Friday, September 26, 2008

ಪುಟ್ಟಿಗೆ ಇಂದು ದಿಲ್ ಖುಷಿ..

ಇಂದು ಬೆಳಿಗ್ಗೆ ಬೇಗ ಆಫೀಸ್ ಗೆ ಬಂದಿದ್ದೆ. ಯಾವಾಗಲೂ ಅಷ್ಟೇ..ಆಫೀಸಿಗೆ ಬೇಗ ಬರುವುದು ನನ್ನ ಚಾಳಿ. ಬೇಗ ಬಂದ್ರೆ ಕೆಲಸ ಬೇಗ ಆಗುತ್ತೆ..ಆಫೀಸಿನಲ್ಲಿ ಏನೂ ಕಿರಿಕಿರಿ ಇರುವುದಿಲ್ಲ. ಅದರಿಲಿ, ಇವತ್ತು ಬಂದವಳೇ ಶಿವಪುರದ ಬಿ.ಸಿ.ರಾವ್ ಗೆ ಕರೆ ಮಾಡಿದ್ದೆ. ಯಾರಿಗೋ ಕರೆ ಮಾಡಿ..ಅಲ್ಲಿ ನನಗೆ ಬೇಕಾದ ಮಾಹಿತಿ ಸಿಗದಾಗ..ಕೊನೆಗೆ ಯಾರೋ ನಂಬರ್ ಕೊಟ್ಟು ಬಿ.ಸಿ.ರಾವ್ ಗೆ ಫೋನ್ ಮಾಡಿದ್ದೆ. ಮಾಹಿತಿನೂ ನೀಡಿದರು.
***
ಮೂರು ವರ್ಷಗಳ ಹಿಂದೆ. ಮಂಗಳೂರಿನ ಯುವವಾಹಿನಿ ಘಟಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪುರಸ್ಕಾರ ಪಡೆದವರಲ್ಲಿ ನಾನೂ ಒಬ್ಬಳಾಗಿದ್ದೆ. ಅಲ್ಲಿಗೆ ಹರಿದಾಸರೂ ಆಗಿದ್ದ ಬಿ.ಸಿ.ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು. ನಮಗೆ ಪುರಸ್ಕಾರ ಎಲ್ಲಾ ನೀಡಿ ಆದ ಮೇಲೆ ರಾವ್ ಅವರ ಉಪನ್ಯಾಸ. ಸುಮಾರು 500 ಜನ ಸೇರಿದ್ದರು. ರಾವ್ ಉಪನ್ಯಾಸ ಅಂದ್ರೆ..ಸೂಜಿ ಬಿದ್ದರೂ ಸದ್ದು ಕೇಳುತ್ತೆ ಎನ್ನುತ್ತಿದ್ದರು ಕೆಲವರು. ನಾನೂ ಅವರ ಹೆಸರು ಕೇಳಿದವಳು..ರಾವ್ ಯಾರೆಂಬುದೇ ಗೊತ್ತಿಲ್ಲ. ಸುಮಾರು ಎರಡೋ-ಮೂರು ಗಂಟೆಯೋ ಉಪನ್ಯಾಸ. ಸ್ವಲ್ಪನೂ ಬೋರ್ ಹಿಡಿಸುವುದಿಲ್ಲ. ಅವರು ಬಾಯಿತೆಗೆದರೆ ಮತ್ತೂ ಕೇಳೋಣ ಅನ್ನುವಷ್ಟು ವಿಚಾರಧಾರೆ. ರಾಮಾಯಣ, ಮಹಾಭಾರತ, ಕುವೆಂಪು, ಶಿಶುನಾಳ ಶರೀಫ, ವಿವೇಕಾನಂದ. ಯೇಸು. ಪೈಗಂಬರ..ಎಲ್ಲರನ್ನು ತಮ್ಮ ಉಪನ್ಯಾಸದಲ್ಲಿ ತಂದುಬಿಡುತ್ತಿದ್ದರು. ಉಪನ್ಯಾಸ..ಮಾತು..ಮಾತು
ನಾನೇನೂ ಎದುರಿನ ಚೇರ್ ನಲ್ಲೇ ಕುಳಿತಿದ್ದೆ. ಮಾತು-ಮಾತಿಗೂ ನನ್ನ ಬಳಿಗೆ ಪ್ರಶ್ನೆಗಳು ಬರುತ್ತಿದ್ದವು. ನನ್ನ ತಲೆಯಲ್ಲಿ ಹೊಳೆದೆದೆಲ್ಲ ಅವರ ಪ್ರಶ್ನೆಗೆ ಉತ್ತರವಾಗುತ್ತಿದ್ದವು. ಸರಿಯೋ/ತಪ್ಪೋ ಅವರ ಭಾಷಣ ನಮಗೇ ಪ್ರೇರಣೆ ಆದಂತೆ ಉತ್ತರ ಹೇಳುತ್ತಿದ್ದೆ. ಅವರಿಗಂತೂ ಖುಷಿಯೋ ಖುಷಿ. ಎಲ್ಲರೆದುರು ನನ್ನನ್ನು 'ಪುಟ್ಟಿ..ಪುಟ್ಟಿ..'ಅಂತ ಕರೆದು ಅವತ್ತಿನ ಸಮಾರಂಭದಲ್ಲಿ ನಾನೇ ನಾಯಕಿಯಾಗಿಬಿಟ್ಟೆ. ಮಧ್ಯದಲ್ಲಿ ಅವರು 'ಗಂಡಸರು ಸೀರೆ ಉಡುತ್ತಿದ್ದರೆ ಏನಾಗುತ್ತಿತ್ತು?' ಅಂತ ಕೇಳಿದ್ರು..ಅಬ್ಬಬ್ಬಾ! ಗೋಳೋ ನಗು..ನೆರೆದವರೆಲ್ಲರೂ ನಗುತ್ತಿದ್ದರು. ನನ್ನನ್ನು ಕೇಳಿದ್ರು..ಎಲ್ಲೋ ಓದಿದ ನೆನಪೋ..ಬೀಚಿ ಹೇಳಿದ್ದೋ..ನೆನಪಾಯಿತು. 'ಗಂಡಸರು ಸೀರೆ ಉಡುತ್ತಿದ್ದರೆ..ದಾರಿ ಬದಿಯಲ್ಲಿ ಮೂತ್ರ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿತ್ತು'!! ಅದನ್ನು ಬಾಯ್ಬಿಟ್ಟು ಹೇಳಿಬಿಟ್ಟೆ..ಸಭೆಯ ನಗು ಇನ್ನೂ ಹೆಚ್ಚಾಗಿತ್ತು..ಸ್ವಲ್ಪ ತರಲೆ ತಲೆ..ಮುಜುಗರ ಇಲ್ಲದೆ ಹೇಳುವಂತೆ ಮಾಡಿತ್ತು.
ರಾವ್ ಸರ್ ಅಂತೂ, ನಮ್ಮ ಪುಟ್ಟಿ ಉತ್ತರ ಹೇಳಿದ್ಳು..ಅಂತ ಖುಷಿಪಟ್ಟರು. ಸಂಜೆ ಉಪನ್ಯಾಸ ಮುಗಿದ ಮೇಲೂ..ಒಂದಿಷ್ಟು ವಿಚಾರಗಳನ್ನು ನನ್ನ ತಲೆಗೆ ತುರುಕಿ, ಬೆನ್ನು ತಟ್ಟಿದರು. ಅಂದು ಅವರ ದೂರವಾಣಿ ಸಂಖ್ಯೆ, ವಿಳಾಸ ಎಲ್ಲವನ್ನೂ ತೆಗೆದಿರಿಸಿಕೊಂಡಿದ್ದೆ. ಆದರೆ ಅಂದೇ ಬಸ್ಸಲ್ಲಿ ಕಳಕೊಂಡಿದ್ದೆ. ಮತ್ತೆ ಅವರನ್ನು ಭೇಟಿ ಆಗಲೇ ಇಲ್ಲ..
***
ಇಂದು ಮಾತನಾಡಬೇಕಾದರೆ, ನಾನು ಚಿತ್ರಾಕರ್ಕೇರಾ ಅಂಥ ಹೇಳಿಲ್ಲ..ಚಿತ್ರಾ ಬೆಂಗಳೂರಿಂದ ಮಾತನಾಡುತ್ತಿದ್ದೇನೆ ಅಂದೆ. ನಂಗೆ ಬೇಕಾದ ಎಲ್ಲಾ ಮಾಹಿತಿ ನೀಡಿದ ಮೇಲೆ ರಾವ್ ಅವರು, "ನಿನ್ನ ಹೆಸರು ಚಿತ್ರನಾ..ನಂಗೆ ಮಂಗಳೂರಿನಲ್ಲಿ ಭೇಟಿಯಾದ ನಿನ್ನ ಹೆಸರಿನ ಹುಡುಗಿಯ ನೆನಪಾಯತ್ತಮ್ಮ..ಅವಳು ತುಂಬಾ ಚೂಟಿ ಹುಡುಗಿ..ನಾನು ಕೇಳಿದ ಪ್ರಶ್ನೆಗೆ ತರಲೆ ಉತ್ತರಗಳನ್ನೂ ನೀಡಿದ್ದಳು. ಹೀಗೇ ಯುವವಾಹಿನಿ ಪ್ರತಿಭಾ ಪುರಸ್ಕಾರದಲ್ಲಿ ನಡೆದ ಕತೆಯನ್ನೆಲ್ಲ ಹೇಳಿಕೊಂಡರು. ಅಷ್ಟೇ ಅಲ್ಲ, ಅವಳನ್ನು ಪುಟ್ಟಿ ಅಂತ ಕರೆದಿದ್ದೆ ಅಂದರು.."! ಎಲ್ಲ ಕೇಳಿಸಿಕೊಂಡು ಆಮೇಲೆ ಹೇಳಿದೆ; ಸರ್..ಅದೇ ಚಿತ್ರಾಕರ್ಕೇರಾ ನಾನು...!! ನಂಗೂ ಖುಷಿ..ಅವರಿಗೂ ಖುಷಿ..ಪುಟ್ಟೀ ನಿನ್ ನಂಬರು ಕೊಡು ಅಂತ ಕೇಳಿಕೊಂಡು. ಒಂದಷ್ಟು ಹೊತ್ತು..ಹಿತನುಡಿಗಳನ್ನು ಹೇಳಿ, ಈ ಕಡೆ ಬಂದಾಗ ಮನೆಗೆ ಬಾಮ್ಮಾ..ಅನ್ನಲು ಮರೆಯಲಿಲ್ಲ.
ನಾನಂತೂ ಇವತ್ತು ಫುಲ್ ಖುಷಿ. ಮೂರು ವರ್ಷದ ಹಿಂದಿನ ಆ ಖುಷಿ ಖುಷಿ ದಿನಗಳ ಮೆಲುಕಿನಲ್ಲೇ ಇದ್ದೇನೆ.. ಮತ್ತೊ,ಮ್ಮೆ ಬಿ.ಸಿ.ರಾವ್ ಅವರ ಉಪನ್ಯಾಸ ಕೇಳಬೇಕು ಎಂದು ಮನಸ್ಸು ಹೇಳುತ್ತಿದೆ.

1 comment:

shivu.k said...

ಹಳೆಯ ನೆನಪುಗಳು ಖುಷಿ ಕೊಡುವುದು ಮುಂದೊಂದು ದಿನ ಅಂಥದ್ದೆ ಅವಕಾಶ ಒದಗಿಬಂದಾಗ ಮಾತ್ರ. ಅಭಿನಂದನೆಗಳು. enjoy ಮಾಡಿ. ಹಾಗೆ ನನ್ನ ಬ್ಲಾಗಿನಲ್ಲೊಂದು ನಾಚಿಕೆಯಿಲ್ಲದ ಪಾರಿವಾಳ ಕುಟುಂಬವಿದೆ. ಬನ್ನಿ enjoy ಮಾಡ್ತೀರ!
ಹಾಗೆ ಕ್ಯಾಮೆರಾ ಹಿಂದೆ ಬ್ಲಾಗಿನಲ್ಲೂ ಮತ್ತೊಂದು ಮಜ ಬರುವ ವಿಷಯವನ್ನು ಪೋಷ್ಟ್ ಮಾಡಿದ್ದೇನೆ ಓದಿ ಕಾಮೆಂಟಿಸಿ.

ಶಿವು.ಕೆ