Friday, December 28, 2007

ಮೆಜೆಸ್ಟಿಕ್ ನಲ್ಲಿ ಒಂದು ಸಂಜೆ..

ಸೂರ್ಯ ಅಸ್ತಂಗತನಾಗುವುದೇ ತಡ, ಇಲ್ಲಿ ಹುಡುಗೀರು ತುಂಬಾ ಕೇರ್ ಫುಲ್ ಆಗಿರಬೇಕು. ಮೈಯೆಲ್ಲಾ ಕಣ್ಣಾಗಿರಬೇಕು. ಹುಡುಗಿಯೊಬ್ಬಳು ಅಲ್ಲಿ ನಿಂತ್ರೆ..ಎಲ್ರೂ ಅವಳನ್ನೇ ನೋಡ್ತಾರೆ..ಒಂದಷ್ಟು ಹೊತ್ತು ಬೇಕಾದ್ರೆ ಪೀಡಿಸ್ತಾರೆ. ಅವಳಿಗೆ ನಾಲ್ಕು ಬಾರಿ ಪ್ರದಕ್ಷಿಣೆ ಹಾಕ್ತಾರೆ. ಇದೆಲ್ಲಿ ಅಂತ ಕೇಳಬೇಕಾಗಿಲ್ಲ, ಬಹುಶಃ ನಿಮಗೂ ತಿಳಿದಿರಬಹುದು. ಇದು ಸಿಲಿಕಾನ್ ಸಿಟಿಯ 'ಮೆಜೆಸ್ಟಿಕ್'. ಇಲ್ಲಿ ರಾತ್ರಿ ಹಗಲಿಗೂ ವ್ಯತ್ಯಾಸವಿಲ್ಲ. ದಿನದ ಇಪ್ಪತ್ಕಾಲ್ಕು ಗಂಟೆನೂ ಜನ ಸುತ್ತಾಡ್ತಾ ಇರ್ತಾರೆ. ವಿಶ್ವದ ಎಲ್ಲಾ ರೀತಿಯ, ಎಲ್ಲಾ ಸ್ವಭಾವದ ಜನರನ್ನೂ ಇಲ್ಲಿ ಕಾಣಬಹುದು.

ಮೊನ್ನೆ ಅಗತ್ಯ ಕೆಲಸದ ಮೇರೆಗೆ ಮೆಜೆಸ್ಟಿಕ್ ನತ್ತ ನಡೆದಿದ್ದೆ. ಕಾರಣ ಗೋಪಾಲಕೃಷ್ಠ ಕುಂಟಿನಿ ಸರ್ ಅವರು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದ ನಂತ್ರ ಅವರನ್ನು ಭೇಟಿ ಆಗಿರಲಿಲ್ಲ. ಹಾಗೆ ಮಾತಾಡಿಕೊಂಡು ಬರೋಣ ಅಂತ ಮೆಜೆಸ್ಟಿಕ್ ಕಡೆ ಹೋದೆ. ಆಫೀಸಿನಿಂದ ಅರ್ಧಗಂಟೆ ದಾರಿ ಟ್ರಾಪಿಕ್ ಜಾಮ್ ನಲ್ಲಿ ಸಿಕ್ಕಹಾಕೊಂಡು ಮೆಜೆಸ್ಟಿಕ್ ತಲುಪಲು ಒಂದೂವರೆ ಗಂಟೆ ಆಯಿತು. ನಾನು ಅಲ್ಲಿ ತಲುಪಿದಾಗ ಸರಿಯಾಗಿ ರಾತ್ರಿ 7.30. ಇನ್ನೇನೋ ಅರ್ಧಗಂಟೆಲಿ ಬರರ್ತೇನೆ ಅಂದ ಕುಂಟಿನಿ ಸರ್ ಬರುವಾಗ 9.30 ಆಯಿತು. ಕಾದೆ..ಒಂದೇ ಸ್ಥಳದಲ್ಲಿ ಕುಳಿತು ಕಾದೆ..ಕಾದೆ..ಒಂಬತ್ತೂವರೆ ತನಕ ಕಾದೆ.
ನನ್ನ ಪಕ್ಕದಲ್ಲಿ ಇನ್ನೊಬ್ಬಳು ಹುಡುಗಿ ಕಾಯ್ತ ಇದ್ಳು. ಜೀನ್ಸ್ ಧಾರಿ ಹುಡುಗಿ ಕಾಯುತ್ತಿದ್ದುದು ಅವಳ ಅಮ್ಮ ಹೈದರಾಬಾದ್ ನಿಂದ ಬರೋವರಿದ್ದರು. ನಾನು ಅವಳೂ ಕಾಯ್ತಾ ಕುಳಿತಿದ್ದಿವಿ. ನೋಡಲು ತುಂಬಾ ಸುಂದರವಾಗಿದ್ದಳು ಹುಡುಗಿ. ಸುತ್ತ ಓಡಾಡುವ ಪುಂಡ ಹುಡುಗರ ಕಣ್ಣು ಅವಳ ಮೇಲೆ ಬೀಳದೆ ಇರಲಿಲ್ಲ. ನಾನು ಅವಳೂ ಒಂದು ಕಡೆ ಕುಳಿತಿದ್ದೇವು. ನಾಲ್ಕು ಹುಡುಗರ ಗುಂಪೊಂದು ನಮ್ಮ ಸುತ್ತುವರಿಯಲು ಆರಂಭಿಸಿತ್ತು. ನಂಗೆ ಡೌಟು ಬಂತು. ಏನಾದ್ರೂ ಅವರು ತರ್ಲೆ ಮಾಡಿದ್ರೆ..ಬಿಡೋದು ಬೇಡ. ನಮ್ಮಿಂದಾಗೋದನ್ನು ಮಾಡೋಣ ಎಂದೂ ಅವಳೂ ರೆಡಿಯಾದಳು. ಆಗ ಗಂಟೆ 9.15. ಒಬ್ಬ ಹುಡುಗ ಹಿಂದಿನಿಂದ ಅವಳ ಕೂದಲು ಟಚ್ ಮಾಡಿದ್ದ. ಅಷ್ಟು ಮಾಡಿದ್ದೇ ತಡ..ಅವಳ ಕಾಲಲ್ಲಿದ್ದ ಚಪ್ಪಲಿ ತೆಗದು ಅವನ ಮುಖಕ್ಕೆ ಹೊಡೆದಿದ್ದಳು. ಅವನ ಜೊತೆಯಿದ್ದ ಇತರ ಹುಡುಗ್ರು ಅಷ್ಟೊತ್ತಿಗೆ ಮಾಯ. ನಮ್ಮ ಪಕ್ಕದಲ್ಲೇ ಇದ್ದ ನಾಲ್ಕು ಇತರ ಹುಡುಗ್ರು ಆತನಿಗೆ ಥಳಿಸಿದ್ದೇ ಥಳಿಸಿದ್ದು. ಆಮೇಲೆ ತಪ್ಪಿಸಿಕೊಂಡು ಓಡಿದ್ದ..ತಕ್ಷಣ ಅವಳ ಅಮ್ಮನೂ ಅಲ್ಲಿಗೆ ಬಂದ್ರು..ನಾನೇನು ಮತ್ತೆ 10 ನಿಮಿಷ್ ಬೇರೇಡೆ ಹೋಗಿ ಸರ್ ಅವರನ್ನು ಕಾದೆ. ಆ 10 ನಿಮಿಷವೂ ನಾನು ಪ್ರಾಣ ಕೈಯಲ್ಲಿ ಹಿಡಿದುಕೊಂಡು, ಮೈಯೆಲ್ಲ ಕಣ್ಣು ಮಾಡ್ಕೊಂಡು ಕಾದಿದ್ದೆ. 9.30ಗೆ ಕುಂಟಿನಿ ಬಂದ್ರು. ಅರ್ಧ ಗಂಟೆ ಅವಳ ಜೊತೆ ಮಾತಾಡಿ, ತುರಾತುರಿಯಿಂದ ಅವರು ತೆಗೆದುಕೊಟ್ಟ sprite ಹಿಡಿದುಕೊಂಡು ನನ್ ಬಸ್ಸು ಹತ್ತಿದೆ. ಬಸ್ಸು ಹತ್ತುವವರೆಗೂ ಅವರಳನ್ನು ಅಲ್ಲಿ ತನಕ ಬರಹೇಳಿದೆ. ಇಂಥ ಘಟನೆಗಳು ಪ್ರತಿದಿನ ಮೆಜೆಸ್ಟಿಕ್ ನಲ್ಲಿ ನಡೆಯುತ್ತವೆ. ಹುಡುಗೀರು ಒಬ್ಬೊಬ್ಬರು ಓಡಾಡಬೇಕಾದ್ರೆ ತುಂಬಾ ಜೋಪಾನವಾಗಿರಬೇಕು. ಇಷ್ಟೆಲ್ಲಾ ನಡೆಯುತ್ತಿದ್ರೂ ಮೆಜೆಸ್ಟಿಕ್ ನಲ್ಲಿ ಅಮಾವಾಸ್ಯೆಗೊಮ್ಮೆ-ಹುಣ್ಣಿಮೆಗೊಮ್ಮೆ ಸುತ್ತಾಡುವ ಪೋಲೀಸರು ಕಣ್ಣಾರೆ ಕಂಡ್ರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಉದಾಸೀನ ಮಾಡ್ತಾರೆ. ಮೆಜೆಸ್ಟಿಕ್ ನಲ್ಲಿ ಇದೆಲ್ಲಾ ಇದ್ದಿದ್ದೇ ಅನ್ತಾರೆ.

Wednesday, December 26, 2007

ಬಾಲ್ಯದಲ್ಲಿಯೇ ಭವಿಷ್ಯ ಕೊಲ್ಲುವ ಸಿನಿಮಾಗಳು

10th class 'A' section..ಇದೇನಪ್ಪಾ ಅಂದುಕೋಬೇಡಿ. 'ದಿಲ್ ಸತ್ಯ' ನಿರ್ದೇಶನದ ಹೊಸ ಫಿಲ್ಮ್ . ಶೂಟಿಂಗ್ ನಡೀತಿದೆ ಅಷ್ಟೇ. ಇದು ವಯಸ್ಕರು ನೋಡ್ಬೇಕೋ ಮಕ್ಕಳು ನೋಡ್ಬೇಕೋ ತಿಳೀತಾ ಇಲ್ಲ. ಕಾಲೇಜ್ ಹೀರೋ, ವಿದ್ತಾರ್ಥಿ, ಸ್ಟೂಡೆಂಟ್, ಮುಂತಾದ ಸಿನಿಮಾಗಳು ಬಂದತಾಯಿತು. ಚೆಲುವಿನ ಚಿತ್ತಾರದಲ್ಲಿ ಹೈಸ್ಕೂಲ್ ಹುಡುಗಿಯ ಲವ್ ಕತೆ ನೋಡಿಯಾಯಿತು. ಈಗ 10th class 'A' section ಲವ್ ಬಗ್ಗೆ ನೋಡಾಕೆ ಬಾಕಿಯಿದೆ. ಇದೂ ವಿದ್ಯಾರ್ಥಿಗಳ ಲವ್ ಅಂತೆ. 'A' section ಅನ್ನೋದ್ರಲ್ಲಿ ಏನು ವಿಶೇಷ ಇದೆ ಅಂತ ಗೊತ್ತಿಲ್ಲ. ಏನಾದ್ರೂ ವಿಶೇಷ ಇದ್ದೇ ಇರುತ್ತೆ. ಕಾದು ನೋಡಬೇಕು. ಹಿಂದೆ ಗಂಭೀರ ಸಿನಿಮಾಗಳೆಲ್ಲಾ ಬರ್ತಾ ಇದ್ದುವು. ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಸಿನಿಮಾಗಳು ಬಂದಂತಾಯಿತು. ಈಗ ಹೈಸ್ಕೂಲು ಕತೆ..ನೋ ನೋ ಲವ್ ಕತೆ. ಇನ್ನು ನೈಂತ್, ಸೆವೆಂತ್, ಫಿಪ್ತ್, ಥರ್ಢ್ ಕ್ಲಾಸ್ ಫಿಲ್ಮಗಳೂ ಬರಲಿವೆ.

ಈಗ ವಿಷಯಕ್ಕೆ ಬರ್ತೀನಿ ಕೇಳಿ. ಸಿನಿಮಾಗಳು, ಟಿ.ವಿ.ಯಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ ಎಂಬ ದೂರು ಈಗಲ್ಲ, ಬಹಳಷ್ಟು ಹಿಂದಿನಿಂದಲೇ ಕೇಳಿ ಬರ್ತಾ ಇದೆ. ಅದಕ್ಕಾಗಿ ಟಿ.ವಿ.ಗೆ ಮೂರ್ಖರ ಪೆಟ್ಟಿಗೆ ಅಂತ ಕರೆಯಲಾಯಿತು. ಹಾಗಂತ ನೋಡಿದವರೆಲ್ಲ ಮೂರ್ಖರಾಗಿಲ್ಲ. ಒಂದು ವೇಳೆ ಹಾಗೆ ಇರ್ತಾ ಇದ್ರೆ ಇಡೀ ಜಗತ್ತಿನ ಎಲ್ರೂ ಮೂರ್ಖರಾಗುತ್ತಿದ್ದರು. ಮೂರ್ಖರ ಜಗತ್ತೇ ಆಗುತ್ತಿತ್ತು. ಸಿನಿಮಾಗಳನ್ನು ನೋಡಿ ನೋಡಿ ನನ್ ಮಗ ಕೆಟ್ಟುಹೋದಪ್ಪಾ...ಅಂತ ಗೋಳಾಡುವ ಹೆತ್ತವರೂ ಇದ್ದಾರೆ. ಟಿ.ವಿ. ನೋಡಿ ನೋಡಿ ನನ್ ಮಗ ಕೆಟ್ಟೇ ಹೋದ..ಲವ್ ಮಾಡಕ್ಕೆ ಆರಂಭಿಸಿದ್ದ. ಏನ್ ಮಾಡೋದು ನಮ್ ಹಣೆಬರಹ..ಅಂತ ಹಣೆಬರಹವನ್ನು ದೂರುವವರೂ ಇದ್ದಾರೆ.

ಈಗ ಈ 10th class,.3rd class..ಮುಂತಾದ ಕ್ಲಾಸ್ವೈಸ್ ಸಿನಿಮಾಗಳನ್ನೂ ವಿದ್ಯಾರ್ಥಿಗಳು ನೋಡೇ ನೋಡ್ತಾರೆ. ಕೇವಲ ಕಾಲೇಜ್ ಮಕ್ಕಳು ಮಾತ್ರವಲ್ಲ..ಹೈಸ್ಕೂಲ್ ಮಕ್ಕಳೂ ನೋಡ್ತಾರೆ. ಏನೂ ತಿಳಿದಿಲ್ಲಂದ್ರೆ ಅದನ್ನು ನೋಡಿಯಾದ್ರೂ 'ಮರ ಸುತ್ತುವ ಲವ್' ಮಾಡೋಕೆ ಆರಂಭಿಸುತ್ತಾರೆ. ಆದ್ರೆ ಮಕ್ಕಳ ಬಗ್ಗೆ ಬಡ ಬಡ ಬಾಯಿ ಬಡಿದುಕೊಳ್ಳುವ ಕೆಲವು ಹೆತ್ತವರು ತಮ್ಮ ಮಕ್ಕಳನ್ನು ಫಿಲಂಗೆ ಹೋಗ್ಬೇಡ ಅನ್ತಾರ ಇಲ್ಲ, ಟಿವಿ ನೋಡ್ಬೇಡ ಅನ್ತಾರ ಇಲ್ಲ..ಯಾರಾದ್ರೂ ಬುದ್ದಿವಂತರು ಇಂಥ ಫಿಲಂಗಳು ವಿದ್ಯಾರ್ಥಿಯ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತೆ ಅಂಥ ವಿರೋಧಿಸ್ತರಾ ಇಲ್ಲ..ಆದ್ರೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ದ ಬಗ್ಗೆ ಸರ್ಕಾರ 'ಚ'ಕಾರ ವೆತ್ತಿದ್ರೆ ಸಾಕು..ಹನುಮಂತನ ಬಾಲದ ಥರ ಪುರಾತನ ಸಂಸ್ಕೃತಿ, ಆಚಾರ, ವಿಚಾರಗಳು ಎಲ್ಲಾ ಸಿದ್ಧಾಂತಗಳು ನಾಲಿಗೆ ಮೇಲೆ ನಲಿದಾಡುತ್ತೆ. ಆದ್ರೆ ಯಾವುದೋ ಥರ್ಢ್ ಕ್ಲಾಸ್ ಫಿಲಂ ಬಂದ್ರೆ ಅದನ್ನು ನಿಯತ್ತಿನಲ್ಲಿ ವಿರೋಧಿಸುವವರು ಎಷ್ಟು ಮಂದಿ ಇರ್ತಾರೆ ಹೇಳಿ? ಇರ್ತಾರೆ..ಹೇಗಿರ್ತಾರೆ..ನಾಳೆ ಇಂಥ ಟಾಕೀಸ್ ಮೇಲೆ ಮುತ್ತಿಗೆ..ಆ ಸಿನಿಮಾದ ಹಾಡು, ಸಂಭಾಷಣೆಯಲ್ಲಿ ಜಾತಿಗೆ ಅನ್ಯಾಯ, ಧರ್ಮಕ್ಕೆ ಅನ್ಯಾಯ ಹೀಗೆ ಅನ್ಯಾಯಗಳನ್ನು ಹೇಳಿ ಪತ್ರಿಕಾಗೋಷ್ಠಿ ಕರೆದು ಅಲ್ಲಿ ಅರ್ಧ ಗಂಟೆ ಕೊರೆದು, ಮರುದಿನ ಮುತ್ತಿಗೆ ಹಾಕಿ ಸುಮ್ಮನಿರ್ತಾರೆ. ಹಾಗಂತ 10th class 'A' section ಕೆಟ್ಟ ಫಿಲಂ ಎನ್ನುತ್ತಿಲ್ಲ. ಇನ್ನೂ ಅದ್ರ ಬಗ್ಗೆ ಹೇಳಕೆ ನೋಡಿಲ್ಲ..ಕೇಳಿಲ್ಲ. ಆದ್ರೆ 10ನೇ ಕ್ಲಾಸ್ ಹುಡುಗಿ ಲವ್ ಮಾಡ್ತಾಳೆ..ಪುಟ್ಟ ಹುಡುಗಿ ಹಿರೋಯಿನ್ ಎಲ್ಲ ಗೊತ್ತು. ನಾನಂದುಕೊಳ್ಳುವುದು ಅದಲ್ಲ, ಮಕ್ಕಳ ಮೇಲೆ ಪರಿಣಾಮ ಬೀಳುತ್ತೆ ಅನ್ನುವ ಕೆಲವು ಹೆತ್ತವರು ಯಾಕೆ ಇಂಥ ಸಿನಿಮಾಗಳನ್ನು ವಿರೋಧಿಸಲ್ಲ ಅಂತ. ಇದು ಮಾತ್ರವಲ್ಲ ಬಾಬಾ, ಹೈಸ್ಕೂಲು,ಪಿಯುಸಿ, ಚಿತ್ರಗಳೂ ಚಿತ್ರೀಕರಣದ ಹಂತದಲ್ಲಿವೆ. ನಿನ್ನೆ ಈ ಬಗ್ಗೆ ಮಾತಾಡುತ್ತಿರುವಾಗ ನನ್ನ ಪತ್ರಕರ್ತ ಮಿತ್ರರೊಬ್ಬರು ಹೇಳಿದ್ರು 'ಏನಾಯ್ತು ಸಿನಿಮಾದಲ್ಲಿ ಸತ್ಯ'ವನ್ನೇ ಹೇಳ್ತಾರೆ ಅಂತ. ಹೌದು! ಒಪ್ಪಿಕೊಳ್ಳೋಣ ಸತ್ಯನೇ ಹೇಳ್ತಾರೆ..ಆದ್ರೆ ಪುಟ್ಟ ಮಕ್ಕಳ ಮೇಲೆ ಇದು ಎಂಥ ಪರಿಣಾಮ ಬೀರುತ್ತೆ ಗೊತ್ತೆ? ಮಕ್ಕಳ ಮನಸ್ಸಿನ ಮೇಲೆ ಒಳ್ಳೇ ಪರಿಣಾಮವಂತೂ ಬೀಳಲ್ಲ ಎನ್ನುವುದು ನೂರಕ್ಕೆ ನೂರೂ ಸತ್ಯ. ಮಕ್ಕಳ ಭವಿಷ್ಯ ಬೆಳಗಬೇಕಾದ ನಮ್ಮಲ್ಲಿ, ಬಾಲ್ಯದಲ್ಲಿಯೇ ಭವಿಷ್ಯ ಕೊಲ್ಲುವ ಕಾರ್ಯ ನಡೆಯುತ್ತಿದೆ. ಇದನ್ನು ತಡೆಯುವರಾರು?

ಕಮರ್ಶಿಯಲ್ ದೇವಾಲಯಗಳು?!

ಇತ್ತೀಚೆಗೆ ಜಗತ್ಪ್ರಸಿದ್ಧ ದೇವಾಲಯಕ್ಕೆ ಒಂದಕ್ಕೆ ಭೇಟಿಯಾಗಿದ್ದೆ. ಹೆಸ್ರು ಪ್ರಸ್ತಾಪಿಸಲ್ಲ. ನಾನು, ನನ್ ಅಂಕಲ್, ಅಣ್ಣ ಜೊತೆಗೇ ಹೋಗಿದ್ದು. ಈವರೆಗೆ ನಾನೂ ನೋಡಿರಲಿಲ್ಲ. ಅದ್ರ ಬಗ್ಗೆ ಹೇಳಿದ್ರೆ ಯಾರಾದ್ರೂ ಉರಿದುಬೀಳ್ತಾರೆ. ಆದ್ರೂ ಆ ದೇವಾಲಯದ ಆಡಳಿತ ಮಂಡಳಿ ಮಾತ್ರ ನಾವು ಮಹಾ ದಾನಿಗಳೆಂದೇ ಬಡಾಯಿ ಕೊಚ್ಚಿಕೊಳುತ್ತಿದ್ದಾರೆ. ಇರ್ಲಿ ಅಲ್ಲಿ ಹೋದ ಬಗ್ಗೆ ಒಂಚೂರು ಹೇಳ್ತೀನಿ.

ನಾವು ದೇವಾಲಯ ಹೊಕ್ಕಾಗ ಹಣ್ಣುಕಾಯಿ ಖರೀದಿಸಿದೆವು. ಮತ್ತೆ ಒಳಗಡೆ ಹೋಗಿ ಹಣ್ಣುಕಾಯಿ ದೇವರಿಗೆ ಅರ್ಪಿಸಬೇಕಲ್ಲಾ? ಹಾಗೆ ಹೋಗಿ ಒಬ್ಬ ಅರ್ಚಕನತ್ರ ಕೊಟ್ಟೆವು. ಆತನ ಕೈಗಿಗೆ ಹಣ್ಣುಕಾಯಿ ಇತ್ತಿತ್ತೇ ತಡ, 150 ರೂಪಾಯಿಯ ಚೀಟಿನ ನನ್ನ ಕೈಗೆ ತುರುಕಿ 'ತೆಕೊಳ್ಳಿ' ಎಂದು ಒತ್ತಾಯಿಸಿದ. ಮುಖ ಸಿಂಡರಿಸಿಕೊಂಡು, ಒಂದೆಡೆ ಮೊಬೈಲಲ್ಲಿ ಮಾತಾಡುತ್ತಿದ್ದ ಆತ ಯಾಕೆ ಈ ರೀತಿ ಒತ್ತಾಯಿಸುತ್ತಿದ್ದಾನೆ ಅನ್ನೊದೇ ತಿಳಿಯದು. ನಾನು ಕಕ್ಕಾಬಿಕ್ಕಿ. ಅಂತೂ ಆತ ಒತ್ತಾಯ ಮಾಡಿದಾಗ ತೆಗೆದುಕೊಳ್ಳಲೇಬೇಕು. ನಾನೂ ಹಾಗೆ ಮಾಡಿದೆ. ಮತ್ತೆ ನಮ್ಮನ್ನು ಕುಳಿತುಕೊಳ್ಳಿಸಿ ಒಂದಿಷ್ಟು ಆರತಿ ಬೆಳಗಿದ. ಆಮೇಲೆ ಈ ನೂರೈವತ್ತು ರೂಪಾಯಿ ಯಾಕೆ ಅಂತ ಕೇಳಿದಾಗ ಒಬ್ಬ ಹೇಳಿದ '50 ರೂಪಾಯಿಯ ಬುಕ್ ತೆಗೆದುಕೊಳ್ಳಿ. ಉಳಿದಿದ್ದು ಸೇವೆ' ಅಂತ. ನಮ್ಮ ಥರ ಹೊಸತಾಗಿ ಬಂದವರು ಅರ್ಚಕನ ಸಿಡಸಿಡ ಮುಖನೋಡಿ 150 ಕೊಟ್ಟು ಚೀಟಿ ಇಸ್ಕೊಳ್ತಾ ಇದ್ರು. ನಿತ್ಯ ಹೋಗೋರು ಅವರಷ್ಟಕ್ಕೆ ಹೋಗಿ ಕೈಮುಗಿದು ಬರ್ತಾ ಇದ್ರು. ಇಲ್ಲಿ 150 ವ್ಯರ್ಥ ಅಂತ ನಂಗೇನು ಚಿಂತೆಯಿಲ್ಲ. ಆ ದೇವಾಲಯದಲ್ಲಿ ಒತ್ತಾಯಪೂರ್ವಕವಾಗಿ ಹಣ ಕೀಳುತ್ತಿದ್ದ ಅಂತಹ ಪ್ರಸಿದ್ಧ ದೇವಾಲಯದ ಆಡಳಿತ ಮಂಡಳಿಯ ಅವಿವೇಕದ ಬಗ್ಗೆ ಹೇಸಿಗೆ ಮೂಡಿತು. ಇದು ಯಾವ ದೇವಸ್ಥಾನ ಅಂತ ಪ್ರತ್ಯೇಕ ಹೇಳಿ ಪ್ರಯೋಜನವಿಲ್ಲ, ಬದಲಾಗಿ 'ಬ್ಯುಸಿನೆಸ್ ದೇವಾಲಯ'ಗಳಿಗೆ ಇದೂ ಒಂದು ಉತ್ತಮ ನಿದರ್ಶನ ಅನ್ನೋದು ಮಾತ್ರ ಅಷ್ಟೇ ಸತ್ಯ.

ಇಂಥಹ ಹಲವಾರು ದೇವಸ್ಥಾನಗಳಿವೆ ಬಿಡಿ. ಆದ್ರೆ ದಿನನಿತ್ಯ ದೇಶ-ವಿದೇಶಗಳಿಂದ ಬರುವ ಅದೆಷ್ಟೋ ಭಕ್ತರಿಗೆ ಯಾವ ರೀತಿ ಮೋಸ ಮಾಡ್ತಾರೆ ನೋಡಿ. ನಾನು ಅಲ್ಲಿದ್ದಾಗಲೇ ಹಲವಾರು ಮಂದಿ ವಿದೇಶಿಯರು ಹಣ ಕೊಟ್ಟು ಚೀಟಿ ಪಡೆಯುತ್ತಿದ್ದರು. ಅರ್ಚಕ ಚೆನ್ನಾಗಿ ಇಂಗ್ಲಿಷ್ ನಲ್ಲಿ ಯೇ ಮಾತಾಡಿ ಬಂದವರನ್ನು ಮರುಳು ಮಾಡುತ್ತಿದ್ದ. ವಟವಟಗುಟ್ಟುವ ಕಪ್ಪೆಯಂತೆ ಪಟಪಟನೆ ಇಂಗ್ಲೀಷ್ ಮಾತಾಡಿ, ಸಿಡ ಸಿಡ ಎನ್ನುತ್ತಾ ಆತ ಭಕ್ತರಿಗೆ ಪೋಸ್ ನೀಡುತ್ತಿದ್ದುದು ನೋಡಿದ್ರೆ ಯಾರಾದ್ರೂ ಬೆರಗಾಗಬೇಕು. ಭಾಷೆ ತಿಳಿಯದ, ಇಲ್ಲಿನ ಆಚಾರ-ವಿಚಾರ ತಿಳಿಯದ, ಸೇವೆ ಅಂದ್ರೆ ಏನೂಂತ ಅರಿಯದ 'ಅಮಾಯಕ'ರು ಹಣ ಸುರಿದು ಹೋಗುತ್ತಿದ್ದರು. ಅರ್ಚಕನ ತಟ್ಟೆಗೆ, ದೇವರ ಡಬ್ಬಿಗೆ ಎಲ್ಲಾ ಕಡೆಯೂ ಹಣವೇ ಹಣ..ಯಾರೂ ಅಲ್ಲಿ ಒಂದು ರೂಪಾಯಿ, ಐದು ರೂಪಾಯಿ ಹರಕೆ ಹಾಕಲ್ಲ..ನೂರು, ಐನ್ನೂರರ ನೋಟುಗಳು..ಅದನ್ನು ನೋಡಿ ನಂಗೇ ವಿಚಿತ್ರ ಅನಿಸ್ತು. ನಾವು ದೇವಾಲಯಕ್ಕೆ ಬಂದಿದ್ದೇವೆಯೋ ಅಥವಾ ಯಾವುದಾದ್ರೂ ಬ್ಯುಸಿನೆಸ್ ಮಳಿಗೆಗೆ ಬಂದಿದ್ದೇವೋ ಅನುಮಾನ ಕಾಡತೊಡಗಿತ್ತು. ಒಂದು ರೀತೀಲಿ ಉಳ್ಳವರಿಗೆ ಮಾತ್ರ ಇದು ದೇವಾಲಯ..ನಿಜವಾದ ಭಕ್ತರಿಗೆ ಇದು 'ದೇವಸ್ಥಾನ' ಆಗದು. ಇಲ್ಲಿ ಹೋದವರೆಲ್ಲಾ 150 ಕೊಡಬೇಕಂದ್ರೆ..ತುತ್ತು ಅನ್ನಕ್ಕೂ ಗತಿಯಿಲ್ಲದ ಬಡವನೊಬ್ಬ ದೇವರ ಆಶೀರ್ವಾದ ಪಡೆದು ಬರ್ತೀನಿ ಅಂದ್ರೆ...ಇದ್ದ ನೂರು ರೂಪಾಯಿಯನ್ನೂ ಅರ್ಚಕರು ಕಿತ್ತುಕೊಳ್ಳಲ್ಲ ಅನ್ನೋದ್ರಲ್ಲಿ ಗ್ಯಾರಂಟಿ ಏನು? ಇದೆಲ್ಲಾ ಹಣ ಮಾಡುವ ಐಡಿಯಾ..ದೇವ್ರ ಸೇವೆನೋ..ಉಳ್ಳವರ ಉದರ ಸೇವೆನೋ ತಿಳಿತಾ ಇಲ್ಲ. ಈ ರೀತಿಯ ಬ್ಯುಸಿನೆಸ್ ಗಾಗಿ ಹುಟ್ಟಿಕೊಂಡಿರುವ ಕಮರ್ಶಿಯಲ್ ದೇವಸ್ಥಾನಗಳನ್ನು ಕೆಡವಿ ಹಾಕಿದ್ರೂ ಯಾವ ಪಾಪನೂ ಬರಲ್ಲ. ಸನಾತನ ಧರ್ಮದ ಉಳಿವಿಗಾಗಿ ದೇವಸ್ಥಾನಗಳು ಬೇಕು ಅಂತ ಬೊಬ್ಬಿಡುತ್ತೇವಲ್ಲಾ? ಈ ರೀತಿಯ ಹಣ ಮಾಡುವುದಕ್ಕಾಗಿ ಮೂರ್ತಿ ಸ್ಥಾಪಿಸಿ, ಪೂಜೆ ಮಾಡಿ ಹಣ ಕೀಳುವವರನ್ನು ಮೊದಲು ಹೊಡೆದೋಡಿಸಬೇಕು. ದಾನ ಮಾಡ್ತೀವಿ..ಲೋಕ ಕಲ್ಯಾಣಕ್ಕಾಗಿ ಹೋಮ ಹವನ ಮಾಡ್ತೀವಿ ಎನ್ನುತ್ತಾ ಪುಕ್ಕಟೆ ಪ್ರಚಾರ ಮಾಡುವ ಪ್ರಸಿದ್ಧ ದೇವಾಲಯಗಳು ಹೀಗಾದರೆ...?!!!

Tuesday, December 25, 2007

ಕರುಣಾಳು ಬಾ ಬೆಳಕೇ..

ಛಳಿ ಛಳಿಯಲೂ ಬಳಿ ಬಂದಿದೆ
ಹೊಸವರ್ಷದ ಬೆಳಕಿನ ಸ್ಪರ್ಶ
ಎಲೆ ಎಲೆಯಲ್ಲೂ ತಲೆದೋರಿದೆ
ಹೊಸ ಕಲೆಗಾರಿಕೆಯ ಹರ್ಷ
ಮಾತು ನಿಂತಿದೆ ಭಾವ ಹೊಳೆದಿದೆ
ಪ್ರೇಮದ ಎದೆಎದೆಯಲ್ಲಿ
ಅರಳಿ ನಿಂತಿದೆ ಬೆಳಕು ಹೀರಿದೆ
ಹೂವಿನ ದಳದಳಗಳಲ್ಲಿ..
ಹೌದು! ಮತ್ತೆ ಬಂದಿದೆ ಹೊಸ ವರ್ಷ. ಬದುಕಿನ ಹೊಸಿಲಲ್ಲಿ ಹೊಸ ವರ್ಷವನ್ನು ಸಡಗರ-ಸಂಭ್ರಮದಿಂದ ಸ್ವಾಗತಿಸಲು ಕಾತರದಿಂದ ಕಾಯುತ್ತಾ ನಿಂತಿದ್ದೇವೆ. ಇನ್ನೇನೋ ಕೆಲ ದಿನಗಳಲ್ಲಿ ಜನವರಿ 1 ಬಂದೇ ಬರುತ್ತೆ. ಹಳೆಯ ನೆನಪುಗಳನ್ನು ನೆನೆನೆನೆಯುತಲೀ..ಹೊಸ ಕನಸುಗಳು ಚಿಗುರೊಡೆಯುತ್ತವೆ. ಮೊನ್ನೆ ಮೊನ್ನೆ 2007ರ ಜನವರಿ 1ನ್ನು ಪ್ರೀತಿಯಿಂದ ಸ್ವಾಗತ ಮಾಡಿದ್ದೇವು. ಈಗ ಮತ್ತೆ ಹೊಸ ವರ್ಷ, ಮನಸ್ಸಿಗೆ ನವ ಸ್ಪರ್ಶ. ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯತ್ಯಾಸವುಂಟೇ? ಅದೇ ರಾಗ, ಅದೇ ಹಾಡು ಎಂಬಂತೆ ಅದೇ ಹಗಲು, ಅದೇ ರಾತ್ರಿ, ಅದೇ ಸೂರ್ಯ, ಅದೇ ಚಂದ್ರ. ಕಳೆದ ನಿನ್ನೆ-ಬರುವ ನಾಳೆ ಎಲ್ಲವೂ ಒಂದೇ..ಎಲ್ಲವೂ ಅದೇ. ಬಹುಶಃ ಮನುಷ್ಯನ ಕನಸು ಕಲ್ಪನೆಗಳನ್ನು ಮೂರ್ತ ರೂಪ ನೀಡಲು ವರ್ಷಕ್ಕೊಂದು ಆದಿ-ಅಂತ್ಯ ಮನುಷ್ಯ ಕಲ್ಪಿಸಿರಬಹುದೇನೋ..ಆದ್ರೂ ಏನೋ ಸಂಭ್ರಮ . ಹೊಸತಾದನ್ನು ಬಾಚಿ ಮುತ್ತಿಡುವ ಮನಸ್ಸು..ನವಿರುಭಾವಗಳ ಪುಳಕ. ಕನಸುಗಳನ್ನು ಸಾಕಾರಗೊಳಿಸಲುವ ಮಹತ್ತರ ಭರವಸೆ. ಇನ್ನೂ ಜಗವನ್ನು ಕಣ್ಣರಳಿಸಿ ನೋಡದ ಪುಟ್ಟ ಮಗುವಿನ ಹಾಲುಗಲ್ಲದಲ್ಲೂ ಹೊಸತನದ ಸ್ಪರ್ಶ.
ಹೊಸ ವರ್ಷವೆಂದರೆ ಮನಮನದಲ್ಲಿ ಹೊಸತನದ ಚಿಗುರು..ನವಹುರುಪಿನ ತಳಿರು
ನವಬದುಕಿಗೊಂದು ನೂತನ ಪಲ್ಲವಿ..ಹೊಸ ಮುನ್ನುಡಿ..

ಜಗತ್ತಿನಾದ್ಯಂತ ಹೊಸವರ್ಷವನ್ನು ಜನವರಿ 1ರಂದು ಆಚರಿಸಿದ್ದರೆ, ಭಾರತದಲ್ಲಿ ಚೈತ್ರಮಾಸದಲ್ಲಿ ಬರುವ ಯುಗಾದಿ ಹೊಸ ವರ್ಷ. ಆದರೆ ಬದಲಾದ ಜೀವನಶೈಲಿ, ಆಧುನಿಕರಣದ ಪರಿಣಾಮ, ಅಂತರ್ ರಾಷ್ಟ್ರೀಯದಲ್ಲಿ ಬೆಳಿಸಿಕೊಳ್ಳುವ ಹಂಬಲ..ಯುಗಾದಿಗಿಂತ ಜನವರಿ 1 ನೂತನ ವರ್ಷವಾಗಿಬಿಟ್ಟಿದೆ. ಇರಲಿ, 'ಕಾಲಕ್ಕೆ ತಕ್ಕ ಕೋಲ' ಜಗತ್ತಿನಾದ್ಯಂತ ಹೊಸ ವರ್ಷವನ್ನು ವಿಭಿನ್ನ ಶೈಲಿಯಲ್ಲಿ ಆಚರಿಸಲಾಗುತ್ತದೆ. ಜಾಗತಿಕವಾಗಿ ಪ್ರಸಿದ್ಧಿ ಹೊಂದಿರುವ ಗ್ರಿಗೋರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ 1ನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ರೋಮನ್ ದೇವತೆ ಜಾನುಸ್ಸನ ನೆನಪಿಗಾಗಿ ಜನವರಿ ಎನ್ನಲಾಗುತ್ತಿದೆಯಂತೆ. ಜಪಾನೀಯರು ಬಾಗಿಲಿಗೆ ಸ್ಟ್ರಾಗಳಿಂದ ಅಲಂಕಾರ ಮಾಡಿ, ದೇವರಲ್ಲಿ 'ಸುಖ-ಸಮೃದ್ಧಿ ನೀಡು, ದುಷ್ಟ ಶಕ್ತಿಗಳನ್ನು ದೂರವಿರಿಸು' ಎಂದು ಬೇಡುತ್ತಾರಂತೆ. ಚೀನಾದಲ್ಲಿ ಜನವರಿ 17ರಿಂದ ಫೆಬ್ರವರಿ 19ರ ನಡುವೆ ಬರುವ ಪಾಡ್ಯ ದಿನವನ್ನು 'ಯು ಆನ್ ಟ್ಯಾನ್' ಎಂದು ಕರೆದು ಹೊಸ ವರ್ಷವೆಂದು ಕರೆದು ಸಂಭ್ರಮಿಸುತ್ತಾರೆ. ಟಿಬೇಟಿಯನ್ನರಿಗೆ ಜನವರಿಯಿಂದ ಮಾರ್ಚ್ ತನಕ ಹೊಸ ವರ್ಷ.ಅದನ್ನೇ 'ಲೋಸರ್' ಎನ್ನುತ್ತಾರಂತೆ. ಇನ್ನು ಈಜಿಪ್ಟ್ನ ಬಹಳಷ್ಟು ಹಿಂದಿನ ಇತಿಹಾಸ ಗಮನಿಸಿದರೆ ಅಲ್ಲಿನ ಪವಿತ್ರ ನದಿ ನೈಲ್ ತುಂಬಿ ಹರಿದಾಗಲೇ ಅವರಿಗೆ ಹೊಸವರ್ಷವಂತೆ. ಹೀಗೆ ಜಗತ್ತಿನಾದ್ಯಂತ ಹೊಸ ವರ್ಷವನ್ನು ಸ್ವಾಗತಿಸುವ ಪರಿ ವಿಭಿನ್ನ.

ಹೌದು! ನಾವೂ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ದರಾಗಿದ್ದೇವೆ. ಏನ್ ಮಾಡೋದು ಹೊಸ ವರ್ಷಕ್ಕೆ..ಏನಾದ್ರೂ ಒಂದು ಮಾಡ್ಲೇಬೇಕು..ಕೆಲವರು ನಾನ್ ಇನ್ನು ಮುಂದೆ ಸಿಗರೇಟ್ ಸೇದಲ್ಲ, ಬಾರ್ -ಪಬ್ ಗೆ ಹೋಗಲ್ಲ, ಮದ್ಯ ಸೇವಿಸಲ್ಲ..ಅಮ್ಮ-ಅಪ್ಪನತ್ರ ಜಗಳ ಮಾಡಲ್ಲ..ಹೊಸ ಹುಡುಗೀನ/ಹುಡುಗನಾ ಲವ್ ಮಾಡ್ಬೇಕು..ಮದುವೆಯಾಗಬೇಕು..ಹೀಗೆ ಹತ್ತು ಹಲವು ಯೋಚನೆಗಳು..ಕನಸುಗಳು. ಅದ್ಸರಿ, ಪ್ರತಿಯೊಬ್ಬರಲ್ಲೂ ಇಂಥ ಹೊಸ ಹೊಸ ಕನಸುಗಳು ಇರಬೇಕು. ಹಾಗಂತ ಕುಡಿಯಲ್ಲ ಅಂದುಕೊಂಡು ಡಿಸೆಂಬರ್ 31 ರಾತ್ರಿ ಕಂಠಪೂರ್ತಿ ಕುಡಿದು ಬೀಡಿ ಬೀದಿಯಲ್ಲಿ ಬಿದ್ರೆ..?!ಎಷ್ಟೋ ಮಂದಿ ಇಂಥ ಸಂಕಲ್ಪಗಳನ್ನು ಮಾಡಿಬಿಟ್ಟು..ಮತ್ತೆ ತಮ್ಮ ಹಳೇ ಚಾಳಿಯನ್ನೇ ಮುಂದುವರೆಸುತ್ತಾರೆ. ಹೊಸ ವರ್ಷ ಬದುಕಿನಲ್ಲಿ ಹೊಸತನದ ಸುಪ್ರಭಾತ ಮೊಳಗಿ ಸಾಧನೆಯ ದಾರಿಗೆ ಪೂರಕವಾಗಬೇಕು..ಜ್ಞಾನದ ಮುನ್ನುಡಿಯಾಗಬೇಕು.

ಹೊಸ ಬೇರು ಹಳೆ ಚಿಗುರು ಕೂಡಿರಲು ಮರಸೊಬಗು..
ಕಳೆದ ದಿನಗಳ ಅನುಭವವು ಬರುವ ನಾಳೆಯಲ್ಲಿ ಸಮೃದ್ಧಿಯ ಬಾಳಿಗೆ ನಾಂದಿಯಾಗಬೇಕು
ಕವಿಋಷಿ ಕುವೆಂಪು ನೂತನ ವರ್ಷವನ್ನು
ತೆರೆದಿದೆ ಮನೆ ಓ ಬಾ ಅತಿಥಿ..
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ..
ಎನ್ನುತ್ತಾರೆ.
'ಅಂದವೇ ಆನಂದ, ಆನಂದವೇ ಮಕರಂದ'-ಹೊಸ ವರುಷದ ಸಂಭ್ರಮದ ಗಳಿಗೆ ನಿತ್ಯ ನೂತನವಾಗಿರಲಿ. ಬದುಕಿನ ಜಂಜಾಟಕ್ಕೆ ಸೋತ ಮೂಕಮನಸ್ಸಿಗೆ ಹೊಸತನ್ನು ಸಾಧಿಸುವ ಸ್ಪೂರ್ತಿ, ಚೈತನ್ಯ ತುಂಬಲಿ.
ಕರುಣಾಳು ಬಾ ಬೆಳಕೇ.
ಮುಸುಕಿದೀ ಮಬ್ಬಿನಲಿ
ಕೈಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ..
ಮನೆದೂರ ಕನಿಕರಿಸಿ,
ಕೈಹಿಡಿದು ನಡೆಸೆನ್ನನು
ಹೊಸ ವರುಷದ ಹೊಸಿಲಲ್ಲಿ ನಾವು ಬೆಳಕಿಗಾಗಿ ಬೇಡೋಣ..ಹೊಸತನದತ್ತ ಹೆಜ್ಜೆಹಾಕೋಣ. ಕ್ರಿಯಾಶೀಲ ಮನಸ್ಸಿನಿಂದ ಭವಿಷ್ಯದ ಬದುಕನ್ನು ಬೆಳಗೋಣ. ಕಳೆದ ವರ್ಷದಿಂದ ೀ ವರ್ಷಕ್ಕೆ ಬದಲಾವಣೆ ಆಗಿದೆಯೋ ಇಲ್ಲವೋ..ಆದರೆ ಉತ್ತಮ ಆಲೋಚನೆಗಳು ನಮ್ಮದಾಗಲಿ. ಸರ್ವರಿಗೂ ಹೊಸ ವರುಷದ ಶುಭಾಶಯಗಳು.

ಒಂಚೂರು ನೀವೂ ಓದ್ರೀ..

ರಸ್ಕಿನ್ ಬಾಂಡ್ ಬರೆದಿರುವ 'The little book of comfort' ಪುಸ್ತಕದ ಅನುವಾದ ಇಲ್ಲಿದೆ. ಯಾರು ಅನುವಾದ ಮಾಡಿದ್ದಾರೆನ್ನುವುದು ಸ್ಪಷ್ಠ ಮಾಹಿತಿ ಸಿಕ್ಕಿಲ್ಲ..ಆದ್ರೆ ಓದಿದಾಗ ಮನಸ್ಸು ಪುಳಕಗೊಂಡಿತ್ತು. ಅದ್ಕೆ ನೀವೂ ಓದಲೆಂಬ ಉದ್ದೇಶದಿಂದ ಇಲ್ಲಿ ಬರೆದೆ.

ಒಂದು ಬಾಗಿಲು ಮುಚ್ಚಿದರೆ, ಮತ್ತೊಂದು ಬಾಗಿಲು ತೆರೆದುಕೊಳ್ಳುತ್ತದೆ. ಹೋದ ವಾರ ಯಾವುದರ ಬಗ್ಗೆ ವಿಪರೀತ ತಲೆಕೆಡಿಸಿಕೊಂಡಿದ್ದೀರಿ ಅನ್ನೋದನ್ನು ಪ್ರಯತ್ನಪೂರ್ವಕವಾಗಿ ನೆನಪು ಮಾಡಿಕೊಳ್ಳುವುದಿದೆಯಲ್ಲಾ ಅದು ನೆನಪಿನ ಶಕ್ತಿಗೆ ಒಳ್ಳೆ ಪರೀಕ್ಷೆ. ಪರಿಸ್ಥಿತಿ ತೀರ ಹೋಪ್ ಲೆಸ್ ಆಗಿದ್ದಾಗಲೇ ಅತ್ಯಂತ ಕ್ರಿಯಾಶೀಲ ಕ್ಷಣಗಳು ಮನುಷ್ಯನಿಗೆ ಧಕ್ಕೆ ತರುತ್ತವೆ. ಅತ್ಯುತ್ತಮವಾದ ಆಟ ಅಂತ ಯಾವುದೂ ಇರುವುದಿಲ್ಲ, ಅತ್ಯುತ್ತಮ ಆಟಗಾರನಿರುತ್ತಾನೆ. ವಿಪರೀತ ದುರದೃಷ್ಟ ಅನುಭವಿಸುತ್ತಾರಲ್ಲಾ ಅವರನ್ನು ಆ ದುರದೃಷ್ಠ ಅತೀ ಬುದ್ದಿವಂತರನ್ನಾಗಿಯೂ, ಒಳ್ಳೆಯವರನ್ನಾಗಿಯೂ ಮಾಡಿರುತ್ತದೆ. ಬದುಕನ್ನು ಸುಖವಾಗಿಡು ಎಂದು ದೇವರನ್ನು ಕೇಳೀಕೊಳ್ಳಬೇಡ, ನನ್ನ ಬಲಿಷ್ಠನನ್ನಾಗಿಸು ಎಂದು ಮೊರೆಯಿಡು. ನಿನ್ನನ್ನು ನೀನೇ ನಂಬಿಕೋ, ಕ್ರಮೇಣ ಉಳಿದವರು ನಿನ್ನನ್ನು ನಂಬತೊಡಗುತ್ತಾರೆ. ಜಗಳ ಕಡಿಮೆ ಮಾಡು, ಜಗಳ ಮಾಡುವವರಿಬ್ಬರೂ ಬಲಹೀನರು ಅಂತ ನಿನಗೇ ಅನಿಸುತ್ತೆ. ಸೋಲಬೇಡ, ನಿನ್ನ ಒಂದೇ ಒಂದು ಗೆಲುವು ಹಳೆಯ ಎಲ್ಲಾ ಸೋಲುಗಳನ್ನು ಅಳಿಸಿಬಿಡುತ್ತೆ. ನಾವೆಲ್ಲಾ ಚಹಾದ ಎಲೆಗಳಂತವರು, ಬಿಸಿ ನೀರಿಗೆ ಬಿದ್ದು ಕುದ್ದಾಗಲೇ ನಮ್ಮ ತಾಕಿತ್ತು ಏನು ಅನ್ನುವುದು ನಮಗೆ ಅರ್ಥವಾಗುವುದು. ಗಂಟೆ ಗಟ್ಟಲೆ ಧಾರಾಕಾರವಾಗಿ ಮಾತಾಡುವವನನ್ನು ದೂರವಿಡು, ತುಂಬಾ ಕಡಿಮೆ ಗೊತ್ತಿದ್ದ ಮನುಷ್ಯ ಮಾತ್ರ ಅದನ್ನು ವಿವರಿಸೋಕೆ ಅಷ್ಟೊಂದು ಸಮಯ ತೆಗೋತಾನೆ. ಶತ್ರುಗಳನ್ನು ಪ್ರೀತಿಸೋ ಪ್ರಯತ್ನ ಮಾಡು, ಅದರಿಂದ ಮತ್ತೇನೂ ಆಗದಿದ್ದರೂ ನಿನ್ನ ಶತ್ರುವನ್ನು ನೀನು ಕನ್ ಫ್ಯೂಸ್ ಮಾಡಿ ಹಾಕುತ್ತೀಯಾ. ನಿನನ್ನು ಕಂಡು ಅವರ್ಯಾರೋ ಸಂಕಟ ಪಡುತ್ತಿದ್ದಾರೆ ನೆನಪಿರಲಿ. ಹಣ್ಣು ಬಿಡುವ ಮರಕ್ಕೆ ಜನ ಕಲ್ಲು ಬಿಸಾಡುವುದು.
ನಿನ್ನಿಂದ ಗೆಲ್ಲೋಕಾಗದಿದ್ರೆ ನಿನಗಿರುವುದು ಒಂದೇ ಒಂದು ದಾರಿ ಪ್ರತಿಸ್ಪರ್ಧಿಯನ್ನು ಭಯಂಕರ ಸುಸ್ತಾಗುವಂತೆ ಮಾಡುವುದು. ಆಟದ ಮೊದಲರ್ಧವನ್ನು ಯಾರು ಬೇಕಾದರೂ ಆಡುತ್ತಾರೆ, ಎರಡನೇ ಆಟವನ್ನು ಆಡಿದವನು ಮಾತ್ರ ಗೆಲ್ಲುತ್ತಾನೆ. ಒಂದೊಂದು ಸಲ ಮಾಡಿದ ತಪ್ಪಿಗಾಗಿ ಶಿಕ್ಷೆಯಾಗಿ ಬಿಡುತ್ತೆ, ಆವಾಗ ಅದೆಷ್ಟೋ ತಪ್ಪುಗಳಿಗೆ ಶಿಕ್ಷೆಯಾಗದೆ ಇದ್ದುದು ನೆನಪು ಮಾಡಿಕೋ. ಗಟ್ಟಿ ಮನುಷ್ಯನ ಮತ್ತು ಧುಮುಕುವ ನೀರು ತಮ್ಮದೇ ಹಾದಿ ನಿರ್ಮಿಸಿಕೊಳ್ಳುತ್ತದೆ. ಆರೋಗ್ಯ ಚೆನ್ನಾಗಿದ್ದರೆ ನೀನು ಯುವಕ, ಯಾವುದೇ ಸಾಲವಿಲ್ಲವಾ? ನೀನು ಶ್ರೀಮಂತ. ದೇವರು ಮುಖ ಮಾತ್ರ ಕೊಡುತ್ತಾನೆ, ಅದರ ಭಾವವೇನಿದ್ದರೂ ನಮಗೆ ಬಿಟ್ಟಿದ್ದು. ಗೆಲುವನ್ನು ಸಂಪೂರ್ಣವಾಗಿ ಗೆದ್ದ ನಂತರ ಅನಿಸುತ್ತೆ ಹತ್ತಿ ಬಂದ ದಾರಿಯೇ ಗೆಲುವಿಗಿಂತ ಚೆಂದಗಿತ್ತು ಅಂತ. ನಿನ್ನ ಕನಸನ್ನು ಮಾತ್ರ ಮತ್ತೊಬ್ಬರ ಕೈಗಿಡಬೇಡ, ಕಡೇ ತನಕ ನಿನನ್ನು ಕಾಯೋದೆ ಅದು. ಹದಿನಾರನೇ ವಯಸ್ಸಿನಲ್ಲಿ ಅದೇನೇನು ಸೌಂದರ್ಯ ನಿನ್ನಲ್ಲಿದೆಯೋ ಅದರ ಬಗ್ಗೆ ಋಣಿಯಾಗಿರು. ಆದರೆ ಅರವತ್ತನೇ ವಯಸ್ಸಿನಲ್ಲಿ ನೀನು ಉಳಿಸಿಕೊಂಡ ಸೌಂದರ್ಯವಿದೆಯಲ್ಲಾ ಅದರ ಬಗ್ಗೆ ತುಂಬಾ ಹೆಮ್ಮೆ ಪಡು.

-ರಸ್ಕಿನ್ ಬಾಂಡ್

Wednesday, December 19, 2007

ತೃಪ್ತಿಗಾಗಿ ಏನಾದ್ರೂ ಗೀಚೋಣ..

"ನಾನು ಬರೆಯುತ್ತೇನೆ
ಋಷಿಯ ನೋವಿಗೆ
ರೊಚ್ಚಿಗೆ ಮತ್ತು ಹುಚ್ಚಿಗೆ
ಅಥವಾ
ನಂದಿಸಲಾರದ ಕಿಚ್ಚಿಗೆ"
ಕವಿಹೃದಯದ ಹಂಬಲವಿದು. ಬರೆಯುವ ತುಡಿತವಿದು. ಇವತ್ತು ಬೆಳಿಗ್ಗೆ ನನ್ನ ಆತ್ಮೀಯರೊಬ್ಬರು ಪೋನು ಮಾಡಿದ್ದರು. ಅವರೊಬ್ಬ ಗೀತರಚನೆಗಾರ. ಪ್ರಸಿದ್ಧ ಸಿನಿಮಾಗಳಿಗೆ ಹಾಡು ಬರೆದವರು. ದಿನಾ ನೋಡಿದ್ರೆ ಏನಾದ್ರೂ ಬರೆಯುತ್ತಾ ಇರುತ್ತಾರೆ. ಹೀಗೆ ಮಾತಾಡ್ತಿರಬೇಕಾದ್ರೆ ಅವರ ಅನುಭವಗಳನ್ನು ಹೇಳುತ್ತಿದ್ದರು. ಅವರು ಪ್ರತಿಷ್ಠಿತ ಕಾಲೇಜೊಂದಕ್ಕೆ ಸೇರಿ ಅಲ್ಲಿನ ವಾತಾವರಣ ಹಿಡಿಸದೆ, ವಾಪಾಸ್ ಮನೆಗೆ ಬಂದು ತನ್ನ ಹಳ್ಳಿಯಲ್ಲಿಯೇ ಓದು ಮುಗಿಸಿದರು. ಅವರು ಹೇಳಿದ ಧಾಟಿ ಹೀಗಿತ್ತು "ಆ ಕಾಲೇಜಿನಲ್ಲಿ ನಾ ಓದುತ್ತಾ ಇದ್ರೆ ಕಾಲೇಜಿನ ಪ್ರಸಿದ್ದಿಯೇ ನನ್ನ ಯಾವುದೋ ಒಬ್ಬ ಉನ್ನತ ಅಧಿಕಾರಿಯಾಗಿ ರೂಪಿಸುತ್ತಿತ್ತು. ಯಾಕಂದ್ರೆ ಆ ಕಾಲೇಜು ಅಂಥದ್ದು. ಆದ್ರೆ ನಾನು ಅಲ್ಲಿ ಇರಲಿಲ್ಲ. ಮನೆಗೆ ವಾಪಾಸ್ ಆಗಿ, ಹುಟ್ಟೂರಲ್ಲೇ ಓದಿದೆ.ಚಿಕ್ಕಂದಿನಿಂದಲೂ ನನ್ನ ಬರವಣಿಗೆಯ ತುಡಿತ ನನ್ನ ಕೈಬೀಸಿ ಕರೆಯುತ್ತಿತ್ತು. ನಾನು ಕವನ ಬರೆದ್ರೆ ಅದು ಸಕ್ಸಸ್ ಆಗಲಿ, ಏನೇ ಅಗ್ಲೀ..ಬರೆದ ಖುಷಿ ಇದೆಯಲ್ಲಾ ಅದು ಬೇರೆಲ್ಲೂ ಸಿಗದು. ನನ್ನ ಕವನಗಳಿಗೆ ಇಂದು ಒಳ್ಳೆ ಮಾರುಕಟ್ಟೆಯಿದೆ. ಹಾಗಂತ ನಂಗೆ ಹಣಬೇಡ, ತೃಪ್ತಿಯಿದೆಯಲ್ಲಾ ಅದು ಬೇಕು. ಒಂದು ವೇಳೆ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದ್ದರೆ ನಾನು ಯಾವುದೇ ಕಂಪನಿಯಲ್ಲಿ ದೊಡ್ಡ ಅಧಿಕಾರಿಯಾಗಿರುತ್ತಿದ್ದೆ. ಇಂಥಹ ಖುಷಿಯ ದಿನಗಳು ಇರುತ್ತಿದ್ದವೋ ಇಲ್ಲವೋ?" ಎಂದರು.


ನನಗೂ ಎಷ್ಟೋ ಬಾರಿ ಹೀಗನಿಸುವುದುಂಟು. ಹುಚ್ಚೋ, ಖುಷಿಯೋ, ಹವ್ಯಾಸವೋ ಈ ಬರವಣಿಗೆಗಳಲ್ಲಿ ಇರೋ ತೃಪ್ತಿ ಬೇರೆಲ್ಲೂ ಸಿಗದು. ಏನೇ ಆಗ್ಲಿ ಅದನ್ನು ಕಾಗದದಲ್ಲೋ, ಬ್ಲಾಗ್ ಮೇಲೋ ಎಲ್ಲದ್ರೂ ಗೀಚಬೇಕು. ತಪ್ಪೋ/ಸರಿಯೋ ಅನ್ನುವುದಕ್ಕಿಂತ ನಾನು ಬರೆಯಬೇಕು ಅನ್ನೋ ತುಡಿತ, ಹಂಬಲವಿದೆಯಲ್ಲಾ..ನಾವು ಬರೆಯುತ್ತಾ ಹೋದಂತೆ ಖುಷಿ ಕೊಡುತ್ತೆ. ಯಾರಾತ್ರನೂ ಮಾತಾಡಕ್ಕಾಗದೆ, ಏನೋ ಸಂಕೋಚವಿದ್ರೂ ಈ ಬರವಣಿಗೆಗೆ ಅದೆಲ್ಲ ಇರಲ್ಲ. ನಾನು ಬರೆಯುತ್ಥೇನೆಂಬ ಧನ್ಯತಾಭಾವ ಮಾತ್ರ.

ಮೊನ್ನೆ ವಿವೇಕ್ ಶಾನುಭಾಗ ಅವರು ಮಾತಾಡ್ತಿರಬೇಕಾದ್ರೆ 'ಬ್ಲಾಗ್ ಬರೆಯುವುದರಿಂದ ತೃಪ್ತಿ ಸಿಗುತ್ತೆ' ಅನ್ನುತ್ತಿದ್ದರು. ಇಂದು ಕೇವಲ ಸಾಹಿತಿಗಳು, ಉತ್ತಮ ಬರಹಗಾರರು ಮಾತ್ರವಲ್ಲ, ರಾತ್ರಿ-ಹಗಲೆನ್ನದೆ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುವವರೂ ಬ್ಲಾಗ್ ತೆರೆದು..ಕನಸೋ/ನನಸೋ ಅಚ್ಚಕನ್ನಡದಲ್ಲಿ ಗೀಚುತ್ತಾ ಹೋಗುತ್ತಾರೆ. ಅದನ್ನೆಲ್ಲ ನೋಡಿದಾಗ ಮನಸ್ದಸು ತುಂಬಿ ಬರುತ್ತದೆ. ಕಾರಂತರು ಹೇಳಿದಂತೆ 'ಬರಿ ಹರಿ' . ತಪ್ಪೋ/ಸರಿಯೋ ಬರೆಯಬೇಕು ಅಷ್ಟೇ.

ಆದರ್ಶಗಳ ಬಗ್ಗೆ ಕೊರೆಯುವ ಶಿಕ್ಷಕರು ಬೇಡ, ಶಿಕ್ಷಕನೇ 'ಆದರ್ಶ'ವಾಗಬೇಕು..

"ಪಾಠ ಕೇಳದ ವಿದ್ಯಾರ್ಥಿಗಳಿಗೆ ಕರೆಂಟ್ ಶಾಕ್ ಕೊಟ್ಟ ಶಿಕ್ಷಕ"!!?? ಪತ್ರಿಕೆಯಲ್ಲಿ ಈ ಸುದ್ದಿ ಓದಿ ನನಗೂ ಶಾಕ್ ?! ಮುಂಬೈನ ಶಿಕ್ಷಕನೊಬ್ಬ ಪಾಠ ಸರಿಯಾಗಿ ಕೇಳದ ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾನೆ. ಮಹಾರಾಷ್ಟ್ರದ ಜಲಂಗಾವ್ ಜಿಲ್ಲೆಯ ಭೂಸವಲ್ನಲ್ಲಿರುವ ಸುಮಂತ್ ಮಿಶ್ರಾನೇ ಈ 'ಶಾಕ್ ಶಿಕ್ಷಕ'! ತನ್ನ ಪಾಠವನ್ನು ಸರಿಯಾಗಿ ಕೇಳುತ್ತಿಲ್ಲ ಎಂದು ಭಾವಿಸಿದ ಆತ, ಭೌತಶಾಸ್ತ್ರ ಪ್ರಯೋಗಾಲಯದಲ್ಲಿರುವ ಎಲಿಮೇಟರ್ನಲ್ಲಿ ಒಟ್ಟು 22 ವಿದ್ಯಾರ್ಥಿಗಳಿಗೆ ಶಾಕ್ ನೀಡಿದ್ದಾನೆ. ಅದೂ 8-9ನೇ ತರಗತಿ ವಿದ್ಯಾರ್ಥಿಗಳು. ಆದರೆ ಶಾಕ್ ಪ್ರಮಾಣ ಕಡಿಮೆ ಇದ್ದದ್ದರಿಂದ ಅನಾಹುತ ಏನೂ ಆಗಿಲ್ಲವಂತೆ. ಗಾಬರಿಪಟ್ಟ ವಿದ್ಯಾರ್ಥಿಗಳು ನಂತರ ಪೋಷಕರಿಗೆ ತಿಳೀಸಿದ್ದಾರೆ.

ಹೆತ್ತವರು ಪೊಲೀಸರಿಗೆ ದೂರು ಕೊಟ್ಟರು, ಆತನನ್ನು ಬಂಧಿಸಿಯೂ ಆಯ್ತು. ನಂತರ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಯಿತಂತೆ! ಇದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಡೆಯುತ್ತಿರುವ ಪುಟ್ಟ ಕಾನೂನು ಪ್ರಹಸನ. ಇಂಥ ಪ್ರಹಸನಗಳು ನಮ್ಮ ದೇಶದಲ್ಲೆನೂ ಬರಗಾಲ ಬಂದಿಲ್ಲ, ಬರಗಾಲ ಬಂದಿರೋದು ಬಡವರ ಹೊಟ್ಟೆಗೆ, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ, ಕುಡಿಯುವ ನೀರಿಗೆ, ನೈತಿಕತೆಗೆ..ಮಾತ್ರ ಬಿಡಿ. ಒಂದು ವೇಳೆ ಆ ಶಿಕ್ಷಕನ 'ಶಾಕ್. ನಿಜ ಪರಿಣಾಮವನ್ನೇ ಬೀರುತ್ತಿದ್ದರೆ? ಪುಟ್ಟ ಮಕ್ಕಳ ಬದುಕು ಏನಾಗುತ್ತಿತ್ತು? ಅದನ್ನು ಯಾರಾದರೂ ಯೋಚಿಸಿದ್ದಾರೆಯೇ?

ಇಂದು ದಿನೇ ದಿನೇ ಶಿಕ್ಷಕರ ಇಂಥ ಧೂರ್ತ ವರ್ತನೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಆರು ತಿಂಗಳ ಹಿಂದೆ ಶಿಕ್ಷಕಿಯ ಮಾತಿನಿಂದ ನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ. ವಿದ್ಯಾರ್ಥಿಗಳನ್ನು ಬಾಸುಂಡೆ ಬರುವಂತೆ ಹೊಡೆಯುವುದು, ಬೆತ್ತಲೆ ನಿಲ್ಲಿಸುವುದು ಇಂಥ ಸಂಗತಿಗಳು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದಕ್ಕೊಂದು ಕಟ್ಟುನಿಟ್ಟಿನ ಕ್ರಮ ಇನ್ನೂ ಜಾರಿಯಾಗಿಲ್ಲ.ವಿದ್ಯಾರ್ಥಿಯ ಸರ್ವಾಂಗೀಣ ಬದುಕಿನ ಮಾರ್ಗದರ್ಶಕ ಗುರು ಅನ್ನುತ್ತಾರೆ, ಆದರೆ ಅಂಥ ಗುರು ಏನು ಮಾಡುತ್ತಿದ್ದಾನೆ? ಕೇಳಿದ್ರೆ ಶಿಕ್ಷಕರು ಏನ್ ಹೇಳ್ತಾರೆ 'ಈಗಿನ ಮಕ್ಕಳೇ ಸರಿ ಇಲ್ಲ. ಆದ್ದರಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿಲ್ಲ,. ಶಿಕ್ಷೆ ಅನಿವಾರ್ಯವಾಗಿದೆ. ಮತ್ತೇನು ಮಾಡಲಿ?" ಇಂಥ ಅಸಹಾಯಕತೆಯ ಮಾತಾಡಿ ತಪ್ಪಿಸಿಕೊಳ್ಳುತ್ತಾರೆ. ಇಂದು ಆದರ್ಶ ಶಿಕ್ಷಕರು ಇರುವುದು ಬೆರಳಣಿಕೆಯಷ್ಟು.

ಹೌದು! ಸಮಾಜ ಬದಲಾಗಿದೆ ಒಪ್ಪಿಕೊಳ್ಳೋಣ. ಆದ್ರೆ ಬದಲಾದ ಸಮಾಜಕ್ಕನುಗುಣವಾಗಿ ವಿದ್ಯಾರ್ಥಿಯನ್ನು ರೂಪಿಸುವುದು ಶಿಕ್ಷಕನ ಕರ್ತವ್ಯ ಅಲ್ಲವೇ? ಆದ್ರೆ ಇಂದು ಪುಟ್ಟ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಕ್ಕೂ ನಮ್ಮ ಶಿಕ್ಷಕರು ಹಿಂದೆ-ಮುಂದೆ ನೋಡುತ್ತಿಲ್ಲ. ಶಿಕ್ಷಣ ವ್ಯವಸ್ಥೆ ಎಷ್ಟು ಕೆಟ್ಟದ್ದಾಗಿದೆ ನೋಡಿ. ಆದ್ರೆ ಅಂಥವರಿಗೆ ಶಿಕ್ಷೆ ಮಾತ್ರ ಏನೂ ಇಲ್ಲ. ಕಂಬಿಯೊಳಗೆ ಒಂದು ಬಾರಿ ನಿಲ್ಲಿಸಿ, ಆಮೇಲೆ 'ಜಾಮೀನು' ಮೂಲಕ ಬಿಡುಗಡೆ ಮಾಡುವುದು. ಒಂದು ರೀತಿಯಲ್ಲಿ ಮನೋರಂಜನಾ ಪ್ರಹಸನದಂತೆ. ಆತ ಅಪರಾಧಿಯೆಂದು ತಿಳಿದ ಪರಿಣಾಮಕಾರಿ ಶಿಕ್ಷೆಯಿಲ್ಲ. ಆದ್ದರಿಂದ ಕೆಲವು ನೀಚ ಶಿಕ್ಷಕರು ಈ ಪ್ರವೃತ್ತಿಯನ್ನು ಮುಂದುವರಿಸುತ್ತಲೇ ಇದ್ದಾರೆ. ಅವರಿಗೆ ಗೊತ್ತು ಶಿಕ್ಷೆ ಎಷ್ಟಾದ್ರೂ ಅಷ್ಟೇ...ಹೇಗಾದ್ರೂ ಬಚಾವ್ ಖಂಡಿತ ಎಂದು. ಮತ್ಯಾಕೆ ಹೆದರಿಕೆ? ಅಧ್ಯಾಪಕರೊಬ್ಬರು ಬರೆದ ಲೇಖನ ಓದಿದ್ದೆ. ಸುಮಾರು ಒಂದು ವರ್ಷದ ಹಿಂದೆ. ಅವರು ಹೇಳಿದ್ದ ಪರಿ ಹೇಗಿತ್ತು ಅಂದ್ರೆ ಮಾಡೋ ಅನಾಚರಗಳೆಲ್ಲ ವಿದ್ಯಾರ್ಥಿಗಳದ್ದೇ..ಆದ್ದರಿಂದ 'ಗುರು' 'ಲಘು'ವಾಗುತ್ತಾನೆ ಅನ್ನೋ ಅರ್ಥದಲ್ಲಿ ಹೇಳಿದ್ರು. ಬಹುಶಃ ಶಿಕ್ಷಕರ ಇಂಥ ನೀಚ ವರ್ತನೆಗಳ ಬಗ್ಗೆ ಅವರಿಗಿನ್ನೂ ತಿಳಿದಿಲ್ಲವೆನಿಸುತ್ತೆ. ಅಂಥವರು ತಿಳಿದುಕೊಳ್ಳಲಿ, ನೀಚ ಶಿಕ್ಷಕರಿಗೆ ಒಂದಿಷ್ಟು ಉತ್ತಮವಾದುದನ್ನು ಕಲಿಸಿಕೊಡಲಿ ಎಂಬುದೇ ನನ್ ಆಶಯ.

'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಅಂದಿದ್ದಾರೆ. ಆದರೆ ಬಹಳ ಹಿಂದೆ ಈ ಮಾತಿಗೂ ಮಹತ್ವವಿತ್ತು, ಗುರುಗಳೂ ಹಾಗೇ ಇದ್ರು. ಆದರೆ ಇಂದು ಅದಕ್ಕೆ ತದ್ವಿರುದ್ಧ. ಆದರೆ ಓರ್ವ ಉತ್ತಮ ಶಿಕ್ಷಕನಿಗೂ ವಿದ್ಯಾರ್ಥಿ ಇಂದಿಗೂ ತಲೆಬಾಗುತ್ತಾನೆ ಅನ್ನೋದು ನಿತ್ಯ ಸತ್ಯ. ಆದ್ರೆ ಪರಿಫೂರ್ಣ ಶಿಕ್ಷಣ ನೀಡುವ ಕೆಲ್ಸ ಶಿಕ್ಷಕನದು. ಕೇವಲ ಹೊಟ್ಟೆಪಾಡಿಗೆ ದುಡಿಯುವವನು ಶಿಕ್ಷಕನಾಗುವ ಬದಲು ವ್ಯಾಪಾರಿಯಾಗುತ್ತಾನಷ್ಟೇ. ಆದ್ರೆ ಪರಿಸ್ಥಿತಿಯ ಅನಿವಾರ್ಯತೆ ಹಿಂಗಿದೆ ಎನ್ನಬಹುದು..ಪರಿಸ್ಥಿತಿ ಹೇಗೆ ಇರಲಿ ಒಳ್ಳೆ ಶಿಕ್ಷಣ ಬೇಕು ಅನ್ನೋದು ಎಲ್ಲರ ಆಶಯ. ಬೇಕು ಕೂಡ. ಹೀಗಿರುವಾಗ ಶಿಕ್ಷಣ ರಂಗಕ್ಕೆ ಹೊಲಸು ತಂದಿಡುವ ನೀಚ ಶಿಕ್ಷಕರು ಬೇಕಾಗಿಲ್ಲ. ಅಂಥವರಿಗೆ ಕಠಿಣ ಶಿಕ್ಷೆ ನೀಡಬೇಕು. ವಿದ್ಯಾರ್ಥಿಯೊಬ್ಬ ಬದುಕು ಕಳಕೊಂಡ್ರೆ ಮತ್ತೆ ರೂಪಿಸಲು ಸಾಧ್ಯವಿಲ್ಲ. ನಮಗೆ ಆದರ್ಶ ಶಿಕ್ಷಕ ಬೇಕು. ಕ್ಲಾಸಿನಲ್ಲಿ ಪಠ್ಯಪುಸ್ತಕದಲ್ಲಿದ್ದ ಯಾರ್ಯಾರ ಆದರ್ಶಗಳ ಬಗ್ಗೆ ಗಂಟೆಗಟ್ಟಲೆ ಕೊರೆದು, ಹೊರಗೆ ಬಂದು 'ನೀಚ ಪ್ರವೃತ್ತಿ'ಯನ್ನು ಹುಟ್ಟುಹಾಕುವ ಶಿಕ್ಷಕರು ಬೇಕಿಲ್ಲ. ಅಂಥವರ ವಿರುದ್ಧ ಸೂಕ್ತ ಕ್ರಮ ಅಗತ್ಯವಿದೆ. ಸಮಾಜದಲ್ಲಿ ಕೆಟ್ಟದ್ದನ್ನು ಹುಟ್ಟುಹಾಕುವ ಶಿಕ್ಷಕರನ್ನು ಸಮಾಜದ ಸಮಸ್ತರೂ ವಿರೋಧಿಸಬೇಕು. ಏನಂತೀರಿ?

ಕನಸಿನ ಶರಧಿಯಲಿ ಪುಟ್ಟದೊಂದು ಪಯಣ..

"ಕನಸುಗಳೇ ಹೀಗೆ..ಮನದ ಹೂಬನದಲ್ಲಿ ಅರಳಿದ ಕಾಲ ಕುಸುಮದಂತೆ, ಮಗದೊಮ್ಮೆ ವಸಂತದ ಬಿರುಬಿಸಿಲಿಗೆ ನೊಂದು ಬಾಡಿ ಹೋಗುವ ಹತಾಶ ಪುಷ್ಡದಂತೆ..". ಈ ಕವಿವಾಣಿ ಆಗಾಗ ನೆನಪಾಗುತ್ತದೆ. ಕನಸು!! ಎಂದ ತಕ್ಷಣ ಮನಸ್ಸು ಪುಟ್ಟದೊಂದು ಪ್ರಪಂಚದಲ್ಲಿ ಸುತ್ತಾಡುತ್ತೆ. ಹೃದಯಪಂಜರದಲ್ಲಿ ಭಾವಹಕ್ಕಿ ರೆಕ್ಕೆಬಿಚ್ಚಿ ಕುಣಿಯುತ್ತೆ. ಕಲ್ಲು-ಬಂಡೆಗಳೂ ಮನೋಹರವಾಗಿ ಗೋಚರಿಸುತ್ತವೆ. ಕತ್ತಲೂ ಬೆಳಕಾಗುತ್ತದೆ. ಅಮಾವಾಸ್ಯೆಯೂ ಹುಣ್ಣಿಮೆಯಾಗುತ್ತದೆ. ಈ ಜಗತ್ತು, ಈ ಬದುಕು ಎಲ್ಲವೂ ಹೀಗೆ..ಕನಸು, ಕಲ್ಪನೆ, ನಿರೀಕ್ಷೆಗಳ ಮೂಟೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತೊಂದಿದೆ. ಜಗತ್ತಿನ ನಿತ್ಯ ಕನಸುಗಳ ಸುತ್ತ ಸುತ್ತಾಡುವ ಕವಿ, ತನ್ನ ಕನಸಿಗೆ ಭಾವ-ಕಲ್ಪನೆಗಳ ಮೆರುಗು ನೀಡುತ್ತಾನೆ.
"ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು
ಕನಸಿಲ್ಲದ ದಾರಿಯಲ್ಲಿ ನಡೆಯಬಹುದೇ?" ಯಯಾತಿ ನಾಟಕದಲ್ಲಿ ಬಂದಿರುವ ಮಾತೊಂದು ಈಗ ನೆನಪಿಗೆ ಬರುತ್ತದೆ.

ಹೌದು! ಪ್ರತಿಯೊಬ್ಬನ ಬದುಕು ಕನಸುಗಳ ಸಪ್ತ ಸಾಗರ, ಭಾವನೆಗಳ ಆಗರ. ಭವಿಷ್ಯದ ಕುರಿತು ನಿರೀಕ್ಷೆಗಳಿರುತ್ತವೆ. ಆಸೆ-ಕನಸುಗಳ ಹೊತ್ತ ಮನುಷ್ಯ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಾನೆ ಅಮ್ಮನ ಮಡಿಲಲ್ಲಿ ಮಲಗಿರುವ ಪುಟ್ಟ ಕಂದನ ಮನದಲ್ಲೂ ಕನಸುಗಳಿರುತ್ತವೆ. ಭಿಕ್ಷಾಂದೇಹಿ ಎಂದು ಪುಟ್ ಪಾತ್ ನಲ್ಲಿ ಭಿಕ್ಷೆಗಾಗಿ ಕೈಒಡ್ಡಿ ನಿಂತಿರುವ ಭಿಕ್ಷುಕನ ಹೃದಯವೂ ಕನಸುಗಳ ಆಗರ. ಬೆವರು ಬವೆದು ಅನ್ನಕ್ಕಾಗಿ ದುಡಿವ ರೈತನ ಒಡಲಾಳದಲ್ಲೂ ಕನಸುಗಳಿರುತ್ತವೆ. ಹೌದು! ಸ್ನೇಹಿತರೇ ಯಾಕೋ ಕನಸುಗಳ ಬಗ್ಗೆ ಸುಮ್ ಸುಮ್ನೇ ಗೀಚೋಣ ಅನಿಸ್ತು. ನಿತ್ಯ ನನ್ ಬ್ಲಾಗಲ್ಲಿ ಏನಾದ್ರೂ ತುಂಬಿಸಬೇಕೆನ್ನುವ ಹಂಬಲ ನನ್ನದೊಂದು ಪುಟ್ಟ ಕನಸು. ಏನೋ ಬರೀಬೇಕು ಅದೇ ನನ್ ಖುಷಿಗಾಗಿ. ನೀವು ಓದುತ್ತಿರೆಂದು ನಾನು ಬರೆಯುತ್ತಿಲ್ಲ..ನನ್ ತೃಪ್ತಿಗಾಗಿ..ಬರೆಯುವ ತುಡಿತಕ್ಕಾಗಿ..ಇದೂ ನನ್ ಕನಸು. ಹೌದು! ಕನಸಿನ ಪ್ರಪಂಚವೇ ಒಂದು ಸುಮಧುರ ಲೋಕ, ಕನಸುಗಳು ಹೊಸ ಸಂಕಲ್ಪ, ಚಿಂತನೆಗಳಿಗೆ ರಹದಾರಿಯಾಗಬೇಕು. ದೇಶದೆಲ್ಲೆಡೆ ಅಟ್ಟಹಾಸಗೈಯುತ್ತಿರುವ ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರಗಳ ವಿರುದ್ಧ ಸಿಡಿದೇಳುವ ಕನಸು ನಮ್ಮದಾಗಬೇಕಿದೆ. ಇಂಥ ದುಷ್ಕೃತ್ಯಗಳಿಗೆ ಅಂತ್ಯಹಾಡುವ ಕನಸುಗಳು ನಮ್ಮದಾಗಬೇಕು. ಮುಗ್ಧಜನರ ನಂಬಿಕೆಗಳಿಗೆ ಕೊಡಲಿಯೇಟು ನೀಡಿರುವ ಜನಪ್ರತಿನಿಧಿಗಳ ಲಂಪಟತನಕ್ಕೆ ತೆರೆ ಎಳೆಯಬೇಕು.

"ಎಲ್ಲಾ ಕನಸುಗಳು ನಿಜವಾಗುತ್ತವೆ . ಅವುಗಳನ್ನು ಸಾಕಾರಗೊಳೀಸುವ ಆತ್ಮಸ್ಥೈರ್ಯ ಮತ್ತು ಪ್ರಯತ್ನ ನಮ್ಮಲ್ಲಿರಬೇಕು" ವಾಲ್ಟ್ ಡಿಸ್ನಿ ಮಾತಿದು. ಇನ್ನೊಂದೆಡೆ ಡಗ್ನಸ್ ಮಾಲೋಕ್ ಎಂಬ ಇಂಗ್ಲೀಷ್ ಕವಿ ಮನುಷ್ಯನ ಕನಸುಗಳ ಬಗ್ಗೆ ಹೀಗೆನ್ನುತ್ತಾನೆ "ರಾಜ ಬೀದಿಯಾಗಲು ಸಾಧ್ಯವಿಲ್ಲವಾದರೂ, ಕಾಲುದಾರಿಯಾಗಲು ಸಾಧ್ಯ; ಸೂರ್ಯನಾಗಲೂ ಸಾಧ್ಯವಿಲ್ಲದಿದ್ದರೂ, ನಕ್ಷತ್ರವಾಗಲು ಸಾಧ್ಯ". ಹೇಗಿದೆ ಅಲ್ವಾ ಈ ಮಾತು? ಇರಲಿ ಬಿಡಿ..ಕನಸು ನನಗೂ ಇದೆ..ನಿಮಗೂ ಇದೆ. ಕನಸಿನ ಪುಟ್ಟ ಪ್ರಪಂಚ ನಮ್ಮದಾಗಲಿ..ನಮ್ಮಲ್ಲೊಂದು ಕನಸಿನ ಹಕ್ಕಿಗೆ ರೆಕ್ಕೆಬಿಚ್ಚಿ ಹಾರಿಬಿಡೋಣ..ನಿಮ್ಮ ಕನಸಿಗೂ ಹಾಟ್ಸ್ ಆಫ್ ಕಣ್ರೀ.

Sunday, December 16, 2007

ಇದು ನ್ಯಾಯವೇ?

ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಹುಟ್ಟುಹಬ್ಬಕ್ಕೆ ನಮ್ಮ ಸರ್ಕಾರ ನಯಾಪೈಸೆ ಖರ್ಚು ಮಾಡಿಲ್ಲವಂತೆ. ಸರ್ಕಾರದ ಪರವಾಗಿ ಅಧಿಕೃತ ಜಾಹೀರಾತು ನೀಡುವ ಜಾಹೀರಾತು ಮತ್ತು ದೃಶ್ಯ ಪ್ರಸಾರ ನಿರ್ದೇಶನಾಲಯ ಅಕ್ಟೋಬರ್ 2ರ ಗಾಂಧೀ ಜಯಂತಿಗೆ 2.95 ಕೋಟಿ ಬಿಡುಗಡೆ ಮಾಡಿದ್ದರೆ, ಅದೇ ದಿನ ಹುಟ್ಟಿದ ಮಾಜಿ ಪ್ರಧಾನಿ ಹುಟ್ಟುಹಬ್ಬಕ್ಕೆ ಕವಡೆ ಕಾಸೂ ನೀಡಿಲ್ಲ ಅನ್ನೋ ಸತ್ಯ ಈಗ ಬಹಿರಂಗಗೊಂಡಿದೆ.

ಸಾಮಾಜಿಕ ಕಾರ್ಯಕರ್ತ ದೇವ್ ಆಶೀಶ್ ಭಟ್ಟಾಚಾರ್ಯ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಲ್ಲಿಸಿರುವ ಅರ್ಜಿಗೆ ಉತ್ತರಿಸಿರುವ ಕೇಂದ್ರ ಸರ್ಕಾರದ ಜಾಹೀರಾತು ಮತ್ತು ದೃಶ್ಯ ಪ್ರಸಾರ ನಿರ್ದೇಶನಾಲಯದ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ. ಜೈ ಕಿಸಾನ್, ಜೈ ಜವಾನ್ ಸಂದೇಶ ಹುಟ್ಟಿಕೊಂಡಿದ್ದೇ ಶಾಸ್ತ್ರೀಜಿ ಅವರಿಂದ. ಆದರೆ ಈ ಸಂದೇಶ ಸಾರುವುದಕ್ಕೆ ಸರ್ಕಾರ ಯಾವುದೇ ಆಸಕ್ತಿ ತೋರಿಸಿಲ್ಲ. ದೇಶದ ಎರಡನೇ ಪ್ರಧಾನಿಯಾಗಿ ಅತ್ಯಂತ ನಿಷ್ಟೆಯಿಂದ ಕೆಲಸ ಮಾಡಿದ್ವವರು ಶಾಸ್ತ್ರೀಜಿ. ಆದರೆ ಸರ್ಕಾರಕ್ಕೆ ಇವರ ನೆನಪೇ ಮರೆತುಹೋಗಿದೆ. ವಿದೇಶದಲ್ಲಿ ಸಾವುಂಡ ಏಕೈಕ ಪ್ರಧಾನಿ ಲಾಲ್ ಜೀ ಅವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ಕೇಂದ್ರ ಸರ್ಕಾರಕ್ಕೆ ನೆಹರೂ, ರಾಜೀವ್ ಗಾಂಧಿ, ಇಂದಿರಾಗಾಂಧಿ, ಅವರ ಹುಟ್ಟುಹಬ್ಬ ಬಹಳ ಬೇಗನೇ ನೆನಪಾಗುತ್ತದೆ. ಬೇಕಾದ್ರೆ ಒಂದು ವಾರಕ್ಕೆ ಮುಂಚೆನೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುವ ಬಗ್ಗೆ ಘೋಷಿಸಿಬಿಡುತ್ತಾರೆ. ಮಾತ್ರವಲ್ಲ ಇವ್ರ ಹುಟ್ಟುಹಬ್ಬದ ವಿಶೇಷವಾಗಿ ವಿವಿಧ ಯೋಜನೆಗಳನ್ನು ಜಾರಿಮಾಡಿಬಿಡುತ್ತಾರೆ. ಆದರೆ ಇದೇ ಸರ್ಕಾರಕ್ಕೆ ಲಾಲ್ ಜೀ ಅಂಥವರು ನೆನಪಾಗದಿರುವುದು ನಮ್ಮ ಧೀಮಂತ ಸರ್ಕಾರದ ದುರಂತ ಅನ್ನಬೇಕು. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ನೆನಪಾದ ಸರ್ಕಾರಕ್ಕೆ ಅದೇ ದಿನ ಹುಟ್ಟಿದ ಲಾಲ್ ಜೀ ಯಾಕೆ ನೆನಪಾಗುತ್ತಿಲ್ಲ? ಇದು ನಿರ್ಲಕ್ಷವಲ್ಲವೇ? ಅದೇ ಗಾಂಧಿ ಕುಟುಂಬದಲ್ಲಿ ಸತ್ತ ಎಲ್ಲರೂ ಯಾಕೆ ನೆನಪಾಗುತ್ತಾರೆ? ಇಂದು ಲಾಲ್ ಜೀ ಅಂಥವರನ್ನು ನೆನೆಸಿಕೊಳ್ಳುವುದು ಸ್ಕೂಲಲ್ಲಿರುವ ಪುಟ್ಟ ಮಕ್ಕಳು. ಏನು ಎತ್ತ? ಎಂದು ತಿಳಿದೇ ಇಲ್ಲದ ಪುಟ್ಟ ಮಕ್ಕಳು ಸ್ವಾತಂತ್ರ್ಯ ದಿನಾಚರಣೆ ಯಂದು 'ಲಾಲ್ ಬಹದ್ದೂರ್ ಶಾಸ್ತ್ರೀ ಜಿ ಕೆ ಜೈ' ಅಂದಾಗ ಮನಸ್ಸು ಖುಷಿಯಾಗುತ್ತದೆ. ಆದ್ರೂ ಗಾಂಧಿ ಕುಟುಂಬದವರಿಗೆ ಪಠ್ಯದಲ್ಲಿ ಕೊಟ್ಟಷ್ಟು ಪ್ರಾಧಾನ್ಯತೆ ಯಾವ ನಾಯಕರಿಗೂ ಕೊಡುತ್ತಿಲ್ಲ.

ಭಾರತ ಪ್ರಕಾಶಿಸುತ್ತಿದೆ! ಎಂದಾದರೆ ಅದು ಲಾಲ್ ಜೀ ಅಂಥ ತೆರೆಮರೆಯಲ್ಲಿ ಉಳಿದ ನಿಷ್ಠ ರಾಜಕಾರಣಿಗಳಿಂದ. ಆದರೆ ಇಂದು ಅವರಂಥವರನ್ನು ಜನರಿಂದ ಮರೆಯಾಗಿಸುವ ಪ್ರಯತ್ನ ಸರ್ಕಾರವೇ ಮಾಡುತ್ತಿದೆ. ಸುಭಾಷ್ ಚಂದ್ರ ಬೋಸ್ ದೇಶಕ್ಕಾಗಿ ಹೋರಾಡಿಯೇ ಇಲ್ಲ ಅನ್ನೋ ಮೂರ್ಖತನದ ವಾದ ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು. ಅವರ ಬಗ್ಗೆ ದಾಖಲೆಗಳೇ ಇಲ್ಲ ಅನ್ನಲಾಯಿತು. ಇಂದಿಗೂ ಅವರ ಸಾವು ನಿಗೂಢವೇ. ಇಂಥ ಮಹಾನ್ ವ್ಯಕ್ತಿಗಳ ಆದರ್ಶಗಳು ಏನಿದ್ದರೂ ಅವುಗಳು ರಾಜಕಾರಣಿಗಳ ಭಾಷಣಕ್ಕೆ ಭೂಷಣವಾಗುವುದು ನಿಜಕ್ಕೂ ವಿಪರ್ಯಾಸ. ಗಾಂಧೀಜಿಯ ಗ್ರಾಮೋದ್ದಾರದ ಬಗ್ಗೆ ಬಡಾಯಿ ಕೊಚ್ಚುವ ನಮ್ ಸರ್ಕಾರ ರೈತರ ಕೃಷಿ ಭೂಮಿಯಲ್ಲಿ ಎಸ್ ಯ ಝಡ್ ಸ್ಥಾಪನೆಗಾಗಿ ಅನ್ನದಾತರನ್ನೇ ಕೊಲ್ಲುತ್ತಿದೆ. ನೀವೇ ಹೇಳಿ ಇದು ನ್ಯಾಯವೇ?

Friday, December 14, 2007

ಗೌಡ್ರು ಕುಂಬಳ ಕಾಯಿ ಕಳ್ಳರೇ..?!

ರವಿಬೆಳಗೆರೆ ನಿರ್ದೇಶನದ 'ಮುಖ್ಯಮಂತ್ರಿ ಐ ಲವ್ ಯೂ' ಸಿನಿಮಾ ತೆರೆಕಾಣೋಕೆ ಮುಂಚೆಯೇ ನಮ್ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಸಂಬಂಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಅಂದಾಗ ಯಾಕೋ ನನಗೆ 'ಕುಂಬ್ಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡ್ಕೊಂಡ' ಎಂಬ ಗಾದೆ ಮಾತು ನೆನಪಾಗುತ್ತಿದೆ. ಥೂ! ಈ ನೆನಪನ್ನಾ ಬಿಟ್ಟಾಕು ಅಂದ್ರೂ ಮನಸ್ಸಲ್ಲಿ ಅದೇ. ಯಾಕಪ್ಪ ಈ ಹಿರಿಗೌಡ್ರು ಈ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ತಾರೆ ಅಂತ. ಬೆಳಗೆರೆ ವಿರುದ್ಧ ಮುನಿಸಿಕೊಂಡ ಗೌಡ್ರು 10 ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರಂತೆ. ಬೆಳಗೆರೆ ತಮ್ಮ ಕುಟುಂಬದ ಬಗ್ಗೆ ಪೂರ್ವಾಗ್ರಹಪೀಡಿತರಾಗಿ ಲೇಖನ ಮತ್ತು ಸಂದರ್ಶನಗಳ ಮೂಲಕ ಮಾನಹರಣ ಮಾಡಿದ್ದಾರೆ. 'ಮುಖ್ಯಮಂತ್ರಿ ಐ ಲವ್ ಯೂ' ಸಿನಿಮಾನ ನಿಲ್ಲಿಸಬೇಕೆಂಬುದು ಗೌಡ್ರ ವಾದ.

ಈಗ ವಿಷಯಕ್ಕೆ ಬರೋಣ. ನಿಜಕ್ಕೂ ಈ ಸಿನಿಮಾದಲ್ಲಿ 'ಕುಮಾರಸ್ವಾಮಿ ಐ ಲವ್ ಯೂ' ಅಂತ ಇದೆಯಾ? ಅಷ್ಟಕ್ಕೂ ಈ ಸಿನಿಮಾ ತೆರೆ ಕಂಡಿಲ್ಲ. ತೆರೆಕಾಣೋಕೆ ಇನ್ನೂ ದಿನವಿದೆಯಲ್ಲಾ? ಈಗ್ಲೇ ದೇವೇಗೌಡ್ರಿಗೆ ಈ ಸಿನಿಮಾದಲ್ಲಿ ಇರೋದು ನನ್ ಮಗ ಕುಮಾರನೇ ಅಂತ ಹೇಗೆ ಗೊತ್ತಾಯ್ತು? ಅಥವಾ ಮುಖ್ಯಮಂತ್ರಿ ಅಂದ್ರೆ ಅದು ಕುಮಾರಸ್ವಾಮಿ ಮಾತ್ರನಾ? ಈ ಹಿಂದೆ ಮುಖ್ಯಮಂತ್ರಿ ಯಾರೂ ಆಗಿಲ್ವಾ? ತೆರೆಕಾಣೋ ಮೊದ್ಲು ಸಿನಿಮಾದ ಭವಿಷ್ಯ ಹೇಳಲು ಹೊರಟ ಗೌಡ್ರು 'ಕುಂಬಳ ಕಾಯಿ ಕದ್ದವನ ಥರ ಯಾಕಾಡ್ತಾರೆ?

ಒಂದು ವೇಳೆ ಈ ಸಿನಿಮಾದ ಕತೆ ಮುಖ್ಯಮಂತ್ರಿಗಳ ಹಗರಣ, ಭ್ರಷ್ಟಾಚಾರ ಎಲ್ಲವನ್ನೂ ಒಳಗೊಂಡಿದ್ದರೆ(ಇನ್ನೂ ಸಿನಿಮಾ ತೆರೆಕಾಣದೆ ನಮಗೆ ಕತೆ ತಿಳಿಯೊಲ್ಲ) ದೇವೇಗೌಡ್ರು ಅಥವಾ ಕುಮಾರಸ್ವಾಮಿ ತಪ್ಪಿತಸ್ಥರು ಆಗಲ್ವಾ? ಇಲ್ಲವಾದ್ರೆ ಗೌಡ್ರು ಯಾಕೆ ತಲೆಕೆಡಿಸಿಕೊಳ್ಳಬೇಕು? ಮೊನ್ನೆ ಮೊನ್ನೆ ತನಕ ಅಧಿಕಾರ ಹಸ್ತಾಂತರ ನಾಟಕದಲ್ಲಿ ಆಧುನಿಕ ಭಸ್ಮಾಸುರನೆಂದು ಜನರಿಂದ ಕರೆಸಿಕೊಂಡ ದೇವೇಗೌಡ್ರಿಗೆ ಮತ್ತೆ ಜನರಿಂದ ಉಗಿಸಿಕೊಳ್ಳುವ ಆಸೆಯೇ? 'ಮುಖ್ಯಮಂತ್ರಿ ಐ ಲವ್ ಯೂ' ಅಂದ ತಕ್ಷಣ ನನ್ ಮಗನನ್ನೇ ಸಿನಿಮಾದಲ್ಲಿ ಬೊಟ್ಟು ಮಾಡಿ ತೋರಿಸಲಾಗಿದೆ ಎನ್ನುವ ದೇವೇಗೌಡ್ರ ಮಾತು ಸರಿಯೆಂದಾದರೆ, ಸಿನಿಮಾದಲ್ಲಿ ಹಗರಣಗಳ ಬಣ್ಣ ಬಯಲು ಮಾಡಿದ್ರೆ. ಈವರೆಗೆ ಬಿಜೆಪಿಯವರು ಜೆಡಿಎಸ್ ಮೇಲೆ ಮಾಡಿರುವ ಆರೋಪಗಳೆಲ್ಲಾ ಸತ್ಯ ಅಂತಾನೇ ನಂಬಬೇಕು. ಈವರೆಗೆ 26 ಮಂದಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಅಂದ ತಕ್ಷಣ ನನ್ ಮಗ, ನನ್ ಮಗ ಕುಮಾರನೇ ಅಂತ ಬೊಬ್ಬಿಡುವ ಈ ದೇವೇಗೌಡ್ರಿಗೆ 'ಕುಟುಂಬ ರಾಜಕಾರಣದ ಸೂತ್ರದಾರ' ಅನ್ನೋದ್ರಲ್ಲಿ ಯಾವ ತಪ್ಪುನೂ ಇಲ್ಲ ಬಿಡಿ. ತಮಾಷೆ ಅಂದ್ರೆ ಗೌಡ್ರ ಮಾನನಷ್ಟ ಮೊಕದ್ದಮೆಗೆ ಬೆಳಗೆರೆ ಪ್ರತಿಕ್ರಿಯಿಸಿದ್ದು ತಮಾಷೆಯಾಗಿದೆ. ಅದೇನಂದ್ರೆ "ಫಿಲಂ ಬಿಡುಗಡೆ ಆಗೋಕೆ ಮುಂಚೆಯೇ ಜೆಡಿಎಸ್ ಗಾಬರಿ ಕಂಡಾಗ ಮರುಕ ಆಗುತ್ತಿದೆ" ಎಂದು. ಏನಂತೀರಾ? ನನ್ ಮಾತು ಸುಳ್ಳನಿಸುವುದೇ?

ಹೀಗೊಂದು ಮದುವೆ, ಕರೆಯೋಲೆ

ನಾವು ಸೇವಿಸುವ ಆಹಾರ
ಗ್ರಾಮೀಣ ಮಹಿಳೆಯರ ಹಸಿವು ನೀಗಿಸಿದರೆ...
ನಾವು ಬೆಳಗುವ ಮಣ್ಣಿನ ದೀಪ
ಕುಂಬಾರರ ಬದುಕಿಗೂ ಬೆಳಕು ತಂದರೆ..
ನಾವು ಬಳಸುವ ಬಟ್ಟೆ
ಕೈ ಮಗ್ಗ ನೇಕಾರರ ಬಾಳು ಬೆಚ್ಚಗಾಗಿಸಿದರೆ..
ನಾವು ಕುಡಿಯುವ ಪಾನೀಯಗಳು
ರೈತರ ಹೊಟ್ಟೆ ತಣ್ಣಗಾಗಿಸಿದರೆ..
ನಾವು ದಿನನಿತ್ಯ ಕೊಂಡುಕೊಳ್ಳುವ ವಸ್ತುಗಳು
ಸ್ಥಳೀಯರ ಜೀವನ ನಿರ್ವಹಣೆಗೆ ದಾರಿಯಾದರೆ..
ದೇಶ ಸೇವೆ ಮಾಡಲಿಲ್ಲವೆಂಬ ಕೊರಗೇಕೆ?!! ಸ್ವದೇಶಿ ಬಳಸೋಣ, ದೇಶ ಉಳಿಸೋಣ. ಈ ಮಾತು ಎಲ್ಲಿಂದ ಅಂಥ ಆಶ್ಚರ್ಯನಾ? ಒಂದು ಮದುವೆ ಕಾಗದಲ್ಲಿದ್ದ ಮಾತುಗಳು. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗುವ ಸಂದರ್ಭಗಳು ತೀರ ಕಡಿಮೆಯಾದರೂ, ಮದುವೆ ಕರೆಯೋಲೆಗಳನ್ನು ವಿವಿಧ ಬಣ್ಣದಲ್ಲಿ, ವೈವಿಧ್ಯಮಯವಾದ ವಿನ್ಯಾಸಗಳಲ್ಲಿ ಮಾಡಿಸುವವರು ಇದ್ದಾರೆ. ಮಂಗಳೂರಿನ ಜಯಪ್ರಕಾಶ್ ಮತ್ತು ನಮಿತ ಎಂಬುವವರ ಮದುವೆ ಕರೆಯೋಲೆಯಿದು. ಇಷ್ಟು ಮಾತ್ರವಲ್ಲ 'ಪ್ಲಾಸ್ಟಿಕ್ ಅಂದ್ರೆ ವರವಲ್ಲ, ಶಾಪ' ಎಂಬ ಒಕ್ಕಣೆಯೊಂದಿಗೆ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳು, ಆಲ್ಕೋಹಾಲ್ ನಿಂದ ಆಗುವ ದುಷ್ಟರಿಣಾಮಗಳು ಎಲ್ಲವನ್ನು ಷಟ್ಬುಜ ಆಕಾರದ ಕರೆಯೋಲೆಯಲ್ಲಿ ಸುಂದರವಾಗಿ ಮುದ್ರಿಸಲಾಗಿತ್ತು. ಇಷ್ಟು ಮಾತ್ರವಲ್ಲ ಅವರ ಮದುವೆ ನಡೆದಿದ್ದು ತೀರ ವಿಭಿನ್ನವಾಗಿ. ಮದುವೆಯಲ್ಲಿ ಕಿವಿಗೆ ಬಡಿಯುವ ಅಬ್ಬರದ ಪಾಶ್ವಾತ್ಯ ಸಂಗೀತ ಇರಲಲ್ಲ, ಬದಲಾಗಿ ದಾಸರ ಪದಗಳು, ಯಕ್ಷಗಾನ ಮದುವೆಗೆ ಬಂದವರ ಮನಸ್ಸಿಗೆ ಮುದನೀಡಿತ್ತು.

ಈ ಮದುವೆ ಬಗ್ಗೆ ಬರೆದಾಗ ನಂಗೆ ಇತ್ತೀಚೆಗೆ ನಡೆದ ಪ್ರಮೀಳಾ ಕಾಪಿಕಾಡ್ ಎಂಬುವವರ ಮದುವೆಯ ನೆನಪಾಯಿತು. ಅದು ಇನ್ನೂ ವಿಶಿಷ್ಠ. ಈ ಮದುವೆಗೆ ಯಾವುದೇ ರೆಕಾರ್ಡಿಂಗ್ ಮಾಡಿರುವ ಚಿತ್ರಗೀತೆಗಳು ಅಥವಾ ಇನ್ಯಾವುದೇ ಗೀತೆಗಳನ್ನು ಬಳಸಿಲ್ಲ. ಮದುವೆಗೆ ಬಂದ ಬಂಧುಗಳನ್ನು ಸ್ವಾಗತಿಸಿದ್ದು ಬೆಲ್ಲದ ಪಾನಕ ಮತ್ತು ದ್ರಾಕ್ಷಿರಸ. ಯಾವುದೇ ಶಾಮಿಯಾನ ಬಳಸದೆ, ಬರೇ ಮಡಲು ಮತ್ತು ವೀಳ್ಯದೆಲೆ ಚಪ್ಪರ. ಬಂದವರನ್ನು ಮಾತಿನ ಮೂಲಕ ಸ್ವಾಗತಿಸಲು, ವಧು-ವರರ ಬಗ್ಗೆ ಒಂದಿಷ್ಟು ಪರಿಚಯಿಸಲು, ಧಾರಾಕಾರ್ಯಕ್ರಮ, ಒಂದಿಷ್ಟು ಬಿಸಿಬಿಸಿ ಜೋಕ್ಸ್ ಎಲ್ಲಕ್ಕೂ ಒಬ್ಬ ನಿರೂಪಕ, ಒಂದೆಡೆ ಸುಗಮ ಸಂಗೀತ, ನಂತರ ಮಕ್ಕಳ ಯಕ್ಷಗಾನ ಮದುವೆಗೆ ಬಂದ ಅತಿಥಿಗಳಿಗೆ ಖುಷಿನೀಡಿತು. ಇಷ್ಟು ಮಾತ್ರವಲ್ಲ ಪ್ರಮೀಳಾ ಅವರು ಬರೆದಿರುವ ಕವನ ಸಂಕಲನವೂ ಅಲ್ಲಿ ಬಿಡುಗಡೆ ಮಾಡಲಾಯಿತು.

ಇಂಥ ಮದುವೆಗಳು, ಸಾಮಾಜಿಕ ಕಳಕಳಿಯುಳ್ಳ ಮದುವೆ ಕರೆಯೋಲೆಗಳು ತೀರ ಅಪರೂಪ. ಮದುವೆನ್ನು ಅದ್ಧೂರಿಯಾಗಿ ನಡೆಸಿದ್ರೇನೇ ಗೌರವ ಅಂದುಕೊಂಡವರ ನಡುವೆ ಇಂಥ ಅಪೂರ್ವ ಜನರನ್ನು ಕಂಡಾಗ ಖುಷಿಯಾಗುತ್ತೆ. ಮದುವೆ ಕಾಗದದಲ್ಲಿ ಈ ರೀತಿಯ ನುಡಿಗಳನ್ನು ಬರೆದ್ರೆ ಒಂದು ರೀತಿಲಿ ಅದೊಂದು ಬಗೆಯ ಜಾಗೃತಿಯೇ. ಸಾಮಾಜಿಕ ಜಾಗೃತಿಗಾಗಿ ಕೋಟಿಗಟ್ಟಲೆ ಹಣ ನೀರಿನಂತೆ ಖರ್ಚು ಮಾಡುವ ಬದಲು, ಈ ರೀತಿಯಲ್ಲಿ ಮಾಡಿದ್ರೆ ತುಂಬಾ ಒಳ್ಳೆಯದು ಅನಿಸುತ್ತೆ. ರಾತ್ರೀಯಿಡೀ ಮೂಗಿನತನಕ ಕುಡಿದು, ಎಂಜಾಯ್ ಮದುವೆಗಳಿಗಿಂತ ಯಕ್ಷಗಾನ ನೋಡ್ತಾ ಕೂರೋದೇ ಚೆನ್ನ. ನಂಗಂತೂ ಈ ಮದುವೆ, ಮದುವೆ ಕರೆಯೋಲೆಗಳು ತುಂಬಾ ಇಷ್ಟವಾದುವು. ನೋಡೋಣ ಮುಂದೆ ನಮ್ ಮದುವೆ ಹೇಗೆ ಮಾಡೋದು ಅಂತ? ನಾನಂತೂ ಆ ಬಗ್ಗೆ ಸಕತ್ ಡೀಪ್ ಆಗಿ ಥಿಂಕ್ ಮಾಡ್ತಾ ಇದ್ದೀನಿ ಕಣ್ರೀ.

Thursday, December 13, 2007

ಲಂಚ! ಲಂಚ! ಲಂಚ!

ಏನಪ್ಪಾ ಅಂದ್ರೆ ಇವತ್ತು ನಾನು ನನ್ ಫ್ರೆಂಡ್ ಇಲ್ಲೇ ಪಕ್ಕದ ಪೊಲೀಸ್ಸ್ಟೇಶನ್ಗೆ ಹೋಗಿದ್ದೀವಿ. ಯಾಕೆ ಹೋಗಿದ್ರೀ ಅಂದ್ರೆ ನಮ್ ಫ್ರೆಂಡ್ ಮೊಬೈಲ್ ಕಳಕೊಂಡ್ರು. ಹಂಗೆ ಕಂಪ್ಲೇಟ್ ಕೊಡೋಕೆ ಹೋದ್ವಿ. ಅಲ್ಲಿಗೆ ನಾವು ಹೋದಾಗ ನಮಗಿಂತ ಮೊದ್ಳು ಒಬ್ರು ಕಂಪ್ಲೇಟ್ ಕೊಡೋಕೆ ಹೋಗಿದ್ರು. ಕಂಪ್ಲೇಟ್ ತೆಗೆದುಕೊಳ್ಳುತ್ತಿದ್ದ 'ಖಾಕಿ ಧಾರಿ' ಕಂಪ್ಲೇಟ್ ಕೊಡೋವವತ್ರ ಏನೋ ಮೂಕ ಭಾಷೇಲಿ ಹೇಳ್ತಾ ಇದ್ದ. ಆಮೇಲೆ ಅವ್ರು ಹಣ ತೆಗೆದು ಅವನ ಕೈಗಿಡುತ್ತಿದ್ದರು. ಕೊಡೋ ದಾನಿಗಳೆಲ್ಲಾ ನೂರರ ನೋಟು ಕೈಗೆ ತುರುಕಿ ಹೋಗುತ್ತಿದ್ದರು.

ನಾವಿರುವಾಗ್ಲೇ ಒಬ್ಬ 'ಜಂಟಲ್ ಮ್ಯಾನ್' ಅಲ್ಲಿಗೆ ಬಂದಿದ್ರು. ನೋಡೋಕೆ ಸಭ್ಯ. 'ಖಾಕಿ ಧಾರಿ' ಅವರನ್ನು ನೋಡಿದ ತಕ್ಷಣ ಕೈಹಿಡಿದು ಕುಳ್ಳಿರಿಸಿದ. ಅದಕ್ಕಿಂತ ಮುಂದೆ ಬಂದ ಸಾಮಾನ್ಯರಂತೆ ಕಾಣುತ್ತಿದ್ದ ಯಾರಿಗೂ ಇಂಥ ಸ್ವಾಗತ ಇರಲಿಲ್ಲ ಬಿಡಿ. ಆ ಜಂಟಲ್ಮ್ಯಾನ್ ಏನೋ ಅರ್ಜಿ ಕೊಟ್ಟು, ನೂರರ ಒಂದಿಷ್ಟು ನೋಟು ಕೊಟ್ಟ. ಹೋಗುವಾಗ ಆ ಜಂಟಲ್ ಮ್ಯಾನ್ ಅಟ್ ಲೀಸ್ಟ್ ಥ್ಯಾಂಕ್ಸ್ನೂ ಹೇಳಿಲ್ಲ, ಬದಲಾಗಿ ಈ ಖಾಕಿಧಾರಿ ಎದ್ದು ಕೈಕುಲುಕಿ ಕಳಿಸಿದ.

ನಂತ್ರ ನಮ್ ಸರದಿ. ನಮ್ಮ ಡಿಟೈಲ್ಸ ಎಲ್ಲಾ ಕೇಳಿದ. ನಾವು ಹೀಗೆ ಪತ್ರಿಕೇಲಿ ಕೆಲ್ಸ ಮಾಡ್ತೀವಿ, ಎಂದೆಲ್ಲಾ ಹೇಳಿದಾಗ ಪಿಳಿಪಿಳಿ ಕಣ್ಣು ಬಿಡ್ತಾ ನಾವು ಕೊಟ್ಟ ಅರ್ಜಿನಾ ತೆಕೊಂಡು ತೆಪ್ಪಗೆ ಕೂತ. ಹಣಕ್ಕೂ ಕೈಚಾಚಿಲ್ಲ, ಎದ್ದು ನಿಂತು ಬೈ ಅಂದಿಲ್ಲ. ಬಿಟ್ಟ ಕಣ್ಣುಗಳಿಂದ ನಮ್ಮನ್ನೇ ನೋಡುತ್ತಿದ್ದ.

ಇದೇನು ಸ್ಪೇಷಲ್ಲಾ? ಅಂದುಕೊಂಡಿರಬಹುದು. ಹೌದು! ಇದು ಸ್ಪೇಷಲ್ ಅಲ್ಲ. ಯಾಕೆಂದ್ರೆ ಪೊಲೀಸ್ ಸ್ಟೇಷನ್ ಆಗ್ಲೀ, ಸ್ಲೂಲು ಅಥವಾ ಕಂದಾಯ ಕಚೇರಿಗಳೇ ಆಗ್ಲೀ ಎಲ್ಲೇ ಹೋದ್ರು ಈ ರೀತಿ ಹಣ ನುಂಗುವ ಖದೀಮರು ಇದ್ದೇ ಇದ್ದಾರೆ. ನಂಗಿನ್ನೂ ನೆನಪಿದೆ, ನಂಗೊಂದು ಸಲ ಆದಾಯ ಸರ್ಟಿಫಿಕೇಟ್ ತರಬೇಕಾದ್ರೆ ನಮ್ಮಮ್ಮನ ಹಣಕ್ಕಾಗಿ ಆ ಅಧಿಕಾರಿಗಳು ಸತಾಯಿಸಿದ್ದು. ನಂಗೆ ಆ ಖಾದಿಧಾರಿ ಹಣ ತೆಕೊಂಡ ಅನ್ನೋದಕ್ಕಿಂತಲೂ ಕುತೂಹಲ ಅನಿಸಿದ್ದು ಮೂಕಭಾಷೇಲಿ ಆತ ಕೇಳಿದ ರೀತಿ. ಪಕ್ಕದಲ್ಲೇ ನಿಂತ ನನಗೆ ಆತನ ಮುಖಕ್ಕೆ ಉಗಿಯೋಣ ಅನಿಸ್ತು. ನಾನಲ್ಲಿ ನಿಂತ ಕೇವಲ 10 ನಿಮಿಷದಲ್ಲಿ ಕನಿಷ್ಠ ಅಂದ್ರೆ 500ರೂಪಾಯಿ ಪಡೆದ ಆ ಖಾದಿಧಾರಿ ಹಾಗಾದ್ರೆ ಇಡೀ ದಿನದಲ್ಲಿ ಮಾಡುವ ಹಣವೆಷ್ಟು? ಅದೂ ಆತ ಸಾಮಾನ್ಯರಂತೆ ಕಾಣೋ ಜನಗಳು ಅಲ್ಲಿ ಹೋದ್ರೆ ಆತ ಸಿಡಸಿಡ ಅನ್ತಾನೆ, ಅದೇ ಕಿಸೆಗಟ್ಟಿದೆ ಅಂತ ಕಂಡ್ರೆ ತಿಂಡಿಗಾಗಿ ಬಾಯಲ್ಲಿ ನೀರೂರಿಸುವ ನಾಯಿಯಂತೆ ಕಾಣ್ತಾನೆ.

ಹೆಚ್ಚಾಗಿ ಸಿನಿಮಾದಲ್ಲಿ ಪೊಲೀಸರನ್ನು ತೀರ ಕೆಟ್ಟದ್ದಾಗಿ ತೋರಿಸಲಾಗುತ್ತೆ. ದುಡ್ಡಿಗಾಗಿ ನಾಲಗೆ ಚಾಚುವ, ಹುಡುಗ್ರೀರ ಕಂಡಾಗ ಮಾಡೋ ರೀತಿ ಇದನ್ನೆಲ್ಲಾ ಕಂಡಾಗ ಛೇ! ಪೊಲೀಸರನ್ನ ಈ ರೀತಿ ತೋರಿಸಬಾರದಿತ್ತು ಅನಿಸುತ್ತೆ. ಆದ್ರೆ ಒಳ್ಳೆಯರು ಅನ್ನೋರು ಇದ್ರೆ ನೂರರಲ್ಲಿ ಒಬ್ರು ಮಾತ್ರ. ಎಲ್ಲಿ ಹೋದ್ರು ಲಂಚ! ಲಂಚ! ಲಂಚ! ಪೊಲೀಸರನ್ನ ಸಮಾಜ ರಕ್ಷಕರು ಅನ್ತಾರೆ, ಆದ್ರೆ ಮಾಡೋದು ಮಾತ್ರ ಎಂತ ಹಲ್ಕ ಕೆಲ್ಸ ನೋಡಿ.

ಕನಸು

ಬದುಕು ಸಾವಾಗುವ ಮುನ್ನ
ನಾ ಅರಳಿ ಹೂವಾಗಬೇಕು
ಜಗಕೆ ಬೆಳಕಾಗಬೇಕು.

ಪ್ರಪಂಚದ ಪರಿಧಿಯಲಿ
ಅಲೆಗಳ ಶರಧಿಯಲಿ
ಕೊಚ್ಚಿಹೋಗುವ ಮುನ್ನ..
ಅರಳಿ ಹೂವಾಗಬೇಕು

ಪ್ರತಿ ಹೃದಯಕೂ ತಂಪೆರೆದು
ಪ್ರೀತಿಗಾಗಿ ಹಂಬಲಿಸಿ
ಅದು ಸಿಗದಾಗ
ಕೊರಗಿ ಮರುಗಿದರೂ
ಜಗಕೆ ಬೆಳಕಾಗಬೇಕು

ಲೋಕದಲಿ ಕಾಣುವ
ಸತ್ಯ-ಮಿಥ್ಯಗಳ ನಡುವೆ
ಸಿಕ್ಕಿ ನಲುಗಿದರೂ
ನನ್ನೆದೆಯ ದೃಢವಾಗಿಸಿ
ಬದುಕೆಂಬ ತೋಟದಲಿ
ಅರಳಿ ಹೂವಾಗಬೇಕು

Wednesday, December 12, 2007

ಕುರ್ಚಿಗಾಗಿ ಮುನಿಸು!!

ಅಂತೂ-ಇಂತೂ ರೈಲು ಬಂತು. ಮೊನ್ನೆ ಡಿಸೆಂಬರ್ 8ರಂದು ಬೆಂಗಳೂರು-ಮಂಗಳೂರು ರೈಲು ಆರಂಭವಾಯಿತು. ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಬಂದು ರೈಲಿಗೆ ಚಾಲನೆ ನೀಡಿಯೂ ಆಯಿತು. ಅಂತೂ ಕೊನೆಗೂ ಬೆಂಗಳೂರು-ಮಂಗಳೂರು ಪ್ರಯಾಣ ಚುಕ್ ಬುಕ್ ರೈಲಿನಲ್ಲಿ ಆಗಬೇಕೆಂಬ ಬಹುದಿನಗಳ ಆಸೆ ನೆರವೇರಿದೆ. ಈ ನಡುವೆ ಒಂದು ತಮಾಷೆಯ ಸಂಗತಿ ನಿಮಗೆ ಹೇಳುತ್ತೇನೆ ಕೇಳಿ. ಈ ರೈಲು ಉದ್ಘಾಟನಾ ಸಮಾರಂಭ ನಡೆದಿದ್ದು ಮಂಗಳೂರಿನಲ್ಲಿ. ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೇಲಿ ಉಡುಪಿ ಸಂಸದೆ ಮನೋರಮಾ ಮಧ್ವರಾಜ್ ಹೆಸರು ಇರಲಿಲ್ಲವಂತೆ. ಹಾಗಂತ ಅವರು ತೆಪ್ಪಗೆ ಕೂತಿದ್ದಾರೆ? ಇಲ್ಲ, ಎಲ್ಲ ಗಣ್ಯರ ಜೊತೆ ವೇದಿಕೆಯಲ್ಲಿ ಕೂರುವುದು ಬಿಟ್ಟು, ಸಭಿಕರ ಗ್ಯಾಲರಿಯಲ್ಲಿ ಕೂತ್ರಂತೆ. ಕರೆದ್ರೂ ಬರಲಿಲ್ಲವಂತೆ. ಕೊನೆಗೂ ಲಾಲು ಕರೆದರೂ ಜಗ್ಗದ ಮನೋರಮಾ ಸಭಿಕರ ನಡುವೆ ಕೂತೇ ವೇದಿಕೆಯಲ್ಲಿದ್ದವರ ಭಾಷಣ ಕೇಳಿದ್ರಂತೆ! ಈ ಸಭೆಗೆ ನಾನೇನು ಹೋಗಿಲ್ಲ ಬಿಡಿ, ಆದರೆ ನನ್ನದು ಪ್ರಶ್ನೆ ಅದಲ್ಲ, ಅಲ್ರೀ ಆಹ್ವಾನ ಪತ್ರಿಕೇಲಿ ಹೆಸ್ರು ಮುಖ್ಯವೇ ಎಂಬುದು ನನ್ ಪ್ರಶ್ನೆ! ನಮ್ ರಾಜಕಾರಣಿಗಳಿಗೆ ಕಾಲಿಗೊಂದು ಆಳು, ಕೈಗೊಂದು ಆಳು, ಅವರು ಬರುವಾಗ ಆರತ್ತಿ ಬೆಳಗಿ ಸ್ವಾಗತಿಸಬೇಕು, ಕತ್ತುಬಗ್ಗಿಸಿ ನಮಸ್ಕಾರ ಅನ್ನಬೇಕು,
ಇಲ್ಲಾಂದ್ರೆ ಅವ್ರು ಮುನಿಸಿಕೊಳ್ತಾರೆ, ಸಭಾತ್ಯಾಗ ಮಾಡ್ತಾರೆ, ಕೊನೆಗೂ ಬೀದಿಗಿಳಿದು ಕೂಗಾಡಕ್ಕೂ ಶುರು ಮಾಡ್ತಾರೆ. ಇದೆಲ್ಲ ನಡೆದಿರುವುದು ಕೇವಲ ಆಹ್ವಾನ ಪತ್ರಿಕೇಲಿ ಹೆಸ್ರು ಇಲ್ಲದ್ದಕ್ಕೋ, ವೇದಿಕೇಲಿ ತನಗೂ ಒಂದು ಕುರ್ಚಿ ಇಡದ್ದಕ್ಕೋ ಅಥವಾ ಊಟಕ್ಕೆ ಕರೆಲಿಲ್ಲ ಅನ್ನೋದಕ್ಕೂ ಇಂಥ ಸಿಲ್ಲಿ ವಿಷ್ಯಗಳಿಗೆ ಜಗಳವಾಡೊದು, ಸಭಾತ್ಯಾಗ ಮಾಡೋದ್ರಲ್ಲಿ ನಮ್ 'ಜನನಾಯಕ'ರು ನಿಸ್ಸೀಮರು ಬಿಡಿ. ಇದಕ್ಕೆಲ್ಲಾ ಇಷ್ಟು ರಾದ್ಧಾಂತ ಮಾಡುವ ನಮ್ಮ ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಷ್ಟು ತಲೆಬಿಸಿ ಮಾಡ್ಕೋತಾರೆಯೇ? ನಮ್ಮದೇ ಊರಿನ ಜನಪ್ರತಿನಿಧಿಯೊಬ್ಬನ ಬಳಿ ನಾವೇ ಹೋಗಿ ಮಾತಾಡಬೇಕಾದ್ರೆ 'ಅರ್ಜಿ' ನೀಡಿ ಅಪ್ಪಣೆ ಪಡೆದು ಅವನತ್ರ ಮಾತಾಡ್ಬೇಕು. ಇಲ್ಲಾಂದ್ರೆ ಜಪ್ಪಯ್ಯ ಅಂದ್ರು ಆತ ಮುಖವೆತ್ತಿಯೂ ನೋಡಲ್ಲ ಬಿಡಿ. ಆಹ್ವಾನ ಪತ್ರಿಕೆ ನೀಡಿಲ್ಲ, ಹೆಸರು ಬರೆದಿಲ್ಲ, ಊಟಕ್ಕೆ ಕರೆದಿಲ್ಲ, ಸ್ವಾಗತ ಮಾಡಿಲ್ಲ ಅಂತ ಸಿಡ ಸಿಡ ಎನ್ನುವವರು, ತಮ್ಮದೇ ಊರಿನ ಕಾಲುಸೇತುವೆ ಬಗ್ಗೆ ಬೊಬ್ಬಿಡಲಿ ನೋಡೋಣ. ಓರ್ವ ಜನನಾಯಕನಿಗೆ ಬೇಕಾಗಿರುವುದು ಅದ್ದೂರಿಯ ಗೌರವವಲ್ಲ, ಆತ ಮಾಡಬೇಕಾಗಿರುವುದು ಅಭಿವೃದ್ದಿಯ ಕೆಲಸ. ಜನಸಾಮಾನ್ಯನ ನಡುವೆ ಕೂ ತಕ್ಷಣ ಆತನೇನು ಚಿಕ್ಕವನಾಗಿಬಿಡ್ತಾನಾ? ಒಂದು ವೇಳೆ ಎಷ್ಟೇ ದೊಡ್ಡ ನಾಯಕನೇ ಆಗಿರಲಿ, ಜನಸಾಮನ್ಯರೇ ಆತನನ್ನು ಆರಿಸಿ ಕಳಿಸಿದ್ದಲ್ವಾ? ಆದರೆ ನಮ್ಮ ರಾಜಕಾರಣಿಗಳಿಗೆ ಬೇಕಾಗಿರುವುದು ಪ್ರಚಾರ, ಕುರ್ಚಿ ಮತ್ತು ಹಣ! ಮಾತ್ರ. ಆದ್ರಿಂದ ಅವರು ಎಲ್ಲೇ ಹೋದ್ರೂ ಈ ಮೂರಕ್ಕೆ ಹೋರಾಡುತ್ತಾರೆ ಅಷ್ಟೇ. ಏನಂತೀರಿ?

Friday, December 7, 2007

ಮತ್ತೆ 'ರಾಮ ರಾಜಕೀಯ'?!

"ರಾಮ ಇರಲೇ ಇಲ್ಲ, ಅವನು ಕವಿಗಳ ಕಲ್ಪನೆ ಮಾತ್ರ"-ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಹೊಸ ಬಾಂಬ್ ಇದು. ಕರುಣಾನಿಧಿ "ರಾಮ ಇರಲಿಲ್ಲ. ಪೌರಾಣಿಕ ಪಾತ್ರವಾಗಿದ್ದ ರಾಮ ಮಹಾ ಹೆಂಡ ಕುಡುಕನಾಗಿದ್ದ" ಎಂದು ಗದ್ದಲ ಎಬ್ಬಿಸಿದ ಬಿಸಿ ಇನ್ನೂ ಪೂರ್ತಿ ಆರಿಹೋಗಿಲ್ಲ. ಈಗ ಬುದ್ದದೇವ್ ಮತ್ತೆ 'ರಾಮ'ನನ್ನು ಹಿಡ್ಕೊಂಡಿದ್ದಾರೆ.ಬಹುಶಃ ನಮ್ಮ 'ಮಂತ್ರಿ ಮಹಾಶಯ'ರಿಗೆ ವಿವಾದವೆಬ್ಬಿಸಲು ರಾಮ ಬಿಟ್ಟರೆ ಬೇರ್ಯಾರು ಸಿಗಲ್ಲ ಅನಿಸುತ್ತೆ ನಿಜಕ್ಕೂ ರಾಮ ಇದ್ದಾನೆ/ ಅಥವ ಇಲ್ಲ ಈ ಪ್ರಶ್ನೆಯ ಅಗತ್ಯವಿದೆಯೇ? ರಾಮ ಇದ್ದಾನೋ ಇಲ್ಲವೋ? ಆದರೆ ಭಾರತೀಯರ ಸನಾತನ ಹಿಂದೂ ಧರ್ಮದಲ್ಲಿ 'ರಾಮ'ನಿಗೆ ಅಗ್ರಸ್ಥಾನ ಇದ್ದೇ ಇದೆ. ರಾಮನೇ ಆದರ್ಶ. ರಾಮ ಇದ್ದಾನೋ ಇಲ್ಲವೋ ಎಂಬ ಪ್ರಶ್ನೆಗಿಂತ ಹೆಚ್ಚಾಗಿ ರಾಮನ ಅಸ್ತಿತ್ವದ ಬಗ್ಗೆ ಜನರಿಗೆ ನಂಬಿಕೆಯಿದೆ ಅನ್ನೋದೇ ನಿತ್ಯ ಸತ್ಯ. ಹೀಗಿರುವಾಗ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ನಿಜಕ್ಕೂ ಕರುಣಾನಿಧಿ ಅಥವಾ ಭಟ್ಟಾಚಾರ್ಯ ಅವರ 'ಅತಿ ಮೂರ್ಖತನ' ವಲ್ಲದೇ ಇನ್ನೇನೆಂದು ಹೇಳಲಿ?

'ಎಸ್ಇಝಡ್' ಯೋಜನೆಯ ಫಲವಾಗಿ ಪಶ್ವಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ 'ರಕ್ತದೋಕುಳಿ' ದೇಶವನ್ನೇ ನಡುಗಿಸಿದೆ. ಎಷ್ಟೋ ಬಡಜನರು ಬದುಕು ಕಳೆದುಕೊಂಡಿದ್ದಾರೆ. ಅಲ್ಲಿ ನಡೆದಿರುವ ಘೋರ ದುರಂತಕ್ಕೆ ಬಲಿಯಾದ ಮುಗ್ಧ ಬಡಜನರ ಸುಟ್ಟ ದೇಹಗಳು ಇನ್ನೂ ಕಾಣಸಿಗುತ್ತವೆ. ಇಂಥ ಪರಿಸ್ತಿತಿ ತನ್ನದೇ ನೆಲದಲ್ಲಿರುವಾಗ, ಈ ಬಗ್ಗೆ ಒಂದಿಷ್ಟು ಯೋಚಿಸದೆ 'ರಾಮ'ನ ಬಗ್ಗೆ ಮಾತಾಡಿ 'ಉರಿಯುತ್ತಿರುವ ಬೆಂಕಿಗೆ ತುಪ್ಪ' ಸುರೀತಾರಲ್ಲಾ? 'ಎಂಥ ಬಾಲಿಶತನವಿದು?!

ಭಟ್ಟಾಚಾರ್ಯ ತನ್ನ ರಾಜ್ಯದ ಬಗ್ಗೆ ಚಿಂತಿಸಿ, ನಂತರ 'ರಾಮ ರಾಜಕೀಯ' ಮಾಡಿದ್ದರೆ ಒಳ್ಳೆಯದು. ಬಿಜೆಪಿ ಪಕ್ಷವನ್ನು ಕೆದಕಲು 'ರಾಮ'ನನ್ನು ರಾಜಕೀಯದಲ್ಲಿ ಬಳಸಿಕೊಳ್ಳುತ್ತಾರೆಂಬುದನ್ನು ಯಾರಿಗೂ ಹೇಳಬೇಕಾಗಿಲ್ಲ. ಇನ್ನೊಂದು ಪಕ್ಷದ ಬಗ್ಗೆ ಇರುವ ದ್ವೇಷವನ್ನು ತೀರಿಸಿಕೊಳ್ಳಲು ಈ ರೀತಿ ಮಾತಾಡುವುದು ಎಷ್ಟು ಸರಿ? ಜನರ ನಂಬಿಕೆಗೆ ಕೊಡಲಿಯೆಟು ಅಲ್ಲವೇ? ಭಟ್ಟಚಾರ್ಯ ಮೊದಲು ತನ್ನ ರಾಜ್ಯದ ಬಗ್ಗೆ ಯೋಚಿಸಲಿ. ರಾಮ ಇಲ್ಲ ಅಂದುಬಿಟ್ಟ ತಕ್ಷಣ ನಂದಿಗ್ರಾಮ ದರಂತಕ್ಕೆ ಬಲಿಯಾದ ಮುಗ್ಧ ಜನರ ಬದುಕು ಬೆಳಗುವುದಿಲ್ಲ. ಸೂರು ಕಳೆದುಕೊಂಡ ಜನರಿಗೆ ರಕ್ಷಣೆ ನೀಡಲಿ. ಅದು ಬಿಟ್ಟು ತನ್ನ ನೆಲದಲ್ಲಿ 'ನರಹತ್ಯೆ' ಮಾಡಿಬಿಟ್ಟು ಎಲುಬಿಲ್ಲದ ನಾಲಗೇಲಿ ಏನೇನೋ ಮಾತಾಡುವುದು ಸರಿಯಲ್ಲ. ಅಷ್ಟಕ್ಕೂ 'ರಾಜಕೀಯ'ದ ಬೇಳೆ ಬೇಯಿಸಲು ಜನರ ನಂಬಿಕೆಯನ್ನೇ ಸುಳ್ಳು ಮಾಡಲು ಹೊರಟಿರುವ ಇವರು ಎಂಥ ಅವಿವೇಕಿಗಳು ???

Thursday, December 6, 2007

ಕ್ರೀಮ್ ಆಫ್ ಕೈಲಾಸಂ

ಇತ್ತೀಚೆಗೆ ಆಧುನಿಕ ರಂಗಭೂಮಿಯ ಹರಿಕಾರ ಟಿ.ಪಿ.ಕೈಲಾಸಂ ಅವರ ಬಗ್ಗೆ ಅಂಕಿತ ಪುಸ್ತಕ ಪ್ರಕಟಿಸಿರುವ 'ಕ್ರೀಮ್ ಆಫ್ ಕೈಲಾಸಂ' ಪುಸ್ತಕ ಓದಿದೆ. ಬಿ.ಎಸ್. ಕೇಶವರಾವ್ ಅದ್ರ ಸಂಪಾದಕರು. 140 ಪುಟಗಳ ಈ ಪುಸ್ತಕದ ಬೆಲೆ 70 ರೂಪಾಯಿ. ಒಂದು ಸಲ ಓದೋಕೆ ಕೂತರೆ ಸಾಕು ಮತ್ತೆ ನೀವು ಪೂರ್ತಿ ಓದದೆ ಎದ್ದೇಳುವುದಿಲ್ಲ. ಯಾಕೆಂದರೆ ಕೈಲಾಸಂ ಅವರ ನಾಟಕದಲ್ಲಿ ಬರುವ ಸನ್ನಿವೇಶಗಳು, ಸಂಭಾಷಣೆ, ಕೈಲಾಸಂ ಅವರ ಹಾಸ್ಯಭರಿತ ಮಾತುಗಳು, ಬದುಕು ಎಲ್ಲವನ್ನೂ ಸಂಪೂರ್ಣವಾಗಿ ಈ ಪುಸ್ತಕದಲ್ಲಿ ತೆರೆದಿಡಲಾಗಿದೆ. ಕೈಲಾಸಂ ಅವರ ಕೆಲವು ಮಾತುಗಳನ್ನು ಓದುವಾಗಂತೂ ನೀವು ನಕ್ಕು ನಕ್ಕು ಹಣ್ಣಾಗಿ ಬಿಡ್ತೀರಾ.

ಒಂದು ಘಟನೆ ಹೇಳುತ್ತೇನೆ. ಕೈಲಾಸಂ ಹೈಸ್ಕೂಲಲ್ಲಿ ಓದುತ್ತಿರಬೇಕಾದರೆ, ರಸಾಯನ ಶಾಸ್ತ್ರ ಪಾಠ ಮಾಡುತ್ತಿದ್ದ ಮೇಷ್ಟ್ರು ಕ್ಲಾಸಲ್ಲಿ "ಆಲ್ಕೋಹಾಲ್ ಎಷ್ಟು ಕೆಟ್ಟದ್ದು ಎಂಬುವುದಕ್ಕೆ ಪ್ರಾಯೋಗಿಕ ವಿಚಾರವೊಂದನ್ನು ಹೇಳುತ್ತೇನೆ. ಒಂದು ಬಿಳಿ ಬಕೇಟ್ನಲ್ಲಿ ನೀರು ಮತ್ತು ಇನ್ನೊಂದು ಕರಿ ಬಕೇಟ್ನಲ್ಲಿ ಬೀರು ತುಂಬಿಸಿಟ್ಟಿದೆ ಅಂದುಕೊಳ್ಳಿ. ಅಲ್ಲಿ ಒಂದು ಕತ್ತೆಯನ್ನು ತಂದು ನಿಲ್ಲಿಸಿದ್ರೆ ಏನು ಮಾಡುತ್ತೆ ಗೊತ್ತೆ? ಅದು ಸಂತೋಷದಿಂದ ನೀರನ್ನು ಕುಡಿಯುತ್ತದೆ ಹೊರತು ಬೀರನ್ನು ಮುಟ್ಟುವುದೂ ಇಲ್ಲ, ಮೂಸುವುದೂ ಇಲ್ಲ. ಇದರಿಂದ ನಿಮಗೇನನಿಸುತ್ತೆ.?" ಎಂದಾಗ ಕೈಲಾಸಂ ಅವರು ತಕ್ಷಣ 'ಅದ್ಕೆ ಸಾರ್ ಅದನ್ನ ಕತ್ತೆ ಅನ್ನೋದು' ಅಂದ್ರತೆ. ಒಂದ್ಸಲ ಯಾರೋ ಕೈಲಾಸಂ ಹತ್ತ ಬಂದು "ಏನ್ಸಾರ್, ನೀವು ಇತ್ತೀಚೆಗೆ ತುಂಬ ಲೀನಾಗ್ತಿದ್ದೀರಲ್ಲಾ!" ಅಂದಾಗ ನಗುನಗುತ್ತಾ 'No No No...ಲೀನಾಗ್ತಿಲ್ಲಾಪ್ಪಾ, but ತಲ್ಲೀನನಾಗ್ತೀದ್ದೇನೆ' ಎಂದು ಉತ್ತರಿಸಿದ್ದರಂತೆ.

ಇಂಥ ಹಲವಾರು ಹಾಸ್ಯ ಪ್ರಸಂಗಗಳು, ಕೈಲಾಸಂ ಅವರ ಇಡೀ ಬದುಕಿನ ಬಗ್ಗೆ ತುಂಬಾ ಚೆನ್ನಾಗಿ ನಿರೂಪಿಸಲಾಗಿದೆ. ಚಾಮರಾಜಪೇಟೆಯ ಕೆ.ವಿ ಅಯ್ಯರ್ ಅವರ ವ್ಯಾಯಾಮ ಶಾಲೆ ಪಕ್ಕದ ಇನ್ನೊಂದು ಕೋಣೆಯಲ್ಲಿ ವಾಸಿಸುತ್ತಿದ್ದ ಕೈಲಾಸಂ ಕುದುರೆ, ಹಸುಗಳನ್ನು ಕಟ್ಟುತ್ತಿದ್ದ ಒಂದು ಬದಿಯಲ್ಲಿ ತನ್ನ ರೂಮನ್ನು ಆರಿಸಿಕೊಂಡಿದ್ದು, ಅದಕ್ಕೆ 'ನೂಕ್' ಅಂತ ಹೆಸರು ನೀಡಿದ್ದು, ಹೆಗ್ಗಣ-ಇಲಿಗಳ ಬಿಲವಾಗಿದ್ದ ಆ ಸ್ಥಳದಲ್ಲಿ ಕುಳಿತು ಕೈಲಾಸಂ 'ನಾಟಕ'ಗಳನ್ನು ಬರೆದಿದ್ದು ಎಲ್ಲವನ್ನೂ 'ಕ್ರೀಂ ಆಫ್ ಕೈಲಾಸ'ದಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಕೈಲಾಸಂ ಬದುಕನ್ನೇ ನಮ್ಮೆದುರು ಆ ಪುಟ್ಟ ಪುಸ್ತಕ ಕಟ್ಟಿಕೊಡುತ್ತದೆ.

ಕೆಲವು ತುಣುಕುಗಳು
"ಒಬ್ಬ ವ್ಯಕ್ತಿ ಬಚ್ಚಲಿನಲ್ಲಿ ಬದುಕುವ ಹಕ್ಕಿಯಾಗಬೇಕು! ಇದರಲ್ಲಿ ಕೂತುಕೊಂಡು ಆಕಾಶ ನೋಡಬೇಕು. ಸೂರ್ಯನನ್ನು ನೋಡಬೇಕು. ಸುತ್ತಲಿನ ಜಗತ್ತನ್ನು ನೋಡಬೇಕು. ಅದಕ್ಕೆ ಈ ಕೋಣೆಯಲ್ಲಿ ಸರಿಯಾದ ವಾತಾವರಣವಿದೆ! ನಾನು ಇಲ್ಲಿದ್ದು ಏನಾದರೂ ಬರೆಯಲು ಸಾಧ್ಯ"
( ತನ್ನ ನೂಕ್ ಬಗ್ಗೆ-ಅನು: ಡಾ.ಶ್ರೀನಿವಾಸ ಕುಲಕರ್ಣಿ)


"ಎಲ್ಲ ಪ್ರೇಮವೂ ಕಣ್ಣು ಕಾಣಿಸದು! ಹುಚ್ಚಾದುದು! ಸುಂದರವಲ್ಲದ
ಬಾತುಮರಿಗಳನ್ನು ರಾಜಹಂಸದ ಮರಿಗಳೆಂದೂ, ಸುರೂಪವಿಲ್ಲದ
ತನ್ನ ಮಸಿಬಣ್ಣದ ಕಾಗೆಮರಿಗಳನ್ನು ಕಾಮನಬಿಲ್ಲಿನ ಬಣ್ಣದ ಗರಿಗಳಿರುವ
ಕಲಕಂಠವೆಂದೂ ಕಾಣುವ ಪ್ರೇಮವನ್ನು ಏನೆಂದು ಹೇಳೋಣ!
ಪ್ರೇಮಗಳಿಗೆಲ್ಲಾ ಅತ್ಯಂತ ಕುರುಡಾದದ್ದೂ, ಅತ್ಯಂತ ಹುಚ್ಚಾದದ್ದೂ
ಎಂದರೆ ವಿಚಿತ್ರವೂ ಆಶ್ವರ್ಯಕರವೂ ಆದ ಮಾತೃಪ್ರೇಮವೇ
ಎಂದು ನನ್ನ ಖಂಡಿತವಾದ ಎಣಿಕೆ"
(ಅನು: ಜಿ.ಪಿ. ರಾಜರತ್ನಂ)


"ಅಮ್ಮ ಈಗಿಲ್ಲಿದ್ದಿದ್ರೆ ಎಷ್ಟು ಆನಂದಪಡ್ತಿದ್ಳೋ"
(ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕನ್ನಡ ಬಾವುಟ ಹಾರಿಸುವಾಗ ಮಾಸ್ತಿ ಅವರ ಕಿವಿಯಲ್ಲಿ)

ವಿಮರ್ಶಕ:
ಸಾರ್, ನಿಖರವಾಗಿ ನಿರ್ದಿಷ್ಟವಾಗಿ ನಿಮ್ಮ ಬರಹದ ಬಗ್ಗೆ ನಿಮಗೇನಿಸುತ್ತೆ ಎಂಬುದನ್ನು without any reservation ಹೇಳಿ
ಕೈಲಾಸಂ: frank ಆಗಿ ಹೇಳ್ಲೇ ಬೇಕೂ ಅಂದ್ರೆ, ಬರಹದಲ್ಲಿರೋದು ಕಾಲ್ಭಾಗ ವಿಸ್ಕಿ ಅನ್ನೋದಾದ್ರೆ ಮುಕ್ಕಾಲು ಭಾಗ ಬರೀ ಸೋಡ, ಅರ್ಥಾತ್ ಬರೇ ಗ್ಯಾಸು!


"ನಾನು ಜೋಕ್ಮಾಡ್ದಾಗ ನನ್ನನ್ನ ನೋಡಿ ನೀವ್ನಗ್ತೀರಿ, ಒಳ್ಳೇದು. ಆದ್ರೆ ನಾನು ಜೋಕ್ಮಾಡ್ದಿದ್ದಾಗ್ಲೂ ನಗೋ ನಿಮ್ಮನ್ನ ನೋಡಿ ನಾನು ನಗ್ತೀನಿ! ಎಂಥ ವಿಪರ್ಯಾಸ ಅಲ್ವೇ?"

"ಕಾಡಿಗ್ಹೋದ್ರೂ comfort ಇರ್ಬೇಕು"

ಒಬ್ಬ: cigarette-definition please sir,
ಕೈಲಾಸಂ: Fool on one side, fire on other side

ಒಬ್ಬ: well Mr. Kailasam, what is your conception of life?
ಕೈಲಾಸಂ: Life itself is a production of conception ಅಲ್ವೇನ್ರೀ?

Wednesday, December 5, 2007

ಸೌಹಾರ್ದ ಸಾಹಿತ್ಯ ಸಮ್ಮೇಳನ?!

ಕನ್ನಡ ಸಾಹಿತ್ಯ ಸಮ್ಮೇಳನ. ಕನ್ನಡದ ಹಬ್ಬ. ಕನ್ನಡಿಗರಿಗೆ ಹಬ್ಬ. ಉಡುಪಿಯಲ್ಲಿ ನಡೆಯುವ 74ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನೋ ಕೆಲದಿನಗಳಿರಬಹುದು. ಕನ್ನಡ ಹಬ್ಬದ ಸಂಭ್ರಮ ಸವಿಯಲು ನಾವೆಲ್ಲ ಕಾತುರದಿಂದ ಕಾಯುತ್ತಿದ್ದೇವೆ. ಹೌದು! ಕಾಯುತ್ತಿದ್ದೇವೆ. ಇದರ ಜೊತೆ ನಿನ್ನೆ ನನ್ನ ಕಿವಿಗೆ ಬಿದ್ದ ಸುದ್ದಿಯೊಂದು ಅಚ್ಚರಿ ಮೂಡಿಸಿತು. ಅದೇನೆಂದು ಹೇಳುವ ಮೊದಲು ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಬಗ್ಗೆ ಹೇಳಬೇಕು.

ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ವಿಠಲ ಹೆಗಡೆ ಮತ್ತು ಗೌರಿ ಲಂಕೇಶ್ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಿದ ಕಾರಣ, ಸಂಘಪರಿವಾರದವರು ವೇದಿಕೆಯೇರಿ ಗಲಾಟೆ ಎಬ್ಬಿಸಿದ್ದು ಎಲ್ಲರಿಗೂ ತಿಳಿದಿದೆ. ಇಂಥದ್ದೇ ಸನ್ನಿವೇಶವನ್ನು ಇದೀಗ ಕೋಮು ಸೌಹಾರ್ದ ವೇದಿಕೆ ಉಡುಪಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೋರಿಸಲಿದೆ. ಕಾರಣ? ಸಮ್ಮೇಳನದ ಅಧ್ಯಕ್ಷ ಎಲ್.ಎಸ್. ಶೇಷಗಿರಿರಾಯರು ಸಂಘ ಪರಿವಾರದವರಂತೆ, ಈ ಸಮ್ಮೇಳನದಲ್ಲಿ ಮುಂಚೂಣಿಯಲ್ಲಿರುವವರೆಲ್ಲಾ ಸಂಘಪರಿವಾರದವರಂತೆ. ಆದ್ದರಿಂದ ಕೋಮುಸೌಹಾರ್ದ ವೇದಿಕೆ ಸಾಹಿತ್ಯ ಸಮ್ಮೇಳನಕ್ಕೆ ಮುಂಚೆ ಉಡುಪಿಯಲ್ಲಿಯೇ 'ಸೌಹಾರ್ದ ಸಾಹಿತ್ಯ ಸಮ್ಮೇಳನ' ಹಮ್ಮಿಕೊಂಡಿದೆ ಎಂಬುದು ಸುದ್ದಿ.

ಅಂದು ಸಂಘಪರಿವಾರದವರು ಗಲಾಟೆ ಮಾಡಿದ್ರು, ಅದಕ್ಕೆ ಪ್ರತಿಯಾಗಿ ಈಗ ಕೋಮು ಸೌಹಾರ್ದ ವೇದಿಕೆ ಈ 'ಸೌಹಾರ್ದ ಸಮ್ಮೇಳನ' ಹಮ್ಮಿಕೊಂಡಿದೆ. ವಿವಾದವೇಳಲು ಇಷ್ಟು ಸಾಕು. ಇದು ನಮ್ಮ ಬುದ್ದಿ(ಕನ್ನಡದ ಬಗ್ಗೆ ಅಭಿಮಾನವಿದ್ದವರೂ ಸಾಕಷ್ಟು ಮಂದಿ ಇದ್ದಾರೆ). ಕನ್ನಡದ ಹಬ್ಬ ಅಂದರೆ, ಅದು 5 ಕೋಟಿ ಕನ್ನಡಿಗರಿಗೂ ಸಂತಸ-ಸಂಭ್ರಮದ ದಿನ. ಆದರೆ ಖುಷಿ ಪಡಬೇಕಾದ ನಾವು ನಾವೇ ಕಚ್ಚಾಡಿಕೊಂಡರೆ ಕನ್ನಡದ ಗತಿಯೇನು? ಕನ್ನಡದ ಗತಿಯೇನು ಎಂದು ಕೇಳುವ ಅಗತ್ಯವೇ ಇಲ್ಲ. ಯಾಕೆಂದ್ರೆ ಕನ್ನಡ ಈಗಾಗಲೇ 'ನಿರ್ಗತಿ' ಯಾಗಿದೆ ಎಂಬುದು ನಾವು ನೀವು ಕಾಣುತ್ತಿರುವ ನಗ್ನ ಸತ್ಯ.

ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಅದು ಗೋವರ್ಧನಗಿರಿಯಾಗುತ್ತದೆ

ಒಂದೆಡೆ ಹೀಗೆಂದ ಕುವೆಂಪು ಇನ್ನೊಂದೆಡೆ 'ಬಾರಿಸು ಕನ್ನಡ ಡಿಂಡಿಮ' ಅಂದು ಕನ್ನಡಿಗರ ನರನಾಡಿಗಳಲ್ಲಿ ಕನ್ನಡವನ್ನು ಮಿಡಿಸಿದರು. ಆದರೆ ಈಗಿನ ನಮ್ಮ ಕವಿಗಳು, ಸಾಹಿತಿಗಳು, ಬುದ್ದಿಜೀವಿಗಳೆನಿಸಿಕೊಂಡವರು ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಕನ್ನಡಕ್ಕಾಗಿ ಕೈಯೆತ್ತುವ ಬದಲು, ಕತ್ತಿ ಹಿಡಿದು ಯುದ್ಧಕ್ಕಿಳಿಯುತ್ತಾರೆ. ಯಾರದ್ದೋ ಮೇಲಿನ ಕೋಪವನ್ನು ಯಾರ್ಯಾರ ಮೇಲೋ ತೋರಿಸುತ್ತಾರೆ. ಕೊನೆಗೆ ಎಂಥ ನೀಚಮಟ್ಟಕ್ಕಿಳಿಯುತ್ತಾರೆಂದರೆ ತಮಗೆ ಎದೆ ಹಾಲು ನೀಡಿದ ಭಾರತಮಾತೆಯ ಪೋಟೋ ಇಟ್ಟು 'ಚಪ್ಪಲಿ' ಹಾರ ಹಾಕಿದ 'ನೀಚರೂ' ನಮ್ಮಲ್ಲಿದ್ದಾರೆ. ಒಂದು ವರ್ಷದ ಹಿಂದೆ ಭಾರತಮಾತೆಗೆ ಚಪ್ಪಲಿ ಹಾರ ಹಾಕಿದ್ದು ಭಾರೀ ಸುದ್ದಿಯಾಗಿತ್ತು(ಯಾರು ಅನ್ನೋದು ನೀವೇ ತಿಳಿದುಕೊಳ್ಳಿ). ವಿಲ್ಸನ್ ಗಾರ್ಡನ್ ನಲ್ಲಿ ನಡೆದಿದ್ದು. ಕಣ್ಣಾರೆ ನೋಡುವ ದೌರ್ಭಾಗ್ಯ ನನಗೂ ಬಂದಿತ್ತು. ಆ ನೋವು ನನ್ನ ಜೀವನದಲ್ಲಿ ಎಂದೂ ಮರೆಯಲಿಕ್ಕಿಲ್ಲ. ಇಂದು ಕನ್ನಡಕ್ಕೂ ಆಗುತ್ತಿರುವ ಗತಿ ಅದೇ. ಕನ್ನಡದ ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆ ಈಗ ವಿವಾದಸ್ಪದವಾಗಿರುವುದು ದುರಾದೃಷ್ಟ. ಸಾಹಿತಿ ಎಂ.ಎಂ. ಕಲ್ಬುರ್ಗಿ ಅವರು ಮೊನ್ನೆ ಮೊನ್ನೆ ಭಾಷಣದಲ್ಲಿ ಕುವೆಂಪು ನಾಡಗೀತೆಯ ಬಗ್ಗೆ ಅಪಸ್ವರ ಎಬ್ಬಿಸಿದ್ರು. ಸಾಕಿಷ್ಟು ಬೆಂಕಿ ಧಗಧಗನೇ ಉರಿಯಲು. ಈಗ ಅದರ ವಿರುದ್ಧ ನಾಡಿನೆಲ್ಲಡೆ ವಿರೋಧ ವ್ಯಕ್ತವಾಗುತ್ತಿದೆ. ಇಂದು ಜನಸಾಮಾನ್ಯ ಕನ್ನಡಿಗರಿಂದ ಹೆಚ್ಚಾಗಿ ಕನ್ನಡ ಸಾಹಿತಿಗಳಿಂದಲೇ ಕನ್ನಡಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸುಳ್ಳಲ್ಲ. ಯಾಕೆಂದ್ರೆ ಈಗಿನವರಿಗೆ ಒಂದು ಬುದ್ದಿಯಿದೆ. ಕುವೆಂಪು, ಕಾರಂತ, ಬೇಂದ್ರೆ ಮುಂತಾದ 'ಕನ್ನಡ ರತ್ನ'ಗಳ ಹೆಸರನ್ನು ತಮ್ಮ ಭಾಷಣದಲ್ಲಿ ತೂರಿಬಿಟ್ಟು, ಮಾತಾಡುತ್ತಾ ಮಾತಾಡುತ್ತಾ ಏನೋ ನಿರ್ಣಾಯ ಕೊಟ್ಟುಬಿಡೋದು. ಇವರಿಗೆ ಭಾಷಣದಲ್ಲಿ ವಿಷಯ ಸಿಗಬೇಕು, ಜೊತೆಗೆ ಪ್ರಚಾರನೂ ಬರುತ್ತೆ. ತಮ್ಮದೂ ಇರಲೆಂದು ತೂರಿಬಿಡುತ್ತಾರೆ. ಇಲ್ಲಿ ಅವರದ್ದೇನೂ ಇರುವುದಿಲ್ಲ. ತನಗೇನೂ ಕೊಡಲು ಸಾಧ್ಯವಿಲ್ಲವಾದ್ರೂ ವಿವಾದವಾದ್ರೂ ಎಬ್ಬಿಸಿ ಬಿಡೋಣ ಅಂತ. ಅವರ ಸಿದ್ದಾಂತವನ್ನು ಮುಂದಿಟ್ಟುಕೊಂಡು ಇವರು ಮಾತಾಡೋದು. ಎಷ್ಟೋ ಬಾರಿ ಹೀಗೆ ಆಗಿದೆ, ಆಗುತ್ತಿದೆ.

ಈಗ 'ಸೌಹಾರ್ದ ಸಮ್ಮೇಳನ' ನಡೆದ್ರೆ ಏನು ಪ್ರಯೋಜನ? ಬರೇ ವಿವಾದ. ಸಂಘ ಪರಿವಾರದವರು ವೇದಿಕೆಗೆ ನುಗ್ಗಿ ಗಲಾಟೆ ಮಾಡಿ ಏನು ಸಾಧಿಸಿದ್ರು? ಏನೂ ಇಲ್ಲ. ಅದು ಇವರಿಗರ್ಥವಾಗುತ್ತಾ? ಅದೂ ಇಲ್ಲ. ಇದು ಯಾರಿಗಾದ್ರೂ ಅರ್ಥವಾಗುತ್ತಾ? ಯಾರಿಗೂ ಇಲ್ಲ. ಅರ್ಥವಾಗಬೇಕಾದವರು ಇವರೊಳಗೆಯೇ 'ಇಬ್ಭಾಗ'ವಾಗಿದ್ದಾರೆ. ಮತ್ತೇ? ಜನಸಾಮಾನ್ಯರ ಮಾತಿಗೆ ಬೆಲೆಯಿದೆಯೇ? ನಮ್ಮ ಸಾಹಿತ್ಯ, ರಾಜಕೀಯ, ಶಿಕ್ಷಣ ಯಾವುದರಲ್ಲೂ 'ಜನಸಾಮಾನ್ಯ'ನ ಮಾತಿಗೇ ಬೆಲೆನೇ ಇಲ್ಲ. ಕನ್ನಡದ ಅಭಿವೃದ್ದಿಗಾಗಿ ಇರುವ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಂಪಿ ಕನ್ನಡ ವಿವಿ, ಕನ್ನಡಪರ ಸಂಘಟನೆಗಳು ಯಾವುದೋ ಒಂದು ಸಿದ್ದಾಂತಕ್ಕೆ ಕಟ್ಟುಬಿದ್ದು ತಮ್ಮದೇ ಸರಿ ವಾದಿಸುತ್ತವೆ. ಕನ್ನಡ ಸಾಹಿತ್ಯ ಪರಿಷತ್ತಿನ ಕತೆ ಕೇಳೋದೇ ಬೇಡ. ಅಲ್ಲಿ ಹೋಗಿ ನೋಡಿದ್ರೆ ಅಲ್ಲಿನ ವ್ಯವಸ್ಥೆ ಬಗ್ಗೆ ಮರುಕ ಹುಟ್ಟುತ್ತೆ. ನಮ್ಮ ಭಾಷೆಯ ಬಗ್ಗೆ ಮಾತಾಡಬೇಕಾದ ನಮ್ಮ ಕರ್ನಾಟಕ ಸರ್ಕಾರದ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಶಾಲೆಗಳಲ್ಲಿ ಕನ್ನಡದ ಬಗ್ಗೆ ಗಂಟೆ ಗಟ್ಟಲೆ ಕೊರೆಯುವ 'ಕನ್ನಡ ಮೇಷ್ಟ್ರು', ಕನ್ನಡದ ಬಗ್ಗೆಯೇ ಬೀದಿ ಬೀದಿ ಧರಣಿ ಮಾಡುವ ಕೆಲವು ಕನ್ನಡ ಸಾಹಿತಿಗಳು, ದೆಹಲಿಯಲ್ಲಿ ಸಂಸತ್ತು ಕಲಾಪದಲ್ಲಿ 'ಕನ್ನಡ'ದಲ್ಲೇ ಪ್ರಶ್ನೆಗಳನ್ನು ಎತ್ತಿ ಎತ್ತಿ ಎಸೆಯುವ ರಾಜಕಾರಣಿಗಳು ಯಾರಾದ್ರೂ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿಸಿ, ಕನ್ನಡ ಉಳಿಸುವ ಕೆಲಸ ಮಾಡಿದ್ದಾರಾ? ಖಂಡಿತ ಇಲ್ಲ. ಕನ್ನಡ ನಿಜವಾಗಿಯೂ ಬೆಳೆಯುತ್ತಾ ಇದೆ ಎಂದಾದರೆ ಅದು ಜನಸಾಮಾನ್ಯನಿಂದ.


ಇತ್ತೇಚೆಗೆ ಬೆಂಗಳೂರಿನ ಸಮಾಜ ಸೇವಕರ ಸಮಿತಿ ಎಂಬ ಯುವಕರ ತಂಡವೊಂದು ಸ್ವಂತ ಹಣದಲ್ಲಿ ಟೀ-ಶರ್ಟ್ ತಯಾರಿಸಿ, ಅದ್ರ ಮೇಲೆ ಡಿ.ವಿ.ಜಿ. ಅವರ ಕಗ್ಗದ ನುಡಿಗಳು, ಜಿ.ಪಿ. ರಾಜರತ್ನಂ ಅವರ ಕವನಗಳನ್ನು ಬರೆಸಿ ಅತ್ಯಂತ ಕಡಿಮೆ ಬೆಲೆಗೆ ಮಾರಿದ್ದಾರೆ. ಯಾಕೆ? ಕನ್ನಡಕ್ಕಾಗಿ! ಅವರೆಲ್ಲಾ ಬೀದಿಗಿಳಿದು 'ಕನ್ನಡ, ಕನ್ನಡ' ಎಂದು ಬೊಬ್ಬೆ ಹಾಕಿಲ್ಲ, ಕೃತಿಯ ಮೂಲಕ ಮಾಡಿ ತೋರಿಸಿದ್ದಾರೆ. ಇಂಥ ಉತ್ತಮ ಕೆಲಸ ಮಾಡೋದು ಬಿಟ್ಟು, ಇಂದಿನವರು ಏನ್ ಮಾಡ್ತಾರೆ ಗೊತ್ತೆ? ಕನ್ನಡಕ್ಕಾಗಿ ದುಡಿದು, ಮಡಿದ ಅದೆಷ್ಟು ಸಾಹಿತಿಗಳು, ವಿದ್ವಾಂಸರ ಗೋರಿಗಳನ್ನು ಕಟ್ಟಲು ಸರ್ಕಾರದ ಹಣಕ್ಕಾಗಿ ನಾಲಗೆ ಚಾಚಿ ಕುಳಿತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದ್ರೆ ಎಂದೋ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿತ್ತು. ಆದರೆ ನಮ್ಮೊಳಗೆಯೇ ವಿಷಕಾರಿದರೆ ಒಗ್ಗಟ್ಟಿನ ಮಾತು ಎಲ್ಲಿಂದ? ಇವರಿಗೆಲ್ಲಾ ಯಾಕನಿಸಲ್ಲ 'ಕರ್ನಾಟಕ ಬಹುಭಾಷೆ ಯ ನಾಡು. ಇಲ್ಲಿ ಎಲ್ಲರೂ ಇದ್ದಾರೆ. ನಾವೇ ಹಾವು-ಮುಂಗುಸಿ ಥರ ಕಚ್ಚಾಡಿದ್ರೆ ಬೇರೇಯವರು ನಗ್ತಾರೆ' ಅಂತ? ನಾನು ಹೇಳಿದ್ದೇ ವೇದವಾಕ್ಯ ಅನ್ನುವ ನಮ್ಮ 'ಅತೀ ಬುದ್ದಿವಂತಿಕೆ' ಎಂದು ಮರೆಯಾಗುತ್ತೋ ಅಂದು ನಮ್ಮಲ್ಲೊಂದು ಒಗ್ಗಟ್ಟು ಮೂಡಬಹುದು. ಮೊದಲು ಈ ವಿವೇಕ ಬೆಳೆಯಲಿ.

ಕನ್ನಡ ಶುಭಾಶಯ ಪತ್ರಗಳ ತಾಣ

ಕನ್ನಡ ಶುಭಾಶಯ ಪತ್ರಗಳು ಬೇಕೆ? ಮದುವೆ, ಹುಟ್ಟುಹಬ್ಬ, ಹೊಸವರ್ಷ, ದೀಪಾವಳಿ..ಹೀಗೆ ಎಲ್ಲಾ ಸಂದರ್ಭದಲ್ಲಿಯೂ ನಿಮಗೆ ಶುಭಾಶಯ ಕಲೀಸಬೇಕಾದ್ರೆhttp://www.kannada-greetings.com/ ಭೇಟಿ ನೀಡಿ. ಜನರ ನಡುವೆ ಬೆಳೆಯುವ ಕನ್ನಡಕ್ಕಿಂತ ಈಗ ಅಂತರ್ಜಾಲದಲ್ಲಿ ಕನ್ನಡ ನಳನಳಿಸುತ್ತಿದೆ. ಮುದ್ದು ಮುದ್ದಾದ ಕನ್ನಡ ಅಕ್ಷರಗಳಲ್ಲಿ ಹೆಣೆದಿರುವ ಸುಂದರ ನುಡಿಮುತ್ತುಗಳಿಗೆ ಖಂಡಿತ ನೀವು ಮಾರುಹೋಗುವಿರಿ. ತಮ್ಮ ಭಾವನೆಗಳನ್ನು ಅಕ್ಷರಗಳ ಮೂಲಕ ಹೇಳಬಹುದು.

ಇತ್ತೀಚೆಗೆ ನನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಲು ಒಂದು ಅಂಗಡಿಗೆ ಹೋಗಿ ಕನ್ನಡ ಗ್ರಿಟಿಂಗ್ಸ್ ಕೇಳಿದೆ. ಅಂಗಡಿಯ ನನ್ನನ್ನು ವ್ಯಂಗ್ಯ ರೀತಿಯಲ್ಲಿ ನೋಡಿ 'ಯಾರಮ್ಮಾ ಕನ್ನಡ ಗ್ರಿಟಿಂಗ್ಸ್ ಕೆಳ್ತಾರೆ' ಅನ್ನಬೇಕೆ. ಆತನನ್ನು ದುರುಗುಟ್ಟಿ ನೋಡಿ ವಾಪಾಸಾದೆ. ಮತ್ತೊಂದು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೋದಾಗ ಅಲ್ಲಿ ಬೆಂಗಳೂರಿನ ಸಮಾಜ ಸೇವಕರ ಸಮಿತಿ ತಯಾರಿಸಿರುವ ಕನ್ನಡ ಶುಭಾಶಯಗ ಪತ್ರಗಳನ್ನು ಖರೀದಿಸಿದೆ. ಕುಂದಾಪುರ ಚಾಂದನಿ ಕಲಾನಿಕೇತನವೂ ಕನ್ನಡ ಶುಭಾಶಯ ಪತ್ರಗಳನ್ನು ತಯಾರಿಸಿ ಹಂಚುತ್ತಿದೆ. ಆದರೆ ಕನ್ನಡ ಶುಭಾಶಯ ಪತ್ರಗಳನ್ನು ಮಾಡಿದ್ರೆ ಬೇಡಿಕೆಯಿಲ್ಲ ಎಂಬುದೇ ಎಲ್ಲರ ಗೋಳು. ಯಾಕೆಂದ್ರೆ ಬಹುತೇಕರಿಗೆ ಗ್ರಿಟಿಂಗ್ಸ್ ಅಂದ್ರೆ 'ಇಂಗ್ಗೀಷ್' ಬಿಟ್ರೆ ಕನ್ನಡದಲ್ಲಿ ಸಿಗುತ್ತೆ ಅನ್ನೋದೇ ಗೊತ್ತಿಲ್ಲ ಬಿಡಿ.


ಕನ್ನಡ ಶುಭಾಶಯ ಪತ್ರಗಳನ್ನು ತಯಾರಿಸೋದು ಒಂದು ರೀತಿಯಲ್ಲಿ ಕನ್ನಡಕ್ಕೆ ಸೇವೆ, ಇನ್ನೊಂದೆಡೆ ಕನ್ನಡದ ಮುದ್ದು ಮುದ್ದು ಅಕ್ಷರಗಳು ನೋಡಲೂ ಚೆನ್ನಾಗಿ ಕಾಣುತ್ತವೆ. ಕನ್ನಡದಲ್ಲಿರುವಷ್ಟು ಸುಂದರ ಪದಗಳು, ವಾಕ್ಯಗಳು ಖಂಡಿತವಾಗಿಯೂ ಇಂಗ್ಲೀಷ್ನಲ್ಲಿ ಸಿಗದು.

ನೀವೇ ಏನೇ ಹೇಳಿ, ನಂಗಂತೂ ಕನ್ನಡ ಶುಭಾಶಯ ಪತ್ರಗಳನ್ನು ನೋಡಲೂ ತುಂಬಾ ಖುಷಿ. ಅದ್ರ ಸಂಗ್ರಹನೂ ಮಾಡ್ತೀನಿ. ನಂಗೊಂದು ಅಭ್ಯಾಸವಿತ್ತು. ಕಾಲೇಜಿನಲ್ಲಿರುವಾಗ. ನನ್ನ ಯಾರೇ ಗೆಳೆಯ/ಗೆಳತಿಯರು ಅಥವ ಅಣ್ಣನವರು ಯಾರೇ ಆಗಲಿ ಅವರಿಗೆ ಮದುವೆ, ಹುಟ್ಟುಹಬ್ಬ ಎಲ್ಲಕ್ಕೂ ನಾನೇ ಶುಭಾಶಯ ಪತ್ರ ತಯಾರಿಸಿ ಕಳಿಸೋದು. ಅಂದ್ರೆ ಮುದ್ರಿಸಿ, ಕಂಪ್ಯೂಟರ್ನಲ್ಲಿ ವಿನ್ಯಾಸ ಮಾಡಿ ಕಳಿಸೋದಲ್ಲ. ಬಣ್ಣದ ಕಾಗದಗಳಲ್ಲಿ ಕನ್ನಡದ ಸುಂದರ ವಾಕ್ಯಗಳನ್ನು ಹೆಣೆಯೋದು. ನಿಜವಾಗ್ಲೂ ಈ ಕೆಲ್ಸ ತುಂಬಾ ಖುಷಿ ಕೊಡುತ್ತೆ. ಅಕ್ಕ, ಅಣ್ಣ, ತಮ್ಮ, ತಂಗಿ, ಅಪ್ಪ, ಅಮ್ಮ..ಬಾಂಧವ್ಯಗಳ ಭಾವನೆಗಳನ್ನು ಅಕ್ಷರಗಳ ಮೂಲಕ ಬರೆದು ಕಳಿಸೋದು ನಮಗೂ ಖುಷಿ, ನೋಡೋರಿಗೆ ಖುಷಿ.

ಅಂತೂ-ಇಂತೂ ಕೆಲವು ಅಂತರ್ಜಾಲಗಳಿಂದ, ಸಂಸ್ಥೆಗಳಿಂದ ಒಳ್ಳೆಯ ಕಾರ್ಯ ಆಗುತ್ತಿದೆ. ಇದು ಮುಂದುವರೆಯಲಿ ಅಂತ ಹಾರೈಸೋಣ. ಏನಂತೀರಿ?