Tuesday, May 11, 2010

ಅಕ್ಷರ ಕಲಿಯದ ಅಮ್ಮನಿಗೆ

ನಿನಗೆ ಪತ್ರ ಬರೆಯದೆ ತುಂಬಾ ದಿನಗಳಾಯ್ತು. ಇವತ್ತು ಬರೀಲೇಬೇಕು ಅಂದುಕೊಂಡು ಬರೀತಾ ಇದ್ದೀನಿ. ಹಾಗಂತ ಅಮ್ಮನ ದಿನ ಬಂದಾಗ ಪತ್ರ ಬರೀತಾಳೆ ಅಂದ್ಕೋಬೇಡ, ನನಗೆ ಅನುದಿನವೂ ಅಮ್ಮನ ದಿನವೇ. ಮದುವೆಯಾದ ಮೇಲೆ ಮನೆಗೆ ಬಂದಿಲ್ಲ ಅಂತ ನೀ ಮುನಿಸಿಕೊಂಡಿದ್ದೀಯಾ, ನೀನೆಷ್ಟು ಬೈದ್ರೂ, ಮುನಿಸಿಕೊಂಡ್ರೂ ನಾ ನಿತ್ಯ ನಿನ್ನದೆಯಲ್ಲಿ ಪಿಸುಗುಟ್ಟುವ ಪುಟ್ಟ ಮಗುನೇ ಅಮ್ಮಾ. ನಿನ್ನ ಸಿಟ್ಟು, ಕೋಪ, ಕಣ್ಣಿನಿಂದ ದುರುಗಟ್ಟಿ ನೋಡುವುದು, ಎತ್ತರದ ದನಿಯಲ್ಲಿ ಬೈದುಬಿಡೋದು ಇದೆಲ್ಲಾ ನನ್ನ ನಗು ನೋಡೋ ತನಕ ಅಂತ ನನಗೆ ಚೆನ್ನಾಗಿ ಗೊತ್ತಮ್ಮಾ.

ಮತ್ತೆ, ಹೇಗಿದ್ಯಾ? ಈ ಬೆಂಗಳೂರಲ್ಲಿ ದಿನಾ ಸಂಜೆ ಮಳೆರಾಯನ ಅಬ್ಬರ. ರಸ್ತೆಗಳೆಲ್ಲಾ ಸಮುದ್ರಗಳಾಗಿಬಿಡ್ತವೆ. ಅಂದ ಹಾಗೆ, ನಮ್ಮೂರಲ್ಲೂ ಮಳೆ ಬರುವುದೇ? ನಮ್ಮ ತೋಟದ ಕೆರೆ, ತೋಟದಾಚೆಗಿನ ಹೊಳೆ ತುಂಬಿ ಹರಿಯೋದೇ? ನೀ ಅಂಗಳದಲ್ಲಿ ನೆಟ್ಟು ಮಕ್ಕಳಂತೆ ಬೆಳೆಸಿದ ಬಣ್ಣದ ಹೂಗಿಡಗಳು ಹಸಿರಾಗಿವೆಯೇ? ನಾನು-ನಿನ್ನ ಅಳಿಯ ಇದೇ ಮಳೆಗಾಲದಲ್ಲಿ ನಿನ್ನನ್ನು, ನಮ್ಮೂರ ಹಸಿರ ತೋಟವನ್ನು, ತುಂಬಿ ಹರಿಯೋ ನದಿಯನ್ನು, ಮನೆಯಂಗಳದ ಕನಕಾಂಬರ ಸೊಬಗು, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯೋ ಅಜ್ಜ...ಎಲ್ಲರನ್ನೂ ನೋಡೋಕೆ ಬರ್‍ತಾ ಇದ್ದಿವಿ. ಒಂದಿಷ್ಟು ಹಲಸಿನ ಹಪ್ಪಳ, ಸಂಡಿಗೆ, ಮಾವಿನ ಮಿಡಿ ಉಪ್ಪಿನ ಕಾಯಿ ಎಲ್ಲವನ್ನೂ ರೆಡಿಮಾಡಿಬಿಡು.

