Thursday, November 15, 2007

ನನ್ನ ಕಣ್ಣೀರಿಗೆ ಕರ್ಚಿಫ್ ಆಗೋ..


ಪ್ರೀತಿಯ ಸ್ವೆಟರ್,
ಬದುಕು ಏನಾದರೂ,ಬಲುದೂರ ಹೋದರೂ..
ಬರಲಾರದಿಂತ ನೂರೊಂದು ನೆನಪು..
ಏನೆಲ್ಲಾ ಮರೆತರೂ ಯಾರೊಡನೆ ಬೆರೆತರೂ..
ಮರುಕಳಿಸುತಿಹುದು ನೂರೊಂದು ನೆನಪು..
ಯಾಕೋ ಗೊತ್ತಿಲ್ಲ ಕಣೇ.ಕಳೆದ ಎರಡು ದಿನದಿಂದ ನೀನು ತುಂಬಾ ನೆನಪಾಗುತ್ತಿ ಕಣೇ. ಅದೆಷ್ಟೋ ವರ್ಷದಿಂದ ನಿನ್ ನೆನಪಾಗದ ನನಗೆ ಬೆಂಗಳೂರಲ್ಲಿ ತೀರ ನಿನ್ ನೆನಪು ಕಾಡುತ್ತೆ ಕಣೇ. ನೀನಿಲ್ಲದೆ ನಾನು ಸತ್ತೇ ಹೋಗ್ತೀನಿ ಅನಿಸುತ್ತೆ. ಸಂಜೆಯ ಹೊತ್ತು ಸೂರ್ಯ ಪಡುವಣದಲ್ಲಿ ಮುಳುಗಲಾರಂಭಿಸಿದಂತೆ, ನಾನ್ ಆಫಿಸಲ್ಲಿ ಕುಳಿತುಕೊಂಡು ನಿನ್ ನೆನಪು ಮಾಡ್ಕೋತೇನೆ ಗೊತ್ತಾ? ಪಟಪಟನೆ ಅದೇನನ್ನೋ ಕೀ ಮಾಡುತ್ತಿದ್ದ ನನ್ ಕೈ ತಟ್ಟನೆ ನಿಂತು ಬಿಡುತ್ತೆ. ನಿನ್ ನೆನಪೇ ತಲೆತುಂಬಾ. ನಿನ್ ಬಂದು ನನ್ ತಬ್ಬಿಕೊಂಡ್ರೆ..ಅದೆಷ್ಟು ಖುಷಿ ಅನಿಸುತ್ತೆ. ಸದಾ ನಿನ್ ಜೊತೆ ನಾನು, ನನ್ ಜೊತೆ ನೀನ್ ಇರ್ಬೇಕು ಅನಿಸುತ್ತೆ. ಮತ್ತೆ ಬೆಳಿಗ್ಗೆ ಕೇಳೋದೇ ಬೇಡ..ಕುಂತ್ರೆ ನಿಂತ್ರೆ ನಿನ್ನದೇ ಧ್ಯಾನ..ಜೀವಕ್ಕಿಲ್ಲ ಸಮಾಧಾನ.. ಸೂರ್ಯ ನೆತ್ತಿಗೇರಿದ್ರೂ ನಿನ್ನದೇ ನೆನಪಲ್ಲಿ ತೆಪ್ಪಗೆ ಮಲಗಿಬಿಡ್ತೀನಿ.
ನಂಗೆ ನೀನ್ ಬೇಕು, ನಿನ್ ಪ್ರೀತಿ ಬೇಕು..ನಿನ್ ನಾ ತುಂಬಾ ಪ್ರೀತಿ ಮಾಡ್ತೀನಿ ಕಣೇ.ನಿನಗಾಗಿ ನನ್ ಹೃದಯದಲ್ಲಿ ಮೊಗೆದಷ್ಟು ಬತ್ತದ ಪ್ರೀತಿ ಇದೆ ಕಣೇ..ಇದು ಸುಳ್ಳಲ್ಲ ಕಣೇ..ನನ್ ಪಕ್ಕ ಮಲಗೋ ಚಿಂಟು ಆಣೆಗೂ ನಾನು ಹೇಳುತ್ತಿರೋದು ಸತ್ಯ ಕಣೇ.ನಿದ್ರೆಯಲ್ಲೂ ನಿನ್ದೇ ನೆನಪು..ರಾತ್ರಿಯೆಲ್ಲಾ ಕನವರಿಸ್ತೇನೆ ಅಂತೆ...
ಮೊನ್ನೆ ಒಂದು ತಮಾಷೆ ಆಯ್ತು ಗೊತ್ತಾ? ನೀನು ಅಂತ ತಿಳ್ಕೊಂಡು ನಾನು ಚೀಂಟುನ ಅಪ್ಪಿಕೊಂಡಿದ್ದೆ ಅಂತೆ. ಅವಳು ಕೊಸರಾಡಿದಾಗ್ಲೇ ಗೊತ್ತು ಅದು ನೀನಲ್ಲ ಎಂದು. ಚಿಂಟು ಅದೆಷ್ಟು ಬೈದ್ಲು ಗೊತ್ತಾ? ಏನೆಲ್ಲಾ ಬೇಡದ ಭಾಷೇಲಿ ಬೈದ್ಲು. ಆ ದಿನದಿಂದ ನಂಗೆ ಫುಲ್ ಟೆನ್ಶನ್ ಕಣೇ..ಊಟವಿಲ್ಲ, ತಿಂಡಿಯಿಲ್ಲ...ಹೊಟ್ಟೆ ಪೂರ ಖಾಲಿ ಖಾಲಿ..ಇದೆಲ್ಲಾ ನಿನಗಾಗಿ..ಎದೆತುಂಬಾ ನಿನ್ನದೇ ಕನಸು..ನಿನ್ನದೇ ಮನಸ್ಸು..
