Wednesday, September 3, 2008

ಹೀಗೊಂದು ಸ್ವಾಮೀಜಿಯ ಕಥೆ!

ನನಗಾಗ ಪುಟ್ಟ ವಯಸ್ಸು. ಆವಾಗ ಊರ ಜಾತ್ರೆಗೆ ಹೋಗೋದಂದ್ರೆ ಭಾರೀ ಖುಷಿ. ಪ್ರತಿ ವರ್ಷ ಈ ಜಾತ್ರೆಗೆ ಯಾವುದಾದ್ರೂ ಮಠದ ಸ್ವಾಮೀಜಿಗಳು ವಿಶೇಷ ಅತಿಥಿಗಳಾಗಿ ಬರುತ್ತಿದ್ದರು. ಅವರದ್ದು ಪ್ರತ್ಯೇಕ ಧಾರ್ಮಿಕ ಉಪನ್ಯಾಸ..ಪಕ್ಕಾ ಭಯ, ಭಕ್ತಿ, ತ್ಯಾಗದ್ದೇ ಮಾತು. ನಾನು ಅಜ್ಜಿ ಜೊತೆ ಜಾತ್ರೆಗೆ ಹೋಗುತ್ತಿದ್ದೆ. ಅಮ್ಮನಿಗೆ ಜಾತ್ರೆ, ಜನಜಂಗುಳಿ ತುಂಬಾ ದೂರ. ಜಾತ್ರೆಗೆ ಹೋದಾಗ ಎಲ್ಲರಂತೆ ನಾನೂ ಸರತಿಯ ಸಾಲಿನಲ್ಲಿ ನಿಂತು ಸ್ವಾಮೀಜಿಗೆ ಚಿಲ್ಲರೆ ಹಾಕಿ, ಕಾಲಿಗೆ ನಮಸ್ಕರಿಸುತ್ತಿದ್ದೆ. ಅವರು ಪ್ರಸಾದ ಕೊಟ್ರೆ ಅದನ್ನೂ ಮನೆಗೆ ತರುತ್ತಿದ್ದೆ. ಅಲ್ಲಿ ಸ್ವಾಮೀಜಿಗಳು ಗಂಟೆಗಟ್ಟಲೆ ಹೇಳಿದ್ದನ್ನು ತಪ್ಪದೆ ಕೇಳಿಸಿಕೊಂಡು ಬಂದು ಅಮ್ಮನಿಗೊಪ್ಪಿಸುತ್ತಿದ್ದೆ. ಅಮ್ಮ ಅದನ್ನೆಲ್ಲಾ ಕೇಳಿಸಿಕೊಂಡು ಸ್ವಾಮೀಜಿ, ದೇವರು, ಭಕ್ತಿಯ ಬಗ್ಗೆ ನನಗೂ ಹೇಳುತ್ತಿದ್ದಳು. ಸ್ವಾಮೀಜಿಗಳ ಬಗ್ಗೆ ಹೇಳುವಾಗ ಅಮ್ಮನೆಂಬ ದೇವರ ಮಾತಿನಲ್ಲಿ ಗೌರವಿತ್ತು. ನನಗೆ ಇದೆಲ್ಲಾ ವಿಚಿತ್ರ ಅನಿಸ್ತಾ ಇತ್ತು. ಅದ್ಯಾಕಮ್ಮಾ ಸ್ವಾಮೀಜಿಗಳ ಪಾದಪೂಜೆ ಮಾಡಿ ನೀರು ಕುಡಿಯುತ್ತಾರೆ? ನೀನ್ಯಾಕೆ ದೇವರ ಪ್ರಸಾದವೆಂದರೆ ಅಷ್ಟೊಂದು ಭಕ್ತಿಯಿಂದ ಜೋಪಾನವಾಗಿಟ್ಟು ದಿನಾ ನನಗೆ ಸ್ನಾನ ಮಾಡಿಸಿ ಹಚ್ಚುತ್ತಿ? ಎಂದು ಕೇಳಿದಾಗ 