Wednesday, February 4, 2009

ಯಾವ ಸೀಮೆಯ ಸಂಸ್ಖತಿ...ಕಾಳಜಿ ಕಣ್ರೀ..?!

ಕಳೆದ ವಾರ ಮಂಗಳೂರಿನಲ್ಲಿ ನಡೆದ ಪಬ್ ದಾಳಿ, ಅದರ ಪರ-ವಿರೋಧ, ಆರೋಪ-ಪ್ರತ್ಯಾರೋಪ, ಮಹಿಳಾ ಸಂಘಟನೆಗಳ 'ಸ್ವಾತಂತ್ರ್ಯ'ದ ಕುರಿತಾದ ಹೋರಾಟ, ಮಹಿಳೆಯ ದಬ್ಬಾಳಿಕೆ-ಶೋಷಣೆ ಬಗ್ಗೆ ಕೇಳಿಬಂದ 'ಕಾಳಜಿ'ಯ ಮಾತುಗಳು..ಮಹಿಳಾ ಆಯೋಗದ ಸದಸ್ಯೆ ನಿರ್ಮಾಲಾ ವೆಂಕಟೇಶ್ ಮತ್ತು ಸಚಿವೆ ರೇಣುಕಾ ಚೌಧುರಿ, ಗಿರೀಜಾ ವ್ಯಾಸ್ ನಡುವಿನ 'ಕೋಳಿಜಗಳ', ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿ, ಬ್ಲಾಗ್ ಗಳಲ್ಲಿ ಬರುತ್ತಿರುವ 'ವಿಭಿನ್ನ' ಬರಹಗಳನ್ನು ಕಂಡಾಗ..ವ್ಯವಸ್ಥೆಯ ಕುರಿತಾಗಿ ನನ್ನೊಳಗೆ ದುಃಖದ ಛಾಯೆ ಆವರಿಸಿಬಿಡುತ್ತೆ. ದುಃಖ ಸಿಟ್ಟಾಗಿ ಮಾರ್ಪಾಡಾಗುತ್ತೆ.

ಈ ವ್ಯವಸ್ಥೆ ಯಾಕೇ ಹೀಗೇ? ....

ನನಗಾಗ ಪುಟ್ಟ ವಯಸ್ಸು...ಊರ ಶಾಲೆಯ ಏಳನೇ ಕ್ಲಾಸ್ ಹುಡುಗಿ ಮೇಲೆ, ಊರಿನ ಫಟಿಂಗ ರಾಜಕಾರಣಿಯೊಬ್ಬ ಹಾಡುಹಗಲೇ ಅತ್ಯಾಚಾರ ಮಾಡಿದ್ದ..ಆ ಹುಡುಗಿಯ ಫ್ಯಾಮಿಲಿ ತುಂಬಾ ಬಡವ್ರು..ಅಷ್ಟೇ ಅಲ್ಲ, ಬಾಲಕಿಯ ಅಮ್ಮ ಆ ಫಟಿಂಗನ ಮನೆಯಲ್ಲೇ ಕೆಲಸಕ್ಕಿದ್ದರು..ಮಗಳ ಮೇಲಾದ ಅತ್ಯಾಚಾರನ ಕಣ್ಣಾರೆ ಕಂಡ, ಆ ಅಮ್ಮ ನ್ಯಾಯಕ್ಕಾಗಿ ಊರೂರು ಅಲೆದಳು..ತಾಲ್ಲೂಕಲ್ಲಿರುವ ಮಹಿಳಾ ಸಂಘಟನೆಗಳು, 'ಸ್ತ್ರೀ ಶಕ್ತಿ' ಗುಂಪುಗಳು..ಸ್ವಸಹಾಯ ಗುಂಪುಗಳಿಗೆ ಮೊರೆಹೋದರು..ನ್ಯಾಯ ಸಿಗಲೇ ಇಲ್ಲ, ಆತ ರಾವಣನಾದರೂ 'ರಾಮ'ನಂತೆ ಮೆರೆದ..ಆ ಅಮಾಯಕ ಹೆಣ್ಣಿನ ಕಣ್ಣೀರ ಒರೆಸಲು, ಪರನಿಂತು ಹೋರಾಡಲು ಯಾವ 'ಸಂಘಟನೆ'ಗಳು ಮುಂದೆ ಬರಲಿಲ್ಲ..! ಕೆಲ ವರುಷಗಳ ಹಿಂದೆ ನಾನು ಡಿಗ್ರಿಯಲ್ಲಿರುವಾಗ ಆಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು..ಆತ್ಮಹತ್ಯೆ ಯಾಕಾಯಿತು ಅನ್ನೋದು ಯಾರಿಗೂ ತಿಳಿದಿಲ್ಲ..ಅದು ಮಹತ್ವದ 'ಸುದ್ದಿ'ಯಾಗಲೂ ಇಲ್ಲ.

ಕಳೆದ ವರ್ಷ ಜನವರಿ 3ರಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪಾನಮತ್ತನಾದ ಪೊಲೀಸ್ ಪೇದೆಯೊಬ್ಬ 11 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ. ಕೆಲವು ಪತ್ರಿಕೆಗಳಲ್ಲಿ ಮುಖಪುಟ ಸುದ್ದಿನೂ ಆಯಿತು..ಆತನಿಗೆ ಶಿಕ್ಷೆ: 14 ದಿನ ನ್ಯಾಯಾಂಗ ಬಂಧನ ಮತ್ತು ಸೇವೆಯಿಂದ ಅಮಾನತು!!!

ಇಂಥಹ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣೆರಿವೆ..ನಮ್ಮ-ನಮ್ಮ ಊರಿನ ಪೊಲೀಸ್ ಠಾಣೆಗಳಿಗೆ ಹೋದರೆ ಮಹಿಳೆಯರ, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಾದ ಅತ್ಯಾಚಾರಗಳ ದೊಡ್ಡ ಪಟ್ಟಿನೇ ಸಿಗುತ್ತೆ,....ಬೆಂಗಳೂರಿನ ನಗರ ಪೊಲೀಸ್ ಆಯುಕ್ತರಿಗೆ ಒಂದು ಫೋನಾಯಿಸಿ, ಕೇಳಿದರೂ ಸಾಕು...ಬನ್ನಿ ತೆಗೆದುಕೊಂಡು ಹೋಗಿ ಅಂತ ದೊಡ್ಡ ಪಟ್ಟಿನೇ ನಮ್ಮ ಮುಂದೆ ಇಡ್ತಾರೆ...ಹೌದು, ಹೆಣ್ಣಿನ ಮೇಲಾಗುವ ಶೋಷಣೆಯಲ್ಲಿ 'ಅತ್ಯಾಚಾರ'ದಂತ ಭೀಕರ ಶೋಷಣೆಗಳು ಯಾವುದಿಲ್ಲ ಎನ್ನುವುದು ನನ್ನ ಅನಿಸಿಕೆ.

ಮೊನ್ನೆ ಪಬ್ ದಾಳಿಯಲ್ಲಿ ಶ್ರೀರಾಮಸೇನೆಯವರು ಹುಡುಗಿಯರನ್ನು ಎರ್ರಾಬಿರ್ರಿ ಹೊಡೆದಿದ್ದು ತಪ್ಪು...ನನಗೂ ಅದನ್ನು ನೋಡಿ ಕಣ್ಣಲ್ಲಿ ನೀರು ಬಂತು..ಛೇ! ಏನಪ್ಪಾ ಇವ್ರು ಮನುಷ್ಯರಾ..? ಅಂತ ನನ್ನೊಳಗೆ ನಿಂದಿಸಿದೆ. ಪಬ್ಗಳಿಗೆ ಸರ್ಕಾರ ಅನುಮತಿ ಕೊಟ್ಟಿದೆ..ಹಾಗಿದ್ದ ಮೇಲೆ ಜನ ಅಲ್ಲಿ ಹೋಗೇ ಹೋಗ್ತಾರೆ..ಕುಡೀತಾರೆ..ಕುಡಿದಾಗ ಕಿಕ್ಕೇರಿ ಕುಣೀತಾರೆ. ಯಡಿಯೂರಪ್ಪ ಹೇಳಿದಂಗೆ ಕುಡೀರಿ, ಕುಣಿಬೇಡಿ ಅಂದ್ರೆ ಕೇಳೋರು ಬೇಕಲ್ಲಾ...!!! ಕೊನೆಗೆ ಪರಿಸ್ಥಿತಿ ನಿಯಂತ್ರಿಸಲು ಸ್ವತಃ ಯಡಿಯೂರಪ್ಪ ಅವರೇ ಕೋಲು ಹಿಡಿದು ನಿಂತರೂ, ಪರಿಸ್ಥಿತಿ ತಿಳಿಯಾಗಲ್ಲ ಬಿಡಿ. ..ಆಮೇಲೆ ಏನಾಗುತ್ತೆ ...ಯಾರಿಗೂ ಮೈ ಮೇಲೆ ಜ್ಞಾನ ಇರಲ್ಲ..ಆದ್ರೆ ಪಬ್ ಸಂಸ್ಕೃತಿ ಇಂದು ನಿನ್ನೆಯದಲ್ಲ...ಮಂಗಳೂರು ಇದಕ್ಕೆ ಹೊರತಾಗಿಲ್ಲ..ಈ ಶ್ರೀರಾಮ ಸೇನೆಯವರು 'ಸಂಸ್ಕೃತಿ' ಹೆಸರು ಇಟ್ಟುಕೊಂಡು ಹೋಗಿ ದಾಳಿ ಮಾಡಿದ್ದು ಖಡಾಖಂಡಿತವಾಗಿಯೂ ತಪ್ಪು. ಈ ರೀತಿ ದಾಳಿ ನಡೆಸಿ, ಎರ್ರಾಬಿರ್ರೀ ಹೊಡೆಯೋದನ್ನು ವಿರೋಧಿಸಲೇಬೇಕು... ವಿರೋಧಿಸೋಣ. ನಾನೂ ವಿರೋಧಿಸುತ್ತೇನೆ..

ಆದರೆ ನನ್ನ ಪ್ರಶ್ನೆ ಅದಲ್ಲ....

ಪಬ್ ದಾಳಿ ನಡೆಯಿತು..ಹುಡುಗೀರನ ಹೊಡೆದ್ರು ಅಂತೇಳಿ ದೆಹಲಿಯಿಂದ ಮಹಿಳಾ ಆಯೋಗವೇ ಬಂದು ಮಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಹೋಗಿ ವಿಚಾರಿಸಿತ್ತು....ರೇಣುಕಾ ಚೌಧುರಿ ಅವರು ದೆಹಲಿಯ ತಮ್ಮ ಕುರ್ಚಿನಲ್ಲೇ ಕುಳಿತು 'ತಾಲೀಬಾನೀಕರಣ' ಅಂದ್ರು..ಮಂಗಳೂರಿನಲ್ಲಿ ಮಹಿಳಾ ಸಂಘಟನೆಗಳು, ಮನೆಯಲ್ಲಿ ಕುಳಿತು ಆರಾಮವಾಗಿ ಬೀಡಿ ಕಟ್ಟುವ ಹೆಂಗಸರು ಕೂಡ.."ಇದು ದೌರ್ಜನ್ಯ, ಇದು ಸ್ವಾತಂತ್ರ್ಯಕ್ಕೆ ಧಕ್ಕೆ, ನಮ್ಮ ಹಕ್ಕುಗಳು ನಮಗೆ ಬೇಕೇ ಬೇಕು, ಸೇನೆಯವರನ್ನು ಹಿಡಿಯಿರಿ..ಶಿಕ್ಷಿಸಿ, ಇಂಥ ಶೋಷಣೆಗಳು ಭವಿಷ್ಯಕ್ಕೆ ಅಪಾಯಕಾರಿ.." ಎಂದು ಬೊಬ್ಬಿಟ್ಟ ಇವರ ಕಾಳಜಿಗೆ ಮೆಚ್ಚಲೇಬೇಕು..ಹೌದು, ಬೇಕೇ ಬೇಕು ಇಂಥ ಕಾಳಜಿ..ಮನೆಯಲ್ಲಿ ಕುಳಿತಿರುವ ಹೆಂಗಸರಲ್ಲೂ ಜಾಗೃತಿ ಮೂಡಲೇಬೇಕು..ಒಪ್ಪಿಕೊಳ್ಳೋಣ..ನಮ್ಮ ಮನೆ ಹುಡುಗಿರಿಗೆ ಹಾಗೇ ಹೊಡೆದ್ರೆ ತಡೆದುಕೊಳ್ಳಕ್ಕೆ ಆಗುತ್ತಾ..?! ಅದ್ಸರಿ...

ಆದರೆ, ನಮ್ಮೂರಲ್ಲಾದ ಪುಟ್ಟ ಬಾಲಕಿಯ ಅತ್ಯಾಚಾರ, ಹಾಸನದಲ್ಲಿ ಪೊಲೀಸ್ ಪೇದೆಯಿಂದಲೇ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ನಡೆದ ಅತ್ಯಾಚಾರ, ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರಿಂದಲೇ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಗಳು...ರಾಷ್ಟ್ರಮಟ್ಟದ ಮಾಧ್ಯಮಗಳಲ್ಲೂ 'ರಾರಾಜಿಸಿವೆ'.ಇಂಥ ಪ್ರಕರಣಗಳು ನಡೆದಾಗ ಈ ಕಾಳಜಿಯುಳ್ಳ ಸಂಘಟನೆಗಳು ಎಲ್ಲಿ ಸತ್ತುಹೋಗಿದ್ದವೆ? ಹಿಂದೂ ಹುಡುಗೀರ ರಕ್ಷಣೆ ಬಗ್ಗೆ ಮಾತನಾಡುವ ಶ್ರೀರಾಮ ಸೇನೆಯವರಿಗೆ ಸಮಾಜದಲ್ಲಿ ಹೆಣ್ಣುಮಕ್ಕಳ..ಮೇಲೆ ಅದರಲ್ಲೂ ಬಡಹೆಣ್ಣುಮಕ್ಕಳ ಮೇಲೆ ನಡೆಯುತ್ತ್ತಿರುವ ಇತರ ಶೋಷಣೆಗಳು ಕಣ್ಣಿಗೆ ಕಾಣಲ್ಲವೇ? ಅತ್ಯಾಚಾರ ಮಾಡಿರುವುದು ಸಂಸ್ಕೃತಿಗೇಕೆ, ಹೆಣ್ಣುಮಗಳೊಬ್ಬಳ ಬದುಕನ್ನೇ ಕಿತ್ತುಕೊಂಡ ಅಮಾನವೀಯತೆ ಅಲ್ಲವೇ? ಯಾವ ಸೀಮೆಯ ಸಂಸ್ಕೃತಿ ಬಗ್ಗೆ ಮಾತನಾಡುತ್ತಿದ್ದೀರಿ ಕಣ್ರೀ? ಮಹಿಳಾ ಪರ ಸಂಘಟನೆಗಳು ಇಷ್ಟೊಂದು ಬೊಬ್ಬಿಡುತ್ತಲ್ಲಾ...ತಮ್ಮ ಜನ್ಮದಲ್ಲೂ ಮಂಗಳೂರುನ್ನು ಕಾಣದೆ..ದೆಹಲಿಯಲ್ಲಿ ಕುಳಿತು ಮಂಗಳೂರು ಪಬ್ ದಾಳಿ , ಹುಡುಗೀರ ಮೇಲೆ ಶೋಷಣೆ ನಡೆದಿದೆ ಎಂದು ಬೊಬ್ಬಿಡುವವವರು ಜೀವನಾದಲ್ಲಿ ಒಂದೇ ಒಂದು ಬಾರಿಯಾದರೂ, ಮಂಗಳೂರಿನ ಒಳಹೊಕ್ಕು ನೋಡಿ..

