Thursday, September 4, 2008

ಗುರುವಿನ ಮಾತು ನೆನಪಲ್ಲ, ನಿತ್ಯ ಬದುಕು!

ಶಿಕ್ಷಕರ ದಿನಾಚರಣೆ ಮತ್ತೆ ಬಂದಿದೆ. ನಾಳೆ ಬೆಳಿಗೆದ್ದು ನನ್ನ ಪ್ರೀತಿಯ ಗುರುಗಳಿಗೆ ಶುಭಾಶಯ ಹೇಳ್ಬೇಕು. ಏನೋ ಒಂಥರಾ ಸಂಭ್ರಮ. ಶಿಕ್ಷಕರ ದಿನಾಚರಣೆ ಬಂದ ತಕ್ಷಣ ನನಗೆ ನೆನಪಾಗುವುದು ನಾನು ಓದಿದ ಪ್ರೀತಿಯ ಹೈಸ್ಕೂಲು ಕಾಣಿಯೂರು. ಯಾವುದೋ ಹಾಸ್ಟೇಲಿಗೆ ಹೋಗಬೇಕಾದವಳು ಕಾಣಿಯೂರು ಹೈಸ್ಕೂಲಿಗೆ ಸೇರಿದ್ದೆ. ನನಗೆ ಚಿಕ್ಕವಯಸ್ಸಿನಿಂದಲೂ ತುಂಬಾ ಭಯ. ಶಾಲೆಗೆ ಹೋದರೂ ಅಮ್ಮ ಜೊತೆಗೆ ಬರಬೇಕು..ಸಂಜೆ ಕರೆದುಕೊಂಡು ಬರಲೂ ಅಮ್ಮ ಬೇಕು. ಎಷ್ಟು ಅಂದ್ರೆ ಕ್ಲಾಸಲ್ಲಿ ಕುಳಿತುಕೊಂಡು ಅಮ್ಮನಿಗೆ ಯಾರಾದ್ರೂ ಏನಾದ್ರೂ ಮಾಡಿಯಾರು ಎಂಬ ಭಯ. ಆವಾಗನೇ ನಮ್ಮಪ್ಪ ನಮ್ಮ ಬಿಟ್ಟು ಹೋಗಿದ್ರು. ಅಮ್ಮ-ಅಪ್ಪ ಎರಡೂ ಅಮ್ಮನೇ. ಆವಾಗ ಏಳನೇ ತರಗತಿ ಮುಗಿಸಿದ ತಕ್ಷಣ ಅಮ್ಮ ನನ್ನನ್ನು ಪುತ್ತೂರಿನ ಹಾಸ್ಟೇಲೊಂದಕ್ಕೆ ಸೇರಿಸಿದ್ದರು. ಆದರೆ ಫೀಸು ಕೊಟ್ಟು, ಹಾಸ್ಟೇಲಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತೆಗೆದುಕೊಟ್ಟು, ಬೇಕಾದ ಯುನಿಫಾರ್ಮ ಡ್ರೆಸ್ಸು ಕೂಡ ತೆಗೆದುಕೊಟ್ಟಿದ್ದರು. ತುಂಬಾ ಖರ್ಚು ಮಾಡಿದ್ದರು ಅಮ್ಮ. ಆದರೆ ಶಾಲೆ ಆರಂಭದ ದಿನ ಹಾಸ್ಟೇಲಿಗೆ ಹೋಗು ಅಂದ್ರೆ, ನಾನು ಒಪ್ಪಲೇ ಇಲ್ಲ. ಅಳುವುದು ಬಿಟ್ಟರೆ ಬೇರೇನಿಲ್ಲ ಉತ್ತರ. ಒಟ್ಟಾರೆ ಅಮ್ಮ ಜೊತೆಗಿರಬ್ಬೇಕು..ನನ್ನ ಕಣ್ಣೀರು ನೋಡಿ ಅಮ್ಮ 'ಇಷ್ಟೆಲ್ಲಾ ಖರ್ಚು ಮಾಡಿದೆ..ನಿಲ್ಲಮ್ಮಾ..