Monday, December 15, 2008

ಏನೂ ಬೇಡ..ಒಂದು ಹಿಡಿ ಪ್ರೀತಿ ಕೊಡ್ತೀರಾ..?!

ಹಾಲು ಬೆಳದಿಂಗಳಲ್ಲಿ ಚಂದಿರ ಕಣ್ಣಮುಚ್ಚಾಲೆಯಾಡುತ್ತಿದ್ದ. ಮನೆಯ ಟೆರೇಸ್ ಮೇಲೆ ಕುಳಿತು ವಿದ್ಯುತ್ ಬಲ್ಬುಗಳಿಂದ ಝಗಝಗಿಸುತ್ತಿದ್ದ ನಗರವನ್ನ, ಅರ್ಜೆಂಟಾಗಿ, ವೇಗದಿಂದ ಓಡುವ ವಾಹನಗಳನ್ನು ನೋಡುತ್ತಿದ್ದಂತೆ,..ಥತ್! ಪವರ್ ಕಟ್ ಆಗ್ಲಿ..ಈಗ್ಲೇ ಕತ್ತಲಾಗಲೀ ಅನಿಸಿತ್ತು. ಬರೇ ಬೆಳದಿಂಗಳಲ್ಲಿ ಚಂದಿರನ ಕಣ್ತುಂಬಾ ತುಂಬಿಕೊಳ್ಳುವ ಹಂಬಲ ನನ್ನದಾಗಿತ್ತು. "ದಯವಿಟ್ಟು ದೀಪವಾರಿಸು ಗೆಳೆಯಾ, ನನಗೆ ಬೆಳಕು ಬೇಕಿದೆ"ಎನ್ನುವ ತಾವೋ ಬರೆದ ಕವಿತೆಯ ಸಾಲು ನೆನಪಾಯಿತು. ಆದರೆ ಪವರ್ಕಟ್ ಆಗಲಿಲ್ಲ. ಕತ್ತಲಲಲ್ಲಿ 'ಬೆಳದಿಂಗಳು' ನೋಡೋ ನನ್ನಾಸೆ ಫಲಿಸಲಿಲ್ಲ. ಒಬ್ಬಳೇ ಕುಳಿತವಳಿಗೆ ಪುಸ್ತಕ, ಪೆನ್ನು ಸಾಥ್ ನೀಡಿದ್ದವು. ಏನಾದ್ರೂ ಬರೆಯೋಣ ಎಂದುಕೊಂಡವಳಿಗೆ ..ಹೊಳೆದದ್ದು 'ಬದುಕಿನ ಪ್ರೀತಿ'!