'ಸ್ವಾಮೀಜಿಗೆ ಏನೂ ಹೇಳಬಾರದು ಮಗೂ. ಅವರು ಹೇಳಿದಂತೆ ಆಗುತ್ತದೆ. ಎಲ್ಲೇ ನೋಡಿದ್ರೂ ಅವರಿಗೆ ನಮಸ್ಕಾರ ಮಾಡ್ಬೇಕು" ಎನ್ನುತ್ತಿದ್ದಳು. ಅಮ್ಮ ಹೇಳಿದ ಮೇಲೆ ಮುಗಿದೇ ಹೋಗಿತು..ಮತ್ತೆ ಅದನ್ನು ಪ್ರಶ್ನಿಸುವ ಗೋಜಿಗೆ ನಾನ್ಯವತ್ತೂ ಹೋಗಲ್ಲ. ಸ್ವಾಮೀಜಿಗಳಂದ್ರೆ ಏನೋ ಗೌರವ, ಪ್ರೀತಿ, ಭಯ-ಭಕ್ತಿ. ಸಿಕ್ಕಾಗೆಲ್ಲಾ ಸ್ವಾಮೀಜಿಗಳನ್ನು ಹುಡುಕಿಕೊಂಡು ಹೋಗಿ ನಮಸ್ಕರಿಸುತ್ತಿದ್ದೆ. ಆದರೂ ಮನಸ್ಸಲ್ಲಿ ಹಲವಾರು ಪ್ರಶ್ನೆಗಳು: ಏಕೆ ಸ್ವಾಮೀಜಿಗಳನ್ನು ದೇವರಂತೆ ಕಾಣುತ್ತಾರೆ? ಅವರೇನು ಮಾನವರೂಪದ ದೇವರುಗಳೇ? ಹಿರಿಯರೆಂದು ಅವರನ್ನು ಗೌರವದಿಂದ ಕಾಣುತ್ತಾರೆಯೇ? ಅವರು ನಮ್ಮಂತೆ ನೆಲದ ಮೇಲೆ ನಡೆದಾಡುತ್ತಾರೆ..ಆದ್ರೂ ಥೂ! ಅವರ ಪಾದ ತೊಳೆದು ಅದ್ಯಾಕೆ ನೀರು ಕುಡಿಯಬೇಕು? ಶುದ್ದ ಸಸ್ಯಾಹಾರಿಗಳಾಗಿರಬಹುದು..ಮೂರು ಹೊತ್ತು ಸ್ನಾನ ಮಾಡುತ್ತಾರೆ..ಮದುವೆ ಆಗಲ್ಲ..ಇಷ್ಟಕ್ಕೂ ಅವರೂ ಮನುಷ್ಯರಲ್ವಾ? ಮುಂತಾದ ಪ್ರಶ್ನೆಗಳು ದಿನಾ ತಲೆ ತಿನ್ನುತ್ತಿದ್ದವು. ಇಂಥ ನನ್ನ ಪಾಲಿನ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಅಮ್ಮನದು ಮಾತ್ರ ಒಂದೇ ಉತ್ತರ 'ಹಾಗೆಲ್ಲ ಯೋಚಿಸಬಾರದು ಮಗೂ..ಸ್ವಾಮೀಜಿಗಳು ಮದುವೆ ಆಗಲ್ಲ.ಅವರು ದೇವರಿಗೆ ಸಮಾನ'! ಹೌದು! ಅಂತೆಯೇ ನಾನು ಆಮೇಲೆ ಕೇಳಿಲ್ಲ..ಓದು ಮುಗೀತು..ಬೆಂಗಳೂರಿಗೆ ಬಂದೆ..ಒಳ್ಳೆಯ ಉದ್ಯೋಗನೂ ಪಡೆದೆ.