ನೂರೋದು ನೆನಪು ಎದೆಯಾಳದಿಂದ..
ಹಾಡಾಗಿ ಬಂತು ಆನಂದದಿಂದ..
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದೂ ಇರಲಮ್ಮ ಈ ದಿವ್ಯ ಬಂಧ..
ನನ್ ಪತ್ರ ನೋಡಿಯಾದ್ರೂ ನನ್ ಮೇಲೆ ಕನಿಕರ ತೋರಿಸೋ..ಹೌದು! ನಾನ್ ಒಬ್ಬ ಮೀಸೆಯಿರುವ ಹುಡ್ಗ..ನಂಗೂ ಹೃದಯವಿದೆ..ನನ್ ಹೃದಯನೂ ಅಳುತ್ತೆ...ದಿನಾ ನಿನಗಾಗಿ ಹಂಬಲಿಸುತ್ತೆ..ಕಲ್ಲಂತೆ ನಿಂತು ಕಣ್ನೀರು ಹಾಕ್ತೀನಿ..ನಿನ್ ಥರ ಗಳಗಳನೆ ಅಳೋಕೆ ಬರಲ್ಲ..ಸುಮ್ನೆ ಸುಮ್ನೆ ಸತಾಯಿಸೋಕೆ ಬರಲ್ಲ..ನಾನೇನಾದ್ರೂ ನೇರ ಮನಸ್ಸಿನವ..ನಿಂಗೆ ಕೆಂಡದಂಥ ಕೋಪ ಬಂದ್ರೂ ಪರರ್ವಾಗಿಲ್ಲ..ಇದ್ದದ್ದನ್ನು ಇದ್ದ ಹಾಗೆ ಹೇಳೋನು..ಈಗ್ಲಾದ್ರೂ ನಿನ್ ಮನಸ್ಸು ಕರಗಬಹುದು..ನನ್ ಅಳು ನೋಡಿ ನೀ ಬಂಡೆಗಲ್ಲಾಗಬೇಡ..ನನ್ ಅರ್ಥಮಾಡ್ಕೋ..ಈ ಬೆಂಗಳೂರಲ್ಲಿ ನೀನಿಲ್ಲದೆ ನಾನಿಲ್ಲ..ನೀನಿದ್ದರೆ ನಾನು ಎಲ್ಲಾ.. ನನ್ ನೋಡಿ ಒಂಚೂರು ಪ್ರೀತಿ ತೋರಿಸು ಕಣೇ..ನಂಗೊತ್ತು ನಿನ್ ಅಪ್ಪ-ಅಮ್ಮನಿಗೆ ನೀನ್ ಹೆದರುತ್ತಿ ಅಂತ...ಆದ್ರೂ ಎಟ್ಲೀಸ್ಟ್ ಮೂರು-ನಾಲ್ಕು ತಿಂಗಳಾದ್ರೂ ನನ್ ಜೊತೆ ಇರ್ತೀಯಾ..ನನ್ ಕಣ್ಣೀರ ಒರೆಸೋ ಸಣ್ಣ ಕರ್ಚಿಫ್ ಆಗ್ತೀಯಾ? ಇಷ್ಟೆಲ್ಲಾ ಹೇಳಿದ್ದು ನಿನ್ ಮೇಲಿನ ನಂಬಿಕೆಯಿಂದ. ನೀನ್ ಯಾವಾಗ ಬರ್ತೀಯಾ? ಎಂದು ಬೊಗಸೆತುಂಬಾ ಪ್ರೀತಿ ತುಂಬಿ ಕಾಯ್ತಾ ಇದ್ದೀನಿ.. ನಿನ್ ನೆನಪಾದ ಮೇಲೆ ಊಟ, ನಿದ್ದೆ, ಕೆಲ್ಸ ಯಾವುದೂ ಇಲ್ಲ..ಮುಖ ತುಂಬಾ ಮುತ್ತಿಕೊಂಡಿರುವ ಗಡ್ಡನೂ ತೆಗೆದಿಲ್ಲ...
ಓ ಸ್ವೆಟರ್ರು..
ನಿನ್ನ ಪ್ರೀತಿ ಮಳೆಯಲಿ ತೊಯ್ದ ಮುಗಿಲು ನಾನಾಗಬೇಕು..
ಮುಗಿಲ ಮಳೆಯಲಿ ಮಿನುಗುವ ಚಿನ್ನದ ಚುಕ್ಕಿ ನೀನಾಗಬೇಕು..
ನಿನ್ನದೇ ನೆನಪಲ್ಲಿ,
ಮೋನು.

2 comments:

Jagali bhaagavata said...

ನೀವು 'ಅವಳ' ಬಗ್ಗೆ ಬರೆಯೋದು ಬಿಟ್ತು 'ಅವನ' ಬಗ್ಗೆ ಬರೀರಿ. ಚೆನ್ನಾಗಿರತ್ತೆ :-)

ಚಿತ್ರಾ ಸಂತೋಷ್ said...

ಜಗಲಿ ಭಾಗವತ...
ನಿಮ್ ಸಲಹೆಗೆ ಕೃತಜ್ಞತೆಗಳು.ಬ್ಲಾಗ್ ಲೋಕಕ್ಕೆ ನನ್ನದೋ ಹೊಸ ಪರಿಚಯ..ಸದಾ ಇರಲಿ ನಿಮ್ ಸಲಹೆ, ಸೂಚನೆ.. ಒಳ್ಳೆದು, ಕೆಟ್ಟದು ಎಲ್ಲವನ್ನೂ ತಿಳಿಸೋ ಒಂದಷ್ಟು ಮನತಣಿಸೋ ಮಾತಿನ ಪುಳಕ....