Friday, January 9, 2009

ನಮ್ಮೊಳಗಿನ ಭಾವಬಂಧಗಳು ಸತ್ತು ಮಣ್ಣುಗೂಡುತ್ತಿವೆಯೇ..?!


"ಇಬ್ಬರೂ ಕಾಲೇಜು ಹುಡುಗಿಯರು ಸಿನಿಮಾಗಳಿಗೆ ಹೋಗುತ್ತಾ, ಇವರ ಮನೆಯಲ್ಲೋ ಗಂಟೆಗಟ್ಟಲೆ ಕಳೆಯುತ್ತಾ, ತಮ್ಮದು ಗಾಢ ಸ್ನೇಹವೆಂದುಕೊಳ್ಳುತ್ತಾರೆ. ಗೃಹಿಣಿಯೊಬ್ಬಳು ತಿಂಗಳ ಕೊನೆಯಲ್ಲಿ ತನಗೆ ಸಾಮಾನುಗಳನ್ನು ಕೈಬದಲು ಕೊಡುವ ಪಕ್ಕದ್ಮನೆ ಆಂಟಿ ತುಂಬಾ ಒಳ್ಳೆಯವಳೆಂದುಕೊಳ್ಳುತ್ತಾಳೆ. ಪಾರ್ಟಿಯೊಂದರಲ್ಲಿ ಸೇರುವ ಯುವಕರು ಆ ಸಂಜೆಯನ್ನು ಎಂಜಾಯ್ ಮಾಡುತ್ತಾರೆ. ಮಾರ್ನಿಂಗ್ ವಾಕ್ ಗೆ ಹೋಗುವ ವೃದ್ಧರು ತಮ್ಮದು ಒಳ್ಳೆಯ ಕಂಪನಿ ಎಂದುಕೊಳ್ಳುತ್ತಾರೆ. ಈ ರೀತಿ ಮನುಷ್ಯರೆಲ್ಲರೂ ಅಪಾಯರಹಿತವಾದ, ತಮಗೆ ತೊಂದರೆ ಕೊಡದ ಸಂಬಂಧಗಳಲ್ಲೇ ಬದುಕುತ್ತಾರೆ. ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಾಗ ಮನುಷ್ಯನ ಪೊರೆಗಳು ಬಿಚ್ಚಿಕೊಳ್ಳುತ್ತವೆ. ಪೊರೆಗಳು ಕಳಚಿಕೊಳ್ಳುತ್ತಿದ್ದಂತೆ ಸ್ನೇಹದ ಸಾಂದ್ರತೆ ಕಡಿಮೆ ಆಗುತ್ತದೆ. ಅದಕ್ಕೆ ಗಂಡ-ಹೆಂಡತಿಯರಲ್ಲಿ ಬಹಳಷ್ಟು ಜನ ಉತ್ತಮ ಸ್ನೇಹಿತರಾಗಿರುವುದಿಲ್ಲ"
"ಮನುಷ್ಯನ ಸಂಬಂಧಗಳೆಲ್ಲಾ ಈರುಳ್ಳಿಯಂತೆ. ಬಂಗಾರದ ಬಣ್ಣದಲ್ಲಿ ಹೊಳೆಯುವ ಸಿಪ್ಪೆ ಮೇಲಿದ್ದರೇನೇ ಅದು ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಕಣ್ಣೀರು ತರಿಸುತ್ತದೆ"
ಕೆಲ ವರುಷಗಳ ಹಿಂದೆ ಯಂಡಮೂರಿ ವೀರೇಂದ್ರನಾಥ್ ಅವರ 'ಈರುಳ್ಳಿ' ಕತೆಯನ್ನು ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಈ ಸಾಲುಗಳು ನಿನ್ನೆ ಹಳೆ ಡೈರಿಯನ್ನು ಮಗುಚುತ್ತಿದ್ದಂತೆ ಸಿಕ್ಕಿದುವು.

ಮನೆಯ ಓನರ್ ಆಂಟಿ ನಿತ್ಯ ನಗುನಗುತ್ತಾ ಮಾತಾಡಿಸೋರು..ನೀವು ನಮ್ ಮನೆಯವರ ಥರಾನೇ ಅನ್ನೋರು ತಿಂಗಳ ಕೊನೆಯಲ್ಲಿ ನಿಗದಿತ ತಾರೀಕಿನಂದು ಬಾಡಿಗೆ ಕೊಡದಿದ್ದರೆ ಮನೆಬಾಗಿಲಿಗೆ ಬಂದು ಥೂ! ಎಂದು ಉಗಿದು ಹೋಗುವಾಗ..ಮನುಷ್ಯ ಜೀವವೊಂದು ತಮ್ಮ ಗಾಡಿಯಡಿಗೆ ಬಿದ್ದು ಪ್ರಾಣ ಕಳಕೊಂಡಾಗ ಪಕ್ಕದಲ್ಲೇ ಇದ್ದ ಚರಂಡಿಗೆ ಎಸೆದು ಹೋಗೋರನ್ನು ಕಂಡಾಗ..ಜ್ವರದಿಂದ ನರಳುತ್ತಿದ್ದರೂ ನಿತ್ಯ ನಿಯತ್ತಾಗಿ ಕೆಲಸ ಮಾಡುವ ಸಿಬ್ಬಂದಿಯನ್ನು ಕನಿಷ್ಟ ಕನಿಕರವಿಲ್ಲದೆಯೇ ಬೈಯುವ ಬಾಸ್ ಗಳನ್ನು ನೋಡಿದಾಗ...ಆತ್ಮೀಯ ಗೆಳೆಯನೊಬ್ಬ ಸಾಲ ಕೇಳಿದಾಗ ತಾವು ಸಾಲ ಕೊಡದಿದ್ದರೆ ಮಾತಾಡುವುದನ್ನೇ ಬಿಡೋ ಮೂರ್ಖ ಗೆಳೆಯರನ್ನು ಕಂಡಾಗ..ಅದೇಕೋ 'ಮನುಷ್ಯನ ಸಂಬಂಧಗಳು ಈರುಳ್ಳಿಯಂತೆ' ಅನಿಸಿಬಿಡುತ್ತದೆ. ಪ್ರತಿಯೊಬ್ಬರೂ ಅಪಾಯರಹಿತವಾದ, ತೊಂದರೆ ಕೊಡದ ಸಂಬಂಧಗಳಲ್ಲೇ ಬದುಕುತ್ತಾರೆ ಎನ್ನುವ ಮಾತು ಅದೆಷ್ಟೋ ಸತ್ಯ ಅನಿಸಿಬಿಡುತ್ತದೆ. ಕೆಲವರಿಗೆ...ನಾಲ್ಕು ಸಲ ಪಾರ್ಟಿಗೆ ಕರೆದು, ಬೇಕಾಬಿಟ್ಟಿ ದುಡ್ಡು ಚೆಲ್ಲುವ ಗೆಳೆಯ ..ಕೆಲವೊಮ್ಮೆ.ಬಾಲ್ಯದಲ್ಲಿ ಸೈಕಲ್ ಮೇಲೆ ಕೂರಿಸಿಕೊಂಡು ಹೋಗುವ ಗೆಳೆಯನಿಗಿಂತ ಅದೇಕೆ ಇಷ್ಟವಾಗಿಬಿಡುತ್ತಾನೆ.?!...ಹೀಗೇ ಏನೇನೋ ತಲೆಹರಟೆಗಳು ನನ್ ತಲೆಯೊಳಗೇ..

ಈ ಸಂಬಂಧಗಳೇ ಹೀಗೇ..
ಗೊತ್ತುಗುರಿಯಿಲ್ಲದೆ ಮೂಡೋದು
ಬಾಂಧವ್ಯ ಬೆಸೆಯೋದು
ಪ್ರೀತಿಯ ತೀರದಲ್ಲಿ ತೇಲಿಬಿಡೋದು
ಮರೆತುಹೋಗದಷ್ಟು ಹೃದಯದಲ್ಲಿ ನೆಲೆಗೊಳ್ಳೋದು...

ಹತ್ತನೇ ಕ್ಲಾಸಿನಲ್ಲಿ ಡೈರಿಯಲ್ಲಿ ಗೀಚಿಟ್ಟ ಈ ಸಾಲುಗಳು ಬೆಂಗಳೂರಿನ ನನ್ನ ಪುಟ್ಟ ರೂಮ್ ನಲ್ಲಿ ಕುಳಿತು ಓದಿದಾಗ ಅದೇಕೋ ಈಗ ಸುಳ್ಳು ಅನಿಸಿಬಿಡ್ತು. ದಿನಾ ಟ್ರಾಫಿಕ್ ಮಧ್ಯೆ ಸಿಕ್ಕಹಾಕೊಂಡು, ಹೊಗೆ, ಧೂಳು ಸೇವಿಸುತ್ತಾ, ಹರಸಾಹಸ ಮಾಡಿ ಬಸ್ಸಲ್ಲಿ ಪ್ರಯಾಣಿಸುವುತ್ತಾ, ಹಗಲು ರಾತ್ರಿ ಎನ್ನದೆ ಚಲಿಸುವ ವಾಹನಗಳು, ಡಾಂಬರ್ ರಸ್ತೆಗಳು, ಪರಿಚಯ ಇಲ್ಲದಿದ್ದರೂ ಗಹಿಗಹಿಸಿ ನಗುವ ಕಳ್ಳ ಖದೀಮರು, ಕಾಮುಕ ಕಣ್ಣುಗಳು, ವಂಚಕರು, ದೊಡ್ಡ ದೊಡ್ಡ ಯಂತ್ರಗಳು, ನಿರಭ್ರ ಆಕಾಶವನ್ನು ಚುಂಬಿಸುವ ಬೃಹತ್ ಕಟ್ಟಡಗಳು, ಕೊಳೆತ ವಸ್ತುಗಳು ತುಂಬಿದ ಕೊಳಗಳು, ಯಂತ್ರಮಾನವರು..ಎಲ್ಲವನ್ನೂ ಕಂಡಾಗ ಮನುಷ್ಯನ ಸಂವೇದನೆಗಳು, ಭಾವನೆಗಳು ಬರಡಾಗುತ್ತಿವೆ ಎಂದನಿಸುತ್ತೆ. ಭಾವನಾತ್ಮಕವಾದ ಸಂಬಂಧಗಳ ಪೊರೆ ಕಳಚಿ ಕಣ್ಣೀರು ಸುರಿಸುವುದೇನೋ ಎಂದನಿಸುತ್ತದೆ. ಮಿದುಳಿಗೆ ಮಾತ್ರ ಕೆಲಸ ಕೊಡೋ ನಾವುಗಳು ಹೃದಯಕ್ಕೆ ಯಾಕೆ ಕೆಲಸ ಕೊಡುತ್ತಿಲ್ಲ..ಅದೇಕೋ ಹೃದಯ ಬರೀ ಖಾಲಿ ಖಾಲಿ ಅನಿಸಿಬಿಡುತ್ತೆ. ನೋವಿಗೆ, ಖುಷಿಗೆ ಸ್ಪಂದಿಸಬೇಕಾದ ಪ್ರೀತಿಯ ಸಂಬಂಧಗಳೇ ಅದೇಕೋ ಕೃತಕ ಎಂದನಿಸಿಬಿಡುತ್ತೆ. ಮೊನ್ನೆ ಮೊನ್ನೆ ಪ್ರೀತಿಸಿ ಮದುವೆಯಾದವರು ಒಂದೆರಡು ತಿಂಗಳಲ್ಲೇ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ...ಹಾಗಾದ್ರೆ ಸಂಬಂಧಗಳು ಎಲ್ಲಿ ಹೋದುವು? ನೊಂದ ಮನಸ್ಸೊಂದು ಸಾಂತ್ನಾನದ ಕೈಯ ಬಯಸಿದಾಗ ರಗಳೆಯೇ ಬೇಡವೆಂದು ದೂರ ಸರಿಸೋರೇ ಹೆಚ್ಚಾಗಿಬಿಡ್ತಾರೆ. ನಮ್ಮೊಳಗೆ ಭಾವನೆಗಳೇ ಇಲ್ಲವೇ? ಮನುಷ್ಯನ ಸಂಬಂಧಗಳ ಮೂಲ ಪ್ರೀತಿಗೆ ಅದೇಕೇ ಬರಗಾಲ ಕಂಡುಬರುತ್ತಿದೆ?

"ಸೃಷ್ಟಿಯ ಅನೇಕ ಅದ್ಭುತಗಳಲ್ಲಿ ನೀನೂ ಒಂದು..ನಿನ್ನ ಘನ ವ್ಯಕ್ತಿತ್ವ, ಸಾಂತ್ವಾನ ತುಂಬಿದ ಮಾತು..ಪ್ರೀತಿ, ಸ್ನೇಹ ಒಂದಿಷ್ಟು ಮೌನ...ಎಲ್ಲಾ ಎಷ್ಟು ಚೆಂದ ..." ಎಂದು ಆಟೋಗ್ರಾಫ್ ನಲ್ಲಿ ನಾಲ್ಕು ಸಾಲು ಗೀಚಿದ ಒಡನಾಡಿ ಗೆಳೆಯ/ಗೆಳತಿ ಅದೇ ಸಾಂತ್ನಾನದ 'ಕೈ'ಯನ್ನೇ ಮರೆತುಬಿಡ್ತಾರಲ್ಲ..ನಮಗೆ ಖುಷಿ ಕೊಡುವ ಸಂತೋಷನಾ ಹಂಚಿಕೊಳ್ಳಕೆ ಬಯಸೋರು..ದುಃಖದ ಕಣ್ಣೀರು ಒರೆಸಾಕೆ ಅದೇಕೆ ಹಿಂದೆ-ಮುಂದೆ ನೋಡ್ತಾರೆ..ಕಾಲಚಕ್ರ ಉರುಳಿದಂತೆ ನಮ್ಮೊಳಗೆ ಭಾವಗಳು ಸತ್ತು ಮಣ್ಣಾಗೂಡುತ್ತಿವೆಯೇ? ಪ್ರೀತೀನ ಪ್ರೀತಿಯಿಂದಲೇ ಗೆಲ್ಲುವ..ಹೆಸರೇ ಇಲ್ಲದ ಮನುಷ್ಯ ಬದುಕಿನ ಪ್ರೀತಿಯ ಸಂಬಂಧಗಳಿಗೆ ಮುನ್ನುಡಿ ಬರೆಯಲು ಸಾಧ್ಯವೇ ಇಲ್ಲವೇ?
ಏನೇ ಇರಲಿ...ನಾನು ಹೇಳಿರುವುದರಲ್ಲಿ ಕೆಲವೊಮ್ಮೆ ಅಪವಾದ ಎನ್ನುವ ನಿದರ್ಶನಗಳು ನಿಮ್ಮ ಮುಂದಿರಬಹುದು..ಆದರೆ ನನಗನಿಸಿದ್ದು ಬರೆದಿದ್ದೇನೆ. ವೇದನೆಗಳಾಚೆಗೂ ಬದುಕಿನಲ್ಲಿ ಸಾಧನೆಯ ಹುರುಪು ತುಂಬುವ ಮನುಷ್ಯ ಸಂಬಂಧಗಳನ್ನು ಉಳಿಸಿಕೋಬೇಕು...ಆಗಬಾರದು ಸಂಬಂಧಗಳು ಈರುಳ್ಳಿಯಂತೆ!!..



28 comments:

Pramod said...

ತು೦ಬಾನೇ ಅರ್ಥವತ್ತಾದ ಲೇಖನ.
ಮನುಷ್ಯ ಹುಟ್ಟಿನಿ೦ದಲೇ ಸಾವು ಶುರು ಆಗುತ್ತದೆ. ದಿನೇ ದಿನೇ ಕೃತಕತೆಯ ಮುಖವಾಡ ಗಾಢವಾಗುತ್ತದೆ. ಮು೦ದೊ೦ದು ದಿನ ಭಾವನೆಗಳು, ಆಮೇಲೆ ದೇಹ..ಎಲ್ಲವೂ ಮಣ್ಣು.

We have decreased distance between MAN and MOON, but we have increased distance between MAN and MAN.....

ಕೆ. ರಾಘವ ಶರ್ಮ said...

ಹೌದು, ಈ ಬಾವಗಳಿಲ್ಲದ ಜಗತ್ತಲ್ಲಿ ನಾವು ಕೂಡ ಬದುಕುತ್ತಿದ್ದೇವೆ... ನಮಗೆ ಗೊತ್ತಿಲ್ಲದೆ ನಾವೂ ನಿರ್ಭಾವುಕರಾಗುತ್ತಿದ್ದೇವೆ...ಎಂತಹಾ ದುರಂತ...ಬೇಜಾರಾಗ್ತದೆ...ನಮ್ಮ ಬಗ್ಗೆಯೇ...

shivu.k said...

ಚಿತ್ರಾ ಪುಟ್ಟಿ,

ನೀನು ಇಂಥವುಗಳನ್ನು ಬರೆದಾಗ ನನಗೆ ಭಯ ಗೌರವ ಜಾಸ್ತಿಯಾಗಿ ಚಿತ್ರ ಮೇಡಮ್ ಅನ್ನಬೇಕೆನ್ನಿಸುತ್ತದೆ......
ನನಗನ್ನಿಸುತ್ತೆ ನೀನು ಬರೆದ ಲೇಖನದಲ್ಲಿ ಇದು ತುಂಬಾ ಅರ್ಥಗರ್ಭಿತವಾದ ಗಾಡತೆಯನ್ನುಂಟು ಮಾಡುವ ಲೇಖನ. ಯಾವುದೇ ಭಾವೊದ್ವೇಗದ ಆಳಕ್ಕೆ ಇಳಿಯದೆ.....ಅಥವ ಮೇಲುಸ್ತರದಲ್ಲೂ ತೇಲಿದಂತಾಗದೆ..... ಮದ್ಯದಲ್ಲಿ ಎಲ್ಲವನ್ನೂ ತೂಗಿಕೊಂಡು ಹೋಗುವ ಸಮತೂಕದ ಲೇಖನ.......

ಬಹುಶಃ ಬದುಕಿನ ಅನುಭವಗಳು ಕೂಡ ನಿನಗೆ ಇಂಥ ವಯಸ್ಸಿಗೆ ಮೀರಿದ ಇಂಥ ಲೇಖನಗಳನ್ನು ಬರೆಸಲು ನಿನ್ನನ್ನೂ ಪ್ರೇರೇಪಿಸುತ್ತವೇನೋ.....ಒಟ್ಟಾರೆ ಹೇಳುವುದಾದರೆ ಸಂಭಂದಗಳ ಬಗ್ಗೆ ಒಂದು ಹಿಡಿತವುಳ್ಳ ಲೇಖನ........

sunaath said...

ಚಿತ್ರಾ,
ಒಂದು ಮೂಲಸತ್ಯವನ್ನೆ ಹೇಳಿದ್ದೀಯಮ್ಮ. ಮನುಷ್ಯರ ನಡುವಿನ
ಸಂಬಂಧಗಳ ನೈಜತೆ ತಿಳಿಯುವದು ಸಂಕಟದ ಪರಿಸರ ಬಂದಾಗಲೇ.

ಅಂತರ್ವಾಣಿ said...

ಚಿತ್ರಾ,
ಮನುಷ್ಯರ ಮಧ್ಯೆ ಸ್ನೇಹದ ಜೊತೆ.. Understanding ಇರಬೇಕು.. ಆಗ ನಮ್ಮ ಭಾವ ಬಂಧಗಳಿಗೆ ಸಾವಿಲ್ಲ!

ತೇಜಸ್ವಿನಿ ಹೆಗಡೆ said...

ಚಿತ್ರಾ,

"ಮನುಷ್ಯನ ಸಂಬಂಧಗಳೆಲ್ಲಾ ಈರುಳ್ಳಿಯಂತೆ. ಬಂಗಾರದ ಬಣ್ಣದಲ್ಲಿ ಹೊಳೆಯುವ ಸಿಪ್ಪೆ ಮೇಲಿದ್ದರೇನೇ ಅದು ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಕಣ್ಣೀರು ತರಿಸುತ್ತದೆ"

ತುಂಬಾ ತುಂಬಾ ಚೆನ್ನಾಗಿದೆ ಸಾಲು.. ನಾನು ಯಂಡಿಮೂರಿಯವರ ಬರಹಗಳ ಅಭಿಮಾನಿ. ಎಲ್ಲಾ ವಿಧದ ಬರಹಗಳನ್ನು ಬರೆಯಬಲ್ಲ ಬೆರಳೆಣಿಕೆಯ ಬರಹಗಾರರಲ್ಲಿ ಇವರೂ ಒಬ್ಬರು ಎಂಬುದು ನನ್ನ ಅನಿಸಿಕೆ. ನಿನ್ನ ಯೋಚನೆಗಳು ತುಂಬಾ ಚಿಂತೆ ಹಾಗೂ ಚಿಂತನೆಗೆಡೆ ಮಾಡುವಂತಿವೆ. ನಿಜಕ್ಕೂ ಸಂಬಂಧ ಈರುಳ್ಳಿಯಂತಾಗಬಾರದು. ಬೆಳ್ಳುಳ್ಳಿಯಂತಾದರೆ ಒಳಿತೇನೋ. ಹಾಗೇಯೆಏ ಇದ್ದರೂ ಬಲು ಪರಿಮಳ.. ಹುರಿದರಂತೂ ಮತ್ತೂ ಘಮಘಮ ಏನೆನ್ನುವಿ? :)

hEmAsHrEe said...

ತುಂಬಾ ಗಾಢವಾಗಿ ಆವರಿಸುವ ಬರಹ.
ಚೆನ್ನಾಗಿದೆ.

ಚಿತ್ರಾ ಸಂತೋಷ್ said...

@ಪ್ರಮೋದ್, ರಾಘವ..ಬದುಕೇ ನಿರಾಶೆಯನ್ನೇ ಹೊದ್ದು ಮಲಗಿದರೂ..ಎಲ್ಲೋ ಒಂದೆಡೆ ಭರವಸೆಯ ಬೆಳಕು ತುಂಬೋದು ಬದುಕನ್ನು ಇನ್ನಷ್ಟು ಆಶಾವಾದಿಯಾಗಿಸುತ್ತದೆ.
@ಶಿವಣ್ಣ..ಅಯ್ಯೋ ಭಯಪಟ್ಟುಕೋಬೇಡಿ ಮಾರಾಯ್ರೆ..ಬದುಕಿನ ಅನುಭವಗಳು ಅನ್ನೋದಕ್ಕಿಂತ ನಮ್ಮೆದುರಿಗಿನ ಜಗತ್ತು ಹೀಗೆ ಬರೆಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮತ್ತೆ ನನ್ನ ಹೊಗಳಿ ಹೊನ್ನಶೂಲಕ್ಕೇರಿಸಬೇಡಿ ಆಯಿತಾ.
@ಸುನಾಥ್ ಸರ್...ತುಂಬಾ ಧನ್ಯವಾದಗಳು. ನನ್ನ ಪುಟ್ಟ ಬರಹಗಳ ಕುರಿತು ಸರಿ/ತಪ್ಪು , ಟೀಕೆ ಎಲ್ಲವನ್ನೂ ನಿಮ್ಮಿಂದ ನಿರೀಕ್ಷಿಸುತ್ತೇನೆ.
@ಅಂತರ್ವಾಣಿ..ನೀವು ಹೇಳಿದ್ದು ನಿಜ
@ತೇಜಕ್ಕ...ವಂದನೆಗಳು. ಯಂಡಮೂರಿಯವರ ಬರಹಗಳು ಬದುಕು ಮತ್ತು ವಾಸ್ತವಕ್ಕೆ ಹತ್ತಿರವಾಗಿರುತ್ತವೆ..ಅದಕ್ಕೇ ಅವರ ಬರಹಗಳು ಬೇಗನೆ ನಮ್ಮನ್ನು ಆವರಿಸಿಬಿಡುತ್ತವೆ.
@ಹೇಮಶ್ರೀ..ವಂದನೆಗಳು.
-ತುಂಬುಪ್ರೀತಿಯಿಂದ,
ಚಿತ್ರಾ

kanasu said...

chitraa, modalane baari nimma blogige bheti kotte....khushiyayitu...baraha tumbaa chennagide.

Santhosh Rao said...

ಚಿತ್ರ ಅವರೇ,
ನಿಮ್ಮ ಬರಹ ಚೆನ್ನಾಗಿದೆ ..
ಮನುಷ್ಯನ ಸಂಬಂಧಗಳೆಲ್ಲಾ ಈರುಳ್ಳಿಯಂತೆ - ಯಂಡಮೂರಿ ವೀರೇಂದ್ರನಾಥ್ ಅವರ ಮಾತನ್ನು ನಾನಂತು ಒಪ್ಪುವುದಿಲ್ಲ ... ಎಲ್ಲಾ ಸಂಬಂದಗಳನ್ನು ಅಷ್ಟು ಸುಲಬವಾಗಿ ತಿರಸ್ಕರಿಸಲು ಸಾದ್ಯ ಇಲ್ಲ .. ಮನುಷ್ಯನಲ್ಲಿ ಮಾನವೀಯತೆ ಇನ್ನು ಇದೆ .. ಮಾನವಿಯತೆಯ ಬಗ್ಗೆ ನಂಬಿಕೆ ಇರಿಸಿಕೊಳ್ಳಿ .
Human relations are built on feeling, not on reason or knowledge.

ಲಿಂಕನ್ ಹೇಳಿದ ಮಾತುಗಳನ್ನು ಇಲ್ಲಿ ಹೇಳಲು ಇಷ್ಟ ಪಡುತ್ತೇನೆ
All men are not true.
But teach him also that for every scoundrel there is a hero;
that for every selfish Politician, there is a dedicated leader...
for every enemy there is a friend,
ಮನುಷ್ಯ ಸಂಬದಗಳನ್ನು ದೂರಬೇಡಿ .. ಹಾಗೆ ದೂರುತ್ತಾ ಹೋದರೆ ನೀವು ಒಂದು ದಿನ ಆ ಗುಂಪಿನಲ್ಲಿ ಕಳೆದು ಹೋಗುತ್ತಿರ .

ಕೆ.ಎನ್. ಪರಾಂಜಪೆ said...

ಚೆನ್ನಾಗಿದೆ. ಮಾನವ ಸ೦ಬ೦ಧಗಳನ್ನು ಕುರಿತಾದ ಬರಹ
ಮನಸಿಗೆ ನಾಟುತ್ತದೆ. ಇದು ಸ್ವಾನುಭಾವವೋ ?

PrashanthKannadaBlog said...

Hi Chithra

Good thing I liked here is you have not given any "Gyan". This article talks about the thought process which all of us are undergoing at multiple junctions of our life. It is not easy to write these with neutral stand.
Keep writing more on these kind of topics. One of the best article I read from quite long time.
Cheers
Prashanth

ಚಿತ್ರಾ ಸಂತೋಷ್ said...

@ಕನಸಿಗೆ ಸ್ವಾಗತ...ಆಗಾಗ ಬರುತ್ತೀರಿ
@ಪರಾಂಜಪೆ..ಓದಿದ್ದಕ್ಕೆ ಧನ್ಯವಾದಗಳು..ಆದರೆ ಸ್ವಅನುಭವವಂತ 100% ಹೇಳಲಾರೆ. ನೋಡಿದ್ದು..ಕೇಳಿದ್ದು...ತಿಳ್ಕೊಂಡಿದ್ದು ಎಲ್ಲವೂ.
@ಪ್ರಶಾಂತ್..ಭೇಟಿಗೆ ತುಂಬಾನೇ ಥ್ಯಾಂಕ್ಸ್
@ಸಂತೋಷ್...ಆವೇಷದಲ್ಲಿ ಒಂದೇ ಬಾರಿಗೆ ಓದಿಬಿಟ್ಟೀರಾ..ತುಂಬಾನೇ ಥ್ಯಾಂಕ್ಸ್. ಯಂಡಮೂರಿ ಹೇಳಿರುವುದನ್ನು ನೀವು ಒಪ್ಪದಿರಬಹುದು..ಅದಕ್ಕೆ ಬರಹದ ಕೊನೆಗೆ ಅಪವಾದ ಎನಿಸುವ ನಿದರ್ಶನಗಳು ನಿಮ್ಮ ಮುಂದಿರಬಹುದು ಎಂದಿದ್ದೀನಿ. ಹಾಗೇ ಮನುಷ್ಯನಲ್ಲಿ ಮಾನವೀಯತೆ ಇಲ್ಲವೇ ಇಲ್ಲ..ಮಾನವ ದಾನವನಾಗಿದ್ದಾನೆ ಎಂದು ಖಡಾಖಂಡಿತವಾಗಿ ನಾನೆಲ್ಲೂ ಹೇಳಿಲ್ಲ..ಹಾಗೇ ಮಾನವೀಯತೆ ಮೇಲೆ ನಂಬಿಕೆ ಕಳೆದುಕೊಂಡೂ ಇಲ್ಲ..ಹಾಗಾಗಿ ಮಾನವೀಯತೆ ಮೇಲೆ ನಂಬಿಕೆ ಇಟ್ಟುಕೊಂಡದ್ದರಿಂದಲೇ ಕೆಲವೊಮ್ಮೆ ಮಾನವ ಬಂಧಗಳು ಮಣ್ಣುಗೂಡುತ್ತಿವೆಯೇ? ಎನ್ನುವ ಆತಂಕದ ಪ್ರಸ್ನೆ ಕಾಡುತ್ತಿದೆ. ಹಾಗೇ ಮನುಷ್ಯ ಸಂಬಂಧಗಳನ್ನು ನಾನು ದೂರಿಲ್ಲ..ನನ್ನ ಯಾವುದೇ ಬರಹಗಳಲ್ಲಿ ಸಂಬಂಧಗಳನ್ನು ದೂರುವ ಬದಲು..ಪ್ರೀತಿಯ ಸಂಬಂಧಗಳು ಕಳಚಿಹೋಗುತ್ತಿವೆಯೇನೋ ಎನ್ನುವ ಭಯವನ್ನು ವ್ಯಕ್ತಪಡಿಸಿದದಿದ್ದೆ...ದೂರುವ ಆರೋಪ ಯಾವತ್ತೂ ಹೊರಲಾರೆ. ಲಿಂಕನ್ ಹೇಳಿರುವ ಮಾತು ಇಷ್ಟವಾಯಿತು..ಮುಂದಿನ ನನ್ನ ಯಾವುದಾದರೂ ಬರಹಗಳಿಗೆ ಈ ಮಾತು ಮುನ್ನುಡಿಯಾದೀತು...ಪ್ರತಿಕ್ರಿಯೆಗೆ ಧನ್ಯವಾದಗಳು...ಆಗಾಗ ಬರುತ್ತೀರಿ.
-ಚಿತ್ರಾ

ಪಲ್ಲವಿ ಎಸ್‌. said...

ಚಿತ್ರಾ, ತುಂಬಾ ಚೆನ್ನಾಗಿದೆ ಬರಹ. ಎಷ್ಟೋ ಸಾರಿ ನಾನೂ ಹೀಗೇ ಯೋಚಿಸಿದ್ದೇನೆ. ನಂತರ, ನಾನೂ ಅವರಲ್ಲಿ ಒಬ್ಬಳಾಗುವುದು ಬೇಡ ಎಂದು ನನ್ನ ಹೃದಯದ ಮಾತನ್ನೇ ಕೇಳಿದ್ದೇನೆ. ನಾವು ನಮ್ಮ ಹೃದಯದ ಮಾತನ್ನು ಎಷ್ಟು ಕೇಳುತ್ತೇವೋ ಅಷ್ಟು ಉತ್ತಮ ಮನುಷ್ಯರಾಗುತ್ತೇವೆ. ಆದರೆ, ವಾಸ್ತವ ಏನೆಂಬುದೂ ನಮಗೆ ಗೊತ್ತಿರಬೇಕಾಗುತ್ತದೆ ಎಂಬುದು ನನ್ನ ನಂಬಿಕೆ.

ಇತರರು ಭಾವನೆಗಳನ್ನು ಕಳೆದುಕೊಳ್ಳಲಿ ಬೇಕಾದರೆ. ಆದರೆ, ನಾವು ಮಾತ್ರ ನಮಗನಿಸಿದಂತೆ ಇರೋಣ. ಎಂದೋ ಕಂಡ ಕನಸು ಇವತ್ತು ಸುಳ್ಳು ಅನಿಸಬಹುದು. ಹಾಗೇ, ಇವತ್ತಿನ ಕನಸು ಮುಂದೆಂದೋ ಒಂದಿನ ಸುಳ್ಳು ಆಗಬಹುದು. ಒಂದು ಪ್ರಾಮಾಣಿಕ ಭಾವನೆಯನ್ನು ಮನಸ್ಸು ವ್ಯಕ್ತಪಡಿಸುತ್ತದಲ್ಲ, ಅದೇ ಸತ್ಯ. ಅದರ ಜೊತೆ ತರ್ಕ ವ್ಯರ್ಥ.

ತುಂಬಾ ಪ್ರಾಕ್ಟಿಕಲ್‌ ಅನಿಸಿದರೆ ಕ್ಷಮಿಸು. ಬದುಕಿನಲ್ಲಿ ಬೀಳುವ ಏಟುಗಳು ನಿಜ ದಾರಿ ತೋರುತ್ತವೆ. ನಾನು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಾವೇ ನಿರ್ಧರಿಸುವವರೆಗೆ ಇವೆಲ್ಲ ತೊಂದರೆಗಳು ಬರುವುದೇ ಇಲ್ಲ. ಇತರರೂ ನನ್ನಂತೆ ಇರಲಿ ಎಂದು ಹೊರಟಾಗ ಮಾತ್ರ ನೋವಾಗುತ್ತದೆ.

ಆದ್ದರಿಂದ ನಾನೊಂದು ನಿರ್ಧಾರ ಮಾಡಿದ್ದೇನೆ: ನಾನಾಗೇ ಯಾರನ್ನೂ ನೋಯಿಸಲು ಹೋಗುವುದಿಲ್ಲ. ನನ್ನನ್ನು ಇತರರು ನೋಯಿಸಿದರೆ, ಅದನ್ನು ಅರ್ಥ ಮಾಡಿಕೊಳ್ಳಲು ಅದನ್ನು ಗೆದ್ದು ನಿಲ್ಲಲು ಯತ್ನಿಸುತ್ತೇನೆ. ಅವರ ನಡವಳಿಕೆಗಳು ನನ್ನ ಮೇಲೆ ವ್ಯತಿರಿಕ್ತ ಪರಿಣಾಮವಾಗಲು ಬಿಡುವುದಿಲ್ಲ.

- ಪಲ್ಲವಿ ಎಸ್‌.

Santhosh Rao said...

ನೋಡಿ ಚಿತ್ರ ಮೇಡಂ ..

ಮಾನವೀಯತೆ ಮೇಲೆ ನಂಬಿಕೆ ಇಟ್ಟುಕೊಂಡದ್ದರಿಂದಲೇ ಕೆಲವೊಮ್ಮೆ ಮಾನವ ಬಂಧಗಳು ಮಣ್ಣುಗೂಡುತ್ತಿವೆಯೇ? ಎಂಬ ನಿಮ್ಮ ಪ್ರಶ್ನೆ ಗೆ ಉತ್ತರ "ಇಲ್ಲ", "ನೀವ್ ಅಂದ್ಕೊಂಡಿರೋದು ಸುಳ್ಳು" ಅಂತ ..

ಬರಹ , ಓದು ಎಲ್ಲವು ನಮ್ಮ ಅನುಭವದ ಅಭಿವ್ಯಕ್ತಿ ನಮ್ಮ ಹಿಡಿತಕ್ಕೆ ಎಷ್ಟು ಸಿಕ್ಕುತ್ತೋ ಅಷ್ಟೆ .

ರಾಘವೇಂದ್ರ ಕೆಸವಿನಮನೆ. said...

ಚಿತ್ರಾ,
"ಮನುಷ್ಯನ ಸಂಬಂಧಗಳೆಲ್ಲಾ ಈರುಳ್ಳಿಯಂತೆ. ಬಂಗಾರದ ಬಣ್ಣದಲ್ಲಿ ಹೊಳೆಯುವ ಸಿಪ್ಪೆ ಮೇಲಿದ್ದರೇನೇ ಅದು ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಕಣ್ಣೀರು ತರಿಸುತ್ತದೆ" ಸಾಲು ಓದುತ್ತಿದ್ದಂತೆ ನಮ್ಮ ಸರ್ ಒಬ್ಬರು ಹೇಳುತ್ತಿದ್ದ ಮಾತು ನೆನಪಿಗೆ ಬಂತು. ಲೈಫು, ಸಂಬಂಧಗಳ ಬಗ್ಗೆ ಮಾತನಾಡುತ್ತ ಇವುಗಳನ್ನೆಲ್ಲ ನಮ್ಮ ದೇಹಕ್ಕೆ ಹೋಲಿಸಿ ವಿಶ್ಲೇಷಿಸಿದ್ದರು. ಚರ್ಮ, ರಕ್ತ, ಮಾಂಸಗಳ ಹೊದಿಕೆ ಬೇಧಿಸಿ ದೇಹದ ಆಳಕ್ಕೆ ಹೋದಷ್ಟೂ ಮೂಳೆ ಚಕ್ಕಳಗಳೇ ಸಿಗುವ ಹಾಗೆ ಲೈಫು, ಸಂಬಂಧಗಳ ವಿಷಯದಲ್ಲೂ ಮೇಲಿನ ಸಂತೋಷದ, ಮೆಲುನಗೆಯ ಹೊದಿಕೆ ಬೇಧಿಸಿ ಒಳಕ್ಕೆ ಇಳಿದಂತೆಲ್ಲಾ ನೋವು, ಹತಾಶೆ ದುಃಖ ದುಮ್ಮಾನಗಳೇ ಸಿಕ್ಕುವುದಂತೆ. (ಇದಕ್ಕೆ ಅಪವಾದಗಳೂ ಇರಬಹುದು. ಆದರೆ ಮೆಜಾರಿಟಿಯಲ್ಲಿ ಈ ಮಾತು ನಿಜವೂ ಹೌದು.)
ಸಂಬಂಧಗಳ ಸ್ವರೂಪ ಬಹಳ ಸಂಕೀರ್ಣವಾದ್ದು. ಎಷ್ಟೋ ಸಲ ಸಂಬಂಧದಲ್ಲಿ ನಮ್ಮ ಹತ್ತಿರದವರೇ ಮಾನಸಿಕವಾಗಿ ತುಂಬಾ ದೂರದವರೆನಿಸಿಬಿಡುತ್ತಾರೆ. ಸಂಬಂಧದಿಂದ ಏನೂ ಅಲ್ಲದವರು ಕೂಡ ಆತ್ಮಬಂಧುವಾಗಿಬಿಡುತ್ತಾರೆ. ಸಂಬಂಧ 'ಸಮಬಂಧ'ವಾದಾಗ ಮಾತ್ರ ಅವುಗಳ ನಡುವಿನ ಕೊಂಡಿ ಬಲವಾಗಲು ಸಾಧ್ಯ ಅಂತ ನನಗನ್ನಿಸುತ್ತೆ.
ಚೆನ್ನಾಗಿ ಬರೆದಿದ್ದೀರಿ. ಹೀಗೆ ಬರೆಯುತ್ತಿರಿ.!
ಸಂಕ್ರಾತಿಯ ಶುಭಾಷಯಗಳೊಂದಿಗೆ,
-ರಾಘವೇಂದ್ರ ಕೆಸವಿನಮನೆ.

ಚಿತ್ರಾ ಸಂತೋಷ್ said...
This comment has been removed by the author.
ವಿ.ರಾ.ಹೆ. said...
This comment has been removed by a blog administrator.
ಚಿತ್ರಾ ಸಂತೋಷ್ said...

ಪಲ್ಲವಿ ಮೇಡಂ..ಪ್ರತಿಕ್ರಿಯೆಗೆ ಧನ್ಯವಾದಗಳು. "ನಾನಾಗೇ ಯಾರನ್ನೂ ನೋಯಿಸಲು ಹೋಗುವುದಿಲ್ಲ. ನನ್ನನ್ನು ಇತರರು ನೋಯಿಸಿದರೆ, ಅದನ್ನು ಅರ್ಥ ಮಾಡಿಕೊಳ್ಳಲು ಅದನ್ನು ಗೆದ್ದು ನಿಲ್ಲಲು ಯತ್ನಿಸುತ್ತೇನೆ. ಅವರ ನಡವಳಿಕೆಗಳು ನನ್ನ ಮೇಲೆ ವ್ಯತಿರಿಕ್ತ ಪರಿಣಾಮವಾಗಲು ಬಿಡುವುದಿಲ್ಲ" ನಿಮ್ಮ ಮಾತುಗಳು ನಿಜವೇ..ಆದರೆ ಕೆಲವೊಮ್ಮೆ ನಡವಳಿಕೆಗಳು ನಮ್ಮನ್ನು ಮೀರಿ ನಿಲ್ಲುತ್ತವೆ ಅನ್ನೋದಕ್ಕೂ ಅಲ್ಲಗಳೆಯಲಾಗದು.

@ರಾಘವೇಂದ್ರ ನಿಮ್ಮ ಪ್ರತಿಕ್ರಿಯೆಗೆ ತುಂಬಾನೇ ಧನ್ಯವಾದಗಳು. ಹೌದು.."ಸಂಬಂಧಗಳ ಸ್ವರೂಪ ಬಹಳ ಸಂಕೀರ್ಣವಾದ್ದು...". ನಿಮಗೂ ಸಂಕ್ರಾತಿ ಹಬ್ಬದ ಶುಭಾಶಯಗಳು.

@ಸಂತೋಷ್...ನಮಸ್ಕಾರ
"ಮಾನವೀಯತೆ ಮೇಲೆ ನಂಬಿಕೆ ಇಟ್ಟುಕೊಂಡದ್ದರಿಂದಲೇ ಕೆಲವೊಮ್ಮೆ ಮಾನವ ಬಂಧಗಳು ಮಣ್ಣುಗೂಡುತ್ತಿವೆಯೇ? ಎಂಬ ನಿಮ್ಮ ಪ್ರಶ್ನೆ ಗೆ ಉತ್ತರ "ಇಲ್ಲ", "ನೀವ್ ಅಂದ್ಕೊಂಡಿರೋದು ಸುಳ್ಳು" ಅಂತ ..ಹೇಳಿದ್ದೀರಿ..ಆದರೆ ನೀವು ಈ ಪ್ರಶ್ನೆ ಎಲ್ಲಿಯೂ ಕೇಳಿಲ್ಲ..ಒಂದು ಮಾತು ಹೇಳ್ತೀನಿ..ನಾನೆಲ್ಲೂ ಮಾನವೀತೆಯನ್ನು ದೂರಿಲ್ಲ...ದಯವಿಟ್ಟು ಇನ್ನೊಂದು ಸಲ ನನ್ ಬರಹಾನ ಓದಿ.ಯಾವತ್ತೂ ಮಾನವ ಸಂಬಂಧಕ್ಕೆ ಚೌಕಟ್ಟು ಹಾಕೋದು ಸಾಧ್ಯಾನೇ ಇಲ್ಲ..ರಾಘವೇಂದ್ರ ಹೇಳಿದಂತೆ ಅದು 'ಸಂಕೀರರ್ಣ'..ಹಾಗಾಗಿ ನಾನೆಲ್ಲೂ ಜಡ್ಜ್ ಮೆಂಟ್ ಕೊಟ್ಟಿಲ್ಲ.
-ಚಿತ್ರಾ

ಮಲ್ಲಿಕಾರ್ಜುನ.ಡಿ.ಜಿ. said...

"ಎ ವಾಕ್ ಇನ್ ದ ಕ್ಲೌಡ್ಸ್" ಫಿಲ್ಮ್ ನೋಡಿದೆ. ಅದನ್ನು ನೋಡಿದ ಮೇಲೆ ಮಾನವ ಸಂಬಂಧಗಳ ಬಗ್ಗೆ ಆಶಾಭಾವನೆಯ ಅವಲೋಕನ ಪ್ರಾರಂಭವಾಯಿತು. ಕಷ್ಟಬಂದಾಗ ಮಾನವನ ನಡವಳಿಕೆಯೇ ಅವನ ನಿಜಸ್ವರೂಪ. ಹೀಗೆಲ್ಲಾ ಯೋಚಿಸಲು ಹಚ್ಚಿದ ನಿಮ್ಮ ಬರಹಕ್ಕೆ ಥ್ಯಾಂಕ್ಸ್.

ಸುಧೇಶ್ ಶೆಟ್ಟಿ said...

ಯ೦ಡಮೂರಿಯವರ ಆ "ಈರುಳ್ಳಿ" ಕಥೆಯನ್ನು ನಾನು ಅದೆಷ್ಟು ಬಾರಿ ಓದಿದ್ದೇನೊ.. ನಿಮ್ಮ ಲೇಖನದ ಮೊದಲ ಸಾಲು ಓದಿದಾಗಲೇ ತಿಳಿದುಹೋಯಿತು ಅದು ಯ೦ಡಮೂರಿಯವರದು ಎ೦ದು. ಅವರಿಗೆ ಮಾತ್ರ ಸಾಧ್ಯ ಆ ರೀತಿ ಬರೆಯಲು.....

ತು೦ಬಾ ಇಷ್ಟವಾದ, ಮನ ತಟ್ಟಿದ ಬರಹ ಚಿತ್ರಾ ಅವರೇ..

ಥ್ಯಾ೦ಕ್ಸ್...

ಹರೀಶ ಮಾಂಬಾಡಿ said...

ಉದಾಹರಣೆಗೆ ಉದ್ಯೋಗ ವ್ಯವಸ್ಥೆಯನ್ನೇ ನೋಡಿ.ಮಾಲಕ-ನೌಕರ ಸಂಬಂಧಗಳೂ ಹಳಸಿ ಹೋಗುತ್ತಿವೆ. ಈಗ ಒಂದು ಕಂಪೆನಿಯಲ್ಲಿ ಹತ್ತು ವರ್ಷ ಕೆಲಸ ಮಾಡಿದರೂ ಆತ ಗ್ರೇಟ್. ಇಬ್ಬರಲ್ಲೂ ಬಾಂಧವ್ಯವೇ ಇಲ್ಲ. ಸಂಬಂಧಗಳು,ಬಾಂಧವ್ಯಗಳು ಭಾರತೀಯ ಕಲ್ಚರ್ ಅನ್ನುತ್ತಾರೆ. ಆದರೆ ಈಗ ಅದ್ಯಾವುದೂ ಇಲ್ಲ. ನಿಮ್ಮ ವಿಚಾರಗಳು ಮನಮುಟ್ಟುತ್ತವೆ.

ಚಿತ್ರಾ ಸಂತೋಷ್ said...

@ಮಲ್ಲಿಯಣ್ಣ..ಹರೀಶ್ ಸರ್...ಧನ್ಯವಾದಗಳು.
@ಸುಧೇಶ್..ಯಂಡಮೂರಿಯವರ 25 ಶ್ರೇಷ್ಠ ಕತೆಗಳು ಪುಸ್ತಕ ಸಕತ್ತಾಗಿದೆ..ಸಿಕ್ರೆ ಓದಿ.
-ಚಿತ್ರಾ

Anonymous said...

chitra,
bareha barehavagi chennagide. adre e jagattinalli yavdu satya alla. preeti satyanu houdu, sullu houdu. adu kalada mele nintirutte.
atva nodora niluvina mele nirdhara agutte.
adre gali, neeru, belaku irovastu dina preeti irutte. adu namm bogasege tumbikolluva samudrada uppuppu neeru.

Hema Powar said...

ಚಿತ್ರಾ,
>>ನಮಗೆ ಖುಷಿ ಕೊಡುವ ಸಂತೋಷನಾ ಹಂಚಿಕೊಳ್ಳಕೆ ಬಯಸೋರು..ದುಃಖದ ಕಣ್ಣೀರು ಒರೆಸಾಕೆ ಅದೇಕೆ ಹಿಂದೆ-ಮುಂದೆ ನೋಡ್ತಾರೆ..ಕಾಲಚಕ್ರ ಉರುಳಿದಂತೆ ನಮ್ಮೊಳಗೆ ಭಾವಗಳು ಸತ್ತು ಮಣ್ಣಾಗೂಡುತ್ತಿವೆಯೇ?>>

ಓದುತ್ತಿದ್ದಂತೆ, ನೀನು ಬರ್ದಿರೋದು ಎಷ್ಟು ನಿಜವಲ್ವೇ ಅನ್ನಿಸಿತು. ಇಂತದೊಂದು ಪ್ರಶ್ನೆ ನಾವು ನಮ್ಮನ್ನೇ ಯಾಕೆ ಕೇಳಿಕೊಳ್ಳುವುದಿಲ್ಲ? ಇದನ್ನು ತುಂಬ ನಾರ್ಮಲ್ ಎಂಬುವಂತೆ ಸ್ವೀಕರಿಸಿಬಿಡ್ತೀವೇಕೆ?
ತುಂಬಾ ಯೋಚನಾಯುಕ್ತ ಬರಹ. ಓದಿದೊಡನೆ ಚಿಂತಿಸುವಂತೆ ಮಾಡುತ್ತದೆ.

ಹೇಮ ಪವಾರ್

ಚಿತ್ರಾ ಸಂತೋಷ್ said...

@ವೈ.ಗ. ಸರ್..ಸರಿಯಾಗಿಯೇ ಹೇಳಿದ್ದೀರಿ..ಧನ್ಯವಾದಗಳು.
@ಹೇಮಾ..ನಿಮಗೂ ಧನ್ಯವಾದಗಳು.
-ಚಿತ್ರಾ

ಕೃಪಾ said...

Chitra,
Igaste nimma blogge first time bheti kottiddhu, nanna manada maathugalige nimma baravanige dhani eno anthanisutthe.

bhavanegallella baththi Life is just adjustment eno anthanisuththe, Kelovomme Ganda-Hendathi Sambhandhagalallu.

ಚಿತ್ರಾ ಸಂತೋಷ್ said...

ಪ್ರೀತಿಯ ಕೃಪಾ..ಶರಧಿ ಜೊತೆ ಕೈಜೋಡಿಸಿದ್ದಕ್ಕೆ ವಂದನೆಗಳು.
-ಚಿತ್ರಾ