ನಾನಿಲ್ಲಿ ತುಂಬಾ ಚೆನ್ನಾಗಿದ್ದೀನಿ, ಗುಂಡು-ಗುಂಡಾಗಿ ಬೆಳೆದಿದ್ದೀನಿ. ನೀನು ನೋಡಿದ್ರೆ ಇನ್ನೂ ಖುಷಿಪಡ್ತಿಯಾ. ಅತ್ತೆ-ಮಾವ ನನ್ನ ಪುಟ್ಟಿ ಅಂತಾರೆ. ಅವರು ಪ್ರೀತಿಯಿಂದ ಕರೆದಾಗಲೆಲ್ಲಾ ನೀನೇ ನೆನಪಾಗ್ತಿಯಾ. ಥೇಟ್ ನಿನ್ನ ತರನೇ ನೋಡ್ಕೋತಾರೆ. ನಿನ್ನ ತರನೇ ತಲೆಗೆ ಎಣ್ಣೆ-ಸೀಗೆ ಕಾಯಿ ಸ್ನಾನ ಮಾಡಿಸ್ತಾರೆ. ಹೂವು ತಂದು ಮುಡಿಸ್ತಾರೆ, ಚೆಂದದ ಡ್ರೆಸ್ ಕೊಡಿಸ್ತಾರೆ. ತಪ್ಪು ಮಾಡಿದಾಗ, ಪ್ರೀತಿಯಿಂದ ಬೈತಾರೆ. ಅವರಲ್ಲಿ ನಿನ್ನನೇ ನಾ ಕಾಣ್ತೀನಿ, ಅದಕ್ಕೆ ಖುಷಿಯಾಗಿದ್ದೀನಿ ಕಣಮ್ಮಾ. ನಂಗೊತ್ತು ಅಕ್ಷರ ಕಲಿಯದ ನೀನು ನನಗೆ ಅಕ್ಷರ ಕಲಿಸಿದ್ದಿ, ಬದುಕು ಕಲಿಸಿದ್ದಿ, ಭವಿಷ್ಯ ಕಟ್ಟಿಕೊಟ್ಟಿದ್ದಿ. ನೀನು ಖಂಡಿತಾ ಈ ಪತ್ರನಾ ಪಕ್ಕದ್ಮನೆ ಪುಟ್ಟಿ ಬಳಿ ಓದಿಸ್ತೀ ಅಂತ. ಸಧ್ಯದಲ್ಲೇ ಬಂದುಬಿಡ್ತೀನಿ. ನಾ ಸಣ್ಣ ಮಗುವಾಗಿದ್ದಾಗ ನಿನ್ನ ಕೈಯಿಂದ ಆ ಬೆಳದಿಂಗಳ ತಂಪಿನಲ್ಲಿ ಕುಳಿತು ತುತ್ತು ತಿಂದ ಅದೇ ಕಲ್ಲುಬೆಂಚಿನ ಮೇಲೆ ಕುಳಿತು ಮತ್ತೊಮ್ಮೆ ನಿನ್ನ ಸವಿತುತ್ತು ಮೆಲ್ಲುವಾಸೆ.
ಇಂತೀ
ಪ್ರೀತಿಯ ಮಗಳು

(ಹೊಸದಿಗಂತ ಪತ್ರಿಕೇಲಿ ಪ್ರತಿ ಗುರುವಾರದ ಧರಿತ್ರಿ ಮಹಿಳಾ ಪುಟದಲ್ಲಿ ಪ್ರಕಟವಾಗುವ ಭಾವಬಿಂದು ಅಂಕಣಕ್ಕೆ ಬರೆದ ಪುಟ್ಟ ಬರಹ
http://hosadigantha.in/epaper.php?date=05-06-2010&name=05-06-2010-೧೭

