾಣಸಿಗುವುದು ತೀರ ವಿರಳ..ತಂದೆ-ತಾಯಿ,ಗುರುಗಳನ್ನು ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು.. ಆದರೆ ಅವುಗಳ ಸ್ಪರ್ಶವೇ ಕ್ರಮೇಣವಾಗಿ ಮರೆಯಾಗುತ್ತಿವೆ..ನಾವು ಸಣ್ಣವರಾಗಿದ್ದಾಗ 'ಅರ್ಥವಾಗದ್ದನ್ನು' ವಿವರಿಸುವ ಅಮ್ಮನಿಗೆ, ಇಂದು ನಾವೇನಾದರೂ ಮಾತಾಡುತ್ತುದ್ದಾಗ ಅಮ್ಮ ಮಧ್ಯೆ ಬಾಯಿಗೆ ಹಾಕಿದರೆ ನಾವು ಹೇಳುವ ಮಾತೇನು ಗೊತ್ತೆ? "ಅಮ್ಮ ನಿನಗದೆಲ್ಲಾ ಅರ್ಥವಾಗಲ್ಲಮ್ಮ, ಸುಮ್ನೆ ನಿನ್ ಕೆಲ್ಸ ಮಾಡು". ಬಾಡಿದ ಮುಖದಿಂದ ಮಕ್ಕಳ ಮಾತು ಕೇಳಿ ಅಮ್ಮ ಸುಮ್ಮನಾಗುತ್ತಾಳೆ..ಅಲ್ವಾ? ಹೀಗಾಗಬಾರದಿತ್ತು! ಆದರೆ ಕಾಲ ಬದಲಾಗಿದೆ.. ಆದರೂ ತಂದೆ-ತಾಯಿಯ ಜವಾಬ್ದಾರಿ ಮಕ್ಕಳದೇ..ಅಮ್ಮನ ಸಾಕಲು ಸಾಧ್ಯವಾಗದಿದ್ದರೂ..ಅಮ್ಮನಿಗೆ ಕನಿಷ್ಠ ಪ್ರೀತಿಯಾದ್ರೂ ತೋರಿಸಿದ್ರೆ ಆಕೆಯ ಹೊಟ್ಟೆ ತುಂಬುತ್ತೆ...ಎಂದೆಂದೂ ಅಮ್ಮನ ಋಣ ತೀರಿಸಲು ಯಾವ ಮಕ್ಕಳಿಂದಲೂ ಸಾಧ್ಯವಿಲ್ಲ..ನಮ್ಮ ಕೆಲ್ಸ, ಒತ್ತಡದ ಜೀವನದ ನಡುವೆ ಅಮ್ಮನ ಜೋಪಾನವಾಗಿ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಅಲ್ಲವೆ? ಕೊನೆಗೊಂದಿಷ್ಟು ... "ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ? ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ?-ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ

1 comment:

Sathyabhama N said...

Article is very nice and meaningful. I came to know about value of my mom after statying away from. Thank you. Sorry wanted to write in kannada but don't know kannada typing.