Wednesday, May 27, 2009

'ಅಕ್ಕಾ, ನಮ್ಮಮ್ಮ-ಅಪ್ಪನ ಜಗಳ ನಿನಗೆ ತೊಂದ್ರೆ ಆಯ್ತಾ?'!!

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ..
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ....


ಅಮೃತವರ್ಷಿಣಿ ಚಿತ್ರದ ಸುಂದರ ಗೀತೆ ಮನಸ್ಸನ್ನೇ ಉಯ್ಯಾಲೆಯಾಗಿಸಿತ್ತು. ಹಾಡು ಕೇಳ್ತಾ ಓದೋದು ನನ್ನ ಅಭ್ಯಾಸ..ನನ್ನ ಪುಟ್ಟ ಕೋಣೆಯೊಳಗೆ ಕುಳಿತರೆ ಪಕ್ಕದ ಮನೆಯವರ ಮಾತುಗಳು ಕಿವಿಗೆ ಬೀಳೋ ಸಾಧ್ಯತೆಗಳಿರುವುದರಿಂದ ಜೋರಾಗಿ ಹಾಡು ಹಾಕಿ ಓದ್ತಾ ಇದ್ದೆ. ಕಿಟಕಿ ಬಾಗಿಲು ತೆರದರೆ ಬೀಸೋ ಗಾಳಿ, ಚಲಿಸುವ ಮೋಡಗಳು, ನಿರಭ್ರ ಆಕಾಶ...ಎಲ್ಲವೂ ಮನಸ್ಸಿಗೆ ಮುದ ನೀಡುತ್ತೆ.

ಹಾಗೇ ಓದಲು ಕುಳಿತಿದ್ದರೆ ಪಕ್ಕದ್ಮನೆಯ ಇಬ್ಬರು ಪುಟ್ಟ ಮಕ್ಕಳು ಬಂದು, "ಅಕ್ಕಾ, ನಿಂಗೆ ಓದೋಕೆ ತೊಂದ್ರೆ ಆಯ್ತಾ?' ಅಂತ ಕೇಳಿದಾಗ, 'ಯಾಕೆ ಅಂತ ಕೇಳಿದರೆ?' , ನಮ್ಮ ಅಪ್ಪ-ಅಮ್ಮ ಜಗಳ ಆಡ್ತಾ ಇದ್ದಾರೆ..ನಿಮಗೆ ಕೇಳಿ ಡಿಸ್ಟರ್ಬ್ ಆಯ್ತಾ ಎಂದು ಕೇಳಿದಾಗ ನನಗೆ ಅಚ್ಚರಿ. ನಿಜವಾಗಲೂ ಹಾಡು ಜೋರಾಗಿ ಇಟ್ಟಿದ್ರಿಂದ ನಂಗೆ ಅವರ ಕಿತ್ತಾಟ ಕಿವಿಗೆ ಬೀಳಲಿಲ್ಲ. ಹಾಡು ಆಫ್ ಮಾಡಿದಾಗ...ಹೆಂಡತಿಯೇ ಗಂಡನಿಗೆ ಹೊಡೆಯಿತೋ/ ಅಥವಾ ಗಂಡನೇ ಹೆಂಡತಿಗೆ ಹೊಡೆಯಿತೋ..ಗೊತ್ತಿಲ್ಲ. ಜೋರು ಜಗಳ..ಬೊಬ್ಬೆ ಕೇಳಿಸ್ತಾ ಇತ್ತು. ತುಂಬಾ ಸರಳವಾಗಿರೋ/ ಹಿತ-ಮಿತ ಮಾತಾಡೋ ಪುಟ್ಟ ಕುಟುಂಬ ಅದು. ಮೂವರು ಹೆಣ್ಣು ಮಕ್ಕಳೇ..ದೊಡ್ಡವಳು ಮೊದಲ ಪಿಯುಸಿ. ಇನ್ನೊಬ್ಳು ಆರನೇ ಕ್ಲಾಸು..ಸಣ್ಣವಳು ಯುಕೆಜಿ.

ಯಾಕೋ ಓದೋದು ಬೇಡ ಅನಿಸ್ತು, ಹಾಡು ನಿಲ್ಲಿಸಿದೆ. ಸುಮ್ಮನಾಗಿ ನನ್ನಷ್ಟಕ್ಕೆ ಯೋಚನಾ ಲಹರಿಗಳು ತಲೆಯನ್ನು ಕೊರೆದವು..ಈ ಬದುಕು ಹೀಗ್ಯಾಕೆ?

ಆ ಪುಟ್ಟ ಮಗು..ಇನ್ನೂ ಯುಕೆಜಿ..ಬಾಯಿ ಅಗಲಿಸಿ ನಗೋಕೆ ಬರುತ್ತೆ..ನಿತ್ಯ ಬಂದು ಬೆಳ್ಳಂಬೆಳಿಗ್ಗೆನೇ ಬಂದು ಊಟ ಆಯ್ತಾ? ಎಂದು ಕೇಳಿದಾಗ ಎತ್ತಿ ಮುದ್ದು ಮಾಡಿಬಿಡ್ತೀನಿ..ಅದು ಮತ್ತು ಆರನೆಯ ಕ್ಲಾಸಿನ ಹುಡುಗಿ ಬಂದು ಅಕ್ಕಾ ನಿಂಗೆ ತೊಂದ್ರೆ ಆಯ್ತಾ? ಎಂದಾಗ ಕರುಳು ಚುರ್ರೆಂದಿತ್ತು. ದಿಟ್ಟಿಸಿ ನೋಡುತ್ತಿದ್ದ ಕಣ್ಣುಗಳು, ಕಣ್ಣಲ್ಲಿನ ಹೆದರಿಕೆ, ನಮ್ಮಪ್ಪ-ಅಮ್ಮನ ಜಗಳ ಹೊರಗಿನವರಿಗೆ ಗೊತ್ತಾಯ್ತು ಎಂದಾಗ ಉಂಟಾಗುವ ಮುಜುಗರ ಎಲ್ಲಾವೂ ಆ ಪುಟ್ಟ ಮಕ್ಕಳ ಕಂಗಳಲ್ಲಿ ಸ್ಪಷ್ಟವಾಗುತ್ತಿತ್ತು. ನಿಜವಾಗಲೂ ಆ ಮಕ್ಕಳ ಮುಖ ನೋಡದಾಗ ನನಗರಿವಿಲ್ಲದಂತೆ ಕಂಗಳು ಒದ್ದೆಯಾಗಿದ್ದವು.

ಮುಗ್ಧ, ಪ್ರಾಮಾಣಿಕತೆಯ ಪ್ರತೀಕದಂತಿದ್ದ ಆ ಮುದ್ದು ಕಂದಮ್ಮಗಳ ಜೊತೆ ನಾವೆಷ್ಟು ಸಣ್ಣವರಾಗಿ ವರ್ತಿಸ್ತೀವಿ. ಭವಿಷ್ಯದ ನಗುವಾಗಬೇಕಿದ್ದ ಮಕ್ಕಳ ಬದುಕಿನಲ್ಲಿ ನಗೆಬೆಳದಿಂಗಳು ಕಂಡೀತೇ? ಯಾಕೋ ಮನಸ್ಸಿಗೆ ತೀರ ನೋವಾಯಿತು.

Friday, May 15, 2009

ಗೆಳತಿ ಮತ್ತೆ ಸಿಕ್ಕಾಗ ....

ಆಫೀಸ್ ನಲ್ಲಿ ಬಂದು ಕುಳಿತಾಗ ಚಡಪಡಿಕೆ, ಅಳು ಉಕ್ಕಿ ಬರುತ್ತಿತ್ತು. ನನ್ನ ಸಿಸ್ಟಮ್ ಎದುರು ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದೆ...ಅಮ್ಮನ ಮಡಿಲ ಬಿಟ್ಟು ಬಂದಂಗೆ! ಕಾರಣ ಬಸ್ಸಲ್ಲಿ ಬರುವಾಗ ನನ್ನ ಪ್ರೀತಿಯ ಗೆಳತಿಯನ್ನು ಕಳೆದುಕೊಂಡಿದ್ದೆ!! ಅವಳು ಬೇರಾರೂ ಅಲ್ಲ, ನನ್ನ ಡೈರಿ..ಹೆಸರು ಜನನಿ! ಎರಡು ವರ್ಷಗಳ ಹಿಂದೆ ಹೊಸದಿಗಂತ ಪತ್ರಿಕೆಯಲ್ಲಿರುವಾಗ ನನ್ನ ಸೀನಿಯರ್ ಸರ್ ಒಬ್ರು ನಂಗೆ ತುಂಬಾ ಚೆಂದದ ಡೈರಿ ಪುಸ್ತಕ ತಂದುಕೊಟ್ಟಿದ್ದರು. ಅದಕ್ಕೆ ಜನನಿ ಎಂದು ಹೆಸರಿಟ್ಟು, ನಾನು ಓದಿರುವ, ನನಗೆ ಇಷ್ಟವಾದ ಎಲ್ಲಾ ವಿಷಯಗಳನ್ನು ಅದರಲ್ಲಿ ಬರೆದಿಡುತ್ತಿದ್ದೆ. ಬಸವಣ್ಣನ ವಚನ, ಮಂಕುತಿಮ್ಮನ ಕಗ್ಗ, ರಸ್ಕಿನ್ ಬಾಂಡ್ ಕವನ ಸಾಲುಗಳು, ಬೇಂದ್ರೆ, ಕುವೆಂಪು, ನಿಸಾರ್, ಕೆ.ಎಸ್.ಎನ್, ಗೌರೀಶ ಕಾಯ್ಕಿಣಿ ಸಾಹಿತ್ಯ ವಿಮರ್ಶೆಯ ಸಾಲುಗಳು, ಲಂಕೇಶ್...ಹೀಗೆ ಕಳೆದ ಎರಡು ವರ್ಷದಲ್ಲಿ ಓದಿದ ಎಲ್ಲಾ ವಿಷಯಗಳನ್ನು ಬರೆದಿಡುತ್ತಿದ್ದೆ.

ನನ್ನದೊಂದು ಅಭ್ಯಾಸ ಎಂದ್ರೆ ಎಲ್ಲೇ ಹೋದ್ರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಳ್ಳುವುದು..ಕಣ್ಣಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಳ್ಳುವುದು. ಹಾಗೇ ನಿನ್ನೆ ಶುಕ್ರವಾರ ನನ್ನ ಬ್ಯಾಗ್ ನಲ್ಲಿ ಅದು ತುಂಬದಾಗ ಕೈಯಲ್ಲಿ ಹಿಡಿದುಕೊಂಡೇ ಬಸ್ಸು ಹತ್ತಿದ್ದೆ. ಅದೇನಾಯ್ತೋ ಇಳಿಯುವಾಗ ಮರೆತೇಬಿಟ್ಟೆ. ನನ್ನ ಒಂದು ಪುಟ್ಟ ವಸ್ತು ಕೂಡ ಕಳೆದುಹೋಗದ ಹಾಗೇ ಜೋಪಾನವಾಗಿಡೋಳು ನಾನು. ಛೇ! ಕಳೆದುಹೋಯ್ತಲ್ಲಾ..ಅಂದಾಗ ನಿಜವಾಗಲೂ ನನಗೆ ದುಃಖ ತಡೆಯಲಾಗಲಿಲ್ಲ. ನನ್ನ ಕಲೀಗ್ಸ್ 'ಚಿತ್ರಾ ಸಿಕ್ರೂ ಸಿಗಬಹುದು..ಚಿಂತೆ ಮಾಡಿ ಪ್ರಯೋಜನವಿಲ್ಲ' ಅಂತ ಸಮಾಧಾನ ಹೇಳುತ್ತಿದ್ರು. ಮನೆಯಲ್ಲಿ ನಿಂಗೆ ತಲೆಯಲ್ಲಿ ಏನು ತುಂಬಿಕೊಂಡಿತ್ತು ಅಂತ ಬೈದುಬಿಟ್ರು. ಗೆಳೆಯನೊಬ್ಬ ನೀನು ಚೆಂದದ ಹುಡುಗ್ರನ್ನು ನೋಡಿ ಮರೆತುಬಿಟ್ಟಿದ್ದಿ ಅಂತ ತಮಾಷೆ ಮಾಡಿದಾಗ ಕೆಟ್ಟ ಸಿಟ್ಟಿನಿಂದ ಅವನಿಗೆ ಎದುರುತ್ತರ ಕೊಟ್ಟಿದ್ದೆ. ಆಫೀಸ್ ನಲ್ಲಿ ಕುಳಿತವಳು ಎರಡೆರಡು ಸಲ ಬಸ್ ಸ್ಟಾಂಡಿಗೆ ಹೋಗಿ ಕಾದಾಗಲೂ ಆ ಬಸ್ಸನ್ನು ಪತ್ತೆ ಹಚ್ಚಲಾಗಲಿಲ್ಲ. ಕಥೆ ಮುಗಿದೇ ಹೋಯ್ತು ಅಂದುಕೊಂಡೆ. ರಾತ್ರಿ ಇಡೀ ಅದೇ ಗೆಳತಿಯ ಚಿಂತೆ,,,,,

ಇಂದು ಬೆಳಿಗ್ಗೆ ಏಳೂವರೆಗೆ ಬಂದು ಅದೇ ಬಸ್ ಸ್ಟಾಂಡಿನಲ್ಲಿ ಕುಳಿತೆ. ಎಂಟೂವರೆ ತನಕವೂ ಬಸ್ಸು ಬರಲಿಲಲ್ಲ. ಆದ್ರೂ ಸಿಗುತ್ತೇನೋ ಅನ್ನೋ ಭರವಸೆ. ಎಂಟು ಮುಕ್ಕಾಲಿಗೆ ಬಸ್ಸು ಬಂದುಬಿಡ್ತು..ಒಟ್ಟೊಟ್ಟಿಗೆ ಮೂರು ಬಸ್ಸುಗಳು ಬಂದಾಗ ಆ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆಟೋ ಹತ್ತಿ ಬಸ್ಸನ್ನು ಹಿಂಬಾಲಿಸಿದೆ. ಸಿಗ್ನಲ್ ನಲ್ಲಿ ಬಸ್ಸು ನಿಂತಿತ್ತು. ಅಟೋ ಬಿಟ್ಟು ಬಸ್ಸು ಹತ್ತಿದಾಗ ಚಾಲಕನ ಎದುರುಗಡೆ ನನ್ನ ಜನನಿ ನಗುತ್ತಿದ್ದಾಳೆ! ಸ್ವರ್ಗಕ್ಕೆ ಮೂರೇ ಗೇಣು...ಖುಷಿಯೋ ಖುಷಿ. ಆ ಖುಷಿಯಲ್ಲಿ ಚಾಲಕರತ್ರ ನನ್ನ ಪುಸ್ತಕ ಕೊಡ್ತೀರಾ ಅಂತ ಕೇಳೋಕು ಮರೆತುಹೋಗಿ ಸುಮ್ನೆ ನಿಂತುಕೊಂಡು ನೋಡ್ತಾನೆ ಇದ್ದೆ.

"ಏನಮ್ಮ ನೋಡ್ತಾ ಇದ್ದೀಯಾ?'

"ಅಂಕಲ್, ಆ ಪುಸ್ತಕ ಕೊಡ್ತೀರಾ?"

"ಯಾಕೆ ಅದು ನನ್ನ ಪುಸ್ತಕ ಕಣಮ್ಮಾ"

"ಇಲ್ಲ ಅಂಕಲ್, ನಿನ್ನೆ ನಾನು ಮರೆತುಬಿಟ್ಟುಹೋಗಿದ್ದೆ"

"ಇಲ್ಲಮ್ಮಾ..ಇದು ನನ್ನ ಮಗನ ನೋಟ್ ಬುಕ್. ಕೊಡಕ್ಕಾಗಲ್ಲ. ಅದ್ರಲ್ಲಿ ಒಳ್ಳೊಳ್ಳೆ ಕವನಗಳು, ಬಸವಣ್ಣನ ವಚನಗಳು, ಪ್ರೇಮಕವನಗಳು, ಮಂಕುತಿಮ್ಮನ ಕಗ್ಗದ ಸಾಲುಗಳಿವೆ. ನನ್ನ ಮಗ ಬರೆದಿಟ್ಟಿದ್ದು ಕೊಡಕ್ಕಾಗಲ್ಲ"

ನಂಗೆ ನಗು ಬಂದು, ಜೋರಾಗಿ ನಕ್ಕುಬಿಟ್ಟೆ.

"ನೋಡಮ್ಮಾ..ನಾನು ಈ ಪುಸ್ತಕ ಕೊಡಬೇಕಾದ್ರೆ ನಂಗೆ ನೀನು ಟಿಫನ್ ಕೊಡಿಸಬೇಕು. ಹಾಗಾದ್ರೆ ಮಾತ್ರ ಕೊಡ್ತೀನಿ" ಅಂದಾಗ

"ಆಯ್ತು ಅಂಕಲ್..ಹೊಟೇಲ್ ತಿಂಡಿ ಬೇಡ..ನಮ್ಮನೆಯಿಂದ ನೀರು ದೋಸೆ ಮಾಡಿ ತಂದುಕೊಡ್ತೀನಿ"

"ಮಂಗ್ಳೂರು ಹುಡುಗಿನಾ ನೀನು..ಆಯ್ತಮ್ಮ..ತಕೋ ನಿನ್ನ ಪುಸ್ತಕ. ನಾವೆಲ್ಲಾ ಓದಿ ಖುಷಿಪಟ್ವಿ. ತುಂಬಾ ಚೆನ್ನಾಗ್ ಬರೆದಿದ್ದೀಯಾ. ಗುಡ್" ಎಂದು ಬಸ್ಸಿನಲ್ಲಿದ್ದವರನ್ನೆಲ್ಲಾ ನಗೆಯ ಕಡಲಲ್ಲಿ ಮುಳುಗಿಸಿ ಆ ಪುಸ್ತಕ ನನ್ನ ಕೈಗಿತ್ತರು. ಅಷ್ಟೇ ಅಲ್ಲ, ಆ ನಿರ್ವಾಹಕ ಅಂಕಲ್ ಅದೇಂಗೆ ಬಾಯಿಪಾಠ ಮಾಡಿಕೊಂಡಿದ್ರೋ ..ಆ ಪುಸ್ತಕದಲ್ಲಿದ್ದ ಪ್ರೇಮ ಕವನದ ಕೆಲ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ಬಸ್ಸಿನಲ್ಲಿದ್ದವರನ್ನೆಲ್ಲಾ ನಗಿಸುತ್ತಿದ್ರು. ಬೆಳಿಗ್ಗೆ ಶಿವಾಜಿನಗರದಿಂದ ಹೊರಡುವ ಶಿವಾಜಿನಗರ-ಕೋರಮಂಗಲ ಕೆಎ-01, ಎಫ್ ಎ-544 ನಂಬರ್ ಬಸ್ಸಿನ ಚಾಲಕ ಬಿಳಿ ಗಡ್ಡದ ಅಂಕಲ್ ಮತ್ತು ನಿರ್ವಾಹಕ ಅಂಕಲ್ ಕುರಿತು ಹೆಮ್ಮೆ ಅನಿಸ್ತು. ಥ್ಯಾಂಕ್ಯೂ ಅಂಕಲ್.....!! ನಿಜಕ್ಕೂ ನಾನೆಷ್ಟು ಖುಷಿಪಟ್ಟೆ ಗೊತ್ತಾ?

Thursday, May 14, 2009

'ಪಿಂಕು, ಇವತ್ತು ನನ್ನ ಹುಟ್ಟುಹಬ್ಬನಾ?'

ಐದು ವರುಷಗಳ ಹಿಂದಿನ ಘಟನೆ. ನಾನಾಗ ಪ್ರಥಮ ಬಿಎ. ತೋಚಿದ್ದನ್ನು ಗೀಚೋ ಗೀಳು. ಹೆಚ್ಚು-ಕಡಿಮೆ ಎಲ್ಲಾ ಕನ್ನಡ ಪತ್ರಿಕೆಗಳು, ವಾರಪತ್ರಿಕೆಗಳಲ್ಲೂ ನಾನು ಬರೆದ ಪುಟ್ಟ ಬರಹಗಳು ಪ್ರಕಟವಾಗುತ್ತಿದ್ದವು. ಈ ಗೀಚಾಟಕ್ಕೆ ಬಲಿಯಾಗಿ ನನ್ನ ಮೊದಲ ಚುಟುಕು ಕವನ ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಮೆಚ್ಚಿ ಪತ್ರ ಬರೆದವರಲ್ಲಿ ಮೊದಲಿಗರು ಜಗ್ಗಣ್ಣ. ಪುಟ್ಟ ಪೋಸ್ಟ್ ಕಾರ್ಡೊಂದರಲ್ಲಿ ನನಗೆ ಬರೆದ ನಾಲ್ಕು ಸಾಲಿನ ಪತ್ರ ಭಾಳ ಇಷ್ಟವಾಗಿಬಿಡ್ತು. ಆಮೇಲೆ ನನ್ನ ಪ್ರತಿ ಬರಹಗಳು ಪ್ರಕಟವಾದಗಲೂ ಅವರು ಪತ್ರ ಬರೆಯುತ್ತಿದ್ದರು.

ಆಗ ನನಗೆ ಪತ್ರದ ಗೀಳು ಕೂಡ ಜಾಸ್ತಿ. ಯಾರೇ ಪತ್ರ ಬರೆದ್ರೂ ಅದಕ್ಕೆ ಪುಟ್ಟ ಕಾರ್ಡೊಂದರಲ್ಲಿ ಕೃತಜ್ಞತೆ ಹೇಳಿಬಿಡೋದು. ಜಗ್ಗಣ್ಣನಿಗೂ ಹಾಗೇ ಮಾಡುತ್ತಿದ್ದೆ. ನಾನು ಅವರಿಗೆ ಬರೆದ ಕಾರ್ಡು ಅವರ ಮನೆಯಲ್ಲಿ ಸಾರ್ವಜನಿಕ ಪ್ರದರ್ಶನ ಆದ ಮೇಲೆ ಜಗ್ಗಣ್ಣನ ಕೈಗೆ ಸೇರುತ್ತಿತ್ತು. ಆಗ ಜಗ್ಗಣ್ಣ ನಂಗಿಟ್ಟ ಹೆಸರು 'ಪಿಂಕು'. ಪರಸ್ಪರ ಮುಖ ಪರಿಚಯವಿಲ್ಲದ ಪತ್ರ ಮೈತ್ರಿ ಒಂದೂವರೆ ವರ್ಷ ಸಾಗಿತು. ನಮ್ಮ ಹಾಸ್ಟೇಲಿನ ಅಡುಗೆಕೋಣೆಯಿಂದ ಹಿಡಿದು ಕಾಲೇಜಿನ ಕಾರಿಡಾರ್ ತನಕವೂ ಜಗ್ಗಣ್ಣ ಯಾರೂಂತ ಕುತೂಹಲ! ಆದ್ರೂ ನಾ ಫೋನಲ್ಲಿ ಕೂಡ ಮಾತನಾಡಿರಲಿಲ್ಲ. ಫೋನ್ ನಂಬರು ಎಷ್ಟೇ ಕೇಳಿದ್ರೂ ಕೊಡಲಿಲ್ಲ. ನನಗೆ ಸಂಶಯ ಬರತೊಡಗಿತ್ತು..ಯಾವಾಗ ಪತ್ರ ಬರೆದ್ರೂ ಅದರಲ್ಲಿ ಉಜಿರೆ ಪೋಸ್ಟ್ ಆಫೀಸ್ ನ ಸೀಲ್ ಬೀಳ್ತಾ ಇತ್ತು. ಹಾಗಿರುವಾಗ ಈತ ನಮ್ಮ ಕಾರಿಡಾರಲ್ಲೇ ಇದ್ದಾನೆ ಅನಿಸಿತು. ಆದ್ರೂ ಪತ್ರದಲ್ಲಿ ಬಿಡದೆ ಕಾಡುತ್ತಿದ್ದ ನನಗೆ, ಪಿಂಕು ನನ್ನ ಗೆಳೆಯನ ಜೊತೆ ಪತ್ರ ಕೊಟ್ಟು ಕಳಿಸ್ತೀನಿ..ಅದಕ್ಕೆ ಅದ್ರಲ್ಲಿ ಉಜಿರೆಯ ಸೀಲ್ ಬೀಳೋದು ಅಂತ ತಪ್ಪಿಸಿಕೊಳ್ಳುತ್ತಿದ್ರು.

ಕೊನೆಗೆ ಪೀಡಿಸಿ, ಕಾಡಿ, ಬೇಡಿ ನಂಬರು ಕೊಟ್ರು. ಮೊದಲೇ ರಚ್ಚೆ ಹಿಡಿದ್ರೆ ಬಿಡೋಳು ನಾನಲ್ಲ. ಸೆಂಟಿಮೆಂಟಲ್ಲಾಗಿ ಬರೆದು ಮೊಬೈಲ್ ನಂಬರು ಗಿಟ್ಟಿಸಿಕೊಂಡೆ. ಸಿಕ್ಕ ತಕ್ಷಣ ಫೋನ್ ಮಾಡಿದ್ರೆ , 'ಧ್ವನಿ ಎಲ್ಲೊ ಕೇಳಿದಂಗೆ ಇದೆ'!! ಆದ್ರೂ ಗೊತ್ತಾಗಲಿಲ್ಲ. ಕೊನೆಗೆ ಒಂದು ದಿನ ಪತ್ರ ಬರೆದು 'ಜಗ್ಗಣ್ಣ ನಿಂಗೆ ನಿಜವಾಗ್ಲೂ ತಂಗಿ ಮೇಲೆ ಪ್ರೀತಿಯಿದ್ರೆ ನನ್ನ ಮುಖತಃ ಭೇಟಿಯಾಗು. ಇಲ್ಲಾಂದ್ರೆ ಇಂದಿಗೆ ಪತ್ರ ಕೊನೆ" ಅಂತ ಹೇಳಿದೆ. ಏನೂ ಮಾಡಿದ್ರೂ ನನ್ನ ಹಠ ಬಿಡಲಿಲ್ಲ..ಕೊನೆಗೆ ಸೋತು ಒಪ್ಪಿಕೊಂಡ ಮಹಾಶಯ. ಕಾಲೇಜು ಪಕ್ಕ ಇರುವ ಪೋಸ್ಟ್ ಆಫೀಸು ಪಕ್ಕ ಬಾ. ನಾನು ಆಕಾಶ ನೀಲಿ ಶರ್ಟ್ ಧರಿಸಿದ್ದೇನೆ. ನಿನ್ನನ್ನು ನಾನೇ ಪತ್ತೆ ಹಚ್ಚುತ್ತೇನೆ ಎಂದಿದ್ದರು! ಆವಾಗಲೇ ಒಂದು ರೌಂಡ್ ಬೆವರು ಇಳಿದಿತ್ತು. ಛೇ! ದಿನಾ ಮಾತನಾಡುವವರೇ ಜಗ್ಗಣ್ಣ ಆದ್ರೆ? ಅಂತ ಅಂಜಿಕೆ ಬೇರೆ.

ಅಂದು ಮಧ್ಯಾಹ್ನ ಹನ್ನೆರಡೂವರೆ ಗಂಟೆ. ಹಾಸ್ಟೇಲಿನಿಂದ ಹಿಡಿದು ಕ್ಲಾಸ್ ತನಕವೂ ಎಲ್ಲರ ಜೊತೆ ಹೇಳಿದ್ದೆ ಜಗ್ಗಣ್ಣ ಸಿಗ್ತಾರೆ ಅಂತ. ಹಾಗೇ ಎಲ್ರಿಗೂ ಕುತೂಹಲ. ಒಂದೇ ಒಂದು ಕನ್ನಡ ಕ್ಲಾಸಿಗೆ ಚಕ್ಕರ್ ಹಾಕಿದವಳಲ್ಲ. ಅಂದು ನಾಗಣ್ಣ ಸರ್ ಕ್ಲಾಸಿಗೆ ಬಂಕ್ ಹೊಡೆದೆ. ಸರ್ ಬಂದವ್ರೆ ಚಿತ್ರಾ ಕಾಣ್ತಿಲ್ಲ ಎಂದಾಗ ಹುಡುಗೀರು ಗೊಳ್ಳೆಂದು ನಕ್ಕಿದ್ರಂತೆ. ಜಗ್ಗಣ್ಣನ್ನು ನೋಡಬೇಕೆಂದು ಕುತೂಹಲದಿಂದ ಪೋಸ್ಟ ಆಫೀಸು ಬಳಿ ಹೋಗಿ ಕಾದು ನಿಂತಾಗ..ಆಕಾಶನೀಲಿ ಶರ್ಟ್ ಹಾಕಿದ ವ್ಯಕ್ತಿಯನ್ನು ನೋಡಿ ಭೂಮಿ ಬಾಯಿಬಿಟ್ಟು ನನ್ನ ನುಂಗಬಾರದೆ ಅನಿಸ್ತು. ಮುಖಕ್ಕೆ ಬಾರಿಸಿದ ಹಾಗೆ...ನನ್ನ ಸಿಟ್ಟನ್ನೆಲ್ಲಾ ಹೊರತೆಗೆದು ಬೈದುಬಿಟ್ಟು ವಾಪಾಸ್ ಬಂದೆ!

ಜಗ್ಗಣ್ಣ ಬೇರೆ ಯಾರೂ ಆಗಿರಲಿಲ್ಲ..ಅದೇ ಪೋಸ್ಟ ಆಫೀಸ್ ನಲ್ಲಿದ್ರು. ನಿತ್ಯ ನಾನು ಅವರಿಗೆ ಲೆಟರ್ ಬರೆದು ಅವರ ಕೈಯಲ್ಲೇ ಪೋಸ್ಟ ಮಾಡಕೆ ಕೊಡುತ್ತಿದ್ದೆ. ಕಾರ್ಡು ತೆಗೆದುಕೊಳ್ಳುವಾಗಲೆಲ್ಲಾ ಸುಮ್ಮನೆ ನಕ್ಕು ನನ್ನ ಕೈಯಿಂದ ಕಾರ್ಡ್ ತಕೋತಾ ಇದ್ರು. ಆದ್ರೂ ಅವ್ರ ಮೇಲೆ ನಂಗೆ ಡೌಟು ಬರಲಿಲ್ಲ. ನಾನು ಅವರಿಗೆ ಪೋಸ್ಟ ಮಾಡುತ್ತಿದ್ದ ಕಾರ್ಡನ್ನು ಅವರೇ ಕಿಸೆಗೆ ತುಂಬಿಕೊಂಡು ಮನೆಯಲ್ಲಿ ಎಲ್ಲರೆದುರು ಓದಿ ಮಜಾ ಮಾಡುತ್ತಿದ್ರಂತೆ!

ಮತ್ತೆ ಮರುದಿನ ಹೋಗಿ ಜಗ್ಗಣ್ಣ ಕ್ಷಮಿಸಿ ಅಂತ ಹೇಳಿದೆ. ಆಮೇಲೆ ಒಂದೂವರೆ ವರ್ಷ ಜಗ್ಗಣ್ನನ ಜತೆಗಿದ್ದೆ. ಕೇವಲ ನನಗೆ ಮಾತ್ರವಲ್ಲ ನಮ್ಮ ಹಾಸ್ಟೇಲ್ ಹುಡುಗಿಯರಿಗೆಲ್ಲ ಜಗ್ಗಣ್ಣನೇ ಆಗಿದ್ರು. ಅವರು ಮೊದಲ ಬಾರಿ ನನ್ನ ಹುಟ್ಟುಹಬ್ಬಕ್ಕೆ ಕೊಟ್ಟ ಸಿಲ್ವರ್ ಕಲರ್ ವಾಚ್ ಈಗಲೂ ನನ್ನ ಕೈಯಲ್ಲಿದೆ. ಕೊನೆಗೆ ಬೆಂಗಳೂರಿಗೆ ಬರುವಾಗಲೂ ನನ್ನ ಕರೆದುಕೊಂಡು ಬಂದಿದ್ದು ಜಗ್ಗಣ್ಣನೇ! ಈಗ ಜಗ್ಗಣ್ಣ ನಮ್ಮಮ್ಮಂಗೂ ಮಗ ಆಗಿಬಿಟ್ಟಿದ್ದಾರೆ. ಎನಿಸಿಕೊಂಡಾಗ ತುಂಬಾ ಖುಷಿ ಆಗುತ್ತೆ. ಹಳೆಯದನ್ನೆಲ್ಲಾ ನೆನೆಸಿಕೊಂಡು ದಿನಾ ನಗುತ್ತಿರುತ್ತಾರೆ. ಮೊನ್ನೆಮೊನ್ನೆ ಬೆಂಗಳೂರಿಗೆ ಬಂದು ಒಂದು ವಾರ ಇದ್ದು ಹೋಗಿದ್ರು.

ಈ ಘಟನೆ ಬರೆದಿದ್ದು ಯಾಕಂದ್ರೆ ಮೇ.13ಕ್ಕೆ ಜಗ್ಗಣ್ಣನ ಹುಟ್ಟುಹಬ್ಬ.ತಮಾಷೆ ಅಂದ್ರೆ ಅವರ ಹುಟ್ಟುಹಬ್ಬ ಅವರಿಗೆ ನೆನಪೇ ಇರಕ್ಕಿಲ್ಲ. ನಿನ್ನೇ ಹಾರೈಕೆ ಹೇಳೋಣ ಅಂತ ಫೋನು ಮಾಡಿದ್ರೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ಸ್ಟಾಂಡಿನಲ್ಲಿ ನಿಂತುಕೊಂಡು , 'ಪಿಂಕು ನನ್ನ ಹುಟ್ಟಿದ ದಿನ ಮರೆತೇಹೋಗಿತ್ತು ಮಾರಾಯ್ತಿ' ಅಂತ ಜೋರಾಗಿ ನಗುತ್ತಿದ್ದಾರೆ! ಆಶ್ಚರ್ಯ ಎಂದ್ರೆ ನನ್ನ ಪರಿಚಯ ಆದಾಗಿನಿಂದ ಅವರ ಹುಟ್ಟಿದ ದಿನವನ್ನು ನಾನೇ ನೆನಪಿಸುತ್ತಿದ್ದೇನೆ. ಯಾವಾಗ ನೋಡಿದ್ರೂ ಅಣ್ಣಂದಿರ ಬಗ್ಗೆನೇ ಹೇಳ್ತಾಳೆ ಅಂತ ಬೋರ್ ಅನಿಸ್ತಾ..??ಸಾರೀ..ನಂಗೆ ಹೇಳದೆ ಇರಕ್ಕಾಗದು..ಅಣ್ಣಂದಿರು ಅಂದ್ರೆ ನಂಗೆ ಅಮ್ಮ ಥರ!
ಪ್ರೀತಿಯ ಜಗ್ಗಣ್ಣ..ನಿನಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು.
ಹುಲ್ಲಾಗು ಬೆಟ್ಟದಡಿ..ಮನೆಗೆ ಮಲ್ಲಿಗೆಯಾಗು...
ಪಿಂಕಿಗೆ ಯಾವಾಗಲೂ ಪ್ರೀತಿಯ ಅಣ್ಣನಾಗು..
ಸವಿಹಾರೈಕೆಗಳು..