Saturday, September 13, 2008

ಮಿಸ್ಡ್ ಕಾಲ್ ಕಿರಿಕಿರಿ!

ನಿಂಗೆ ತಾಳ್ಮೆಯಿಲ್ಲ.ಒಮ್ಮೊಮ್ಮೆ ಮುಖಕ್ಕೆ ರಾಚಿದ ಹಾಗೇ ಮಾತಾಡ್ತೀಯಾ..ಭವಿಷ್ಯದಲ್ಲಿ ಹಿಂಗಾದ್ರೆ ಕಷ್ಟ..ಏನ್ ಮಾತಾಡ್ತಿ ಅನ್ನೋದು ನಿಂಗೇ ಗೊತ್ತಿಲ್ಲ. ಮುಂದೆ ಮದುವೆಯಾದ ಗಂಡ ಹೀಗೆ ಸಿಡ ಸಿಡ ಅಂದ್ರೆ ಸಹಿಸ್ತಾನಾ? ಇಂಥ ಪಾಠಗಳು ನಂಗೆ ತೀರ ಸಾಮಾನ್ಯ. ಮನೆಯಲ್ಲಿ, ಆಫೀಸಿನಲ್ಲಿ ನಂಗೆ ತಾಳ್ಮೆಯ ಪಾಠ ಹೇಳಿದವ್ರು ಅದೆಷ್ಟೋ ಮಂದಿ. ಹೌದು! ಕೆಲವೊಮ್ಮೆ ತಾಳ್ಮೆ ನನ್ ಕೈಯಲ್ಲಿ ಇರಲ್ಲ..ಏನೇನೋ ಅಂತೀನಿ..ಎದುರಿಗಿದ್ದವರು ಯಾರೆನ್ನುವುದನ್ನೂ ನೋಡದೆ! ಆದ್ರೆ..ಮತ್ತೆ ಕ್ಷಮೆ ಕೇಳ್ತೀನಿ. ನಿನ್ನೆ ಇಂಥದ್ದೇ ಒಂದು ಆವಾಂತರ ನಡೆಯಿತು.

ನಿನ್ನೆ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ. ಬೆಳಿಗ್ಗೆ ಹೊಟ್ಟೆಗೇನೂ ತಿಂದಿರಲಿಲ್ಲ. ಆಫೀಸಿಗೆ ಬಂದು ತಿನ್ನೋಣ ಅಂದ್ರೆ ಮೀಟಿಂಗ್ ಇತ್ತು..ಮೀಟಿಂಗು ಮುಗಿದಾಗ ಮಧ್ಯಾಹ್ನ ಆಗಿತ್ತು. ಅಗ ಪತ್ರಿಕಾಗೋಷ್ಟೀಗೆ ಹೋಗಬೇಕಾಯಿತು. ಹೊರಟೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಾಗಿರಲಿ ಟ್ರಾಫಿಕ್ ಜಾಮ್ ಕಟ್ಟಿಟ್ಟ ಬುತ್ತಿ. ಆಟೋದಲ್ಲಿ ಹೋದ್ರೂ ಸಮಯ ಮೀರಿತ್ತು. ಆದರೆ ಬೆಳಿಗ್ಗೆ ಮೀಟಿಂಗ್ ನಲ್ಲಿ ಕೂತಲ್ಲಿಂದ ಒಂದೇ ಸಮನೆ ಮಿಸ್ಡ್ ಕಾಲ್! ವಾಪಸ್ ಕಾಲ್ ಮಾಡೋಣಂದ್ರೆ ಟೈಮಿಲ್ಲ. ಬಂತು..ಒಂದೆರಡಲ್ಲ..50ಕ್ಕಿಂತಲೂ ಹೆಚ್ಚು ಮಿಸ್ಡ್ ಕಾಲ್. ಪ್ರೆಸ್ ಮೀಟ್ ಮುಗೀತು..ಊಟ ಮಾಡಿದೆ..ಆಫೀಸಿಗೆ ಬಂದೆ. ಆಗಾಗ ಮಿಸ್ಡ್ ಕಾಲ್ ದು ಕಿರಿಕಿರಿ. ಇವನಿಗೆ ಒಂದು ಗತಿ ಕಾಣಿಸ್ಬೇಕು ಅಂದುಕೊಂಡು ಆಫಿಸಿಗೆ ಬಂದು ಫೋನು ಮಾಡಿದ್ರೆ ಆ ಮನುಷ್ಯ ಫೋನು ತೆಗೀತಾ ಇಲ್ಲ. ನಂಗೆ ಸಹಿಸಿಕೊಳ್ಳಕೇ ಆಗಿಲ್ಲ..ಏನೇನೋ ಬೈಬೇಕಂದ್ರೆ ಆತ ಫೋನು ತೆಗೀತಿಲ್ಲ..ಎಂಥ ಮಾಡೋದು? ಅದೇ ಸಿಟ್ಟಲ್ಲಿ ಮನೆಗೆ ಹೋಗಿ ತಮ್ಮನ ಮೊಬೈಲಿನಿಂದ ಕರೆ ಮಾಡಿದ್ದೆ. ಪುಣ್ಯಾತ್ಮ ಫೋನು ಎತ್ತಿದ "ಚಿತ್ರಾನಾ...?" ಅಂದಾಗ "ಹೌದು, ನಿಂಗೆ ಅರ್ಜೆಂಟಿದ್ರೆ ಫೋನ್ ಮಾಡ್ಬೇಕಿತ್ತು. ಮಿಸ್ಡ್ ಕಾಲ್ ಏಕೆ ಕೊಡ್ತೀಯಾ?" ಅಂತೇಳಿ ಏಕವಚನದಲ್ಲಿ ಎರ್ರಾಬಿರ್ರೀ ಬೈದೆ. ಆವಾಗ ಫೋನ್ ಕಟ್! ತಡೆದುಕೊಳ್ಳದೆ "ಬೈದು ಮೆಸೇಜ್ ಕಳಿಸಿದೆ..". ಆವಾಗ ಆ ಕಡೆಯಿಂದ ಮೆಸೇಜ್ "ನಾನು ಬಾವ..." ಅಂತೇಳಿ ಹೆಸರು ಬರೆದಿತ್ತು. ನಂಗೆ ಶಾಕ್! ಬಾವ..ಅವರಿಗೆ ಬೈಯೋದು ಬಿಡಿ..ಅವರ ಜೊತೆ ಸರಿಯಾಗಿ ಮಾತೇ ಆಡದವಳು ನಾನು. ಮತ್ತೆ ಫೊನಾಯಿಸಿದೆ,,ಕ್ಷಮೆ ಕೇಳೋಣವೆಂದು..ಆದರೆ ಅವರು ಫೋನೇ ಎತ್ತಿಲ್ಲ.. ಇನ್ನೂ ಬಾವ ಫೋನೇ ಎತ್ತಿಲ್ಲ..ಬಹುಶಃ ನನ್ ಥರನೇ ಅವರಿಗೂ ತಾಳ್ಮೆ ಕೆಟ್ಟಿರಬೇಕು.

ಆದ್ರೆ..ನನ್ ಒಂದೇ ಒಂದು ಮಾತು..
ಯಾರೇ ಆಗಿರಲಿ..ಮಿಸ್ ಕಾಲ್ಡ್ ಕೊಡಬೇಕು..ಅದ್ಕೂ ಒಂದು ಮಿತಿಯಿದೆ, ರೀತಿಯಿದೆ. ಯಾರೋ ಯಾವುದೇ ಟೆನ್ಯ್ಷನ್ ನಲ್ಲಿರ್ತಾರೆ..ಅವರಿಗೆ ಪದೇ ಪದೇ ಮಿಸ್ಡ್ ಕಾಲ್ ಕೊಟ್ಟಾಗ ಕಿರಿಕಿರಿ ಎನಿಸುವುದು ಸಹಜ. ದಯವಿಟ್ಟು..ಒಬ್ಬರಿಗೆ ಕಿರಿಕಿರಿ ಎನಿಸುವಷ್ಟು ಮಿಸ್ಡ್ ಕಾಲ್ ನ್ನೂ ಯಾರಿಗೂ ಯಾರೂ ಕೊಡಬಾರದು. ನನ್ ತಮ್ಮನೇ ಆಗಿರಲಿ..ಈ ರೀತಿ ಕಿರಿಕಿರಿ ಮಾಡಿದರೆ ಸರಿ ಬೈದು ಫೋನ್ ಇಡ್ತೀನಿ..ನಂಗಿದು ಇಷ್ಟ ಆಗಲ್ಲ..ಅಷ್ಟೂ ಅರ್ಜೆಂಟಾಗಿದ್ರೆ ಫೋನ್ ಮಾಡಿ ಮಾತಾಡಬೇಕು..ಅದು ಬಿಟ್ಟು ತೊಂದರೆ ಕೊಡಬಾರದು.

5 comments:

Harisha - ಹರೀಶ said...

ಹೆಹ್ಹೆ! ನಿಮ್ಮ ಭಾವನ ಪರಿಸ್ಥಿತಿ... ಪಾಪ... ಅದು ಯಾರು ಅಂತ ಕೇಳಿ ಆಮೇಲಾದ್ರೂ ಬೈಯ್ಯೋದಲ್ವಾ??

karthik said...

ಸಿಟ್ಟಿನಿಂದಾಗುವ ಪರಿಣಾಮಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.

ವಿ.ರಾ.ಹೆ. said...

ಹಾಗೂ ಆಗ್ಲಿಲ್ಲಾಂದ್ರೆ ಒಂದು ಮೆಸೇಜ್ ಬಿಡ್ಬೇಕಪ್ಪ. ಅಲ್ವಾ?

ಆಲಾಪಿನಿ said...

ವಿಕಾಸ್, ಇದಪ್ಪಾ ಜಾಣತನ ಅಂದ್ರೆ

meltyourfat said...

Dear blogger,
We at enewss aggregate indian blogs. Please visit us at http://www.enewss.com and submit your blog rss/atom feed.
Thanks
sri