Wednesday, September 3, 2008

ವೇದಿಕೆ ಮೇಲೆ ನಿಂತು ಬಡತನ ತೊಲಗಲಿ ಅಂದ್ರೆ..!

'ವಿಜ್ಞಾನ ಮತ್ತು ತಂತ್ರಜ್ಞಾನ ಬಡತನ ನೀಗಿಸಲಿ' ಎಂದು ವಿಜ್ಷಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಗಳಿಸಿದ ಮಹಾನ್ ವ್ಯಕ್ತಿಯೊಬ್ಬರು ಬೆಂಗಳೂರಿನ ಪ್ರತಿಷ್ಠಿತ ಹೊಟೇಲೊಂದರ ಡಯಾಸ್ ಮೇಲೆ ನಿಂತು ಮಾತನಾಡಿದಾಗ ನಗು ಉಕ್ಕಿ ಬಂತು. ಹೌದು! ತುಂಬಾ ಜನ ಹೀಗೇ ಮಾತಾಡ್ತಾರೆ..ನಿಂಗೆ ನಗು ಉಕ್ಕಿ ಬಂದಿಲ್ವಾ ಚಿತ್ರಾ? ಅಂತ ನೀವು ಕೇಳಬಹುದು..ಆದ್ರೆ ಹೀಗೆ ಹೇಳಿದ್ದು ವಿದೇಶದಿಂದ ಬಂದ ವ್ಯಕ್ತಿ ಅಲ್ಲ. ಕನ್ನಡಿಗ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದ, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಇವರು ಮುಕ್ಕಾಲು ಗಂಟೆ ಭಾಷಣ ಮಾಡಿದ್ದು ತೀರ ಹಾಸ್ಯಾಸ್ಪದ ಅನಿಸಿತ್ತು ನಂಗೆ. ಹೌದು! ಬೆಂಗಳೂರು ತಂತ್ರಜ್ಞಾನದಲ್ಲಿ ನಂ.1 ಸ್ಥಾನದತ್ತ ಸಾಗಿದೆ. ಇದಕ್ಕೆ ಕಾರಣಕರ್ತರಾದವರೂ ಇಲ್ಲೇ ಇದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಈ ರೀತಿಯ 'ಕರೆ'ಗಳನ್ನು ಕೊಡುತ್ತಲೇ ಇದ್ದಾರೆ. ವಿದೇಶದಲ್ಲಿ ಹೋಗಿ ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಐಟಿ-ಬಿಟಿಯಲ್ಲಿ ನಂ.1 ಆಗಲಿದೆ ಅನ್ತಾರೆ. ಅಲ್ಲೊಂದಿಷ್ಟು..ಇಲ್ಲೊಂದಿಷ್ಟು..ಚಪ್ಪಾಳೆಗಳ ಸದ್ದು. ಮರುದಿನ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ಅವರ ಭಾಷಣಗಳದ್ದೇ ಕಾರುಬಾರು..ಟಿ.ವಿ, ಚಾನೆಲ್ ಗಳಲ್ಲಿ ಅವರ ಮಾತುಗಳು ವಿಶೆಷ ವರದಿ..ಮಾಧ್ಯಮಗಳು ಪ್ರಚಾರ ನೀಡಬೇಕಾಗಿರುವುದೂ ಕರ್ತವ್ಯವೇ ಬಿಡಿ..ಆದರೆ ಅವರ ಮಾತಿಗೆಷ್ಟು ಪ್ರಚಾರ ಸಿಕ್ಕುತ್ತೆ ನೋಡಿ.

ಈ ರೀತಿ ಭಾಷಣ ಮಾಡೋವರಿಗೆ 'ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಬಡತನ ನೀಗಲಿ' ಎಂದು ಹೇಳಲಷ್ಟೇ ಗೊತ್ತು. ಅದನ್ನು ಹೇಗೆ ಮಾಡೋದು? ನಾವೇನು ಮಾಡಬೇಕು? ಇವರಿಗೇನೂ ಗೊತ್ತಿರಲ್ಲ. ಇನ್ನು ಇಂಥ ಕುಬೇರರಿಂದಲೇ ಅಭಿವೃದ್ಧಿ ಹೊಂದುವ ವಿಜ್ಷಾನ ಮತ್ತು ತಂತ್ರಜ್ಞಾನ ಬಡತನವನ್ನು ನೀಗಿಸುವುದಾದರೂ ಹೇಗೆ? ಮೊನ್ನೆ ಮೊನ್ನೆ ಒಂದು ಸಮೀಕ್ಷಾ ವರದಿ ಬಂದಿತ್ತು..ಅದೂ ವಿಶ್ವಬ್ಯಾಂಕ್ ಜಾಗತಿಕ ಬಡತನ ತಖ್ತೆಯಿಂದ ತಿಳಿದುಬಂದಿದ್ದು. .ಭಾರತದ ಒಟ್ಟು ಜನಸಂಖ್ಯೆಯ 1/3ರಷ್ಟು ಜನ ಬಡವರು! ಬೆಂಗಳೂರಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ಕೊಳಗೇರಿಗಳಲ್ಲಿ ವಾಸಿಸುತ್ತಾರೆ. ಇವರ ಮನೆಯಲ್ಲಿ ಬೆಳಕು ನೀಡುವ ವಿದ್ಯುತ್ ಬಲ್ಬ್ ಗಳಿಲ್ಲ..ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಮಳೆ ಬಂದಾಗಲೆಲ್ಲಾ..ರಸ್ತೆ, ಚರಂಡಿಗಳ ನೀರು ಇವರ ಮನೆಗೆ ಹೋಗುತ್ತದೆ. ಇದು ಇಲ್ಲಿನ ಯಾವ ಮಹಾನ್ ಉದ್ಯಮಿಗಾದ್ರೂ ಅರಿವಿಗೆ ಬರುತ್ತದೆಯೇ? ಅರಿವು ಬಿಡಿ..ಯಾರೋಬ್ಬರ ಭಾಷಣದ ವಸ್ತುವೂ ಇದಾಗಲ್ಲ. ಜಾಗತಿಕ ಮಟ್ಟದಲ್ಲಿ ನಂ. 1ಆದವನು ಯಾವತ್ತೂ ಬಡಜನರ ಅಭಿವೃದ್ಧಿ ಬಗ್ಗೆ ಕನಸು ಕಾಣುವ ಮಾತನಾಡಿದರೆ ..ಅದು ಸತ್ಯವೆಂದು ನಂಬುವುದೇ ಅಪರಾಧವಾದೀತು. ಈ ರೀತಿ ಮೈಕ್ ಎದುರು ನಿಂತು 'ಬಡತನ ತೊಲಗಲಿ, ಬಡಜನರ ಉದ್ಧಾರ ಆಗ್ಲಿ..ಹಾಗೇ ಮಾಡಬೇಕು. ಹೀಗೇ ಮಾಡಬೇಕು' ಎಂದು ಹೇಳುವ ಬದಲು, ಸ್ವತಃ ನಾವೇನಾದ್ರೂ ಮಾಡಿದರೆ ಎಂದು ಯೋಚಿಸಬೇಕು. ತಾಕತ್ತಿದ್ರೆ ಬಡಜನರ ಮನೆಗೆ ಹೋಗಿ ನೋಡಲಿ..ಸತ್ತು ಬದುಕುವ ಬಡವರ ಬದುಕನ್ನು ಕಣ್ಣು ಬಿಟ್ಟು ನೋಡಬೇಕು. ನಮ್ಮ ಸರ್ಕಾರ, ಜನಪ್ರತಿನಿಧಿಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ನಂ.1 ಎನಿಸಿಕೊಂಡ ಉದ್ಯಮಿಗಳು, ವಿಜ್ಞಾನಿಗಳು ಮುಂತಾದವರು ಬಡತನ ಎಂಬ ಶಬ್ಧವನ್ನು ಭಾಷಣದ ವಸ್ತುವಾಗಿಸುವ ಬದಲು, ಬಡಜನರ ಬದುಕಿಗೆ ನೆರವಾಗುವುದು ಹೇಗೇ? ಎಂಬುದನ್ನು ಯೋಚಿಸಬೇಕು.
ಫೋಟೋ: ಎನ್.ಕೆ.ಎಸ್.

2 comments:

ಸಂದೀಪ್ ಕಾಮತ್ said...

’ಹೇಳೊದು ಶಾಸ್ತ್ರ ,ತಿನ್ನೋದು ಗೋಬಿ ಮಂಚೂರಿ’
ಕೆಲವರ ಅಭ್ಯಾಸಗಳೇ ಹೀಗೆ ,ಏನಾದ್ರೂ ಮಾತಾಡ್ಬೇಕು ಅಂತ ಮಾತಾಡ್ತಾರೆ.

ವಿ.ರಾ.ಹೆ. said...

ಅದಕ್ಕೇ ಇರೋದು ಗಾದೆ

ಆಚಾರ ಹೇಳೋದಕ್ಕೆ, ಬದನೇಕಾಯಿ ತಿನ್ನೋದಕ್ಕೆ :)
ಮಾತಾಡೋರು ಕೆಲಸ ಮಾಡಲ್ಲ, ಕೆಲಸ ಮಾಡೋರು ಮಾತಾಡೋಲ್ಲ.

ಎರಡೂ ಮಾಡೋರು ಬಹಳ ಕಮ್ಮಿ