Wednesday, November 28, 2007

ಟೀಚರ್ ಕಲಿಸಿದ ಅಕ್ಷರಗಳೆಲ್ಲಿ?

ಒಮ್ಮೊಮ್ಮೆ ನಂಗನಿಸೋದು 'ಚಾರ್ಲ್ಸ್ ಬಾಬ್ಬೇಜ್' ಯಾಕಾದ್ರೂ ಕಂಪ್ಯೂಟರ್ ಕಂಡುಹಿಡಿದಾಂತ?! ಕಾರಣ? ಕಂಪ್ಯೂಟರ್ ಬಂದ ಮೇಲೆ ಪೆನ್ನು ಹಿಡಿಯೋಕೆ ಆಗ್ತಾ ಇಲ್ಲ ಅನ್ನೋದೇ ದೊಡ್ಡ ಸಮಸ್ಯೆ. ಮನೇಲಿ, ಆಫೀಸಲ್ಲಿ ಎಲ್ಲ ಕಡೆಯೂ ಕಂಪ್ಯೂಟರ್. ಬರೆಯಬೇಕಾದುದನ್ನೆಲ್ಲಾ ಕಂಪ್ಯೂಟರ್ ನಲ್ಲೇ ಟೈಪ್ ಮಾಡ್ತೀವಿ. ಬರೆಯೋಕೆ ಟೈಮ್ ಎಲ್ಲಿದೆ ಅಲ್ವಾ?

ಎಲ್ಲವೂ ಆಧುನೀಕರಣ ಮಹಿಮೆ ಅನ್ತಿರಾ? ಖಂಡಿತ ಹೌದು! ಆದರೆ ನಾವು ಆಧುನೀಕರಣವನ್ನು ಅಪ್ಪಿಕೊಂಡಿದ್ದೇವೆ ವಿನಹಃ ಆಧುನಿಕರಣ ನಮ್ಮನ್ನು ಅಪ್ಪಿಕೊಂಡಿಲ್ಲ. ನಾನು ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟು ಇನ್ನೇನೋ ಎರಡು ವರ್ಷ. ಡಿಗ್ರಿ ಮುಗ್ಸಿ ತಕ್ಷಣ ಬೆಂಗಳೂರಿಗೆ ಹಾರಿ ಬಂದೆ. ಒಳ್ಳೆದೋ/ಕೆಟ್ಟದ್ದೋ ಬೆಂಗಳೂರಿಗೆ ಬಂದಂತಾಯಿತು. ಆಗ ನನ್ನತ್ರ ಮೊಬೈಲು ಪೋನು ಇಲ್ಲ. ಬದಲಾಗಿ ಮನೆಗೆ, ಸ್ನೇಹಿತರಿಗೆಲ್ಲ ಪತ್ರಾನೇ ಬರೆಯೋದು. ಕಾಲೇಜಲ್ಲಿ ಇರುವಾಗ ಯಾವುದೇ ಗೈಡು ಓದಿದವಳಲ್ಲ. ಎಲ್ಲಾ ನೋಟ್ಸನ್ನು ನಾನೇ ನೆಟ್ಟಗೆ ಬರೆಯೋದು ನನ್ ಅಭ್ಯಾಸ. ಅದ್ರ ಎಲ್ಲಾ ಜೆರಾಕ್ಸ್ ಕಾಫಿ ನಮ್ಮ ಕಾಸ್ ಹುಡುಗ್ರುಗೆ. ಇನ್ನೊಂದು ಹುಚ್ಚು ಅಂದ್ರೆ ನನ್ನ ಲೇಖನಗಳಿಗೆ ಬೇರೆಯಾರಾದ್ರೂ ಪತ್ರ ಬರೆದರೆ, ಅವರಿಗೆ ಉತ್ತರಿಸುವುದು. ಆಗ ನನ್ನತ್ರ ಪತ್ರ ಬರೆಯಲು ಪೋಸ್ಟ್ ಕಾರ್ಡ್ಗಳ ದೊಡ್ಡ ಕಟ್ಟೇ ಇರುತ್ತಿತ್ತು. ಏನಿದ್ರೂ ಕಾರ್ಡಲ್ಲಿ ಬರೆಯೋದು. ಪ್ರತಿದಿನ ಕನಿಷ್ಠ ಹತ್ತು ಪತ್ರಗಳಾದ್ರೂ ಪೋಸ್ಟ್ ಮಾಡ್ತಿದ್ದೆ. ಅದೂ ನೀಟಾಗಿ ಪತ್ರ ಬರೀತಾ ಇದ್ದೆ. ಬೆಂಗಳೂರಿಗೆ ಬಂದದ್ದೆ ತಡ, ಪತ್ರ ಅಥವ ಏನೇ ಬೇಕಾದ್ರೂ ಕಂಪ್ಯೂಟರ್ ಟೈಪಿಂಗ್. ಮೊಬೈಲ್ ಬಂದ್ರೂ ಬರೆಯೋ ಹುಚ್ಚು ಹೋಗಿರಲಿಲ್ಲ. ಆದ್ರೆ ಕಂಪ್ಯೂಟರ್ ಎದುರು ಕುಳಿತಿದ್ದೆ ತಡ, ಎಲ್ಲವೂ ಟೈಪಿಂಗ್.

ಈಗ ಪೆನ್ನು ಹಿಡಿದ್ರೆ ಕೈ ಗಡ ಗಡ ನಡುಗುತ್ತೆ. ಬರೆಯೋಕೆ ಹೋದ್ರೆ ಕಂಡಕ್ಟರ್ ಅಕ್ಷರ ಆಗಿಬಿಡುತ್ತೆ. ನನ್ನ ಫ್ರೆಂಡ್ ಅನಿಲ್ ಹೇಳ್ತಾ ಇದ್ದ. 'ನಿನ್ ಅಕ್ಷರ ನೋಡದೆ ಒಂದು ವರ್ಷವೇ ಕಳೆದುಹೋಯಿತು. ಒಂದು ಪತ್ರ ಬರೀ,' ಅನ್ತಾನೇ ಇರ್ತಾನೆ. ಯಾಕೋ ಆಗುತ್ತಿಲ್ಲ. ನಾನು ಎಷ್ಟೊಂದು ಆರ್ಟಿಫಿಶಿಯಲ್ ಆಗಿದ್ದೇನೆ ಅನಿಸುತ್ತೆ. ಮುದ್ದು ಮುದ್ದಾಗಿರುತ್ತಿದ್ದ ನನ್ ಅಕ್ಷರಗಳು ಈಗ ಕಾಗೆ ಕಾಲಿನ ಥರ ಆಗ್ತಾವೆ. ನನ್ ಅಕ್ಷರದ ಬಗ್ಗೆ ಅದೆಷ್ಟೋ ಸಲ ನಮ್ ಸರ್ ತಮಾಷೆ ಮಾಡ್ತಾ ಇದ್ರು. "ಏನಮ್ಮಾ ಸ್ಕೂಲ್ ಮೇಷ್ಟ್ರು ನಿನಗೆ ಜಾಸ್ತಿ ಕಾಫಿ ಬರೆಸಿದ್ದಾರ?" ಅಂತ. ನಮ್ಮ ಅಕ್ಷರ ಚೆನ್ನಾಗಿ ಆಗಬೇಕಾದ್ರೆ ನಮ್ಮ ಟೀಚರ್ ಎಷ್ಟು ಸಲ ಕಾಫಿ ಬರೆಸಿದ್ರು? ಎಷ್ಟು ಕಷ್ಟ ಪಟ್ಟು ನಾವು ಬರೀತಾ ಇದ್ದೀವಿ. ಮನೇಲಿ ಅಕ್ಕನೋ, ಅಣ್ಣನನ್ನೋ ಸತಾಯಿಸಿ, ಅತ್ತು-ಹೊರಳಾಡಿ ಅವರತ್ರ ಬರೆಸಿಕೊಂಡು ಕೊನೆಗೆ ಅದಕ್ಕೆ ಮತ್ತೆ ಟೀಚರ್ ನಿಂದ ಪೆಟ್ಟು ತಿಂದು , ಪುನಃ ನೂರು ಸಲ ಬರೆಯುತ್ತಿದ್ದೇವು. ಹಾಗೆ ಎಷ್ಟು ನೂರು ಸಲ ಬರೆದಿವಾ ಅಲ್ವಾ? ನನಗಿನ್ನೂ ನೆನಪಿದೆ. ಒಂದನೇ ಕ್ಲಾಸಿನಲ್ಲಿ ನಮಗೊಬ್ಬರು ಬೇಬಿ ಟೀಚರ್ ಇರ್ತಾ ಇದ್ರು. ನಮ್ಮ ಬಳಪದಲ್ಲಿ ಅವರು ' ಅ, ಆ, ಇ, ಈ' ನಾಲ್ಕು ಅಕ್ಷರ ಬರೆದುಕೊಡುತ್ತಿದ್ರು. ನಾವು ಬೆಳಿಗ್ಗೆಯಿಂದ ಸಂಜೆ ತನಕ ಒಂದೇ ಸಮನೆ ಅದ್ರ ಮೇಲೆ ಬರೆಯಬೇಕು. ಅಯ್ಯೋ ಬರೆದು ಬರೆದು ಸುಸ್ತಾಗಿಬಿಡ್ತಾ ಇದ್ದೀವಿ. ಆಮೇಲೆ ನಮ್ಮಮ್ಮ ಆಯುಧ ಪೂಜೆ ದಿನ ನಮ್ಮನ್ನು ಅಕ್ಕಿ ರಾಶಿಯ ಮೇಲೆ ಬರೆಸಿದ್ರು. ಇದೆಲ್ಲಾ ಅವ್ರು ಮಾಡಿಸಿದ್ದು ಮಕ್ಕಳು ಅಕ್ಷರ ಕಲಿಯಿಲಿ ಅಂತ. ಈಗ್ಲೂ ಶಾಲೆಯಲ್ಲಿ ಹಾಗೆಯೇ ಮಾಡ್ತಾರೆ. ಆದ್ರೆ ನಾವದನ್ನು ಮರೆತುಬಿಡ್ತೀವಿ. ನಂಗನಿಸುತ್ತೆ ನಿತ್ಯ ಹೊಸತನ್ನು ಅಪ್ಪಿಕೊಳ್ಳುವ ನಾವು ಎಷ್ಟೆಲ್ಲಾ ಒಳ್ಳೆಯ ಅಂಶಗಳನ್ನು ಮಿಸ್ ಮಾಡಿಕೊಳ್ತಾ ಇದ್ದೀವಿ ಅಂತ. ಯಂತ್ರಗಳ ಜೊತೆ ನಾವು ಯಂತ್ರಗಳಾಗಿಬಿಟ್ಟಿದ್ದೇವೆನೋ ಅನಿಸುತ್ತೆ.

ಹಣತೆ

ಅಲ್ಲಿ ಬರೇ ಕತ್ತಲು

ಸುತ್ತಲೂ ಮೌನ

ದೂರದಲ್ಲಿ ಪುಟ್ಟ ಹಣತೆ

ಉರಿಯುತ್ತಿತ್ತು.. ತನ್ನ ಪಾಡಿಗೆ

ಸುತ್ತಲೂ ಬೆಳಕು ಸೂಸುತ್ತಾ


ಆಕೆ ಕುಳಿತಿದ್ದಳು..ಒಂಟಿಯಾಗಿ

ಆಕೆಗೆ ವಯಸ್ಸು ಎಪ್ಪತ್ತು!

ಸುತ್ತಲ ಕತ್ತಲನ್ನೂ

ಕಣ್ತುಂಬ ತುಂಬಿಕೊಂಡು

ಆಕೆ ನಗುತ್ತಿದ್ದಳು

ತನ್ನ ಬಟ್ಟಲು ಕಣ್ಣುಗಳನ್ನು ಅರಳಿಸಿ,

ದೂರದಲ್ಲಿದ್ದ ಹಣತೆಯ ಕಂಡು

ಹಣತೆಯೂ ಕತ್ತಲ ಕಂಡು ಹೆದರಲಿಲ್ಲ

ತನ್ನ ಪಾಡಿಗೆ ತಾನು ಬೆಳಗುತ್ತಲೇ ಇತ್ತು.

Tuesday, November 27, 2007

ಬೆಂಗ್ಳೂರು ಸಿಟಿ ಬಸ್ಸುಗಳೇ ಸಮಸ್ಯೆ ಮಾರಾಯ್ರೆ..

ನಿಮಗೆ ಗೊತ್ತುಂಟಾ? ಈ ಬೆಂಗಳೂರು ಸಿಟಿ ಬಸ್ಸಲ್ಲಿ ಹೋಗುವುದೇ ದೊಡ್ಡ ಸಮಸ್ಯೆ ಮಾರಾಯ್ರೆ. ನನ್ನ ಮನೆಯಿಂದ ನನ್ನ ಆಫೀಸಿಗೆ ಬಸ್ಸಲ್ಲಿ ಬಂದ್ರೆ ಇರೋದು ಕೇವಲ 15 ನಿಮಿಷದ ದಾರಿ. ಆದ್ರೆ ಈ ಟ್ರಾಫಿಕ್ ಜಾಮ್ಗಳ ನಡುವೆ ಸಿಕ್ಕಿಕೊಂಡ್ರೆ 1.30ಗಂಟೆಯ ಭರ್ಜರಿ ಜರ್ನಿ ನನ್ದು. ಮೊನ್ನೆ ನಾನು ಆಫೀಸಿನಿಂದ ಹೊರಟಾಗ ರಾತ್ರಿ 8.30. ಬೆಂಗಳೂರಿನಲ್ಲಿ ಇದೇನು ತಡರಾತ್ರಿಯಲ್ಲ ಬಿಡಿ. ಆಫೀಸಿನಿಂದ ಹೊರಟವಳು ಅರ್ಧ ಗಂಟೆ ಬಸ್ಸ್ಟಾಂಡಿನಲ್ಲಿ ಕಾದೆ. 9 ಗಂಟೆಗೆ ಬಸ್ಸು ಹತ್ತಿದೆ. ಅದೇನು ಕರ್ಮವೋ ಟ್ರಾಫಿಕ್ ಜಾಮ್! ಬಸ್ಸು ಎಲ್ಲೆಲ್ಲೋ ಸುತ್ತಾಡಿಕೊಂಡು ಹೋಗಿ, ನಾನಿಳಿಯುವ ಸ್ಥಳಕ್ಕೆ ಬಂದಾಗ 10.30 ಗಂಟೆ. ನಂತ್ರ ಇನ್ನೊಂದು ಬಸ್ಸು ಹತ್ತಿ ಹೋಗಬೇಕು. ಆಟೋದಲ್ಲೊ ಹೋಗೋಣವೆಂದರೆ 10 ನಿಮಿಷದ ದಾರಿಗೆ 100 ರೂಪಾಯಿ ಕೇಳ್ತಾರೆ. ಬಸ್ಸಿಗೆ ಕಾದು ಬಸ್ಸಲ್ಲೇ ಹೋದೆ. ಲೇಟ್ ನೈಟ್ ರಾತ್ರಿ ಅಲ್ವಾ? ಕುಡುಕ್ರ ಕಾಟ ಅಂದ್ರೆ ಅವರು ಕುಡಿದಿರುವ ಸ್ಮೆಲ್ಲು ನಮ್ ಮೂಗಿಗೆ. ಎಂಥ ಮಾರಾಯ್ರೆ ಅವರಿಗೆ ಹೇಳಿದ್ದಾದ್ದರೂ ಅರ್ಥ ಆಗುತ್ತಾ ಅದೂ ಇಲ್ಲ. ಅಷ್ಟು ಹೊತ್ತು ರಾತ್ರೀಲಿ ಹೋಗೋ ಹುಡುಗೀರೆಲ್ಲ ಸಾಮಾನ್ಯುವಾಗಿ ಬಸ್ಸಲ್ಲಿ ಹೋಗಲ್ಲ. ಟು ವೀಲರ್ ಅಥವ ಕಾರಲ್ಲೇ ಹೋಗ್ತಾರೆ. ಇದೊಂದು ರೀತಿಯ ಕಿರಿಕಿರಿ ಆದ್ರೆ ಇನ್ನೊಂದೆಡೆ ಕಂಡಕ್ಟ್ರ್ರು ರಾತ್ರಿ ಡ್ಯೂಟಿ ಮಾಡೋ ಟ್ರಾಫಿಕ್ ಪೊಲೀಸ್ ಥರ ಆಡ್ತಾನೆ. ಪ್ರಯಾಣಿಕರ ಟಿಕೇಟ್ ಮಾಡಕ್ಕೂ ಅವನಿಗ್ಗೆ ಮೂಗಿನ ಮೇಲೆ ಸಿಟ್ಟು. ಬೇಕಾಬಿಟ್ಟಿ ಬೈಯುತ್ತಾ, ರಶ್ನಲ್ಲಿ ನುಗ್ಗಿಕೊಂಡು ಬೆವರು ಒರೆಸಿಕೊಳ್ಳುತ್ತಾ, ಸ್ಟಾಪ್ ಬಂದಾಗ 'ವಿಸಿಲ್ ' ಹಾಕೋಕೂ ಅವನಿಗೆ ನೆನಪಿರಲ್ಲ. ಕೆಲವರಂತೂ ಹತ್ತಿ ಮುಂದಿನ ಸ್ಟಾಪ್ನಲ್ಲಿ ಇಳೀಯುವವರೆಗೂ ಆತ ಎಲ್ಲೋ ಮಧ್ಯದಲ್ಲಿ ಸಿಕ್ಕಹಾಕೊಂಡು ಟಿಕೇಟ್ ಟಿಕೇಟ್ ಅನ್ತಾನೆ ಇರ್ತಾನೆ, ಇತ್ತ ಪಾಸ್ ಎಂದು ಸುಳ್ಳು ಹೇಳಿ ಹತ್ತಿದವರೂ ಮೆಲ್ಲಗೆ ತಮ್ಮ ಸ್ಟಾಪ್ನಲ್ಲಿ ಇಳದುಕೊಳ್ಳುತ್ತಾರೆ. ಇನ್ನೊಂದೆಡೆ 'ಎಲ್ರೂ ಪಾಸ್ ಪಾಸ್ ಅನ್ತಾರೆ. ಬೋಲಿಮಕ್ಳು ಒಳಗೋಗದೆ ಡೋರಲ್ಲಿ ನೇತಾಡ್ತಾರೆ, ನಮ್ ಕಷ್ಟ ಯಾರ್ ಕೇಳ್ತಾರೆ..ನಮ್ಗೂ ಹೆಂಡ್ತಿ ಮಕ್ಳು ಇದ್ದಾರೆ..ಹೊಟ್ಟೆಪಾಡಿಗೆಲ್ಲ.."ಕಂಡಕ್ಟ್ರ ಗೊಣಗಾಟ ಬೇರೆ. ಯಾರಾದ್ರೂ 3-5 ರೂಪಾಯಿ ಕೊಟ್ಟು ಟಿಕೇಟ್ ಕೊಡದೆ ತನ್ನ ಕಿಸೆಗಿಳಿಸಿಕೋಳ್ಳುವ ಆಸೆ ಪಾಪ ಅವನಿಗೆ. ಕೆಲವರಂತೂ ಟಿಕೇಟ್ ನೀಡಿ, ನೂರರ ನೋಟು ತೆಗೆದುಕೊಂಡು ಆಮೇಲೆ ಚಿಲ್ಲರೆ ಕೊಡದೆ ಬೇಗನೇ ರೈಟ್ ಅಂದುಬಿಡ್ತಾರೆ. ಬೆಂಗ್ಳೂರು ಬಸ್ಸುಗಳಲ್ಲಿ ಹೀಗೆ ದುಡ್ಡು ಮಾಡೋ ಕಂಡಕ್ಟ್ರಣ್ಣ ನವ್ರುಗೇನೂ ಬರವಿಲ್ಲ ಬಿಡಿ. ಇನ್ನು ಡ್ರೈವರಣ್ಣನ ಕತೆ ಕೇಳೋದೆ ಬೇಡಪ್ಪ. ರಾತ್ರಯಂತೂ ಅವನಿಗೆ ಕಂಡಕ್ಟ್ರ ಸಿಳ್ಳೆ ಕೇಳೋದೇ ಇಲ್ಲ, ಅವನೇನೂ ಉದ್ದಕ್ಕೆ ಹೋಗ್ತಾನೇ ಇರ್ತಾನೆ. ಇಳೇಬೇಕಾದ್ರೆ ನಾವೇ ಅವ್ನ ಹತ್ರ ಬಂದು ಇಳಿತೀವಿ ಅನ್ಬೇಕು. ಅಬ್ಬಾಬ್ಬಾ ಬೆಂಗ್ಳೂರು ಸಿಟಿ ಬಸ್ಸುಗಳ ಪ್ರಯಾಣ ನೋಡಿದ್ರೆ, ಯಾವ ಜನ್ಮದ ಪಾಪದ ಫಲ ಅನ್ನದೆ ಅಡ್ಡಿಯಿಲ್ಲ.

Friday, November 23, 2007

ಪ್ರೀತಿಯಿಲ್ಲದ ಮೇಲೆ..

ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗುರುಳಿ
ನೆಲಕೆ ಹಸಿರು ಮೂಡೀತು ಹೇಗೆ?
-ಜಿಎಸ್ಎಸ್ ಅವರ ಕವನ ಪ್ರೀತಿಗೆಂದೇ ಹುಟ್ಟಿದೆ ಅನಿಸುತ್ತೆ.

ಯಾಕೋ ಪ್ರೀತಿಯ ಬಗ್ಗೆ ಒಂದಿಷ್ಟು ಬರೆಯೋಣ ಅನಿಸ್ತು. ಎಷ್ಟೋ ಕವಿಗಳು ಪ್ರೀತಿಯ ಬಗ್ಗೆ ಬರೆದಿದ್ದಾರೆ. ಹಾಡಿ ಹೊಗಳಿದ್ದಾರೆ. ಆದ್ರೂ ಪ್ರೀತಿಯನ್ನು ಸೀಮಿತವಾಗಿರಿಸಲು ಸಾಧ್ಯನಾ? ಈ ಶಬ್ಧವೇ ಅದೆಷ್ಟು ಚೆನ್ನ. ಪ್ರೀತಿಯ ಕಲ್ಪನೆಯೇ ಅದೆಷ್ಟು ಖುಷಿ ನೀಡುತ್ತೆ. ಆದರೆ ಪ್ರೀತಿಯೆಂದರೆ ಅದೊಂದು ಕಲ್ಪನೆ ಅಲ್ಲ, ಅದೊಂದು ನಿತ್ಯ ಸತ್ಯ. ಪ್ರೀತಿಯೆಂದರೆ ಮನುಷ್ಯ ಬದುಕಿನ ಸ್ಪೂರ್ತಿ. ಪ್ರೀತಿಯೆಂದರೆ..ಅನುಭೂತಿ , ಬದುಕು ಇನ್ನು ಏನೇನೋ...

"ಪ್ರೀತಿಗೆ ಹೆಸರು ಕೊಡಬೇಡಿ. ನೀವು ಪ್ರೀತಿಗೆ ಹೆಸರಿಟ್ಟಾಗ ಅದೊಂದು ಸಂಬಂಧವಾಗುತ್ತದೆ. ಸಂಬಂಧಗಳು ಪ್ರೀತಿಯನ್ನು ಸೀಮಿತಗೊಳಿಸುತ್ತವೆ. ಸಂಬಂಧವನ್ನು ಹೇರುವುದರಿಂದ ಪ್ರೀತಿ ನಿರ್ಬಂಧಿತವಾಗುತ್ತದೆ" ರವಿಶಂಕರ್ ಗುರೂಜಿ ಅವರ ಮಾತಿದು. ಹೌದು! ಪ್ರೀತಿ ಸಂಬಂಧಗಳನ್ನೂ ಮೀರಿದ್ದು. ಮನುಷ್ಯನೊಬ್ಬ ಪ್ರೀತಿಯನ್ನು ಪ್ರೀತಿಸಿದಾಗ ಮಾತ್ರ ಪರರನ್ನೂ ಪ್ರೀತಿಸಲು ಸಾಧ್ಯ. ಜಗತ್ತಿನ ಪ್ರೀತಿಯೊಂದಿಗೆ ಅಂತರ್ಗತನಾಗಲು ಸಾಧ್ಯ. ಅದಕ್ಕಾಗಿ ಕವಿ ಜಿಎಸ್ಎಸ್ ಕೇಳಿರುವುದು 'ಪ್ರೀತಿಯಿಲ್ಲದ ಮೇಲೆ...".

ಪ್ರೀತಿಯಲ್ಲಿ ಅದ್ದಿ ತೆಗೆದ ಬದುಕು ಅದೆಷ್ಟು ಚೆನ್ನ ಅನಿಸುತ್ತೆ ಅಲ್ವೇ? ಪ್ರೀತಿ ಸೀಮಿತವಲ್ಲ, ಅದು ವಿಶಾಲ. ಅಮ್ಮ ನಮ್ಮನ್ನು ಪ್ರೀತಿಸ್ತಾರೆ, ಅಪ್ಪ ನಮ್ಮನ್ನ ಪ್ರೀತಿಸ್ತಾರೆ..ಅಕ್ಕ, ತಮ್ಮ,ಅಣ್ಣ-ತಂಗಿ ನಮ್ಮನ್ನು ಪ್ರೀತಿಸ್ತಾರೆ..ಪುಟ್ಟ ಮಕ್ಕಳೂ ಪ್ರೀತಿಸ್ತಾರೆ..ಜಗತ್ತೇ ನಮ್ಮನ್ನು ಪ್ರೀತಿಸುತ್ತೆ ಅಂದಾಗ ಪ್ರೀತಿಯನ್ನು ಯಾವುದೋ ಸಂಕುಚಿತ ಅರ್ಥಕ್ಕೆ ಸೀಮಿತವಾಗಿಸೋದು ಎಷ್ಟೊಂದು ತಪ್ಪು ಅನಿಸುತ್ತೆ ಅಲ್ಲ? ಯಾರಾದರೇನು ಪ್ರೀತಿಸಬೇಕು..ಮನುಷ್ಯರನ್ನ, ಪ್ರಾಣಿಗಳನ್ನ, ಪಕ್ಷಿಗಳನ್ನ, ಪೃಕೃತಿಯ ಮಡಿಲನ್ನ, ಸಮಸ್ತ ಜೀವ ಪ್ರಪಂಚವನ್ನೇ ಪ್ರೀತಿಸಿಬೇಕೆಂದು ಅನಿಸುತ್ತೆ ಅಲ್ವೇ? ನಾವು ನಮ್ಮನ್ನು ಪ್ರೀತಿಸಬೇಕು, ನಮ್ಮೊಳಗಿನ ತೇಜಸ್ಸನು ನಾವು ಪ್ರೀತಿಸಬೇಕು, ನಮ್ಮ ಬದುಕು, ಪ್ರೀತಿಯನ್ನು ಪ್ರೀತಿಸಲು ಕಲಿಯಬೇಕು, ಹೀಗಿದ್ದಲ್ಲಿ ನಮ್ಮ ಬದುಕು ಹೇಗಿರಬಹುದು ಅಲ್ವೇ?

ದ.ರಾ. ಬೇಂದ್ರೆ ಅವರು ಪ್ರೀತಿಯ ಬಗ್ಗೆ ಹೀಗೆನ್ನುತ್ತಾರೆ;
ಒಲವೆಂಬ ಹೊತ್ತಗೆಯ ಓದಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುವಿಯಾ ಹುಚ್ಚ?
ಹಗಲಿರುಳೂ ದುಡಿದರೂ, ಹಲಜನುಮ ಕಳೆದರೂ
ನೀ ತೆತ್ತಲಾರೆ ಬರೇ ಅಂಚೆ ವೆಚ್ಚ!!

ಪ್ರೀತಿಯ ಆಳವನ್ನು ತಿಳಿಸಿರುವ ತಾವೋ, "ನನ್ನ ಹೃದಯದೊಳಗಿಂದ ಹೊರನೆಗೆಯುವ ವಲಸೆ ಹಾಡುಗಳು ನಿನ್ನ ಪ್ರೀತಿಯ ಸ್ತರದಲ್ಲಿ ಗೂಡು ಕಟ್ಟಲೆತ್ನಿಸುತ್ತವೆ" ಪ್ರೀತಿ ಇರಲಿ, ನಮ್ಮೊಳಗೆ, ಜಗದೊಳಗೆ. ನಮ್ಮನ್ನು ಸಮಸ್ತ ಜಗತ್ತನ್ನು ಪ್ರೀತಿಸೋಣ. ಪ್ರೀತೀನ ಪ್ರೀತಿಯಿಂದ ಗೆಲ್ಲೋಣ. ಗೊತ್ತುಗುರಿಯಿಲ್ಲದೆ ಮೂಡುವ ಬದುಕಿನ ಸಂಬಂಧಗಳನ್ನು ಪ್ರೀತಿಯ ಮೂಲಕ ಬೆಸೆಯೋಣ. ಮರೆತುಹೋಗದಷ್ಟು ಹೃದಯದಲ್ಲಿ ನೆಲೆಸಿಬಿಡೋಣ..ಪ್ರೀತಿಯ ಸ್ತರದಲ್ಲಿ ಬದುಕನ್ನು ಕಟ್ಟೋಣ. ಏನೋ ಅಂದೆ ಪ್ರೀತಿ..ಪ್ರೀತಿ. ಬದುಕಿನ ಪ್ರೀತಿ..ಬದುಕುವ ಪ್ರೀತಿ..ನಮ್ಮೆಲ್ಲರ ಬದುಕನ್ನು ಬೆಳಗುವ ಪ್ರೀತಿಯೆಂಬ ಪುಟ್ಟ ಹಣತೆ..ಸದಾ ನಾವಿದನ್ನು ಬೆಳಗಬೇಕು. ಜಗತ್ತು ಏನೇ ಆಗಲಿ, ನಾವು ಪ್ರೀತಿಸಬೇಕು..ಪ್ರತಿಯೊಬ್ಬರಿಗೂ ಪ್ರೀತಿಯ ತುತ್ತನ್ನು ಉಣಬಡಿಸಬೇಕು..ಜೋಪಾನವಾಗಿ ಪ್ರೀತಿನ ಹೃದಯದಲ್ಲಿಬಚ್ಚಿಡೋಣ..ಬಿಚ್ಚಿಡೋಣ..ಅದೊಂದು ಶುಭ್ರ ಕನ್ನಡಿ..ಒಡೆಯದಂತೆ ಜೋಪಾನವಾಗಿರಿಸೋಣ.. ಬದುಕೋಣ.. ನಿಷ್ಕಲ್ಮಶ ಪ್ರೀತಿಯ ಸವಿ ಸವಿಯೋಣ..ಪ್ರೀತಿಯ ಮಳೆ ಸುರಿಸೋಣ.. ಕೊನೆಗೊಂದಿಷ್ಟು..
ಕವಿದ
ಕಾರ್ಮೋಡಗಳ ಸರಿಸಿ..
ಪ್ರೀತಿಯ ದೀಪ ಹಚ್ಚೋಣ..
ನಿನ್ನೆ-ನಾಳೆಗಳ ನಡುವೆ..
ಪ್ರೀತಿಯ ಅಲೆಯಲಿ
ತೇಲೋಣ
ಏನಂತೀರಿ?

Thursday, November 22, 2007

ಉಡುಪಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

74ನೇ ಕನ್ನಡ ಸಾಹಿತ್ಯ ಸಮ್ಮೇಳನ, ದಿನಗಳು ಸಮೀಪಸುತ್ತಿವೆ..ಇದೇ ಡಿಸೆಂಬರ್ 12ರಿಂದ 17ರ ತನಕ ಕರಾವಳಿಯ ಮಡಿಲು ಉಡುಪಿಯಲ್ಲಿ. ಎಲ್.ಎಸ್ ಶೇಷಗಿರಿರಾವ್ ಸಮ್ಮೇಳನದ ಅಧ್ಯಕ್ಷ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ ಎನ್ನುವುದು ಸುದ್ದಿ. ಅಧ್ಯಕ್ಷ ಸ್ಥಾನ ಸಿಕ್ಕಿಲ್ಲವೆಂದು ಮುನಿಸಿಕೊಂಡಿದ್ದ ವ್ಯಾಸರಾಯ ಬಲ್ಲಾಳ, ಸಮ್ಮೇಳನದ ನಿಗದಿತ ದಿನಾಂಕ ಮುಂದೂಡಿಕೆ..ಎಲ್ಲವುಗಳ ನಡುವೆ ಇದೀಗ ಡಿಸೆಂಬರ್ 12ರಂದು ಸಾಹಿತ್ಯ ಸಮ್ಮೇಳನಕ್ಕೆ ಉಡುಪಿ ಸಿಂಗಾರಗೊಳ್ಳುತ್ತಿದೆ. ಸಮ್ಮೇಳನದ ಉಸ್ತುವಾರಿಯನ್ನು ಡಿ. ವಿರೇಂದ್ರ ಹೆಗ್ಗಡೆ ಮತ್ತು ಕೆ.ಕೆ. ಪೈ ವಹಿಸಿಕೊಳ್ಳಲಿದ್ದಾರೆ.

ಸಮ್ಮೇಳನದ ಲಾಂಛನವನ್ನು ಕಲಾವಿದ ಯು. ಮಂಜುನಾಥ ಮಯ್ಯ ರಚಿಸಿದ್ದಾರೆ. ಕರಾವಳಿ ಕಲೆ ಯಕ್ಷಗಾನದ ಮುಕುಟವನ್ನು ಹೋಲುವ ಸಿದ್ಧಗೊಂಡಿದೆ. ಸಮ್ಮೇಳನದ ಒಟ್ಟು ನಿರ್ವಹಣೆಗೆ 43 ಸಮಿತಿಗಳ ರಚನೆಯಾಗಿದೆ. ಪುಸ್ತಕಗಳ ಮಾರಾಟಗಾರರು, ಸಾಹಿತ್ಯಾಸಕ್ತರು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಅಲ್ಲಿ ಹೋಗೋದೇ ದೊಡ್ಡ ವಿಷಯವಲ್ಲ. ಸಾಹಿತ್ಯ ಸಮ್ಮೇಳನ ಹೇಗೆ ನಡೆಯುತ್ತೆ? ಸಮಯ ಪಾಲನೆ ಹೇಗಾಗುತ್ತೇ? ಎಷ್ಟೋ ಕೋಟಿ ಹಣ ಖರ್ಚು ಮಾಡಿ ಸಾಹಿತ್ಯ ಪೋಷಣೆ ಆಗುತ್ತೋ ಅಥವ ಉದರ ಪೋಷಣೆ ಮುಖ್ಯವೆನಿಸುತ್ತೋ ಇದು ಮುಂದಿರುವ ಪ್ರಶ್ನೆಗಳು.

ಪ್ರತಿಬಾರಿಯೂ ಅಷ್ಟೇ. ಸಾಹಿತ್ಯ ಸಮ್ಮೇಳನ ಸಾಹಿತ್ಯ ಸಮ್ಮೇಳನಕ್ಕಿಂತ ಉದರ ಪೋಷಣೆಯೇ ಮುಖ್ಯವಾಗುತ್ತದೆ. ಊಟದ ಛತ್ರದಲ್ಲಿ ತುಂಬಿ ತುಳುಕುವ ಮಂದಿ, ಸಮ್ಮೇಳನದಲ್ಲಿ ಗೋಷ್ಟಿ, ಭಾಷಣಗಳನ್ನು ಕೇಳಲು ಕುಳಿತಿರುವುದಿಲ್ಲ. ಎಷ್ಟೋ ಬಾರಿ ಬರೇ ಕುರ್ಚಿಗಳೇ ಕವಿಗೋಷ್ಠಿ ಆಲಿಸುವ ಸಂದರ್ಭ ಬಂದಿತ್ತು. ಬೀದರಿನಲ್ಲಿ ನಡೆದ ಸಮ್ಮೇಳನದಲ್ಲಿ ಆಗಿದ್ದೂ ಅದೆ. ಮಧ್ಯರಾತ್ರಿ ವರೆಗೆ ಕವಿಗೋಷ್ಠಿ ಮುಂದುವರೆದಾಗ, ಬರೇ ಕುರ್ಚಿಗಳೇ ಸಭಿಕರಾಗಿದ್ದರು. ಅಚ್ಚುಕಟ್ಟಾದ ಸಾಹಿತ್ಯ ಸಮ್ಮೇಳನ ಅಂದ ತಕ್ಷಣ ಥಟ್ಟನೆ ನೆನಪಾಗುವುದು 2003ರಲ್ಲಿ ನಡೆದ ಮೂಡುಬಿದಿರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ನಡೆದಾಗ ಸಮಯ ಪಾಲನೆ, ಸಭಿಕರ ಕೊರತೆ ಕಂಡುಬಂದಿಲ್ಲ. ಆ ಬಗ್ಗೆ ಡಾ. ಮೋಹನ್ ಆಳ್ವರ ಕಾಳಜಿಯನ್ನು ಮೆಚ್ಚಲೇಬೇಕು. ಅದನ್ನೇ ಹನಿಕವಿ ಡುಂಡಿರಾಜ್ ಹೀಗೆಂದಿದ್ದರು;
ಕವಿಗಳು
ಮಾಡುತ್ತಾರೆ
ಕವನ
ವಾಚನ,
ಆಳ್ವರು
ನೋಡುತ್ತಾರೆ
ತಮ್ಮ ವಾಚನ್ನ!!
ಕವನ ತಮಾಷೆಯಾಗಿ ಕಂಡರೂ ಅಷ್ಟೇ ಅರ್ಥಪೂರ್ಣ.
ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಲಿ ಎಂಬುವುದೇ ನಮ್ಮ ಆಶಯ.

ಚಿಕಾಗೋದಲ್ಲಿ ಸ್ವಾಮೀ ವಿವೇಕಾನಂದ..

ವಿಶ್ವ ಭಾತೃತ್ವ ಸಂದೇಶ ಸಾರಿದ ಸ್ವಾಮೀ ವಿವೇಕಾನಂದರು 1893ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿರುವ ಭಾಷಣದ ಸಾರ ಇಲ್ಲಿದೆ.
ಅಮೇರಿಕಾದ ಸಹೋದರ ಸಹೋದರಿಯರೇ,
ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳನ್ನು ಸಲ್ಲಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದಿದಿಂದ ತುಂಬಿ ತುಳುಕುತ್ತಿದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸನ್ಯಾಸಿಗಳ ಸಂಘದ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ. ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಹಿಂದೂ ಜನಾಂಗಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯಾನು ಕೋಟಿ ಜನರ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಬಹಳ ದೂರದಿಂದ ಬಂದಿರುವ, ಧಾರ್ಮಿಕ ಸಹನೆಯ ಭಾವನೆಯನ್ನು ವಿವಿಧ ದೇಶಗಳಿಗೆ ಒಯ್ಯುವ ಗೌರವಕ್ಕೆ ಪಾತ್ರರಾಗಿರುವ ಎಲ್ಲ ಭಾಷಣಕಾರರಿಗೂ ನಾನು ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ. ಧಾರ್ಮಿಕ ಸಹನೆಯನ್ನೂ, ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುವುದನ್ನೂ ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು; ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವರು ನಾವು ಎಂಮ ಹೆಮ್ಮೆ ನನ್ನದು. ಯಾವ ವರ್ಷ ರೋಮನ್ನರ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ಒಡೆದು ಪುಡಿಪುಡಿಯಾಯಿತೋ ಅದೇ ವರ್ಷ ಅಳಿದುಳಿದ ಶುದ್ಧ ಯಹೂದಿಗಳು ಆಶ್ರಯವನ್ನು ಬಯಸಿ ದಕ್ಷಿಣ ಭಾರತಕ್ಕೆ ಬಂದರು. ಅವರಿಗೆ ಆಶ್ರಯ ನೀಡಿದ ದೇಶದವನು ನಾನು ಎಂಬ ಹೆಮ್ಮೆ ನನ್ನದು. ಝೋರತೂಷ್ಟ್ರ ರಾಷ್ಟ್ರದ ನಿರಾಶ್ರಿತರಿಗೆ ಆಶ್ರಯ ನೀಡಿ ಇಂದಿಗೂ ಅವರನ್ನು ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಸೋದರರೇ, ಚಿಕ್ಕಂದಿನಿಂದ ನಾನು ಪಠಿಸುತ್ತಿದ್ದ, ಇಂದಿಗೂ ಕೋಟ್ಯಾಂತರ ಜನರು ಪಠಿಸುತ್ತಿರುವ ಶ್ಲೋಕವೊಂದರ ಕೆಲವು ಪಂಕ್ತಿಗಳನ್ನು ನಿಮ್ಮ ಮುಂದೆ ಹೇಳುತ್ತೇನೆ; "ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವಾನ್, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ, ನೇರವಾಗಿಯೋ ವಕ್ರವಾಗಿಯೋ ಇರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವನ್ನೂ ನಿನ್ನೆಡೆಗೆ ಕರೆದೊಯ್ಯುತ್ತೇವೆ"

"ಯಾವುದೇ ರೂಪದಲ್ಲಿ ನನ್ನ ಬಳಿಗೆ ಬಂದರೆ ನಾನು ಸ್ವೀಕರಿಸುತ್ತೇನೆ; ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿ ಬಂದು ನನ್ನನ್ನೇ ಸೇರಲು ಎಲ್ಲ ಜನರೂ ಪ್ರಯತ್ನಿಸುತ್ತಿದ್ದಾರೆ" -ಎಂಬ ಗೀತೆಯ ಅದ್ಭುತ ತತ್ವದ ಸತ್ಯವನ್ನು ಜಗತ್ತಿಗೆ ಸಾರುವುದಕ್ಕೆ ಈ ಸಭೆಯೊಂದೇ ಸಾಕು. ಸಂಕುಚಿತ, ಪಂಥಭಾವನೆ, ಸ್ವಮತಾಭಿಮಾನ, ಅದರ ಭೀಕರ ಸಂತಾನವಾದ ಮತಾಂಧತೆ ಬಹುಕಾಲದಿಂದ ಪೃಥ್ವಿಯನ್ನು ಬಾಧಿಸುತ್ತವೆ. ಇವು ಈ ಭೂಮಿಯನ್ನು ಹಿಂಸೆಯಿಂದ ತುಂಬಿಸಿವೆ, ಅದನ್ನು ಮತ್ತೆ ಮತ್ತೆ ನರ ರಕ್ತದಿಂದ ತೋಯಿಸಿವೆ, ನಾಗರಿಕತೆಯನ್ನು ನಾಶಗೊಳಿಸಿವೆ, ರಾಷ್ಟ್ರ ರಾಷ್ಟ್ರಗಳನ್ನೆ ನಿರಾಶೆಯ ಕೂಪಕ್ಕೆ ತಳ್ಳಿವೆ. ಇಂಥ ಭಯಂಕರ(ಧರ್ಮಾಂಧತೆಯ) ರಾಕ್ಷಸರು ಇಲ್ಲದೆಯೇ ಇದ್ದಿದ್ದರೆ ಮಾನವ ಸಮಾಜ ಈಗಿರುವುದಕ್ಕಿಂತಲೂ ಎಷ್ಟೋ ಪಾಲು ಮುಂದುವರಿದಿರುತ್ತಿತ್ತು. ಆದರೆ ಅವರ ಕಾಲ ಮುಗಿದಿದೆ. ಇಂದು ಬೆಳಿಗ್ಗೆ ಈ ಸಭೆಯ ಶುಭಾರಂಭವನ್ನು ಸೂಚಿಸಲು ಮೊಳಗಿದ ಘಂಟಾನಾದ ೆಲ್ಲ ಮತಾಂಧತೆಯ, ಖಡ್ಗ ಇಲ್ಲವೇ ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನಾದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟನಾದವೂ ಆಗಲಿ ಎಂಬುದೇ ನನ್ನ ಆಶಯ.
ಚಿಕ್ಕಂದಿನಿಂದಲೂ ಈ ಭಾಷಣ ನನಗೆ ತುಂಬಾ ಇಷ್ಟವಾಗಿದ್ದವು. ಆಗಾಗ ಓದಿ ಖುಷಿಪಡುತ್ತಿದೆ. ನೀವೂ ಓದಿ ಖುಷಿಪಡಿ...

Wednesday, November 21, 2007

ಎಂಥ ಕನ್ನಡ ಪ್ರೇಮ?!

"ನಾವು ಕನ್ನಡಿಗರಮ್ಮಾ, ನಾವು ಕನ್ನಡ ಮಾತಾಡೋದು. ನಮಗೆ ಇಂಗ್ಲೀಷ್, ಹಿಂದಿ ಇದ್ಯಾವುದೂ ಬರಲ್ಲಮ್ಮ. ನಾವು ಕನ್ನಡದವ್ರು, ಕನ್ನಡ ನಮ್ ಭಾಷೆ. ಕನ್ನಡ ಮಾತಾಡೋದು ನಮಗೆ ಹೆಮ್ಮೆಯೆನಿಸುತ್ತದೆ. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಮಾತಾಡದೆ ಇನ್ಯಾರು ತಮಿಳರು ಕನ್ನಡ ಮಾತಾಡ್ತಾರಾ..." ಆಕೆ ತಮ್ಮ ಮಾತನ್ನು ಮುಂದುವರೆಸಿದ್ದರು.

ಅಂದು ಬೆಳಿಗ್ಗೆ ಆಫೀಸಿಗೆ ಹೊರಟಾಗ ಸ್ವಲ್ಪ ಲೇಟಾಗಿತ್ತು. ಒಂದೆಡೆ ಟ್ರಾಫಿಕ್ ಜಾಮ್, ಇನ್ನೊಂದೆಡೆ ಬಸ್ಸು ಪುಲ್ ರಶ್. ಹೇಗೋ ನುಗ್ಗಿಕೊಂಡು ಒಳಗೆ ನುಗ್ಗಿ ಕೈಕಾಲು ನೆಟ್ಟಗೆ ಮಾಡ್ಕೊಂಡು ನಿಂತವಳು ಮತ್ತೆ ಆಫೀಸ್ ಪಕ್ಕ ಬಸ್ಸು ತಲುಪಿದಾಗ ಇಳಿಯೋಕೆ ಹರಸಾಹಸ ಪಡಬೇಕಾಯಿತು. ಬಾಗಿಲ ಹತ್ರ ಒಬ್ಬರು ನಡುವಯಸ್ಸಿನ ಮಹಿಳೆ ನಿಂತಿದ್ದರು. ನಾನು ಇಳಿಬೇಕಾದರೆ ಅವರನ್ನು ದಾಟಿ ಇಳೀಬೇಕು. ಅವರತ್ತ ಮೆಲ್ಲಗೆ ಕೇಳಿದೆ 'ಇಳೀತೀರಾ ಆಂಟಿ'..ಅವರು ನನ್ನ ಮುಖವನ್ನೇ ದಿಟ್ಟಿಸಿದರು. ಮತ್ತೊಮ್ಮೆ ಅದೇ ಮಾತನ್ನು ಕೇಳಿದೆ, ಮತ್ತೂ ಅರ್ಥವಾಗಿಲ್ಲ. ಕೊನೆಗೆ ಇಂಗ್ಲೀಷ್ನಲ್ಲಿ ಕೇಳಿದೆ. ನನ್ನನ್ನೊಮ್ಮೆ ತಲೆಯಿಂದ ಕಾಲಿನ ತನಕ ನೋಡಿ, ಏನಮ್ಮಾ ಇಂಗ್ಲೀಷ್ ಮಾತಾಡ್ತೀಯಾ ಅಂದ್ರು. ನಿಮಗೆ ಕನ್ನಡ ಬರಲ್ಲ ಅಂತ ಇಂಗ್ಲೀಷ್ ಮಾತಾಡಿದೆ ಆಂಟಿ ಅಂದಾಗ ಅವರು ಮೇಲಿನ ಮಾತುಗಳನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿಬಿಟ್ಟಿದ್ದರು. ಮಾತ್ರವಲ್ಲ ನನ್ನ ಜೊತೆನೇ ಬಸ್ಸಿನಿಂದ ಇಳಿದು, ಮತ್ತೆ ಮಾತು ಆರಂಭಿಸಿದರು.