ಒಂದು ವರ್ಷ ನಿಲ್ಲು' ಅಂದ್ರೂ ನಾ ಒಪ್ಪಿಲ್ಲ. ಮತ್ತೇನು? ಲಗೇಜಿನೊಂದಿಗೆ ಮತ್ತೆ ಅಮ್ಮನ ಜೊತೆ ವಾಪಾಸಾದೆ. ಅದು ನಡು ಮಧ್ಯಾಹ್ನ. ಆವಾಗ ಕಾಣಿಯೂರಿನಲ್ಲಿ ಊಟಕ್ಕೆಂದು ಬಸ್ಸಿಂದ ಇಳಿದೆವು. ಕಾಣಿಯೂರಿನ ಪರಿಮಳ ಹೊಟೇಲ್ ನಲ್ಲಿ ಊಟಕ್ಕೆ ಕುಳಿತಿದ್ದೇವು. ನನ್ನ ಮುಖವೆಲ್ಲಾ ಅತ್ತು ಅತ್ತು ಚೀಣೀಕಾಯಿ ಥರ ಆಗಿತ್ತು. ಮತ್ತೂ ಅಳುತ್ತಾನೇ ಇತ್ತು. ಅಮ್ಮನ ಮನಸೇ ದುಃಖದ ಕಡಲಾಗಿದ್ದರೂ ತೋರಿಸಿಕೊಳ್ಳಲಿಲ್ಲ ಅಮ್ಮ. ಹಾಗೇ ಊಟ ಮಾಡುತ್ತಿರುವಾಗ ನಮ್ಮೂರ ಸೊಸೈಟಿಯ ಅಂಕಲ್ ಒಬ್ರು ಬಂದ್ರು 'ಏನಾಯ್ತು..ಏಕೆ ಮಗಳು ಅಳ್ತಾ ಇದ್ದಾಳೆ?'ಅಂದಾಗ ಅಮ್ಮ ಎಲ್ಲಾ ಕಥೆ ಹೇಳಿದ್ದರು. ಆವಾಗ ಏಳನೇ ತರಗತಿಯಲ್ಲಿ ಪುತ್ತೂರು ತಾಲ್ಲೂಕಿನಲ್ಲಿ ಡಿಸ್ಟಿಂಕ್ಷನ್ ಪಡೆದ ಕೆಲವರಲ್ಲಿ ನಾನೂ ಒಬ್ಬಳು. ಅಷ್ಟೇ ಅಲ್ಲ ಕಾಣಿಯೂರು ಹೈಸ್ಕೂಲಿಗೆ ಆವರೆಗೆ ಅಡ್ಮಿಷನ್ ಪಡೆದ ಯಾರಿಗೂ ನನ್ನಷ್ಟು ಅಂಕ ಇರಲಿಲ್ಲ. ಸೊಸೈಟಿ ಅಂಕಲ್ ಹೇಳಿದ್ರು, ಈಗಾಗಲೇ ಸೀಟುಗಳು ಭರ್ತಿಯಾಗಿವೆ..ಕೇಳಿನೋಡೋಣ ..ಒಳ್ಳೆ ಅಂಕಗಳಿವೆ..ಅಂತೇಳಿ ಅಲ್ಲಿಂದಲೇ ಲಗೇಜು ಸಹಿತ ಕಾಣಿಯೂರು ಹೈಸ್ಕೂಲಿಗೆ ಕರೆದುಕೊಂಡು ಹೋದರು. ಅಲ್ಲಿಯ ಪ್ರಾಂಶುಪಾಲರಿಗಂತೂ ಖುಷಿಯೇ ಖುಷಿಯೇ. ನನಗೆ ಫೀಜುನಲ್ಲೂ ತುಂಬಾ ಕಡಿಮೆ ಮಾಡಿ, ಅಡ್ಮಿಷನ್ ಮಾಡಿಸಿಕೊಂಡರು. ಅಷ್ಟೇ ಅಲ್ಲ, ನನ್ನನ್ನ ಹಾಡು ಹೇಳಕೆ ಹೆಳಿದ್ರು 'ಜೋಗದ ಸಿರಿ ಬೆಳಕಿನಲ್ಲಿ..' ಊದಿಕೊಂಡ ಮುಖ, ಒಂದೆಡೆ ಹಾಡು..ಅಮ್ಮನಿಗೆ ತುಂಬಾ ಖುಷಿಯಾಯಿತು.

ಅಲ್ಲಿಂದ ನನ್ನ ಹೈಸ್ಕೂಲು ಜೀವನ. ಅಲ್ಲಿ ನಾನೇ ಹೀರೋಯಿನ್. ಕ್ಲಾಸ್ ಟೀಚರಿಂದ ಹಿಡಿದು ಪ್ರಾಂಶುಪಾಲರವರೆಗೆ ನನಗೆ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಕೊಡುತ್ತಿದ್ದರು. ಮೂರು ವರ್ಷವೂ ಕ್ಲಾಸಿನಲ್ಲಿ ಅಂಕಗಳಿಸುವುದರಾಗಲಿ, ಪ್ರಬಂಧ, ಭಾಷಣ, ಹಾಡೋದು ಎಲ್ಲದ್ರಲ್ಲೂ ನಾನು ಮುಂಚೂಣಿಯಲ್ಲಿದ್ದೆ. ಅಮ್ಮನಿಗಂತೂ ಆವಾಗ ಹಬ್ಬ. ಮತ್ತೆ ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆ ಅಮ್ಮನ ಆರೋಗ್ಯವೂ ಕೆಟ್ಟಿತ್ತು. ತಮ್ಮನದೂ ಅದೇ ಪರಿಸ್ಥಿತಿ. ಮುಂದೆ ಪಿಯುಸಿ ಓದಬೇಕು..ಏನ್ ಮಾಡೋದು? ಎಂದಾಗ ನನ್ನ ನೆರವಿಗೆ ಬಂದಿದ್ದು ಇಡೀ ಕಾಣಿಯೂರು ಹೈಸ್ಲೂಲಿನ ಅಧ್ಯಾಪಕರುಗಳು. ಪ್ರತಿಯೊಬ್ಬ ಅಧ್ಯಾಪಕರೂ 'ಚಿತ್ರಾ ನೀನು ಇನ್ನೂ ಓದ್ಬೇಕಮ್ಮಾ..ನಾವಿದ್ದೇವೆ ಜೊತೆಗೆ' ಅಂತೇಳಿ ಸಹಾಯಧನದ ರೂಪದಲ್ಲಿ ನನಗೆ ಫೀಜಿನ ಹಣ ಕೊಟ್ಟಿದ್ದರು. ಬದುಕಿನ ಪ್ರತಿಯೊಂದು ಕ್ಷಣದಲ್ಲೂ ನನ್ನ ಗುರುವೃಂದವನ್ನು ನಿತ್ಯ ನೆನೆಸಿಕೊಳ್ಳುತ್ತೇನೆ..ಶಿಕ್ಷಕರ ದಿನದಂದು ಅವರಿಗೆ ಪುಟ್ಟದಾಗಿ ಶುಭಾಶಯ ಹೇಳುತ್ತೇನೆ..ಅದೇ ಅವರಿಗೆ ಖುಷಿ. ಚಿತ್ರಾ ಹೇಗಿದ್ಯಮ್ಮಾ..ಚೆನ್ನಾಗಿರು..ಬೆಂಗಳೂರು ಜೋಪಾನ..ಬಂದಾಗ ಕಾಲೇಜಿಗೆ ಬಾ ಅನ್ತಾರೆ..ನನ್ನ ಗುರುಗಳು. ಎಷ್ಟೊಂದು ಖುಷಿಯಾಗುತ್ತೆ ಅವರಿಗೆ. ನಮ್ಮ ಬದುಕಿಗೆ ಬೇಕಾದನ್ನೆಲ್ಲಾ ಧಾರೆ ಎರೆಯುವ ಗುರುಗಳಿಗೆ ವರ್ಷಕ್ಕೊಮ್ಮೆ ಶುಭಾಶಯ ಅಂದರೂ, ಅವರು ಹೇಳಿರುವ ಮಾತುಗಳು, ಹಿತನುಡಿಗಳು ಎಲ್ಲವೂ ನಿತ್ಯದ ನೆನಪಲ್ಲ, ಬದುಕು. ಮತ್ತೆ ಉಜಿರೆಗೆ ಹೋದೆ..ಅಲ್ಲೂ ನಂಗೇನೂ ಕಡಿಮೆಯಾಗಿಲ್ಲ..ಪ್ರೀತಿಯ ಮೇಡಂ ಶುಭದಾಸ್, ಸಂಪತ್ ಸರ್, ನಾಗಣ್ಣ ಸರ್, ಭಾಸ್ಕರ ಹೆಗಡೆ ಸರ್..ಎಲ್ಲರೂ ನನಗೆ ಕ್ಷಣ ಕ್ಷಣಕ್ಕೂ ಸ್ಫೂರ್ತಿಯಾಗಿದ್ದರು. ಮನೆಯಲ್ಲಿ ಅಮ್ಮನೇ ನನಗೆ ಗುರು, ಆದರೆ ಶಾಲೆ, ಕಾಲೇಜಿಗೆ ಬಂದಾಗ ನನಗೆ ಗುರುಗಳೇ ಅಮ್ಮ ನೂ ಆಗಿದ್ದರು.ಬದುಕನ್ನೇ ಕಲಿಸಿಕೊಟ್ಟ ನನ್ನ ಪ್ರೀತಿಯ ಗುರುಗಳೇ...ಶಿಕ್ಷಕರ ದಿನದ ಶುಭಾಶಯಗಳು.

1 comment:

Unknown said...

Chitra

Your mom is a strong woman. The teachers you have mentioned are wonderful.

Smitha.