ಆದರೆ ಬೆಂಗಳೂರು?! ನಮ್ಮೂರಿಗಿಂದ ತುಂಬಾ ಭಿನ್ನ. ಇಲ್ಲಿ ನೋಡಿದ್ದಲ್ಲಿ..ಹೆಜ್ಜೆಯಿಟ್ಟಲ್ಲಿ..ದೇವಸ್ಥಾನಗಳು, ಸ್ವಾಮೀಜಿಗಳು, ಜ್ಯೋತಿಷಿಗಳು ಅಬ್ಬಬ್ಬಾ! ನನಗೇನೋ ಹೊಸದು ಬೆಂಗಳೂರು. ಇಲ್ಲಿ ಬಂದೂ ನನಗೆ ಇಬ್ಬರು ಸ್ವಾಮೀಜಿಯಬರ ಪರಿಚಯವಾಗಿತ್ತು. ನೋಡುವ ಜನರಿಗೆ, ಬೆಂಗಳೂರಿಗೆ ಬೆಂಗಳೂರೇ ಗೌರವದಿಂದ ಕಾಣುವ ಈ ಮಹಾನ್ ಸ್ಮಾಮೀಜಿಗಳು ಮಾತ್ರ ಪಕ್ಕಾ ಬ್ಯುಸಿನೆಸ್ ಸ್ವಾ,ಮೀಜಿಗಳು. ನೈತಿಕತೆ ಬಗ್ಗೆ ಮಾತಾಡುತ್ತಿದ್ದ ಇವರಿನಿಗೆ ನೈತಿಕತೆ ಅಂದ್ರೆ ಏನೂಂತಾನೇ ಗೊತ್ತಿರಲಿಲ್ಲ. ಕಾವಿಧಾರಿ ಆ ಸ್ವಾಮೀಜಿಗಳು ಕಪಟ, ಮೋಸ, ವಂಚನೆ, ಅನೈತಿಕತೆಯ ಇನ್ನೊಂದು ರೂಪವಾಗಿದ್ದರು. ಸ್ವಲ್ಪ ದಿನಗಳ ನಂತರ ಒಟ್ಟಿನಲ್ಲಿ ಸ್ವಾಮೀಜಿಗಳ ಬಗ್ಗೆ ಶೋಧಿಸುವ ಕಾರ್ಯದಲ್ಲೇ ತೊಡಗಿದ್ದೆ. ಅಮ್ಮ ಹೇಳಿದ ಗೌರವ, ಭಕ್ತಿ, ಮಾನವರೂಪದ ದೇವರುಗಳು ಮೌಢ್ಯದ ರೂಪ ತಳೆದು ನಿಂತಿದ್ದವು. ಆವಾಗಲೇ ಅಮ್ಮನಿಗೆ ಫೋನು ಮಾಡಿ ಹೇಳಿದೆ, "ಅಮ್ಮಾ ನೀನು ಹೇಳಿದ್ದು ಸುಳ್ಳು..ನೋಡು ಎಲ್ಲವನ್ನೂ ಸತ್ಯವೆಂದು ನಂಬಬೇಡ". ಆದರೆ ಅಮ್ಮನಿಗೆ ದೇವರ ಬಗ್ಗೆ, ದೇವರ ಸ್ವರೂಪ ಎಂದು ಜನ ನಂಬುವ ಸ್ವಾಮೀಜಿಗಳ ಬಗೆಗಿದ್ದ ನೈಜ ಭಕ್ತಿ ಅವಳ ಮಾತನ್ನು ಸಮರ್ಥಿಸಿಕೊಳ್ಳುವಂತೆ ಮಾಡಿತ್ತು. ಅಮ್ಮನ ಮುಗ್ಧತೆ, ಪ್ರಾಮಾಣಿಕತೆಯೆದುರು ನಾನು ಮೌನವಾಗಿದ್ದೇನೆ. ಆದರೆ ಬೆಂಗಳೂರಿನಂಥ ನಗರಕ್ಕೆ ಬಂದು, ಜಗತ್ತಿನ ಇನ್ನೊಂದು ಮುಖವನ್ನು ನೋಡಿದ್ದೇನೆ. ಮನುಷ್ಯ ಎಷ್ಟೇ ಸುಶಿಕ್ಷಿತನಾಗಿದ್ದರೂ ಮೌಢ್ಯ ಅವನನ್ನು ಬಿಟ್ಟು ಹೋಗಿಲ್ಲ. ಸತ್ಯವನ್ನು ಶೋದಿಸುವ ಕಾರ್ಯ ಮನುಷ್ಯ ಮಾಡುತ್ತಿಲ್ಲ ಏಕೆ? ಎನ್ನುವ ಪ್ರಶ್ನೆ ನನ್ನದು. ಇತ್ತೀಚಿನ ದಿನಗಳಲ್ಲಿ ಹಣ ಮಾಡುವುದಕ್ಕಾಗಿ 'ಸ್ವಾಮೀಜಿ'ಗಳೆನಿಸಿಕೊಂಡವರು, ಕೊನೆಗೆ ಸಿಕ್ಕಿಬಿದ್ದ ನಕಲಿ ಸ್ವಾಮೀಜಿಗಳು ಎಲ್ಲವನ್ನೂ ಬೆಂಗಳೂರಲ್ಲಿ ನೋಡುತ್ತಿದ್ದೇನೆ. ಆದರೂ ಜನ ಹೀಗೇಕೆ? ಎನ್ನುವ ಪ್ರಶ್ನೆ ನನ್ನದು.

ಗೆಳೆಯ ಸಂಜು ಇಷ್ಟನ್ನೂ ಹೇಳಿ ಮುಗಿಸಿದಾಗ ನಾನು ಇಳಿಯುವ ಸ್ಥಳನೂ ಬಂದಿತ್ತು. ಕಾರಿಂದ ಇಳಿದೆ. ಮತ್ತಷ್ಟು ದೂರ ಹೋಗಬೇಕು..ಇನ್ನೊಂದು ಬಸ್ಸು. ಸೀಟುಗಳೆಲ್ಲಾ ಖಾಲಿ ಯಿದ್ದುವು..ಆರಾಮವಾಗಿ ಬಸ್ಸಲ್ಲಿ ಕೂತಾಗ ..ಆತನ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸಿದುವು. ನನ್ನ ಅನುಭವಗಳೂ ಮತ್ತೊಮ್ಮೆ ಕಣ್ಣೆದುರು ಮೂಡಿಬಂದುವು. ಖ್ಯಾತ ಚಿತ್ರನಟರೊಬ್ಬರ ಮನೆಯಲ್ಲಿ ಪೂಜೆಯಿತ್ತು. ಅಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಪಡೆದ ಸ್ವಾಮೀಜಿಗಳಿಂದ ಭಜನೆ ಕಾರ್ಯಕ್ರಮನೂ ಇತ್ತು. ಹಾಗೇ ಸ್ವಾಮೀಜಿಗಳು ತಮ್ಮ ಭಜನಾ ತಂಡದೊಂದಿಗೆ ಕಾರಿನಲ್ಲಿ ಬಂದಿದ್ದರು. ಅವರ ಕಾರಿನ ಚಾಲಕ ಹೇಳುತ್ತಿದ್ದ; ಸ್ವಾಮಿಗಳು ನಿನ್ನೆ ಫಾರಿನ್ ಟೂರ್ ಮುಗಿಸಿ ಬಂದಿದ್ರು...ಇವತ್ತು 2 ಕಡೆ ಭಜನೆ ಇತ್ತು. ಇವರೇನೋ ತಮ್ಮದು ದಾನ ಧರ್ಮ ಅಂತಾರೆ. ಆದರೆ ಇವರನ್ನು ಹೊರತುಪಡಿಸಿ ಭಜನೆ ಹಾಡುವವರು, ತಬಲ ಬಾರಿಸುವವರು ಎಲ್ಲರಿಗೂ ಪ್ರತ್ಯೇಕ ಸಂಬಳ ತೆಗೆದುಕೊಳ್ಳುವಂತೆ ಹೇಳಿರುತ್ತಾರೆ. ದುಬಾರಿ..ಕೆಲವರು ಸ್ವಾಮೀಜಿ ತಂಡವೆಂದು ಬೇಕಾಬಿಟ್ಟಿ ಹಣ ನೀಡುವವರೂ ಇದ್ದಾರೆ. ತಮಗೆ ಬೇಕಾದ ಹಣವನ್ನು ಭಜನೆ ತಂಡದಿಂದ ತೆಗೆದುಕೊಂಡು ಬಳಿಕ ಆ ತಂಡಕ್ಕೆ ಸಂಬಳ ನೀಡುತ್ತಾರೆ!
ಇದು ಸತ್ಯಾನೋ/ಸುಳ್ಲೋ ಎನ್ನುವುದಕ್ಕಿಂತ ಆತ ಹೇಳಿದ್ರಿಲ್ಲಿ ಸತ್ತಾಂಶವಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಪ್ರಸ್ತುತ ಸಮಾಜದಲ್ಲಿ ಹಣಕ್ಕಾಗಿ ಸ್ವಾಮೀಜಿಗಳಾಗಿದ್ದ ಎಷ್ಟೋ ಮಂದಿ ಇದ್ದಾರೆ ಎನ್ನುವುದು ನಂಬಲರ್ಹ ಸತ್ಯವೇ.

No comments: