Wednesday, April 29, 2009

ಇಂದಲ್ಲ ನಾಳೆ ಹೊಸ ಭಾನು ತೆರೆದೀತು...!

ಅಂದು ಅಮ್ಮ ಬೆಳ್ಳಂಬೆಳಿಗ್ಗೆ ಬೈದುಬಿಟ್ರು. ಹೆತ್ತ ಮಗಳು ಬೆಂಗಳೂರಿನಲ್ಲಿ ದುಡಿಯಾಕೆ ಶುರುಮಾಡಿ ವರ್ಷಗಳು ಸರಿದ್ರೂ ಕಿವಿಯಲ್ಲಿ ಮಿನುಗೋ ಓಲೆಗಳಿಲ್ಲ ಅಂತ ಅಮ್ಮನ ಹುಸಿಮುನಿಸು. ಹ್ಞಾಂ..ಮೊನ್ನೆ ಮೊನ್ನೆ ನನ್ನ ಆತ್ಮೀಯ ಗೆಳೆಯನೊಬ್ಬ 'ಎಂಥ ಮಾರಾಯ್ತಿ..ನಾ ಹುಟ್ಟಿ 25 ವರ್ಷ ಆಯಿತು, ಕೆಲಸಕ್ಕೆ ಸೇರಿ ಎರಡು ವರ್ಷ ಆಯಿತು. ನನಗಾಗಿ ಮಣ್ಣಂಗಟ್ಟಿಯೂ ಮಾಡಿಟ್ಟಿಲ್ಲ. ಅಮ್ಮಂಗೇನೂ ಕೊಡಿಲ್ಲ ಚಿತ್ರಾ' ಅಂತ ಗಳಗಳನೆ ಅತ್ತು ವಾರವಿಡೀ ಅದನ್ನೇ ಯೋಚಿಸಿ ತಲೆಕೆಡಿಸಿಕೊಂಡಿದ್ದ. ಭಾವಗೀತೆಗಳ ಜೊತೆ ಮಾತನಾಡುವ ಆತನಿಗೆ ಭಾವಗೀತೆಗಳೂ ಮುದ ನೀಡಲಿಲ್ಲ. ತಲೆತುಂಬಾ ಆಕಾಶ ತಲೆಮೇಲೆ ಬಿದ್ದಂಗೆ ಚಡಪಸುತ್ತಿದ್ದ. ಬರೋ ಕ್ಷಣಗಳನ್ನು ಪ್ರೀತಿಯಿಂದ ಸ್ವಾಗತಿಸದೆ, ಇರೋ ಪುಟ್ಟ ಖುಷಿಯ ಕ್ಷಣವನ್ನು ಕಳೆದುಕೊಳ್ಳೋದಕ್ಕೆ ಇದೊಂದು ಪುಟ್ಟ ಉದಾಹರಣೆ ಅಲ್ವೇ? ಇಂಥ ಸಾವಿರಾರು ತುಣುಕುಗಳು ಒಂದರ ಮೇಲೊಂದರಂತೆ ನನ್ನ ಮನದ ಪರದೆ ಮೇಲೆ ಹಾದುಹೋಗುತ್ತಲೇ ಇರುತ್ತವೆ.

ಪ್ರೀತಿಸಿದ ಹುಡುಗ/ಹುಡುಗಿ ಕೈ ಕೊಟ್ಟು ಹೋದಾಗ ಕೊರಗಿ ಕೊರಗಿ ಕಣ್ಣೀರಾಗ್ತೀವಿ. ಜೀವನದ ಜಂಜಾಟಗಳಲ್ಲಿ ಬಳಲಿ ಬೆಂಡಾಗಿ ಕತ್ತಲ ಕೂಪದಲ್ಲೇ ಮಲಗಿಬಡ್ತೀವಿ. ಹೆತ್ತು-ಹೊತ್ತು ಬೆಳೆಸಿದ ಅಪ್ಪ-ಅಮ್ಮ ನಮಗಾಗಿ ಕಷ್ಟದ ಕೋಡಿಯಲ್ಲೇ ಕೈ ತೊಳೆಯುವಾಗ ನಾ ಬದುಕಿದ್ದು ಪ್ರಯೋಜನ ವಿಲ್ಲಾಂತ ನಿರಾಶಾರಾಗ್ತೀವಿ. ಜೀವನ ಪರ್ಯಂತ ಜೊತೆಗಿರ್ತೀನಿ..ನಿನ್ನ ನೋವು-ನಲಿವಿನಲ್ಲೂ ನನ್ನ ಕಣ್ಣು ಪಾಲು ಪಡೆಯುತ್ತೆ ಎಂದ ಚಡ್ಡಿ ದೋಸ್ತ ದೂರಾದಾಗ ನಾ ನಿನ್ನ ಬಿಟ್ಟು ಹೇಗಿರಲಿ? ಎನ್ನುತ್ತಾ ಕೊರಗಿ ಕೊರಗಿ ಸುಣ್ಣವಾಗ್ತೀವಿ. ಒಂಟಿತನವನ್ನು ನೆನೆನೆನೆದು ದಿಂಬು ಒದ್ದೆಯಾಗಿಸ್ತೀವಿ.

ಪರೀಕ್ಷೆಯಲ್ಲಿ ಫೇಲ್ ಆದಾಗ..ಇದೇ ನನ್ನ ಜೀವನದ ಕೊನೆಯ ಮೆಟ್ಟಿಲು ಎಂದುಕೊಳ್ತೀವಿ. ಪುಟ್ಟ ತಪ್ಪಿಗಾಗಿ ಬಾಸ್ ಬೈದಾಗ ಆ ಕುರಿತು ರಾತ್ರಿಯಿಡೀ ತಲೆಕೆಡಿಸಿಕೊಂಡು ತಲೆ ಹಾಳು ಮಾಡಿಕೊಳ್ತೀವಿ. ತಂಗಿ-ಅಕ್ಕಂದಿರ ಮದುವೆ ಆಗಿರದಿದ್ರೆ ಛೇ! ನನ್ನ ಜವಾಬ್ದಾರೀನ ನಿರ್ವಹಿಸಿಲ್ಲ ಅಂದುಕೊಂಡು ನಮ್ಮೊಳಗೇ ದುಃಖಿಸ್ತೀವಿ. ಬೆಂಗಳೂರಿಗೆ ಕಾಲಿಟ್ಟು ವರ್ಷ ಸರಿದರೂ ನಯಾಪೈಸೆ ಸಂಪಾದಿಸಿಲಲ್ಲ, ನಮ್ಮ ಗೆಳೆಯ ಓಡಾಡೋ ಹಾಗೇ ಕಾರಲ್ಲಿ ಓಡಾಡೋ ಕನಸು ಕೈಗೂಡಿಲ್ಲ ಎನ್ನುತ್ತಾ ನಮ್ಮ ಬಗ್ಗೆನೇ ಜಿಗುಪ್ಸೆ ನಮಗೆ.

ಪುಟ್ ಪಾತ್ ನಲ್ಲಿ ಕಂಕುಳಲ್ಲಿ ಮಗುವನ್ನಿಟ್ಟುಕೊಂಡು ಚಿಲ್ಲರೆ ಹಣಕ್ಕಾಗಿ ಕೈಯೊಡ್ಡಿ ನಿಲ್ಲುವ ಕನಸುಗಳೇ ಬತ್ತಿ ಹೋದ ಕಂಗಳ ಹೆಣ್ಣನ್ನು ಕಂಡಾಗ, ಸಿಗ್ನಲ್ ಆನ್ ಆದ್ರೂ ವೇಗದಿಂದ ಚಲಿಸುವ ವಾಹನಗಳ ಮಧ್ಯೆ ಅಡ್ಡಾದಿಡ್ಡಿಯಾಗಿ ಓಡುವ ಹುಚ್ಚನನ್ನು ಕಂಡಾಗ, ಬೀದಿ ಬದಿಯಲ್ಲಿ ಅಪಘಾತ ಆದ್ರೂ ತಿರುಗಿ ನೋಡದೆ ಹೋಗೋರನ್ನು ಕಂಡಾಗ, ಅಯ್ಯೋ ಇದೇನಪ್ಪಾ ಬದುಕು..ಬೆಂಗಲೂರೇ ಬೇಡ ಅನ್ನುವಷ್ಟು ಮನಸ್ಸು ಮುದುಡಿಬಿಡುತ್ತೆ. ಹೀಗೇ ಪುಟ್ಟ ಕ್ಷಣಗಳನ್ನು ಕಳೆದುಕೊಂಡು ನಿರಾಶೆಯ ನಿಶೆಯನ್ನು ಅಪ್ಪಿಕೊಂಡು ಜೀವನವಿಡೀ ನಾ ಉದ್ದಾರವಾಗೊಲ್ಲ ಅಂದುಕೊಂಡುಬಿಡ್ತೀವಿ.

ಹೌದು, ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ತಲೆ ಹಾಕದೆ ಅಂತೇಳಿ ಯೋಚಿಸುತ್ತಿರುವಾಗಲೇ ನನಗೆ ಈ ವಿಷ್ಯ ಸಿಕ್ಕಿಬಿಡ್ತು. ಇದ್ದ ಕ್ಷಣವನ್ನು ಅನುಭವಿಸದೆ, ಇಲ್ಲದಕ್ಕೆ ಕೊರಗೋದನ್ನು ಬಹುಶಃ ನಾನೂ ಹಾಗೇ ಮಾಡ್ತಾ ಇರ್ತೀನಿ. ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ಕ್ಷಣದಲ್ಲಿ ನಿರಾಶೆಯ ಭಾವ ಹತ್ತಿಬಿಡುತ್ತೆ. ಆಂಗ್ಲ ಕವಿ ಡಗ್ನಸ್ ಮಲೋಕ್ ಮಾತು ಎಲ್ಲೋ ಓದಿದ್ದು ನೆನಪಾಗುತ್ತಿದೆ: ಬೆಟ್ಟದ ಮೇಲಿನ ದೇವದಾರು ಮರವಾಗಬೇಕಿಲ್ಲ, ಬೆಟ್ಟದ ತಪ್ಪಲಿನ ಸುಂದರವಾದ ಪೊದೆಯಾದರೂ ಬೆಳೆದಿದ್ದು ಸಾರ್ಥಕ. ಪೊದೆಯಾಗದಿದ್ದರೂ ಹುಲ್ಲಿನ ಗಿಡವಾಗು, ಬೆಳೆದ ದಾರಿಯಲ್ಲಿ ಅಲಂಕರವಾಗಬಹುದು" ಎಷ್ಟೊಂದು ಅರ್ಥಪೂರ್ಣವಾದ ಮಾತಲ್ವೇ?
ನಾಳಿನ ಕುರಿತಾಗಿ ಇಂದೇ ಕೊರಗಿ ಕೊರಗಿ ಸಾವಾಗುವ ಬಹಳಷ್ಟು 'ಬದುಕನ್ನು' ಕಂಡಾಗ ಯಾಕೋ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನ ನೆನಪಾಗುತ್ತಿದೆ.

ಅದೇ ..........
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ..
ಇಂದಲ್ಲ ನಾಳೆ ಹೊಸ ಭಾನು ತೆರೆದೀತು...
ಕರಗೀತು ಮುಗಿಲಾ ಬಳಗಾ..
ತುಂಬೀತು ಸೊಗೆಯ ಮಳೆ
ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗಾ...!!

Thursday, April 2, 2009

ಬೆಳಗು ಹಣತೆಯ ಮುಂದೆ ನಾ ಹಾಡಿದಾಗ...

ಆವಾಗ ನನ್ನ ಪ್ರೀತಿಯ ಉಜಿರೆ ಬಿಸಿಎಂ ಹಾಸ್ಟೇಲ್ ನಲ್ಲಿದ್ದೆ. ಪಿಯುಸಿನಿಂದ ಡಿಗ್ರಿ ಮುಗಿಯುವ ತನಕ ಐದು ವರ್ಷಗಳ ಕಾಲ ಈ ಹಾಸ್ಟೇಲ್ ನನ್ನ ಮನೆಯಾಗಿತ್ತು. ಅಮ್ಮನಂತೆ ಪ್ರೀತಿಯಿಂದ ಪೋಷಿಸಿತ್ತು. ಈವಾಗಲೂ ಊರಿಗೆ ಹೋದರೆ ಆ ಹಾಸ್ಟೇಲ್, ಎದುರಿರುವ ಹೂವಿನ ಗಿಡಗಳು, ಅಡುಗೆ ಆಂಟಿಯವರು, ನಾನು ಓದೋಕೆ ಕೂರುತ್ತಿದ್ದ ಗಾಳಿ ಮರದ ಗಿಡಗಳು, ನಾವು ಗೇರು ಕದಿಯುತ್ತಿದ್ದ ಭಟ್ರ ಗೇರು ಬೀಜ ಮರ, ಈಗ ಅಪರಿಚತರೇ ತುಂಬಿರುವ ರೂ.ನಂ. 4, ನಾನು ದಿನದ ಎರಡು ಹೊತ್ತು ದೇವರ ನಾಮಗಳನ್ನು ಹಾಡುತ್ತಿದ್ದ ಆ ಸುಂದರ ಪ್ರಾರ್ಥನಾ ಮಂದಿರ....ಎಲ್ಲವನ್ನೂ ಒಂದು ಬಾರಿ ಕಣ್ತುಂಬಿಸಿಕೊಳ್ಳೋಕೆ ಉಜಿರೆ ತನಕ ಹೋಗಿಬರುತ್ತೇನೆ. ಹಾಸ್ಟೇಲ್ ಪಕ್ಕದಲ್ಲೇ ಇರುವ ಹಸಿರು ತೋಟಗಳ ನಡುವೆ ನಿಂತ ರತ್ನಮಾನಸ, ಇನ್ನೊಂದೆಡೆ ಸಂಜೆ ಹೊತ್ತು ಮನಸ್ಸು, ಹೃದಯಕ್ಕೆ ತಂಪು ನೀಡುವ ಗಡಾಯಿ ಕಲ್ಲು...ಎಷ್ಟು ಚೆನ್ನಾಗಿತ್ತು.
ಹೌದು..ನಾನು ಈಗ ಹೇಳಹೊರಟಿರುವುದು ನಮ್ಮ ಪ್ರಾರ್ಥನಾ ಮಂದಿರದ ಕುರಿತು, ನಾವು ಹಾಡೋ ಭಜನೆಗಳ ಕುರಿತು. ಸುಮಾರು 100 ಜನರನ್ನು ತುಂಬಿಕೊಳ್ಳುವ ಪುಟ್ಟ ಕೋಟೆಯದು. ಬೆಳಿಗ್ಗೆ ಮತ್ತು ಸಂಜೆ ಆರೂವರೆಗೆ ಪ್ರಾರ್ಥನೆ ಮಾಡುವ ಸಮಯ. ಬೆಳಿಗ್ಗೆ ಶಿವಸ್ತುತಿ ಹಾಡಿದರೆ, ಸಂಜೆಯ ಹೊತ್ತು ಕೋಣೆ ತುಂಬಾ ದೇವರ ಹಾಡುಗಳ ಘಮಘಮ. ಅದರಲ್ಲೂ ಸಂಜೆ ಹೊತ್ತಿನ ಭಜನೆ ಒಂದು ಥರ ಮನಸ್ಸಿಗೆ ತುಂಬಾ ಖುಷಿಕೊಡುತ್ತಿತ್ತು. ಪ್ರತಿಯೊಬ್ಬರೂ ಆರೂವರೆಗೆ ಪ್ರಾರ್ಥನಾ ಕೋಣೆಯಲ್ಲಿ ಸೇರುತ್ತಿದ್ದೇವು. ಒಬ್ಬರೂ ತಪ್ಪಿಸುವಂತಿರಲ್ಲಿಲ್ಲ. ಆರೂ ಗಂಟೆ ಆದಾಗಲೇ ಬಾತ್ ರೂಮ್ ನಲ್ಲಿದ್ದವರು, ಸುತ್ತಮುತ್ತ ಮರ, ಪೊದೆಗಳ ನಡುವೆ ಓದೋಕೆ ಕುಳಿತವರು, ಪಟ್ಟಾಂಗಗಕ್ಕೆ ಕುಳಿತವರು ಎಲ್ಲಾರೂ ಪ್ರಾರ್ಥನೆಗೆ ಹಾಜರಾಗಲೇಬೇಕು.

ಗಜಮುಖನೆ..ಗಣಪತಿಯೇ..ನಿನಗೆ ವಂದನೆ...

ಇದು ಮೊದಲ ಹಾಡು....ಆಮೇಲೆ ಮೂರೂ ಹಾಡುಗಳನ್ನು ಹಾಡೋ ಸರದಿ ನನ್ನದು. ನಂಗೆ ಭಜನೆಗಳಂದ್ರೆ ತುಂಬಾನೇ ಇಷ್ಟ. ರಾಗ, ಲಯ ಎಂಥದ್ದೂ ಗೊತ್ತಿಲ್ಲಾಂದ್ರೂ ಕೈಯಲ್ಲೊಂದು ತಾಳ ಹಿಡಿದುಕೊಂಡು ಹಾಡಕೆ ಕುಳಿತರೆ ಎಷ್ಟು ಹಾಡಿದ್ರೂ ಸಾಕೆನಿಸುತ್ತಿರಲಿಲ್ಲ. ಅದರಲ್ಲೂ ಹಾಸ್ಟೇಲ್ ಹುಡುಗಿಯರಿಗೆ ನಾನು ಹಾಡೋದಂದ್ರೆ ಭಾರೀ ಇಷ್ಟ. ಈ ಹಾಡು ಹಾಡಿ..ಅಂಥ ಅವರೇ ಸೂಚಿಸಿದ ಮೇಲೆ ನಾನು ಹಾಡುತ್ತಿದ್ದೆ. ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ, ಬಾಲಕೃಷ್ಣನೇ ಬಾರೋ, ಬಂದಾನೋ ಗೋವಿಂದ..ಚಂದದಿ ಆನಂದ, ಎಲ್ಲಿ ಹೋದ ನಮ್ಮ ಕೃಷ್ಣ ಎಲ್ಲಿ ಅಡಗಿದ...ಮುಂತಾದ ಕೃಷ್ಣನ ಕುರಿತಾದ ಗೀತೆಗಳನ್ನೇ ಹೆಚ್ಚಾಗಿ ಹಾಡುತ್ತಿದ್ದೆ. ಅದಕ್ಕೆ ಹಾಸ್ಟೇಲಿನಲ್ಲಿ ನನ್ನನ್ನು 'ರಾಧೆ' ಎಂದೇ ಕರೆಯುತ್ತಿದ್ದುದು ವಿಶೇಷ. ಒಂದೊಂದು ಬಾರಿ ಕರೆಂಟ್ ಹೋದ್ರೆ..ಸಮಯದ ಅರಿವೇ ಇಲ್ಲ..ಬೆಳಗುವ ಹಣತೆಯ ಸುಂದರ ಬೆಳಕಿನಲ್ಲಿ ಒಂದೆರಡು ಗಂಟೆ ಹಾಡಿದ್ರೂ ಸುಸ್ತಾಗುತ್ತಿರಲಿಲ್ಲ. ನನಗೆ ಸಂಗೀತದ ಬಗ್ಗೆ ಏನೂ ಗೊತ್ತಿಲ್ಲ..ಆದರೂ ಹಾಡೋದಂದ್ರೆ ತುಂಬಾ ಇಷ್ಟ. ಒಂದು ಸಲ ನಾವು ಖುಷಿಯಿಂದ ಹಾಡಿದರೆ ಮನಸ್ಸಿನ ಹಗುರಾಗುತ್ತಿತ್ತು. ಮನಸ್ಸು ಏನೋ ಒಂಥರ ಖುಷಿಯಿಂದ ನಲಿಯುತ್ತಿತ್ತು. ಈವಾಗ ಹಾಸ್ಟೇಲಿಗೆ ಹೋಗಿ ತಂಗಿದ್ರೂ ನಾನು ಭಜನೆಗಳನ್ನು ಹಾಡುತ್ತೇನೆ..ಅದೇ ಹಳೆಯ ಹಾಡು..ಅದೇ ಕೋಣೆ..ಅದೇ ಗಣಪತಿ ಫೊಟೋ..ಕೇಳೋ ಕಿವಿಗಳು ಬೇರೆ ಮಾತ್ರ. ನಾನು ಮತ್ತೆ ಮರಳಿ..ಅದೇ ಹಳೆಯ ಚಿತ್ರ ಆಗುತ್ತೇನೆ. ಮನಸ್ಸು ತುಂಬಾ ಖುಷಿಯಾಗುತ್ತೆ.

ಆದರೆ ಬೆಂಗಳೂರಿನಲ್ಲಿ....

ಮನಸ್ಸಿದ್ದರೆ ಮಾರ್ಗ ಅಂತಾರೆ...ಆದರೂ ಇದನ್ನು ಮುಂದುವರಿಸಲು ಸಾಧ್ಯವಾಗಲೇ ಇಲ್ಲ. ನಿತ್ಯ ಕೆಲಸ. ಬೆಳಿಗ್ಗೆ ಆರು ಗಂಟೆಗೆ ಎದ್ದು ಮನೆಗೆಲಸ ಮುಗಿಸಿ, ದೇವರಿಗೆ ದೀಪ ಹಚ್ಚಿ ಆಫಿಸಿಗೆ ಹೊರಡೋವಷ್ಟರಲ್ಲಿ ಸಮಯ ಮೀರಿರುತ್ತೆ. ಮತ್ತೆ ಸಂಜೆ, ಸಮಯದ ಮಿತಿಯಿಲ್ಲ..ನಮ್ ಕೆಲಸ ಮುಗಿದಾಗ ಮನೆಗೆ ಹೋಗಬೇಕು. ನಡುವೆ ಟ್ರಾಫಿಕ್, ಒಂದಷ್ಟು ಧೂಳು, ಆಫೀಸ್ ಕೆಲಸದ ತಲೆಹರಟೆಗಳು..ಇದನ್ನೆಲ್ಲಾ ಹೊತ್ತುಕೊಂಡು ಮನೆಗೆ ಹೋಗಬೇಕಾದರೆ ಎಂಟು ಗಂಟೆ ಮೀರಿರುತ್ತೆ. ಹೊಟ್ಟೆ ಮಾತನಾಡುತ್ತಿರುತ್ತೆ. ಮತ್ತೆ ಅಡುಗೆ ಆಗಬೇಕು. ಬಟ್ಟೆ ಬದಲಾಯಿಸೋದು ಆಮೇಲೆ..ಮೊದಲು ಅಡುಗೆ. ಆಮೇಲೆ ಊಟ..ಕಣ್ಣಲ್ಲಿ ನಿದ್ದೆ. ನಾಳಿನ ಚಿಂತೆ...ಮತ್ತೆಲ್ಲಿಂದ ಭಜನೆ, ದೇವರ ಚಿಂತೆ?

ನಿನ್ನೆ ಕೋರಮಂಗಲದ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ದೇವಸ್ಥಾನವೊಂದರಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಹಳೇ ದೇವರ ನಾಮಗಳನ್ನು ತಂಡವೊಂದು ಹಾಡುತ್ತಿತ್ತು. ಒಂದಷ್ಟು ಹೊತ್ತು ಕೇಳಿ ಮನೆ ಕಡೆ ಸಾಗಿದವಳಿಗೆ ನೆನಪಾಗಿದ್ದು ನನ್ನ ಪ್ರೀತಿಯ ಹಾಸ್ಟೇಲಿನಲ್ಲಿ ನಾನಾಡುತ್ತಿದ್ದ ಭಜನೆಗಳು. ಇಲ್ಲಿ ಭಜನೆ ಹಾಡಕೆ ನನಗೆ ಸಮಯವಿಲ್ಲದಿದ್ದರೂ ಸುಂದರ ಭಾವಗೀತೆಗಳನ್ನು ನಿತ್ಯಕೇಳುತ್ತಾ ಮನಸ್ಸು ಖುಷಿಪಡುತ್ತೆ. ಈ ಖುಷಿಯನ್ನು ಮುಂದಿನ ಸಲ ಹಂಚಿಕೊಳ್ಳುತ್ತೇನೆ.

Friday, March 20, 2009

ಇದೊಂದು ಸಿಹಿ ಸುದ್ದಿ.....

ನಮ್ ಛಾಯಾಕನ್ನಡಿ ಬ್ಲಾಗ್ ನ ಶಿವಣ್ಣ ಮತ್ತು ಕ್ಯಾಮಾರ ಕಣ್ಣಿನಲ್ಲಿ ಬ್ಲಾಗ್ ನ ಮಲ್ಲಿಕಾರ್ಜುನ ಅವರ ಫೋಟೋಗ್ರಾಫಿ ಬಗ್ಗೆ ನಾ ಹೇಳೋದು ಅಗತ್ಯವಿಲ್ಲ. ಎಲ್ಲಿ ನೋಡಿದ್ರೂ ಬೆನ್ನಲ್ಲಿ ಕ್ಯಾಮರಾ ನೇತುಹಾಕೊಂಡು, ಮಾತಿಗಿಳಿದರೆ ಬರೇ ಫೋಟೋಗ್ರಾಫಿಯ ಬಗ್ಗೆ ಹರಟೆ ಹೊಡೆಯುವ ಈ ಗೆಳೆಯರಿಗೆ ಇದೀಗ ಮತ್ತೊಂದು ಅಂತರ್ ರಾಷ್ಟ್ರೀಯ ಮನ್ನಣೆ! ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ.
ಈವರೆಗೆ ರಾಯಲ್ ಫೋಟೋಗ್ರಫಿ ಸೊಸೈಟಿಯ ಈ ಗೌರವಕ್ಕೆ ೧೩೨ ಭಾರತೀಯರು ಪಾತ್ರರಾಗಿದ್ದಾರೆ. ಈ ವರ್ಷ ವಿಶ್ವದಾದ್ಯಂತ ಈ ಮನ್ನಣೆ ೨೯ ಜನ ಛಾಯಾಗ್ರಾಹಕರಿಗೆ ಸಿಕ್ಕಿದೆ. ಅದರಲ್ಲಿ ಭಾರತೀಯರು ಇವರಿಬ್ಬರು ಮಾತ್ರ ಎನ್ನುವುದು ಖುಷಿಯ, ಹೆಮ್ಮೆಯ ವಿಚಾರ. ಮೇರಾ ಭಾರತ್ ಮಹಾನ್! ಅಭಿನಂದನೆಗಳು..ಎಲ್ಲಾ ಬ್ಲಾಗಿಗರ ಪರವಾಗಿ ಪ್ರೀತಿಯ ಅಭಿನಂದನೆಗಳು.
ಹೆಚ್ಚಿನ ಮಾಹಿತಿಗೆ: http://avadhi.wordpress.com

Saturday, March 7, 2009

'ಮೈ ಆಟೋಗ್ರಾಫ್' ಪುಟಗಳಿಂದ...

ನನ್ನೆದೆಯ ಮಾತು ಇದೆ..
ಅಮ್ಮ ಕಲಿಸಿದ ಹಾಡು ಇದೆ
ಆ ಹಾಡಿನ ತೋಟದಲಿ
ನೀವು ಬೆಳೆಸಿದ ಹೂವು ಇದೆ...
ಈ ಹೃದಯ ಬಯಸುವುದು ಪ್ರೀತಿಸುವ ಹೃದಯವನ್ನು..! ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದುಬಿಟ್ಟು ನನ್ನ ಪ್ರೀತಿಗೆ 'ಕಾಲೇಜಿಗೆ' ಸುಂದರವಾದ ಪುಸ್ತಕವನ್ನು ನೀಡಿದ್ದೆ...ಅದು 'ಮೈ ಆಟೋಗ್ರಾಫ್'! ಅಮ್ಮನೊಂದಿಗೆ ಮುನಿಸಿಕೊಂಡು ಮನಸ್ಸು ಭಾರವಾದಗ, ಕಾಲೇಜಿನ ಹಳೇ ನೆನಪುಗಳು ನನ್ನ ಕಾಡಿದಾಗ, ಮನೆಯಲ್ಲಿ ಅಣ್ಣ-ತಮ್ಮ ನ ಜೊತೆ ರಚ್ಚೆ ಹಿಡಿದು ಬೈಸಿಕೊಂಡು ಮೌನಕ್ಕೆ ಶರಣಾದಾಗ, ಪವರ್ ಕಟ್ ಆಗಿ ಮನೆಯೊಳಗೆ ಕ್ಯಾಂಡಲ್ ಉರಿಸಿ ಕುಳಿತಿದ್ದಂತೆ ನನ್ನ ಸುತ್ತುಹಾಕುವ ನೆನಪುಗಳ ಜೊತೆ ಮಾತಿಗಿಳಿದಾಗ, ಏಕಾಂತದಲ್ಲಿ ಭಾವನೆಗಳು ನನ್ನ ಮುತ್ತಿಕ್ಕಿದ್ದಾಗ..ನಾನು ಕೈಗೆತ್ತಿಕೊಳ್ಳುವುದು 'ಮೈ ಆಟೋಗ್ರಾಫ್'..!! ಹರಿದು ಚಿಂದಿ ಚಿತ್ರಣ್ಣವಾಗಿರುವ ಆ ನೆನಪಿನ ಹೊತ್ತಗೆಯ ಪುಟಗಳನ್ನು ಮತ್ತೆ ಜೋಡಿಸುತ್ತಾ...ನೋಡ್ತೀನಿ. ಅದೇ 'ಮೈ ಆಟೋಗ್ರಾಫ್'!

ಕನಸ ಕಸುವೂ ಬೇಕು
ಯಶದ ಹಾದಿಯ ಹೆಜ್ಜೆಗೆ
ಬಯಕೆ ಬಯಲು ಎರಡೂ ಬೇಕು
ಸಾಧನೆಯ ಕಾಲ್ಗೆಜ್ಜೆಗೆ...

ನನ್ನ ತುಂಬಾ ಪ್ರೀತಿಸಿದ, ಇಂದಿಗೂ ನನ್ನೆಲ್ಲಾ ಕನಸುಗಳಿಗೆ ಜೀವ ತುಂಬುತ್ತಾ ಬರುವ ಪ್ರೀತಿಯ ಮೇಡಂ ಶುಭದಾಸ್ ಮರವಂತೆ ಬರೆದ ನಾಲ್ಕು ಸಾಲುಗಳು ನನ್ನ ಹೊತ್ತಗೆಯ ಮೊದಲ ಪುಟದಲ್ಲೇ ಸ್ವಾಗತಿಸುತ್ತವೆ. ನನ್ನ ಮುದ್ದಾದ ಅಕ್ಷರಗಳನ್ನು ಕಂಡು ಹೆಮ್ಮೆಪಡುತ್ತಿದ್ದ ನಾಗಣ್ಣ ಸರ್, ನಿತ್ಯ ವಿಧೇಯತೆಯ ಪಾಠ ಹೇಳುತ್ತಾ ಬೆನ್ನುತಟ್ಟುತ್ತಿದ್ದ ಸಂಪತ್ ಸರ್...ಹಿತನುಡಿಗಳು.
'ಸವಿನೆನಪುಗಳು ಸಾವಿರವಿದ್ದರೂ, ಮನದೊಳಗೆ ನಿನಗೊಂದು ಮನೆಯಿದೆ ಗೆಳತೀ..'ಎಂದು ಸವಿಸವಿ ಮಾತುಗಳನ್ನು ಗೀಚಿದ ಸ್ನೇಹಿತರು, ನಿತ್ಯ ಅಕ್ಕಾ ..ಅಕ್ಕಾ..ಎಂದು ಹಿಂಬಾಲಿಸುತ್ತಿದ್ದ ನನ್ನ ತಮ್ಮ-ತಂಗಿಯರ ಎಂಥೆಂಥ ಸವಿನುಡಿಗಳು..ಪ್ರೀತಿಯ ಜೊತೆಜೊತೆಗೆ.
20 ಪುಟಗಳನ್ನು ಮೊದಲೇ ಮೀಸಲು ಎಂದು ಬರೆದಿಟ್ಟ ಆ ನನ್ನ ಗೆಳತಿ ಕವಿತಾ, ಹಾಸ್ಟೇಲಿನಿಂದ ಗಂಟುಮೂಟೆ ಕಟ್ಟಿಕೊಂಡು ಹೊರಡೋ ಮುಂಚಿನ ದಿನ..ಕರೆಂಟಿಲ್ಲದೆ ಕ್ಯಾಂಡಲ್ ಬೆಳಕಿನಡಿಯಲ್ಲಿಯೇ ಪುಟತುಂಬಿಸಿದ್ದಳು. ಆದರೆ ಮದುವೆಯ ಬಳಿಕ ಫೋನು ಮಾಡದಿದ್ದರೂ..ಮೊನ್ನೆ ಮೊನ್ನೆ ಅವಳಿಗೆ ಹೆಣ್ಣು ಮಗುವಾದಾಗ ಅವಳ ಗಂಡನೇ ಫೋನು ಮಾಡಿ ಖುಷಿಸುದ್ದಿ ತಿಳಿಸಿಬಿಟ್ಟರು. 'ಇಷ್ಟವಾಗದನ್ನು ಕಷ್ಟದಿಂದಲೇ ಸಹಿಸಿ, ಕಷ್ಟವೇ ಇಷ್ಟವೆಂಬಂತೆ ಬದುಕುವ ಕಲೆ ಹೇಗೆ ಕಲಿತೆ, ನನಗೂ ಕಲಿಸಿಕೊಡು ಅಕ್ಕಾ' ಎಂದು ನಾಲ್ಕು ಪುಟ ಭಾವದನಿಗಳನ್ನು ಬಿಚ್ಚಿಟ್ಟ ನನ್ನ ಪ್ರೀತಿಯ ತಮ್ಮ ಪಚ್ಚು...ಈಗಲೂ ಮೈಸೂರಿನಿಂದ ಫೋನು ಮಾಡಿ ಸಂತೋಷಗೊಳಿಸುತ್ತಾನೆ. ಕಾಲೇಜು ಕ್ಯಾಂಪಸ್ ನಲ್ಲಿ ನಿತ್ಯ ಹೊಡೆದಾಡುತ್ತಿದ್ದ ಪ್ರೀತಿಯಿಂದ ದಿನಾ ಕಿವಿಹಿಂಡುತ್ತಿದ್ದ ನನ್ನ ತುಂಬಾ ಪ್ರೀತಿಸುವ ಮುದ್ದು ತಮ್ಮ ಸಂದೇಶ ಈಗಲೂ ನನ್ನ ಮಡಿಲಲ್ಲೇ ಇದ್ದಾನೆ ಅನ್ನೋ ಬೆಟ್ಟದಷ್ಟು ಖುಷಿ ನನಗೆ.
ದಿನಾ ಮಧ್ಯಾಹ್ನದ ಕ್ಲಾಸಿನಲ್ಲಿ ಅಕ್ಕರೆಯಿಂದ ಚಾಕಲೇಟು ನೀಡುತ್ತಿದ್ದ, ಜಗಳವಾಡುತ್ತಿದ್ದ ಗೆಳೆಯ ಸುದರ್ಶನ್ ಬೆಂಗಳೂರಿನಲ್ಲೇ ಇದ್ದರೂ ಫೋನು ಕರೆಗೂ ಬರ..ಫೋನ್ ಮಾಡಿದರೂ ರಿಸೀವ್ ಮಾಡಲಾಗದಷ್ಟು ಬ್ಯುಸಿಯಾಗಿದ್ದಾನೆ. "ಬದುಕು ಇರುವುದು ಬಾಳುವುದಕ್ಕಾಗಿ...ಬಾಳು ಇರುವುದು ಬೆಳೆಯುವುದಕ್ಕಾಗಿ" ಎಂದು ಸುಂದರ ಬದುಕಿಗೆ ಶುಭಹಾರೈಸುತ್ತಾ ನೆನಪಿನ ಹೊತ್ತಗೆಯಲ್ಲಿ ಚಂದದ ಅಕ್ಷರಗಳಿಂದ ಬರೆದಿಟ್ಟ ನಿತ್ಯ ಅಪರೂಪಕ್ಕೊಮ್ಮೆ ನಗುತ್ತಿದ್ದ ಪ್ರೀತಿಯ ಗೆಳೆಯ ವೃಷಭ್ ಈಗಲೂ ಪುರುಸೋತ್ತಿನಿಂದ ಸವಿದನಿಗಳಿಗೆ ಕಿವಿಯಾಗುತ್ತಾನೆ. "ಹುಡುಗಿಯರು ಕೊರಳಿಗೆ ಹಾಕುತ್ತಾರೆ ಮಣಿಸರ...
ಆದ್ರೆ ಹುಡುಗರು ಡೈಲಿ ಹಾಕುತ್ತಾರೆ 'ಗಂಗಸರ'..
ಚಿತ್ರಾ ನಿನ್ನ ಬಿಟ್ಟಿರುವ ಕಿಂಚಿತ್ತೂ ತಾಕತ್ತು ನಂಗಿಲ್ಲ" ಎಂದು ಪೋಲಿ ಜೋಕುಗಳನ್ನು ತೇಲಿಬಿಟ್ಟ ಗೆಳೆಯ ರೋಹನ್, ಈಗ ಎಲ್ಲಿದ್ದಾನೋ ದೇವರೇ ಬಲ್ಲ. ದಿನಾ ನನಗೆ ಕೀಟಲೆ ಮಾಡು ಗುದ್ದು ತಿನ್ನುತ್ತಿದ್ದ ತರಗತಿಯ ಲಂಭು ಸಂತೋಷ ಇತ್ತೀಚೆಗೆ 'ನಿನ್ನ ಯಾವ ಹುಡುಗನೂ ಎತ್ತಹಾಕ್ಕೊಂಡು ಹೋಗಿಲ್ವಾ?' ಅಂತ ನಕ್ಕುನಗಿಸಿದ್ದ.
ಹಾಸ್ಟೇಲಿನಲ್ಲಿ ನಿತ್ಯ ನನ್ನ ಕೀಟಲೆ, ಪೋಲಿ ಜೋಕುಗಳಿಗೆ ಸಾಥ್ ನೀಡುತ್ತಿದ್ದ ಗೆಳತಿ ಚಿತ್ರಕಲಾ ಮರೆಯದೆ ಇತ್ತೀಚೆಗೆ ಮದುವೆಗೆ ಕರೆದಿದ್ದಳು. 'ತಾಳಿ ಕಟ್ಟುವ ಶುಭವೇಳೆ...ಬರಲಿ ಎನಗೊಂದು ಪ್ರೀತಿಯ ಕರೆಯೋಲೆ' ಎಂದು ಗೀಚಿಟ್ಟ ಗೆಳತಿ ಗೀತಾನಿಗೆ ಮದುವೆಯಾಗಿದೆಯೋ ಗೊತ್ತೇ ಇಲ್ಲ. ನನ್ನ ಬರವಣಿಗೆಗಳಿಗೆ ದಿನಾ ಬೆನ್ನುತಟ್ಟುತ್ತಿದ್ದ, 'ಭವಿಷ್ಯದಲ್ಲಿ ನಿನ್ನ ನಾ ಬರಹಗಾರ್ತಿಯಾಗಿ ನೋಡಬೇಕು 'ಎಂದು ಶುಭಹಾರೈಸಿದ ಮೂರನೇ ಬೆಂಚಿನ ಗೆಳತಿ ರಜನಿ,..ವಿಳಾಸ ಬರೆಯುವುದನ್ನು ಮರೆತುಬಿಟ್ಟಿದ್ದು ಮನಸ್ಸಿಗೆ ತುಂಬಾ ನೋವಾಗುತ್ತೆ. 'ಚಿತ್ರಾ ನಿನ್ನ ಹೇಗೆ ನಾ ಬಿಟ್ಟಿರಲೀ?' ಎಂದು ಅತ್ತು ವಿದಾಯ ಹೇಳಿದ ಗೆಳತಿ ಶ್ರುತಿ ಈಗ ಇಲ್ಲೇ ದಾರಿ ನಡುವೆ ಸಿಕ್ಕರೂ ಮತನಾಡಿಸಲೂ ಅವಳಿಗೆ ಪುರುಸೋತ್ತಿಲ್ಲ. ಹಾಸ್ಟೇಲಿನಲ್ಲಿ ನನ್ನ ಬೆಡ್ ಶೀಟ್ ಒಳಗಡೆ ಹುದುಗಿ ಮಲಗುತ್ತಿದ್ದ ನನ್ನ ಮುದ್ದು ತಂಗಿ ಪ್ರತಿಮಾನಿಗೆ ಈಗಲೂ ಫೋನ್ ಮಾಡಿ ಮಾತನಾಡದಿದ್ದರೆ ನಿದ್ದೆನೇ ಬರಲ್ಲ...ಇದು 'ಮೈ ಆಟೋಗ್ರಾಫ್'!
ಅಬ್ಬಾ..! ಇಷ್ಟು ನೆನಪುಗಳು ಗರಿಗರಿಯಾಗಿ ಬಿಚ್ಚಿ..ಬರೆದು ಮುಗಿಸಿದಾಗ ನಿನ್ನೆ ರಾತ್ರಿ ೧೨ ಗಂಟೆ. 'ಭಾವಸಂಗಮ' ದ ಹಾಡುಗಳು ಒಂದು ರೌಂಡು ಮುಗಿದು ..ಎರಡನೇ ರೌಂಡು ಶುರುವಾಗಿತ್ತು. ತಮ್ಮ ಸಂದೇಶ 'ಅಕ್ಕಾ, ಮಲಗು..ನಾಳೆ ಚಪಾತಿ-ಪಲ್ಯ ಮಾಡಬೇಕು..ಬೇಗ ಏಳಬೇಕು' ಅಂತ ಪದೇ ಪದೇ ಅಲಾರಂ ಥರ ತಡಬಡಿಸುತ್ತಿದ್ದ. ಅವನ ಮೇಲೆ ಪ್ರೀತಿಯಿಂದ ರೇಗುತ್ತಲೇ ನಿದ್ದೆಗೆ ಜಾರಿದೆ.
ಫೋಟೋ; ವ್ವ್ವ. flickr.com

Wednesday, March 4, 2009

ಸಾಗರದಾಚೆಯ ಅಣ್ಣನಿಗೆ....

ಲೇ ಅಣ್ಣಾ..
ನಾನು-ನೀನು ಕಣ್ಣ ಮುಚ್ಚೆ ಆಡಲಿಲ್ಲ, ಗಾಡೇ ಗೂಡೇ ಅನ್ನಲಿಲ್ಲ. ಬಣ್ಣದ ಗಾಳಿಪಟ ಹಾರಿಸೇ ಇಲ್ಲ. ಜೊತೆ-ಜೊತೆಯಾಗಿ ವಾಕಿಂಗ್ ಹೋಗೇ ಇಲ್ಲ. ಇಬ್ಬನಿ ಹನಿಬಿಂದು ನೋಡಿ ಖುಷಿಪಟ್ಟಿ;ಲ್ಲ. ಎಸ್ಎಂಎಸ್ ಗಳ ಹರಟೆ ಮಾಡೇ ಇಲ್ಲ. ಸಂಜೆ ಹೊತ್ತಿನಲ್ಲಿ ತಿಳಿಬಾನಲ್ಲಿ ಹಾರಾಡೋ ಪಾರಿವಾಳ ನೋಡಿ ನಕ್ಕುನಲಿಯಲೇ ಇಲ್ಲ. ಆದ್ರೂ ನಿನ್ನ ಕಂಡರೆ ನಂಗೆ ಅಕ್ಕರೆ, ಪ್ರೀತಿ, ಅಭಿಮಾನ, ಗೌರವ. ನಿನ್ನನ್ನು ಅಣ್ಣಾ ಅಂತ ಕೂಗೋದು ಏನೋ ಮನಸ್ಸಿಗೆ ಹಿತ, ಖುಷಿ. ನಿಂಗೂ ಅಷ್ಟೇ ನಾನಂದ್ರೆ ಇಷ್ಟ ಆಲ್ವಾ?

ನೀನು ನನ್ನ ತಂಗೀ ಅಂತ ಕೂಗುವಾಗ ನಾನೂ ಖುಷಿಗೊಳ್ಳುತ್ತೇನೆ. ನಂಗೂ ಒಬ್ಬ ಅಣ್ಣ ಸಿಕ್ಕಿದ್ದಾನೆ ಅಂತ ಹಿರಿಹಿರಿ ಹಿಗ್ಗುತ್ತೇನೆ. ನಿನ್ನ ಪ್ರೀತಿಯಲ್ಲೇ ತೊಯ್ದು ಬಿಡುತ್ತೇನೆ. ಆ ಖುಷಿಯಲ್ಲಿ ನಿನ್ನ ನಾ ತುಂಬಾ ಪ್ರೀತಿಸುವ ತಂಗೀ ಅಂತ ಜೋರು ಬೊಬ್ಬಿಡಬೇಕು ಅನಿಸುತ್ತೆ. ಆದರೆ, ಬೇಡ..ಪ್ರೀತಿನ ಹೇಳಿಕೊಳ್ಳಬಾರದು ಎಂದನಿಸಿ ಸುಮ್ಮನಾಗುತ್ತೇನೆ. ಮೌನವಾಗಿ ನಿನ್ನ ಪ್ರೀತಿನ ಸವಿಯುತ್ತಿದ್ದೇನೆ ಕಣಣ್ಣಾ. ನೀನು ಫೋನು ಮಾಡಿದಾಗ ..ಅದೂ ಮೊದಲ ಬಾರಿಗೆ ನೀ ಫೋನ್ ಮಾಡಿದಾಗ ಸ್ವರ್ಗಕ್ಕೆ ಮೂರೇ ಗೇಣು..ಅಷ್ಟು ಖುಷಿಗೊಂಡೆ ಗೊತ್ತಾ?! ಆ ಕ್ಷಣ ಅಮ್ಮನ ಮಡಿಲಲ್ಲಿ ಮುಖ ಹುದುಗಿಸಿ ಖುಷಿ ಪಟ್ಟಂತೆ ಆಯ್ತು. ನೀ ನನ್ನ ನೋಡಲೇ ಇಲ್ಲ ಅಲ್ವಾ..ನಾನೆಷ್ಟು ದೊಡ್ಡದಿದ್ದೀನಿ ಗೊತ್ತಾ?
ಅಣ್ಣಾ..ದಿನಾ ನೀ ಸಣ್ಣಗಾಗು ಅಂತೀನಿ. ಡುಮ್ಮಣ್ಣ ಅಂತ ರೇಗಿಸ್ತೀನಿ. ನೋಡು..ನೀ ಸಣ್ಣಗಾಗು ಸಣ್ಣಗಾಗು ಅನ್ನುತ್ತಲೇ ನಾ ದಪ್ಪ ಆಗಿಬಿಟ್ಟಿದ್ದೀನಿ. ಬಹುಶಃ ನೀ ಕಲಿಸಿದ ಅಡುಗೆ ಪರಿಣಾಮವೇ ಆಗಿರಬೇಕು. ಎಲ್ರೂ ನನ್ನ ಡುಮ್ಮಿ ಅಂದಾಗ ಅಣ್ಣನತ್ರ ದೂರು ಹೇಳ್ತೀನಿ ಅಂತ ಬೈತೀನಿ. ಅದಕ್ಕೆ ಭಾರತಕ್ಕೆ ಬೇಗ ಬಂದುಬಿಡಣ್ಣ. ಈಗಲೇ ನೀನು ನನ್ನೆದುರು ಬಂದು ಬಿಡು ಅಂತ ರಚ್ಚೆಹಿಡಿಯಬೇಕು ಅನಿಸುತ್ತೆ. ಆದರೆ, ನೀನಿದ್ದಲ್ಲಿಂದ ಇಲ್ಲಿ ಬರೋದು ಎಷ್ಟು ದೂರ ಅಲ್ವಾ? ಆದ್ರೂ ಬೇಗ ನನ್ನ ನೋಡಕ್ಕೆ ಬರ್ತಿಯಾ ಅಂದುಕೊಂಡಿದ್ದೀನಿ. ಬರದಿದ್ರೆ ನಿನ್ನ ಜೊತೆ ನಾ ಟೂ ಟೂ ಬಿಡ್ತೀನಿ ನೋಡು. ನೀ ಬಂದಾಗ ನಿನ್ನ ಕೈಯಿಂದ ನನ್ನ ಪ್ರೀತಿಯ ಕಪ್ಪು ಹ್ಯಾಟ್ ತೆಗೆಸಿಕೊಳ್ಳಬೇಕು. ಚಾಕಲೇಟು ಗಿಟ್ಟಿಸಿಕೊಳ್ಳಬೇಕು. ಫೋಟೋ ತೆಗೆಸಿಕೊಳ್ಳಬೇಕು. ನಿನ್ನ ಜೊತೆ ವಾಕಿಂಗ್ ಹೋಗಬೇಕು. ನೀ ಕಲಿಸಿದ ಅಡುಗೆ ಗಳನ್ನು ನಿನ್ನೆದುರಲ್ಲೇ ಮಾಡಿತೋರಿಸಬೇಕು. ನಿನ್ನ ಬಾಯಿಂದ ಆಗಾಗ 'ಟ್ಯೂಬ್ ಲೈಟ್' ಅಂತ ಕರೆಸಿಕೊಳ್ಳಬೇಕು. ನಿನ್ನ ಜೊತೆ ಲಗೋರಿಯಾಟ ಆಡಬೇಕು. ನನ್ನ ಡುಮ್ಮಿ ಅಂತ ಕರೆದವರಿಗೆ ಎಲ್ಲಾ ನಿನ್ನ ಬಾಯಲ್ಲಿ ಬೈಸಬೇಕು. ಒಟ್ಟಿನಲ್ಲಿ ನಿನ್ನ ಜೊತೆಗೆ ನಾ ಖುಷಿಖುಷಿ ಕ್ಷಣಗಳನ್ನು ಕಳೆಬೇಕು..ನೀನು ನನ್ನ ಅಣ್ಣಂತ ಎಲ್ಲರೆದುರು ಹೇಳಿಕೋಬೇಕು. ಲೇ ಅಣ್ಣಾ..ಇನ್ನೂ ಹೇಳಕ್ಕಿದೆ..ಇವತ್ತಿಗೆ ಇಷ್ಟು ಸಾಕು. ನೀ ನಕ್ಕಾಗ, ನೀ ಅತ್ತಾಗ..ನಿನ್ನ ಜೊತೆ ನಾನಿರ್ತೀನಿ. ನನ್ನೆದುರೇ ನಕ್ಕುಬಿಡು..ಅಳಬೇಕಾಂದ್ರೂ ನನ್ನೆದುರೇ ಅತ್ತುಬಿಡು. ನಾ ನಿನಗೆ ಕಿವಿಯಾಗುತ್ತೇನೆ. ಮರೀಬೇಡ..ನಿನ್ನ ಹಿಂದೆ ನೆರಳಂತೆ ನಾನಿರ್ತೀನಿ...ನಿನ್ನ ತುಂಬಾ ಪ್ರೀತಿಸುವ ತಂಗಿಯಾಗಿ..! ನಿದ್ದೆ ಬರುತ್ತಿದೆ..ನಾ ಮಲಗ್ತೀನಿ..ಬೊಗಸೆ ತುಂಬಾ ಪ್ರೀತಿ ನಿನಗಾಗಿ ಇಟ್ಟಿದ್ದೀನಿ...ತಕೋತಿಯಲ್ಲಾ..!!
ಇಂತೀ,
ನಿನ್ನ
ಪೋಟೋ: ವ್ವ್ವ. flickr.com

Friday, February 27, 2009

ಥರಗುಟ್ಟುವ ಚಳಿಯಲ್ಲಿ ಆ ಬಾಲಕ ಬೂದಿಯಲ್ಲಿ ಮಲಗಿದ್ದ..!!

ಜ್ವರದಿಂದ ತಲೆಭಾರ, ನೆನಪುಗಳಿಂದ ಅದೇಕೋ ಮನಸ್ಸು ಭಾರ. ಆದರೆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಮನೆಯ ಟೆರೇಸ್ ಮೇಲೆ ಹೋಗಿ ನಿಂತರೆ, ಅದೇ ಖುಷಿ ನೀಡುವ ತಂಗಾಳಿ. ಗೂಡು ಸೇರುವ ಹಕ್ಕಿಗಳ ಕಲರವ. ಪುಟ್ಟ ಬಾಲಕನೊಬ್ಬ ತಾನು ಸಾಕಿದ ಪಾರಿವಾಳ ಜೊತೆ ಆಟವಾಡುತ್ತಿದ್ದ. ಕೆಳಗಡೆ ನೋಡಿದರೆ ರಾಶಿ ಮರಳ ಮೇಲೆ 'ಮರಳಾಗಿ' ಆಡುವ ಮಕ್ಕಳು, ಬ್ಯಾಟ್ ಹಿಡಿದು ಸಚಿನ್, ಗಂಗೂಲಿ ಕನಸು ಕಾಣುವ ಕಂದಮ್ಮಗಳು. ಇನ್ನೊಂದೆಡೆ ಇವೆಲ್ಲವನ್ನೂ ಅಕ್ಕರೆಯಿಂದ ನೋಡುತ್ತಾ ಅಚ್ಚರಿಪಡುವ 'ಚಿಂದಿ' ಪುಟಾಣಿಗಳು.

ಹೌದು, ಅಂದು ನನ್ನ ಹೃದಯ ಕಣ್ಣೀರಾದ ದಿನ. ಬದುಕಿನ ಇನ್ನೊಂದು ಮುಖವನ್ನು ನೋಡಿ ಬದುಕೆಂದರೆ ಹೀಗೂ ಇರುತ್ತಾ? ಎಂದು ಬೆರಗುಗಣ್ಣಿಂದ ಮಗುವಿನಂತೆ ಪಿಳಿಪಿಳಿ ನೋಡುತ್ತಾ ನಿಂತ ದಿನ, ಘಟನೆ ನೆನೆಸಿಕೊಂಡಾಗ ಈಗಲೂ ಮನ ಅಳುತ್ತೆ. ಅಸಹಾಯಕಳಾಗಿ ಮೌನವಾಗಿ ಮನ ರೋಧಿಸುತ್ತದೆ. ನವೆಂಬರ್ 3, 2006! ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಇರುವ ರೈಲುಮಾರ್ಗ..ಕಸ ಕಡ್ಡಿ, 'ಬೇಡ'ದೆಲ್ಲವನ್ನೂ ತನ್ನೊಳಗೆ ತುಂಬಿಸಿಕೊಳ್ಳುವ ಜಾಗ ಅದು. ಏಳೆಂಟು ವರ್ಷದ ಪುಟ್ಟ ಬಾಲಕ. ಕಣ್ಣಲ್ಲಿ ಮುಗಿಲು ಮುಟ್ಟುವ ಕನಸು ತುಂಬಿಕೊಂಡಿದ್ದ. ಹರಿದ ಬಟ್ಟೆ ಮೈಮೇಲೆ. ಮಲದ ಬದಿಯಲ್ಲಿದ್ದ ಇಡ್ಲಿ ತುಂಡನ್ನು ಹೆಕ್ಕಿ ತಿನ್ನುತ್ತಿದ್ದ!! ನನ್ನೆರಡೂ ಕಣ್ಣುಗಳು ಒಂದು ಕ್ಷಣ ಮುಚ್ಚಿಕೊಂಡಿದ್ದವು. ತೆರೆದು ನೋಡಿದಾಗ 'ಅಕ್ಕಾ..'ಎನ್ನುತ್ತಾ ನನ್ನೆದುರು ಕೈಚಾಚಿದ್ದ. ವಾಸ್ತವದ ಇನ್ನೊಂದು ಮುಖ. ಅಲ್ಲೇ ಇರುವ ಇರುವ ಶಾಂತಿಸಾಗರ ಹೊಟೇಲಿನಲ್ಲಿ ದೋಸೆ ಕೊಡಿಸಿದೆ. ಒಂದಲ್ಲ..ಎರಡಲ್ಲ..ಮೂರು ದೋಸೆಗಳನ್ನು ತಿಂದ!! ಪ್ರೀತಿಯಿಂದ ತನ್ನೆರಡೂ ಕಣ್ಣುಗಳನ್ನು ತೆರೆದು ನನ್ನತ್ತಾ ನೋಡುತ್ತಾ ನಿಂತ...ಯಾವುದೋ 'ಹೆಸರಿಡದ ಸಂಬಂಧಿಕನಂತೆ'!!

ಆಗಸ್ಟ್ 14. ಅಂದು ಜೀವನದ ಮೊದಲ ಬಾರಿಗೆ ನಾವು ಹಂಪಿಗೆ ಹೊರಟ ದಿನ. ಥರಗುಟ್ಟುವ ಚಳಿ. ಆಕಾಶದಲ್ಲಿ ಚಂದ್ರ, ನಕ್ಷತ್ರಗಳು ಕಾಣುತ್ತಿಲ್ಲ. ಮೋಡಗಳ ಮೇಲಾಟಗಳೂ ಗೋಚರಿಸುತ್ತಿಲ್ಲ. ಚಿತ್ರದುರ್ಗದಿಂದ ಮುಂದೆ ಸಾಗುತ್ತಿದ್ದಂತೆ ಗಣಿಲಾರಿಗಳ ಧೂಳು, ಆವೇಗ.!ವೇಗದಿಂದ ಎದುರಿಗೆ ಬರುತ್ತಿದ್ದ ಲಾರಿಗಳನ್ನು ನೋಡಿ ನಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದೆವು. ಚಳಿಗೆ ಮೈ ಬೆಚ್ಚಗಾಗಿಸುವಾಸೆ. ಅಲ್ಲೇ ಒಂದು ಟೀ ಅಂಗಡಿ. ಟೀ ಅಂಗಡಿ ಮಾಲೀಕ ಗೊರಕೆ ಹೊಡೆಯುತ್ತಿದ್ದರೆ, ಇತ್ತ ಒಬ್ಬ ಬಾಲಕ ನಿದ್ದೆಯ ಮಂಪರಿನಲ್ಲಿ ತೂಕಾಡಿಸುತ್ತಿಸಿದ್ದ. ಮತ್ತೊಮ್ಮೆ ಬಾಲಕ ..???! ಬೂದಿಯಲ್ಲಿ ಮಲಗಿದ್ದ. ನಾವು ಹೋದ ಕೂಡಲೇ ಮಾಲೀಕ ಆ 'ಬೂದಿ ಬಾಲಕ'ಕನನ್ನು ಎಬ್ಬಿಸಿದ..ಇಲ್ಲ, ಆತ ಏಳಲೇ ಇಲ್ಲ. ಅಲ್ಲೇ ಇದ್ದ ಕೋಲಿನಲ್ಲಿ ಹೊಡೆದೇಬಿಟ್ಟ..! ಎದ್ದ..'ಬೂದಿ ಬಾಲಕ'..ಕಂಣ್ಣೊರೆಸಿಕೊಂಡು!!..ಕಾಲೆಳೆಯುತ್ತಲೇ ಬಂದು..ಟೀ ತಂದುಕೊಟ್ಟ. ಟೀ ಕುಡಿಯುವ ಬದಲು..ಆ ಬಾಲಕನ ಕಣ್ಣುಗಳನ್ನೇ ನೋಡುತ್ತಿದ್ದೆ...ಅಲ್ಲಿ ಆಪ್ತತೆಯಿತ್ತು, ಪ್ರೀತಿಯಿತ್ತು..ಅಸಹಾಯಕತೆಯಿತ್ತು., ಸಾವಿರ ಕನಸುಗಳ ಆಶಾಗೋಪುರ ಇತ್ತು..ಆದರೆ 'ಬದುಕಿರಲ್ಲಿಲ್ಲ'!!!

ಮೊನ್ನೆ ಮೊನ್ನೆ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರಕ್ಕೆ ಆಸ್ಕರ್ ಬಂತು...ಅದಕ್ಕೆ ಸಿಕ್ಕ ಪ್ರಚಾರ, ಆಸ್ಕರ್, 'ಕೊಳಗೇರಿ' ಮಕ್ಕಳೂ ಆಚರಿಸಿದ ಆ ಸಂಭ್ರಮದ ಕ್ಷಣಗಳನ್ನು ಕಂಡಾಗ ಯಾಕೋ ಮೇಲಿನ ಘಟನೆಗಳು ನೆನಪಾದುವು. ಆಸ್ಕರ್ ಬಂದ ಖುಷಿಯ ಭರದಲ್ಲಿ ಸೋನಿಯಾ ಗಾಂಧಿ, 'ಈ ಚಿತ್ರ ನಮಗೆ ಸ್ಪೂರ್ತಿ' ಎಂದರೆ ,. ಮಹಾರಾಷ್ಟ್ರ ಸರ್ಕಾರ, ಸ್ಲಂ ಡಾಗ್ ನಲ್ಲಿ ಅಭಿನಯಿಸಿದ ಬಾಲಕಲಾವಿದರಿಗೆ ಫ್ಲಾಟ್ ಒದಗಿಸುವ ಭರವಸೆ ನೀಡಿದ್ದಾರೆ..ಥೇಟ್ 'ಶರದ್ ಪವಾರ್' ನಂತೆ!! ಆಸ್ಕರ್ ಬಂದಿರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ..ಆದರೆ, ಈ ಸ್ಲಂ, ಈ ಬದುಕು, ಚಿಂದಿ ಪುಟಾಟಿಗಳು, ಅವರ ಕನಸುಗಳು, ಕಕ್ಕುಲತೆ...ಜೀವ ಹಿಂಡುವ ಬದುಕು, ಸರ್ಕಾರ ನೀಡಿರುವ ಭರವಸೆಗಳು, ವಿಜಯೋತ್ಸವ....ಯಾಕೋ ನನ್ನೊಳಗೊಂದು 'ನೋವಿಗೆ' ಕಾರಣವಾಯಿತು. ಅದನ್ನೇ 'ಶರಧಿ' ಜೊತೆ ಹಂಚಿಕೊಂಡೆ.

Wednesday, February 25, 2009

ಕಣ್ಣೀರು ಒರೆಸುವ 'ಕೈಗಳು' ನೀನ್ಯಾಕೆ ಆಗುತ್ತಿಲ್ಲ..?! ಎಂದು ಕೇಳುತ್ತಿದ್ದೆ.

"ನೋಡು ಪುಟ್ಟಾ..ಆಕಾಶದಲ್ಲಿ ಚಂದ್ರ ಕಾಣ್ತಾನೆ. ರಾತ್ರಿಗೆ ಅವನೇ ದೇವರು. ಅವನು ದೊಡ್ಡ ದೇವರು. ಅವನ ಸುತ್ತ ಇರುವುದು ನಕ್ಷತ್ರಗಳು, ಅದು ಚಿಕ್ಕ ದೇವರುಗಳು. ದೇವ್ರು ನೋಡುತ್ತಿರುವಾಗ ಊಟ ಮಾಡಿದ್ರೆ ಒಳ್ಳೆದಂತೆ. ದೇವ್ರು ಕೇಳಿದ್ದೆಲ್ಲವನ್ನೂ ಕೊಡ್ತಾನೆ" ಎನ್ನುತ್ತಾ ಅಮ್ಮ ತಮ್ಮನ ಬಾಯಿಗೆ ಅನ್ನ ತುರುಕಿಸುತ್ತಿದ್ದುದು ಹಾಗೇ ನೆನಪಲ್ಲಿ ಉಳಿದಿದೆ. ಬೆಳಗಾದರೆ ಸೂರ್ಯನಿಗೆ ನಮಸ್ಕರಿಸಬೇಕು..ಅವನು ಹಗಲಿನ ದೇವ್ರು ಎನ್ನುತ್ತಿದ್ದಳು. ದೇವಸ್ಥಾನಗಳಿಗೆ ಹೋದರೆ..ಮೂರ್ತಿಗಳನ್ನು ತೋರಿಸಿ, "ಇವ್ರು ಮಾತನಾಡದ ದೇವ್ರು, ಕೈಮುಗಿಯಬೇಕು..ಒಳ್ಳೆದಾಗ್ಲಿ ಅಂತ ಕೇಳಬೇಕು" ಎನ್ನುವಳು. ದೇವರಿಗೆ ಕೈಮುಗಿಯುವ ಭರದಲ್ಲಿ ನಾವು ನೆಲಕ್ಕೆ ಹಾಸಿದ ಸಗಣಿ-ಮಣ್ಣು ಎಲ್ಲವನ್ನೂ ಮೊಣಕಾಲಿನಲ್ಲಿ ಮೆತ್ತಿಕೊಳ್ಳುತ್ತಿದ್ದೆವು. ಕಲ್ಲು. ಮರಗಳು, ಹಾವುಗಳು, ದನಕರುಗಳು..ಎಲ್ಲವೂ ಅಮ್ಮನೆಂಬ ದೇವರಿಗೆ 'ದೇವರು'ಗಳು! ಶಾಲೆಯಲ್ಲಿ ಓದಿಸುವ ಮೇಷ್ಟ್ರು ಜನಗಣತಿ ಸಮಯದಲ್ಲಿ ಮನೆಗೆ ಬಂದರೆ ಅವರೂ 'ಮಹಾದೇವರು'. ಮನೆಗೆ ಬಂದ ಮೇಷ್ಟ್ರಿಗೆ ಕೈಮುಗಿಯಿರಿ ಅನ್ನೋಳು ಅಮ್ಮ. ಮನೆಗೆ ಹಿರಿಯರು ಬಂದರೆ ಅವರ ಕಾಲಿಗೆ ಅಡ್ಡಬೀಳಕೆ ಹೇಳೋಲು ಅಮ್ಮ. ಹೀಗೇ ಸಣ್ಣವರಿರುವಾಗ ಅಮ್ಮ ನಮ್ಮ ತಲೆಯೊಳಗೆ 'ತುಂಬಾ ದೇವರು'ಗಳನ್ನು ತಲೆಯಲ್ಲಿ ತುಂಬಿಸಿಬಿಟ್ಟಿದ್ದಳು. ಇಷ್ಟೆಲ್ಲಾ ದೇವರುಗಳಲ್ಲಿ ದೇವಸ್ಥಾನದಲ್ಲಿರುವ ಮೂರ್ತಿ ದೇವರು ಯಾಕೆ ಕಣ್ಣಿಗೆ ಕಾಣಲ್ಲ ಅಂದರೆ? ದಿನಾ ದೇವರಿಗೆ ಪೂಜಿಸಿ..ಎನ್ನುತ್ತಾ ಕನಸಕದಾಸರ ಕಥೆ ಆರಂಭಿಸುತ್ತಾಳೆ ಪ್ರೀತಿಯ ಅಮ್ಮ. ಹಾಗೇ ಪುಟ್ಟ ವಯಸ್ಸಿನಿಂದಲೂ ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಬೇಕು ಎನ್ನುವ ಅಮ್ಮ ಪರಿಪಾಠ ಈಗಲೂ ಮುಂದುವರೆದಿದೆ. ನಿತ್ಯ ದೇವರಿಗೆ ದೀಪ ಹಚ್ಚುವಾಗಲೂ ಅಮ್ಮ ಹೇಳಿದ್ದೆಲ್ಲಾ ನೆನಪಾಗುತ್ತೆ.

ಮೊನ್ನೆ ಶಿವರಾತ್ರಿ ದಿನ ನಮ್ಮ ಛಾಯಾಕನ್ನಡಿ ಬ್ಲಾಗ್ ಶಿವಣ್ಣ ದೇವಸ್ಥಾನಕ್ಕೆ ಹೋಗಿ ಬಂದು ನಂಗೆ ಪೋನು ಮಾಡಿದ್ದರು. ನಾನು, "ನಂಗೆ ದೇವರ ಬಳಿ ಏನು ಕೇಳಿಕೊಂಡೆ ಅಣ್ಣ?" ಎಂದಿದ್ದಕ್ಕೆ, ಅವರು "ನೋಡು ಮರೀ, ದೇವರು ಫ್ರೆಂಡ್ ಥರ..ಅವನ ಜೊತೆ ಏನೂ ಕೇಳಬಾರದು" ಎಂದುಬಿಟ್ಟರು! ನನ್ನ ತಲೆಯಲ್ಲಿ ವಿಚಿತ್ರ ತಲೆಹರಟೆಗಳು ಹೊಳೆಯತೊದಗಿದವು.

ದೇವ್ರು ಫ್ರೆಂಡ್ ಆದ್ರೆ....! ನಿಜವಾಗಲೂ ದೇವ್ರು ಫ್ರೆಂಡ್ ಆದ್ರೆ...!! ನನ್ನೆದುರು ಕುಳಿತು, "ನಿನ್ನ ದುಃಖವನ್ನೆಲ್ಲ ನನಗೆ ಕೊಡು, ಎನ್ನುತ್ತಲೇ ದುಃಖವನ್ನು ಸಹಿಸುವ ಶಕ್ತಿ ನೀಡುವ ಒಳ್ಳೆಯ ಗೆಳೆಯ ದೇವ್ರು ಆಗಿರ್ತಾ ಇದ್ರೆ..ನಂಗೆ 'ಒಳ್ಳೆಯ ಫ್ರೆಂಡ್ ಕೊಡೋ' ಎಂದು ದೇವರೆದುರು ಹಣತೆ ಹಚ್ಚಿ, ಆ ಮಂದ ಬೆಳಕಿನಲ್ಲಿ ನಿಂತು ಪ್ರಾರ್ಥಿಸೋ ಅಗತ್ಯವಿತ್ತಾ?!!" ....ದೇವರು ಮಾತನಾಡುತ್ತಿದ್ದರೆ...?! ಹೀಗೇ ಯೋಚನೆಗಳ ಸರಮಾಲೆ......

ಕಷ್ಟಗಳು ಎದುರಾದಾಗ..ದೇವರೆದುರು ನಿಂತು ಏಕಾಂಗಿಯಾಗಿ ಕಷ್ಟ ತೋಡಿಕೊಳ್ಳುವಾಗ..ನಮ್ಮ ಫ್ರೆಂಡ್ ಆಗಿ ನಮ್ಮ 'ಕಣ್ಣೀರು ಒರೆಸುವ ಕೈಗಳು' ಆತನಾಗಿದ್ದರೆ..ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವಾ? ಪ್ರತಿಯೊಂದು ಹೃದಯ ನೊಂದಾಗ..ದುಃಖ ಅರಿತುಕೊಳ್ಳುವ, ನಮ್ಮೊಂದಿಗೆ ಮಾತನಾಡುವ 'ಫ್ರೆಂಡು' ಆಗಿದ್ದರೆ...ನೋವು-ನಲಿವಿನ ತಿಕ್ಕಾಟ, ಬದುಕಿನ ಜಂಜಾಟಗಳಿಗೆ ಬಲಿಯಾಗಿ..ಬದುಕನ್ನೇ ಕಳೆದುಕೊಳ್ಳುವ ಕ್ಷಣದಲ್ಲಿ ನಮ್ಮನ್ನು ಅಪ್ಪಿ ಸಮಾಧಾನಪಡಿಸುವ ಫ್ರೆಂಡು ದೇವರಾಗಿದ್ದರೆ..ಬದುಕುವ ಪ್ರತಿಯೊಬ್ಬರಿಗೂ ಜೀವನ ಸುಂದರ ಅನಿಸ್ತಾ ಇತ್ತು ಅಲ್ವಾ?
ಅದೇಕೆ 'ಒಳ್ಳೆಯ ಫ್ರೆಂಡು' ಪ್ರತಿಯೊಬ್ಬರಲ್ಲೂ 'ಜೀವನಪ್ರೀತಿ 'ಹುಟ್ಟಿಸಲ್ಲ..ಗುರಿಸಾಧಿಸುವ ಛಲವನ್ನೇಕೆ ಬೆಳೆಸಲಿಲ್ಲ?ನಂಗೂ ಒಂಟಿಯಾಗಿದ್ದಾಗ..ಜೊತೆಗಾರರು ಬೇಕನ್ನಿಸುತ್ತೆ.,.ನೀನ್ಯಾಕೆ ಅದೆಷ್ಟೋ ಮಂದಿಯ ಒಂಟಿತನ ನೀಗಿಸುವ ಜೊತೆಗಾರನಾಗುವುದಿಲ್ಲ...?!


"ನಮ್ಮೆಲ್ಲಾ ದೌರ್ಬಲ್ಯ, ನ್ಯೂನತೆಗಳೊಂದಿಗೆ ನಮ್ಮನ್ನು ಪ್ರೀತಿಸುವವರು, ಆದರಿಸುವವರು ನಿಜವಾದ ಸ್ನೇಹಿತರು ಆಗಿರುತ್ತಾರೆ" ಅಂತಾರೆ ದೊಡ್ಡವರು., ಆದರೆ ನಾವು ಏನೋ ಸಣ್ಣ ತಪ್ಪು ಮಾಡಿ..ಕ್ಷಮಿಸು ಎಂದು ನಿನ್ನ ಮುಂದೆ ಗೋಳಾಡಿದ್ರೂ ನೀನ್ಯಾನೆ ಮೌನವಾಗಿರ್ತಿಯಾ? ಕನಿಷ್ಠ ನಮ್ಮನ್ನು ಸಮಾಧಾನ ಮಾಡಲ್ಲ? 'ಹಿಡಿಪ್ರೀತಿ' ತೋರಿಸಲ್ಲಾ..? ನಾವು ನಂಬಿದ ಆದರ್ಶಗಳೇ..ಕೆಲವೊಮ್ಮೆ ನಮ್ಮನ್ನು ಕೊಲ್ಲುವಾಗ ಫ್ರೆಂಡು ಆದವನು ನೀನ್ಯಾಕೆ ಸುಮ್ಮನಿರ್ತಿಯಾ? ಪರಿವರ್ತನಶೀಲವಾದ ಬದುಕಿನ ಸನ್ನಿವೇಶಗಳಿಗೆ ಸ್ಪಂದಿಸಿ, ಕಾಲದ ಸವಾಲುಗಳಿಗೆ ಉತ್ತರ ನೀಡಲಾಗದೆ ತಡಕಾಡುವ ನಿನಗೆ ಏನೂ ಅನಿಸಲ್ವಾ? ಅದೆಷ್ಟೋ ಹಸಿದ ಹೊಟ್ಟೆಗೆ 'ಅನ್ನ' ಯಾಕೆ ಆಗುತ್ತಿಲ್ಲ? ಅಳುವ ಕಂಗಳಿಗೆ 'ಕರ್ಚಿಪ್ ' ಯಾಕೆ ಆಗುತ್ತಿಲ್ಲ? ನಮ್ಮೊಂದಿಗೆ ಒಡನಾಡುವ, ಮಾತನಾಡುವ ಮೌನವನ್ನೂ ಮಾತಾಗಿಸುವ, ಗೆಳೆಯ ನೀನ್ಯಾಕೆ ಆಗಲಿಲ್ಲ..ಹೇಳು ನೀನು ಫ್ರೆಂಡ್ ಆಗಿದ್ದರೆ...ಒಂದೇ ಒಂದು ಬಾರಿ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ನನ್ನ 'ಹೃದಯ'ವನ್ನು ಹಂಚಿಕೊಳ್ಳಕೆ ಅವಕಾಶ ಯಾಕೆ ಕೊಡುತ್ತಿಲ್ಲ..!!!! ಎಂದು ದೇವರು ಮಾತನಾಡ್ತಾ ಇರುತ್ತಿದ್ದರೆ ಕೇಳುತ್ತಿದ್ದೆ..!

'ಅಕ್ಕಾ..' ಎಂದು ಬಾಗಿಲು ಬಡಿಯೋ ಸದ್ದು. ತಮ್ಮ ಆಫೀಸ್ನಿಂದ ಬಂದಿದ್ದ. ನನ್ನ ತಲೆಹರಟೆ ಯೋಚನೆಗಳಿಗೆ 'ಕಡಿವಾಣ' ಹಾಕಿದ್ದ.!