ನಮ್ಮ ಸುತ್ತಮುತ್ತ 'ಅತ್ಯಾಚಾರ'ದಂಥ ಪ್ರಕರಣಗಳು ನಡೆದಾಗ ಯಾಕೆ ಬೊಬ್ಬಿಡುವುದಿಲ್ಲ..ಒಂದು ಹೆಣ್ಣಿನ ಮೇಲೆ ಅತ್ಯಾಚಾರ ನಡೆದರೆ ಸಮಾಜದಲ್ಲಿ ಅವಳಿಗೆ ಯಾವ ಸ್ಥಾನ ಇದೆ,..ಅಮಾಯುಕಳಂತೆ ಸಹಿಸಿಕೊಂಡ ಹೆಣ್ಣು ಜೀವ .... ಅವಳು ಶೀಲ ಕಳಕೊಂಡವಳು,..ಅನುಮಾನ...ಇಡೀ ಸಮಾಜ ಅವಳನ್ನು ಅಸ್ಪೃಶ್ಯಳಂತೆ ದೂರವಿಡುತ್ತದೆ. ಅವಳ ಇಡೀ ಜೀವನ ನರಕಯಾತನೆ ಅನುಭವಿಸುತ್ತಾಳೆ. ಇದು ಯಾರ ಗಮನಕ್ಕೂ ಬರಲ್ಲವೇ? ಅದು ಶೋಷಣೆ ಅಲ್ವೇ? ಯಾಕೆ..ಮಾಧ್ಯಮಗಳಲ್ಲಿ ಸುದ್ದಿಯಾಗಲಿಲ್ಲ..ಹಾಗೇ ನಮಗೆ ತಿಳಿದೇ ಇಲ್ಲ ಅಂತೀರಾ..? ತಾಕತ್ತಿದ್ದರೆ ಈ 'ಸಂಘಟನೆ'ಗಳು ಸ್ವಯಂ ಕಾಳಜಿಯಿಂದ ಎಲ್ಲಿ? ಎಂಥ ಶೋಷಣೆಗಳು ನಡೆಯುತ್ತಿವೆ..ಎನ್ನುವುದನ್ನು ಕಂಡುಹಿಡಿದು ಬೀದಿಗಿಳಿದು ಈ ವಿರುದ್ಧ ಹೋರಾಟಕ್ಕೆ ನಿಲ್ಲಿ...ಏಕಂದ್ರೆ ಬಡವರಿಗೆ ದೆಹಲಿಗೆ ಅಥವಾ ಬೆಂಗಳೂರಿಗೆ ಬಂದು ಮಹಿಳಾ ಆಯೋಗ ಕಾಣುವ ತಾಕತ್ತಿಲ್ಲ..ಹಾಗೇ ಮಾಡಿದರೆ ಒಪ್ಪೊತ್ತಿನ ಊಟವನ್ನೂ ಕಳೆದುಕೊಳ್ಳಬೇಕಾಗುತ್ತದೆ..
ಇದು ಯಾಕೆ ಸಂಸ್ಕೃತಿ ಬಗ್ಗೆ ಮಾತಾಡುವ ಶ್ರೀರಾಮ ಸೇನೆ? ಅಥವಾ 'ಸ್ವಾತಂತ್ರ್ಯ'ದ ಕುರಿತು ಮಾತನಾಡುವ ಮಹಿಳಾ ಸಂಘಟನೆಗಳ ಗಮನಕ್ಕೆ ಬಂದಿಲ್ಲ?

ಏನಪ್ಪಾ..ಹುಡುಗಿಯಾಗಿ ಇವಳು ಹೀಂಗಾ ಬರೆಯೋದು? ಅಂತ ಅಂದುಕೊಂಡರೂ ಪರ್ವಾಗಿಲ್ಲ..ಒಂದು ಹೆಣ್ಣಾಗಿ ನನಗನಿಸಿದ್ದು .ನನ್ನ ನೋವನ್ನು ಇಲ್ಲಿ ಹಂಚಿಕೊಂಡೆ. ನಾನು ಹೇಳ್ತಾರೋದು ತಪ್ಪಾ..?!

25 comments:

Prakash Shetty said...

ಪಬ್ಬು.. ಗಿಬ್ಬು ಎಲ್ಲಾ.. ದೊಡ್ಡೋರ ಸಂಸ್ಕೃತಿಯಮ್ಮಾ...

ದೊಡ್ಡೋರ ಸಂಸ್ಕೃತಿಗೆ ಧಕ್ಕೆ ಬಂದರೆ ಕೋಲಾಹಲವಾಗಿ ಬಿಡುತ್ತೇ...

****

ಈ ಬಡವರ ಮನೆ ಹೆಣ್ಮಕ್ಳು ಏನಾದ್ರೆ ಅವ್ರಿಗೇನಂತೆ...??

ಓಟು ಸಿಗುತಾ...

ಇಲ್ಲಾ ನೋಟು ಸಿಗುತ್ತಾ....

ಅಥವಾ ಟಿವಿ ಚಾನೆಲ್ ಗಳಿಗೆ "ನೋಟ" ಸಿಗುತ್ತಾ....

Anonymous said...

Shetru Helodu Sarine...
Sannavara vichara suddiyagodilla...
Adre ontantu satya. Sriram Seneya Ravana avatara belakige baralu intaha ondu dali bekayitu...
Innu e channel galu ive nodi. Ivarige bada hudugiya mele ada atyachara beda. Pub vishyane beku. Yake gotta? E channelgalannu noduvavaru badavaru alla tane...

-Melvin

ಹರೀಶ ಮಾಂಬಾಡಿ said...

ಶ್ರೀರಾಮಸೇನೆ ಪಬ್ ಮೇಲೆ ದಾಳಿ ಮಾಡಿ ಹುಡುಗಿಯರಿಗೆ ಪೆಟ್ಟು ಕೊಟ್ಟದ್ದು ಸಣ್ಣ ವಿಚಾರವೇನೂ ಅಲ್ಲ. ಕಾನೂನು ಕೈಗೆತ್ತಿಕೊಳ್ಳಲು ಅವರಿಗೆ ಯಾರೂ ಅಧಿಕಾರ ಕೊಟ್ಟಿಲ್ಲ. ಆದರೆ ವಿಚಿತ್ರವೆಂದರೆ ಇದೇ ಶ್ರೀರಾಮಸೇನೆ ನಮ್ಮ ನಿಮ್ಮದೇ ಪುತ್ತೂರಲ್ಲಿ ಅಕ್ಷತಾ ಎಂಬ ಹುಡುಗಿ ಸತ್ತಾಗ ಆರೋಪಿಯನ್ನು ಹಿಡಿಯಬೇಕು ಎಂದು ಪ್ರತಿಭಟನೆ ಮಾಡಿತ್ತು. ಅದು ಯಷಸ್ವಿ ಆಗಿತ್ತು. ಮೊನ್ನೆ ಮೊನ್ನೆ ಕನ್ಯಾನದ ಬಳಿ ಹುಡುಗಿಯೊಬ್ಬಳ ಮೇಲೆ ಒಬ್ಬ ಅತ್ಯಾಚಾರ ಎಸಗಲು ಪ್ರಯತ್ನಿಸಿದ. ಅವಳು ಧೈರ್ಯ ಮಾಡಿ ಕಂಪ್ಲೇಂಟ್ ಕೊಟ್ಟಳು. ಆತ ಈಗ ಪೋಲೀಸ್ ಅತಿಥಿ. ಯಾವ ಮಹಿಳಾ ಸಂಘಟನೆಗಳೂ, ಇಂಗ್ಲೀಶ್ ಮಾತನಾಡುವ ಸಮಾಜ ಸೇವಕಿಯರೂ ಅವಳ ಸಥ್ ನೀಡಲಿಲ್ಲ. ಅವರಿಗದು ಗೊತ್ತಿತೋ ಇಲ್ಲವೋ,ಆದರೆ ಪಬ್ ಮೇಲೆ ದಾಳಿಗೊಳಗಾದ ದೊಡ್ದ ಮನೆತನದ ಹುಡುಗಿಯರು ಅಷ್ಟೆಲ್ಲಾ ಸಪೋರ್ಟ್ ಇದ್ದಾಗಲೂ ಯಾಕೆ ಇನ್ನೊ ದೂರು ಕೊಟ್ಟಿಲ್ಲ? ಅವರ ಅಪ್ಪ ಅಮ್ಮ ಏನು ಮಾಡ್ತಿದ್ದಾರೆ ಎಂದು ನಮ್ಮ ಮಂಗಳೂರಲ್ಲಿ ಬೀಡು ಬಿಟ್ತಿರುವ ಚಾನೆಲ್ ಗಳು ಯಾಕೆ ವರದಿ ಮಾಡುತ್ತಿಲ್ಲ?
ಇನ್ನು ದ.ಕ.ಜಿಲ್ಲೆಯಲ್ಲಿ ಪಬ್ಬಿಗೆ ಹೋಗದ ಮಹಿಳೆಯರು “ರಡ್ಡ್ ಬುಡುನೆ ಏಡ್ಡೆ ಆಂಡ್” ಎಂದು ಹೇಳುವವರು ಬೇಕಾದಸ್ಟಿದ್ದಾರೆ. ಹೀಗಾಗಿ, ಇನ್ನೂ ಕೂಡ ಕಾನೂನಿನ ಲೂಪ್ ಹೋಲ್ಸ್ ಗಳ ಎಡೆಯಲ್ಲಿ, ಸಂಸ್ಕಾರ, ಕಾಳಜಿ ಚಿಂದಿಯಾಗಿವೆ. ಆದರೆ ಮಾನವೀಯತೆ ಇರುವವರೂ ಇದ್ದಾರೆ.
ನಾನು ಮಂಗಳೂರಿಗನಾದ ಕಾರಣ ಕಂಡದ್ದು ಕಂಡ ಹಾಗೆ ಬರೆದಿದ್ದೇನೆ.

ಸುನಿಲ್ ಹೆಗ್ಡೆ said...

ಚಿತ್ರಾ...
ಸಮಾಜದಲ್ಲಿ ನಡೆಯುವ ಪ್ರತಿಯೊಂದು ವಿಧ್ಯಮಾನಗಳಿಗೂ ಮಾಧ್ಯಮಗಳೂ ನೇರ ಹೊಣೆ ಎಂಬುದು ನಿಜ. ಮಂಗಳೂರಿನ ಘಟನೆ ರಾಷ್ಟ್ರವ್ಯಾಪಿ `ಸುದ್ದಿ'ಯಾದದ್ದು ಏಕೆಂದು ನಿಮಗೂ ಗೊತ್ತು. ಆ ಸಂದರ್ಭದಲ್ಲಿ ಕೆಲವೊಂದು ರಾಷ್ಟ್ರ ಮಟ್ಟದ ವಾಹಿನಿಗಳು ಮಿತಿಮೀರಿದ ಆಸಕ್ತಿ ತೋರಿ ದೆಹಲಿಯ ಮಹಿಳಾ ಆಯೋಗ ಮಂಗಳೂರಿಗೆ ದೌಡಾಯಿಸುವಂತೆ ಮಾಡಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ಮುಖಂಡರುಗಳ ಮುಂದೆ, ನಾಗರಿಕರ ಮುಂದೆ, ದಾಳಿ ಮಾಡಿದ ಅನಾಗರಿಕರ ಮುಂದೆ ಮೈಕ್, ಕ್ಯಾಮೆರಾಗಳನ್ನು ಹಿಡಿದು ಸಂಪೂರ್ಣ ಘಟನೆಗೆ ಧರ್ಮ, ರಾಜಕೀಯದ ಕೋನ ನೀಡಿದ್ದು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲೇ ವಿನಃ ಸಾಮಾಜಿಕ ಕಳಕಳಿ (ಅದು ಇದೆಯೇ ಎಂಬುದೇ ಅನುಮಾನ ಇಲ್ಲಿ ಅಪ್ರಸ್ತುತ)ಯಿಂದ ಅಲ್ಲ ಎಂಬ ವಿಚಾರಕ್ಕೆ ಹೆಚ್ಚಿನ ನಾಗರಿಕರ ಸಹಮತವಿದೆ.
ಬಡವರ ಮನೆ ಮಕ್ಕಳು ಯಾವನೋ ಒಬ್ಬ ತಲೆಮಾಸಿದ ವ್ಯಕ್ತಿಯಿಂದ ದೌರ್ಜನ್ಯಕ್ಕೊಳಗಾದರೆ ಅದು ಸುದ್ದಿಯಲ್ಲ. ಏಕೆಂದರೆ ಆ ವಿಚಾರದಲ್ಲಿ ಯಾವುದೇ `ಗ್ಲಾಮರ್' ಇಲ್ಲ(!). ಸೆನ್ಸೇಷನ್ ಇಲ್ಲ(!). ಅವೆಲ್ಲವೂ ಮಾಮೂಲು ಸುದ್ದಿ. ಅದರ ಬಗ್ಗೆ ಬರೆಯಲು, ಅವರ ಪರ ಧ್ವನಿಯೆತ್ತಲು, ಅವರಿಗೆ ನ್ಯಾಯ ಒದಗಿಸಲು ಮಾಧ್ಯಮದ ಬಳಿ ಸಮಯವಿಲ್ಲ. ಏಕೆಂದರೆ ಅವರ `ಟೈಮ್ ಸ್ಲಾಟ್' ಬಹಳ `ಅಮೂಲ್ಯ'.

madikerimanju said...

PUB GE HODA HENNU MAKKALA MELE MADIDA DALIYANNU NODIDARE ENTAVRIGU ROSHA UKKI BARUTTADE, AA REETHI DAALI YAVUDE KAARANAKKU MARUKALISABARADU ADU TAPPU. ADANNU NANU KANDISUTTENE. MANJU, MADIKERI

ವಿ.ರಾ.ಹೆ. said...

ಏನಪ್ಪಾ..ಹುಡುಗಿಯಾಗಿ ಇವಳು ಹೀಂಗಾ ಬರೆಯೋದು? ಅಂತ ಅಂದುಕೊಂಡರೂ ಪರ್ವಾಗಿಲ್ಲ..

ಬರೆದಿದ್ದರಲ್ಲಿ ತಪ್ಪೇನೂ ಇಲ್ಲ. ನಿಜಕ್ಕೂ ಸಭ್ಯ ಹುಡುಗಿಯರೇ ಇದರ ವಿರುದ್ಧ ದನಿ ಎತ್ತಬೇಕು. ಆಗ ಸಂಸ್ಕೃತಿ ರಕ್ಷಕರೂ, ಪಬ್ ಹೆಣ್ಣುಗಳನ್ನೇ ಸ್ತ್ರೀಕುಲದ ಪ್ರತಿನಿಧಿಗಳು ತಿಳಿದು ಬೊಬ್ಬೆಯಿಡುತ್ತಿರುವ page3 ಫೆಮಿನಿಸ್ಟುಗಳೂ, ಮಾಧ್ಯಮಗಳೂ ಬುದ್ಧಿ ಕಲಿಯುತ್ತಾರೆ.

ತೇಜಸ್ವಿನಿ ಹೆಗಡೆ said...

ಚಿತ್ರಾ,

ನಿನ್ನ ವಿಚಾರಸರಣಿಯಲ್ಲಿ ಏನೇನೂ ತಪ್ಪಿಲ್ಲ. ಖಂಡಿತ ಸರಿಯಾಗಿದೆ. ಓರ್ವ ಬಡ ಹೆಣ್ಣಿನ ಜೊತೆ ಜರುಗುವ ಅಮಾನವೀಯ ಕೃತ್ಯಕ್ಕೆ ಎಲ್ಲಿಯೂ ತೀವ್ರ ಖಂಡನೆಯಾಗದು. ಬಡವರ ಕತೆ ಬಿಡು. ಸಾಮಾನ್ಯರ ಜೊತೆ ನಡೆದರೂ ಅದು ವಿಷೇಶವೆನಿಸದು!!! ನಾಲ್ಕು ದಿನ ಕಡ್ಡಿ ಚಾನಲ್‌ಗಳಂತಹ ನ್ಯೂಸ್ ಚಾನಲ್ ಗಳಿಗೆ ಆಹಾರವಾಗಿ ಆ ನೊಂದ ಜೀವ ಮತ್ತೂ ನಲುಗಿಹೋಗುತ್ತದೆಯಷ್ಟೇ!

ಓರ್ವ ಅರುಶಿಯ ಕೊಲೆಗೆ ಸಿಕ್ಕ ಪ್ರಾಮುಖ್ಯತೆ ಅದೆಷ್ಟು ಮುಗ್ಧ ಮಕ್ಕಳ ಸಾವಿಗೆ ಸಿಕ್ಕಿದೆ ಹೇಳು? ನನ್ನ ಪ್ರಕಾರ ಅತ್ಯಾಚಾರ ಎಂಬುದು ಯಾವುದೇ ಕೊಲೆಗಿಂತಲೂ ಸಣ್ಣದಲ್ಲ. ಬದಲು ಅದಕ್ಕಿಂತಲೂ ದೊಡ್ಡ ಅಪರಾಧ. ಅಕ್ಷಮ್ಯವಾದುದು. ಅಂತಹ ಪಾಶವೀ ಕೃತ್ಯಕ್ಕೆ ಕಾರಣವಾದವರಿಗೆ ನಮ್ಮಲ್ಲಿರುವ ಕಾನೂನು ಕೊಡುವುದು ಕೇವಲ ಏಳು ವರುಷದ ಸಜೆ(ಅದೂ ಸಾಬೀತಾದರೆ!!!).

ಇಂತಹ ಜನರನ್ನು ಶ್ರೀರಾಮ ಸೇನೆಯವರು ನಟ್ಟ ನಡುದಾರಿಯಲ್ಲಿ ಕಡಿದು ಕೊಲೆ ಮಾಡಲಿ. ಖಂಡಿತ ನಾನೇ ಬೆಂಬಲಿಸುವೆ. ಆದರೆ ಸರಿಯಾಗಿ ಮುಂದಾಲೋಚನೆ ಇಲ್ಲದೇ ವರ್ತಿಸುವುದು ಸಮರ್ಥನೀಯವಲ್ಲ.

ಚಿತ್ರಾ ಸಂತೋಷ್ said...

@ಪ್ರಕಾಶಣ್ಣ, ಮೆಲ್ವಿನ್..(:)
ಪ್ರತಿಕ್ರಿಯೆಗೆ ಧನ್ಯವಾದಗಳು.

@ಹರೀಶ್ ಸರ್..ಪುತ್ತೂರಲ್ಲಿ ನಡೆದ ಅಕ್ಷತಾ ಘಟನೆಗೆ ಶ್ರೀರಾಮಸೇನೆ ಪ್ರತಿಭಟನೆ, ಯಶಸ್ವು ಕುರಿತು ಹೇಳಿರುವುದು ಒಳ್ಳೆದೇ ಆಯಿತು..ಇಂಥ ಕಾರ್ಯಗಳು ಎಲ್ಲೆಡೆ ನಡೆಯಲಿ

@ಸುನೀಲ್ ಪ್ರತಿಕ್ರಿಯೆಗೆ ವಂದನೆಗಳು

@ಮಂಜು ಸರ್..ಪಬ್ ಗೆ ದಾಳಿ ಮಾಡಿ, ಹುಡುಗೀಯರಿಗೆ ಹೊಡೆದಿದ್ದು ನಿಜವಾಗಲೂ ಖಂಡನೀಯವೇ. ಅದರ ಜೊತೆ, ಅತ್ಯಾಚಾರ ಅಥವಾ ಇನ್ನಿತರ ಗಂಭೀರ ಶೋಷಣೆಗಳೇ ಮಹಿಳೆಯರ ಮೇಲೆ ನಡೆಯುತ್ತೆ ಅಲ್ವಾ? ಅದೇಕೆ ನಮ್ ಕಾಳಜಿಯುಳ್ಳ ಸಂಘಟನೆ, ಸೇನೆಗಳಿಗೆ ಗೊತ್ತಾಗುವುದಿಲ್ಲ? ಆವಾಗ ಯಾಕೆ ರೋಷ ಉಕ್ಕಿ ಬರಲ್ಲಾ ಅಲ್ವೇ? ಪ್ರತಿಕ್ರಿಯೆಗೆ ಧನ್ಯವಾದ ಆಗಾಗ ಬರುತ್ತೀರಿ.

@ವಿಕಾಸ್ ಥ್ಯಾಂಕ್ಯೂ..

@ತೇಜಕ್ಕ...ಜೊತೆಗೆ ಕೈಜೋಡಿಸಿದ್ದಕ್ಕೆ ವಂದನೆಗಳು.

-ಚಿತ್ರಾ

Nagesh said...

ಚಿತ್ರಾರವರೆ, ನೀವೂ ಹೇಳಿದ್ದು ಸರಿ.

ನನ್ನ ಪ್ರಕಾರ, ಈ ಸಮಸ್ಯೆಗೆ ಪರಿಹಾರ.

1.ವಾಕ್ ಸ್ವತಂತ್ರವನ್ನು ಸ್ವಲ್ಪ ಕಡಿಮೆ ಮಾಡಬೇಕು.ನಮ್ಮ ೨೪ ಗಂಟಿ ನ್ಯೂಸ್ ಚಾನೆಲ್‌ಗಳು ಇದನ್ನು ದುರಪಯೋಗ ಮಾಡಿಕೊಳ್ಳುತ್ತಿವೆ.

see,the numerous incidences happening in the other side of the India are not coming into light,since the news is just confined to Metros.

2. many people want to get noticed any manner. ಅದೆ ಕಖ್ಯಾತದಿಂದ ಪ್ರಖ್ಯಾತ ,so they use this news channels as a platform.

I'm just wondering why those journalist who covered the pub incidence of managalore, didn't inform the Police when they were able to cover the incidence with multiple angles. don't they have moral responsibility ?

PARAANJAPE K.N. said...

Chitra,
The point you raised is correct. But politicisation of an issue
makes it most sensitive. Srirama
sena wants to become popular by
whatever way it can. In the aftermath of the incidence, the hue and cry by Mahila Ayoga etc.,
is also backed by political entities. It is true, no one will turn when a poor lady is molested or raped in a remote village or so.
PARANJAPE KN

PARAANJAPE K.N. said...

Chitra,
To begin with my blog, I want a favour from your side. Can you please guide how to transliterate
from NUDI to UNICODE. Thanks

Ittigecement said...

ಚಿತ್ರಾ...

ನಿಮ್ಮ ಅಭಿಪ್ರಾಯ ನಾನೂ ಒಪ್ಪುತ್ತೇನೆ..

ಎಲ್ಲದರಲ್ಲೂ ರಾಜಕೀಯ..,ಅದರ ಲಾಭ..

ಕಾಣುವ ವ್ಯವಸ್ಥೆ ,ಮಾಧ್ಯಮ ..

ಇರುವವರೆಗೆ...

ಇದು ಹೀಗೆಯೆ ಇರುತ್ತದೆ...

ಬಡವರ ಕಾಳಜಿ ಯಾರಿಗೂ ಬೇಕಿಲ್ಲ...

ಛೇ... ಬಹಳ ಬೇಸರವಾಗುತ್ತದೆ...

ಸಮಯೋಚಿತ ಬರಹ..

sunaath said...

ಹೆಣ್ಣುಮಕ್ಕಳ ಬಗೆಗೆ ಯಾರಿಗೆ ಕಾಳಜಿ ಇದೆ? ಪ್ರತಿ ದಿನವೂ ಹೆಣ್ಣುಮಕ್ಕಳನ್ನು ವಿವಿಧ ಯಾತನೆಗಳಿಗೆ ಒಳಪಡಿಸಲಾಗುತ್ತಿದ್ದರೆ,
ಈ ಸರಕಾರ, ಈ ಸೇನೆ, ಈ ಆಯೋಗಗಳು ಬಾಯಿ ಮುಚ್ಚಿಕೊಂಡೆ ಕುಳಿತಿವೆ.ಇವರಿಗೆ ಬೇಕಾಗಿದ್ದದ್ದು ಕೇವಲ ಪ್ರಚಾರ
ಮಾತ್ರ.

Anonymous said...

ನೀವೊಬ್ಬರೇ ಈ ರೀತಿಯಾಗಿ ಯೋಚಿಸಿ ಬರೆದಿರುವುದು. ಮಾಧ್ಯಮಗಳು ಅನ್ನೋದು ಮಂಗನ ಆಟ ಆಗೋಗಿದೆ. ರಾಜಕೀಯ ಅನ್ನೋದು ರೌಡಿ, ಕ್ರಿಮಿನಲ್‍ಗಳ ಸಂತೆ. ಇನ್ನು ಈ so called educated class, ಇವರ ಲೆಕ್ಕದಲ್ಲಿ ಭಾರತ ಒಂದು ಸೂಪರ್‍ ಪವರ್.
ಇಲ್ಲಿ ಈಗಾಗಲೆ ಎರಡು ಭಾರತ ಸೃಷ್ಟಿ ಆಗೋಗಿದೆ. ಎಲ್ಲಾರಿಗು ಎರಡನೆ ಈ ನಗರಗಳ ಭಾರತನೇ ಬೇಕು. ಎಲ್ಲರಿಗೂ ಗ್ಲಾಮರ್ ಇರೋ ಸುದ್ದಿಗಳೇ ಬೇಕು. ಹಳ್ಳಿ ಮತ್ತು ಬಡವರು ಅನ್ನೋದು ಇವರಿಗೆ ಕಂಡರೂ ಕಾಣದವುಗಳು.

Keshav.Kulkarni said...

ಚಿತ್ರಾ,

ಮುಂಬೈನಲ್ಲಿ ಎರಡು ಮೂರು ವರ್ಷಕ್ಕೊಮ್ಮೆ ಬಾಂಬು ಸಿಡಿದು ಸಾವಿರಾರು ಜನ ಸತ್ತಾಗ ಆಗದ ಹಾಹಾಕಾರ ಮೊನ್ನೆ ನಡೆದ ತಾಜ್ ದುರಂತದಲ್ಲಿ ಆಯಿತು. ಬಡಹುಡುಗಿಯ ಬಲಾತ್ಕಾರವಾದಾಗ ದನಿ ಎತ್ತದ ಜನ ಪಬ್ಬಿನ ಹುಡುಗಿಯರ ಮೈಮುಟ್ಟಿದ ಕ್ಷಣ ಬೆಚ್ಚಿಬೀಳುತ್ತಾರೆ. ಕೆಂಪು ಬಸ್ಸು ಉರುಳಿ ಜನ ಸತ್ತರೆ ಸರಕಾರ ಪ್ರತಿ ಕುಟುಂಬಕ್ಕೆ ೧೦,೦೦೦ ಕೊಟ್ಟರೆ, ವಿಮಾನ ದುರಂತದಲ್ಲಿ ಸತ್ತರೆ ಕುಟುಂಬಕ್ಕೆ ೧೦೦೦೦೦ ಕೊಡುತ್ತದೆ. ಶ್ರೀಮಂತರ ಜೀವಕ್ಕೆ ಸ್ವಾತಂತ್ರ್ಯಕ್ಕೆ ಹೆಚ್ಚು ಬೆಲೆ. ಇಂಗ್ಲೀಷಿನಲ್ಲಿನ ಗಾದೆಯಿದೆ, "All are equal in democracy, few are equal to horses, few to donkeys" ಎಂದು.

- ಕೇಶವ (www.kannada-nudi.blogspot.com)

Rajesh Manjunath - ರಾಜೇಶ್ ಮಂಜುನಾಥ್ said...

ಚಿತ್ರ,
ಸಾಮಾಜಿಕ ಕಳಕಳಿ ತೋರುವಾಗ, ಇವಳು ಹುಡುಗಿ, ಇವನು ಹುಡುಗ ಎಂಬ ತಾರತಮ್ಯ ಬೇಡ ಅಲ್ವ. ನಿಮ್ಮ ಬರಹದಲ್ಲಿ ಹೇಳಬಾರದ್ದೇನೋ ನೀವು ಹೇಳಿದ್ದೀರಿ ಎಂಬಂತಹದ್ದು ಏನು ಇಲ್ಲ, ಪ್ರಸಕ್ತ ಸನ್ನಿವೇಶ ಮತ್ತು ಸಂದರ್ಭಕ್ಕೆ ಕನ್ನಡಿ ಹಿಡಿದಂತಿದೆ, ಅಳುಕು ಬೇಡ, ನನ್ನ ಬೆಂಬಲವು ಇದೇ ನಿಮ್ಮ ಬರಹಕ್ಕೆ.
-ರಾಜೇಶ್ ಮಂಜುನಾಥ್

ನನ್ ಮನೆ said...

ಎಲ್ಲರೂ ಮಾಡುವುದು ಈ ಟಿ.ಆರ್.ಪಿ ಗಾಗಿ..

PARAANJAPE K.N. said...

Chitra

ನನ್ನ ಬ್ಲಾಗ್ ಆರ೦ಭವಾಗಿದೆ. ಪ್ರಥಮ ಬ್ಲಾಗ್ ಬರಹ post ಮಾಡಿದ್ದೇನೆ.ದಯವಿಟ್ಟು ಭೇಟಿ ಇತ್ತು ಓದಿ ಅಭಿಪ್ರಾಯಿಸಿದಲ್ಲಿ ನಾನು ಧನ್ಯ

ಚಿತ್ರಾ ಸಂತೋಷ್ said...

@ನಾಗೇಶ್...'ವಾಕ್ ಸ್ವಾತಂತ್ರ್ಯ' ಕಡಿಮೆ ಮಾಡಬೇಕಾದ್ರೆ..ಸಂವಿಧಾನ ತಿದ್ದುಪಡಿಯೇ ಮಾಡಬೇಕಷ್ಟೇ.
'ಕುಖ್ಯಾತದಿಂದ ಪ್ರಖ್ಯಾತ' ಚೆನ್ನಾಗಿ ಹೇಳಿದ್ದೀರಿ
ಪೊಲೀಸರಿಗೆ ಮಾಹಿತಿ ಕೊಡದಿರುವ ಕುರಿತಾಗಿ ನನ್ನದೂ ಅದೇ ಡೌಟ್ ಸರ್?

@ಪ್ರಕಾಶ್ ಸರ್, ಪರಾಂಜಪೆ, ಸುನಾಥ್ ಸರ್, ವಿರೇಶ್ ..ನನ್ ಜೊತೆ ಕೈಜೋಡಿಸಿದ್ದಕ್ಕೆ ವಂದನೆಗಳು..

@ರಾಜೇಶ್..ಕುಲಕರರ್ಣಿ ಸರ, ಕ್ರಿಯೆಟೀಮ್.. ಥ್ಯಾಂಕ್ಯೂ..ಬಡವರ ಜೀವಕ್ಕೆ ಬೆಲೆಯಿಲ್ಲ ಅನ್ನೋ ವಿಚಾರ ನನ್ನನ್ನು ತುಂಬಾ ಕಾಡಿದೆ..ನಮ್ಮಲ್ಲಿ ಬೇಕಾಬಿಟ್ಟಿ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ..ಆದರೆ ಅವರ್ಯಾರು ಈ ಬಗ್ಗೆ ಕೇರ್ ತೆಗೆದುಕೊಳ್ಳಲ್ಲ...ಮಹಿಳಾವಾದಿಗಳು ಅಂತ ತಮ್ಮನ್ನು ತಾವೇ ಗುರುತಿಸಿಕೊಳ್ಳುವವರು..ನಮ್ಮ ಸುತ್ತಮುತ್ತಲೇ ನಡೆಯುವ ಶೋಷಣೆಗಳ ವಿರುದ್ಧ ಸಮರ್ಥವಾಗಿ ಯಾಕೆ ಹೋರಾಟಕ್ಕೆ ನಿಲ್ಲಲ್ಲ..
ಈ ಬಗ್ಗೆ ಯೋಚಿಸಿದಾಗ ತುಂಬಾ ಮನಸ್ಸು ನೋಯುತ್ತೆ..ಅದನ್ನಿಲ್ಲಿ ಹಂಚಿಕೊಂಡೆ. ನಿಮ್ಮ ಸಾಥ್ ಗೆ ನನ್ನ ಸ್ವಾಗತ..ಧನ್ಯವಾದಗಳು.
-ಪ್ರೀತಿಯಿಂದ,
ಚಿತ್ರಾ

ಚಿತ್ರಾ said...

ಚಿತ್ರಾ,
ಬಹಳ ಕಾಳಜಿಪೂರ್ಣವಾಗಿದೆ ಲೇಖನ .
ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ಈ ’ ಸಂಸ್ಕೃತಿ ಉಳಿಸುವ ಸೇನೆ’ ಗಳು ಎಂದಾದರೂ ಫೈವ್ ಸ್ಟಾರ್ ಹೊಟೆಲ್ ಗಳಿಗೆ ಹೊಕ್ಕು ಗಲಾಟೆ ಮಾಡುತ್ತಾರಾ?

ಈ ಘಟನೆಯ ಬಗ್ಗೆ ನಾನೂ ಅಲ್ಪ ಸ್ವಲ್ಪ ಬರೆದಿದ್ದೇನೆ. ಬಂದುನೋಡಿ.

shivu.k said...

ಹಲೋ ಮರೀ,

ಏನ್ ಸಮಾಚಾರ !! ಇಷ್ಟೊಂದು ಸ್ಟ್ರಾಂಗ್ ಆಗಿದೆ ಬರಹ. ಲೇಖನಿ ಸಿಕ್ಕಾ ಪಟ್ಟೆ ಹರಿತವಾಗಿದೆ!...

ಈ ವಿಚಾರದ ಬಗ್ಗೆ ಈ ರೀತಿಯ ಒಂದು ದ್ವನಿ ಬೇಕಿತ್ತು...ಅದು ನಿನ್ನಿಂದ ಆಗಿದೆ.... ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ....

"ಏನಪ್ಪಾ..ಹುಡುಗಿಯಾಗಿ ಇವಳು ಹೀಂಗಾ ಬರೆಯೋದು? ಅಂತ ಅಂದುಕೊಂಡರೂ ಪರ್ವಾಗಿಲ್ಲ.." ಇದರಲ್ಲಿ ತಪ್ಪೇನು ಇಲ್ಲ...ನ್ಯಾಯ ಯಾರ ಮನೆಯ ಸ್ವತ್ತು ಅಲ್ಲ. ಯಾರು ಬೇಕಾದರೂ ಕೇಳಬಹುದು..ಕೇಳಬೇಕು....

ಮೊದಲಿಗೆ ನನ್ನ ಸಿಟ್ಟು ಮಾದ್ಯಮದವರ ಮೇಲೆ ಆ ರಾಧ್ದಾಂತ ಆಗುವುದು ಗೊತ್ತಿದ್ದು, ತಡೆಯುವುದು ಬಿಟ್ಟು ಪ್ರಚಾರಕ್ಕೆ ಹಾತೊರೆಯುವುದು ಅವರ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಆದಾಗ ನೋಡೋಣ ಹೀಗೆ ಮಾಡುತ್ತಾರ ಅಂತ ?

ಬಡವರ ಬಗ್ಗೆ ಮಾದ್ಯಮದವರಿಗೆ ಆಗಲಿ, ಈ ದರಿದ್ರ ರಾಜಕೀಯದವರೇ ಆಗಲಿ, ಎಂಥ ಕಾಳಜಿಯೂ ಇಲ್ಲ...ಎಲ್ಲಾ ಓಟು-ನೋಟಿನ ಮೇಲೆ ಆಟ....

ಬಡ ಜನರ ಮೇಲೆ ಇಂಥವು ನಡೆದಾಗ ಈ ಸರಕಾರ, ಸೇನೆ ಮಹಿಳಾ ಆಯೋಗಗಳು ಎಲ್ಲಿರುತ್ತವೆ....ಇವುಗಳು ಯಾವುದರ ಮೇಲೆ ನಂಬಿಕೆ ಉಳಿದಿಲ್ಲ...ಈ ವಿಚಾರದಲ್ಲಿ ನನಗೆ ಬೇಸರವಿದೆ....

ಚಿತ್ರಾ ಸಂತೋಷ್ said...

@ಚಿತ್ರಾ ಮೇಡಂ..ನಿಮ್ಮ ಬರಹ ಓದಿ, ಪ್ರತಿಕ್ರಿಯಿಸಿದ್ದೇನೆ..ನಿಮ್ಮ ಸಾಥ್ ಗೆ ನನ್ನ ಸ್ವಾಗತ.

@ಶಿವಣ್ಣ...ತುಂಬಾ ಥ್ಯಾಂಕ್ಸ್ಊ...ಸ್ಟ್ರಾಂಗೂ..ಹಿಹಿ ಹಾಗೇನಿಲ್ಲ..ಯಾವಾಗ್ಲೂ ಹಾಗೇ ಇರ್ತೀನಿ.(ನಿಮ್ಮಷ್ಟು ಅಲ್ಲ)..ಆದ್ರೆ ಯಾಕೆ ಸುಮ್ಮನೆ?ಅಂತ ಸುಮ್ನಿರೋದು. ಪಬ್ ವಿಷಯ ತುಂಬಾ ಡಿಸ್ಟರ್ಬ ಮಾಡ್ತು..ಅದಕ್ಕೆ.
-ಚಿತ್ರಾ

ಅಂತರ್ವಾಣಿ said...

chitraa,

enu tappilla nim maatalli.

ಚಿತ್ರಾ ಸಂತೋಷ್ said...

@ಜಯಶಂಕರ್...ನಮಸ್ಕಾರ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
-ಚಿತ್ರಾ

Anonymous said...

ನಮಸ್ತೆ ಚಿತ್ರಕ್ಕ
ತುಂಬಾ ತಡವಾಗಿ ಈ ಲೇಖನ ಓದಿದೆ. ಹುಡುಗಿಯಾದರೆ ಇಂತಹ ಲೇಖನ ಬರಿಬಾರದು ಅಂತ ಏನಿಲ್ಲ ಅಲ್ವಾ.
ಈ ಪಬ್ ದಾಳಿ ನಡೆದಾಗ ಅಲ್ಲಿ ಇದ್ದಿದ್ದು ಬರೀ ಶ್ರೀಮಂತ ಜನರ ಹಾಗೂ ರಾಜಕಾರಣಿಗಳ ಮಕ್ಕಳು. ಅದಿಕ್ಕೆ ಈ ಪ್ರಕರಣ ಇಷ್ಟು ದೊಡ್ಡ ವಿಚಾರ ವಾಗಿ ಪರಿಣಮಿಸಿತು. ನಿಜ ರಾಮ ಸೇನೆಯವರು ಹುಡುಗಿಯರ ಮೇಲೆ ಕೈ ಮಾಡಬಾರದಿತ್ತು. ಆದರೆ ಅಲ್ಲಿ ನಡೆದ ಹಾಗೂ ಅವರಿದ್ದ ಪರಿಸ್ತಿತಿ ಅವರನ್ನ ಕೆರಳಿಸಿತು. ಬೇರೆ ಮನೆಯ ಹೆಣ್ಣುಮಕ್ಕಳು ಆಗಿದಕ್ಕೆ ಅಷ್ಟರಲ್ಲೇ ಬಿಟ್ವಿ ನಮ್ಮ ಮನೆಯ ಹುಡುಗಿಯರಾಗಿದ್ದರೆ ಅಲ್ಲೇ ಕತ್ತರಿಸಿ ಬಿದುತಿದ್ವಿ ಹೀಗಂತ ಸಮಯದಲ್ಲಿ ಅಲ್ಲಿ ಇದ್ದ ಹತ್ತೊಂಬತ್ತು ವರುಷದ ಹುಡುಗ ಹೇಳಿದ ಮಾತುಗಳಿವು. ಈ ಮಾತುಗಳನೆಲ್ಲ ಕೇಳಿದಾಗ ಆ ಪಬ್ನಲ್ಲಿ ಏನು ನಡೆಯುತ್ತಿತ್ತು ಅಂತ ನಾವೇ ಅರ್ಥ ಮಾಡ್ಕೋ ಬಹುದು ಅಲ್ವಾ ಚಿತ್ರಕ್ಕ. ಈ ಮಾದ್ಯಮದವರು ಅಷ್ಟೇ ಬರೀ ರಾಮ ಸೇನೆಯವರು ಹುಡುಗಿಯರ ಮೇಲೆ ಕೈ ಮಾಡಿದ ಚಿತ್ರೀಕರಣ ವನ್ನು ಮಾತ್ರ ವರದಿ ಮಾಡಿದ್ದರೆ. ಹಾಗಾದರೆ ಅವರು ತೆಗೆದ ಉಳಿದ ಚಿತ್ರಿಕರಣವೆಲ್ಲಿ. ಹುಡುಗಿಯರಿಗೆ ಸ್ವಾತಂತ್ರವಿಲ್ಲ ಎಂದು ನಾವು ಪ್ರತಿಭಟನೆ ಮಾಡುವಂತ ಅಧಿಕಾರವನ್ನು ನೀವು ಕಳೆದು ಕೊಳ್ಳುವಂತ ಪರಿಸ್ತಿತಿ ಬಂದಿದೆ. ಎಂದು ನನ್ನ ಆರನೆ ತರಗತಿಯ ತಮ್ಮ ವಾದ ಮಾಡುತಿದ್ದ ಯಾಕೆ ಎಂದು ಕೇಳಿದರೆ ನಿಮಗೆ ಇಷ್ಟು ಸ್ವಾತಂತ್ರ ಕೊಟ್ಟು ಅದನ್ನ ನಿಮ್ಮ ಒಳ್ಳೇದಕ್ಕೆ ಬಳಸದೆ ತುಂಡು ಬಟ್ಟೆ ದರಿಸುವುದರಲ್ಲಿ ತೋರಿಸುತಿರ ಹುಡುಗರ ತಲೆ ಕೆಡಿಸುತ್ತಿರ ಇನ್ನೂ ಪೂರ್ತಿ ಸ್ವಾತಂತ್ರ ಕೊಟ್ಟರೆ ದೇವರೇ ಗತಿ ಎಂದ . ಈ ರಾಮಸೇನೆ ಯಂತ ಸಂಘಟನೆಗಳಿಗೆ ಹೆದರಿ ಯಾದರು ಈ ಪಬ್ ನಡೆಸುವವರು ಇನ್ನೂ ಮುಂದೆ ಮಂಗಳೂರಲ್ಲಿ ನಡೆದ ಘಟನೆ ನಡೆಯದಂತೆ ನೋಡಿಕೊಂಡರೆ ಸಾಕು. ಇನೊಂದು ವಿಷಯಕ್ಕೆ ರಾಮಸೇನೆ ಹಾಗೂ ಮಾದ್ಯಮದವರಿಗೆ ದನ್ಯವಾದಗಳನ್ನ ಹೇಳೋದಿಕ್ಕೆ ಬಯಸ್ತೀನಿ ಅಲ್ಲಿ ಇದ್ದ ಯಾವುದೇ ಒಬ್ಬ ಹುಡುಗಿಯ ಬಗ್ಗೇನೂ ಎಲ್ಲೂ ಹೇಳಿಕೊಂಡಿಲ್ಲ ಅವರ ಭವಿಷ್ಯಕ್ಕೆ ತೊಂದರೆ ಯಾಗದಂತೆ ನೋಡಿಕೊಂಡಿದ್ದಾರೆ. ಚಿತ್ರಕ್ಕ ಕ್ಷಣಕ್ಕೆ ಕೋಪ ಬರೋದು ಸಹಜ ಆದರೆ ಅಲ್ಲಿ ನಡೆದ ಘಟನೆಯನ್ನ ವಿಮರ್ಶೆ ಮಾಡಿದರೆ ಆಗ ಅಲ್ಲಿ ಯಾರು ತಪ್ಪು ಮಾಡಿದ್ದರೆ ಯಾಕೆ ಮಾಡಿದ್ದರೆ ಇದರಿಂದ ಅದ ಪ್ರಯೋಜನ ಎಲ್ಲಾ ತಿಳಿಯುತ್ತೆ ಒಳ್ಳೆ ಲೇಖನ ಬರೆದಿದ್ದೀರ ಹಾಗೂ ನನಗೂ ಇಷ್ಟು ಹೇಳೋದಿಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ದನ್ಯವಾದಗಳು.