ಪ್ರೀತಿ..ಯಾರಿಗೆ ತಾನೇ ಇಷ್ಟವಾಗಲ್ಲ? ನನಗೂ ಇಷ್ಟವಾಗುತ್ತೆ..ನಿಮ್ಮ ಹೃದಯಕ್ಕೂ ಆಪ್ತವಾಗುತ್ತೆ. ಪ್ರೀತಿ..ನಿತ್ಯ ನಮ್ಮ ಪೀಡಿಸಲ್ಲ, ಸವಿಸವಿಯಾಗಿ ಕಾಡಿಸುತ್ತೆ. ಇಡೀ ಜಗತ್ತಿಗೆ ಅಪ್ಯಾಯಮಾನವಾಗುತ್ತೆ. ಸಮಸ್ತ ಜೀವಸಂಕುಲಕ್ಕೂ ಪ್ರೀತಿ ಹತ್ತಿರವೆನಿಸುತ್ತೆ. ನಮಗೆ ಖುಷಿ ಕೊಡುತ್ತೆ..ಮಾತು ಬಾರದ ಪ್ರಾಣಿ ಪ್ರಪಂಚ, ಚಿಲಿಪಿಲಿ ಎನ್ನುವ ಹಕ್ಕಿ ಪ್ರಪಂಚ, ಘಮ್ಮೆನ್ನುವ ಪುಷ್ಪಲೋಕ..ಹೀಗೆ ಎಲ್ಲೆಲ್ಲೂ ಪ್ರೀತಿ ಇರಬಹುದೇನೋ ಅಲ್ವೇ? ಮೊನ್ನೆಮೊನ್ನೆ ತಂದ ನಾಯಿಮರಿ ನನ್ನ ಕಂಡರೆ..ಬಾಲ ಅಲ್ಲಾಡಿಸುತ್ತೆ...ಮನೆಯಲ್ಲಿದ್ದ ಬೆಕ್ಕು ಮರಿ..ಮಿಯಾಂ ಮಿಯಾಂ ಅನ್ನುತ್ತಾ ನಮ್ಮ ಹಿಂದೆ ಸುತ್ತುತ್ತೆ...ನಮ್ಮ ಮುಖ ಕಾಣದಿದ್ದಾಗ ಹಟ್ಟಿಯಲ್ಲಿದ್ದ ಹಸು ಅಂಬಾ ಎಂದು ಕರೆಯುತ್ತೆ..ಗೆಳೆಯ/ಗೆಳತಿ ನಿತ್ಯ ಶುಭೋದಯ ಅಂದಾಗ ಮನಸ್ಸೆಕೋ ಖುಷಿಗೊಳ್ಳುತ್ತೆ..ಅಣ್ಣನೊಂದಿಗೆ ಪುಟ್ಟ ಪುಟ್ಟ ವಿಷ್ಯಗಳಿಗೂ ಜಗಳವಾಡುವುದು..ಅಮ್ಮನತ್ರ ಬೆಳ್ಳಂಬೆಳಿಗ್ಗೆ ಮುನಿಸಿಕೊಳ್ಳೋದು ..ಹೊಸೆದ ಹೊಂಗನಿಸಿದೆ ಅಕ್ಷರ ರೂಪ ನೀಡಿದ ಗುರು ನಿತ್ಯ ಬೈಯುತ್ತಿದ್ದರೂ ನಮ್ಮನ್ನೆಷ್ಟು ಪ್ರೀತಿಸುತ್ತಿದ್ದರು? ಪುಟ್ಟ ಮಗುವಾಗಿದ್ದಾಗ ಎತ್ತಿ ಆಡಿಸಿದ ನಮ್ಮೂರ ಹಣ್ಣು ಹಣ್ಣು ಅಜ್ಜಿ..ನಾನು ಮನೆಗೆ ಹೋದ ತಕ್ಷಣ..ಮನೆಯೆದುರು ಪ್ರತ್ಯಕ್ಷ ಆಗ್ತಾಳೆ...ಈ ಎಲ್ಲವೂ ಪ್ರೀತಿಯ ಒಂದು ಭಾಗ ಎಂದನಿಸುತ್ತೆ.
ಥತ್! ಪ್ರೀತಿಯ ವಿವಿಧ ಮಗ್ಗುಲುಗಳನ್ನು ತೆರೆಯುತ್ತಾ ಹೋದಂತೆ...ಜಗತ್ತಿನ ಇನ್ನೊಂದು ಮುಖ ಕಣ್ಣೆದುರು ಬಂದು ನಿಲ್ಲುತ್ತೆ. ನಾನು ಪ್ರೀತಿ ಪ್ರೀತಿ ಅಂತ ಬಡ್ಕೋತಾ ಇದ್ದೀನಿ. ಆದರೆ..ಜಗತ್ತು?! ಬೆಳಿಗೆದ್ದು ಪತ್ರಿಕೆ ತೆರೆದರೆ, ಟಿವಿ ಆನ್ ಮಾಡಿದರೆ..ಲೋಕಾನ ಕಣ್ತೆರೆದು ನೋಡಿದರೆ..ಬರೇ ರಕ್ತಪಾತ, ಕೊಲೆ, ಮಾರಣಹೋಮ, ವಂಚನೆ, ಮೋಸ, ಕಳ್ಳತನ, ಸುದ್ದಿಗಳೇ ಕಣ್ಣಿಗೆ ಬೀಳುತ್ತವೆ. ಪ್ರೀತಿಯ ಅಕ್ಷಯ ಪಾತ್ರೆ ನೆತ್ತರಲೋಕದಂತೆ ಭಾಸವಾಗುತ್ತೆ. ಉಗ್ರರು ಬಾಂಬು ಹಾಕ್ತಾರೆ, ಅಮಾಯಕರನ್ನು ಕೊಲ್ತಾರೆ..ಹಸಿದ ಹೊಟ್ಟೆಗೆ ಅನ್ನ ಇಲ್ಲದಂತೆ ಮಾಡುತ್ತಾರೆ..ಎಷ್ಟೋ ಬದುಕುವ ಜೀವಗಳಿಗೆ ಜೀವಗಳಿಗೆ ಅಪ್ಪ-ಅಮ್ಮನೆಂಬ ದೇವರನ್ನು ಇಲ್ಲದಂತೆ ಮಾಡ್ತಾರೆ..ಅವರೆದುರು ಪ್ರೀತಿ ಬಗ್ಗೆ ಬೊಬ್ಬಿಟ್ಟರೆ ಅವರಿಗೆ ಕೇಳಿಸುವುದೇ? ಅವರೆದುರು 'ಪ್ರೀತಿಸುತ್ತಿವಿ..ಹಿಡಿಯಷ್ಟು ಪ್ರೀತಿ ನೀಡಿ. ಜಗತ್ತು ನೆಮ್ಮದಿಯಾಗಿರಲಿ' ಅಂದ್ರೆ ಅದಕ್ಕೆ ಅರ್ಥವಿರುತ್ತಾ? ಇಲ್ಲ..ಇಲ್ಲ.
ಜಗತ್ತು ಹೀಗಿದ್ದರೂ ಹಿಡಿಪ್ರೀತಿ ತೋರಿಸಿದ್ದರೆ?! ಹಸಿದ ಹೊಟ್ಟೆ ತುಂಬುತ್ತೆ..ಖಾಲಿ ಹೃದಯದಲ್ಲಿ ಬೆಳಕು ಬೆಳಗಬಹುದು. ದುಃಖದ ಕಾರ್ಮೋಡ ತುಂಬಿದ ಮನಸ್ಸು ಹಗುರವಾಗಬಹುದು. ಬೊಗಸೆ ಹನಿ ಪ್ರೀತಿಯಿಂದ ಜಗತ್ತು ತುಂಬಾ ನೆಮ್ಮದಿಯಿಂದ ಇರಬಹುದು ಅನಿಸಲ್ವೇ? ಜಗದ ನೆಮ್ಮದಿಗೆ, ಸುಖನಿದ್ರೆಗೆ ಸುಖ ಸುಪ್ಪತ್ತಿಗೆ ಬೇಡ..ಮೊಗೆದಷ್ಟು ಬತ್ತದ ಪ್ರೀತಿ ಬೇಕು..ಕೊನೆಗೆ ಒಂದು ಬೊಗಸೆಯಷ್ಟು ಪ್ರೀತಿ ನೀಡಿ..ಅಷ್ಟೇ ಸಾಕು..ಆದ್ರೆ ಒಡೆದ ಕನ್ನಡಿನಾ ಒಂದಾಗಿಸುವವರು ಯಾರು?! ಹಿಡಿಪ್ರೀತಿ ಕುರಿತು ಯೋಚಿಸುತ್ತಾ ಕುಳಿತವಳಿಗೆ..ಕವನ ಹುಟ್ಟಲಿಲ್ಲ..ಬರಹ ಹುಟ್ಟಿತು. ಇದು ನನಗನಿಸಿದ್ದು..ತೋಚಿದ್ದು ಗೀಚಿದ್ದೇನೆ ಅಷ್ಟೇ.

32 comments:

Santhosh Rao said...
This comment has been removed by the author.
Santhosh Rao said...

ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.

ವಿಕಾಸ್ ಹೆಗ್ಡೆ .. ನನ್ನ ಒಂದು ಬರಹಕ್ಕೆ ಕಾಮೆಂಟ್ ಮಾಡಿದ್ದು ..ನಿಮ್ಮ ಬರಹಕ್ಕೆ ಚೆನ್ನಾಗಿ ಒಪ್ಪುತ್ತೆ :)

ತನ್ ಹಾಯಿ said...

ಜಗತ್ತು ನಿಂತಿರೋದೆ ಪ್ರೀತಿ ಮೇಲಲ್ವಾ ಶರಧಿ?
ಆಪ್ತ ಬರಹ..

ಸಂದೀಪ್ ಕಾಮತ್ said...

ಚಿತ್ರಾ,

ಈ ಜಗತ್ತಿನಲ್ಲಿ ಪ್ರೀತಿಯ ಕೊರತೆ ಇದ್ದದ್ದರಿಂದಲೇ ನಮಗೆ ಪ್ರೀತಿಯ ಮಹತ್ವ ಗೊತ್ತಾಗಿರೋದು!
ಇಲ್ಲಾಂದ್ರೆ ಪ್ರೀತಿ ಕೂಡಾ take it for granted ಆಗಿರೋದು ಅಲ್ವ?

ರಾಘವೇಂದ್ರ ಕೆಸವಿನಮನೆ. said...

ನವಿರಾದ ಬರಹ. ಚೆನ್ನಾಗಿ ಓದಿಸಿಕೊಂಡುಹೋಯಿತು.
- ರಾಘವೇಂದ್ರ ಕೆಸವಿನಮನೆ

ಚಿತ್ರಾ ಸಂತೋಷ್ said...

@ಸಂತೋಷ್..ಥ್ಯಾಂಕ್ಯೂಉ..ಅವ್ರ ಕಮೆಂಟು ಎತ್ತಂಹಾಕಂಡು ಬಂದುಬಿಟ್ರಾ?(:)
@ತನ್ ಹಾಯಿ, ರಾಘವೇಂದ್ರ..ಧನ್ಯವಾದಗಳು
@ಸಂದೀಪ್..ಹೌದು..ನೀವು ಹೇಳಿದ್ದು ಸರಿ.
ತುಂಬು ಪ್ರೀತಿ,
ಚಿತ್ರಾ

shivu.k said...

ಚಿತ್ರಾ,
ಪ್ರೀತಿ ಬಗ್ಗೆ ನಿನಗಿರುವ ಕಾಳಜಿ, ಗೌರವ, ನಿನ್ನ ಬರವಣಿಗೆಯಲ್ಲಿ ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಂಡಿದೆ. ಇದು ನನ್ನ ಪ್ರಾಮಾಣಿಕ ಅಭಿಪ್ರಾಯ.

ಮತ್ತೆ ನನಗೆ ಅನ್ನಿಸುತ್ತೆ. ನೀನು ಮುಂದೆ ದೊಡ್ಡ ಫಿಲಾಸಫರ್ ಆಗಬಹುದು. ಏನಂತೀರೀ ಮೇಡಮ್, ಆಗ ನಮ್ಮನ್ನು ನಮ್ಮ ಬ್ಲಾಗಗಳನ್ನು ಮರೆಯದಿದ್ದರೆ ಸಾಕು ![ಇದು ಯಾಕೆ ಹೇಳಿದನೆಂದರೆ ಪ್ರೀತಿ ಬಗ್ಗೆ ಇಷ್ಟೊಂದು ತಿಳಿದುಕೊಂಡು ಬರೆದಿದ್ದು ನೋಡಿದ ಮೇಲೆ].

Ashok Uchangi said...

ಹೌದು ಪ್ರೀತಿ ಎಂದೂ ಬತ್ತದ ಒರತೆ.ಪ್ರೀತಿ ಎಂಬುದು ಮಾಯೆ ಹಾಗೆಯೇ ಕುರುಡು.
ಅಶೋಕ ಉಚ್ಚಂಗಿ
ಮೈಸೂರು.
http://mysoremallige01.blogspot.com/

ಆಲಾಪಿನಿ said...

ಚಿತ್ರಾ, ಪ್ರಾಮಾಣಿಕತೆ, ಮುಗ್ಧತೆಯೇ ನಿಮ್ಮ ಬರಹದ ಶಕ್ತಿ.

ಚಿತ್ರಾ ಸಂತೋಷ್ said...

@ಅಶೋಕ್ ಸರ್..ಶರಧಿಗೆ ಸ್ವಾಗತ.
@ಶಿವಣ್ಣ...ಅಯ್ಯೋ ದೇವ್ರೇ..ನಮ್ಮ ಅಣ್ಣನವ್ರೆಲ್ಲ ಮಹಾನ್ ಫಿಲಾಸಫರ್ ಆಗಿರುವಾಗ ನಾನು ಆದಂಗೆ ಬಿಡಿ.ಹಿಹಿಹಿ ಥ್ಯಾಂಕ್ಯೂಊಊಊಊ
@ಶ್ರೀದೇವಿ..ಥ್ಯಾಂಕ್ಸ್ ಎನ್ನಲೇ
-ತುಂಬುಪ್ರೀತಿ,
ಚಿತ್ರಾ

ರವಿರಾಜ್ ಆರ್.ಗಲಗಲಿ said...

chennagide munduvarili

Rajesh Manjunath - ರಾಜೇಶ್ ಮಂಜುನಾಥ್ said...

ಚಿತ್ರ,
ನಂಬಿಸುವ ಪ್ರೀತಿ, ಧೈರ್ಯ ತುಂಬುವ ಪ್ರೀತಿ, ಹೆದರಿಸುವ ಪ್ರೀತಿ, ಹೆದರಿಸಿ ಸನಿಹ ಸೆಳೆದು ಅಮ್ಮನಂತಾಗುವ ಪ್ರೀತಿ, ಇಂತಹ ಪ್ರೀತಿಯ ಬಗ್ಗೆ ತುಂಬಾ ಚೆನ್ನಾಗಿ ಬರ್ದಿದ್ದೀರಿ.
ನನಗೆ ನೀವು ಬರೆವ ವಿಷಯಕ್ಕಿಂತ, ಅದರ ಹರಿವು ತುಂಬಾ ಇಷ್ಟವಾಗುತ್ತೆ, ತುಂಬಾ ಸಹಜ, ಸ್ವಾಭಾವಿಕವಾಗಿದೆ.
-ರಾಜೇಶ್ ಮಂಜುನಾಥ್

ಕನಸು said...

hi,
medam urs article abuot LOVE is realy woderfull and so nice , its too near to heart breath .`` love is a love is a love is a love is a love ...it cann`t put into word .that1s LOVE .isit...?

ಮಲ್ಲಿಕಾರ್ಜುನ.ಡಿ.ಜಿ. said...

ನಿಮ್ಮ ಬರಹ, ಅದಕ್ಕೆ ತಕ್ಕ ಫೋಟೋ, ಅಷ್ಟೊಂದು ಚಂದವಿರುವಾಗ ಇನ್ನು ದೃಷ್ಟಿಬೊಟ್ಟಿಟ್ಟಂತೆ ನಾನೇನು ಬರೆಯಲಿ. ನಾವೆಷ್ಟು ಕೊಡ್ತೀವೂ ಅದಕ್ಕೆ ಹತ್ತರಷ್ಟು ವಾಪಸ್ ಸಿಗುತ್ತೆ ಪ್ರೀತಿ.ಸವಿ ಹಾರೈಕೆಗಳು.

ಹರೀಶ ಮಾಂಬಾಡಿ said...

ಪೊರ್ಲುದ ಬರೆಹ

Ittigecement said...

ಚಿತ್ರಾರವರೆ...

ಪ್ರೀತಿ ಸಿಕ್ಕಿದಾಗ ಅನುಭವಿಸಿ ಬಿಡಬೇಕು..
ಜತನವಾಗಿ ಕಾಯ್ದು ಕೊಳ್ಳಬೇಕು...
ಅದು ಜವಾಬ್ದಾರಿ ಕೂಡ...
ಕಳೆದು ಹೋದರೆ ..
ಮತ್ತೆ ಸಿಗುವದು ಕಷ್ಟ...

ಲೇಖನ ತುಂಬಾ ಚೆನ್ನಾಗಿದೆ...

ಧನ್ಯವಾದಗಳು....

ಚಿತ್ರಾ ಸಂತೋಷ್ said...

@ರವಿರಾಜ್, ಕನಸು, ಹರೀಶ್ ಸರ್..ಧನ್ಯವಾದಗಳು
@ರಾಜೇಶ್ ಮಂಜುನಾಥ್..(:)..ಆಗಾ ಬರುತ್ತಿರಿ. ಶರಧಿ ನಿತ್ಯ ಹರಿಯುತ್ತಿರುತ್ತಾಳೆ.
@ಪ್ರಕಾಶ್ ಸರ್..ಹೌದು..ಪ್ರೀತಿ ಒಂದು ಕನ್ನಡಿ
@ಮಲ್ಲಿಯಣ್ಣ..ನಿಮ್ಮ ಹಾರೈಕೆ ಸದಾ ಇರಲಿ.
ತುಂಬುಪ್ರೀತಿ,
ಚಿತ್ರಾ

ತೇಜಸ್ವಿನಿ ಹೆಗಡೆ said...

ಚಿತ್ರಾ,

ನಿಸ್ವಾರ್ಥ, ನಿಷ್ಕಲ್ಪಶ ಪ್ರೀತಿಯಷ್ಟೇ ಸವಿಯಾದ ಭಾವವನ್ನು ಕೊಡುವುದು. ಸ್ವಾರ್ಥಪೂರಿತ ಪ್ರೀತಿ ತತ್‌ಕ್ಷಣಕ್ಕೆ ಸಿಹಿ ಅನಿಸಿದರೂ ಕ್ರಮೇಣ ಉಸಿರುಗಟ್ಟಿಸಿ ದ್ವೇಷವನ್ನು ಹುಟ್ಟಿಹಾಕಬಲ್ಲದು! ಏನೇ ಆದರೂ ಪ್ರೀತಿ ಎಂಬ ಪದವೇ ಅಪ್ಯಾಯಮಾನ. ಪ್ರೀತಿ ನಿಂತ ನೀರಾಗದೇ, ಸದಾ ಶರಧಿಯಾಗಿದ್ದರೆ ಬಲು ಸೊಗಸು ಅಲ್ಲವೇ? :) ತುಂಬಾ ಚೆನ್ನಾಗಿದೆ ಬರಹ.

ಪ್ರೀತಿಯಿಂದ,
ತೇಜಸ್ವಿನಿ.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಹಾಯ್ ಚಿತ್ರಾ...
ಪ್ರೀತಿ ಬಗ್ಗೆ ಬರೆದಿರೋ ಬರಹ ಚೆನ್ನಾಗಿದೆ. ಮದ್ಯ ಎಲ್ಲೆಲ್ಲೊ ಕೆಲವೊಂದು ಅನಗತ್ಯ ವಿಚಾರಗಳು ನುಸಿಳಿವೆ ಅಂದನಿಸಿತು. ಒಟ್ಟಾರೆ ಚೆನ್ನಾಗಿದೆ. ಪ್ರೀತಿಯೇ ಹಾಗೆ...ಯಾರನ್ನು ತಾನೆ ಬಿಟ್ಟಿದೆ. ಎಲ್ಲರಲ್ಲೂ ಒಂದೊಂದು ತರಹದ ಪ್ರೀತಿ ಇದ್ದಇದೆ. ಅದು ಇರಬೇಕು ಕೂಡ....

KRISHNA said...

nim baravanige preeti kandu achchari aytu. nirantara bareetaane irodu kooda aksharapreethi ankotene

ಚಿತ್ರಾ ಸಂತೋಷ್ said...

@ತೇಜಕ್ಕ..ಪ್ರೀತಿ ಶರಧಿಯಾಗಿರಬೇಕು ಎನ್ನೋದೇ ನಮ್ಮ-ನಿಮ್ಮೆಲ್ಲರ ಆಸೆ.
@ಅಗ್ನಿ ಸರ್..ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಬರೆಯೋಕೆ ಪ್ರಯತ್ನಿಸ್ತೀನಿ. ಥ್ಯಾಂಕ್ಯೂಊಊಊ ಸರ್.
@ಕೃಷ್ಣ..ನಿಮ್ಮ ಅನಿಸಿಕೆ ಸರೀನೇ ಇದೆ(:)
-ತುಂಬುಪ್ರೀತಿ,
ಚಿತ್ರಾ

Pramod said...

ಅಕ್ಷರಶ: ಸತ್ಯ, ಆದ್ರೆ ಜನರಲ್ಲಿ ಪ್ರೀತಿಯ೦ದ್ರೆ ಬರೀ ಕಾಲೇಜು-ಸಿನಿಮಾ ಲವ್ ಎ೦ಬ ತಿಳುವಳಿಕೆ ಇದೆ.
ಇತ್ತೀಚೆಗೆ ಸ್ವಲ್ಪ ಜಾಸ್ತೀನೆ ಪ್ರಬುದ್ಧ ಲೇಖನ ಬರೀತಾ ಇದ್ದೀರ :)

ನನ್ನ ಗೂಗಲ್ ರೀಡರ್ ನಿಮ್ಮ ಹೊಸ ಪೋಸ್ಟ್ ಗಳನ್ನು ಕಳಿಸಲೇ ಇಲ್ಲ! ಎಲ್ಲೋ ಸೆಟ್ಟಿ೦ಗ್ಸ್ ಚೇ೦ಜ್ ಆಗಿತ್ತು:)

Sushma Sindhu said...

ತುಂಬಾ ಅತ್ಮಿಯವಾದ ಬರಹ ಚಿತ್ರಾರವರೆ.

ಚಿತ್ರಾ ಸಂತೋಷ್ said...

@ಪ್ರಮೋದ್..ಹ್ಞಾಂ! ಹೌದಾ?! ಪ್ರತಿಕ್ರಿಯೆಗೆ ಧನ್ಯವಾದಗಳು ಸರ್
@ಸುಷ್ಮಾ..ಥ್ಯಾಂಕ್ಸ್ಉಊಉಉಉಉ
-ತುಂಬುಪ್ರೀತಿ,
ಚಿತ್ರಾ

ವಿ.ರಾ.ಹೆ. said...

ನಿಜವಾಗಿಯೂ ನನ್ನನ್ನು ಅಲ್ಲೇ ಕಟ್ಟಿಹಾಕಿದ್ದು ಈ ಬರಹ. ಇಷ್ಟವಾಯಿತು. ಸರಿಯೆನಿಸಿತು.

ಹಿಡಿಪ್ರೀತಿ ಕುರಿತು ಯೋಚಿಸುತ್ತಾ ಕುಳಿತವಳಿಗೆ..ಕವನ ಹುಟ್ಟಲಿಲ್ಲ..ಬರಹ ಹುಟ್ಟಿತು. ಒಳ್ಳೇದೇ ಆಯಿತು. ಕವನ ಆಗಿದ್ರೆ ಈ ನೇರ ಪರಿಣಾಮ ಖಂಡಿತ ಸಾಧ್ಯ ಇರಲಿಲ್ಲ., ಇಷ್ಟು ಜನರನ್ನ ತಲುಪುತ್ತಲೂ ಇರಲಿಲ್ಲ ಮತ್ತು ನಾನು ಓದುತ್ತಲೂ ಇರಲಿಲ್ಲ :)

ಕೆ. ರಾಘವ ಶರ್ಮ said...

ಒಂದು ಹಿಡಿ ಏತಕೇ? ನಾವಿರುವುದೆ ನಿಮಗಾಗಿ :-)

ಅಂತರ್ವಾಣಿ said...

ಚಿತ್ರಾರವರೆ,
ಅರ್ಥಪೂರ್ಣ ಲೇಖನ. ಕವನ ಹುಟ್ಟಿಲ್ಲದಿದ್ದರೆ ಚಿಂತೆಯಿಲ್ಲ. ಲೇಖನ ತುಂಬಾ ಚೆನ್ನಾಗಿದೆ.

ಅಂದಹಾಗೆ, ಶಿವು ಅವರ ಪ್ರಶಸ್ತಿ ಬಂದ ಚಿತ್ರಕ್ಕೆ ಒಂದು ಕವನ ಬರೆದು ಪೋಸ್ಟ್ ಮಾಡಿದ್ಡೇನೆ. ಸಮಯ ಸಿಕ್ಕಾಗ "ಅಂತರ್ವಾಣಿ" ಕೇಳಿ

NADIPREETI said...

ಹಾಯ್ ಚಿತ್ರ.
ಉಫ್ ...ನಿಮ್ಮ ಬ್ಲಾಗ್ ಓದುತ್ತಿದ್ದ ಹಾಗೆ ನನ್ನನ್ನ ನನ್ನ ನೆನಪಿನೂರಿಗೆ ಕರೆದುಕೊಂಡು ಹೋಗಿಬಿಟ್ರಿ. ನಿಮ್ಮ ಅಪ್ಪಿ ಓದುತ್ತಿದ್ದ ಹಾಗೆ ನನ್ನ ಪ್ರೀತಿಯ ಕುರಿಮರಿ ನೆನಪಾಯ್ತು. ಅದನ್ನ ಅಷ್ಟು ಹಚ್ಚಿಕೊಂಡಿದ್ದೆ. ಊರು ಬಿಟ್ಟು ಬರುವಾಗ ಸಿಟಿಯಲ್ಲಿ ಎಲ್ಲಿ ಮೇಯಿಸೋದು ಅಂತ ಅಪ್ಪ ಅದನ್ನ ಮಾರಿ ಬಂದಿದ್ದ.ಇಲ್ಲಿ ಕಾಂಕ್ರೀಟ್ ಕಾಡಿಗೆ ಬಿದ್ದ ಮೇಲೆ ಅದು ನೆನಪಾಗಿ ಒಬ್ಬನೇ ಕುಳಿತು ಅತ್ತದ್ದಿದೆ. ಅದರ ನೆನಪಿಗೆ ಸಲಾಮ್.
ನಾವೆಲ್ಲ ಒಂಥರ ಅಜ್ಜು ಥರದವರೇ! ಬಡತನ ನಮಗೆ ಎಲ್ಲಾ ಕಲಿಸಿಕೊಟ್ಟಿದೆ. ನಮಗೆ ನಲಿವಿಗಿಂತ ನೋವು ಚೆನ್ನಾಗಿ ಗೊತ್ತು. ಸುಖಕ್ಕಿಂತ ದುಃಖ ಚೆನ್ನಾಗಿ ಗೊತ್ತು. ಹೊಟ್ಟೆ ಬಿರಿಯೇ ತಿಂದದ್ದಕ್ಕಿಂತ ಹಸಿವಿನಿಂದ ಬಳಲಿದ್ದೇ ಹೆಚ್ಚು. ಬದುಕು ಕಲಿಸಿಕೊಡುವ ಪಾಠಕ್ಕಿಂತ ಇನ್ನಾವ ಪಾಠವಿದೆ?
ಅಜ್ಜುಗೆ ಒಳ್ಳೆದಾಗಲಿ.
ನಿಮ್ಮ ಬರಹಗಳು ಸರಳ ಮತ್ತು ಸೂಕ್ಷ್ಮ. ಬದುಕನ್ನು ನೇರವಾಗಿ ತೆರೆದಿಡುತ್ತವೆ. ಅದೇ ಮುಖ್ಯ ಅಲ್ವ.
ಇನ್ನು ಮೇಲೆ ಅವಾಗವಾಗ ಭೇಟಿ ಕೊಡ್ತೇನೆ. ಆಯ್ತಾ.
ಶರಧಿಯ ಪ್ರೀತಿ ಮುಂದುವರೆಯಲಿ.


ರವಿ ಅಜ್ಜೀಪುರ

ಚಿತ್ರಾ ಸಂತೋಷ್ said...
This comment has been removed by the author.
ಚಿತ್ರಾ ಸಂತೋಷ್ said...

@ವಿಕಾಸ್..(:)
@ರಾಘವ..ಆಯ್ತು ನೀನಂದಂತೆ ಆಗಲಿ
@ಅಂತರ್ವಾಣಿ...ತುಂಬಾ ಧನ್ಯವಾದಗಳು
@ರವಿ ಅಜ್ಜಿಪುರ ಸರ್..ನನ್ನ ಬರಹಗಳ ಕುರಿತು ನಿಮ್ಮ 'ಪ್ರೀತಿಯಲ್ಲೇ ಅದ್ದಿ ತೆಗೆದ ಸಾಲುಗಳು' ನನಗೆ ಇನ್ನಷ್ಟು ಬರೆಯಲು ಸ್ಫೂರ್ತಿಯಾಗಲಿದೆ..ಧನ್ಯವಾದಗಳು ಸರ್.
ತುಂಬುಪ್ರೀತಿ

sunaath said...

ಚಿತ್ರಾ,
KEBಯವರು ಕರಂಟ್ ತೆಗೆದರೆ ಅವತ್ತು ಅಮವಾಸ್ಯೆ ಇರುತ್ತೊ ಏನೊ?
ಆದರೆ, ನಿಮ್ಮ ಭಾವನೆಗಳನ್ನು ಕಟ್ ಮಾಡಲಿಕ್ಕೆ ಅವರಿಗೆ ಸಾಧ್ಯವಾಗಲಿಲ್ಲ, ನೋಡಿ!

ಚಿತ್ರಾ ಸಂತೋಷ್ said...

ಸುನಾತ್ ಸರ್ ಗೆ ಧನ್ಯವಾದ..ಆಗಾಗ ಬರುತ್ತಿರಿ. ಭಾವನೆಗಳೇ ಹಾಗೇ ಅಲ್ಲವೇ..ಕಟ್ ಮಾಡಕೆ ಆಗಲ್ಲ!
-ತುಂಬುಪ್ರೀತಿ,
ಚಿತ್ರಾ