Sunday, April 18, 2010

ಅಕ್ಕರೆಯ ತಮ್ಮಂಗೆ ಶುಭಾಶಯ


ಈಗಲೂ ನೆನಪಾಗುವವನು ಅವನೇ.
ನನ್ನನ್ನು ಅಕ್ಕರೆಯಿಂದ ಅಕ್ಕಾ ಎನ್ನೋನು. ಒಡಹುಟ್ಟಿಲ್ಲಾಂದ್ರೂ ಒಡನಾಡಿ ಆದೋನು. ಬೆಂಗಳೂರೆಂಬ ಬೆಂಗಾಡಿನಲ್ಲಿ ಒಬ್ಬಂಟಿಯಾಗಿ ಅಲೆದಾಗ ನನಗೆ ಆಸರೆಯಾದೋನು, ಕಳೆದ ಆರು ವರುಷಗಳಿಂದ ಜೊತೆ ಜೊತೆಗೆ ಹೆಜ್ಜೆ ಹಾಕಿ, ನನ್ನೆಲ್ಲಾ ಭಾವಗಳಿಗೆ ಜೀವ ತುಂಬಿದೋನು, ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾದೋನು, ನನ್ನೆಲ್ಲಾ ಕೋಪ-ತಾಪಗಳ ಜೊತೆ ತಂಗಾಳಿಯಾಗಿ ಬೀಸಿದೋನು, ಸಣ್ಣ-ಸಣ್ಣ ವಿಷ್ಯಕ್ಕೆಲ್ಲಾ ತಲೆಕೆಡಿಸಿಕೊಂಡು ನಿತ್ಯ ನನ್ನ ಬಳಿ ಬೈಗುಳ ತಿಂದೋನು.

ನಾನು ಮದುವೆ ಆಗ್ತೀನಿ ಎಂದಾಗ ಖುಷಿಪಟ್ಟು ಪಾಯಸ ಮಾಡಿ ಸಿಹಿ ತಿನ್ನಿಸಿದೋನು, ಮದುವೆ ದಿನ ಬಾವನ ಕಾಲು ತೊಳೆಯೋದು ನಾನೇ ಎಂದು ಹಠ ಹಿಡಿದು ಕುಳಿತೋನು, ಮದುವೆಗೆ ಮುಂಚೆ ನನ್ನ ಜೊತೆಗಿದ್ದು ಅಕ್ಕಾ ನಿನ್ನ ಬಿಟ್ಟಿರೋಕೆ ಆಗೋಲ್ಲ ಎಂದು ಮಗುವಿನಂತೆ ಗಳ ಗಳನೆ ಅತ್ತೋನು, ಅತ್ತೆ ಮನೇಲಿ ಬೆಳಿಗೆದ್ದು ರಂಗೋಲಿ ಹಾಕಬೇಕೆಂದು ನನಗೆ ರಂಗೋಲಿ ಹಾಕೋಕೆ ಕಲಿಸಿಕೊಟ್ಟವನು, ನಾನು ಗಂಡನ ಮನೆಗೆ ಹೊರಟು ನಿಂತಾಗ ನನ್ನ ಕಣ್ಣೀರು ಒರೆಸಿ ನಕ್ಕು ನನ್ನ ಮರೀಬ್ಯಾಡ ಎಂದೋನು, ಈಗ್ಲೂ ಫೋನ್ ಮಾಡಿ ಅಕ್ಕಾ ನೀನಿಲ್ಲದ ಬೋರ್ ಎಂದು ಗೋಳಿಡುವವನು..
ಅವನು ನನ್ನ ಪ್ರೀತಿಯ ತಮ್ಮ, ಸಂದೇಶ. ನನ್ನ ಕೈಲಿ ಬೈಸಿಕೊಂಡ್ರೂ, ಉಗಿಸಿಕೊಂಡ್ರೂ, ಹೊಡೆಸಿಕೊಂಡ್ರೂ ಎಲ್ಲವನ್ನೂ ಸಹಿಸಿಕೊಳ್ತಾ ನನ್ನಳಗೊಂದು ನಗುವಿನ ಅಲೆ ಮೂಡಿಸಿದವನು ನನ್ನ ತಮ್ಮಾ...

ಏಪ್ರಿಲ್ 22 ಅವನ ಹುಟ್ಟುಹಬ್ಬ. ಶುಭವಾಗಲಿ ತಮ್ಮ ನಿನಗೆ...
-ಚಿತ್ರಾ ಸಂತೋಷ್

ಸುಂದರ ಕಾರ್ಯಕ್ರಮದಲ್ಲಿ ನೀವಿದ್ದರೆ ಚೆನ್ನ





ಹೌದಲ್ವಾ? ತುಂಬಾ ಒಳ್ಳೆ ಕಾರ್ಯಕ್ರಮ. ಭಾನುವಾರ, ರಜಾ ದಿನ ಬೇರೆ. ಭಾನುವಾರ ಸ್ವಲ್ಪ ಲೇಟಾಗಿ ಏಳಬೇಕು ಎಂದು ಪ್ರೋಗ್ರಾಂ ಹಾಕ್ಕೊಂಡವರು ಕೂಡ ಸ್ವಲ್ಪ ಬೇಗನೆ ಎದ್ದು ಈ ಕಾರ್ಯಕ್ರಮಕ್ಕೆ ರೆಡಿಯಾಗಿ. ವಿವೇಕ್ ಶಾನುಭಾಗ ಸರ್ ಪ್ರೀತಿಯಿಂದ ಆಮಂತ್ರಣ ಪತ್ರ ಕಳಿಸಿದ್ರು. ಛೇ! ನಾನು ಮಾತ್ರವಲ್ಲ ನೀವೆ;ಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದನಿಸಿತ್ತು.
ಬಂದೇ ಬರ್ತೀರಲ್ಲಾ...?
-ಚಿತ್ರಾ ಸಂತೋಷ್

Tuesday, March 30, 2010

ಪ್ರೀತಿಯ ಸಣ್ಣ ಬಿಂದಿಗೆ

ಬಿಂದಿಗೆಗೂ ಹುಡುಗಿಯರಿಗೂ ಅದೇನೋ ನಂಟು. ಮನೆಯಲ್ಲಿ ಬಿಂದಿಗೆಯಲ್ಲಿ ನೀರು ತರಬೇಕಂದ್ರೆ ಅದಕ್ಕೆ ಹುಡುಗಿರೇ ಬೇಕು. ಹುಡುಗ್ರಿಂದ ಅದು ಸಾಧ್ಯವಿಲ್ಲ. ಸಾಧ್ಯ ಇದ್ರೂ ಅವ್ರು ಮಾಡೋಲ್ಲ. ನನ್ನದೂ ಒಂದು ಪುಟ್ಟ ನೆನೆಪು. ನಾನಿನ್ನೂ ಸಣ್ಣ ಹುಡುಗಿ. ದೊಡ್ಡ ಬಿಂದಿಗೆಯನ್ನು ಎತ್ತಿ ಹಿಡಿಯಕ್ಕಾಗದ ವಯಸ್ಸು. ಅಮ್ಮ ದೊಡ್ಡ ಬಿಂದಿಗೆಯಲ್ಲಿ ನೀರು ತರುವಾಗ ನನಗೂ ಬಿಂದಿಗೆ ಬೇಕೆಂದು ಹಠ ಹಿಡಿದಿದ್ದೆ.

ಅಮ್ಮ ಬಾವಿಯಿಂದ ನೀರು ಎತ್ತುವಾಗ ನಾನೂ ನೀರು ಎತ್ತಬೇಕು, ನನಗೂ ಬಿಂದಿಗೆ ಬೇಕೆಂದು ಅಮ್ಮನ ಸೆರಗು ಹಿಡದೆಳೆಯುತ್ತಿದ್ದೆ. ಆವಾಗ ಅಮ್ಮ ನನ್ನ ಎತ್ತಿಕೊಳ್ಳದಿದ್ದರೆ ಮರಳ ಮೇಲೆ ಬಿದ್ದು ಹೊರಳಾಡುತ್ತಿದ್ದೆ. "ನೀನು ಸ್ವಲ್ಪ ದೊಡ್ಡ ಆಗು, ಬಿಂದಿಗೆ ತಂದುಕೊಡ್ತೀನಿ' ಎಂದು ಅಮ್ಮ ಸಮಾಧಾನಿಸುವಾಗ, ಹಾಗಾದ್ರೆ ಯಾವಾಗ ನಾನು ದೊಡ್ಡವಳಾಗ್ತೇನೆ, ನಿನ್ನಂತೆ ಉದ್ದ, ದಪ್ಪ ಆಗಿ, ಯಾವಾಗ ಸೀರೆ ಉಡುವವಳಾಗ್ತೀನಿ, ದೊಡ್ಡ ಬಿಂದಿಗೆಯನ್ನು ಯಾವಾಗ ನಾನು ಎತ್ತುವವಳಾಗ್ತೀನಿ' ಎಂದು ಪದೇ ಪದೇ ಪ್ರಶ್ನೆಗಳ ಮಳೆ ಸುರಿಸಿ ಅಮ್ಮನಿಗೆ ಬೋರ್ ಹೊಡಿಸ್ತಾ ಇದ್ದೆ.

ಒಂದು ದಿನ ಅಮ್ಮ ಬಿಂದಿಗೆ ತಂದೇ ಬಿಟ್ಟರು. ಹೊಸ ಬಿಂದಿಗೆ. ಸಣ್ಣ ಮತ್ತು ಮುದ್ದಾದ ಬಿಂದಿಗೆ. ಅಮ್ಮ ತಂದ ಹೊಸ ಬಿಂದಿಗೆಗೆ "ಚಿಕ್ಕ ಬಿಂದಿಗೆ' ಎಂದು ನಾಮಕರಣ ಮಾಡಲಾಗಿತ್ತು. ಅದು ಅಲ್ಯೂಮಿನಿಯಂ ಬಿಂದಿಗೆ, ಎತ್ತಲೂ ಅಷ್ಟೇನೂ ಭಾರವಿಲ್ಲ. ತುಂಬಾ ಮುದ್ದಾಗಿತ್ತು. ಅಮ್ಮ ಬಿಂದಿಗೆ ತಂದಿದ್ದೇ ತಡ, ಬಾವಿಯಿಂದ ನೀರು ಎತ್ತಕ್ಕಾಗದಿದ್ರೂ ಮನೆಯಲ್ಲಿದ್ದ ಪಾತ್ರೆಗಳಲ್ಲಿ ತುಂಬಿಸಿಟ್ಟ ನೀರನ್ನೆಲ್ಲಾ ನನ್ನ ಚಿಕ್ಕ ಬಿಂದಿಗೆಗೆ ಸುರಿಯುತ್ತಿದ್ದೆ. ಒಂದಷ್ಟು ಏಟುಗಳನ್ನೂ ತಿನ್ನುತ್ತಿದ್ದೆ. ಆಮೇಲೆ ನಾನು ಶಾಲೆಗೆ ಹೋಗೋವಷ್ಟರಲ್ಲಿ ಬಿಂದಿಗೆಯಲ್ಲಿ ನೀರು ತರುವವಳಾಗಿದ್ದೆ. ಕಷ್ಟಪಟ್ಟಾದ್ರೂ ನನ್ನ ಬಿಂದಿಗೆಯಲ್ಲಿ ನೀರು ತರುವುದೇ ನನಗೆ ಹೆಮ್ಮೆಯ ವಿಚಾರ. ಅದೂ ನಾನು ಬಿಂದಿಗೆಯನ್ನು ಸೊಂಟದಲ್ಲಿ ಹಿಡಿದುಕೊಂಡು ಬರುವಾಗ ಯಾರಾದ್ರೂ ನೋಡಿದ್ರೆ ಇನ್ನೂ ಖುಷಿ. ಒಳಗೊಳಗೇ ಬೀಗುತ್ತಿದ್ದೆ.

ಶಾಲೆಗೆ ಹೊರಡುವಾಗ ಅಮ್ಮನ ಬಳಿ, ನನ್ನ ಬಿಂದಿಗೆ ಮುಟ್ಟಬೇಡ ಎಂದು ಕಟ್ಟಪ್ಪಣೆ ಮಾಡಿಯೇ ಹೊರಡುತ್ತಿದ್ದೆ. ಶಾಲೆಯಿಂದ ಬಂದು ಬ್ಯಾಗ್ ನ್ನೊಂದು ಮೂಲೆಗೆ ಬಿಸಾಕಿ, ಬಳಿಕ ಅಮ್ಮ ಮಾಡಿಟ್ಟ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಂಡು ಅದೇ ನನ್ನ ಪ್ರೀತಿಯ ಸಣ್ಣ ಬಿಂದಿಗೆಯನ್ನು ಎತ್ತಿಕೊಂಡು ಮನೆ ಸಮೀಪದ ತೊರೆಗೆ ಹೋಗುತ್ತಿದ್ದೆ. ಅದೊಂದು ಥರ ಖುಷಿ. ; ನನ್ನ ಬಿಟ್ಟು ಯಾರೇ ನನ್ನ ಬಿಂದಿಗೆ ಮುಟ್ಟಿದರೂ ನನಗೆ ತುಂಬಾ ಕೋಪ ಬರುತ್ತಿತ್ತು.
ಅದು ನನ್ನ ಚಿಕ್ಕಬಿಂದಿಗೆ

ನಾನು ಎಸ್ ಎಸ್ ಎಲ್ ಸಿ ಮುಗಿಸೋ ತನಕವೂ ಆ ಬಿಂದಿಗೆಯನ್ನು ಚೆಂದಕ್ಕೆ ಕಾಪಾಡಿಕೊಂಡು ಬಂದಿದ್ದೆ. ಆದರೆ, ಬಳಿಕ ದೂರದೂರಿನಲ್ಲಿ ನನ್ನ ವಿದ್ಯಾಭ್ಯಾಸ ನಡೆದಿದ್ದರಿಂದ ಮನೆಯಲ್ಲಿನ ಬಿಂದಿಗೆ ನನಗರಿವಿಲ್ಲದೆಯೇ ಮಾಯವಾಗಿತ್ತು. ಕೇಳಿದಾಗ, ಅಮ್ಮ ಆ ಬಿಂದಿಗೆ ತೂತು ಬಿದ್ದಿದೆ ಎಂದರು. ನನ್ನ ಪ್ರೀತಿಯ ಬಿಂದಿಗೆಯನ್ನು ಕಳೆದುಕೊಂಡ ನೆನಪು ಮತ್ತೆ ಮರುಕಳಿಸಿದ್ದು ಅತ್ತೆ ಮನೇಲಿ ಸಣ್ಣ ಬಿಂದಿಗೆಯಿಂದ ನಿತ್ಯ ಬೆಳಿಗೆದ್ದು ತುಳಸಿಗೆ ನೀರು ಎರೆಯುವಾಗ!!

Tuesday, March 23, 2010

ಮರಳಿ ಭಾವದೊಡಲಿಗೆ...

ಮದುವೆ ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.

ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.

ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...

ಪ್ರೀತಿಯಿಂದ

ಚಿತ್ರಾ ಸಂತೋಷ್

Monday, February 22, 2010

ಮದುವೆಯ ಈ ಬಂಧ...



ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಮುಖ ಹಾಕದೆ. ಕೆಲವೊಂದು ಕಾರಣಗಳಿಂದ ನನಗೆ ಬ್ಲಾಗ್ ಬರೆಯಲಾಗಲಿಲ್ಲ. ಇದೀಗ ಮದುವೆ ಕರೆಯೋಲೆಯೊಂದಿಗೆ ಮತ್ತೆ ಮರಳಿ ಬಂದಿದ್ದೇನೆ. ನಮ್ಮ ಮದುವೆಗೆ ನೀವು ಬಂದರೇನೇ ಚೆಂದ. ಖಂಡಿತಾ ಬರಬೇಕು.

ಬದುಕಿನ ಹೊತ್ತಗೆಯಲ್ಲಿ
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.

ಈ ಶುಭಗಳಿಗೆಗೆ

ಹೊಸೆದ ಭಾವ ಕನಸುಗಳಿಗೆ

ನಿಮ್ಮ ಪ್ರೀತಿಯ ಹಾರೈಕೆ ಬೇಕು.


ನಮ್ಮ ಮದುವೆ: ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ

ಆರತಕ್ಷತೆ: ಮಾರ್ಚ್ 10, 2010; ನಂ.125/126, 9ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಆರ್ಎಂವಿ ಬಡಾವಣೆ, ಸದಾಶಿವನಗರ, ಬೆಂಗಳೂರು-80.
ಪ್ರೀತಿಯಿಂದ
ಸಂತೋಷ್-ಚಿತ್ರಾ

Wednesday, December 16, 2009

ದೇವರೇ ನೀನೇಕೆ ಕಲ್ಲಾಗಿಬಿಟ್ಟೆ?


ಈ ಹೆಣ್ಣು ಮಕ್ಕಳ ಬದುಕೇ ಹೀಗೇನಾ?
ಇಂಥದ್ದೊಂದು ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿದ್ದು ವೊನ್ನೆ ವೊನ್ನೆ ಆ ಹುಡುಗನ ಮನೆಯಲ್ಲಿ ಮುತ್ತೈದೆಯರು ನನ್ನ ಗುಳಿಬಿದ್ದ ಕೆನ್ನೆಗಳಿಗೆ ಅರಶಿನ ಕುಂಕುಮ ಹಚ್ಚಿದಾಗ, ನಮ್ಮನೆಯವರು ಮತ್ತು ಆ ಹುಡುಗನ ಮನೆಯವರು ತಾಂಬೂಲ ಬದಲಾಯಿಸಿಕೊಂಡಾಗ, ಆ ಹುಡುಗ ನನ್ನ ಬೆರಳಿಗೆ ಉಂಗುರ ತೊಡಿಸಿದಾಗ, ನನ್ನ ತಮ್ಮ ನನ್ನ ಕೆನ್ನೆ ಚಿವುಟಿ ‘ಅಕ್ಕಾ ಇನ್ನು ನೀನು ಈ ಮನೆಯ ಹುಡುಗಿ’ ಎಂದು ಖುಷಿಯಿಂದ ಹೇಳಿದಾಗ, ನನ್ನಮ್ಮ ನನ್ನ ನೋಡುತ್ತಲೇ ಗಳಗಳನೇ ಅತ್ತಾಗ!
ಥತ್, ನಾ ಹುಟ್ಟಿದ ಊರು, ನನ್ನ ಪ್ರೀತಿಯ ಅಮ್ಮ, ನನ್ನ ತಮ್ಮ, ಬದುಕಲು ಕಲಿಸಿದ ಅಮ್ಮನಂಥ ಅಣ್ಣ, ನನ್ನ ಕೈಯಾರೆ ಅಮ್ಮ ನೆಡಿಸಿದ ಆ ಗೆಂದಾಲೆ ತೆಂಗಿನ ಮರ, ನಾನು ಸ್ಕೂಲಿಗೆ ಹೋಗುವಾಗ ವೊಸರು ಕೊಂಡೋಗಲು ಕಾರಣಳಾದ ಪ್ರೀತಿಯ ಹಸು ಅಕ್ಕತ್ತಿ, ಅಮ್ಮನ ಜೊತೆ ಬಟ್ಟೆ ಒಗೆಯಲು ಹೋಗುತ್ತಿದ್ದ ನಮ್ಮೂರ ಕೆರೆ, ಅಜ್ಜ ಉಳುತ್ತಿದ್ದ ಗದ್ದೆ, ನಮ್ಮನೆ ತೋಟ, ನನ್ನ ನಿತ್ಯ ಆಟ ಆಡಿಸುತ್ತಿದ್ದ ಕುಸುಮಜ್ಜಿ, ನನ್ನಮ್ಮನ ಜೊತೆ ಬೀಡಿ ಕಟ್ಟಲು ಸಾಥ್ ನೀಡುತ್ತಿದ್ದ ಪಕ್ಕದ್ಮನೆ ಸೀತಕ್ಕ, ನಾನು ಓದಿದ ಸ್ಕೂಲ್, ಪ್ರೀತಿಯ ಟೀಚರ್ರು....! ಒಮ್ಮೆಲೆ ಎಲ್ಲರೂ ನೆನಪಾದರು.
ಕಣ್ಣಿಂದ ಸುರಿದ ಅಶ್ರುಬಿಂದುಗಳು ನನ್ನ ಪಾದವನ್ನು ತೋಯುತ್ತಿದ್ದಂತೆ, ಮುತ್ತೈದೆಯರೆಲ್ಲಾ ’ತವರಿನ ನೆನಪು ಇರಲಿ ಬಿಡಿ’ ಎಂದು ಅವರವರೊಳಗೆ ಮಾತನಾಡಿಕೊಳ್ಳುತ್ತಿದ್ದರು. ನಂಗೂ ಅನಿಸಿತ್ತು: ಇವರೂ ನನ್ನ ತರಾನೇ ಅತ್ತಿರಬಹುದೇನೋ!
ನಾನ್ಯಾಕೆ ಹುಡುಗಿಯಾಗಿ ಹುಟ್ಟಿದೆ? ಹುಡುಗನಾಗಿ ಹುಟ್ಟುತ್ತಾ ಇದ್ದರೆ, ಮದುವೆಯಾಗಿ ಬೇರೆ ಮನೆಗೆ ಹೋಗುವ ಅಗತ್ಯವೇನಿತ್ತು? ಅಮ್ಮನ ಜೊತೆ ಇರಬಹುದಿತ್ತಲ್ಲಾ?ಅಮ್ಮನ ಕೈಯಡಿಗೆ, ಅಮ್ಮನ ಹಿತನುಡಿಗಳು, ಅಮ್ಮ ಮಾಡಿಕೊಡುವ ಹಪ್ಪಳ-ಸಂಡಿಗೆ ಮೆಲ್ಲುತ್ತಾ, ಅಣ್ಣ-ತಮಂದಿರ ಜೊತೆ ನಿತ್ಯ ಮುನಿಸಿಕೊಳ್ಳುತ್ತಾ, ಮತ್ತೆ ರಾಜಿಯಾಗುತ್ತಾ, ಮನೆ ಹತ್ತಿರವಿರುವ ಮೈದಾನದಲ್ಲಿ ಲಗೋರಿಯಾಟ ಆಡುತ್ತಾ ಖುಷಿ ಖುಷಿಯಾಗಿ ಹಾಗೇ ಇರಬಹುದಿತ್ತಲ್ಲಾ...ಹೀಗೆ ನೂರಾರು ಯೋಚನೆಗಳ ಸಂತೆ ಮನದಲ್ಲಿ ಪಿಸುಗುಟ್ಟಿ, ‘ಅಮ್ಮ ನಾ ಬಿಡಲಾರೆ ನಿನ್ನ ಸೆರಗಾ’ ಎಂದುಕೊಳ್ಳುತ್ತಿದ್ದೆ.

ಹೌದು, ಆ ಹುಡುಗ ‘ನೀ ನನ್ನ ಮದುವೆ ಆಗ್ತೀಯಾ’ ಎಂದು ಕೇಳಿದಾಗ ಅಮ್ಮನ ಜೊತೆ ಕೇಳು ಅಂದಿದ್ದೆ. ‘ಅಯ್ಯೋ ಹುಚ್ಚು ಹುಡುಗಿ ನಾ ನಿನ್ನ ಮದುವೆ ಆಗ್ತಿರೋದು, ಅಮ್ಮನನ್ನು ಅಲ್ಲ ಕಣೇ’ ಎಂದು ರೇಗಿಸಿದಾಗಲೂ ಅವನು ನೀ ನಮ್ಮನೆಯಲ್ಲೇ ಶಾಶ್ವತವಾಗಿ ಇದ್ದುಬಿಡ್ತಿಯಾ ಅಂತ ಹೇಳಲೇ ಇಲ್ಲ! ಬದಲಾಗಿ ‘ನೀ ನನ್ನ ಮನದರಮನೆಗೆ ಬರ್ತಾ ಇದೀಯಾ’ ಅಂತ ಅಷ್ಟೇ ಹೇಳಿದ್ದ. ಛೆ! ದೇವರು ಯಾಕೆ ಇಷ್ಟೊಂದು ಮೋಸ ಮಾಡಿದ? ಹೆಣ್ಣು ಅವನಿಗೇನು ತಪ್ಪು ಮಾಡಿದ್ದಾಳೆ? ಯಾಕೆ ಅವಳನ್ನು ಹೆತ್ತಮ್ಮನ ಮಡಿಲಿಂದ ಮತ್ತೊಂದು ಮಡಿಲಿಗೆ ಹಾಕುವ ವಿಚಿತ್ರ ನಿಯಮ ಸೃಷ್ಟಿಸಿದ? ಅಂತ ದೇವರನ್ನು ಬೈಯುತ್ತಾ ಇದ್ದೀನಿ, ಅದೇನು ಅವನಿಗೆ ನನ್ನ ಮೇಲೆ ಸಿಟ್ಟೇ? ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಕಲ್ಲಾಗಿಬಿಟ್ಟಿದ್ದಾನೆ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಅನಿಸಿರಬಹುದಲ್ವಾ? ಹೇಳಿ, ನಿಮಗೂ ಹೀಗೇ ಅನಿಸಿದೆಯೇ?
ಇಲ್ಲಿ ಪ್ರಕಟವಾಗಿದೆ: