ಮೊನ್ನಯಿಂದ ಬೆಂಗಳೂರಿನಲ್ಲಿ ಮಳೆಯೋ ಮಳೆ..ಸಂಜೆ ಆಫೀಸಿನಿಂದ ಹೊರಡುತ್ತಿದ್ದಂತೆ ಗುಡುಗು-ಮಿಂಚು, ಮಳೆಯದ್ದೇ ಸ್ವಾಗತ. ಛತ್ರಿ ಇದ್ದರೂ ಬೆಂಗಳೂರು ಮಳೆ ಅಂದ್ರೆ ಮಳೆಗೆ ಪೂರ್ತಿ ನೆನೆಯಲೇಬೇಕು. ಮೊನ್ನೆ ರಾತ್ರಿ ಆಫೀಸಿನಿಂದ ಹೊರಟಾಗ ರಾತ್ರಿ ಎಂಟೂವರೆ ಗಂಟೆ. ಮಳೆಯೋನೋ ಬಿಟ್ಟಿತ್ತು..ಆಕಾಶನೂ ಶುಭ್ರವಾಗಿತ್ತು. ಆದರೆ ಅರ್ಧ ದಾರಿಗೆ ತಲುಪುವಾಗ ಜೋರಾಗಿ ಮಳೆ, ಗಾಳಿ. ರಸ್ತೆಗಳೆಲ್ಲ ಸಮುದ್ರಗಳಾದುವು..ಚಲಿಸುತ್ತಿದ್ದ ವಾಹನಗಳು ದಡಕ್ಕನೆ ನಿಂತುಬಿಟ್ಟವು. ನನ್ನ ಛತ್ರಿಯಂತೂ ಡಾನ್ಸ್ ಮಾಡಿ ಉಲ್ಟಾ ಆಗಿ, ಏನೇನೋ ಆಗಿ ಹೋಯಿತು. ಪುಲ್ ಒದ್ದೆ..ಚಳೀ.
ಚಿಕ್ಕದಿರುವಾಗ ಶಾಲೆಗೆ ಹೋಗುತ್ತಿದ್ದ ನೆನಪಾಯಿತು. ಮಳೆ ಬಂದ್ರೆ ಬಟ್ಟೆಗಳನ್ನೆಲ್ಲಾ ಎತ್ತಿಕಟ್ಟಿ ಊರ ಹಳ್ಳಗಳನ್ನು ದಾಟಿ ಮನೆಗೆ ಬರುವುದು, ಶಾಲೆಗೆ ಹೋಗುವುದು.. ಹಾಗೇ ಮಾಡಿದೆ. ಹೊಲದಲ್ಲಿ ಪೈರು ಕೊಯ್ಯುವಾಗ ಅಮ್ಮನವರೂ ಬಟ್ಟೆ ಎತ್ತಿ ಕಟ್ಟಿಕೊಳ್ಳುತ್ತಿದ್ದರು. ಹಾಗೇ ಮಾಡಿದೆ..ಚಪ್ಪಲು ಮಾತ್ರ ಎಲ್ಲೋ ತೇಲುತ್ತಾ ಹೋಗಿತ್ತು. ಕೈಯಲ್ಲೊಂದು ಬ್ಯಾಗ್ ಇರದಿದ್ದರೆ ನಾನಂತೂ ಆ ಮಳೆಯಲ್ಲಿ ಖುಷಿಯಾಗುತ್ತಿದ್ದೆ. ಬೆಂಗಳೂರಿನಲ್ಲಿ ಮಳೆ, ಗಾಳಿ ಬರಕ್ಕೆ ಆರಂಭವಾದರೆ ನಂಗೆ ಅಮ್ಮ ಜಾಸ್ತಿ ನೆನಪಾಗ್ತಾರೆ. ಯಾಕೋ ಊರಲ್ಲಿ ಮಳೆ ಬರುವಾಗ ಒಂಥರಾ ಚಂದ. ಸಣ್ಣವರಿರುವಾಗ ಮಳೆ ಬರೋದನ್ನೇ ಕಾಯುತ್ತಿದ್ದ ನಾವು, ಮೊದಲ ಮಳೆಯಲ್ಲೇ ನೆನೆದು ಶೀತ, ಜ್ವರದಲ್ಲಿ ಮಲಗುತ್ತಿದ್ದುಂಟು .ಅಮ್ಮ ಮನೆಯಲ್ಲಿ ಇಲ್ಲದಿದ್ದಾಗ ನಾನು-ತಮ್ಮ ಇಬ್ಬರು ಅಂಗಳದಲ್ಲಿ ಮಳೆಯಲ್ಲಿ ನೆನೆಯುತ್ತಿದ್ದೇವು. ಮತ್ತೆ ನಮ್ಮನೆ ತುಂಬಾ ಹಳ್ಳಿ..ಇರುವುದು ಕಾಡಿನ ಮಧ್ಯದಲ್ಲಿ..ಆ ಕಾಡಿಗೆ 'ಪೈಕದ ಮಲೆ' ಅಂತಾನೇ ಹೆಸರು. ನಮ್ಮಮ್ಮನಿಗೆ ಮದುವೆಯಾಗುವ ಮುಂಚೆ ಆ ಕಾಡಲ್ಲಿ ಹುಲಿ, ಆನೆಗಳೆಲ್ಲ ಇದ್ದವಂತೆ. ಅಮ್ಮನವರು ಮನೆಯಿಂದ ಹೊರಗೆ ಬರುತ್ತಿರಲಿಲ್ಲವಂತೆ. ದೊಡ್ಡ ದೊಡ್ಡ ಹೆಬ್ಬಲಸು ಮರಗಳಿವೆ. ಮಳೆಗಾಲದಲ್ಲಿ ಆ ಊರೇ ಕತ್ತಲು. ಈಗಲೂ ಅಲ್ಲಿ ಕೆಲವೆಡೆ ಕರೆಂಟಿಲ್ಲ. ವಿದ್ಯುತ್ ಕಂಬಗಳನ್ನು ಹಾಕಿದ್ರೆ ಮಳೆಗಾಲದಲ್ಲಿ ಮರಗಳು ಬಿದ್ದು ಕಂಬಗಳೆಲ್ಲ ನೆಲಕ್ಕೆ. ಕಾಡೇ ಆಗಿದ್ರೂ ಅದೇನೋ ಮಳೆ ಬರುವಾಗ ನಮ್ಮೂರೇ ಚಂದ...ನಮ್ಮೂರಿಗೆ ನಮ್ಮೂರೇ ಸಾಟಿ. ಹಸಿರು, ಕಾಡು, ಮರಗಳು..ಗದ್ದೆ..ಮಳೆ ಬರುವುದೇ ತಡ ನಮ್ಮಜ್ಜ ಹೊಲ ಉಳೋಕೆ ರೆಡಿ. ಆವಾಗ ನಮ್ಮನೆಯಲ್ಲಿ ಎತ್ತುಗಳು, ಕೋಣಗಳಿದ್ದವು. ಅವುಗಳನ್ನು ಕಂಬಳಕ್ಕೂ ಕರೆದುಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲ, ಊರ ಹೊಳೆಯಲ್ಲಿ ಯಾರ್ಯಾರ ತೋಡದ ತೆಂಗಿನ ಮರಗಳಿಂದ ಗಾಳಿಗೆ ಬಿದ್ದ ತೆಂಗಿನ ಕಾಯಿಗಳನ್ನು ಹಿಡಿಯಾಕೆ ಹೋಗುತ್ತಿದ್ದೇವು. ನಮ್ಮಜ್ಜ, ಪಕ್ಕದ್ಮನೆಯವರೆಲ್ಲ ಸೇರಿ ರಾತ್ರಿ ಮೀನು ಹಿಡಿಯಾಕೂ ಹೋಗುತ್ತಿದ್ದುಂಟು. ಮತ್ತೆ ಮಳೆಗಾಲ ಬಂದ್ರೆ ಸಾಕು. ದಿನಾ ಚಳಿಗೆ ತಿನ್ನಕ್ಕೆ ಏನಾದ್ರೂ ಅಮ್ಮ ಮಾಡಿ ಕೊಡುವರು. ಹಲಸಿನ ಬೀಜ, ಹುಣಸೆಬೀಜ, ಹಪ್ಪಳ..ಎಲ್ಲವೂ ಮಳೆಗಾಲಕ್ಕಂತಾನೇ ಮಾಡಿ ಇಡುತ್ತಿದ್ದರು ಅಮ್ಮ.
ನಮ್ಮ ಬಾವಿಯೆಲ್ಲ ಪೂರ್ತಿ ತುಂಬಿದಾಗ ನಮಗೆ ರಾಟೆಯಲ್ಲಿ ನೀರು ಎಳೆಯುವ ಕೆಲಸವಿಲ್ಲ..ಅದಂತೂ ಭಾರೀ ಖುಷಿ ನಮಗೆ. ನಮ್ಮ ಅಮ್ಮನಂತೂ ಮಳೆ ಬಂದ್ರೆ ಸಾಕು ಹಾರೆ, ಗುದ್ದಲಿ ಹಿಡಿದು ಕೆಲಸಕ್ಕೆ ರೆಡಿ. ದಿನವಿಡೀ ತೋಟದಲ್ಲಿ ಏನಾದ್ರೂ ಮಾಡ್ತಾನೇ ಇರ್ತಾರೆ. ಅವ್ರ ಜೊತೆ ನಾವುನೂ..ನಮಗೆ ಆಗ ಅಮ್ಮನೇ ಮಾಡಿದ 'ಮೂಡೆ' ಮಾಡಿ ಕೊಡುತ್ತಿದ್ದರು. ಮೂಡೆ ಅಂದ್ರೆ ಮಳೆಗಾಲದಲ್ಲಿ ಛತ್ರಿ ಬದಲು ಅಡಿಕೆ ಹಾಳೆಯಲ್ಲಿ ಮಾಡಿದ ಮೂಡೆ ಉಪಯೋಗಿಸುವುದು..ಅದು ಛತ್ರಿ ತರಾನೇ ಇರುತ್ತೆ. ಅದನ್ನು ಹಿಡಿದರೆ ನಾವು ಸ್ವಲ್ಪನೂ ನೆನೆಯುವುದಿಲ್ಲ. ಆವಾಗ ನಡೆದ ತಮಾಷೆ ಒಂದು ಹೇಳ್ತೀನಿ ಕೇಳಿ: ನನ್ನ ತಮ್ಮನಿಗೆ ಅಮ್ಮ ಯಾವಾಗಲೂ ಹುಡುಗಿ ತರ ಡ್ರೆಸ್ ಮಾಡೋದು. ಆತ ಪೆಟ್ಟಿಕೋಟ್, ನನಗೆ ತಂದ ಹಾಗೇ ಅವನಿಗೆ ಲಂಗ-ಧಾವಣಿ ತರುತ್ತಿದ್ದರು. ಯಾಕಂದ್ರೆ ಅವನಿಗೆ ನನ್ನ ಡ್ರೆಸ್ ಗಿಂತ ಸ್ವಲ್ಪ ಚೇಂಜ್ ಇದ್ರೆ...ನನ್ನ ಡ್ರೆಸ್ ಬೇಕೆಂದು ಅಳುತ್ತಿದ್ದ. ಹಾಗೇ ಒಂದು ದಿನ ಜೋರು ಮಳೆಯಲ್ಲಿ ನಾವಿಬ್ಬರೂ ಮೂಡೆ ಹಿಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನ ಜೊತೆ ಇದ್ದೇವು. ಆಗ ನಮ್ಮೂರ ಪಕ್ಕದೂರಿನ ಬೆಳ್ಯಪ್ಪಣ್ಣ ಬಂದು ಅಮ್ಮನಿಗೆ 'ಗೊತ್ತೇ ಇಜ್ಜಿಯೇ ಅಕ್ಕ. ಈರೆಗ್ 2 ಜನಲಾ ಪೊಣ್ಣು ಜೋಕುಲೆನಾ? ಅಮರ್ ಜೋಕುಲಾ ಎಂಚ?(ಗೊತ್ತೇ ಇರಲಿಲ್ಲ ಅಕ್ಕ,.ನಿಮಗೆ ಇಬ್ಬರೂ ಹೆಣ್ಣುಮಕ್ಖಳಾ? ಅವಳಿಗಳಾ?) ಅಂದಿದ್ದರು. ಈ ಮಳೆಗಾಲ, ಅಮ್ಮನ ಜೊತೆ ಮೂಡೆ ಹೊತ್ತು ಹೋಗುತ್ತಿದ್ದ ದಿನಗಳೆಲ್ಲಾ ತುಂಬಾ ಖುಷಿ ಕೊಡುತ್ತಿದ್ದವು. ಈವಾಗ ಮಳೆ ಬಂದ್ರೆ ಸಾಕು ಏನೋ ಒಂಟಿತನ, ಮನೆ, ಅಮ್ಮನ ನೆನಪಾಗುತ್ತೆ. ಮಳೆಗಾಲದಲ್ಲಿ ನಮ್ಮೂರ ಹಳ್ಳಿಯಲ್ಲಿ, ಗದ್ದೆಯಲ್ಲಿ, ತೋಟದಲ್ಲೇ ಇದ್ದುಬಿಡೋಣ ಅನಿಸಿಬಿಡುತ್ತೆ.
ಆದರೆ ಬೆಂಗಳೂರು?ಮಳೆ ಬಂದ್ರೆ ರಸ್ತೆ ಕಾಣಿಸಲ್ಲ..ಬರೇ ಕಟ್ಟಡಗಳು..ಬರೇ ವಾಹನಗಳು..ಅಬ್ಬಬ್ಬಾ! ಹಸಿರೆಲ್ಲಿ ಕಾಣಿಸಿತು? ಹಸಿರು ಕಾಣಬೇಕಾದರೆ..ಲಾಲ್ ಬಾಗ್, ಕಬ್ಬನ್ ಪಾರ್ಕ್ ಗೆ ಹೋಗಬೇಕು. ಮಳೆ ಬಂದ್ರೆ ಸಾಕು, ರಸ್ತೆ ಬದಿಯಲ್ಲಿ ಕೇಬಲ್ ನವರು ತೆಗೆದ ಹೊಂಡಗಳು, ಬಿಬಿಎಂಪಿನವರು ವರ್ಷವಿಡೀ ಕಾಮಗಾರಿ ನಡೆಸುವ 'ಚರಂಡಿ ಹೊಂಡಗಳು' ಅವುಗಳೆಲ್ಲಾ ತುಂಬಿಕೊಂಡು..ಆ ಕೊಳಚೆ ನೀರು ರಸ್ತೆಗೆ ಹರಿದು..ಅಲ್ಲೇ ಜನರು ನಡೆದುಹೋಗಬೇಕು. ಅಬ್ಬಾ! ಮಳೆ ಬಂದ್ರೆ ಸಾಕು ಹೊರಗಡೆ ಹೋಗೋದೇ ಬೇಡ ಅನಿಸುವಷ್ಟು ಹಿಂಸೆಯೆನಿಸುತ್ತೆ. ಬೆಂಗಳೂರಿನಲ್ಲಿ ಕುಳಿತು ಮಳೇನೇ ಬೇಡಪ್ಪಾ ಅನ್ನೋರು ಹಳ್ಳಿಗಳಿಗೆ ಹೋಗಿ ಮಳೆ ಬರಲೀ ಎನ್ನುತ್ತೇವೆ. ನಮ್ಮೂರ ಹಳ್ಳಿಯಾಗೆ ಮಳೆ ಬಂದ್ರೆ ಎಷ್ಟು ಖುಷಿ ಆಗುತ್ತೆ ಅಲ್ವಾ?
ಫೋಟೋ: ಎನ್.ಕೆ.ಎಸ್.