"ನೋಡಮ್ಮಾ ಕನ್ನಡ ಮಾತಾಡ್ಬೇಕು. ನನ್ ಮಕ್ಕಳು ಅಮೇರಿಕಾದಲ್ಲಿದ್ದಾರೆ. ನಾನೂ ಮುಂಬೈಯಲ್ಲಿ ಹುಟ್ಟಿ ಬೆಳೆದವಳು. ನನ್ನ ಗಂಡ ಬ್ಯಾಂಕ್ ಉದ್ಯೋಗಿ. ಕರ್ನಾಟಕದಲ್ಲಿ ನೆಲೆಸಿ 25 ವರ್ಷಗಳೇ ಕಳೆದುಹೋಗಿವೆ. ಈಗ ನಾನು ಕನ್ನಡತಿ..ನನ್ನನ್ನು ಬೆಳೆಸಿದ್ದು ಕನ್ನಡ, ಕರ್ನಾಟಕ. ನನಗೆ ಅನ್ನ ಕೊಟ್ಟಿದ್ದು ಕನ್ನಡ ನೆಲ. ಯಾವತ್ತೂ ಈ ನೆಲದಲ್ಲಿ ಇದ್ದುಕೊಂಡು, ಬೇರೆ ಭಾಷೆಯ ವ್ಯಾಮೋಹ ಬೆಳೆಸಿಕೊಳ್ಳಬೇಡಿ, ಅದು ಸರಿಯಲ್ಲ." ಎಂದರು. ನಂತರ ಒಂದಷ್ಡು ಎಲ್ಲಿ, ಏನು, ಎತ್ತ ಮಾತಾಡಿಸಿದ್ರು. ನಂತರ ಹೊರಟರು.
ಕನ್ನಡದ ಬಗ್ಗೆ ಇಷ್ಟೆಲ್ಲಾ ಮಾತಾಡೋ ಅವರು, ಓರ್ವ ಸಾಮಾನ್ಯ ಗೃಹಿಣಿ. ಯಾವುದೋ ಕೆಲಸದ ನಿಮಿತ್ತ ಬಸ್ಸಲ್ಲಿ ಬಂದಿದ್ದರು. ಹೆಸರು ಸುಜಾತ.

ಅಂತೂ-ಇಂತೂ ಅರ್ಧ ಗಂಟೆ ಕಳೆದು ನಮ್ಮ ಆಫೀಸ್ನತ್ತ ಹೆಜ್ಜೆ ಹಾಕಿದೆ. ಆದರೆ ಮನದಲ್ಲಿ ಅವರ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದ್ದವು. "ಕನ್ನಡವನ್ನು ಕನ್ನಡಿಗರು ಮಾತಾಡದೆ ಇನ್ಯಾರೂ ತಮಿಳರು ಮಾತಾಡ್ತಾರಾ?" ಈ ಮಾತು ಮನತುಂಬಾ ಮಾರ್ದನಿಸುತ್ತಿತ್ತು. ಕನ್ನಡನಾಡಲ್ಲೇ ಹುಟ್ಟಿ ಬೆಳೆದ ಕನ್ನಡಿಗರ ಮಾತೃಭಾಷಾ ಪ್ರೇಮದ ಬಗ್ಗೆ ....'ಏನನಿಸಿರಬಹುದು'?! ನೀವೇ ಯೋಚಿಸಿ.

ರಾಜ್ಯದ ರಾಜಧಾನಿ ಬೆಂಗಳೂರು. ಆದರೆ ಬೆಂಗಳೂರಿನಲ್ಲ ಒಂದಷ್ಟು ಹೊತ್ತು ಕಣ್ಣು-ಕಿವಿ ತೆರೆದುಕೊಂಡು ಸುತ್ತಲಿನ ಪರಿಸರದತ್ತ ಅವಲೋಕಿಸಿದರೆ ನಾವು ರಾಜ್ಯದ ರಾಜಧಾನಿಯಲ್ಲೇ ಇದ್ದೇವಾ? ಎಂಬ ಅನುಮಾನ ಬಂದುಬಿಡುತ್ತದೆ. ತಮಿಳು, ಮಲೆಯಾಳಂ, ತೆಲುಗು, ಇಂಗ್ಲೀಷ್ ನಡುವೆ ನಮ್ಮ ಕನ್ನಡ ಬಸವಳಿದಿದೆ. ಕನ್ನಡಕ್ಕಾಗಿ ಬೊಬ್ಬಿಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘಟನೆಗಳು, ಕನ್ನಡ ರಕ್ಷಣಾ ವೇದಿಕೆ..ಯಾವುದಿದ್ದರೂ ಕನ್ನಡಾಂಬೆ ನಿತ್ಯ ನರಳುತ್ತಿದ್ದಾಳೆ. ಕನ್ನಡ ಉಳಿಸಿ ಎಂದು ಬೊಬ್ಬಿಡುವ ಕನ್ನಡ ಪ್ರೇಮಿಗಳ ನಡುವೆ ಸುಜಾತರಂಥವರು 'ಕನ್ನಡ ಬೆಳಗುವ ಪುಟ್ಟ ಹಣತೆಯಂತೆ'!
ಕನ್ನಡ ನೆಲದಲ್ಲಿಯೇ ಹುಟ್ಟಿ ಬೆಳೆದು ಕನಿಷ್ಠ ಭಾಷಾಭಿಮಾನವನ್ನೂ ಬೆಳೆಸಿಕೊಳ್ಳದೆ, ಪರ ಭಾಷೆಗಳತ್ತ ಮುಖ ಮಾಡಿರುವ ನಾವು-ನೀವೆಲ್ಲರೂ 'ಸುಜಾತ' ಅವರಂಥವರನ್ನು ಕಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಏನಂತೀರಿ?