Wednesday, November 26, 2008

ಕಲ್ಲಿನಲ್ಲೂ ಅಡಗಿದೆ ಸೌಂದರ್ಯ....!

ನಿತ್ಯ ತೂರಿಬರುವ ಸೂರ್ಯನ ಹೊಂಗಿರಣ ಚೆಲುವನ್ನು ಆತ ಕಂಡವನಲ್ಲ. ಬೆಳದಿಂಗಳ ರಾತ್ರೀಲಿ ನಗುವ ತಂಪು ಚಂದಿರ, ನಕ್ಷತ್ರ ಪುಂಜಗಳ ಮಿನುಗನ್ನೂ ಆತ ಕಂಡಿಲ್ಲ. ಹೂವು, ಹಣ್ಣು ಪ್ರಕೃತಿಯ ರಮ್ಯತೆ ನೋಡಿಲ್ಲ. ಝುಳು ಝುಳು ಹರಿಯುವ ನದಿ ನಿನಾದವನ್ನು ಕೇಳುತ್ತಾನೆ, ಆದರೆ ನದಿಯ ಸೌಂದರ್ಯ ಕಣ್ಣಾರೆ ನೋಡೀ ಭಾಗ್ಯ ಆತನಿಗಿಲ್ಲ. ಸಂಜೆಯ ಶುಭ್ರ ಕಾಂತಿಯ ಖುಷಿಯನ್ನು ಆತ ಅನುಭವಿಸಿಲ್ಲ. ಆದರೂ ಆತನ ಕಣ್ಣುಗಳಲ್ಲಿ ನಗುವಿನ ಬೆಳಕಿತ್ತು. ಅಮಾವಾಸ್ಯೆಯ ರಾತ್ರಿಗಳನ್ನು ಹುಣ್ಣಿಮೆಯ ಬೆಳದಿಂಗಳನ್ನಾಗಿಸುವ ಕಲೆ ಅವನಿಗೆ ಗೊತ್ತಿತ್ತು. ಮುಖದಲ್ಲಿ ಖುಷಿ ಖುಷಿಯ ಮಂದಹಾಸವಿತ್ತು. ಆತ ನಡೆದಿದ್ದು ಕತ್ತಲಲ್ಲೇ...ಆತನಿಗೆ ನಡೆದಿದ್ದೆಲ್ಲಾ ದಾರಿ. ನಡೆದಿದ್ದೆಲ್ಲಾ ಬದುಕು. ಇದು ಬದುಕುವ ಕೆಲವರ ಬದುಕು.

ನಿನ್ನೆ ರಾತ್ರಿ Zee TV Sa Re Ga Ma Little Champs ಕಾರ್ಯಕ್ರಮದ ಹಳೆಯ ಎಪಿಸೋಡ್ ಗಳನ್ನು ನೋಡುತ್ತಿದೆ. ಲೇಖನಿ ಹಿಡಿದು ಕುಳಿತೆ. ಕಾರ್ಯಕ್ರಮದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಯಿತು. ಮೊದಲ ಬಹುಮಾನವನ್ನು ಸಂಚಿತಾ(14) ಎಂಬ ಕೋಲ್ಕತ್ತಾ ಬಾಲಕಿ ಪಡೆದರೆ, 13 ವರ್ಷದ ದಿವಾಕರ್ ಎಂಬ ದೆಹಲಿಯ ಅಂಧ ಬಾಲಕ ದ್ವಿತೀಯ ಬಹುಮಾನ ಪಡೆದ. ವೇದಿಕೆ ಎದುರು ಸಾವಿರಾರು ಜನರು. ನಿರೀಕ್ಷೆಯಿಂದ ಕಣ್ಣು, ಕಿವಿಗಳನ್ನು ಬಿಟ್ಟು ನೋಡುತ್ತಿದ್ದಾರೆ. ಶಾರುಖ್ ಖಾನ್ ವಿಜೇತರ ಹೆಸರುಗಳನ್ನು ಘೋಷಿಸುತ್ತಿದ್ದಂತೆ ಚಪ್ಪಾಳೆ, ನಗುವಿನ ಸಂಭ್ರಮ ಮುಗಿಲುಮುಟ್ಟಿತ್ತು. ಒಂದೆಡೆ ಪುಷ್ಯಗಳ ಸುರಿಮಳೆ. ಖುಷಿಯಿಂದ ನನ್ನ ಕಣ್ಣಾಲಿಗಳು ತುಂಬಿ ನದಿಯಾದುವು. ಆ ಹುಡುಗನ ಹೆತ್ತವರ ಪ್ರೀತಿಯ ಸಂತೋಷ, ಸಂಭ್ರಮ ವನ್ನು ಕಣ್ಣಾರೆ ಕಾಣಲು ದೇವರು ಮೋಸ ಮಾಡಿದ್ದಾನೇನೋ, ಇದು ಸರಿಯೇ? ಅನಿಸಿತ್ತು..ಆದರೆ ಆತನ ಮುಖದಲ್ಲಿ ಅರಳಿದ ಸಂತೋಷ ಕಂಡು ನಾನೂ ಖುಷಿಪಟ್ಟೆ..ಆತನ ನಗುವಿನಲ್ಲಿ ನಾನೂ ಒಂದಾಗಿ.

