Thursday, August 28, 2008

'ಬಿಟ್ಟಿ ಟಿಕೆಟ್,' 'ಸ್ಲೀವ್ ಲೆಸ್ ಸರಸ'ಕ್ಕೆ ಕೊನೆ ಎಂದು?

ಬಿಟ್ಟಿ ಟಿಕೆಟ್', ಸ್ಲೀವ್ ಲೆಸ್ ಸರಸ, ಬೊಂಬಾಟ್ ಭಾಮಾ, ಒನ್ಲಿ ಸೂಪರ್ ಹಿಟ್ ಕನ್ನಡ ಹಾಡುಗಳು, ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ....ಮುಂತಾದ ಪದಗಳನ್ನು ಎಲ್ಲಿ ಕೇಳಲು ಸಾಧ್ಯ? ಹೌದು! ನಿಮಗೂ ಗೊತ್ತು..ಎಫ್.ಎಂ.ಗಳಲ್ಲಿ ಮಾತ್ರವೆಂದು. ಬೆಳಿಗೆದ್ದು ಎಫ್.ಎಂ. ಕೇಳೋಣಾಂದ್ರೂ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ ಬೆಂಗಳೂರು ತಪ್ಪಿದ್ದಲ್ಲ. ಹೌದು! ಎಫ್.ಎಂ.ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ...ಸಮಯ ಕಳೆದಿದ್ದೇ ಗೊತ್ತಾಗಲ್ಲ ಎನ್ನೋರು ಇದ್ದಾರೆ. ಆದರೆ ಅದ್ಯಾಕೋ ಕೆಲವೊಮ್ಮೆ ಜೀವಂತ ನಾಲಗೆಯಿರುವ ಕನ್ನಡಿಗರ ಬಾಯಿಯಿಂದಲೇ ಕನ್ನಡದ ಕೊಲೆಯಾಗುತ್ತಿರುವಾಗ ಅತಿಯಾಯಿತೆನಿಸುತ್ತೆ, ಕೇಳಲೂ ಅಸಹ್ಯವಾಗುತ್ತೆ. ಕೇಳಲೂ ಮಹಾವೇದನೆ. ಮಾತಾಡುತ್ತಾ ಮಜಾ ಮಾಡ್ಲಿ..ವಿಷ್ಯ ಅದಲ್ಲ..ಕಂಗ್ಲೀಷ್ ಮಾತಾಡ್ತಾರಲ್ಲ..ಅದು ಕೇಳುಗರಿಗೇ ಮುಜುಗರ ತರಿಸುತ್ತದೆ.

ಈ ಬಗ್ಗೆ ಹಿಂದೊಮ್ಮೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿದ್ಧಲಿಂಗಯ್ಯ, ಕಟ್ಟಪ್ಪಣೆ ಮಾಡಿದ್ದರು. ಆದದೆ ಅದರಿಂದ ನಯಾಪೈಸೆಯೂ ಲಾಭವಾಗಿಲ್ಲ. ಇದೇನು ಹೊಸತಲ್ಲ ಬಿಡಿ..ಸರ್ಕಾರ ಬುದ್ದಿಜೀವಿಗಳು, ಹಿರಿಯರು ಎಲ್ಲರೂ ಅನ್ಯಭಾಷೆಗಳ ಕುರಿತು ಭಾರೀ ಪ್ರೀತಿಯಿಂದಲೇ ಮಾತನಾಡಿದ್ದಾರೆ. ಆವಾಗೆಲ್ಲಾ ಅವರಿಗೆ ಇಂಥ ಸಣ್ಣ ತಪ್ಪುಗಳಿಂದಲೇ ಕನ್ನಡ ಭಾಷೆ ನೆನೆಗುದಿಗೆ ಬೀಳುತ್ತಿದೆ ಎನ್ನುವುದು ತಲೆಯಲ್ಲಿ ಹೊಳೆದಿರಲಿಕ್ಕಿಲ್ಲ. ಅನ್ಯಭಾಷೆಯನ್ನು ಗೌರವಿಸೊಣ, ಪ್ರೀತಿಸೋಣ. ಆದರೆ ಇದನ್ನೇ ಕನ್ನಡಿಗರ ದೌರ್ಬಲ್ಯವೆಂದು ನಡೆದುಕೊಂಡಾಗ ಕನ್ನಡಿಗರು ಎದುರು ನಿಲ್ಲಲೇಬೇಕಲ್ವೇ? ಬೆಂಗಳೂರಿನ ಎಫ್. ಎಂ., ರೇಡಿಯೋ ಕಾರ್ಯಕ್ರಮಗಳಲಲ್ಲಿ ಕಂಡುಬರುವ ಕಂಗ್ಲೀಷ್ ನ ಕೇಳಲು ಅಸಹ್ಯವೆನಿಸುವ 'ಸ್ಲಿವ್ ಲೆಸ್ ಸರಸ' ದಂತಹ ಮಾತುಗಳು ವ್ಯಾಪಾರ ಮನೋಭಾವದ ಬೇಳೆ ಬೇಯಿಸಿಕೊಳ್ಳಲು ಮಾಡುವ ತಂತ್ರಗಳೇ. ಹಿಂದಿ, ಇಂಗ್ಲೀಷ್, ಕನ್ನಡದಲ್ಲಿ ಹೆಚ್ಚು ಪ್ರಾಶಸ್ತ್ಯ ಇರುವುದು ಹಿಂದಿ ಅಥವಾ ಇಂಗ್ಲೀಷ್ ಗೆ. 'ಕೇವಲ ಮೂರು ಹಾಡುಗಳು ಬ್ಯಾಕ್ ಟು ಬ್ಯಾಕ್' ಅಬ್ಬರದ ಸಂಗೀತದ ಜೊತೆಗೆ.. ಇಂಥ ವಿಕಾರಗಳನ್ನು ಕೇಳುವಾಗ ಯಾರಿಗಾದ್ರೂ ಅಯ್ಯೋ ಎನಿಸದಿರದು. ಏನು ಬೇಕಾದ್ರೂ ಮಾಡ್ಲಿ..ಕನ್ನಡದಲ್ಲಿ ಒಳ್ಳೆಯ ಶಬ್ದಗಳಿವೆ, ಪದಗಳಿವೆ ಅವುಗಳನ್ನು ಕನ್ನಡದಲ್ಲೇ ಹೇಳಿದ್ರೇನು ನಷ್ಟ? ಇಂಗ್ಲೀಷ್, ಹಿಂದಿ..ಅಸಂಬದ್ಧವಾಗಿ ಮಾತಾಡುವಾಗ ಇಂಥ ಎಫ್.ಎಂ. ಗಳಿಗೆ ಕನಿಷ್ಠ ಸೌಜನ್ಯತೆಯೂ ಇಲ್ಲವೇ? ಎಂಬ ಪ್ರಶ್ನೆ ಮೂಡದಿರದು. ಕೆಲವೊಂದಿಷ್ಟು ನಿಮಿಷಗಳು ಬಿಟ್ಟರೆ ದಿನವಿಡೀ ಹಿಂದಿ-ಇಂಗ್ಲೀಷ್ ಕಾರ್ಯಕ್ರಮಗಳೇ ಜಾಸ್ತಿ ಪ್ರಸಾರವಾಗುತ್ತವೆ. ಇನ್ನು ಕನ್ನಡದ ಕಾರ್ಯಕ್ತಮಗಳಲ್ಲಿ 'ಕಂಗ್ಲೀಷ್' ನಲ್ಲಿ ಮಾತನಾಡಿ ಪದ-ಅರ್ಥಗಳನ್ನು ಏನೋನೋ ಮಾಡಿಬಿಡ್ತಾರೆ. ಪ್ರಸ್ತುತ ನಮ್ಮ ಪರಿಸ್ಥಿತಿ ಎಂಥ ಕೀಳುಮಟ್ಟಕ್ಕೆ ಇಳಿದಿದೆಯೆಂದರೆ ಕನ್ನಡದ ಬಗ್ಗೆ ಮಾತನಾಡುವುದೇ ತಪ್ಪು, ಕನ್ನಡಿಗರ ದೌರ್ಬಲ್ಯ ಎನ್ನುವವರೇ ಹೆಚ್ಚು. ಅಷ್ಟೇ ಅಲ್ಲ ಯಾವುದೇ ಕರ್ನಾಟಕದ,., ಸರ್ಕಾರದ ಇಲಾಖೆಗಳಲ್ಲಿ ಹೋಗಿ ಕನ್ನಡದಲ್ಲಿ ಮಾತನಾಡಿದ್ದರೆ ನಮ್ಮನ್ನು ಅಡಿಯಿಂದ ಮುಡಿಯವರೆಗೆ ನೋಡಿ, ಭಾಷೆಯಿಂದ ವ್ಯಕ್ತಿತ್ವ ಅಳೆಯುವವರೇ ಹೆಚ್ಚು. ನಮ್ಮ ಕನ್ನಡದಲ್ಲಿ ಶ್ರೇಷ್ಠರೆನಿಸಿಕೊಂಡ ಕೆಲವರು ಕನ್ನಡ, ನಾಡು-ನುಡಿ ಕುರಿತು ಏನೇ ಬೀದಿರಂಪ ಮಾಡಿದ್ರೂ ಬೆಚ್ಚಗೆ ಮನೆಯೊಳಗೆ ಕೂರುತ್ತಾರೆ. ಬೇಕಾದ್ರೆ ಆ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಕಲ್ಲು ಬಿದ್ದೀತೆಂಬ ಪುಕ್ಜಲುತನದಿಂದ ರಕ್ಷಣೆಗೆ ಪೊಲೀಸ್ ರನ್ನೂ ನೇಮಕ ಮಾಡಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಂಬು ಸ್ಪೋಟ ಆಯಿತು. ಎಷ್ಟು ಮಂದಿ ಕನ್ನಡದ ಶ್ರೇಷ್ಠರು ವಿರೋಧಿಸಿದ್ದಾರೆ? ಭಯೋತ್ಪಾದನೆಯನ್ನು ತಡೆಗಟ್ಟಿ ಎಂದು ವಿಧಾನಸೌಧ, ಮಹಾತ್ಮಾಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟನೆ ಮಾಡಿದ್ದಾರೆ? ಆದರೆ ಅನಗತ್ಯವಾದ ವಿಚಾರಗಳಿದ್ದರೆ ತಕ್ಷಣ ಬೀದಿಗೆ ಬಂದು ಬೊಬ್ಬಿಡ್ತಾರೆ. ಆದರೆ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ನೋಡಿ..ಎಲ್ಲೋ ಇದ್ದವರು ತಕ್ಷಣ ಬೀದಿಗಿಳಿದು..ಸಂಜೆಯವರೆಗೆ ದುಡಿದು ದಣಿದ ದೇಹಕ್ಕೆ, ಮನಸ್ಸಿಗೆ ನೆಮ್ಮದಿ ಬೇಕು..ಅದ್ಕಾಗಿ ತಡರಾತ್ರಿವರೆಗೂ 'ಸಂಗೀತ ಕಚೇರಿಗಳು' ತೆರೆದಿರಬೇಕು ಎಂದು ಬೊಬ್ಬಿಟ್ಟರು! ಇದು ಬೇಕಿತ್ತೆ?

ಕನ್ನಡ ಭಾಷೆಯ ವಿಚಾರ ಬಂದಾಗಲೂ ಆಗುತ್ತಿರುವುದು ಹೀಗೆ. ಯಾರೋಬ್ಬರೂ ಮಾತಾಡಲ್ಲ..ಇಲ್ಲಿ ನಾನೊಬ್ಬಳು ಮಾತಾಡಿದ್ರೂ ಪ್ರಯೋಜನವಿಲ್ಲ. ಎಫ್.ಎಂ. ರೇಡಿಯೋ ಅಥವಾ ಇನ್ಯಾರೋ ಏನ್ ಬೇಕಾದ್ರೂ ಮಾತಾಡ್ಲಿ..ನಮಗೇನು ಎಂಬಂತೆ ತೆಪ್ಪಗಿರುತ್ತಾರಲ್ಲಾ..ಹಾಗಾಗಿಯೇ ಕನ್ನಡ ಸಾಯುತ್ತಿದೆ ನೋಡಿ. ಬಹುಶಃ ನನಗನಿಸಿದ ಪ್ರಕಾರ ಈ ಎಫ್.ಎಂ.ಗಳ ಅವತಾರಗಳನ್ನು ನಮ್ಮ ಗಣ್ಯರು ಆಲಿಸಿರಕ್ಕಿಲ್ಲ. ಪ್ರೇಮಿಗಳ ದಿನ, ಹೋಳಿ ಮುಂತಾದ ದಿನಗಳನ್ನು ವಿಶೇಷವಾಗಿ ಎಡೆಬಿಡದೆ ನಡೆಸಿಕೊಡುವ ಎಫ್.ಎಂ.ಗಳಿಗೆ ಕನ್ನಡದ ಶ್ರೇಷ್ಠ ನಾಟಕಕಾರರು, ನಟರು, ಸಾಹಿತಿಗಳು, ಗಾಯಕರ ದಿನಗಳನ್ನು ನಡೆಸಿಕೊಡಲಿ. ನಾನೇನು ಎಫ್.ಎಂ. ಗಳ ದ್ವೇಷಿಯಲ್ಲ..ಬದಲಾಗಿ ಅಸಂಬದ್ಧ ಮಾತುಗಳಿಂದ ಕನ್ನಡವನ್ನು ಕೊಲ್ಲುವ ಬದಲು ಶುದ್ಧ ಕನ್ನಡ ಬಳಸಿ, ಕನ್ನಡಕ್ಕೆ ತಮ್ಮಿಂದಾದ ಕೊಡುಗೆ ನೀಡಲಿ. ಕನ್ನಡದ ಅಭಿವೃದ್ಧಿ ಬಗ್ಗೆ ಮಾತನಾಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡಪರ ಸಂಘಟನೆಗಳು ಅದೇನು ನಿದ್ದೆ ಮಾಡುತ್ತಿವೆಯೇ?

4 comments:

Unknown said...

Nijavagiyu Sariyaagi helidira

jomon varghese said...

ಒಳ್ಳೆಯ ಲೇಖನ....

ಚಿತ್ರಾ ಸಂತೋಷ್ said...

ಪ್ರದೀಪ್ ಮತ್ತು ಜೋಮನ್..
ನಿಮ್ಮ ಪ್ರತಿಕ್ರಿಯೆಗೆ ಕೃತಜ್ಞತೆಗಳು..
ಆಗಾಗ ಶರಧಿಯಲ್ಲಿ ಪುಟ್ಟ ಪಯಣ ನಿಮ್ಮದಾಗಿಸಿ..
-ಚಿತ್ರಾ

Parisarapremi said...

ಈ ಎಫ್.ಎಮ್. ಚಾನೆಲ್ಲುಗಳನ್ನು ಕೇಳೋದೇ ಬಿಟ್ಬಿಟ್ಟೆ, ಇವರ ದರಿದ್ರ ಭಾಷಾಪ್ರಯೋಗಗಳಿಂದ. ನನ್ನ ಬೇಸರ ಇನ್ನೊಂದು ಏನಂದರೆ ಈಗ ವಾರ್ತಾ ಚಾನೆಲ್ಲುಗಳಲ್ಲೂ ಇದೇ ರೀತಿ ಕೆಟ್ಟ ಪ್ರಯೋಗಗಳಾಗುತ್ತಿವೆ. :-(