Tuesday, March 30, 2010

ಪ್ರೀತಿಯ ಸಣ್ಣ ಬಿಂದಿಗೆ

ಬಿಂದಿಗೆಗೂ ಹುಡುಗಿಯರಿಗೂ ಅದೇನೋ ನಂಟು. ಮನೆಯಲ್ಲಿ ಬಿಂದಿಗೆಯಲ್ಲಿ ನೀರು ತರಬೇಕಂದ್ರೆ ಅದಕ್ಕೆ ಹುಡುಗಿರೇ ಬೇಕು. ಹುಡುಗ್ರಿಂದ ಅದು ಸಾಧ್ಯವಿಲ್ಲ. ಸಾಧ್ಯ ಇದ್ರೂ ಅವ್ರು ಮಾಡೋಲ್ಲ. ನನ್ನದೂ ಒಂದು ಪುಟ್ಟ ನೆನೆಪು. ನಾನಿನ್ನೂ ಸಣ್ಣ ಹುಡುಗಿ. ದೊಡ್ಡ ಬಿಂದಿಗೆಯನ್ನು ಎತ್ತಿ ಹಿಡಿಯಕ್ಕಾಗದ ವಯಸ್ಸು. ಅಮ್ಮ ದೊಡ್ಡ ಬಿಂದಿಗೆಯಲ್ಲಿ ನೀರು ತರುವಾಗ ನನಗೂ ಬಿಂದಿಗೆ ಬೇಕೆಂದು ಹಠ ಹಿಡಿದಿದ್ದೆ.

ಅಮ್ಮ ಬಾವಿಯಿಂದ ನೀರು ಎತ್ತುವಾಗ ನಾನೂ ನೀರು ಎತ್ತಬೇಕು, ನನಗೂ ಬಿಂದಿಗೆ ಬೇಕೆಂದು ಅಮ್ಮನ ಸೆರಗು ಹಿಡದೆಳೆಯುತ್ತಿದ್ದೆ. ಆವಾಗ ಅಮ್ಮ ನನ್ನ ಎತ್ತಿಕೊಳ್ಳದಿದ್ದರೆ ಮರಳ ಮೇಲೆ ಬಿದ್ದು ಹೊರಳಾಡುತ್ತಿದ್ದೆ. "ನೀನು ಸ್ವಲ್ಪ ದೊಡ್ಡ ಆಗು, ಬಿಂದಿಗೆ ತಂದುಕೊಡ್ತೀನಿ' ಎಂದು ಅಮ್ಮ ಸಮಾಧಾನಿಸುವಾಗ, ಹಾಗಾದ್ರೆ ಯಾವಾಗ ನಾನು ದೊಡ್ಡವಳಾಗ್ತೇನೆ, ನಿನ್ನಂತೆ ಉದ್ದ, ದಪ್ಪ ಆಗಿ, ಯಾವಾಗ ಸೀರೆ ಉಡುವವಳಾಗ್ತೀನಿ, ದೊಡ್ಡ ಬಿಂದಿಗೆಯನ್ನು ಯಾವಾಗ ನಾನು ಎತ್ತುವವಳಾಗ್ತೀನಿ' ಎಂದು ಪದೇ ಪದೇ ಪ್ರಶ್ನೆಗಳ ಮಳೆ ಸುರಿಸಿ ಅಮ್ಮನಿಗೆ ಬೋರ್ ಹೊಡಿಸ್ತಾ ಇದ್ದೆ.

ಒಂದು ದಿನ ಅಮ್ಮ ಬಿಂದಿಗೆ ತಂದೇ ಬಿಟ್ಟರು. ಹೊಸ ಬಿಂದಿಗೆ. ಸಣ್ಣ ಮತ್ತು ಮುದ್ದಾದ ಬಿಂದಿಗೆ. ಅಮ್ಮ ತಂದ ಹೊಸ ಬಿಂದಿಗೆಗೆ "ಚಿಕ್ಕ ಬಿಂದಿಗೆ' ಎಂದು ನಾಮಕರಣ ಮಾಡಲಾಗಿತ್ತು. ಅದು ಅಲ್ಯೂಮಿನಿಯಂ ಬಿಂದಿಗೆ, ಎತ್ತಲೂ ಅಷ್ಟೇನೂ ಭಾರವಿಲ್ಲ. ತುಂಬಾ ಮುದ್ದಾಗಿತ್ತು. ಅಮ್ಮ ಬಿಂದಿಗೆ ತಂದಿದ್ದೇ ತಡ, ಬಾವಿಯಿಂದ ನೀರು ಎತ್ತಕ್ಕಾಗದಿದ್ರೂ ಮನೆಯಲ್ಲಿದ್ದ ಪಾತ್ರೆಗಳಲ್ಲಿ ತುಂಬಿಸಿಟ್ಟ ನೀರನ್ನೆಲ್ಲಾ ನನ್ನ ಚಿಕ್ಕ ಬಿಂದಿಗೆಗೆ ಸುರಿಯುತ್ತಿದ್ದೆ. ಒಂದಷ್ಟು ಏಟುಗಳನ್ನೂ ತಿನ್ನುತ್ತಿದ್ದೆ. ಆಮೇಲೆ ನಾನು ಶಾಲೆಗೆ ಹೋಗೋವಷ್ಟರಲ್ಲಿ ಬಿಂದಿಗೆಯಲ್ಲಿ ನೀರು ತರುವವಳಾಗಿದ್ದೆ. ಕಷ್ಟಪಟ್ಟಾದ್ರೂ ನನ್ನ ಬಿಂದಿಗೆಯಲ್ಲಿ ನೀರು ತರುವುದೇ ನನಗೆ ಹೆಮ್ಮೆಯ ವಿಚಾರ. ಅದೂ ನಾನು ಬಿಂದಿಗೆಯನ್ನು ಸೊಂಟದಲ್ಲಿ ಹಿಡಿದುಕೊಂಡು ಬರುವಾಗ ಯಾರಾದ್ರೂ ನೋಡಿದ್ರೆ ಇನ್ನೂ ಖುಷಿ. ಒಳಗೊಳಗೇ ಬೀಗುತ್ತಿದ್ದೆ.

ಶಾಲೆಗೆ ಹೊರಡುವಾಗ ಅಮ್ಮನ ಬಳಿ, ನನ್ನ ಬಿಂದಿಗೆ ಮುಟ್ಟಬೇಡ ಎಂದು ಕಟ್ಟಪ್ಪಣೆ ಮಾಡಿಯೇ ಹೊರಡುತ್ತಿದ್ದೆ. ಶಾಲೆಯಿಂದ ಬಂದು ಬ್ಯಾಗ್ ನ್ನೊಂದು ಮೂಲೆಗೆ ಬಿಸಾಕಿ, ಬಳಿಕ ಅಮ್ಮ ಮಾಡಿಟ್ಟ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಂಡು ಅದೇ ನನ್ನ ಪ್ರೀತಿಯ ಸಣ್ಣ ಬಿಂದಿಗೆಯನ್ನು ಎತ್ತಿಕೊಂಡು ಮನೆ ಸಮೀಪದ ತೊರೆಗೆ ಹೋಗುತ್ತಿದ್ದೆ. ಅದೊಂದು ಥರ ಖುಷಿ. ; ನನ್ನ ಬಿಟ್ಟು ಯಾರೇ ನನ್ನ ಬಿಂದಿಗೆ ಮುಟ್ಟಿದರೂ ನನಗೆ ತುಂಬಾ ಕೋಪ ಬರುತ್ತಿತ್ತು.
ಅದು ನನ್ನ ಚಿಕ್ಕಬಿಂದಿಗೆ

ನಾನು ಎಸ್ ಎಸ್ ಎಲ್ ಸಿ ಮುಗಿಸೋ ತನಕವೂ ಆ ಬಿಂದಿಗೆಯನ್ನು ಚೆಂದಕ್ಕೆ ಕಾಪಾಡಿಕೊಂಡು ಬಂದಿದ್ದೆ. ಆದರೆ, ಬಳಿಕ ದೂರದೂರಿನಲ್ಲಿ ನನ್ನ ವಿದ್ಯಾಭ್ಯಾಸ ನಡೆದಿದ್ದರಿಂದ ಮನೆಯಲ್ಲಿನ ಬಿಂದಿಗೆ ನನಗರಿವಿಲ್ಲದೆಯೇ ಮಾಯವಾಗಿತ್ತು. ಕೇಳಿದಾಗ, ಅಮ್ಮ ಆ ಬಿಂದಿಗೆ ತೂತು ಬಿದ್ದಿದೆ ಎಂದರು. ನನ್ನ ಪ್ರೀತಿಯ ಬಿಂದಿಗೆಯನ್ನು ಕಳೆದುಕೊಂಡ ನೆನಪು ಮತ್ತೆ ಮರುಕಳಿಸಿದ್ದು ಅತ್ತೆ ಮನೇಲಿ ಸಣ್ಣ ಬಿಂದಿಗೆಯಿಂದ ನಿತ್ಯ ಬೆಳಿಗೆದ್ದು ತುಳಸಿಗೆ ನೀರು ಎರೆಯುವಾಗ!!

Tuesday, March 23, 2010

ಮರಳಿ ಭಾವದೊಡಲಿಗೆ...

ಮದುವೆ ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.

ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.

ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...

ಪ್ರೀತಿಯಿಂದ

ಚಿತ್ರಾ ಸಂತೋಷ್