ಎರಡು ವರ್ಷಗಳ ಹಿಂದೆ. ಧಿಢೀರ್ ಬೆಂಗಳೂರಿಗೆ ಬಂದವಳು ನಾನು. ಕಾಲೇಜು ಪ್ರೀತಿ, ಅಮ್ಮನ ಮಡಿಲು ಎಲ್ಲವನ್ನೂ ಬಿಟ್ಟು ಈ ಕಾಂಕ್ರೀಟ್ ನಗರಕ್ಕೆ ಬಂದಾಗ ಬದುಕಿನ ಇನ್ನೊಂದು ಮುಖ ಪರಿಚಯವಾಗಿತ್ತು. ಹಳ್ಳಿಯ ಮಡಿಲಿಂದ ಬಂದ ನನಗೆ ಏಕಾಂತ ಸವಿಯಲು ಮನತಣಿಸುವ ಜಾಗಗಳೇ ಇಲ್ಲ. ಬತ್ತದ ಪ್ರೀತಿಯ ತೊರೆ ಹರಿಸುವ ಜೀವಗಳಿಲ್ಲ. ಕುರುಡರು, ಕಿವುಡರು, ಭಿಕ್ಷುಕರು, ಕೈ-ಕಾಲು ಇಲ್ಲದವ್ರು, ಹುಚ್ವರು..ರಸ್ತೆ ಬದಿಯಲ್ಲೇ ಆಕ್ಸಿಡೆಂಟ್ ಆಗಿ ಹೆಣ ಬಿದ್ದರೂ ಏನಾಯ್ತು ಎನ್ನೋರೇ ಇಲ್ಲ..! ಅಬ್ಬಬ್ಬಾ! ನೋಡಿ ಹಳ್ಳಿಯ ಮಡಿಲಿಗೆ ಹೋಗಿಬಿಡೋಣ..ಇಲ್ಲಿ ಜೀವನ ಪ್ರೀತಿನೇ ಇಲ್ಲ ಎಂದನಿಸುತ್ತಿತ್ತು.

ನಾನು ಬಸ್ಸಲ್ಲಿ ಬರುವಾಗ ಹೆಚ್ಚಾಗಿ ಕುರುಡರನ್ನು ನೋಡುತ್ತೇನೆ..ಅವರು ಬಸ್ಸಿಗೆ ಹತ್ತೋದು, ಇಳಿಯೋದು, ರಸ್ತೆ ದಾಟೋದು, ಫೋನಲ್ಲಿ ಮಾತಾಡೋದು, ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡೋದು..ಎಲ್ಲವನ್ನು ಕಂಡಾಗ ನಿಜಕ್ಕೂ ಅವರು ಅಂಗವಿಕಲರಂತಾನೇ ಅನಿಸಲ್ಲ. ನಾವೇ ಕಣ್ಣಿದ್ದರೂ ಕುರುಡರು ಅನಿಸುತ್ತೆ. ದೇವ್ರು ಜಗತ್ತು ನೋಡಕ್ಕೆ ನಮಗೆ ಕಣ್ಣುಗಳನ್ನು ಕೊಟ್ಟಿದ್ದಾನೆ. ಕೈ-ಕಾಲು ನೀಡಿದ್ದಾನೆ. ಆದರೆ ನಾವು ನಡೆಯುತ್ತಿರುವುದು ಬೆಳಕಿನಲ್ಲಿ...ಹಾಗಾಗಿ ನಮಗೆ ನಡೆದಿದ್ದೆ ದಾರಿ. ಕತ್ತಲಲ್ಲಿ ನಡೆದವಂಗೆ ನಡೆದಿದ್ದೆಲ್ಲಾ ದಾರಿ. ಕಣ್ಣಿಲ್ಲದವ್ರು ಜಗತ್ತು ಕಾಣ್ತಾರೆ..ಬದುಕು ಕಾಣ್ತಾರೆ..ಆದರೆ ನಮಗೆ ಕಣ್ಣಿದ್ದರೂ ಕೆಲವೊಮ್ಮೆ ಕುರುಡರಾಗಿರುತ್ತೇವೆ.
ಕೆಲವರು ಅಂಗವಿಕರನ್ನು ಕಂಡಾಗ ಅಯ್ಯೋ ಪಾಪ ಅಂತಾರೆ..ಬೇಡ ಬಿಡಿ ಕನಿಕರದ ಮಾತು. ಅವರಿಗೆ ಬೇಕಾಗಿರೋದು ಪ್ರೀತಿ, ಸ್ಫೂರ್ತಿ, ನಮ್ಮಂತೆ ಅವರನ್ನು ಭಾವಿಸಬೇಕು. ಜಗತ್ತನ್ನು ಕಣ್ಣಾರೆ ಕಾಣದವರಾದರೂ, ಮನದಲ್ಲಿ ಜಗತ್ತು ಕಾಣೋರು ಅವರು. ಅವರಿಗೆ ಜೀವ ಪ್ರೀತೀನ ನೀಡಬೇಕು. ನಮ್ಮಂತೆ ಅವರೂ ಎಂದು ಭಾವಿಸಬೇಕು. ಅಂಧ ಮಕ್ಕಳಿದ್ದರೆ, ಅವರನ್ನು ಅಂಧರ ಆಶ್ರಮಕ್ಕೆ ಸೇರಿಸಿಬಿಡುವ ಎಷ್ಟೋ ಹೆತ್ತವರಿದ್ದಾರೆ..ಬೇಡ, ಬೇಡ..ನಮ್ಮ ಮಡಿಲಲ್ಲಿ ಮಲಗಿಸಿ ಪ್ರೀತೀನ ಉಣಬಡಿಸಿ. ಇತರ ಮಕ್ಕಳಂತೆ ಕಾಣಿ. ಪ್ರೋತ್ಸಾಹ ನೀಡಿ..ಅವರಿಗೂ ದೇವರು ಅದ್ಯಾವುದೋ ಒಂದು ಶಕ್ತಿ, ಚೈತನ್ಯ ನೀಡೇ ನೀಡಿರುತ್ತಾನೆ. ಇಂದು ದಿವಾಕರ್ ನಂತಹ ಎಷ್ಟೋ ಮಕ್ಕಳಿದ್ದಾರೆ. ಅವರಲ್ಲಿ ಪ್ರತಿಭೆಗಳಿವೆ. ಅದನ್ನು ಹೆಕ್ಕಿ ತೆಗೆಯೋ ಕೆಲಸ ನಮ್ಮಿಂದಾಗಬೇಕು. ಅವರಿಗೆ ಬೇಕಾಗಿರೋದು ಪ್ರೀತಿ..ಪ್ರೋತ್ಸಾಹ ಅಷ್ಟೇ. ಆ ಪುಟ್ಟ ಬಾಲಕನನ್ನು ನೋಡುತ್ತಿದ್ದಂತೆ ನನಗೆ ನೆನಪಾಯಿತು..ಎಫ್. ಅಸಾದುಲ್ಲಾ ಬೇಗ್ ಅವರ ಒಂದು ಶಾಯರಿ:
ಕಲ್ಲಿನಲ್ಲೂ ಅಡಗಿದೆ
ಸೌಂದರ್ಯ
ಕೆತ್ತುವ ಸಾಮರ್ಥ್ಯವಿದ್ದರೆ!
ಪ್ರತಿ ಮಾತಿನಲ್ಲೂ ಅಡಗಿದೆ
ಸಾಹಿತ್ಯ
ಗ್ರಹಿಸುವ ಸಾಮರ್ಥ್ಯವಿದ್ದರೆ!

2 comments:

ಹೆಸರು ರಾಜೇಶ್, said...

ನಿಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿದೆ.
ಗೆಳೆಯ
ರಾಜೇಶ್

ಚಿತ್ರಾ ಸಂತೋಷ್ said...

@ರಾಜೇಶ್..ಥ್ಯಾಂಕ್ಯೂಊಊಊಊಊಊಊ
-ಚಿತ್ರಾ